"ಶಶಾಂಕ್ , ನಂಗೆ ನಿನ್ನತ್ರ ಒಂದು ವಿಷಯ ಹೇಳಬೇಕು. " ರಶ್ಮಿ ಮೆಲ್ಲಗೆ ಹೇಳಿದಳು.
"ಹ್ಮ್. ಹೇಳು " ಹಾಸಿಗೆಯ ಮೇಲೆ ದಿಂಬಿಗೊರಗಿ ಕಾಲು ನೀಡಿ ಕುಳಿತು ಮೊಬೈಲ್ ನೋಡುತ್ತಿದ್ದ ಶಶಾಂಕ್ ಅವಳತ್ತ ನೋಡದೆಯೇ ಕೇಳಿದ .
"ಸ್ವಲ್ಪ ಆ ಫೋನ್ ಪಕ್ಕಕ್ಕಿಡ್ತೀಯಾ? ಯೋಚನೆ ಮಾಡಬೇಕಿರೋ ವಿಷಯ ಇದು . " ರಶ್ಮಿ ಸಿಡುಕಿದಳು .
"ಆಯ್ತು ತಾಯಿ . ಹೇಳು. " ಫೋನ್ ಪಕ್ಕಕ್ಕಿಟ್ಟು ಹೆಂಡತಿಯತ್ತ ಮುಖ ಮಾಡಿದ .
"ಅದು..ಸ್ವಲ್ಪ ದಿನದಿಂದ ಅತ್ತೆ ಏನೋ ವಿಚಿತ್ರವಾಗಿ ನಡ್ಕೋತಿದಾರೆ ಅನ್ಸ್ತಿದೆ ನಂಗೆ. "
"ಏನು ಹಾಗಂದ್ರೆ ? ಏನಾಯ್ತು ? "
"ಇತ್ತೀಚೆ ಅತ್ತೆ ಹೆಚ್ಚು ಹೊತ್ತು ರೂಮಲ್ಲಿ ಬಾಗಿಲು ಹಾಕ್ಕೊಂಡೆ ಇರ್ತಾರೆ. "
"ಹ್ಮ್… ಅದರಲ್ಲೇನು ವಿಚಿತ್ರ ಅನ್ಸೋದು ? ಬೇಜಾರಿರತ್ತಲ್ವ? 42 ವರ್ಷ ಜತೆಲಿದ್ರು. ಈಗ ಒಮ್ಮೆಲೇ ಒಂಟಿ ಅನಸ್ತಿರಬಹುದು . ಸಹಜ ತಾನೇ? "
"ಅದು ಸರೀಪ್ಪಾ , ಅರ್ಥ ಆಗತ್ತೆ ನಂಗೂ. ಮಾವ ಹೋದ ಶುರುವಿಗೆ ಅತ್ತೆ ಹೀಗೆ ರೂಮಲ್ಲಿ ಕೂತು ಏನೋ ಓದ್ತಾ ಇರ್ತಿದ್ರು. ಆದ್ರೆ ರೂಂ ಬಾಗಿಲು ಹಾಕ್ಕೋತಾ ಇರ್ಲಿಲ್ಲ. ಸ್ವಲ್ಪ ದಿನಕ್ಕೆ ಮೊದಲಿನ ತರ ಆಗಿದ್ರು . ಆದ್ರೆ ಈಗ ಮತ್ತೆ ಹಾಗೇನೆ . ರೂಮಿಂದ ಹೊರಗೆ ಬಂದಷ್ಟು ಹೊತ್ತು ಸರಿಯಾಗೇ ಮಾತಾಡ್ತಾರೆ. ಆದ್ರೆ ಹೊರಗೆ ಬರೋದೇ ಕಮ್ಮಿ ಆಗೋಗಿದೆ. ಬೆಳಿಗ್ಗೆ ತಿಂಡಿ ತಿಂದು ನೀನು ಹೋದಮೇಲೆ ರೂಂ ಹೊಕ್ಕರೆ ಊಟಕ್ಕೆ ,ಕಾಫಿಗೆ ಮಾತ್ರ ಬರ್ತಾರೆ.
ಅಬ್ಬಬ್ಬಾ ಅಂದ್ರೆ ಅರ್ಧ ಗಂಟೆ. ಮುಂಚಿನ ತರ ಟಿವಿ ನೋಡೋದು,ಪೇಪರ್ ಓದೋದು ಏನೂ ಇಲ್ಲ . ಮಕ್ಕಳು ಸ್ಕೂಲಿಂದ ಬಂದ ಮೇಲೆ ಸ್ವಲ್ಪ ಹೊತ್ತು ಅವರ ಜೊತೆ ಮಾತಾಡ್ತಾ ಕೂರ್ತಾರೆ . "
"ಮನಸಾಗಲ್ವೇನೋ ! ಇನ್ನೂ ನಾಲ್ಕೇ ತಿಂಗಳು ಆಗ್ತಿದೆ ಅಷ್ಟೇ. ನೀನಾಗಿ ಅವರ ರೂಮಿಗೆ ಹೋಗಿ ಮಾತಾಡ್ಸು . ಚಿಯರ್ ಅಪ್ ಮಾಡು "
"ಅದೂ ಮಾಡ್ತೀನಿ. ಆದ್ರೆ, ಬಾಗಿಲು ತೆಗದ್ರೆ ತಾನೇ ಮಾತಾಡ್ಸೋದು ? ಅವರ ರೂಂ ಬಾಗಿಲು ಒಳಗಿಂದ ಲಾಕ್ ಮಾಡಿರ್ತಾರೆ. ಮೊದಲು ಹೀಗೆ ಮಾಡ್ತಿರಲಿಲ್ಲ . ಪದೇ ಪದೇ ನಾನು ಹೋಗಿ ಬಾಗಿಲು ತಟ್ಟೋದು , ಅವರು ಎದ್ದು ಬಂದು ಬಾಗಿಲು ತೆಗೆಯೋದು ..ಯಾಕೋ ನಂಗೆ ಸರಿ ಹೋಗಲ್ಲ. ಅವರಿಗೆ ಡಿಸ್ಟರ್ಬ್ ಮಾಡ್ತೀನಾ ಅನ್ಸಿ ಬಿಡತ್ತೆ. ಸುಮಾರು ಸಲ ನಾನು ಅವರ ಬಾಗಿಲ ಹತ್ರ ಹೋದಾಗ ಅವರು ಯಾರತ್ರನೋ ಫೋನ್ ಲ್ಲಿ ಮಾತಾಡ್ತಾ ಇರೋದು ಕೆಳಿಸತ್ತ್ತೆ. ಯಾರ ಜೊತೆ ಅಂತ ಗೊತ್ತಿಲ್ಲ. "
" ಯಾರೋ ಅಮ್ಮನ ಫ್ರೆಂಡ್ ಅಥವಾ ಸಂಬಂಧಿಕರು ಇರಬಹುದು ಕಣೆ. ಈ ಸಂದರ್ಭದಲ್ಲಿ ಜನ ಫೋನ್ ಮಾಡೋದು ಸಹಜ ಆಲ್ವಾ ? "
"ಇರಬಹುದು. ಆದ್ರೆ ನಂಗೆ ವಿಚಿತ್ರ ಅನ್ಸಿದ್ದು ಏನು ಗೊತ್ತಾ? ಈಚೆ ಇರೋವಾಗ ಫೋನ್ ಬಂದ್ರೆ ರೂಮಲ್ಲಿ ಹೋಗಿ ಬಾಗಿಲು ಹಾಕ್ಕೊಂಡೆ ಮಾತಾಡ್ತಾರೆ. ಏನೋ ಹುಡುಕ್ತಿದಾರೆ ಅನ್ಸತ್ತೆ ಒಂದೊಂದ್ ಸಲ . ನಾನು ಒಂದ್ಸಲ ರೂಮಿಗೆ ಹೋದಾಗ ಮಂಚದ ಮೇಲೆಲ್ಲಾ ಬಟ್ಟೆ ಹರಡಿತ್ತು . ಮೊದಲು ಯಾವಾಗಲು ಹೀಗೆ ಮಾಡಿಲ್ಲ . ದುಃಖನೆಲ್ಲ ಒಳಗೇ ಒತ್ತಿಟ್ಟುಕೊಂಡು ಆಮೇಲೆ ಅರೋಗ್ಯ ಹಾಳಾಗಬಾರದಲ್ವ ?" ರಶ್ಮಿ ಗೊಂದಲದಲ್ಲೇ ಹೇಳಿದಳು
"ಹೌದಾ ? ಅಂಥಾದ್ದೇನ್ ಇರತ್ತೆ. ಆದ್ರೂ ಕಪಾಟು ಸೇರಿಸ್ಕೊತಿರಬಹುದು. ಏನಾದ್ರೂ ಮನಸನ್ನು ಡೈವರ್ಟ್ ಮಾಡ್ಕೋಳೋಕೆ. ನನಗೇನೋ ನೀನು ಸುಮ್ಮನೆ ಏನೇನೋ ಯೋಚಿಸ್ತೀಯ ಅನಸ್ತಿದೆ. ಮಲ್ಕೋ ಈಗ . "
ಹೆಂಡತಿಗೆ ಜಾಸ್ತಿ ಯೋಚನೆ ಮಾಡಬೇಡ ಅಂತ ಹೇಳಿ ಪಕ್ಕಕ್ಕೆ ತಿರುಗಿ ಮುಸುಕೆಳೆದ ಶಶಾಂಕ್ .
