ಲಂಕಾ ಪಟ್ಟಣ ತುಂಬಾ ಸುಂದರ ವಾಗಿತ್ತು . ಮನೆಗಳಿಗೆ ಚಿನ್ನದ ತರ ಕಾಣೋ ಹಾಗೆ ಬಣ್ಣ ಹಚ್ಚಿದ್ರು .
ಅರಮನೆಗಳಂತೂ ತುಂಬಾ ಚೆಂದ ಚೆಂದ ಇದ್ವು .
ಹನುಮಂತ ಒಂದು ಕೋತಿ ರೂಪದಲ್ಲಿ ಆ ಅರಮನೆಗಳನ್ನೆಲ್ಲ ಮುಂಚೆ ಹುಡುಕದ . ಅಲ್ಲೆಲ್ಲೂ ಸೀತೆ ಕಾಣಿಸಲಿಲ್ಲ .
ಹಾಗೆ ಹುಡುಕ್ತಾ ಹುಡುಕ್ತಾ ಅಶೋಕ ವನದ ಹತ್ರ ಬಂದ .
"ಅದೆನಜ್ಜಿ ಅಶೋಕ ವನ? "
"ಅದು ಕಬ್ಬನ್ ಪಾರ್ಕ್, ಲಾಲ್ ಬಾಗ್ ತರ ನೇ ದೊಡ್ಡ ಗಾರ್ಡನ್ ಕಣೆ. ಅಲ್ಲಿ ಒಂದು ದೊಡ್ಡ ಮರದ ಕೆಳಗೆ ಒಬ್ಬ ಚೆಂದದ ಹೆಂಗಸು ಕಾಣಿಸಿದಳು ಹನುಮಂತಂಗೆ . ಅಳ್ತಾ ಕೂತಿರೋ ಅವಳ ಸುತ್ತ ಸುಮಾರು ಜನ ಹೆಂಗಸರಿದ್ರು . ಆದರೆ ಆ ಹೆಂಗಸು ಬೇರೆ ಯಾರತ್ರನೂ ಮಾತಾಡದೆ ಇರೋದನ್ನ ನೋಡಿ ಅವಳೇ ಸೀತೆ ಇರಬೇಕು ಅಂದ್ಕೊಂಡ . ಅವಳು ಕೂತಿರೋ ಮರದ ಕೊಂಬೆ ಮೇಲೆ ಅಡಗಿ ಕೂತ್ಗೊಂಡು ನೋಡ್ತಾ ಇದ್ದ .
" ಅವಳೇ ಸೀತೆ ಗ್ಯಾರಂಟಿ ಆಲ್ವಾ ಅಜ್ಜಿ? ಅವಳಿಗೆ ಭಾಷೆ ಬರ್ತಾ ಇರಲಿಲ್ಲವಲ್ಲಾ ಅದಕೆ ಯಾರತ್ರು ಮಾತಡ್ತಿರಲಿಲ್ಲ ಅವಳು . ಆಲ್ವಾ ಅಜ್ಜಿ ? " ಅಪೂರ್ವಾ ಮುಖ ಅರಳಿತ್ತು .
"ಈಗ ಮೊಬೈಲ್ ನಲ್ಲಿ ಟ್ರಾನ್ಸ್ ಲೇಟರ್ ಹಾಕೊಂಡ್ರೆ ಯಾವ್ ಭಾಷೆ ಬೇಕಾದ್ರೂ ಅರ್ಥ ಮಾಡ್ಕೊಬಹುದು ! ಅದ್ಕೆ ಟೆಕ್ನಾಲಜಿ ಬೇಕು ಅನ್ನೋದು .. " ವರುಣ್ ಇನ್ನೂ ಏನೋ ಹೇಳ್ತಾ ಇದ್ದ . ಆದರೆ ಅಜ್ಜಿ ಗಮನ ಕೊಡದೆ ಮುಂದುವರೆಸಿದರು .
