April 16, 2010

ನಾಗಪ್ಪನೆಂಬ ನಾಯಿಬಾಲ !

ವರ್ಷದ ಹಿಂದೆ " ಮರ್ವಾದೆ ಬಿಡದ ನಾಗಪ್ಪ " ನ ಬಗ್ಗೆ ಬರೆದಿದ್ದೆ .( ಪರಮಾತ್ಮ ಆಡಿಸಿದಂತೆ .. )
ಅವನ ಕುಡಿತದ ಕಥೆಗಳನ್ನ ಇನ್ನಷ್ಟುಹೇಳ್ತೀನಿ ಕೇಳಿ .

ನಾಗಪ್ಪನ ಕುಡಿತ , ಮನೆಗೆ ಬಂದು ಹೆಂಡತಿಗೆ ಹೊಡೆಯುವುದು ಜಗಳ ಇತ್ಯಾದಿಗಳಿಂದ ಬೇಸತ್ತ ಮನೆಯವರು ಅವನನ್ನು ಬೇರೆ ಮನೆ ಮಾಡಿಕೊ ಎಂದು ಕಳಿಸಿಬಿಟ್ಟರು !

ಸರಿ , ಮನೆಯಿಂದ ಸ್ವಲ್ಪವೇ ದೂರದಲ್ಲಿ ಆತ ಹೊಸಮನೆ ಕಟ್ಟಿಕೊಂಡ. . " ಮನೆಯಿಂದ ಹೊರ ಹಾಕಿದ್ರೇನಾತು , ನಾನು ಚೆನ್ನಾಗಿ ಸಂಸಾರ ಮಾಡೋದಿಲ್ಲ ಅಂದ್ಕೊಂಡಿದಾರೇನು ? " ಎಂದು ಹೆಂಡತಿಯನ್ನು ಹುರಿದುಂಬಿಸುತ್ತಾ ಚೆನ್ನಾಗೇ ಇದ್ದ. ಸುಮಾರು ೩ - ೪ ತಿಂಗಳುಗಳ ಕಾಲ ಎಲ್ಲ ಸರಿಯಾಗೇ ಇತ್ತು . ನಾಯಿ ಬಾಲ ಡೊಂಕು ಅನ್ನೋ ಹಾಗೆ ಮತ್ತೆ ಹಳೆ ಕಥೆ ಶುರುವಾಯ್ತು ! ಸಂಜೆಯಾಗ್ತಿದ್ದ ಹಾಗೆ ಕುಡಿತ -ಹೊಡೆತ ಆರಂಭವಾಗುತ್ತಿದ್ದವು . ಚಿಕ್ಕ ಪುಟ್ಟ ಕಾರಣಕ್ಕೂಹೆಂಡತಿಯನ್ನು ಅಂಗಳದಲ್ಲಿ ಹೊಡೆಯುವುದು ಅವಾಚ್ಯ ಶಬ್ದಗಳಿಂದ ಬಯ್ಯುವುದು ಸಾಮಾನ್ಯವಾಯಿತು .
ಇದು ಪ್ರತಿನಿತ್ಯದ ಕಥೆಯಾಗಿ , ಒಂದು ದಿನ ಅವನ ಹೆಂಡತಿ ಅವನ ಕೈಯ್ಯಿಂದ ತಪ್ಪಿಸಿಕೊಂಡು ' ದಿನಾ ಇಂಥಾ ನರಕದಲ್ಲಿ ಬದುಕೋಕ್ಕಿಂತ ಸತ್ತೇ ಹೋಗ್ತೀನಿ ಬಿಡಿ " ಎಂದು ಅಳುತ್ತಾ ಮನೆಯ ಹಿಂದಿನ ಕೆರೆಯತ್ತ ಓಡಿದಳು . ಎಚ್ಚೆತ್ತ ನಾಗಪ್ಪ ಅವಳ ಹಿಂದೆ ಓಡಿದ . ಕೆರೆಗೆ ಹಾರಲಿದ್ದವಳನ್ನು ಹಿಡಿದು ಎಳೆದುಕೊಂಡು ಬಂದ. ಅಂಗಳದಲ್ಲಿ ಕಾಲಿಟ್ಟಿದ್ದೆ " ಏನೇ .... ಸಾಯೋಕೆ ಹೋಗ್ತೀಯೇನೆ? ಹಾಂಗೆ ಸತ್ತೋದ್ರೆ , ಮಕ್ಕಳನ್ನ ಯಾರು ನೋಡ್ಕೋತಾರೆ? ಅಷ್ಟೂ ಬುದ್ಧಿ ಇಲೇನು ನಿಂಗೆ .... ಸಾಯ್ತಾಳಂತೆ . ಅದು ಹ್ಯಾಂಗೆ ಸಾಯ್ತಿಯೋ ನಾನೂ ನೋಡ್ತೀನಿ ನಡಿಯೇ .. ಎನ್ನುತ್ತಾ , ಅ ಪರದೇಶಿಯ ಬೆನ್ನಿಗೆ ದಬ ದಬ ಗುದ್ದಬೇಕೆ ?