ಅತ್ತ ರಶ್ಮಿಗೆ ಚಿಂತೆ ತಲೆ ತಿಂತಾನೆ ಇತ್ತು. ಗಂಡ ಏನೋ ಯೋಚನೆ ಮಾಡಬೇಡ ಅಂದ್ರೂ ಅದು ಹೇಗೆ ಸಾಧ್ಯ? ಯಾವತ್ತೂ ನಗ ನಗ್ತಾ, ಮಾತಾಡ್ತಾ ಇರ್ತಿದ್ದ ಅತ್ತೆ ಇದ್ದಕ್ಕಿದ್ದ ಹಾಗೆ ರೂಮಲ್ಲಿ ಇಡೀ ದಿನ ಬಾಗ್ಲು ಹಾಕೊಂಡಿರೋದು ಅವಳಿಗೆ ವಿಚಿತ್ರ ಅನಸ್ತಿತ್ತು . ಜೊತೆಗೇ ಗಾಬರಿನೂ .
ಮಾವ ತೀರಿ ಕೊಂಡಾಗಲೂ ಹೆಚ್ಚು ಅಳುತ್ತಾ ಕೂರದೇ ಅದನ್ನು ಎಲ್ಲರೂ ಒಂದಲ್ಲ ಒಂದು ದಿನ ಜಗತ್ತನ್ನು ಬಿಟ್ಟು ಹೋಗೋರೆ ಎಂಬಂತೆ ಮೌನವಾಗಿ ಸ್ವೀಕರಿಸಿದ ಅತ್ತೆಯ ಬಗ್ಗೆ ಆಗಿಂದಲೂ ರಶ್ಮಿಗೆ ಯೋಚನೆ ಆಗುತ್ತಿತ್ತು. ದುಃಖವನ್ನು ಮನದಲ್ಲೇ ಕಟ್ಟಿ ಇಟ್ಟುಕೊಂಡು ಅದರಿಂದಾಗಿ ಆರೋಗ್ಯ ಹಾಳಾಗುವ ಬಗ್ಗೆ ಓದಿದ್ದಳು. ಅವಳಿಗೆ ಅತ್ತೆಯೂ ದುಃಖವನ್ನು ತಡೆದಿಟ್ಟು ಕೊಂಡಿದ್ದಾರೆ ಎಂದೇ ಅನಿಸುತ್ತಿತ್ತು. ಆಮೇಲೆ ಕೂಡ ಮೊದಲಿನಂತೆ ಮಾತಾಡದೆ ಹಲವು ವಾರ ಗಳ ಕಾಲ ಮಹಾಭಾರತ, ಭಗವದ್ಗೀತೆ , ಸಹಸ್ರನಾಮ ಇತ್ಯಾದಿ ಓದುತ್ತಾ ರೂಮಲ್ಲಿ ಇರುತ್ತಿದ್ದರು. ಆಗೆಲ್ಲ ಒಳಗೊಳಗೇ ಗಾಬರಿ ರಶ್ಮಿಗೆ.
ತಿಂಗಳು ಕಳೆದಂತೆ ಅತ್ತೆ ಸ್ವಲ್ಪ ನಾರ್ಮಲ್ ಗೆ ಬಂದಂತೆ ಅನಿಸಿ ಸಮಾಧಾನವಾಗಿತ್ತು .
ಮತ್ತೆ ಈಗ ಅತ್ತೆಯ ಹೊಸ ರೀತಿಗೆ ತಲೆಬಿಸಿಯಾಗ್ತಾ ಇತ್ತು . ಕಾರಣ ಏನಿರಬಹುದು ಎಂಬ ಯೋಚನೆ ತಲೆ ತಿನ್ನುತ್ತಿತ್ತು. ಹಾಗೆ ಯೋಚಿಸುತ್ತಿದ್ದವಳಿಗೆ 2 ವಾರಗಳ ಮೊದಲು ಅತ್ತೆಯ ಹತ್ತಿರದ ಗೆಳತಿ ಶಶಿಕಲಾ ಬಂದು ಉಳಿದಿದ್ದರು. ಅತ್ತೆಯ ವರ್ತನೆ ಬದಲಾಗಿದ್ದು ಆ ನಂತರ ಎಂದು ಹೊಳೆಯಿತು . ಆದರೂ ಕಾರಣ ಮಾತ್ರ ಹೊಳೆಯಲಿಲ್ಲ.
ಮತ್ತೆ ಕಾರಣ ಹುಡುಕುತ್ತಾ ಕುಳಿತವಳು ಶಶಿ ಆಂಟಿ ಬರುವ ಕೆಲದಿನಗಳ ಮುಂಚೆ ನಡೆದಿದ್ದು ನೆನಪಿಸಿಕೊಂಡಳು!
ಅಂದು ಅತ್ತೆಯ ಫೋನ್ ಜಗುಲಿಯಲ್ಲಿದ್ದಿದ್ದು ನೋಡಿದ ರಶ್ಮಿ ಅದನ್ನು ಕೊಡಲು ಅವರ ರೂಮಿಗೆ ಹೋಗಿದ್ದಳು. ಅಲ್ಲಿ ಜಾಹ್ನವಿ ತಮ್ಮ ಗಂಡನ ಕಪಾಟನ್ನು ತೆರೆದು ಬಟ್ಟೆ ಗಳನ್ನು ತೆಗೆದು ಮಂಚದ ಮೇಲೆ ಇಡುತ್ತಿದ್ದರು. ಅವರೊಂದಿಗೆ ಕೈ ಜೋಡಿಸಿದ ರಶ್ಮಿ ಇದೇ ಸಮಯವೆಂದು ಅವರನ್ನು ಮಾತಿಗೆಳೆದಳು.
"ಇವನ್ನೆಲ್ಲ ಏನು ಮಾಡ್ತಿರಾ ಅತ್ತೆ? "
"ಏನಿಲ್ಲಮ್ಮ, ಏನು ಮಾಡೋದು ? ಅದೆಷ್ಟೋ ಹೊಸ ಶರ್ಟ್ ಪ್ಯಾಂಟ್ ಎಲ್ಲ ಇವೆ. ಅದನ್ನೆಲ್ಲ ತೆಗದು ಯಾವುದಾದರೂ ಆಶ್ರಮಕ್ಕೆ ಕೊಡಬಹುದಾ ಅಂತ ಯೋಚನೆ ಮಾಡ್ತಿದ್ದೆ. ಇನ್ನೇನು ಮಾಡೋದು ಹೇಳು ? ಯಾರು ಹಾಕ್ತಾರೆ ಇನ್ನು ? " ನಿರ್ಲಿಪ್ತರಾಗಿ ಹೇಳಿದರು.
