ಬೆಳಿಗ್ಗೆ ಸ್ಕೂಲಿಗೆ ಹೊರಡೋವಾಗ ಅಪೂರ್ವಾ ' ಅಜ್ಜಿ , ಇವತ್ತು ಸಂಜೆ ಕಥೆ ಮುಂದುವರಿಸಬೇಕು . ನೆನಪಿದೆ ತಾನೇ ? "
" ನೆನಪಿದೆ ಕಣೆ . ನೀನೀಗ ಶಾಂತಿಯಿಂದ ಹೋಗು "
"ಅಜ್ಜಿ ನಾವು ಬರೋವರೆಗೂ ಶುರು ಮಾಡಬೇಡ ಮತ್ತೆ" . ಗಂಡು ಮಕ್ಕಳಿಬ್ಬರೂ ಹೇಳಿದರು .
ಮಕ್ಕಳು ಹೋದಮೇಲೆ ಆಫೀಸಿಗೆ ರೆಡಿ ಆಗುತ್ತಿದ್ದ ಸ್ಮಿತಾ ಹೇಳಿದಳು. " ಅತ್ತೆ , ನೀವು ಇವತ್ತು ಬೇಕಾದ್ರೆ ಉಷಾ ಮನೆಗೆ ಹೋಗಿ ಸಂಜೆ. " ಇಲ್ಲ ಅಂದ್ರೆ ಈ ಮಕ್ಕಳು ನಿಮ್ಮ ಜೀವ ಹಿಂಡ್ತಾರೆ . ಕಥೆ ಕಥೆ ಅಂತ . ಹೇಳಿದ್ದು ಸುಮ್ಮನೆ ಕೇಳೋದಿಲ್ಲ ಬೇರೆ ತರಲೆಗಳು ! "
ಅಜ್ಜಿ ನಕ್ಕು ಬಿಟ್ಟರು . " ಇರಲಿ ಬಿಡೆ . ಏನೋ ಆಸಕ್ತಿಯಿಂದ ಕೇಳ್ತಾರಲ್ಲ ! ಇಲ್ಲ ಅಂದ್ರೆ , ನಮ್ಮ ಪುರಾಣಗಳು ಇವರಿಗೆ ಗೊತ್ತಗೊದಾದ್ರು ಹೇಗೆ ? ನಮ್ಮ ಕಾಲದ ಹಾಗೆ ಅಲ್ಲ ಈಗ. ಅವರಿಗೆ ನೂರಾ ಎಂಟು ಪ್ರಶ್ನೆ ಬರತ್ತೆ ತಲೇಲಿ . ಕೇಳ್ತಾರೆ . ಅವರಿಗೆ ಅರ್ಥ ಮಾಡ್ಸೋದು ನಮ್ಮ ಕರ್ತವ್ಯ. ಅಲ್ಲದೆ , ಕೆಲವು ಸಲ ನಾವೇ ಯೋಚನೆ ಮಾಡೋ ತರ ಪ್ರಶ್ನೆ ಕೇಳ್ತಾರೆ . ಒಳ್ಳೇದು ಬಿಡು ! "
ಹಾಗೆ ಹೇಳಿದರೂ ಅಜ್ಜಿ ಒಳಗೆ ಯೋಚನೆ ಮಾಡ್ತ ಇದ್ರೂ.
ಕಥೇಲಿ ಏನೇನು ಸಣ್ಣ ಪುಟ್ಟ ಬದಲಾವಣೆಗಳು ಬೇಕಾಗ ಬಹುದು , ಯಾವ ಭಾಗಗಳನ್ನ ಹೇಳದೆ ಇದ್ದರೆ ಒಳ್ಳೇದು ಎಂದು ಅವರ ತಲೇಲಿ ವಿಚಾರ ನಡೀತಾ ಇತ್ತು .
ಸಂಜೆ , ಶಾಲೆಯಿಂದ ಬಂದ ಮಕ್ಕಳು ಬಾಗಿಲಿಂದಲೇ " ಅಜ್ಜೀ , ಕಥೆ .... " ಕೂಗಿಕೊಂಡರು
"ಅಯ್ಯೋ , ಕೈ ಕಾಲು ತೊಳೆದು , ಬಟ್ಟೆ ಬದಲಾಯ್ಸಿ ಮೊದ್ಲು . ಹೊಟ್ಟೆಗೆ ಏನಾದ್ರೂ ಹಾಕ್ಕೊಂಡ್ ಬನ್ನಿ "
ಅಜ್ಜೀ... ನೀನು ಕುರ್ಚಿ ಹಾಕ್ಕೊಂಡು ಕೂತ್ಗೊಳೋ ಹೊತ್ತಿಗೆ ನಾವು ಬಂದುಬಿಡ್ತೀವಿ . ಓಡಿದಳು ಅಪೂರ್ವಾ .
ನಿಧಾನನೆ ಬನ್ನಿ ಪರವಾಗಿಲ್ಲ . ನಾನೆಲ್ಲೂ ಓಡೋಗಲ್ಲ !
ಕೆಲ ಸಮಯದ ನಂತರ ಕಥೆ ಮುಂದುವರಿಯಿತು .
ಕಿಷ್ಕಿಂಧೆಗೆ ತಲುಪಿದಾಗ ಅಲ್ಲಿಯ ರಾಜ ಸುಗ್ರೀವ ರಾಮ -ಲಕ್ಷ್ಮಣರನ್ನು ಪರಿಚಯಿಸಿಕೊಂಡು ಸ್ವಾಗತ ಮಾಡಿದ. ತನ್ನಿಂದ ಆಗೋ ಎಲ್ಲ ಸಹಾಯ ಮಾಡ್ತೀನಿ ಅಂದ . ಸೀತೆನಾ ಹುಡುಕೋದಕ್ಕೆ ತನ್ನ ಸೈನಿಕರನ್ನ ಕಳಿಸ್ತೀನಿ , ಅಲ್ಲಿವರೆಗೆ ದಯವಿಟ್ಟು ಕಿಷ್ಕಿಂಧೆಲೇ ಉಳ್ಕೊಳಿ ಅಂದ .ಅವರಿಗೆ ಇರೋ ವ್ಯವಸ್ಥೆ ಮಾಡಿ ಕೊಟ್ಟ .
ಆಮೇಲೆ , ರಾಮ ಸುಗ್ರೀವನಿಗೆ ಹೇಳ್ದ " ನೋಡು ನಂಗೆ ಜಟಾಯು ಅನ್ನೋ ಹಕ್ಕಿ ಹೇಳ್ತು , ಸೀತೆ ನ ರಾವಣ ಎತ್ಕೊಂಡು ಹೋಗಿದಾನೆ ಅಂತ . ಅವನು ಇರೋ ಲಂಕೆ ಎಲ್ಲಿದೆ ಅಂತ ಗೊತ್ತ ? "
ಅದಕ್ಕೆ ಸುಗ್ರೀವ , ಹಾಂ ಗೊತ್ತು . ಆದರೆ ಲಂಕೆ ಇರೋದು ಸಮುದ್ರದಲ್ಲಿ . ಸೀತೆನ ಅಲ್ಲೇ ಇಟ್ಟಿದಾನಾ ಅಂತ ನೋಡಬೇಕಲ್ಲ . ಅದಕ್ಕೆ ಲಂಕೆಗೆ ಮೊದಲು ಹೋಗೋದ್ ಹೇಗೆ ಅಂತ ಕೇಳಿದ .
ಇಬ್ರೂ ಆ ಬಗ್ಗೆ ಚರ್ಚೆ ಮಾಡ್ತಿರೋವಾಗ , ಸುಗ್ರೀವನ ಜೊತೆ ಇರೋ ಹನುಮಂತ ತಾನು ಬೇಕಾದ್ರೆ ಹೋಗಿ ನೋಡ್ಕೊಂಡು ಬರ್ತೀನಿ ಅಂದ .ಸರಿ ಹಾಗೆ ಮಾಡೋದು ಅಂತಾಯ್ತು . ಅವನು ವಾಪಸ್ ಬಾರೋ ವರೆಗೂ ರಾಮ -ಲಕ್ಷ್ಮಣ ಕಿಷ್ಕಿಂಧೆಲೆ ಇರೋದು ಅಂತ ಆಯ್ತು .
ಹನುಮಂತ ಲಂಕೆಗೆ ಹೋಗ್ತೀನಿ ಅಂತ ಏನೋ ಹೇಳಿದ . ಆದರೆ ಹೇಗೆ ಅಂತ ಅವನಿಗೆ ಪ್ರಶ್ನೆ ಆಗ್ತಾ ಇತ್ತು . ಸಮುದ್ರ ತೀರದಲ್ಲಿದ್ದ ಬೆಟ್ಟದ ಮೇಲೆ ಹತ್ತಿ ಹನುಮಂತ ಲಂಕೆ ಕಾಣಿಸತ್ತಾ ಅಂತ ನೋಡಿದ . ಉಹೂಂ .. ಅಷ್ಟು ದೂರಕ್ಕೂ ನೀರು ಬಿಟ್ರೆ ಏನು ಕಾಣಿಸ್ತಾ ಇರಲಿಲ್ಲ . ಈಗ ಎಲ್ಲಾರಿಗೂ ಯೋಚನೆ ಶುರುವಾಯ್ತು . ಎಷ್ಟು ನೋಡಿದರೂ ಬರೀ ಸಮುದ್ರಾ ನೇ ಕಾಣಿಸ್ತಿದೆ ಲಂಕೆ ಯಾವ ದಿಕ್ಕಿಗೆ ಇದೆ ಅಂತ ಕೂಡ ಗೊತ್ತಿಲ್ಲ . ಅಲ್ಲಿಗೆ ಹೋಗೋದು ಹೇಗೆ ಅಂತ ಎಲ್ಲಾರಿಗೂ ಪ್ರಶ್ನೆ !
ಬೆಟ್ಟ ಹತ್ತಿದ ಹನುಮಂತ ಸಮುದ್ರನ ನೋಡ್ತಾ ಯೋಚನೆ ಮಾಡ್ತಾ ಇದ್ದ . ಕೊನೆಗೆ ಒಂದು ನಿರ್ಧಾರಕ್ಕೆ ಬಂದು ಕಿಷ್ಕಿಂಧೆ ಗೆ ವಾಪಸ್ ಬಂದ .
ಸುಗ್ರೀವನೆದುರು ರಾಮನಿಗೆ ಹೇಳಿದ " ನಾನು ಲಂಕೆಗೆ ಹೋಗಿ ಬರ್ತೀನಿ " ಅಂದ .
ಅವನ ವಿಶ್ವಾಸ ನೋಡಿ ರಾಮ ನಿಗೆ ತುಂಬಾ ಸಂತೋಷ ಆಯ್ತು . ಸರಿ ಹೋಗಬಾ , ಸೀತೆ ಹೇಗಿದಾಳೆ , ಅವಳಿಗೇನೂ ತೊಂದರೆ ಮಾಡ್ತಿದಾನ ಆ ರಾವಣ ಅಂತ ನೋಡ್ಕೊಂಡು ಬಂದು ಹೇಳು. ನಾವು ಕಾಯ್ತಿರ್ತೀವಿ ಅಂದ ರಾಮ .
ಅವನ ವಿಶ್ವಾಸ ನೋಡಿ ರಾಮ ನಿಗೆ ತುಂಬಾ ಸಂತೋಷ ಆಯ್ತು . ಸರಿ ಹೋಗಬಾ , ಸೀತೆ ಹೇಗಿದಾಳೆ , ಅವಳಿಗೇನೂ ತೊಂದರೆ ಮಾಡ್ತಿದಾನ ಆ ರಾವಣ ಅಂತ ನೋಡ್ಕೊಂಡು ಬಂದು ಹೇಳು. ನಾವು ಕಾಯ್ತಿರ್ತೀವಿ ಅಂದ ರಾಮ .
"ನಾನು ನಾಳೆ ನೇ ಅಲ್ಲಿಗೆ ಹೋಗ್ತೀನಿ ಅಂದ ಹನುಮಂತ ಮತ್ತೊಂದು ಪ್ರಶ್ನೆ ಕೇಳಿದ . " ಆದರೆ ಅಲ್ಲಿ ಸೀತಾ ದೇವಿನ ನಾನು ಹೇಗೋ ಗುರುತಿಸ್ತೀನಿ . ಆದರೆ ಅವಳಿಗೆ ನಾನು ಯಾರು ಅಂತ ಗೊತ್ತೇ ಇಲ್ವಲ್ಲ " ಅಂದ .
" ಹೌದಲ್ವಾ? , ಅವಳತ್ರ ಒಂದು ಮೊಬೈಲ್ ಆದ್ರೂ ಇದಿದ್ರೆ , ರಾಮ ಹನುಮಂತಂದು ಫೋಟೋ ಕಳ್ಸಿ ಮೆಸೇಜ್ ಮಾಡಬಹುದಿತು ! ಈಗ ಕಷ್ಟಾ ನೇ . ಅಂದಂಗೆ ರಾಮನತ್ರ ಅವಳ ಫೋಟೋ ಇರ್ಲಿಲ್ವಾ ಅಜ್ಜಿ ? ಹನುಮಂತಂಗೆ ತೋರ್ಸೊಕೆ? "
ಆದಿತ್ಯ ಮತ್ತೆ ವರುಣ್ ಇಬ್ಬರೂ ಜೋರಾಗಿ ನಗೊಕ್ ಶುರು ಮಾಡಿದ್ರು .
" ಹೇಯ್, ಇವಳ ಕಥೆ ಕೇಳೋ ... ನಗುತ್ತಲೇ ತಂಗಿಯ ಕಡೆ ತಿರುಗಿದ ಆದಿತ್ಯ
" ಗೂಬೆ, ಮೊಬೈಲ್ ಇದಿದ್ರೆ , ರಾಮಂಗೆ ಕಷ್ಟ ಯಾಕಾಗ್ತಿತ್ತು ಹುಡ್ಕೋಕೆ? ಲೋಕೇಶನ್ ಟ್ರ್ಯಾಕ್ ಮಾಡ್ತಿರ್ಲಿಲ್ವೇನೆ? ಅಷ್ಟಲ್ದೆ , ದಿನಾ ವಾಟ್ಸ್ ಅಪ್ ಮಾಡ್ಕೋತಾ ಇದ್ರೂ ಇಬ್ರುನು ಬೇಕಾದ್ರೆ . ನೀನೊಳ್ಳೆ !! "
" ಮುಖ ಚಿಕ್ಕದಾಗಿಸಿಕೊಂಡ ಅಪೂರ್ವ " ನೋಡಜ್ಜಿ ಅಣ್ಣನ್ನ ... " ನೀನೇ ಗೂಬೆ ಕಣೋ , ಅಲ್ಲಾ , ಸೀತೆ ಮೊಬೈಲ್ ದಾರೀಲಿ ಎಲ್ಲಾದ್ರೂ ಬಿದ್ದು ಹೋಗಿರಬಹುದು . ಸಮುದ್ರ ದಾಟೋವಾಗ ಬಿದ್ದಿರಬಹುದು , ಅಥ್ವಾ ಸಿಗ್ನಲ್ ಸಿಗ್ತಾ ಇರ್ಲಿಲ್ವೇನೋ . ಅಷ್ಟಕ್ಕೂ ಲಂಕೆ ಅಂದ್ರೆ ಬೇರೆ ದೇಶ ಆಗಿತ್ತಲ್ವ? ಮೊಬೈಲ್ ರೋಮಿಂಗ್ ಇರ್ಲಿಲ್ಲ ಅನ್ಸತ್ತೆ ಅವಳದ್ದು . ಬ್ಯಾಟರಿ ಮುಗ್ದಿರಬಹುದು . ಸಲ್ಪ ಚಾರ್ಜ್ ಮಾಡ್ಕೋಬೇಕು ಅಂತ ಕೇಳೋಕಾಗತ್ತ ? ವೈ ಫೈ ಪಾಸ್ ವರ್ಡ್ ಕೇಳಿಲ್ಲ ಅವ್ಳು ರಾವಣ ನ ಹತ್ರ .. ಎಷ್ಟೆಲ್ಲಾ ರೀಸನ್ ಇದೆ ಅಲ್ವೇನೋ ? " ಪಟ ಪಟನೆ ಅಪೂರ್ವ ಹೇಳುತ್ತಿದ್ದರೆ ಅಣ್ಣಂದಿರಿಬ್ಬರೂ ಮುಖ ನೋಡಿಕೊಳ್ಳುತ್ತಾ ಪೆಚ್ಚಾದರು . ಅಜ್ಜಿ ಕಣ್ಣರಳಿಸಿ ನೋಡುತ್ತಿದ್ದರು . ಇಷ್ಟು ಚಿಕ್ಕ ವಯಸ್ಸಿಗೆ ಏನೆಲ್ಲಾ ಗೊತ್ತಪ್ಪ ಇವಳಿಗೆ ಅಂತ !