ಇನ್ನೊಮ್ಮೆ , ಆತನಿಗೆ ಬೇರೊಬ್ಬ ಹೆಂಗಸಿನೊಂದಿಗೆ ಸಂಬಂಧ ಇದೆ ಎಂದು ಸುಳಿವು ಸಿಕ್ಕಿದ ಹೆಂಡತಿ ನಾಗಪ್ಪನನ್ನು ಆ ವಿಷಯವಾಗಿ ಪ್ರಶ್ನಿಸಿದ್ದೆ ಅವನ ದನಿ ತಾರಕಕ್ಕೇರಿತು ! ಮೊದ ಮೊದಲು ಇಲ್ಲ ಎಂದೇ ವಾದಿಸಿದವನು ಆಮೇಲೆ ,  " ನಾನು ಯಾರನ್ನಾದ್ರೂ ಇಟ್ಕತೀನಿ , ಕಟ್ಕತೀನಿ ನೀಯಾವೊಳೆ ಕೇಳೋಳು ? ನಿಂಗೆ ತಾಳಿ ಕಟ್ಟಿದೀನಿ ನಿನ್ ಕೆಲಸ ನೋಡ್ಕೊಂಡು ಮನೇಲಿ ಬಿದ್ದಿರು ! ನಾಎನಾರೆ ಮಾಡ್ಕತೀನಿ , ಅದೆಲ್ಲಾ ನಿಂಗೆ ಬೇಕಾಗಿಲ್ಲ ! ಹಾಂಗೆಲ್ಲ ನನ್ ಕೇಳೋ ಹಂಗಿದ್ರೆ , ನೀ ಈ ಮನೇಲಿ ಇರಂಗಿಲ್ಲ " ಎಂದು ಕೂಗಾಡತೊಡಗಿದ.

ಅವನ ಹೆಂಡತಿ ಗೊಳೋ ಎಂದು ಅಳುತ್ತಾ " ನೀನು ಆ ನನ್ನ ಸವತಿ ನೇ ತಂದು ಇಟ್ಕಾ ಮನೇಲಿ , ನಾ ಹೊಕ್ಕೀನಿ ನಂ ಅವ್ವನ ಮನಿಗೆ ಯೇ ದೇವ್ರೇ ಎಂತಾ ಹಣೆಬರಾನೋ ನಂದೂ " ಎಂದು ಕೂಗುತ್ತಾ, ಜೊತೆಗಿಷ್ಟು ಶಾಪ ಹಾಕುತ್ತಾ ಮಕ್ಕಳನ್ನು ಎಳೆದುಕೊಂಡು ಬಸ್ ಸ್ಟಾಪ್ ನ ಕಡೆ ಹೊರಟಳು .

ನಾಗಪ್ಪನಿಗೆ ಮತ್ತೆ ಎಚ್ಚರವಾಯ್ತು ! ಅವಳ ಹಿಂದೆ ಓಡಿದವನೇ ಬಸ್ ಸ್ಟಾಪ್ ನಲ್ಲೆ ಆಕೆಗಿಷ್ಟು ಬಡಿದ , " ನಡಿಯೇ ಮನೀಗೆ , ಹೊಕ್ಕಾಳಂತೆ ಅವ್ವನ ಮನೀಗೆ ! ನಾ ನಿನ್ ಗಂಡ ಕಣೆ, ಬೇಕಾದ್ರೆ , ಹೊಡೀತೀನಿ , ಬಯ್ತೀನಿ ಅದು ನನ್ ಹಕ್ಕು ತಿಳೀತೇನೆ ? ಅಪ್ಪನ ಮನೀಗೆ ಹೋಗಿ ಗಂಡನ ಮರ್ವಾದೆ ಹರಾಜು ಮಾಡ್ತೀಯೇನೆ ? ನಡಿಯೇ ಮನೀಗೆ ... " ಎನ್ನುತ್ತಾ ಆಕೆಯನ್ನು ಮನೆಗೆ ಎಳೆದುಕೊಂಡು ಬಂದ . ಅಂಗಳಕ್ಕೆ ಕಾಲಿಟ್ಟಿದ್ದೆ ಅವನ ಪ್ಲೇಟ್ ರಿವರ್ಸ್ ! " ಯೇ , ನೀನು ನಂಗೆ ಎದುರು ವಾದಿಸ್ದೊಳು , ಈ ಮನೆ ಒಳಗೆ ಕಾಲಿಡಹಂಗಿಲ್ಲ , ಎಲ್ಲಿ ಬೇಕಾರು ಹೋಗಿ ಸಾಯಿ ... " ಎನ್ನುತ್ತಾ ಮನೆ ಬಾಗಿಲು ಹಾಕಿಕೊಳ್ಳಬೇಕೇ ?

ಇಂಥ ಇವನ ತಿಕ್ಕಲುತನಗಳನ್ನು , ಅವನ ಹೆಂಡತಿಯ ಗೋಳಾಟವನ್ನೂ ನೋಡಲಾಗದೆ , ಮನೆಯವರು ಅವನಿಗೆ ಬುದ್ಧಿ ಕಲಿಸ ಬಯಸಿದರು .

ಒಂದು ಸಂಜೆ ಅವನನ್ನು ಎಳೆದುಕೊಂಡು ಬಂದು ಮನೆ ಮುಂದಿನ ತೆಂಗಿನ ಮರಕ್ಕೆ ಕಟ್ಟಿ ಅಣ್ಣ -ತಮ್ಮಂದಿರು ಚೆನ್ನಾಗಿ ಹೊಡೆದರು .

" ಹೆಂಡತಿ ಗೆ ಹೊಡೀತೀಯಾ? ಮಕ್ಕಳ ಮೇಲೆ ಎಂಥಾ ಪರಿಣಾಮ ಆಗತ್ತೆ ಅಂತನೂ ಗೊತ್ತಿಲ್ಲ ನಿನಗೆ ? ನಿನ್ನ, ಮನೆಯಿಂದ ಹೊರಗೆ ಹಾಕಿದ್ರೂ ಬುದ್ಧಿ ಬರ್ಲಿಲ್ಲ. ಸುಧಾರಿಸಿಕೊಂಡು ಜೀವನ ಮಾಡೋದು ಬಿಟ್ಟು ಊರವರ ಮುಂದೆ ಮರ್ಯಾದೆ ಹೋಗೋ ತರ ಆಡೋಕೆ ನಾಚ್ಕೆ ಆಗಲ್ಲ ನಿಂಗೆ ? ಇವತ್ತು ನಿನ್ನ ಚರ್ಮಾ ಸುಲ್ದು ಬಿಡ್ತೀನಿ , ಇನ್ನು ಮುಂದೆ ಸರಿಯಾಗಿ ಜೀವನಾ ಮಾಡಿದ್ರೆ , ಸರಿ ಇಲ್ಲಾ ಅಂದ್ರೆ ಅಷ್ಟೇ " ಎಂದು ಅವನ ದೊಡ್ಡಣ್ಣ ಚೆನ್ನಾಗಿ ಉಗಿದ.

ನಾಗಪ್ಪನ ಹೆಂಡತಿ ಎಲ್ಲೋ ಕೆಲಸಕ್ಕೆ ಹೋಗಿದ್ದವಳಿಗೆ ವಿಷಯ ತಿಳಿದು ಓಡಿ ಬಂದಳು !

ಗಂಡನ ಸ್ಥಿತಿ ನೋಡಿದವಳೇ , ಕೆರಳಿ " ಯಾವೋನೋ ಅವನು ನನ್ ಗಂಡನ ಮೈ ಮುಟ್ಟಿದೋನು ? ಯಾಕೆ ಅವನ್ನ ಕಟ್ಟಿ ಹಾಕಿದ್ದು ? " ಎಂದು ಕೂಗಾಡ ತೊಡಗಿದಳು . ಮನೆಯವರು , ನಾಗಪ್ಪ ಅವಳಿಗೆ ಕಷ್ಟ ಕೊಡುವುದನ್ನು ನೋಡಲಾಗದೆ ಬುದ್ಧಿ ಕಲಿಸಬೇಕೆಂದು ಹೀಗೆ ಮಾಡಿದ್ದು ಎಂದು ಅವಳಿಗೆ ವಿವರಿಸಿದರೆ , ಆಕೆ ಕೇಳುವ ಸ್ಥಿತಿಯಲ್ಲಿರಲಿಲ್ಲ .

" ನಾನು , ನನ್ ಗಂಡ ಏನು ಬೇಕಾದ್ರೂ ಮಾಡ್ಕೋತೀವಿ , ನೀವ್ಯಾರು ಕೇಳೋಕೆ? ಅಂವ ನನ್ ಗಂಡ. ಅಂವ ನಂಗೆ ಹೊಡೀತಾನೆ , ನಾನೇ ಸುಮ್ಮನೆ ಹೊಡೆಸ್ಕೋಳೋವಾಗ , ನಿಮಗೇನು ಗಂಟು ಹೋಗೋದು ? ಇನ್ನೊಂದು ಸಲ ನನ್ ಗಂಡನ ಸುದ್ದಿಗೆ ಬಂದ್ರೆ ಸುಮ್ನಿರಕಿಲ್ಲ ನಾನು " ಎನ್ನುತ್ತಾ ಜೋರಾಗಿ ಬಯ್ಯುತ್ತಾ, ಗಂಡನ ಕಟ್ಟು ಬಿಚ್ಚಿ " ನಡೀರಿ , ಮನೆಗೆ ಹೋಗೋಣ , ಹ್ಯಾಂಗೆ ಹೊಡೆದಾರೆ ನಿಮಗೆ , ಮನೇಲಿ  ಎಣ್ಣೆ ಹಚ್ಚಿ ಶಾಖ ಕಾಯಿಸ್ತೀನಿ ನಡೀರಿ " ಎಂದು ನಾಗಪ್ಪನ ಕೈ ಹಿಡಿದು ಮನೆಗೆ ಕರೆದುಕೊಂಡು ಹೋದಳು .

ಅವಳ ಕಷ್ಟಕ್ಕೆ ಮರುಗಿ , ನಾಗಪ್ಪನಿಗೆ ಬುದ್ಧಿ ಕಲಿಸಹೊರಟಿದ್ದ ಮನೆಯವರು ಪೆಚ್ಚಾದರು . ಸಿನಿಮಾಗಳಲ್ಲಿ ಆಗುವಂತೆಯೇ ನಡೆದ ಈ ಘಟನೆಯ ನಂತರ ನಾಗಪ್ಪ ಸುಧಾರಿಸಿದ , ಒಳ್ಳೆಯ ಮನುಷ್ಯ ನಾದ ಎಂದೆಲ್ಲ ತಿಳಿದುಕೊಳ್ಳ ಬೇಡಿ , ಎರಡೇ ದಿನಗಳಲ್ಲಿ ,ಮತ್ತೆ , ಮೊದಲಿನ ಸ್ಥಿತಿಗೆ ಮರಳಿತ್ತು ಜೀವನ !

23 comments:

PARAANJAPE K.N. said...

ಬಹಳ ಚೆನ್ನಾಗಿದೆ. ಟಿಪಿಕಲ್ ಭಾರತೀಯ ಮನಸ್ಥಿತಿಯ ಗ೦ಡಹೆ೦ಡಿರು ಹೇಗಿರುತ್ತಾರೆ, ಸ೦ಸಾರಗಳು ಹೇಗಿರುತ್ತವೆ ಎ೦ಬುದಕ್ಕೆ ಇದಕ್ಕಿ೦ತ ಒಳ್ಳೆಯ ನಿದರ್ಶನ ಬೇಕಿಲ್ಲ.

ಸಾಗರದಾಚೆಯ ಇಂಚರ said...

ಚಿತ್ರ
ರಾಶಿ ಚೊಲೋ ಇದ್ದು
ಇಂಥ ಕಥೆ ಊರಲ್ಲಿ ಕೆಲ್ಸಕ್ಕೆ ಬರ ಎಲ್ಲ ಕುಟುಂಬದಲ್ಲೂ ಇರ್ತು ಅನಿಸ್ತು
ಅಲ್ದಾ?
ಅವು ಯಾವಾಗಲು ಸುಧಾರಿಸ್ವ್ತಿಲ್ಲೇ

ವಿ.ರಾ.ಹೆ. said...

ha ha ha.. I like this Nagappa couple :)

sunaath said...

ಹಳ್ಳಿ ಕಡೆ ಇಂಥದು ಸಾಮಾನ್ಯ. ನಾಗಪ್ಪನ ತಿಕ್ಕಲುತನವನ್ನ ಚೆನ್ನಾಗಿ ಬರೆದಿದ್ದೀರಿ.

Ittigecement said...

ಚಿತ್ರಾ...

ಸುಖ, ಶಾಂತಿ ಅನ್ನೋದೆಲ್ಲ ಮನಸ್ಥಿತಿ...
ಕುಡುಕ, ತಿಕ್ಕಲು ಗಂಡನೊಂದಿಗೂ ಸಂತೋಷವಾಗಿ (?) ಬದುಕಬಹುದೆನ್ನುವದಕ್ಕೆ ನಾಗಪ್ಪನ ಹೆಂಡತಿ ಉದಾಹರಣೆ...

ನಿಮ್ಮ ನಾಗಪ್ಪನಿಗೆ ಒಳ್ಳೆಯ ಮನಸ್ಸಿದೆ..
ಹೃದಯವಿದೆ...
ಸರ್ವ ಬಣ್ಣ ಮಸಿ ನುಂಗಿತ್ತು ಅನ್ನುವ ಹಾಗೆ..
ಕುಡಿತ ಬದುಕನ್ನು ಹಾಳು ಮಾಡಿತ್ತು...

ಆದರೂ ನಿಮ್ಮ ನಾಗಪ್ಪ "ಮರ್ವಾದಿ" ಬಿಟ್ಟಿಲ್ಲವಲ್ಲ...
ಅದು ಇಷ್ಟವಾಗಿಬಿಡುತ್ತದೆ...

ತುಂಬಾ ಚಂದದ ಲೇಖನ...

ಅಭಿನಂದನೆಗಳು...

ಮನಸಿನಮನೆಯವನು said...

ರೀ ಚಿತ್ರಾ..,
ಇಂಥಹ ಒಂದು ಸಂಸಾರವನ್ನು ನಾನು ತುಂಬಾ ಹತ್ತಿರದಿಂದನೆ ಬಲ್ಲೆ.
ಕುಡುಕ ಗಂಡ ಇರುವ ಹಲವಾರು ಸಂಸಾರ ಹೀಗೇನೆ.

shivu.k said...

ನಾಗಪ್ಪನ ಕತೆಯನ್ನು ನಗು ಬಂತು. ಇಂಥ ಸಂಸಾರವನ್ನು ಸರಿಪಡಿಸಲು ಬಂದವರ ವಿರುದ್ಧವೇ ಹೆಂಡತಿ ತಿರುಗಿ ಬೀಳುವುದು ಅನ್ನೋದು ಅಂದರೆ ಅಲ್ಲಿ ಗಂಡ ಹೆಂಡತಿ ಸಂಭಂದಕ್ಕೆ ಎಂಥ ಬೆಲೆ ಅನ್ನೋದು ತಿಳಿಯುತ್ತೆ....ಇಷ್ಟೆಲ್ಲಾ ಅದರೂ ಬದಲಾಗದ ನಾಗಪ್ಪನಂತವರು ಇರುವುದು ಎಂಥ ವಿಪರ್ಯಾಸವಲ್ಲವೇ...

ಗೌತಮ್ ಹೆಗಡೆ said...

cholo iddde:):)

Subrahmanya said...

ತುಂಬ ಚೆನ್ನಾಗಿದೆ. ಇಂತಹ ಹಲವು ಪ್ರಸಂಗಗಳನ್ನು ನಾನು ಕಣ್ಣಾರೆ ನೋಡಿದ್ದೇನೆ. ನೀವದನ್ನು ಚೆನ್ನಾಗಿ ತೆರಿದಿಟ್ಟಿದ್ದೀರಿ.

ಚಿತ್ರಾ said...

ಪರಾಂಜಪೆ,
ಧನ್ಯವಾದಗಳು. ನಿಜ ಇದು ಟಿಪಿಕಲ್ ಭಾರತೀಯ ಮನಸ್ಥಿತಿಯೇ, ಮೆಚ್ಚಬೇಕೋ ಮರುಗಬೇಕೋ ತಿಳಿಯದು !

ಚಿತ್ರಾ said...

ಗುರು,
ಹೌದು , ಊರ ಬದಿಗೆ ಕೆಲ್ಸಕ್ಕೆ ಬರ ಹೆಚ್ಚಿನವರ ಮನೆಗಳಲ್ಲಿ ಇದು ಸಾಮಾನ್ಯವಾದ ಕಥೆ. ಅಷ್ಟೇ ಅಲ್ಲಾ, ಸಮಾಜದ ಎಲ್ಲ ಸ್ತರಗಳಲ್ಲೂ ಇಂಥ ಕುಟುಂಬಗಳಿವೆ. ಆದರೆ , ಈ ಕೆಳವರ್ಗದ ಜನರಷ್ಟು ಮುಕ್ತವಾಗಿ ಅದನ್ನು ಬೇರೆಯವರು ಚರ್ಚಿಸುವುದಿಲ್ಲ ಎನಿಸುತ್ತದೆ

ಚಿತ್ರಾ said...

ವಿಕಾಸ್,
ಥ್ಯಾಂಕ್ಸ್ !

ಚಿತ್ರಾ said...

ಕಾಕಾ,
ಹಳ್ಳಿಗಳಷ್ಟೇ ಅಲ್ಲಾ, ಪಟ್ಟಣಗಳಲ್ಲೂ ಕೆಳವರ್ಗದ ಜನರಲ್ಲಿ ಈ ರೀತಿಯ ಬೀದಿ ರಂಪಗಳನ್ನು ನೋಡಿದ್ದೇನೆ. ಸ್ವಲ್ಪ ಕಮ್ಮಿ ಇರಬಹುದಷ್ಟೆ . ಆದರೆ , ಎಲ್ಲ ಕಡೆಗಳಲ್ಲೂ ಹೊಡೆತ ಮಾತ್ರ ಹೆಂಡತಿಗೆ ! ಹಾ ಹಾ ಹಾ

ಚಿತ್ರಾ said...

ಪ್ರಕಾಶಣ್ಣ ,
ಆಕೆ ನಾಗಪ್ಪನ ಜೊತೆ ಎಷ್ಟು ಸುಖವಾಗಿರಬಹುದು ಎಂದು ನಮ್ಮಂತವರು ಕಲ್ಪಿಸಿಕೊಳ್ಳಲಾರೆವು . ಹೇಗೋ ಏನೋ ಒಟ್ಟಿನಲ್ಲಿ ಗಂಡನ ಜೊತೆ ಹೊಂದಿಕೊಳ್ಳುವುದು ತನ್ನ ಕರ್ತವ್ಯ ಎಂಬ ಅಪ್ಪಟ ಭಾರತೀಯ ಮನಸ್ಥಿತಿ ಅವಳದ್ದು ಎನಿಸುತ್ತದೆ. ತನಗಾಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸುವುದು ಅವಳಿಂದಾಗದು . ಎಲ್ಲದಕ್ಕೂ ' ಮರ್ವಾದೆ" ಎಂಬುದಿದೆಯಲ್ಲ !
ಧನ್ಯವಾದಗಳು .

ಚಿತ್ರಾ said...

ಜ್ಞಾನಾರ್ಪಣ ಮಾಡಿದವರೇ,
ಥ್ಯಾಂಕ್ಸ್, ಇಂಥ ಅದೆಷ್ಟು ಕುಟುಂಬಗಳಿವೆಯೋ ಲೆಕ್ಕ ಮಾಡಲೂ ಸಾಧ್ಯವಿಲ್ಲವೇನೋ!

ಚಿತ್ರಾ said...

ಶಿವೂ,
ಮೆಚ್ಚಿದ್ದಕ್ಕೆ ಥ್ಯಾಂಕ್ಸ್ .
ನೀವು ಹೇಳಿದಂತೆ ಗಂಡ -ಹೆಂಡತಿ ಸಂಬಂಧಕ್ಕಿರುವ ಬೆಲೆಯನ್ನು ನಾಗಪ್ಪ ತಿಳಿದುಕೊಳ್ಳಲಿಲ್ಲವಲ್ಲ ಎನ್ನುವುದೇ ಬೇಸರ !

ಚಿತ್ರಾ said...

ಗೌತಮ್ ,
ಥ್ಯಾಂಕ್ಸು :) :)

ಚಿತ್ರಾ said...

ಸುಬ್ರಮಣ್ಯ ,
ಎಲ್ಲ ಕಡೆ ಸಾಮಾನ್ಯವಾಗಿ ಕಾಣಸಿಗುವ ಪ್ರಸಂಗವಿದು . ವ್ಯಕ್ತಿಗಳು ಮಾತ್ರ ಬೇರೆ ಅಷ್ಟೇ . ಮುಖ್ಯಾಂಶ ಒಂದೇ ಆಗಿರುತ್ತದೆ ಅಲ್ಲವೇ?
ಮೆಚ್ಚಿದ್ದಕ್ಕೆ ಧನ್ಯವಾದಗಳು

ಜಲನಯನ said...

ಚಿತ್ರಾ ನಿಮ್ಮ ಕಥೆ ಥರಾನೇ ನಮ್ಮೂರಲ್ಲೂ ಕೇರಿ ಕೆಂಪಣ್ಣ ಅಂತಾ ಇದ್ದ...ಅವಂದೂ ಅವನೆಂಡ್ತೀದೂ ಇದೇ ಗೋಳು...ಊರಿನ ಹಿರೀಕರು ಹೇಳಿ ಬೈಯ್ದ್ರೆ ನನ್ಗಂಡ ನನ್ನೊಡ್ದ್ರೆ ಅವಂಗಕ್ಕೈತೆ ಒಡೀತಾನೆ..ನೀವ್ಯಾರ್ರೀ ನನ್ನ್ನೆಜಮಾನ್ರನ್ನ ಬಯ್ಯೋರು ಅನ್ನೋಳು...ಅದಕ್ಕೆ ಎರಡು ಮೂರು ಸಲ ಹೀಗಾಗಿ ಊರಿನವರು ಅವರ ತಂಟೇಗೆ ಹೋಗ್ಲಿಲ್ಲ ಕೊನೇಗೊಂದು ದಿನ ಸೀಮೇಎಣ್ಣೆ ಸುರ್ದು ಸುಟ್ಟೇ ಬಿಟ್ಟ ಹೆಂಡ್ತೀನಾ..... ಒಂದೂರಿನಲ್ಲಿ ಒಂದಾದ್ರೂ ಇಂಥಾ ನಿದರ್ಶನ ಇರುತ್ತೆ ಅನ್ಸುತ್ತೆ...

ದಿನಕರ ಮೊಗೇರ said...

ಚಿತ್ರ ಮೇಡಂ,
ಎಂದಿಗೂ ಭಾರತೀಯ ನಾರಿಯರು ಬದಲಾಗಲ್ಲ......... ಅವರು ಭಾರತದ ಹೆಮ್ಮೆ........ ಕೊನೆಗೆ ನಾಗಪ್ಪನ ವಿಷಯ ಕೇಳಿ ಬೇಜಾರಾತು... ಇಂಥವರು ಬದಲಾಗ್ತಾರೆ ಅನಿಸಿ ಕೊಳ್ಲೋದೂ ತಪ್ಪೇ ಆಲ್ವಾ......

ಸೀತಾರಾಮ. ಕೆ. / SITARAM.K said...

ಬದುಕಿನ ಮಹಲಿನಲ್ಲಿ ಪ್ರ್‍ಈತಿಯ ಹೊ೦ದಾಣಿಕೆ ವೈಪರೀತ್ಯ ಪ್ರಸ೦ಗಗಳಲ್ಲೂ ಅನಾಚಾನವಾಗಿ ಸಾಗುವದು ನಮ್ಮ ಭಾರತೀಯರ ಬದುಕುಗಳಲ್ಲೇನೋ ಬಹುಶಃ!. ಹೆಣ್ಣಿನ ಈ ತ್ಯಾಗ-ಪ್ರೀತಿಯಿ೦ದಲೇ ಬದುಕು ನಮ್ಮಲ್ಲಿ ಇನ್ನು ಜೀವ೦ತವಾಗಿದೆ ಮತ್ತು ಶೋಷಣೆಗಳು ಅನಿವಾರ್ಯ ಅಪ್ಯಾಯಮಾನವಾಗಿವೆ. ಅದರೇ ಇ೦ಥಹವರಿಗೆ ಪಾಠ ಕಲಿಸಬೇಕಾದದು ಸಮಾಜದ ಸ್ವಾಸ್ಥ್ಯಕ್ಕೆ ಅನಿವಾರ್ಯವೂ ಆಗಿದೆ.
ಸರಳ, ಸು೦ದರ, ನವಿರು, ನಿರ್ಲಿಪ್ತ ನಿರೂಪಣೆಯ ಚೆ೦ದದ ಲೇಖನ ಚಿ೦ತನೆಗೆಡೇ ಮಾಡಿತು.

ಮನಸು said...

tumba chennagide... lekhana istavaayitu mane manegaLalli neDeyo kathe...

ಸುಧೇಶ್ ಶೆಟ್ಟಿ said...

hmm... nandu late commentu :)

baraha ishta aayithu...aadare koneyalli helida saalu besara tharisithu... kuditha yeshtella anaahutha tharuththade obbara badukinalli antha. kudithadha inthaha vyakthigaLannu naanu kooda hattiradinda balle...inthaha thamasheya sangathigaLoo, besaradha sangathigaLoo eradoo kooda idhe...

mundina barahadha niriksheyalli :)