"ಶಶಾಂಕ್ ಗೆ ಹೇಳ್ತೀನಿ ಅತ್ತೆ. ನೋಡೋಣ. "
ಇಬ್ಬರೂ ಸೇರಿ ಬಟ್ಟೆ ಗಳನ್ನು ವಿಂಗಡಿಸಿ ಇಟ್ಟರು.
ಈ ಕಪಾಟಿನ ಲಾಕರ್ ಒಂದು ತೆಗೆದು ನೋಡೋಣ ರಶ್ಮಿ . ಏನಾದ್ರೂ ಇದೆಯಾ ಅಂತ. ಎನ್ನುತ್ತಾ ಜಾಹ್ನವಿ ಬೀಗದ ಕೀ ಗೊಂಚಲನ್ನು ತಂದರು . ಆದರೆ ಲಾಕರ್ ನ ಕೀ ಮಾತ್ರ ಇರಲಿಲ್ಲ. ರೂಮಿನಲ್ಲಿ ಸಾಧಾರಣವಾಗಿ ಇರಬಹುದಾದ ಜಾಗವೆಲ್ಲಾ ಹುಡುಕಿದರೂ ಅದು ಸಿಗಲಿಲ್ಲ.
"ರಶ್ಮಿ, ಇದರದ್ದು ಡೂಪ್ಲಿಕೇಟ್ ಕೀ ಶಶಾಂಕ್ ಹತ್ರ ಏನಾದ್ರೂ ಇದೆಯಾ ಕೇಳಬೇಕು . ಲಾಕ್ ಮಾಡಿದ್ದಾರೆ ಅಂದ್ರೆ ಏನಾದರೂ ಇಟ್ಟಿರಬಹುದು. ನೋಡೋದು ಒಳ್ಳೇದು . "
"ಇರಿ ಅತ್ತೆ, ನಮ್ಮ ರೂಮಿನಲ್ಲಿ ಇರೋ ಕೀ ಬಂಚ್ ತರ್ತೀನಿ. ನೋಡೋಣ . "
ರಶ್ಮಿ ತಂದ ಗೊಂಚಲಿನಲ್ಲೂ ಅದರ ಕೀ ಸಿಕ್ಕಲಿಲ್ಲ.
ಸರಿ , ಶಶಾಂಕ್ ಬರಲಿ ನೋಡೋಣ ಎಂದು ಇಬ್ಬರೂ ಅಲ್ಲಿಗೆ ಬಿಟ್ಟರು.
ಸಂಜೆ ಶಶಾಂಕ್ ಬಂದಮೇಲೆ ಕೇಳಿದಾಗ ಅವನಿಗೂ ಗೊತ್ತಿರಲಿಲ್ಲ.
"ಒಂದು ಕೆಲಸ ಮಾಡು ಶಶಾಂಕ್ , ನಾಳೆ ಆ ಮುನಿಯಪ್ಪ ಇದಾನಲ್ಲ ಬೀಗದಂಗಡಿ ಇದೆ ನೋಡು ಅವನದು , ಅವನ್ನ ಬರೋಕೆ ಹೇಳು. ಅವನು ತೆಗಿತಾನೆ. ಆಮೇಲೆ ಅದಕ್ಕೆ ಬೇರೆ ಬೀಗ ಹಾಕ್ಸಿದ್ರಾಯ್ತು. "
"ಸರಿ. ಆದ್ರೆ , ನಾಳೆ ಆಗತ್ತೋ ಇಲ್ವೋ ಸ್ವಲ್ಪ ಕೆಲಸ ಜಾಸ್ತಿ ಇದೆ. ಶನಿವಾರ ನೋಡೋಣ. "
"ಶಶಾಂಕ್, ಶನಿವಾರ ಅಂದ್ರೆ ಇನ್ನೂ ನಾಲ್ಕು ದಿನ ಕಣೋ ."
"ಅಮ್ಮಾ, ಏನಿದೆ ಅರ್ಜೆಂಟ್ ಈಗ ? ಇಷ್ಟು ದಿನ ಆ ಕಡೆ ನೋಡಿಲ್ಲ ಇನ್ನೊಂದ್ ನಾಲ್ಕು ದಿನ ತಾನೇ? "
"ಹಾಗಲ್ಲ ಕಣೋ , ನಂಗೆ ತಲೇಲಿ ಒಂದು ವಿಷಯ ಕೂತ್ರೆ ಕೊರೆಯೋಕೆ ಶುರುವಾಗತ್ತೆ . ಗೊತ್ತಲ್ವ ನಿಂಗೂ ?"
ರಶ್ಮಿ ಸಹಾಯಕ್ಕೆ ಬಂದಳು. " ಒಂದ್ ಕೆಲಸ ಮಾಡು ಶಶಾಂಕ್ , ಆಫೀಸ್ ಗೆ ಹೋಗೋವಾಗ ಅವನಿಗೆ ಹೇಳ್ಬಿಟ್ಟು ಹೋಗು ಹೇಗೂ ನಾನು ಇದೀನಲ್ಲ ಮನೇಲಿ ? ಅವನು ಬಂದು ಓಪನ್ ಮಾಡ್ಕೊಟ್ಟು ಹೋಗ್ಲಿ. ಅತ್ತೆಗೂ ಸಮಾಧಾನ “
"ಸರಿ ಬಿಡು . ಇಬ್ರೂ ಸೇರ್ಕೊಂಡ ಮೇಲೆ ನಾನೇನು ಮಾಡೋದು . ಹೇಳಿ ಹೋಗ್ತೀನಿ "
ಮರುದಿನ ಮಧ್ಯಾನದ ಹೊತ್ತಿಗೆ ಮುನಿಯಪ್ಪ ಬಂದ. ಎರಡೇ ನಿಮಿಷಕ್ಕೆ ಬೀಗ ತೆಗೆದು ಕೊಟ್ಟ. ಅವನಿಗೆ ಜಗುಲಿಯಲ್ಲಿ ಕಾಯಲು ಹೇಳಿ ರಶ್ಮಿ ದುಡ್ಡು ತರಲು ಹೋದಾಗ, ಜಾಹ್ನವಿ ಲಾಕರ್ ತೆರೆದು ಒಳಗೆ ಏನೇನಿದೆ ಎಂದು ಆತುರದಿಂದ ನೋಡಿದರು. ಮೂಲೆಯವರೆಗೂ ಕೈ ಹಾಕಿ ನೋಡಿದರು. ಕೈಗೆ ಸಿಕ್ಕ ಕಾಗದ ಪತ್ರ ಎಲ್ಲವನ್ನೂ ನೋಡಿ ಒಮ್ಮೆ ಸಮಾಧಾನದ ಉಸಿರು ಬಿಟ್ಟರು .
ಅಷ್ಟರಲ್ಲಿ ರಶ್ಮಿ ಒಳಬಂದಳು
"ಏನಾದ್ರೂ ಸಿಕ್ತಾ ಅತ್ತೆ ? "
" ಕೆಲವು ಮುಗಿದು ಹೋದ ಇನ್ಶುರನ್ಸ್ ನ ಕಾಗದ ಪತ್ರಗಳು , ಪೋಸ್ಟ್ ಆಫೀಸಿನಲ್ಲಿ ಇಟ್ಟ ಡಿಪಾಸಿಟ್ ಒಂದರ ಕಾಗದ ಇದೆ. ಮತ್ತೆ ನೋಡು ಇದೊಂದಿತ್ತು " ಎಂದು ಕವರ್ ಒಂದನ್ನು ಮುಂದೆ ಹಿಡಿದರು .
ತೆರೆದು ನೋಡಿದ ರಶ್ಮಿ “ ಅತ್ತೆ ಇದರಲ್ಲಿ ದುಡ್ಡಿದೆ “ . ಎಣಿಸಿದಳು. "ಅರವತ್ತು ಸಾವಿರ ಇದೆ ಅತ್ತೆ. ತೊಗೊಳಿ " ಎಂದು ಕೈಗಿಟ್ಟಳು .
