January 28, 2009

ಸಂಸ್ಕೃತಿ ರಕ್ಷಣೆಯ ಹೆಸರಿನಲ್ಲಿ !!

ಮೊನ್ನೆ ಮಂಗಳೂರಿನಲ್ಲಿ ನಡೆದ ಘಟನೆಯನ್ನು ಟಿವಿಯಲ್ಲಿ ನೋಡಿದಾಗ ಮೈಯೆಲ್ಲಾ ಉರಿದೇ ಹೋಯ್ತು !

ಇವರಿಗೆ ಸಂಸ್ಕೃತಿಯ ಬಗ್ಗೆ ಅಷ್ಟು ಕಾಳಜಿ ಇದ್ದರೆ , ಆ ಹೆಣ್ಣುಮಕ್ಕಳ ಪಾಲಕರಿಗೆ ತಿಳಿಸಬಹುದಾಗಿತ್ತಲ್ಲ ? ತಾವೇ ಸ್ವತ: ಅವರ ಮೇಲೆ ಕೈ ಮಾಡುವ ಹಕ್ಕು ಅವರಿಗ್ಯಾರು ಕೊಟ್ಟಿದ್ದು ? ಇದ್ಯಾವ ಬಗೆಯ ಸಂಸ್ಕೃತಿ ರಕ್ಷಣೆ ? ಅಲ್ಲದೇ ಸಂಸ್ಕೃತಿ ರಕ್ಷಣೆಯ ಭಾರ ಕೇವಲ ಮಹಿಳೆಯರ ಮೇಲಿದೆಯೆ? ಪುರುಷರು ಏನು ಬೇಕಾದರೂ ಮಾಡಬಹುದೆ ?

ತಾವು ಹೆಣ್ಣು ಮಕ್ಕಳನ್ನು ರಕ್ಷಿಸುತ್ತೇವೆಂದು ಘೋಷಿಸುವ ಇವರು ಮಾಡಿದ್ದಾದರೂ ಏನು ? ಹೆಣ್ಣು ಮಕ್ಕಳ ಮೇಲೆ ಕೈ ಮಾಡಿದ್ದು ಯಾವ ಸಂಸ್ಕೃತಿ?

ವರದಕ್ಷಿಣೆಗಾಗಿ ಹೆಣ್ಣುಮಕ್ಕಳನ್ನು ಕೊಲ್ಲುವುದು, ಪುಟ್ಟ ಪುಟ್ಟ ಬಾಲಕಿಯರಿಂದ ಹಿಡಿದು ವಯಸ್ಸಾದ ಮಹಿಳೆಯರನ್ನೂ ಸಹ ತಮ್ಮ ಕಾಮತೃಷೆಗೆ ಬಲಿಪಶುಗಳನ್ನಾಗಿಸುವುದು ,ಜನಸಂದಣಿಯಲ್ಲಿ ಹೆಣ್ಣುಮಕ್ಕಳ ಮೈ-ಕೈ ಸವರಿ ವಿಕೃತ ತೃಪ್ತಿ ಹೊಂದುವುದು , ಇವೆಲ್ಲ ನಮ್ಮ ಸಂಸ್ಕೃತಿಯೆ? ಇಂಥ ಪ್ರತಿನಿತ್ಯ ನಡೆಯುವ ಘಟನೆಗಳನ್ನು ವಿರೋಧಿಸುವರೆ ಇವರು? ಹೋಗಲಿ , ಮೊನ್ನೆಯ ಘಟನೆ ಸಮಯದಲ್ಲೇ ಹೆಣ್ಣುಮಕ್ಕಳ ಮೈಕೈ ಸವರಿದರಲ್ಲ ಇದು ಇವರ ಸಂಸ್ಕೃತಿಯೆ? ಆ ನಂತರವೂ ಸಹ , ಈ ಹೆಣ್ಣು ಮಕ್ಕಳೆಲ್ಲ ತಮ್ಮ ಸೋದರಿಯರಂತೆ ಎಂದು ಯಾವ ಬಾಯಿಂದ ಹೇಳಿಕೆ ಕೊಡುತ್ತಾರೆ ಇವರು? ಸೋದರಿಯರ ಜೊತೆ ವರ್ತಿಸುವ ರೀತಿಯೇ ಇದು? ಇಂಥ ಪ್ರತಿಭಟನೆಗಳಲ್ಲಿ ಈ ರೀತಿಯ ವರ್ತನೆ ಸ್ವಾಭಾವಿಕ ಎಂಬಂಥ ನಾಚಿಕೆಗೆಟ್ಟ ಹೇಳಿಕೆ ಬೇರೆ !

