December 1, 2008

ವಿಷಾದ ಗೀತ

ದೂರದಲ್ಲೆಲ್ಲೋ ಪಟಾಕಿ ಸಿಡಿದ ಸದ್ದು
ಭಯದಿ ನಡುಗಿತೊಮ್ಮೆ ಎದೆ
ಎಲ್ಲಿ ಹೋದರೋ ಅಪ್ಪ ಅಮ್ಮ
ಬೇಗ ಮನೆಗೆ ಬರಬಾರದೇ?

ಹೊರಗೇನೋ ಗಲಾಟೆ
ಜನರ ಗದ್ದಲ ಕಿರುಚಾಟ
ನಡುವೆ ಕೇಳಿತೆ ಒಮ್ಮೆ
ಯಾರದೊ ನರಳಾಟ ?

ತೊಟ್ಟಿಲಲಿ ಮಲಗಿರುವ ತಮ್ಮ
ನಿದ್ದೆಯಿಂದೆದ್ದು ಅಳುವಾಗ
ತೂಗುತ್ತಾಳೆ ಅಕ್ಕ
ಹಸಿವಾಯಿತೆ ಪುಟ್ಟ?

ಸುಮ್ಮನಿರು ಚಿನ್ನ
ಬೇಗ ಬರುತ್ತಾಳೆ ಅಮ್ಮ
ಅಪ್ಪ ತರುತ್ತಾನೆ ಹಣ್ಣು
ತೊಟ್ಟಿಲನು ತೂಗುತಿರೆ ಕೈಗಳು
ಕಾತರದಿ ನೆಟ್ಟಿವೆ ಬಾಗಿಲಲಿ ಕಣ್ಣು

ಚಿಂತೆ ಅವಳಿಗೆ, ಹೊರಗೆ ಕತ್ತಲೆ
ಬರಲಿಲ್ಲವೇಕೆ ಇನ್ನೂ ಅಪ್ಪ ಅಮ್ಮ
ಹಸಿವಾಗಿ ಅಳುತಿಹನು ಪುಟ್ಟ ತಮ್ಮ.

ತಿಳಿವುದಾದರೂ ಹೇಗೆ
ಹುಚ್ಚು ಹುಡುಗಿಯೆ ನಿನಗೆ
ಹೆಣವಾಗಿ ಬಿದ್ದಿಹಳು ಅಮ್ಮ ಅಲ್ಲಿ
ಬದಿಯಲ್ಲೆ ಅಪ್ಪ , ರಕ್ತದೋಕುಳಿಯಲ್ಲಿ

ಹುರುಳಿಲ್ಲದ ದ್ವೇಷಕ್ಕೆ
ಬಲಿಯಾದರೆಷ್ಟೋ ಜನ
ಬತ್ತಿ ಹೋಗಿತ್ತೆ ಮಾನವೀಯತೆಯ ಸೆಲೆ
ಹೃದಯವಾಗಿತ್ತೆ ಘೋರ ಪಾಷಾಣ?

ಯಾವ ಧರ್ಮದ ಮೂಲ
ಹಿಂಸೆಯಾಗಿತ್ತು?
ಯಾವ ಧರ್ಮದ ಬೋಧೆ
ಕ್ರೌರ್ಯವಾಗಿತ್ತು?

ಸುತ್ತಲೂ ಕವಿಯುತಿದೆ
ಭಯದ ನೆರಳು
ಅಳುವ ಕಂದನಿಗಿಲ್ಲ
ಅಮ್ಮನ ಮಡಿಲು , ಅಪ್ಪನ ಹೆಗಲು
( ಫೋಟೊ : ೨೦೦೩ ರ ಮುಂಬಯಿ ಬಾಂಬ್ ಸ್ಫೋಟದಲ್ಲಿ ಅನಾಥರಾದ ಸೋದರಿಯರು .
ಚಿತ್ರ ಕೃಪೆ: ಅಂತರ್ಜಾಲ )

13 comments:

Harisha - ಹರೀಶ said...

:-(

ಶಾಂತಲಾ ಭಂಡಿ (ಸನ್ನಿಧಿ) said...

ಚಿತ್ರಾ...

ಭಾವ ಬಿರಿದರಳಿದ ಸಾಲುಗಳು. ಮನದೊಳಕ್ಕೆ ನಾಟಿ ನಿಲ್ಲುತ್ತವೆ. ಒಂದಿಷ್ಟು ಚಿತ್ರಗಳ ಕಟ್ಟಿ ಕಣ್ಣೊಳಗಿಡುತ್ತವೆ. ನೋವು...

ತೇಜಸ್ವಿನಿ ಹೆಗಡೆ said...

ಶಬ್ದಗಳಿಗೆ ನಿಲುಕದ ಚಿತ್ರ... :( :(

Ittigecement said...