"ನನಗೇಕೆ ರಶ್ಮಿ ? ನಿನ್ನತ್ರ ಇರಲಿ "
"ಅತ್ತೆ, ಇದು ಮಾವ ಇಟ್ಟ ದುಡ್ಡು. ನಿಮಗೆ ಸೇರಬೇಕು. ಇಟ್ಟುಕೊಳ್ಳಿ . ನಂಗೆ ಬೇಕಾದ್ರೆ ನಾನೇ ಕೇಳ್ತೀನಿ ."
ಈ ಘಟನೆ ಆಗಿ ಸುಮಾರು 4 - 5 ದಿನಕ್ಕೆ ಶಶಿ ಆಂಟಿ ಬಂದಿದ್ದು . ಅವರು ಹೋದ ಮೇಲಿಂದ ಅತ್ತೆ ಹೀಗೆ ಆಡ್ತಾ ಇರೋದು . ಎಂದು ರಶ್ಮಿ ನೆನಪಿಸಿಕೊಂಡಳು. ಆದರೆ ಯಾಕಿರಬಹುದು ಅಂತ ಮಾತ್ರ ಅವಳಿಗೆ ಹೊಳೀತಾ ಇಲ್ಲ .
ಅವರು ಏನಾದ್ರೂ ಅಂದಿರಬಹುದಾ ? ಅತ್ತೆಗೆ ಅದರಿಂದ ಬೇಜಾರಾಗಿರಬಹುದ? ಇಲ್ಲ, ಅದು ಸಾಧ್ಯವಿಲ್ಲ. ಅತ್ತೆಗೆ ಅವರು ಬೆಸ್ಟ್ ಫ್ರೆಂಡ್. ಅವರು ತಮ್ಮ ಗೆಳತಿಗೆ ಬೇಸರವಾಗೋ ತರ ಏನೂ ಮಾತಾಡೋಲ್ಲ. ಹಾಗಿದ್ರೆ ಇನ್ನೆನಿರ ಬಹುದು? ರಶ್ಮಿಗೆ ಇದು ಯಕ್ಷ ಪ್ರಶ್ನೆಯಂತಾಯಿತು .
ಹೀಗಿರೋವಾಗ ಎರಡು ಮೂರು ದಿನದ ನಂತರ ಕೆಲಸದ ವಿಜಯಾ
“ ಅಕ್ಕಾ , ದೊಡ್ದಮ್ಮಾರು ಊರಿಗೆನಾದ್ರೂ ಹೋಗ್ತಾರೆನಕ್ಕ ?" ಅಂತ ಕೇಳಿದ್ಲು .
"ಯಾಕೆ ? ಹಿಂಗ್ಯಾಕೆ ಕೇಳ್ತಿಯೇ ? "
"ಅಯ್ಯೋ , ಏನಿಲ್ಲಕ್ಕ , ಇವತ್ತು ರೂಂ ಕ್ಲೀನ್ ಮಾಡೋವಾಗ ಮೇಲಿಂದ ಆ ದೊಡ್ಡ ಬ್ಯಾಗ್ ಮತ್ತೆ ಸೂಟ್ ಕೇಸ್ ತೆಕ್ಕೊದು ಅಂತ ಕೆಳಗೆ ಇಳಿಸ್ಕಂದ್ರು . ಯಾಕ್ರಮ್ಮಾ ಅಂತ ಕೇಳ್ದೆ . ಬಟ್ಟೆ ತುಂಬಿಡಬೇಕು ಕಣೆ ಅಂತ ಅಂದ್ರು . "
"ಹೇಳಿದಾರಲ್ಲ ಮತ್ತೆ ? ಇನ್ನೇನು ಊರಿಗೆ ಹೋಗ್ತಾರಾ ಅಂತ ನನ್ನತ್ರ ಕೇಳೋದು ನೀನು ? "
ಹಾಗೆಂದು ವಿಜಯಾಳ ಬಾಯಿ ಮುಚ್ಚಿಸಿದರೂ ರಶ್ಮಿಗೆ ಇದು ಹೊಸ ಹುಳ ಬಿಟ್ಟಂತೆ ಆಯ್ತು.
ರಾತ್ರಿ ಮತ್ತೆ ಶಶಾಂಕ್ ಗೆ ವರದಿ ಮಾಡಿದಳು.
“ ಶಶಾಂಕ್ , ಏನಾಗ್ತಾ ಇದೆ ಅಂತ ಗೊತಾಗ್ತಿಲ್ಲ . ಈಗ ಬ್ಯಾಗ್ , ಸೂಟ್ ಕೇಸ್ ಎಲ್ಲ ಯಾಕೆ ತೆಗೆಸಿದರು ? “
"ನೋಡೋಣ ಇರು . ಅವಳಾಗಿ ಏನಾದ್ರೂ ಹೇಳ್ತಾಳಾ ಅಂತ . ಇಲ್ಲಾ ಅಂದ್ರೆ ನಾನೇ ಕೇಳ್ತೀನಿ ಆಯ್ತಾ? "
ಮರುದಿನ ಭಾನುವಾರ . ಮಧ್ಯಾಹ್ನದ ನಿದ್ದೆ ಮುಗಿಸಿಡ ಶಶಾಂಕ್ ರೂಮಿಂದ ಹೊರಗೆ ಬಂದ.. ಡೈನಿಂಗ್ ಟೇಬಲ್ ಮೇಲೆ ಅದಾಗಲೇ ಕುರುಕಲು ತಿಂಡಿ ಯ ಪ್ಲೇಟ್ ಬಂದಾಗಿತ್ತು. ಅವನನ್ನು ನೋಡಿ ರಶ್ಮಿ “ ಅತ್ತೇ , ನೀವು ಬನ್ನಿ ಕಾಫಿಗೆ “ ಎಂದು ಕರೆದು ಕಾಫಿ ತರಲು ಒಳಗೆ ಹೋದಳು .
ಮಕ್ಕಳು ಅದಾಗಲೇ ಪಕ್ಕದ ಮನೆಯ ಮಕ್ಕಳ ಜೊತೆ ಆಡಲು ಹೋಗಿಯಾಗಿತ್ತು.
ಕಾಫಿ ಕುಡಿಯುತ್ತಾ ಜಾಹ್ನವಿ ಹೇಳಿದರು
“ ಶಶಾಂಕ, ನಾನು ಸ್ವಲ್ಪ ದಿನ ಎಲ್ಲಾದರೂ ಹೋಗೋಣ ಅಂದ್ಕೊಂಡಿದೀನಿ “
ಶಶಾಂಕ್ ಮತ್ತು ರಶ್ಮಿ ಆಶ್ಚರ್ಯದಿಂದ ಒಬ್ಬರನ್ನೊಬ್ಬರು ನೋಡಿದರು. ಅಂದ್ರೆ ಊಹೆ ಪೂರ್ತಿ ತಪ್ಪಿಲ್ಲ ! ಆದರೆ, ತಮ್ಮ ಹಳ್ಳಿ , ಊರು ಅಂತೆಲ್ಲ ಈಗ ಏನೂ ಉಳಿದೇ ಇಲ್ಲ . ಇನ್ನೆಲ್ಲಿ ಹೋಗೋದು ಇವರು ? ಅದೂ ಈಗ ?
"ಅಮ್ಮಾ, ಇನ್ನೂ ನಾಲ್ಕೇ ತಿಂಗಳು ಆಗಿರೋದು…. "
"ಅಂದ್ರೆ ? "
"ಅದೂ, ಜನ ಸುಮ್ನೆ ಆಡ್ಕೊತಾರೆ ಅಂತ .."