ಇವತ್ತಿನ ಪರಿಸ್ಥಿತಿಯಲ್ಲಿ ನಾವು ಮಹಿಳೆಯರು ಸೀತಾಮಾತೆಯಾಗಿ ಮೌನವಾಗಿ ಎಲ್ಲವನ್ನೂ ಸಹಿಸುವುದು ಸಾಧ್ಯವಿಲ್ಲ . ಅದಕ್ಕಿಂತ ದಿಟ್ಟ ದ್ರೌಪದಿ ಮೆಚ್ಚುಗೆಯಾಗುತ್ತಾಳೆ. ದುಷ್ಟರನ್ನು ಶಿಕ್ಷಿಸುವ ದುರ್ಗಾಮಾತೆ ಹೆಚ್ಚು ಪ್ರೀತಿಯಾಗುತ್ತಾಳೆ ! ಸೀತೆಯಷ್ಟೇ ಅಲ್ಲ , ದ್ರೌಪದಿ, ದುರ್ಗಿಯರೂ ನಮ್ಮ ಸಂಸ್ಕೃತಿಯ ಭಾಗವೆಂಬುದು ಇವರಿಗೆ ನೆನಪಿರಲಿ !

ನಗೆ ಬೇಜಾರಾಗಿದ್ದೆಂದರೆ, ಮೀಡಿಯಾದವರೂ ಸಹ , ತಮಗೆ ಸಿಕ್ಕ ಮಾಹಿತಿಯನ್ನು ಪೋಲೀಸರಿಗೆ ಮುಂಚಿತವಾಗಿ ತಿಳಿಸಿದ್ದರೆ ಘಟನೆಯನ್ನು ತಡೆಯಬಹುದಾಗಿತ್ತೇನೋ! ಪ್ರಕರಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವ ಬದಲು ಅತ್ಯಾಚಾರಿಗಳನ್ನು ಸ್ವಲ್ಪ ಮಟ್ಟಿಗಾದರೂ ತಡೆಯುವ ಪ್ರಯತ್ನ ಮಾಡಬಹುದಿತ್ತಲ್ಲ?

ನಮ್ಮಲ್ಲಿಯೇ ಇಂಥ ಘಟನೆಗಳು ನಡೆಯುವಾಗ , ತಾಲಿಬಾನ್ ಅನ್ನು ಖಂಡಿಸುವ ಹಕ್ಕು ನಮಗಿದೆಯೆ ?

ಇಂಥ ’ ಸಂಸ್ಕೃತಿ ರಕ್ಷಕ’ ರಿಗೆ ನನ್ನ ಧಿಕ್ಕಾರವಿದೆ !

15 comments:

Anonymous said...

ಚಿತ್ರಾ,
ಧನ್ಯವಾದಗಳು. ಈ ಪ್ರತಿಭಟನೆಗಾಗಿ. ನಿಮ್ಮ ಕಾಳಜಿಗಾಗಿ.
ಬ್ಲಾಗು ತುಂಬ ಚೆಂದವಾಗಿದೆ. ನಿಮ್ಮ ಬರಹಗಳು ತುಂಬ ಹಿಡಿಸಿದವು. ನನ್ನ ಬ್ಲಾಗೀ ಲಿಸ್ಟಿನಲ್ಲಿ ನಿಮ್ಮ ಸೇರ್ಪಡೆ ಮಾಡುತ್ತಿದೇನೆ.
-ಟೀನಾ

shivu.k said...

ಚಿತ್ರಾ ಮೇಡಮ್,

ನಿಮ್ಮ ಹೋರಾಟದಲ್ಲಿ ನನ್ನ ಸಹಕಾರವಿದೆ.....