ಚಿತ್ರಾ....
ಭಾಷೆಲ್ಲಿನ ಹಿಡಿತ ನಿಮ್ಮ ಕವನದಲ್ಲಿ ಕಾಣಬಹುದು. ಮನಸ್ಸಿನ ಭಾವನೆಗಳನ್ನು ಕಾವ್ಯ ಭಾಷೆಯಲ್ಲಿ ಸಮರ್ಥವಾಗಿ ವ್ಯಕ್ತಪಡಿಸಿದ್ದೀರಿ..
ಅಭಿನಂದನೆಗಳು...

ಚಿತ್ರಾಕರ್ಕೇರಾ, ದೋಳ್ಪಾಡಿ said...

ಒಳ್ಳೆಯ ಕವನ. ಮನಸ್ಸು ನಾಟಿಬಿಡ್ತು.
-ಚಿತ್ರಾ

ಚಿತ್ರಾ said...

ಹರೀಶ, ಶಾಂತಲಾ, ತೇಜಸ್ವಿನಿ, ಪ್ರಕಾಶ್, ಚಿತ್ರಾ,
ಎಲ್ಲರಿಗೂ ಧನ್ಯವಾದಗಳು.
ಏನೆಂದರೂ , ಹೃದಯದಲ್ಲಿ ಕುದಿಯುತ್ತಿರುವ ನೋವನ್ನು ಶಬ್ದದಲ್ಲಿ ಇಳಿಸುವುದು ಅಸಾಧ್ಯ ಎಂದೆನಿಸುತ್ತದೆ!

ಮನಸ್ವಿ said...

ನಿಮ್ಮ ಕವನ ಹಾಗು ಫೋಟೋ ಮನ ಕಲಕುವಂತಿದೆ.. ಮುಂದೇನು ಬರೆಯಲು ತೋಚುತ್ತಿಲ್ಲ,

sunaath said...

ಚಿತ್ರಾ,
ವಿಷಾದವೇ ಕವನವಾಗಿದೆ.

Arun said...

ನಿನ್ನ ಬ್ಲಾಗಿಗೆ ತಡವಾಗಿ ಭೆಟ್ಟಿ ಕೊಟ್ಟಿದ್ದಕ್ಕೆ ಸಾರಿ!!ವಿಷಾದ ಕವನ ತುಂಬ ಹ್ರದಯ ಸ್ಪರ್ಶಿಯಾಗಿ ಬಂದಿದೆ!! ಮೂಡಿದ ಭವನೆಗಳನ್ನ ಶಬ್ದಗಳಲ್ಲಿ ರೂಪಾಂತರಿಸೊ ಕಲೆಯನ್ನ ಚೆನ್ನಾಗಿ ಅಳವಡಿಸಿಕೊಂಡ್ಡಿದ್ದಿಯಾ!! ನಾ ನಿನಗ ಯಾವಾಗ್ಲೊ ಹೆಳಿನಿ ಹಿಂಗೆ ಬರೀತಾ ಇರು ಅನ್ತ್!! ತಿಳಿತಿಲ್ಲೊ?

ಸುಧೇಶ್ ಶೆಟ್ಟಿ said...

ಏನು ಹೇಳುವುದೋ ಗೊತ್ತಾಗುತ್ತಿಲ್ಲ :(

Unknown said...

ನಾನು ದುಃಖದ ಕತೆ ಕವನ ಗಳನ್ನೂ ಓದುವುದು ಬಹಳ ಕಡಿಮೆ, ಆದರೆ ಇದನ್ನು ಓದದೆ ಇರಲಾಗಲಿಲ್ಲ .. ಓದಿದಮೇಲೆ ಬಹಳ ಬೇಸರವಾಗದೆ ಇರಲಾಗಲಿಲ್ಲ!!

ಚಿತ್ರಾ said...

ಮನಸ್ವಿ, ಸುನಾಥ ಕಾಕಾ,ಸುಧೇಶ್,
ಧನ್ಯವಾದಗಳು .

ದೇಶಪಾಂಡೆಯವರೇ,
ತಡವಾಗಿಯಾದರೂ ಬಂದಿರಲ್ಲ ಖುಷಿಯಾಯ್ತು. ಬರ್ತಾ ಇರಿ. ಪ್ರೋತ್ಸಾಹಕ್ಕಾಗಿ ಧನ್ಯವಾದಗಳು.

ತೇಜಾ,
ಥ್ಯಾಂಕ್ಸ್ !

shivu.k said...

ಚಿತ್ರಾ ಮೇಡಮ್,

ಮನಕಲಕುವ ಚಿತ್ರ. ಅದಕ್ಕೆ ತಕ್ಕಂತೆ ನಿಮ್ಮ ಕವನವನ್ನು ಓದುತ್ತಿದ್ದರೆ ಮನಸ್ಸು ವಿಷಾದದೆಡೆಗೆ ವಾಲುತ್ತದೆ...good one....keep it up...