"ಊರಿಗೆಲ್ಲ ಡಂಗುರ ಸಾರಬೇಕಿಲ್ಲ ಕಣೋ "
"ಹಾಗಲ್ಲಮ್ಮ, ಅಷ್ಟಕ್ಕೂ , ನಂಗೆ ಈಗ ರಜೆ ಸಿಕ್ಕಲ್ಲ ನಿನ್ನ ಕರ್ಕೊಂಡು ಹೋಗೋಕೆ. ಮಕ್ಕಳಿಗೆ ಸ್ಕೂಲ್ ಸೊ, ರಶ್ಮಿ ಬರೋಕಾಗಲ್ಲ . "
"ನೀವು ಕರ್ಕೊಂಡು ಹೋಗಿ ಅಂತ ಹೇಳ್ತಿಲ್ಲ ಕಣೋ . ನಾನು ಹೋಗ್ಬರ್ತೀನಿ ಅಂದೆ."
"ವರ್ಷ ಕಳೆಯೋದ್ರೊಳಗೆ ಯಾತ್ರೆ ಅಂತ ಹೇಗಮ್ಮ ಹೋಗ್ತೀಯಾ? ಅಷ್ಟಕ್ಕೂ .. ಈಗ ಎಲ್ಲಿಗೆ ಹೋಗ್ಬೇಕು ಅಂತ ? ಒಳ್ಳೆ ಟ್ರಾವೆಲ್ಸ್ ನ ಹುಡುಕ್ತೀನಿ ಸ್ವಲ್ಪ ದಿನ ತಡೆಯಮ್ಮ .. "
ಜಾಹ್ನವಿ ಆಶ್ಚರ್ಯದಿಂದ ಎಂಬಂತೆ ಮಗನ ಮುಖವನ್ನೇ ನೋಡಿದರು .
"ಅಲ್ಲ ಕಣೋ , ನಾನು ಹೋಗ್ಬೇಕು ಅಂದ ಕೂಡ್ಲೇ ಯಾತ್ರೆಗೆ ಹೋಗೋದು ಅಂತ ನೀ ಹೇಗೆ ಡಿಸೈಡ್ ಮಾಡಿದ್ಯೋ ? "
"ಅಂದ್ರೆ ? ಅಮ್ಮಾ , ಒಗಟಾಗಿ ಮಾತಾಡ್ಬೇಡ. ಸರಿ, ಈಗ ನೀನೇ ಹೇಳು ಎಲ್ಲಿಗೆ ಹೋಗ್ಬೇಕು ಅಂದ್ಕೊಂಡಿದೀಯಾ? " ಶಶಾಂಕ್ ದೀರ್ಘ ಉಸಿರೆಳೆದುಕೊಂಡು ಕೇಳಿದ.
" ಸಿಂಗಾಪುರ್ ! "
ಗಂಡ ಹೆಂಡತಿ ಇಬ್ಬರೂ ಅವಾಕ್ಕಾದರು .
" ಏನ್ ತಮಾಷೆನಮ್ಮ ಇದು ? " ಶಶಾಂಕ್ ಈಗ ಸ್ವಲ್ಪ ಬೇಸರದ ದನಿಯಲ್ಲಿ ಹೇಳಿದ. ರಶ್ಮಿ ಅತ್ತೆಯ ಮುಖವನ್ನೇ ನೋಡುತ್ತಾ ಕುಳಿತಿದ್ದಳು ನಂಬಲಾರದಂತೆ .
"ತಮಾಷೆ ಅಲ್ಲ ಕಣೋ . ನಿಜಕ್ಕೂ ಸಿಂಗಾಪುರಕ್ಕೆ ಹೋಗ್ಬೇಕು ನಂಗೆ . "
" ಏನ್ ಹೇಳ್ತಿದೀಯ ಅಮ್ಮ , ಹುಶಾರಿದೀಯ ? ಅಪ್ಪ ಸತ್ತು ನಾಲ್ಕು ತಿಂಗಳ ಕೂಡ ಆಗ್ಲಿಲ್ಲ . ಬೇರೆ ಯಾರೋ ಆಗಿದ್ರೆ ಬೇಜಾರಿಂದ ಮನೇಲೆ ಕೂತಿರೋರು , ಇಲ್ಲ ಹೋಗೋದಿದ್ರೂ ಯಾವ್ದೋ ಯಾತ್ರಾ ಸ್ಥಳಕ್ಕೆ ಹೋಗೋರು . ನೀನು ನೋಡಿದ್ರೆ ಸಿಂಗಾಪುರ್ ಸುತ್ತಾಡೋಕೆ ಹೋಗ್ಬೇಕು ಅಂತೀಯ? ಏನಮ್ಮ ಇದು ? ಅಷ್ಟಕ್ಕೂ ಅದೇನು ಪಕ್ಕದ ಊರಾ ? ಪಾಸ್ಪೋರ್ಟ್ , ವೀಸಾ ಎಲ್ಲ ಬೇಕು . ನಂಗೆ ರಜೆ ಇಲ್ಲ ಅಂತ ಆಗ್ಲೇ ಹೇಳ್ದೆ. ಅಲ್ಲೇನು ನೆಂಟರ ಮನೆ ಇದ್ಯಾ ? ಅಲ್ಲದೆ ಖರ್ಚು ? "ಶಶಾಂಕ್ ಸಿಡುಕಿದ .
"ಪಾಸ್ ಪೋರ್ಟ್, ಲಂಡನ್ ಲ್ಲಿ ನಿಮ್ಮನೆಗೆ ಬರೋವಾಗ ಮಾಡ್ಸಿದ್ವಲ್ಲ ? ಅದು ಅಷ್ಟು ದಿನ ರೂಮೆಲ್ಲ ಹುಡುಕಿದರೂ ಸಿಕ್ಕಿರಲಿಲ್ಲ. ಅಂತೂ ಅವತ್ತು ನಿಮ್ಮಪ್ಪನ ಲಾಕರ್ ಲ್ಲಿ ಸಿಕ್ತು . ಇನ್ನೂ ವ್ಯಾಲಿಡ್ ಇದೆ. ವೀಸಾ , ಫ್ಲೈಟ್ , ಹೋಟೆಲ್ ಯಾವುದರ ಬಗ್ಗೆನೂ ನೀನು ಯೋಚನೆ ಮಾಡಬೇಡ. ಎಲ್ಲ ವ್ಯವಸ್ಥೇನೂ ಆಗಿದೆ. ನೀನು ಬರೋ ಅಗತ್ಯ ಕೂಡ ಇಲ್ಲ. ನಾನು, ಶಶಿ ಹೋಗ್ತಿದೀವಿ. ಅವಳು ಎಲ್ಲ ನೋಡ್ಕೊಂಡಿದಾಳೆ. ಟಿಕೆಟ್ ಕೂಡ ಆಗತ್ತೆ ಇನ್ನೆರಡು ದಿನಕ್ಕೆ. ಅಷ್ಟೇ ಅಲ್ಲ , ನೀನು ದುಡ್ಡಿನ ಬಗ್ಗೆ ಕೂಡ ಯೋಚನೆ ಮಾಡಬೇಡ. ನನ್ನತ್ರ ಇದೆ ." ಶಾಂತವಾಗಿ ಹೇಳಿದಳು ಜಾಹ್ನವಿ .
"ಅಂದ್ರೆ ? ಎಲ್ಲ ತಯಾರಿನೂ ಮಾಡ್ಕೊಂಡ್ ಆಗಿದ್ಯಾ? ಏನಾಗಿದೆ ಅಮ್ಮ ನಿಂಗೆ? ಏನಿದು ಹುಚ್ಚಾಟ ? "
" ಅಲ್ಲ ಕಣೋ , ಇನ್ನು ಅಪ್ಪ ಸತ್ತು ಒಂದು ವರ್ಷನೂ ಆಗಿಲ್ಲ ಅನ್ನೋದು ಅಥವಾ ಯಾತ್ರೆಗೆ ಹೋಗೋದು ಬಿಟ್ಟು ಸುತ್ತೋಕೆ ಹೋಗ್ತೀಯ ಅಂದ್ಯಲ್ಲ … " ಒಂದು ದೀರ್ಘ ಉಸಿರೆಳೆದು ಕೊಂಡಳು ಜಾಹ್ನವಿ .