ಮೀಡಿಯಾದವರದು ಈಗ ಅತಿಯಾಯಿತು ಅನ್ನಿಸುತ್ತಿದೆ....ಪ್ರಚಾರ ಪ್ರಿಯಾ ಮಾಧ್ಯಮಗಳಿಗೆ ಅವರ ಅಕ್ಕ ತಂಗಿಯರಿಗೆ ಹೀಗೆ ಮಾಡಿದ್ದರೆ ಅದನ್ನು ಹೀಗೆ ಸೆರೆಹಿಡಿಯಲು ಮುಂದಾಗುತ್ತಿದ್ದವೇ ? ಮೊದಲು ಅವರಿಗೆ ಬುದ್ದಿ ಕಲಿಸಬೇಕು......

Ittigecement said...

ಚಿತ್ರಾ...

ತಪ್ಪು ಎರಡೂ ಕಡೆ ಇದೆ...

ನಿಮ್ಮ ಲೇಖನ ನಿಷ್ಪಕ್ಷಪಾತವಾಗಿದೆ..

ಕಾನೂನು ಕೈಗೆ ಯಾರೂ ತೆಗೆದುಕೊಳ್ಳಬಾರದು..

ಹಾಗೆಯೇ.. ಪಬ್ ಸಂಸ್ಕ್ರ್‍ಅತಿಗೆ ನಮ್ಮ ಸಮಾಜ ಬಲಿಯಾಗಬಾರದು..

ಸಮಯೋಚಿತ ಲೇಖನ...

Anonymous said...

ಇಂಥ ಸಂರಕ್ಷಕರ ಸೊಕ್ಕಿಗೆ ನನ್ನದೂ ಧಿಕ್ಕಾರವಿದೆ. Thanks for writing this.

sunaath said...

ಇವರೂ ಸಹ ಭಾರತೀಯ ತಾಲಿಬಾನಿಗಳೇ!

ತೇಜಸ್ವಿನಿ ಹೆಗಡೆ said...

ಚಿತ್ರಾ,

ನಮ್ಮ ಸಂಸ್ಕೃತಿ ಹೆಣ್ಣನ್ನು ಪೂಜಿಸಬೇಕೆಂದು ಹೇಳುತ್ತದೆ. "ಎಲ್ಲಿ ನಾರಿಯರನ್ನು ಗೌರವಿಸುತ್ತಾರೋ ಅಲ್ಲಿ ದೇವತೆಗಳು ನಿವಾಸಿಸುತ್ತಾರೆ" ಎಂದು ಹೇಳಿದ್ದಾರೆ. ಸ್ವಾತಂತ್ರ್ಯಕ್ಕೂ ಸ್ವಚ್ಚಂಧತೆಗೂ ವ್ಯತ್ಯಾಸವಿದೆ ನಿಜ. ಆ ಹುಡುಗಿಯರ ಮನೆಯವರಿಗಾಗಲೀ ಸ್ವತಃ ಆ ಹುಡುಗಿಯರಿಗಾಗಲೀ ತಮ್ಮ ವೈಯಕ್ತಿಕ ನಿಲುವನ್ನಾಗಲೀ, ಜೀವನದ ಕುರಿತಾಗಲೀ ನಿರ್ಧಾರ ತೆಗೆದುಕೊಳ್ಳುವ ಹಕ್ಕಿದೆ. ಇಂತಹ ಸಂಸ್ಕೃತಿ ತಪ್ಪು ಎಂದು ಘೋಷಿಸಿಕೊಂಡು ಅವರನ್ನು ಅಮಾನುಷವಾಗಿ ಹೊಡೆದದ್ದು ಖಂಡಿತ ಖಂಡನೀಯ. ಸಂಸ್ಕೃತಿ ಬರುವುದು ಸಂಸ್ಕಾರದಿಂದ... ಮನೋಪರಿವರ್ತನೆಯಿಂದ. ಈ ರೀತಿಯ ಹೇಯ ಕೃತ್ಯದಿಂದಲ್ಲ. ಉತ್ತಮ ಲೇಖನ. ಸಮಾಜಮುಖಿಯಾಗಿದೆ.

ಚಿತ್ರಾ said...

ಟೀನಾ,
ಬರೆಹ ಮೆಚ್ಚಿದ್ದಕ್ಕಾಗಿ , ನಿಮ್ಮ ಬ್ಲಾಗೀ ಲಿಸ್ಟ್ ಗೆ ನನ್ನನ್ನೂ ಸೇರಿಸಿಕೊಂಡಿದ್ದಕ್ಕಾಗಿ ಧನ್ಯವಾದಗಳು.

ಶಿವು ,
ಪ್ರೋತ್ಸಾಹಕ್ಕೆ ಧನ್ಯವಾದಗಳು. ಮೀಡಿಯಾದವರು ಸ್ವಲ್ಪ ಜವಾಬ್ದಾರಿಯುತವಾಗಿ ವರ್ತಿಸಬೇಕೆಂದು ನನಗೂ ಅನಿಸುತ್ತದೆ .

ಪ್ರಕಾಶ್, ಸಂಕೇತ್,ಸುನಾಥ್ ಕಾಕಾ,
ಧನ್ಯವಾದಗಳು.

ಚಿತ್ರಾ said...

ತೇಜೂ ,
ನೀನು ಹೇಳಿದಂತೆ ,ಸಂಸ್ಕೃತಿ, ಸಂಸ್ಕಾರದಿಂದ ಮಾತ್ರ ಬರಲು ಸಾಧ್ಯವೇ ಹೊರತು ಬಲವಂತದ ಹೇರುವಿಕೆಯಿಂದಲ್ಲ . ಯಾವುದೇ ವಿಷಯ ಬಲವಂತವಾದಾಗ ಅದರ ಬಗ್ಗೆ ದ್ವೇಷ ,ತಿರಸ್ಕಾರ ಮೂಡುವ ಸಾಧ್ಯತೆ ಹೆಚ್ಚು ಎಂದು ನನಗನಿಸುತ್ತದೆ. ಬದಲಾಗಿ ಅದರ ಬಗ್ಗೆ ಅರಿವು ಮೂಡಿಸ ಬೇಕು.ನಮ್ಮ ಸಂಸ್ಕೃತಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ, ಅದರ ಬಗ್ಗೆ ಪ್ರೀತಿಯನ್ನು, ಕಾಳಜಿಯನ್ನು ತೋರಿಸುವ ಮನೋಭಾವ ಬೆಳೆಯುವಂತೆ ಮಾಡಬೇಕು.ಇದು ನನ್ನ ಅಭಿಪ್ರಾಯ .

Unknown said...

ಚಿತ್ರ ಅವರೇ
ಒಂದು ನೈಜ ಸಂಗತಿಯನ್ನು ಸರಳ ಹಾಗೂ ಸಂಕ್ಷಿಪ್ತವಾದ ಬರವಣಿಗೆಯಲ್ಲಿ ತಿಳಿಸಿರುವಿರಿ. ವಂದನೆಗಳು.
ನಿಮಗೆ ಬಿಡುವು ಇದ್ದಾಗ ನನ್ನ ಬ್ಲಾಗಿಗೊಮ್ಮೆ ಭೇಟಿ ಕೊಡಿ
ಸುನಿಲ್ ಮಲ್ಲೇನಹಳ್ಳಿ
mallenahallipages.blogspot.com

ಮನಸ್ವಿ said...

ಸಮಯೋಚಿತ ಲೇಖನ,ನಿಮ್ಮ ಹೋರಾಟಕ್ಕೆ ನನ್ನದೂ ಸಹಕಾರವಿದೆ.

Umesh Balikai said...

ಚಿತ್ರ ಅವರೇ, ಈ ಮೀಡೀಯದವರಿಗೆ ತಮ್ಮ ಟೀಆರ್ಪಿ ಹೆಚ್ಚಿಸಿಕೊಳ್ಳುವುದೇ ಧ್ಯೇಯವಾಗಿರುವಾಗ ಅವರಿಂದ ಸಾಮಾಜಿಕ ಜವಾಬ್ದಾರಿಯನ್ನು ಅಪೇಕ್ಷಿಸುವುದು ತಪ್ಪೇ. ಹಾಗೆಯೇ, ಆ ಹುಡುಗಿಯರ ತಂದೆ ತಾಯಿಗಳೇ ತಮ್ಮ ಮಕ್ಕಳು ಪಬ್ಬು ಬಾರು ಅಂತ ತಿರುಗುವುದನ್ನು ನೋಡಿಕೊಂಡು ಸುಮ್ಮನಿರುವಾಗ ನಾವು ಅವರನ್ನ ಸರಿ ದಾರಿಗೆ ತರುತ್ತೇವೆ ಅಂತ ಕಾನೂನು ಕೈಗೆತ್ತಿಕೊಳ್ಳುವುದೂ ತಪ್ಪೇ. ಎಲ್ಲರಿಗೂ ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳುವುದೇ ಮುಖ್ಯವಾಗಿರುವಾಗ ಯಾರಿಗೆ ಏನಂದು ಏನು ಪ್ರಯೋಜನ?
ಕೊಡಚಾದ್ರಿಯ ಸೂರ್ಯೋದಯ ಸೂರ್ಯಾಸ್ತದ ಸವಿ ಸವಿಯಬೇಕೆ? ನನ್ನ ಬ್ಲಾಗಿಗೆ ಭೇಟಿ ಕೊಡಿ. ಕೆಲವು ಚಿತ್ರಗಳನ್ನು ಹಾಕಿದ್ದೇನೆ. ನೋಡಿ ನಿಮ್ಮ ಅನಿಸಿಕೆ ತಿಳಿಸಿ.

ಚಿತ್ರಾ ಸಂತೋಷ್ said...

ಚಿತ್ರಾ ಮೇಡಂ..
ನಮಸ್ಕಾರ...

ನನ್ನ ಬ್ಲಾಗಿಗೆ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು. 'ಹೆಣ್ಣುಮಕ್ಕಳನ್ನು ರಕ್ಷಿಸುತ್ತೇವೆ' ಎನ್ನುವ ಯಾವ ಸಂಘಟನೆಗಳು, ಮಹಿಳಾವಾದಿಗಳು ಪ್ರಾಮಾಣಿಕವಾಗಿ ಹೆಣ್ಣಿನ ಮೇಲಾಗುತ್ತಿರುವ ಶೋಷಣೆ ಕುರಿತು ದನಿಯೆತ್ತಿಲ್ಲ. ಶ್ರೀರಾಮಸೇನೆಯಂಥ ಸಂಘಟನೆಗಳು, ಅಥವಾ ದೆಹಲಿಯಿಂದ ಓಡೋಡಿ ಬಂದ ಮಹಿಳಾ ಆಯೋಗ, ಬೊಬ್ಬಿಡುವ ಮಹಿಳಾ ಸಮಘಟನೆಗಳು ಯಾರೇ ಆಗಲಿ... ಹೆಣ್ಣಿನ ನಿಜವಾದ ಬದುಕು ಏನಾಗುತ್ತಿದೆ ಅನ್ನೋದನ್ನು ತೆರೆದ ಕಣ್ಣಿಂದ ಮತ್ತು ಮನಸ್ಸಿನಿಂದ ನೋಡಿಲ್ಲ.
-ಚಿತ್ರಾ

ಚಿತ್ರಾ said...

ಸುನೀಲ್,

ನನ್ನ ಬ್ಲಾಗಿಗೆ ಸ್ವಾಗತ . ಬರಹವನ್ನು ಮೆಚ್ಚಿದ್ದಕ್ಕೆ , ನನ್ನ ಜೊತೆ ದನಿಗೂಡಿಸಿದ್ದಕ್ಕೆ ಧನ್ಯವಾದಗಳು. ಖಂಡಿತಾ ಬರುತ್ತೇನೆ ನಿಮ್ಮ ಬ್ಲಾಗಿಗೆ !

ಮನಸ್ವಿ,

ಮೆಚ್ಚುಗೆಗೆ ಧನ್ಯವಾದಗಳು.
ನಿನ್ನ ಬ್ಲಾಗಿನ ಹೊಸಾ ಪೇಜ್ ಸಿಗ್ತಾನೇ ಇಲ್ಲೆ ? ನಿನ್ನೆಯಿಂದ ಪ್ರಯತ್ನ ಮಾಡ್ತಾ ಇದ್ದಿ.

ಚಿತ್ರಾ said...

ಉಮಿಯವರೇ,

ನೀವು ಹೇಳಿದಹಾಗೆ , ಟಿ ಆರ್ ಪಿ ಯ ಹಿಂದೆ ಬಿದ್ದು , ಮೀಡಿಯಾದವರು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಮರೀತಿದಾರೆ ಅಂತ ಅನಿಸತ್ತೆ .
ಹಾಗೆಯೇ , ಇನ್ನೊಬ್ಬರ ವೈಯುಕ್ತಿಕ ವಿಷಯಗಳಲ್ಲಿ ತಲೆ ಹಾಕುವ ಹಕ್ಕು ಯಾರಿಗೂ ಇಲ್ಲ ಅಲ್ಲವೆ? ಸಂಸ್ಕೃತಿಯ ಬಗ್ಗೆ ಕಾಳಜಿ ಇರುವವರು ಜನರಲ್ಲಿ ಅದರ ಬಗ್ಗೆ ಅರಿವು ಮೂಡಿಸಿ ಸಂಸ್ಕೃತಿಯನ್ನು ಮನಸಾರ ಗೌರವಿಸುವಂತೆ ಮಾಡಬೇಕೇ ಹೊರತು ಈ ರೀತಿಯ ಹೇಯ ಕೃತ್ಯಗಳಿಂದಲ್ಲ!
ಇವರುಗಳು, ದೊಡ್ಡ ಜನರ ಪಾರ್ಟೀಗಳು, ದೊಡ್ಡ ಹೋಟೆಲ್ ಗಳಿಗೆ ಹೋಗಿ ಈ ರೀತಿ ಗಲಾಟೆ ಮಾಡುತ್ತಾರೆಯೆ? ಆ ಧೈರ್ಯ ಅವರಿಗಿಲ್ಲ. ಹೇಡಿಗಳು ! ಇವರಿಗೆ ಬೇಕಾಗಿದ್ದು ಕೇವಲ ಪ್ರಚಾರ ಅಷ್ಟೆ !

ಚಿತ್ರಾ said...

ಚಿತ್ರಾ,
ಪ್ರತಿಕ್ರಿಯೆಗೆ ಧನ್ಯವಾದಗಳು .

ನೀವು ಅಂದಂತೆ ,ಈ ಸಂಘಟನೆಗಳು,ಆಯೋಗಗಳು ಎಲ್ಲವೂ ವಾಸ್ತವವನ್ನು ಕಣ್ಣು ಬಿಟ್ಟು ನೋಡುವುದಿಲ್ಲ. ಅವರಿಗೆ ಅದು ಬೇಕಾಗಿಯೂ ಇಲ್ಲ !ಅವರಿಗೆ ಬೇಕಾಗಿದ್ದು , ಪ್ರಚಾರ , ಕೆಲ ಸಮಯ ಜನರ , ಮಾಧ್ಯಮಗಳ ಗಮನ ಅಷ್ಟೆ !
ಇದಕ್ಕೆ ನನಗನ್ನಿಸಿದಂತೆ ಎರಡೇ ಉಪಾಯಗಳು.
೧. ಇವುಗಳನ್ನು ದುರ್ಲಕ್ಷಿಸುವುದು ( ಆದರೆ , ಮೀಡಿಯಾದವರ ಅತಿ ಉತ್ಸಾಹಕ್ಕೇನು ಮಾಡೋಣ ? )
೨.ಇಂಥ ಕೃತ್ಯ ಮಾಡುವವರನ್ನು ಸುತ್ತಲಿನ ಜನ ಹಿಡಿದು ನಾಲ್ಕೇಟು ಬಿಗಿಯುವುದು !(ಇದನ್ನು ಖಂಡಿತಾ ಪ್ರಯತ್ನಿಸಬಹುಇದು !)
ಒಂದೆರಡು ಸಲ ಹೀಗೆ ಮಾಡಿದಲ್ಲಿ ಬಹುಶಃ ಇವರು ನಿಜವಾದ ’ ಸಂಸ್ಕೃತಿ’ ಯ ಹಾದಿ ಹಿಡಿಯಬಹುದೇನೋ!