ಇದನ್ನೆಲ್ಲಾ ಕೇಳುತ್ತಿದ್ದ ಸ್ಮಿತಾ ಉಕ್ಕುತ್ತಿದ್ದ ನಗುವನ್ನು ತಡೆದುಕೊಂಡು " ಮೊಬೈಲ್ ಇತ್ತೋ ಇಲ್ವೋ ಅಂತ ಚರ್ಚೆ ಮಾಡ್ತಾ ಇರ್ತೀರೋ ಅಥವ ಅಜ್ಜಿ ಕಥೆ ಕೇಳ್ತೀರೋ " ಎಂದು ಗದರಿದಳು.
"ಸಾರಿ ಅಜ್ಜೀ, ಹೇಳು ಹೇಳು " ಮೂವರೂ ಒಟ್ಟಿಗೆ ಒದರಿದರು.
ಸರಿ , ಬೆಳಿಗ್ಗೆ ಹನುಮಂತ ಲಂಕೆಗೆ ಹೊರಡೋಕೆ ರೆಡಿ ಆದ. ಸುಗ್ರೀವ , ರಾಮ-ಲಕ್ಷ್ಮಣರಿಗೆ ನಮಸ್ಕಾರ ಮಾಡಿದ.
ರಾಮ ಅವನನ್ನು ಅಪ್ಪಿಕೊಂಡು " ಹನುಮಂತ , ಸುರಕ್ಷಿತವಾಗಿ ಹೋಗಿ ಬಾ. ಸೀತೆಯ ವಿಷಯ ಕೇಳೋಕೆ ನಾವು ಕಾಯ್ತಾ ಇರ್ತೀವಿ " ಅಂದ .
ಹಾಗೇ ಹನುಮಂತನ ಕೈಗೆ ತನ್ನ ಉಂಗುರ ಕೊಟ್ಟು , ಇದನ್ನು ಸೀತೆ ಗೆ ತೋರಿಸು . ಅವಳಿಗೆ ನೀನು ನನ್ನ ಕಡೆಯವನು ಅಂತ ಗೊತ್ತಾಗತ್ತೆ " ಎಂದ .
ರಾಮ ಅವನನ್ನು ಅಪ್ಪಿಕೊಂಡು " ಹನುಮಂತ , ಸುರಕ್ಷಿತವಾಗಿ ಹೋಗಿ ಬಾ. ಸೀತೆಯ ವಿಷಯ ಕೇಳೋಕೆ ನಾವು ಕಾಯ್ತಾ ಇರ್ತೀವಿ " ಅಂದ .
ಹಾಗೇ ಹನುಮಂತನ ಕೈಗೆ ತನ್ನ ಉಂಗುರ ಕೊಟ್ಟು , ಇದನ್ನು ಸೀತೆ ಗೆ ತೋರಿಸು . ಅವಳಿಗೆ ನೀನು ನನ್ನ ಕಡೆಯವನು ಅಂತ ಗೊತ್ತಾಗತ್ತೆ " ಎಂದ .
ಆ ಉಂಗುರನ ಭದ್ರವಾಗಿ ಇಟ್ಟುಕೊಂಡು ಹನುಮಂತ ಹೊರಟ . ಅವನ್ನ ಕಳಿಸೋಕೆ ಅಂತ ಎಲ್ಲರೂ ಸಮುದ್ರದ ವರೆಗೂ ಹೋದ್ರು . ಹನುಮಂತ ಸಮುದ್ರದ ಪಕ್ಕದ ಚಿಕ್ಕ ಬೆಟ್ಟ ಹತ್ತಿ ನಿಂತ . ಸಮುದ್ರವನ್ನು ಸಲ್ಪ ಹೊತ್ತು ನೋಡಿ, ರಾಮನಿಗೆ ಮತ್ತೊಮ್ಮೆ ನಮಸ್ಕಾರ ಮಾಡಿದ . ಅವನು ಲಂಕೆಗೆ ಹೊರಟಿದ್ದನ್ನು ನೋಡಲೆಂದು ಕಿಷ್ಕಿಂಧೆಯ ಕಪಿಗಳೆಲ್ಲಾ ಅಲ್ಲ್ಲಿ ಬಂದು ಸೇರಿದ್ದರು . ಅವರೆಲ್ಲಾ ಉತ್ಸಾಹದಿಂದ ಜೈಕಾರ ಹಾಕುತ್ತಿದ್ದಂತೆ ಹನುಮಂತ ಬೆಟ್ಟದಿಂದ ಜಿಗಿದೆ ಬಿಟ್ಟ .
"ಅಜ್ಜಿ , ಅವನು ಕೆಳಗೆ ಬಿದ್ದು ಕೈ ಕಾಲು ಮುರ್ಕೊಂಡಿಲ್ಲ ತಾನೇ? "
"ಅಜ್ಜೀ, ಅದು ಹ್ಯಾಗೆ ಲಂಕೆ ತಲುಪ್ತಾನೆ? ಸಮುದ್ರ ಅಂದ್ರೆ ತುಂಬಾ ದೊಡ್ದದಲ್ವ? ಆ ತರ ಜಂಪ್ ಮಾಡಿ ದಾಟಕಾಗತ್ತ ? " ಮಕ್ಕಳ ಪ್ರಶ್ನೆಗಳು .
"ಅವನಿಗೆ ಅಂಥಾ ಶಕ್ತಿ ಇತ್ತು ಕಣ್ರೋ ಎಷ್ಟಿ ದೂರ ಬೇಕಾದ್ರೂ ಹಾರೋಕಾಗ್ತಿತ್ತು !"
"ನಿಜಾ ಅಜ್ಜಿ . ನಾನು ಟಿ ವಿ ಲಿ " ಜೈ ಹನುಮಾನ್ " ಲ್ಲಿ ನೋಡಿದೀನಿ" . ಅಪೂರ್ವ ಹೇಳಿದಳು
"ಅಜ್ಜೀ, ಈಗ ಹನುಮಂತ ಇದಿದ್ದರೆ , ಒಲಿಂಪಿಕ್ಸ್ ಗೆ ಲಾಂಗ್ ಜಂಪ್ , ಹೈ ಜಂಪ್ ಎರಡಕ್ಕೂ ಅವನ್ನೇ ಕಳಿಸಬಹುದಿತ್ತು " ಕಿಸಕ್ಕನೆ ನಕ್ಕರು ಗಂಡು ಹುಡುಗರಿಬ್ಬರೂ .
ಅತ್ತ ಲಕ್ಷ್ಯ ಕೊಡದೆ ಅಜ್ಜಿ ಮುಂದುವರೆಸಿದರು .
"ಸುಮಾರು ದೂರ , ಅದೆಷ್ಟೋ ಹೊತ್ತು ಹಾರಿದ ಮೇಲೆ ಅವನಿಗೆ ಲಂಕೆ ಕಾಣಿಸಿತು . ಸ್ವಲ್ಪ ಹೊತ್ತಿನಲ್ಲಿ ಲಂಕೆಯ ಬಾಗಿಲಿನ ಎದುರು ಹನುಮಂತ ನಿಂತಿದ್ದ .
ಲಂಕೆಯ ಸುತ್ತಲೂ ಭದ್ರವಾದ ಕೋಟೆ ಇತ್ತು. ಅದರ ಬಾಗಿಲಲ್ಲಿ " ಲಂಕಿಣಿ " ಕಾವಲಿಗೆ ನಿಂತಿದ್ದಳು . ಎದುರು ಬಂದು ನಿಂತ ಹನುಮಂತನನ್ನು ಒಳಗೆ ಹೋಗದಂತೆ ತಡೆದಳು . ಆಮೇಲೆ ಅವರಿಬ್ಬರ ನಡುವೆ ಒಂದು ಚಿಕ್ಕ ಯುದ್ಧ ನೇ ಆಗೋಯ್ತು . ಅವಳನ್ನು ಸೋಲಿಸಿದ ಹನುಮಂತ ಕೋಟೆಯ ಒಳ ಹೊಕ್ಕ ."
ಹೆಚ್ಚು ಬ್ರೇಕ್ ಕೊಡದೆ ಅಜ್ಜಿ ಕಥೆ ಹೇಳುತ್ತಿದ್ದರು .
"ಅಜ್ಜೀ, ಬಾಗಿಲು ಕಾಯೋಕೆ ಲಂಕಿಣಿನ ಯಾಕೆ ಇಟ್ಟಿದ್ರು ? ಅವಳ ಜೊತೆ ಬೇರೆ ಯಾರೂ ಇರಲಿಲ್ವ? ಹನುಮಂತ ಹಾಗೆ ಹೆಂಗಸಿನ ಜೊತೆ ಯುದ್ಧ ಮಾಡಬಹುದಿತ್ತಾ? "
"ಲಂಕಿಣಿ ಸಾಮಾನ್ಯದವಳಾಗಿರ್ಲಿಲ್ಲ ಕಣ್ರೋ , ತುಂಬಾ ಶಕ್ತಿ ಇತ್ತು ಅವಳಿಗೆ . ಅವಳನ್ನ ಸೋಲಿಸೋಕೆ ಹನುಮಂತಂಗೆ ಸುಮಾರು ಕಷ್ಟ ಆಯ್ತು . ಹೇಗೋ ಮಾಡಿ ಅವನು ಒಳಗೆ ಹೋದ . "
ಹಿಂದಿನ ಕಂತುಗಳು
3 comments:
ತುಂಬ ಸ್ವಾರಸ್ಯಕರವಾಗಿದೆ ಅಜ್ಜಿಯ ಕಥೆ. ಆದರೆ, ನೀವು ಎರಡು ಭಾಗಗಳ ನಡುವೆ ಇಷ್ಟು ಅಂತರವಿಟ್ಟರೆ, ನನಗೆ ಚಡಪಡಿಕೆಯಾಗುತ್ತದೆ. (ಅಂದ ಮೇಲೆ ಕಥೆ ಕೇಳಲು ಕುಳಿತ ಮಕ್ಕಳಿಗೆ ಎಷ್ಟು ಆಗುತ್ತಿರಬೇಡ!)
ಕಾಕಾ ,
ನಾನು ಎಷ್ಟೋ ದಿನಗಳ ಮೇಲೆ ಬ್ಲಾಗ್ ಬರೆದರೂ ಅದನ್ನು ತಕ್ಷಣ ಓದಿ ಅಭಿಪ್ರಾಯ ಬರೆದು ಪ್ರೋತ್ಸಾಹಿಸುವ ನಿಮಗೆ ನಾನು ಸದಾ ಆಭಾರಿ!
ಕೆಲವೊಮ್ಮೆ ಕೆಲಸದ ಒತ್ತಡದಿಂದಾಗಿ , ಆಲೋಚನೆಗಳು ಸರಿಯಾಗಿ ಹರಿಯದೆ ಸಾದಾ ಬರೆಹವೂ ನಿಧಾನವಾಗುತ್ತದೆ. ಇನ್ನು ಇದು ರಾಮಾಯಣ , ಅಂಥಾ ಮಹಾ ಕಾವ್ಯವನ್ನು ಸಂಕ್ಷಿಪ್ತ ರೂಪದಲ್ಲಿ , ತಿಳಿ ಹಾಸ್ಯ ಸೇರಿಸಿ ಬರೆಯುವುದು , ನನ್ನಂಥಾ " ಟೈಂ ಪಾಸ್" ಬರಹಗಾರ್ತಿಗೆ ಸಲ್ಪ ಕಷ್ಟವೇ ಆಗುತ್ತದೆ ! ಶುರು ಏನೋ ಮಾಡಿ ಬಿಟ್ಟೆ , ಈಗ ಮುಗಿಸಲು ಕಷ್ಟ ಪಡುತ್ತಿದ್ದೇನೆ !
ನಿಮ್ಮ ಆಶೀರ್ವಾದ ಇರಲಿ ಕಾಕಾ !
Post a Comment