" ಈಗ ನಾನು ಹೇಳೋದು ಸರಿಯಾಗಿ ಕೇಳು . ನಾನು ದುಃಖ ಮರೀಬೇಕು ಅಂತ ಹೋಗೊದಾಗಿದ್ರೆ , ಯಾವುದೋ ತೀರ್ಥ ಕ್ಷೇತ್ರಕ್ಕೆ ಹೋಗಿ ಧ್ಯಾನ ಮಾಡಿ, ಪೂಜೆ ಮಾಡಿ ಸಮಾಧಾನ ಮಾಡಿಕೊಳ್ಳೋಕೆ ಪ್ರಯತ್ನ ಮಾಡ್ತಿದ್ದೆ. ಆದರೆ ಹಾಗಲ್ಲ
ನನಗೆ ಒಂಥರಾ ನನ್ನ ಬಿಡುಗಡೆ ನ ಸೆಲೆಬ್ರೇಟ್ ಮಾಡ ಬೇಕಾಗಿದೆ . ಸಿಂಗಪುರಕ್ಕೆ ಹೋಗ್ಬೇಕು ಅನ್ನೋದು ನನ್ನ ಎಷ್ಟೋ ವರ್ಷಗಳ ಕನಸು . ನಾನು ಮತ್ತೆ ಮತ್ತೆ ಅಲ್ಲಿಗೆ ಹೋಗೋ ಮಾತಾಡ್ತಿದ್ದೆ ಅಂತ ನಿಮ್ಮಪ್ಪ ನನ್ನಿಂದ ಪಾಸ್ ಪೋರ್ಟ್ ಕಸಿದು ಇಟ್ಗೊಂಡಿದ್ರು . "
ಮಗ ಸೊಸೆ ಇಬ್ರೂ ಆಶ್ಚರ್ಯದಿಂದ ಅಮ್ಮನ ಮುಖವನ್ನೇ ನೋಡ್ತಾ ನಿಂತರು .
"ಏನಮ್ಮ ನೀನು ? ಬಿಡುಗಡೆ ಅಂತೆ? ಯಾರಿಂದ? ಯಾವ ಜೈಲಿನಲ್ಲಿ ಇಟ್ಟಿದ್ರು ನಿನ್ನ ? ಹುಷಾರಾಗಿ ಇದೀಯಾ ಅಮ್ಮ ? ಏನೇನೋ ಮಾತಾಡ್ತಾ ಇದೀಯಲ್ಲ ? ಅಪ್ಪ ಸತ್ತು ಇನ್ನು ಸರಿಯಾಗಿ ನಾಲ್ಕು ತಿಂಗಳು ಕೂಡ ಆಗಿಲ್ಲ ನೀನು ಸುತ್ತೋಕೆ ಹೋಗ್ತೀನಿ ಅಂತೀಯಲ್ಲ ? ಯಾರು ಏನಂತಾರೆ ಅಂತ ಜ್ಞಾನ ಬೇಡವೆನಮ್ಮ ? "
"ಯಾರು ಏನಂತಾರೆ ಅಂತ ಯೋಚ್ನೆ ಮಾಡ್ತಾ ನನ್ನ ಜೀವನಾ ನೆ ಕಳೆದುಹೋಯ್ತು . ಬೇರೆಯವರಿಗೊಸ್ಕರ ನಮ್ಮ ಕನಸುಗಳನ್ನು ಎಷ್ಟು ದಿನ ಅಂತ ಬಚ್ಚಿಡಬೇಕು? ಅಷ್ಟಕ್ಕೂ ಯಾಕೆ ಬಚ್ಚಿಡಬೇಕು? ಹೇಳೋರು ನಮ್ಮ ಕಷ್ಟಕ್ಕೆ ಆಗ್ತಾರ?
ಅಲ್ಲ ಕಣೋ. ನೀನು ಮನೆಗೆ ವಾಪಸ್ ಬಂದು ಎಷ್ಟು ಸಮಯ ಆಯ್ತೋ ? ಪೂರ್ತಿ ಒಂದು ವರ್ಷ ಕೂಡ ಆಗಿಲ್ಲ. ಅದೂ ನಿಮ್ಮಪ್ಪನಿಗೆ ತೀರಾ ಹುಷಾರಿಲ್ಲ ನಂಗೆ ಒಬ್ಬಳಿಗೆ ಕಷ್ಟ ಆಗತ್ತೆ ನೋಡ್ಕೊಳೋದು ಅಂತ ಆದಾಗ ಮನೆಗೆ ವಾಪಸ್ ಬಂದೆ. ನೀನು ಮನೆ ಬಿಟ್ಟು ಎಷ್ಟು ವರ್ಷ ಆಯ್ತು ಹೇಳು ? ಪಿಯುಸಿ ಮುಗ್ಸಿ ಓದೋಕೆ ಹೊರಗೆ ಹೋದೊನು ಸರಿಯಾಗಿ ಮನೇಲಿ ಉಳಿಯೋಕೆ ಬಂದಿದ್ದು ಈಗ ತಾನೆ? ಅಂದ್ರೆ ಹೆಚ್ಚು ಕಮ್ಮಿ 20- 22 ವರ್ಷಗಳು . ಅಲ್ವಾ ? "
" ಅದಕ್ಕೂ ಇದಕ್ಕೂ ಏನಮ್ಮ ಸಂಬಂಧ ? "
" ಇದೆ ಕಣೋ . ಈ ಇಪ್ಪತ್ತೆರಡು ವರ್ಷಗಳಲ್ಲಿ ನನ್ನ ಜೀವನ ಹೇಗಿತ್ತು ಅಂತ ಯಾವಾಗದ್ರು ಸರಿಯಾಗಿ ಗಮನಿಸಿದ್ಯಾ ? ನಿನ್ ತಪ್ಪಿಲ್ಲ ಬಿಡು . ಕೆಲವು ವಾರಗಳ ರಜೆಗೆ ಬಂದಾಗ ಎಲ್ಲವೂ ಸರಿಯಾಗೇ ಇದ್ದಂಗೆ ಕಾಣಿಸತ್ತೆ. ಚಿಕ್ಕ ಪುಟ್ಟ ಬದಲಾವಣೆಗಳು ಕಂಡರೂ ಆ ಬಗ್ಗೆ ಯಾರೂ ಅಷ್ಟಾಗಿ ತಲೆ ಕೆಡಿಸ್ಕೊಳೋದಿಲ್ಲ . ನಾಲ್ಕು ದಿನ ಖುಷಿಯಾಗಿ ಇದ್ದು ಹೋದರಾಯ್ತು ಅಂದ್ಕೋತಾರೆ.
ನಿಂಗಾಗಿದ್ದೂ ಅದೇ . ನಿನ್ನಪ್ಪ ಮತ್ತು ನನ್ನ ನಡುವಿನ ಅಂತರ ಹೆಚ್ಚಾಗಿದ್ದು ನಿನ್ ಕಣ್ಣಿಗೆ ಯಾವತ್ತೂ ಬೀಳಲಿಲ್ಲ. ಅಥವಾ ನಾನು ಅದನ್ನ ಮರೆ ಮಾಚ್ತಾ ಇದ್ದೆ. ಆದ್ರೆ ನಾನು ಅನುಭವಿಸಿದ ನರಕ ನನಗೊಬ್ಬಳಿಗೆ ಗೊತ್ತು . "
" ಅಮ್ಮಾ, ಅಪ್ಪ ಈಗ ಇಲ್ಲ ಅಂತ ಏನೇನೋ ಮಾತಾಡ್ಬೇಡ. ಅಪ್ಪ ಯಾವತ್ತೂ ನಿನ್ನ ಮಿಸ್ ಟ್ರೀಟ್ ಮಾಡಿದ್ದು ನೋಡಿಲ್ಲ ನಾನು .ಎಲ್ಲೇ ಹೋದ್ರೂ ಯಾವಾಗಲೂ ಜೊತೇಲೆ ಹೋಗ್ತಾ ಇದ್ರಿ . ಅಪ್ಪಂಗೆ ಏನಿಷ್ಟ ಅಂತ ಅದನ್ನ ನೀನು ಮಾಡ್ತಾ ಇದ್ದೆ . ಅದೆಲ್ಲ ನೋಡಿ ನನಗೆಷ್ಟು ಖುಷಿ ಆಗ್ತಿತ್ತು ಗೊತ್ತ ನಿಂಗೆ? ಅಪ್ಪ ಒಂದಿನ ನಿಂಗೆ ಜೋರಾಗಿ ಒಂದು ಮಾತು ಹೇಳಿದ್ದು ನಾನು ಕೇಳಿಲ್ಲ. ಅಂಥಾದ್ರಲ್ಲಿ ನೀನು ಹೀಗೆ ಹೇಳ್ತೀಯಲ್ಲಮ್ಮ ? "
" ಹ್ಮ್, ಎಷ್ಟು ವಿಚಿತ್ರ ಆಲ್ವಾ? ಸ್ಟೇಜ್ ಮೇಲೆ ರಾಮಂದೋ, ಬುದ್ಧಂದೋ ಪಾತ್ರ ಮಾಡ್ತಿರೋವ್ನು ಪರದೆಯ ಹಿಂದೆ ಮೇಕಪ್ ರೂಂ ನಲ್ಲಿ ಸಿಗರೇಟ್ ಅಥ್ವಾ ಬೀಡಿ ಸೇದಿರಬಹುದು ಅಂದ್ರೆ ನಾವೂ ನಂಬೋಕೆ ತಯಾರಿರಲ್ಲ .ನಂಬೋದು ತಮ್ಮೆದುರು ಏನು ಕಾಣತ್ತೋ ಅದನ್ನ ಮಾತ್ರ . .ಕೇವಲ ಹೊಡೆದು ಬಯ್ದು ಮಾಡಿದ್ರೆ ಮಾತ್ರ ಹಿಂಸೆ ಕೊಟ್ಟಂಗೆ ಅಂತ ಯಾಕೆ ಅಂದ್ಕೋತಾರೆ ಎಲ್ರೂ ? ಜೋರಾಗಿ ಬಯ್ದೇನೂ ಬರೀ ಮೆಲು ಮಾತಲ್ಲೇ ನೋವು ಕೊಡಬಹುದು ಅನ್ನೋದು ಗೊತ್ತ ನಿಂಗೆ? ಕೈ ಎತ್ತದೇನೂ ಮನಸಿನ ಮೇಲೆ ಎಂಥಾ ಗಾಯ ಮಾಡಬಹುದು ಅನ್ನೋದು ಗೊತ್ತೇನೋ ನಿಂಗೆ ? ಎಲ್ಲರೆದುರು ಶಾಂತವಾಗಿದ್ದು ಒಳ್ಳೆತನದ ಮುಖವಾಡ ಹಾಕಿ ಹಿಂದಿಂದ ಹೇಗೆ ಚುಚ್ಚಿ ಚುಚ್ಚಿ ಚಿತ್ರಹಿಂಸೆ ಕೊಡ ಬಹುದು ಅನ್ನೋದು ಗೊತ್ತ ನಿಂಗೆ? ಇದೆಲ್ಲವನ್ನೂ ಇನ್ನೊಬ್ಬರಿಗೆ, ಅಷ್ಟೇನು ಹೆತ್ತ ಮಗನಿಗೆ ಗೊತ್ತಾಗದೆ ಇರೋ ತರ ಮುಚ್ಚಿಟ್ಟು ಬದುಕೋ ಹಿಂಸೆ ಹೇಗಿರತ್ತೆ ಗೊತ್ತಾ ನಿಂಗೆ?
ಈಗ ಇವೆಲ್ಲವುದರಿಂದ ನಂಗೆ ಬಿಡುಗಡೆ ಸಿಕ್ಕಿದದಂತಲ್ವಾ ? ಅದನ್ನ ಸೆಲೆಬ್ರೇಟ್ ಮಾಡೋದ್ರಲ್ಲಿ ಏನೂ ತಪ್ಪಿಲ್ಲ. ನನ್ನ ಗಂಡ ಅನ್ನೋ ಅಭಿಮಾನ -ಪ್ರೀತಿ ಎಲ್ಲ ಸುಟ್ಟು ಯಾವ್ದೋ ಕಾಲ ಆಗೋಗಿದೆ. ಜೊತೇಲಿ ಒಂದೇ ಮನೇಲಿ , ಉಸಿರು ಕಟ್ಟಿದಂತೆ ಆದ್ರೂ ಒಟ್ಟಿಗೆ ಬದುಕಿದ್ದು ಕೇವಲ ಮದ್ವೆ ಆಗಿದಿನಲ್ಲ ಅನ್ನೋ ಕಾರಣಕ್ಕಾಗಿ . ಸಮಾಜಕ್ಕೆ ಹೆದರಿಕೊಂಡು . ಬಿಟ್ಟು ಹೋಗೋ ಧೈರ್ಯ ಇರಲಿಲ್ಲ ನೋಡು ಅದಕ್ಕಾಗಿ . ಮಗನಿಗೆ ಅಪ್ಪ ಬೇಕಲ್ಲ ಅನ್ನೋದಕ್ಕಾಗಿ.
ಇನ್ನು ಅದ್ಯಾವ ಹಂಗೂ ಬೇಡ ನಂಗೆ. ಯಾರು ಏನು ಬೇಕಾದ್ರೂ ಅಂದಕೊಳ್ಳಿ. ಅವರ್ಯಾರೂ ನನ್ನ ಕಷ್ಟದಲ್ಲಿ ಜೊತೆಯಾಗಿಲ್ಲ. ನಂಜೊತೆ ಆಸರೆಯಾಗಿ ನಿಂತೊಳು ಶಶಿ ಮಾತ್ರ .
ನೆನಪಿಟ್ಕೋ ಶಶಾಂಕ್, ಒಬ್ಬ ಹೆಂಡತಿ, ನಲವತ್ತು ವರ್ಷಕ್ಕೂ ಹೆಚ್ಚು ಕಾಲ ಗಂಡ ಅನಿಸಿಕೊಂಡೋನು ಸತ್ತಿದ್ದನ್ನ ತನ್ನ ಬಿಡುಗಡೆ ಅಂತ ಸೆಲೆಬ್ರೇಟ್ ಮಾಡಬೇಕು ಅಂದುಕೊಳೋದು ಒಂಥರಾ ಅವಳು ಅವನಿಂದ ಅದೆಷ್ಟು ನೋವನ್ನ ಅನುಭವಿಸಿರಬಹುದು ಅನ್ನೋದನ್ನ ತೋರಿಸಲ್ವ ?
ಇದಕ್ಕಿಂತ ಜಾಸ್ತಿ ವಿವರಿಸಿ ಹೇಳೋದು ಸಾಧ್ಯ ಇಲ್ಲ ಕಣೋ. ನಾನು ನಿರ್ಧಾರ ಮಾಡಿ ಆಗಿದೆ. ಶಶಿ ಎಲ್ಲಾನೂ ಅರೇಂಜ್ ಮಾಡಿದ್ದಾಳೆ. ನಾವಿಬ್ರೂ ಹೋಗಿ ಬರ್ತೀವಿ.
ನೀವುಗಳು ಅರ್ಥ ಮಾಡ್ಕೋತೀರಾ ಅಂದುಕೊತೀನಿ "
ಜಾಹ್ನವಿ ನಿಧಾನವಾಗಿ ಎದ್ದು ತಮ್ಮ ರೂಮಿಗೆ ನಡೆದರು.
ಶಶಾಂಕ್ ಹಾಗೂ ರಶ್ಮಿ ನಂಬಲಾರದವರಂತೆ ಅವರನ್ನೇ ನೋಡುತ್ತಾ ಕುಳಿತಿದ್ದರು.
ಮನಸೆಂಬ ಹುಚ್ಚು ಹೊಳೆ...
ಬಚ್ಚಿಟ್ಟ ಭಾವಗಳೆ, ಮುಚ್ಚಿಟ್ಟ ನೆನಪುಗಳೆ, ಕೊಚ್ಚಿ ಹೋಗಿರಿ ಮನದ ಹುಚ್ಚು ಹೊಳೆಯೊಡನೆ..
February 23, 2024
ಬಿಡುಗಡೆ
November 24, 2023
ಸಾಗುತಿರಲಿ ಬದುಕು...
July 10, 2023
ಮೊಬೈಲ್-ಫೋಟೋ
ನನ್ನ ಹೆಂಡತಿ ಹಬ್ಬ-ಹುಣ್ಣಿಮೆ ಫಂಕ್ಷನ್ನು ಅಂತ ರೆಡಿಯಾಗತಾ ಇದ್ರೆ ನಂಗೆ ಫುಲ್ ಟೆನ್ಶನ್.
ನಿಜಕ್ಕೂ ಹೌದು ಸ್ವಾಮೀ !
ಹೊಸ ಬಟ್ಟೆ , ಆಭರಣ ತಗೊಂಡ್ರೆ ಏನು ತೊಂದರೆ ಇಲ್ಲ. ಆದರೆ ಅದೆಲ್ಲ ಹಾಕಿ ಮೇಕಪ್ ಗೀಕಪ್ ಮಾಡಿ ರೆಡಿ ಆಗ್ತಾಳಲ್ಲ ಅದೇ ಕಷ್ಟ ! ಅವಳು ರೆಡಿಯಾದ್ರೆ ನಿಂಗೇನು ಕಷ್ಟ ಅಂತ ಮೂಗು ಎಳಿಬೇಡಿ. ಹೇಳ್ತೀನಿ ಇರಿ.
ಹೊಸಾ ಬಟ್ಟೆ / ಸೀರೆ ತೊಟ್ಟು , ಚೆನ್ನಾಗಿ ಅಲಂಕಾರ ಮಾಡ್ಕೊಂಡು ರೆಡಿ ಆಗ್ತಾಳ ? (ಸುಂದರವಾಗೇ ಕಾಣ್ತಾಳೆ ಅಂತ ನಾನು ಹೇಳಿ ಬಿಡ್ತೀನಿ ) . ಏನಾದ್ರೂ ಫಂಕ್ಷನ್ ಗೆ ಹೋಗೋ ಪ್ಲಾನ್ ಇದ್ರೆ ಹೊರಡಬೇಕಾಗಿರೋ ಟೈಮ್ ಮುಗದು ಒಂದರ್ಧ ಗಂಟೆ ಆಗಿರತ್ತೆ ಆಗಲೇ . "ಆಯ್ತಾ ? ಇನ್ನೂ ಎಷ್ಟು ಹೊತ್ತು" ಅಂತ ಕೇಳೋ ಅಭ್ಯಾಸ ನಂಗಿಲ್ಲ !( ಅದೆಲ್ಲ ಬಿಟ್ಟು ಬಹಳ ಸಮಯ ಆಯ್ತು. ಅದು ಬೇರೆ ವಿಷ್ಯ ) . ನನ್ನ ಕರದ್ಲು ಅಂದ್ರೆ ರೆಡಿ ಆದರು ಅಮ್ಮಾವ್ರು, ಇನ್ನು ನಾನು ಖುರ್ಚಿಯಿಂದ ಏಳಬೇಕು ಅಂತ ಅರ್ಥ .
ಆಯ್ತಾ ?ಅಂತೂ ಹೊರಟ್ರಾ ? ಅಂತ ಕೇಳಬೇಡಿ . ಇರಿ ಇರಿ ..
ಅವಳು ಕರೆದಳು ಅಂದ್ರೆ , ಈಗ ನಾನು ಮೊಬೈಲ್ ರೆಡಿಮಾಡಿಕೊಂಡು ಹೋಗಬೇಕು ಅಂತ ಅರ್ಥ.
ಇಷ್ಟೊತ್ತಿಂದ ರೆಡಿಯಾಗಿದಾಳಲ್ಲ ಅವಳ ಫೋಟೋ ತೆಗೀಬೇಕು. ಮೇಕಪ್, ಡ್ರೆಸ್ ಎಲ್ಲ ಫ್ರೆಶ್ ಇರತ್ತೆ ನೋಡಿ ಅದಕ್ಕೇ.
ಅಲ್ಲ,ಫೋಟೋ ತೆಗೆಯೋಕೆ ನಂಗೆ ಏನೂ ಬೇಜಾರಿಲ್ಲ .ಆದರೆ ಅದು ಚೆನ್ನಾಗಿ ಬರಬೇಕು ಅಂತ ಅವಳು ಎಕ್ಸ್ ಪೆಕ್ಟ್ ಮಾಡ್ತಾಳಲ್ಲ ಅದೇ ಕಷ್ಟ !
ಅದು ಹೆಂಗೆ ತೆಗೆದರೂ ನಾನು ತೆಗೆದಿರೋ ಫೋಟೋ ಅವಳಿಗೆ ಇಷ್ಟ ಆಗಲ್ಲ. ಏನೋ ಒಂದು ಕೊರತೆ ಇದ್ದೇ ಇರುತ್ತೆ .
“ಕೈಯಿ ದಪ್ಪ ಕಾಣ್ತಿದೆ , ಈ ಆಂಗಲ್ ಇಂದ ತೆಗಿಬೇಕಿತ್ತು. ಮೂಗು ಯಾಕೆ ಇಷ್ಟು ಉದ್ದ ಕಾಣ್ತಿದೆ? ಕೂದಲು ಹರಡಿದೆ, ಹೇಳಬಾರದಾ? ಸರಿ ಅದರೂ ಮಾಡ್ಕೋತಿದ್ದೆ . ಹೊಟ್ಟೆ ದೊಡ್ಡ ಕಾಣಿಸ್ತಿದೆ ಕ್ಲಿಕ್ ಮಾಡೋವಾಗ ಹೇಳಿದ್ರೆ ಸರಿಯಾಗಿ ನಿಂತ್ಕೊತಿದ್ದೆ ” … ಹೀಗೆ ಒಟ್ನಲ್ಲಿ ನಾನು ತೆಗೆದಿರೋ ಫೋಟೋಗಳಲ್ಲಿ ಒಂದಲ್ಲ ಒಂದು ಕೊರತೆ ಕಂಡು ಅವಳಿಗೆ ಸಿಟ್ ಬರುತ್ತೆ. ನಾನು ಏನ್ ಸ್ವಾಮಿ ಮಾಡ್ಲಿ? ನನಗೇನೋ ನಾನು ತೆಗೆದಿರೋ ಎಲ್ಲಾ ಫೋಟೋಗಳೂ ಚೆನ್ನಾಗೆ ಕಾಣ್ತವೆ. ಅವಳಿಗೆ ಮಾತ್ರ ಒಂದು ಫೋಟೋ ನೂ ಇಷ್ಟ ಆಗಲ್ಲ .
ಅಲ್ಲಿಂದ ಶುರು ನೋಡಿ ..
ಅಲ್ಲಾ, ನೀವ್ ಹೇಳಿ , ನೀನು ಚೆನ್ನಾಗಿ ಫೋಟೋ ತೆಗಿಯಲ್ಲ , ನಿಂಗೆ ಫೋಟೋ ತೆಗ್ಯೋಕೆ ಬರಲ್ಲ ಅಂತೆಲ್ಲ ಹೇಳ್ತಾಳೆ . ಆದರೆ ಮತ್ತೆ ಮತ್ತೆ ನನ್ನೇ ಯಾಕೆ ಕರೀಬೇಕು ? ಫೋಟೋ ತೆಗೀತಿಯಾ ಪ್ಲೀಸ್ ..ಅಂತ. ಅದು ಸರಿನಾ?
ನನಗೂ ಬೇಜಾರಾಗಿ ಒಂದ್ಸಲ( ಧೈರ್ಯ ಮಾಡಿ) ಹೇಳಿದೆ “ ನೋಡು ನಾನು ತೆಗೆದಿದ್ದು ಹೇಗೂ ