February 7, 2018

ಸೀತಾಪಹರಣ - ೪




ಬೆಳಿಗ್ಗೆ ಸ್ಕೂಲಿಗೆ  ಹೊರಡೋವಾಗ  ಅಪೂರ್ವಾ ' ಅಜ್ಜಿ , ಇವತ್ತು ಸಂಜೆ ಕಥೆ ಮುಂದುವರಿಸಬೇಕು . ನೆನಪಿದೆ ತಾನೇ ? " 
" ನೆನಪಿದೆ ಕಣೆ . ನೀನೀಗ ಶಾಂತಿಯಿಂದ ಹೋಗು  " 

"ಅಜ್ಜಿ ನಾವು ಬರೋವರೆಗೂ  ಶುರು ಮಾಡಬೇಡ  ಮತ್ತೆ" . ಗಂಡು ಮಕ್ಕಳಿಬ್ಬರೂ  ಹೇಳಿದರು . 

ಮಕ್ಕಳು ಹೋದಮೇಲೆ  ಆಫೀಸಿಗೆ ರೆಡಿ ಆಗುತ್ತಿದ್ದ  ಸ್ಮಿತಾ  ಹೇಳಿದಳು. " ಅತ್ತೆ , ನೀವು ಇವತ್ತು ಬೇಕಾದ್ರೆ  ಉಷಾ ಮನೆಗೆ ಹೋಗಿ ಸಂಜೆ. " ಇಲ್ಲ ಅಂದ್ರೆ ಈ ಮಕ್ಕಳು ನಿಮ್ಮ ಜೀವ ಹಿಂಡ್ತಾರೆ . ಕಥೆ ಕಥೆ ಅಂತ .  ಹೇಳಿದ್ದು ಸುಮ್ಮನೆ ಕೇಳೋದಿಲ್ಲ ಬೇರೆ ತರಲೆಗಳು  ! " 

ಅಜ್ಜಿ ನಕ್ಕು ಬಿಟ್ಟರು . " ಇರಲಿ ಬಿಡೆ . ಏನೋ ಆಸಕ್ತಿಯಿಂದ ಕೇಳ್ತಾರಲ್ಲ ! ಇಲ್ಲ ಅಂದ್ರೆ , ನಮ್ಮ ಪುರಾಣಗಳು  ಇವರಿಗೆ ಗೊತ್ತಗೊದಾದ್ರು ಹೇಗೆ ?  ನಮ್ಮ ಕಾಲದ ಹಾಗೆ ಅಲ್ಲ ಈಗ. ಅವರಿಗೆ  ನೂರಾ ಎಂಟು  ಪ್ರಶ್ನೆ  ಬರತ್ತೆ ತಲೇಲಿ . ಕೇಳ್ತಾರೆ . ಅವರಿಗೆ ಅರ್ಥ ಮಾಡ್ಸೋದು ನಮ್ಮ ಕರ್ತವ್ಯ.  ಅಲ್ಲದೆ , ಕೆಲವು ಸಲ ನಾವೇ  ಯೋಚನೆ ಮಾಡೋ ತರ ಪ್ರಶ್ನೆ ಕೇಳ್ತಾರೆ . ಒಳ್ಳೇದು ಬಿಡು !  "
 ಹಾಗೆ ಹೇಳಿದರೂ ಅಜ್ಜಿ ಒಳಗೆ ಯೋಚನೆ ಮಾಡ್ತ ಇದ್ರೂ. 
ಕಥೇಲಿ ಏನೇನು ಸಣ್ಣ ಪುಟ್ಟ ಬದಲಾವಣೆಗಳು ಬೇಕಾಗ ಬಹುದು , ಯಾವ   ಭಾಗಗಳನ್ನ  ಹೇಳದೆ ಇದ್ದರೆ ಒಳ್ಳೇದು  ಎಂದು ಅವರ ತಲೇಲಿ  ವಿಚಾರ ನಡೀತಾ ಇತ್ತು . 

ಸಂಜೆ , ಶಾಲೆಯಿಂದ ಬಂದ ಮಕ್ಕಳು  ಬಾಗಿಲಿಂದಲೇ  " ಅಜ್ಜೀ , ಕಥೆ .... "  ಕೂಗಿಕೊಂಡರು 
"ಅಯ್ಯೋ , ಕೈ ಕಾಲು ತೊಳೆದು , ಬಟ್ಟೆ ಬದಲಾಯ್ಸಿ ಮೊದ್ಲು .  ಹೊಟ್ಟೆಗೆ ಏನಾದ್ರೂ ಹಾಕ್ಕೊಂಡ್ ಬನ್ನಿ  " 
ಅಜ್ಜೀ... ನೀನು ಕುರ್ಚಿ ಹಾಕ್ಕೊಂಡು ಕೂತ್ಗೊಳೋ ಹೊತ್ತಿಗೆ ನಾವು ಬಂದುಬಿಡ್ತೀವಿ . ಓಡಿದಳು ಅಪೂರ್ವಾ . 

ನಿಧಾನನೆ ಬನ್ನಿ ಪರವಾಗಿಲ್ಲ . ನಾನೆಲ್ಲೂ ಓಡೋಗಲ್ಲ ! 
ಕೆಲ ಸಮಯದ ನಂತರ ಕಥೆ ಮುಂದುವರಿಯಿತು . 

ಕಿಷ್ಕಿಂಧೆಗೆ  ತಲುಪಿದಾಗ ಅಲ್ಲಿಯ ರಾಜ ಸುಗ್ರೀವ  ರಾಮ -ಲಕ್ಷ್ಮಣರನ್ನು ಪರಿಚಯಿಸಿಕೊಂಡು  ಸ್ವಾಗತ ಮಾಡಿದ. ತನ್ನಿಂದ ಆಗೋ  ಎಲ್ಲ ಸಹಾಯ ಮಾಡ್ತೀನಿ    ಅಂದ .  ಸೀತೆನಾ ಹುಡುಕೋದಕ್ಕೆ  ತನ್ನ ಸೈನಿಕರನ್ನ ಕಳಿಸ್ತೀನಿ , ಅಲ್ಲಿವರೆಗೆ ದಯವಿಟ್ಟು ಕಿಷ್ಕಿಂಧೆಲೇ  ಉಳ್ಕೊಳಿ ಅಂದ .ಅವರಿಗೆ ಇರೋ ವ್ಯವಸ್ಥೆ  ಮಾಡಿ ಕೊಟ್ಟ .

ಆಮೇಲೆ , ರಾಮ  ಸುಗ್ರೀವನಿಗೆ ಹೇಳ್ದ " ನೋಡು ನಂಗೆ ಜಟಾಯು ಅನ್ನೋ ಹಕ್ಕಿ ಹೇಳ್ತು , ಸೀತೆ ನ ರಾವಣ ಎತ್ಕೊಂಡು ಹೋಗಿದಾನೆ ಅಂತ . ಅವನು ಇರೋ ಲಂಕೆ  ಎಲ್ಲಿದೆ ಅಂತ ಗೊತ್ತ ? "

ಅದಕ್ಕೆ ಸುಗ್ರೀವ , ಹಾಂ ಗೊತ್ತು . ಆದರೆ  ಲಂಕೆ  ಇರೋದು ಸಮುದ್ರದಲ್ಲಿ . ಸೀತೆನ  ಅಲ್ಲೇ ಇಟ್ಟಿದಾನಾ ಅಂತ ನೋಡಬೇಕಲ್ಲ . ಅದಕ್ಕೆ ಲಂಕೆಗೆ  ಮೊದಲು ಹೋಗೋದ್ ಹೇಗೆ  ಅಂತ ಕೇಳಿದ .

ಇಬ್ರೂ ಆ ಬಗ್ಗೆ ಚರ್ಚೆ ಮಾಡ್ತಿರೋವಾಗ , ಸುಗ್ರೀವನ  ಜೊತೆ ಇರೋ ಹನುಮಂತ  ತಾನು ಬೇಕಾದ್ರೆ ಹೋಗಿ ನೋಡ್ಕೊಂಡು ಬರ್ತೀನಿ ಅಂದ .ಸರಿ ಹಾಗೆ ಮಾಡೋದು ಅಂತಾಯ್ತು  . ಅವನು ವಾಪಸ್ ಬಾರೋ ವರೆಗೂ  ರಾಮ -ಲಕ್ಷ್ಮಣ  ಕಿಷ್ಕಿಂಧೆಲೆ ಇರೋದು ಅಂತ ಆಯ್ತು . 

ಹನುಮಂತ  ಲಂಕೆಗೆ ಹೋಗ್ತೀನಿ ಅಂತ ಏನೋ ಹೇಳಿದ . ಆದರೆ ಹೇಗೆ ಅಂತ  ಅವನಿಗೆ ಪ್ರಶ್ನೆ ಆಗ್ತಾ ಇತ್ತು .   ಸಮುದ್ರ ತೀರದಲ್ಲಿದ್ದ ಬೆಟ್ಟದ ಮೇಲೆ ಹತ್ತಿ ಹನುಮಂತ  ಲಂಕೆ ಕಾಣಿಸತ್ತಾ ಅಂತ ನೋಡಿದ . ಉಹೂಂ .. ಅಷ್ಟು ದೂರಕ್ಕೂ  ನೀರು ಬಿಟ್ರೆ ಏನು ಕಾಣಿಸ್ತಾ ಇರಲಿಲ್ಲ . ಈಗ ಎಲ್ಲಾರಿಗೂ ಯೋಚನೆ ಶುರುವಾಯ್ತು .  ಎಷ್ಟು ನೋಡಿದರೂ ಬರೀ  ಸಮುದ್ರಾ ನೇ ಕಾಣಿಸ್ತಿದೆ  ಲಂಕೆ ಯಾವ ದಿಕ್ಕಿಗೆ ಇದೆ ಅಂತ ಕೂಡ ಗೊತ್ತಿಲ್ಲ . ಅಲ್ಲಿಗೆ ಹೋಗೋದು ಹೇಗೆ ಅಂತ ಎಲ್ಲಾರಿಗೂ ಪ್ರಶ್ನೆ ! 

 ಬೆಟ್ಟ ಹತ್ತಿದ   ಹನುಮಂತ ಸಮುದ್ರನ ನೋಡ್ತಾ ಯೋಚನೆ ಮಾಡ್ತಾ  ಇದ್ದ . ಕೊನೆಗೆ  ಒಂದು ನಿರ್ಧಾರಕ್ಕೆ ಬಂದು  ಕಿಷ್ಕಿಂಧೆ ಗೆ ವಾಪಸ್ ಬಂದ . 
ಸುಗ್ರೀವನೆದುರು  ರಾಮನಿಗೆ ಹೇಳಿದ "  ನಾನು ಲಂಕೆಗೆ  ಹೋಗಿ ಬರ್ತೀನಿ "  ಅಂದ .

 ಅವನ ವಿಶ್ವಾಸ ನೋಡಿ ರಾಮ ನಿಗೆ ತುಂಬಾ ಸಂತೋಷ ಆಯ್ತು .  ಸರಿ  ಹೋಗಬಾ , ಸೀತೆ ಹೇಗಿದಾಳೆ , ಅವಳಿಗೇನೂ ತೊಂದರೆ  ಮಾಡ್ತಿದಾನ ಆ ರಾವಣ ಅಂತ ನೋಡ್ಕೊಂಡು ಬಂದು ಹೇಳು. ನಾವು ಕಾಯ್ತಿರ್ತೀವಿ ಅಂದ ರಾಮ .

"ನಾನು ನಾಳೆ ನೇ ಅಲ್ಲಿಗೆ ಹೋಗ್ತೀನಿ ಅಂದ ಹನುಮಂತ  ಮತ್ತೊಂದು ಪ್ರಶ್ನೆ ಕೇಳಿದ . " ಆದರೆ ಅಲ್ಲಿ  ಸೀತಾ ದೇವಿನ ನಾನು ಹೇಗೋ  ಗುರುತಿಸ್ತೀನಿ . ಆದರೆ  ಅವಳಿಗೆ  ನಾನು ಯಾರು ಅಂತ ಗೊತ್ತೇ ಇಲ್ವಲ್ಲ "  ಅಂದ . 

" ಹೌದಲ್ವಾ? , ಅವಳತ್ರ ಒಂದು ಮೊಬೈಲ್ ಆದ್ರೂ ಇದಿದ್ರೆ , ರಾಮ  ಹನುಮಂತಂದು ಫೋಟೋ ಕಳ್ಸಿ  ಮೆಸೇಜ್ ಮಾಡಬಹುದಿತು !  ಈಗ ಕಷ್ಟಾ ನೇ . ಅಂದಂಗೆ ರಾಮನತ್ರ  ಅವಳ ಫೋಟೋ ಇರ್ಲಿಲ್ವಾ ಅಜ್ಜಿ ? ಹನುಮಂತಂಗೆ  ತೋರ್ಸೊಕೆ?  " 

ಆದಿತ್ಯ ಮತ್ತೆ ವರುಣ್ ಇಬ್ಬರೂ ಜೋರಾಗಿ ನಗೊಕ್ ಶುರು ಮಾಡಿದ್ರು . 
" ಹೇಯ್, ಇವಳ ಕಥೆ ಕೇಳೋ ...  ನಗುತ್ತಲೇ  ತಂಗಿಯ ಕಡೆ ತಿರುಗಿದ ಆದಿತ್ಯ 
" ಗೂಬೆ,  ಮೊಬೈಲ್  ಇದಿದ್ರೆ , ರಾಮಂಗೆ ಕಷ್ಟ ಯಾಕಾಗ್ತಿತ್ತು ಹುಡ್ಕೋಕೆ?  ಲೋಕೇಶನ್ ಟ್ರ್ಯಾಕ್ ಮಾಡ್ತಿರ್ಲಿಲ್ವೇನೆ? ಅಷ್ಟಲ್ದೆ , ದಿನಾ ವಾಟ್ಸ್ ಅಪ್ ಮಾಡ್ಕೋತಾ ಇದ್ರೂ ಇಬ್ರುನು  ಬೇಕಾದ್ರೆ . ನೀನೊಳ್ಳೆ !!  "  

" ಮುಖ ಚಿಕ್ಕದಾಗಿಸಿಕೊಂಡ ಅಪೂರ್ವ  " ನೋಡಜ್ಜಿ ಅಣ್ಣನ್ನ ... "  ನೀನೇ ಗೂಬೆ ಕಣೋ ,  ಅಲ್ಲಾ , ಸೀತೆ ಮೊಬೈಲ್ ದಾರೀಲಿ ಎಲ್ಲಾದ್ರೂ ಬಿದ್ದು ಹೋಗಿರಬಹುದು . ಸಮುದ್ರ ದಾಟೋವಾಗ ಬಿದ್ದಿರಬಹುದು , ಅಥ್ವಾ ಸಿಗ್ನಲ್ ಸಿಗ್ತಾ ಇರ್ಲಿಲ್ವೇನೋ . ಅಷ್ಟಕ್ಕೂ ಲಂಕೆ ಅಂದ್ರೆ  ಬೇರೆ ದೇಶ ಆಗಿತ್ತಲ್ವ?  ಮೊಬೈಲ್ ರೋಮಿಂಗ್ ಇರ್ಲಿಲ್ಲ  ಅನ್ಸತ್ತೆ ಅವಳದ್ದು .  ಬ್ಯಾಟರಿ ಮುಗ್ದಿರಬಹುದು . ಸಲ್ಪ ಚಾರ್ಜ್ ಮಾಡ್ಕೋಬೇಕು ಅಂತ ಕೇಳೋಕಾಗತ್ತ ?  ವೈ ಫೈ ಪಾಸ್ ವರ್ಡ್ ಕೇಳಿಲ್ಲ ಅವ್ಳು ರಾವಣ ನ ಹತ್ರ ..  ಎಷ್ಟೆಲ್ಲಾ ರೀಸನ್ ಇದೆ ಅಲ್ವೇನೋ ?  " ಪಟ ಪಟನೆ  ಅಪೂರ್ವ ಹೇಳುತ್ತಿದ್ದರೆ ಅಣ್ಣಂದಿರಿಬ್ಬರೂ  ಮುಖ ನೋಡಿಕೊಳ್ಳುತ್ತಾ  ಪೆಚ್ಚಾದರು .  ಅಜ್ಜಿ  ಕಣ್ಣರಳಿಸಿ  ನೋಡುತ್ತಿದ್ದರು . ಇಷ್ಟು ಚಿಕ್ಕ ವಯಸ್ಸಿಗೆ ಏನೆಲ್ಲಾ ಗೊತ್ತಪ್ಪ  ಇವಳಿಗೆ ಅಂತ !