"ಈಗ ಮೊಬೈಲ್ ನಲ್ಲಿ ಟ್ರಾನ್ಸ್ ಲೇಟರ್ ಹಾಕೊಂಡ್ರೆ ಯಾವ್ ಭಾಷೆ ಬೇಕಾದ್ರೂ ಅರ್ಥ ಮಾಡ್ಕೊಬಹುದು ! ಅದ್ಕೆ ಟೆಕ್ನಾಲಜಿ ಬೇಕು ಅನ್ನೋದು .. " ವರುಣ್ ಇನ್ನೂ ಏನೋ ಹೇಳ್ತಾ ಇದ್ದ . ಆದರೆ ಅಜ್ಜಿ ಗಮನ ಕೊಡದೆ ಮುಂದುವರೆಸಿದರು .
"ಹ್ಞೂ ಕಣೆ . ಅಷ್ಟೊತ್ತಿಗೆ ಅಲ್ಲಿಗೆ ರಾವಣ ಬಂದ . ಸೀತೆ ಎದುರು ನಿಂತು " ನೋಡು ನೀನೆಷ್ಟೇ ಅತ್ತು ಕರೆದು ಮಾಡಿದ್ರೂ, ಉಪವಾಸ ಇದ್ರೂ ಏನೂ ಆಗಲ್ಲ ! ನಿನ್ನ ರಾಮ ಇಲ್ಲಿ ಬರೋದು ಸಾಧ್ಯ ನೇ ಇಲ್ಲ . ಅವನು ಬಂದರೂ ಕೂಡ ನನ್ನ ಸೈನ್ಯದ ಎದುರು ಅವನಿಗೆ ಗೆಲ್ಲೋಕೆ ಆಗಲ್ಲ . ಹೀಗಾಗಿ ಸುಮ್ನೆ ನಾ ಹೇಳಿದ್ದು ಕೇಳು . ಈ ಹಠ ಎಲ್ಲ ಬಿಟ್ಟು ನನ್ನ ಮದ್ವೆ ಆಗಿ ರಾಣಿ ತರಾ ಸುಖವಾಗಿರು " ಅಂದ .
"ಆದ್ರೆ , ಸೀತೆ ಗೆ ಆಲ್ ರೆಡಿ ಮದ್ವೆ ಆಗಿದ್ಯಲ್ಲ ಅಜ್ಜಿ ? ಮತ್ತೆ ? "
"ಆದ್ರೆ , ಸೀತೆ ಗೆ ಆಲ್ ರೆಡಿ ಮದ್ವೆ ಆಗಿದ್ಯಲ್ಲ ಅಜ್ಜಿ ? ಮತ್ತೆ ? "
" ಹೌದಮ್ಮ , ಆದ್ರೆ ರಾವಣ ಅದೆಲ್ಲ ವಿಚಾರ ಮಾಡ್ತ ಇರ್ಲಿಲ್ಲ . ಅವನು ಹೀಗೆ ಹೇಳ್ತಾ ಇದ್ರೆ ಸೀತೆ ಅವನ ಕಡೆ ನೋಡಲೂ ಇಲ್ಲ . ನೆಲದ ಮೇಲೆ ಬಿದ್ದಿದ್ದ ಒಂದು ಹುಲ್ಲು ಕಡ್ಡಿ ಕಡೆ ನೋಡ್ತಾ " ನೋಡು ನೀನು ಎಷ್ಟೇ ಪ್ರಯತ್ನ ಮಾಡಿದ್ರೂ ನಾನು ನಿನ್ನ ಮಾತನ್ನು ಒಪ್ಪೋದು ಸಾಧ್ಯ ಇಲ್ಲ . ನನ್ನ ಕದ್ಕೊಂಡು ಬಂದು ತುಂಬಾ ದೊಡ್ಡ ತಪ್ಪು ಮಾಡಿದೀಯಾ. ನನ್ನ ರಾಮ ಬಂದೆ ಬರ್ತಾನೆ . ನಿನ್ನ ಕೊಂದು , ನನ್ನ ಇಲ್ಲಿಂದ ಕರ್ಕೊಂಡು ಹೋಗ್ತಾನೆ . ಆ ಭರವಸೆ ನನಗಿದೆ " ಅಂತ ಹೇಳಿದಳು . ಅದನ್ನ ಕೇಳಿ ರಾವಣ ಸಿಟ್ಟು ಮಾಡ್ಕೊಂಡು ಹೊರಟು ಹೋದ .
ರಾತ್ರಿ ಸೀತೆ ನಾ ಕಾಯ್ತಾ ಇರೋ ಹೆಂಗಸರೆಲ್ಲ ಮಲಗೊವರೆಗೂ ಹನುಮಂತ ಕಾದಿದ್ದು , ಆಮೇಲೆ ಸೀತೆಯ ಎದುರು ಹೋಗಿ ನಿಂತ .
ಹೆದರಿದ ಅವಳು , ಇವನು ಯಾರೋ ರಾಕ್ಷಸನೇ ಕೋತಿ ತರ ಬಂದಿದಾನೆ ಅಂದ್ಕೊಂಡಳು.
ಅವಳ ಮುಂದೆ ನಿಂತ ಹನುಮಂತ ತನ್ನ ಕೈಲಿರೋ ರಾಮನ ಉಂಗುರ ನಾ ಅವಳೆದುರು ಹಾಕಿ ಕೈಮುಗಿದ . ಅದನ್ನು ನೋಡ್ತಿದ್ದ ಹಾಗೆ ಸೀತೆ ಕಣ್ಣಲ್ಲಿ ನೀರು ಬಂತು.
ಉಂಗುರನಾ ಎತ್ಕೊಂಡು ಯಾರು ನೀನು ? ಇದು ನಿನ್ ಹತ್ರ ಹೇಗ್ ಬಂತು ? ಅಂತ ಕೇಳಿದಳು .
"ತಾಯಿ , ನಾನು ಹನುಮಂತ . ನಿನ್ನನ್ನ ಹುಡುಕಿಕೊಂಡು ಬರ್ತೀನಿ ಅಂತ ಶ್ರೀರಾಮನಿಗೆ ಮಾತು ಕೊಟ್ಟು ಬಂದಿದೀನಿ. ಅವನು ಈಗ ಕಿಷ್ಕಿಂಧೆಲಿ ಇದ್ದಾನೆ. ನಿನ್ನನ್ನು ನೋಡಿ ನಂಗೆ ತುಂಬಾ ಸಮಾಧಾನ ಆಯ್ತು. ನೀನು ನನ್ನ ಭುಜದ ಮೇಲೆ ಕೂತ್ಕೋ ನಾನು ಸೀದಾ ರಾಮನ ಹತ್ತಿರ ನಿನ್ನನ್ನು ಕರ್ಕೊಂಡು ಹೋಗ್ತೀನಿ " ಅಂತ ಹೇಳಿದ .
ಅದಕ್ಕೆ ಸೀತೆ , " ಹನುಮಂತಾ, ನಂಗೆ ಇದನ್ನ ಕೇಳಿ ತುಂಬಾ ಖುಷಿ ಆಯ್ತು. ಆದ್ರೆ ಶ್ರೀ ರಾಮನೇ ಬಂದು ಈ ರಾವಣನ ಕೊಂದು ನನ್ನ ಇಲ್ಲಿಂದ ಕರ್ಕೊಂಡು ಹೋಗ್ಬೇಕು . ಅದೇ ಸರಿ ! " ಅಂತ ಹೇಳಿದಳು .
ಈಗ ನೀನು ನನ್ನನ್ನು ಭೇಟಿಯಾದೆ ಅಂತ ಈ ಆಭರಣ ಣ ರಾಮನಿಗೆ ಕೊಡು " ಅಂತ ತನ್ನ ತಲೇಲಿ ಇದ್ದ ಒಂದು ಚಿನ್ನದ ಹೂವನ್ನ ಹನುಮಂತನಿಗೆ ಕೊಟ್ಟಳು .
"ಅಜ್ಜಿ , ಅಜ್ಜಿ ಅವಳತ್ರ ಚಿನ್ನದ ಹೂ ಹೇಗ್ ಬಂತು ? ಮನೆಯಿಂದ ಹಾಕ್ಕೊಂಡೆ ಬಂದಿದ್ಲಾ? ಅದನ್ನ ಯಾರೂ ಕಿತಗೊಂಡೇ ಇಲ್ವಾ?" ಅಪೂರ್ವಾ ಪ್ರಶ್ನೆ !
"ಅವಳ ಜಡೆ ಲೆ ಇತ್ತು ಕಣೆ . ಅದನ್ನೆಲ್ಲ ಹಾಗೆ ಯಾರೂ ಕಿತ್ಗೋತಿರಲಿಲ್ಲ. " ಜಾಸ್ತಿ ವಿವರಣೆ ಕೊಡೋಕೆ ಹೋಗದೆ ಅಜ್ಜಿ ಮುಂದುವರಿಸಿದರು .
ಸರಿ ಅದನ್ನ ತೊಗೊಂಡು ಹನುಮಂತ ಅವಳಿಗೆ ನಮಸ್ಕಾರ ಮಾಡಿ ಅಲ್ಲಿಂದ ಹೊರಟ . ಸುಮ್ನೆ ಯಾಕೆ ಹೋಗೋದು ಸ್ವಲ್ಪ ಕೀಟಲೆ ಮಾಡೋಣ ಅನಿಸ್ತು ಅವನಿಗೆ. ಅಶೋಕವನ ಅಂದ್ರೆ ರಾವಣನಿಗೆ ತುಂಬಾ ಪ್ರೀತಿ ಅಂತ ಗೊತಾಗಿತ್ತು ಅವನಿಗೆ. ಹೀಗಾಗಿ , ಅದನ್ನ ಹಾಳು ಮಾಡೋಕ್ ಶುರು ಮಾಡಿದ. ಹೂವೆಲ್ಲ ಕಿತ್ತು, ಮರ-ಗಿಡಗಳನ್ನೆಲ್ಲ ಮುರಿದು ಹಾಳು ಮಾಡಿದ.
"ಅಜ್ಜಿ, ಅದನ್ನೆಲ್ಲ ಯಾಕೆ ಹಾಳು ಮಾಡೋದಜ್ಜಿ ? ಪಾಪ ಅವೇನು ಮಾಡಿದ್ವು ? ಹಾಗೆಲ್ಲ ಗಿಡ ಹಾಳು ಮಾಡಬಾರದು ಅಂತ ಅಮ್ಮ ಬೈತ ಇರ್ತಾಳೆ. "
ಹೂ ಕಣೆ. ಅವನು ಮಾಡಿದ್ದು ತಪ್ಪೇ. ಆದರೆ ಅವನಿಗೆ ರಾವಣನ ಹತ್ರ ಹೋಗೋಕೆ ಕಾರಣ ಬೇಕಿತ್ತು. ಇದೆಲ್ಲ ನೋಡಿ ಸೈನಿಕರು ಅವನ್ನ ಹಿಡಿದು ರಾವಣನ ಎದುರು ನಿಲ್ಸಿದ್ರು.
ತನ್ನ ಪ್ರೀತಿಯ ಅಶೋಕವನವನ್ನು ಹಾಳುಮಾಡಿದ ಅಂತ ರಾವಣಂಗೆ ತುಂಬಾ ಕೋಪ ಬಂದಿತ್ತು . ಹನುಮಂತನನ್ನು ನೀ ಯಾರು? ಎಲ್ಲಿಂದ ಬಂದೆ? ಅಶೋಕವನನಾ ಯಾಕೆ ಹಾಳುಮಾಡಿದೆ ಅಂತೆಲ್ಲ ಕೇಳಿದ .
ಹನುಮಂತ , ತಾನು ರಾಮನ ಕಡೆಯವನು , ಸೀತೇನ ಹುಡುಕ್ಕೊಂಡು ಬಂದಿದೀನಿ , ಅವಳಿಗೆ ಏನೂ ತೊಂದ್ರೆ ಕೊಡದೆ ವಾಪಸ್ ಕಳಿಸಿಕೊಡು , ಇಲ್ಲಾಂದ್ರೆ ,ರಾಮ ಯುದ್ಧ ಮಾಡಿ ನಿನ್ನ ಸಾಯಿಸ್ತಾನೆ ಅಂತ ಹೇಳಿದ .
ಅದಕ್ಕೆ ರಾವಣ ಜೋರಾಗಿ ನಕ್ಕು , ನಿನಗೆ ನನ್ನತ್ರ ಹೀಗೆ ಮಾತಾಡೋ ಅಷ್ಟು ಧೈರ್ಯನಾ ಅಂತ ಬೈದು , ತನ್ನ ಸೇವಕರಿಗೆ ಹನುಮಂತನ ಬಾಲಕ್ಕೆ ಬೆಂಚಿ ಹಚ್ಚಿ ಕಳಿಸೋಕೆ ಹೇಳಿದ .
ರಾವಣನ ಸೇವಕರು ಬಾಲಕ್ಕೆ ಬೆಂಚಿ ಹಚ್ಚಬೇಕು ಅಂತ ಬಂದಾಗ , ಹನುಮಂತನ ಬಾಲ ಉದ್ದ ಬೆಳಿತಾ ಹೋಯ್ತು !
"ಅಜ್ಜಿ, ಅದು ಹ್ಯಾಗೆ ಅಜ್ಜಿ ? ಅದೇನು ಗಿಡ -ಬಳ್ಳಿ ತರ ನ? ಬೆಳಿಯೋಕೆ ? " ಆದಿತ್ಯ ಕೇಳಿದ
" ಏಯ್ , ಒಂಥರಾ ಎಲಾಸ್ಟಿಕ್ ಆಗಿರಬೇಕು ಕಣೋ " ಜೋರಾಗಿ ನಕ್ಕು ಹೇಳಿದ ವರುಣ್ ತಕ್ಷಣ ಅಜ್ಜಿ ಕೋಪದ ನೆನಪಾಗಿ "ಸಾರಿ ಅಜ್ಜಿ ಅಂತ ಸುಮ್ಮನಾದ.
" ಅಜ್ಜಿ, ನಾನು ಇದನ್ನ ನೋಡಿದೀನಿ ಟಿವಿ ಲಿ " ಎಕ್ಸೈಟ್ ಆಗಿ ಅಪೂರ್ವ ಹೇಳಿದಳು ." ಬಾಲಕ್ಕೆ ಬೆಂಕಿ ಹಚ್ಚಿಕೊಂಡು ಹನುಮಂತ .... " ಮುಂದುವರೀತಾ ಇತ್ತು
" ಸುಮ್ನಿರೆ ,ಅಜ್ಜಿನೆ ಹೇಳ್ಲಿ . ನೀನು ಟಿ ವಿ ಲಿ ನೋಡಿದ್ದು ಈಗ ಹೇಳಬೇಡ " ತಂಗಿಗೆ ಗದರಿದ ಆದಿತ್ಯ
" ಹ್ಮಂ... ಹನುಮಂತನ ಬಾಲ ಬೆಳಿತಾ ಹೋಯ್ತು ! ಲಂಕೆಲಿ ಇರೋ ಬಟ್ಟೆನೆಲ್ಲ ಸುತ್ತಿದರು ಮುಗೀಲಿಲ್ಲ .ಅವರು ಎಷ್ಟು ಸುತ್ತೊಕಾಯ್ತೋ ಸುತ್ತಿ ಹಾಗೆ ಎಣ್ಣೆ ಸುರಿದು ಬೆಂಕಿ ಹಚ್ಚಿದರು . ಹನುಮಂತ ಅಲ್ಲಿಂದ ಹೊರಗೆ ಹಾರಿದ . ಲಂಕೆಯಲ್ಲಿರೋ ದೊಡ್ಡ ದೊಡ್ಡ ಮನೆಗಳ ಮೇಲೆಲ್ಲಾ ಹಾರಿ ಎಲ್ಲಾ ಕಡೇ ಬೆಂಕಿ ಹಚ್ಚಿ ಬಿಟ್ಟ . ಇಡೀ ಲಂಕಾ ಪಟ್ಟಣ ನೆ ಉರಿಯೋಕೆ ಶುರುವಾಯ್ತು ! "
"ಅಜ್ಜಿ , ಯಾಕಜ್ಜಿ ಅವನು ಹಾಗೆ ಮಾಡ್ಬೇಕು ? ರಾವಣ ತಪ್ಪು ಮಾಡಿದ್ದು ತಾನೇ ? ಅವನ ಅರಮನೆ ಮಾತ್ರ ಸುಡ ಬೇಕಿತ್ತು . ಪಾಪ ಬೇರೆವ್ರೆಲ್ಲ ಅವರ ಮನೆ ಸುಟ್ಟು ಹೋದ್ರೆ ಏನ್ ಮಾಡ್ತಾರೆ ? ಇದು ಸರಿ ಅಲ್ಲ ಅಜ್ಜಿ " ಅಪೂರ್ವಾ ಅಳು ಧ್ವನಿಲಿ ಹೇಳಿದಳು .
" ಹಾಗೆ ಮಾಡಿದ್ರೆ , ರಾವಣ ತನ್ನ ತಪ್ಪನ್ನ ತಿದ್ಕೊಬಹುದು ಅಂತ ಆಗಿತ್ತಮ್ಮ ಅದು . ಬಿಡು ನಾವೇನು ಮಾಡೋಕಾಗಲ್ವಲ್ಲ ಈಗ . ನೀ ಮುಂದೆ ಕಥೆ ಕೇಳು . ಅಜ್ಜಿ ಮೊಮ್ಮಗಳನ್ನು ಸಮಾಧಾನ ಮಾಡಿದರು .
" ಲಂಕಾ ಪಟ್ಟಣ ಕ್ಕೆ ಬೆಂಕಿ ಹಚ್ಚಿದ ಹನುಮಂತ ತನ್ನ ಬಾಲನ ಸಮುದ್ರದಲ್ಲಿ ಅದ್ದಿ ಬೆಂಕಿ ಆರಿಸ್ಕೊಂಡ .
ಆಮೇಲೆ , ಅಲ್ಲಿಂದ ಪುನಃ ಜಿಗಿದು ಕಿಷ್ಕಿಂಧೆಗೆ ವಾಪಸ್ ಹೋದ. "
" ಅಜ್ಜೀ , ಅವನ ಬಾಲ ಸುಟ್ಟು ಹೋಗಲಿಲ್ವಾ ? ಉರಿಲೂ ಇಲ್ವಾ ಅವನಿಗೆ? ನಂಗೆ ಬೆಳಿಗ್ಗೆ ಅಮ್ಮ ಹಾಲಿನ ಲೋಟ ಕೊಟ್ಳಲ್ಲ , ಅದರಲ್ಲಿ ಕೆನೆ ಸರಿಸೋಕೆ ಹೋದೆ , ಬೆರಳು ಸುಟ್ಟೋಗಿ ಇನ್ನೂ ಉರಿತಾ ಇದೇ ... "
" ಸುಮ್ನಿರೇ ,ಉಗುರು ಬೆಚ್ಚಗೆ ಕೂಡ ಇರ್ಲಿಲ್ಲ ಹಾಲು , ಬೆರಳು ಸುಡ್ತಂತೆ " ಸ್ಮಿತಾ ಸಿಡುಕಿದಳು
" ನಿಂಗೊತ್ತಿಲ್ಲ ಸುಮ್ನಿರು ಎಂದು ಅಮ್ಮನಿಗೆಮೂತಿ ತಿರುವಿದ ಅಪೂರ್ವಾ " ಅಜ್ಜೀ , ಮುಂದೆ ಹೇಳು " ರಾಗ ಎಳೆದಳು.
" ವಾಪಸ್ ಬಂದ ಹನುಮಂತ ಸೀದಾ ರಾಮನ ಹತ್ತಿರ ಹೋದ . ಅವನಿಗೆ ನಮಸ್ಕಾರ ಮಾಡಿ ಸೀತೆಯ ವಿಷಯವನ್ನೆಲ್ಲ ಹೇಳಿದ . ಹಾಗೆ ಅವಳು ಕೊಟ್ಟಿದ್ದ ಚೂಡಾಮಣಿ ನು ರಾಮನಿಗೆ ಕೊಟ್ಟ .ಅದನ್ನು ನೋಡಿ , ಸೀತೆ ಅಳ್ತಾ ಇರೋ ಸುದ್ದಿನೆಲ್ಲ ಕೇಳಿ ರಾಮನಿಗೂ ಅಳು ಬಂದು ಬಿಡ್ತು . "
" ಪಾಪ ಆಲ್ವಾ ಅಜ್ಜಿ? ನಂಗೂ ಅಳು ಬರ್ತಿದೆ . ಹನುಮಂತ ಲಂಕೆನೆಲ್ಲ ಸುಟ್ಟಾಕಿದ ಅಂತ ಕೋಪಕ್ಕೆ ರಾವಣ ಸೀತೆ ನ ಸಾಯಿಸಿ ಬಿಟ್ರೆ ? "
" ಹೇಯ್ ಅಳುಬುರ್ಕಿ , ಆ ತರ ಏನೂ ಆಗಲ್ಲ. ಸುಮ್ನೆ ಕಥೆ ಕೇಳೆ" ವರುಣ್ ಬೈದ .
" ರಾಮ -ಲಕ್ಷ್ಮಣ ಇಬ್ರೂ ಸುಗ್ರೀವನ ಹತ್ರ ಮಾತಾಡಿ , ಲಂಕೆಗೆ ಯುದ್ಧಕ್ಕೆ ಹೋಗೋದು ಅಂತ ತೀರ್ಮಾನ ಮಾಡಿದ್ರು . ಒಂದೇ ದೊಡ್ಡ ತೊಂದ್ರೆ ಅಂದ್ರೆ ಸಮುದ್ರ ದಾಟೋದು ! ಆ ಬಗ್ಗೆನೇ ಯೋಚನೆ ಮಾಡ್ತ ಸಮುದ್ರ ತೀರದ ವರೆಗೂ ಹೋದ್ರು .
ಹಿಂದಿನ ಕಂತುಗಳು
ಹಿಂದಿನ ಕಂತುಗಳು
2 comments:
Dear Chitra
New "Lankayana" very good writing skill.
Get going ,
with best wishes
Vijay
ರಾಮಾಯಣವನ್ನು ಮತ್ತೊಮ್ಮೆ ಓದುವಾಗ, ನಾನು ಹುಡುಗನೇ ಆಗಿ ಬಿಡುತ್ತೇನೆ. ಆದರೆ, ಇಲ್ಲಿರುವ ಅಜ್ಜಿಯ ಮೊಮ್ಮಕ್ಕಳು ಕೇಳುವ ಪ್ರಶ್ನೆಗಳನ್ನು ನೋಡಿದಾಗ, ವಿನೋದವೆನಿಸುತ್ತದೆ. ದಯವಿಟ್ಟು ಮುಂದುವರೆಸಿ.
Post a Comment