ಇದನ್ನೆಲ್ಲಾ ಕೇಳುತ್ತಿದ್ದ  ಸ್ಮಿತಾ  ಉಕ್ಕುತ್ತಿದ್ದ ನಗುವನ್ನು ತಡೆದುಕೊಂಡು  " ಮೊಬೈಲ್  ಇತ್ತೋ ಇಲ್ವೋ ಅಂತ ಚರ್ಚೆ ಮಾಡ್ತಾ ಇರ್ತೀರೋ ಅಥವ ಅಜ್ಜಿ ಕಥೆ  ಕೇಳ್ತೀರೋ " ಎಂದು  ಗದರಿದಳು. 

"ಸಾರಿ ಅಜ್ಜೀ,  ಹೇಳು ಹೇಳು "  ಮೂವರೂ ಒಟ್ಟಿಗೆ ಒದರಿದರು. 

ಸರಿ ,  ಬೆಳಿಗ್ಗೆ ಹನುಮಂತ  ಲಂಕೆಗೆ ಹೊರಡೋಕೆ ರೆಡಿ ಆದ.  ಸುಗ್ರೀವ , ರಾಮ-ಲಕ್ಷ್ಮಣರಿಗೆ ನಮಸ್ಕಾರ ಮಾಡಿದ.
 ರಾಮ ಅವನನ್ನು  ಅಪ್ಪಿಕೊಂಡು " ಹನುಮಂತ , ಸುರಕ್ಷಿತವಾಗಿ ಹೋಗಿ ಬಾ. ಸೀತೆಯ  ವಿಷಯ ಕೇಳೋಕೆ ನಾವು ಕಾಯ್ತಾ ಇರ್ತೀವಿ " ಅಂದ .
ಹಾಗೇ   ಹನುಮಂತನ ಕೈಗೆ  ತನ್ನ ಉಂಗುರ ಕೊಟ್ಟು , ಇದನ್ನು  ಸೀತೆ ಗೆ ತೋರಿಸು . ಅವಳಿಗೆ ನೀನು ನನ್ನ ಕಡೆಯವನು ಅಂತ ಗೊತ್ತಾಗತ್ತೆ " ಎಂದ . 

ಆ ಉಂಗುರನ  ಭದ್ರವಾಗಿ ಇಟ್ಟುಕೊಂಡು ಹನುಮಂತ ಹೊರಟ .  ಅವನ್ನ ಕಳಿಸೋಕೆ ಅಂತ ಎಲ್ಲರೂ  ಸಮುದ್ರದ ವರೆಗೂ ಹೋದ್ರು . ಹನುಮಂತ ಸಮುದ್ರದ  ಪಕ್ಕದ ಚಿಕ್ಕ ಬೆಟ್ಟ ಹತ್ತಿ  ನಿಂತ . ಸಮುದ್ರವನ್ನು ಸಲ್ಪ ಹೊತ್ತು ನೋಡಿ,  ರಾಮನಿಗೆ ಮತ್ತೊಮ್ಮೆ ನಮಸ್ಕಾರ ಮಾಡಿದ .  ಅವನು  ಲಂಕೆಗೆ ಹೊರಟಿದ್ದನ್ನು ನೋಡಲೆಂದು  ಕಿಷ್ಕಿಂಧೆಯ   ಕಪಿಗಳೆಲ್ಲಾ  ಅಲ್ಲ್ಲಿ ಬಂದು ಸೇರಿದ್ದರು . ಅವರೆಲ್ಲಾ ಉತ್ಸಾಹದಿಂದ ಜೈಕಾರ ಹಾಕುತ್ತಿದ್ದಂತೆ  ಹನುಮಂತ ಬೆಟ್ಟದಿಂದ ಜಿಗಿದೆ ಬಿಟ್ಟ . 

"ಅಜ್ಜಿ , ಅವನು ಕೆಳಗೆ ಬಿದ್ದು ಕೈ ಕಾಲು ಮುರ್ಕೊಂಡಿಲ್ಲ ತಾನೇ? "
"ಅಜ್ಜೀ, ಅದು ಹ್ಯಾಗೆ  ಲಂಕೆ ತಲುಪ್ತಾನೆ?  ಸಮುದ್ರ  ಅಂದ್ರೆ ತುಂಬಾ ದೊಡ್ದದಲ್ವ?  ಆ ತರ ಜಂಪ್  ಮಾಡಿ ದಾಟಕಾಗತ್ತ ? " ಮಕ್ಕಳ ಪ್ರಶ್ನೆಗಳು .

"ಅವನಿಗೆ ಅಂಥಾ ಶಕ್ತಿ ಇತ್ತು ಕಣ್ರೋ  ಎಷ್ಟಿ ದೂರ ಬೇಕಾದ್ರೂ  ಹಾರೋಕಾಗ್ತಿತ್ತು  !"

"ನಿಜಾ ಅಜ್ಜಿ . ನಾನು ಟಿ ವಿ ಲಿ  " ಜೈ ಹನುಮಾನ್ " ಲ್ಲಿ ನೋಡಿದೀನಿ" . ಅಪೂರ್ವ ಹೇಳಿದಳು 
"ಅಜ್ಜೀ, ಈಗ  ಹನುಮಂತ ಇದಿದ್ದರೆ , ಒಲಿಂಪಿಕ್ಸ್ ಗೆ  ಲಾಂಗ್ ಜಂಪ್ , ಹೈ ಜಂಪ್ ಎರಡಕ್ಕೂ ಅವನ್ನೇ  ಕಳಿಸಬಹುದಿತ್ತು "  ಕಿಸಕ್ಕನೆ ನಕ್ಕರು ಗಂಡು ಹುಡುಗರಿಬ್ಬರೂ .

ಅತ್ತ ಲಕ್ಷ್ಯ ಕೊಡದೆ ಅಜ್ಜಿ ಮುಂದುವರೆಸಿದರು .

"ಸುಮಾರು ದೂರ , ಅದೆಷ್ಟೋ ಹೊತ್ತು ಹಾರಿದ ಮೇಲೆ   ಅವನಿಗೆ ಲಂಕೆ ಕಾಣಿಸಿತು . ಸ್ವಲ್ಪ ಹೊತ್ತಿನಲ್ಲಿ ಲಂಕೆಯ  ಬಾಗಿಲಿನ ಎದುರು ಹನುಮಂತ ನಿಂತಿದ್ದ . 
ಲಂಕೆಯ ಸುತ್ತಲೂ ಭದ್ರವಾದ ಕೋಟೆ ಇತ್ತು. ಅದರ  ಬಾಗಿಲಲ್ಲಿ  " ಲಂಕಿಣಿ "   ಕಾವಲಿಗೆ ನಿಂತಿದ್ದಳು . ಎದುರು ಬಂದು ನಿಂತ ಹನುಮಂತನನ್ನು ಒಳಗೆ ಹೋಗದಂತೆ  ತಡೆದಳು . ಆಮೇಲೆ ಅವರಿಬ್ಬರ ನಡುವೆ  ಒಂದು ಚಿಕ್ಕ ಯುದ್ಧ ನೇ ಆಗೋಯ್ತು .  ಅವಳನ್ನು ಸೋಲಿಸಿದ ಹನುಮಂತ  ಕೋಟೆಯ ಒಳ ಹೊಕ್ಕ ."

ಹೆಚ್ಚು ಬ್ರೇಕ್ ಕೊಡದೆ ಅಜ್ಜಿ  ಕಥೆ ಹೇಳುತ್ತಿದ್ದರು . 
"ಅಜ್ಜೀ, ಬಾಗಿಲು ಕಾಯೋಕೆ ಲಂಕಿಣಿನ  ಯಾಕೆ ಇಟ್ಟಿದ್ರು ? ಅವಳ ಜೊತೆ ಬೇರೆ ಯಾರೂ ಇರಲಿಲ್ವ? ಹನುಮಂತ ಹಾಗೆ  ಹೆಂಗಸಿನ ಜೊತೆ ಯುದ್ಧ ಮಾಡಬಹುದಿತ್ತಾ? "

"ಲಂಕಿಣಿ ಸಾಮಾನ್ಯದವಳಾಗಿರ್ಲಿಲ್ಲ  ಕಣ್ರೋ , ತುಂಬಾ ಶಕ್ತಿ ಇತ್ತು ಅವಳಿಗೆ . ಅವಳನ್ನ ಸೋಲಿಸೋಕೆ  ಹನುಮಂತಂಗೆ  ಸುಮಾರು ಕಷ್ಟ ಆಯ್ತು . ಹೇಗೋ ಮಾಡಿ ಅವನು ಒಳಗೆ ಹೋದ . "


ಹಿಂದಿನ ಕಂತುಗಳು 






3 comments:

sunaath said...

ತುಂಬ ಸ್ವಾರಸ್ಯಕರವಾಗಿದೆ ಅಜ್ಜಿಯ ಕಥೆ. ಆದರೆ, ನೀವು ಎರಡು ಭಾಗಗಳ ನಡುವೆ ಇಷ್ಟು ಅಂತರವಿಟ್ಟರೆ, ನನಗೆ ಚಡಪಡಿಕೆಯಾಗುತ್ತದೆ. (ಅಂದ ಮೇಲೆ ಕಥೆ ಕೇಳಲು ಕುಳಿತ ಮಕ್ಕಳಿಗೆ ಎಷ್ಟು ಆಗುತ್ತಿರಬೇಡ!)

ಚಿತ್ರಾ said...
This comment has been removed by the author.
ಚಿತ್ರಾ said...

ಕಾಕಾ ,
ನಾನು ಎಷ್ಟೋ ದಿನಗಳ ಮೇಲೆ ಬ್ಲಾಗ್ ಬರೆದರೂ ಅದನ್ನು ತಕ್ಷಣ ಓದಿ ಅಭಿಪ್ರಾಯ ಬರೆದು ಪ್ರೋತ್ಸಾಹಿಸುವ ನಿಮಗೆ ನಾನು ಸದಾ ಆಭಾರಿ!
ಕೆಲವೊಮ್ಮೆ ಕೆಲಸದ ಒತ್ತಡದಿಂದಾಗಿ , ಆಲೋಚನೆಗಳು ಸರಿಯಾಗಿ ಹರಿಯದೆ ಸಾದಾ ಬರೆಹವೂ ನಿಧಾನವಾಗುತ್ತದೆ. ಇನ್ನು ಇದು ರಾಮಾಯಣ , ಅಂಥಾ ಮಹಾ ಕಾವ್ಯವನ್ನು ಸಂಕ್ಷಿಪ್ತ ರೂಪದಲ್ಲಿ , ತಿಳಿ ಹಾಸ್ಯ ಸೇರಿಸಿ ಬರೆಯುವುದು , ನನ್ನಂಥಾ " ಟೈಂ ಪಾಸ್" ಬರಹಗಾರ್ತಿಗೆ ಸಲ್ಪ ಕಷ್ಟವೇ ಆಗುತ್ತದೆ ! ಶುರು ಏನೋ ಮಾಡಿ ಬಿಟ್ಟೆ , ಈಗ ಮುಗಿಸಲು ಕಷ್ಟ ಪಡುತ್ತಿದ್ದೇನೆ !
ನಿಮ್ಮ ಆಶೀರ್ವಾದ ಇರಲಿ ಕಾಕಾ !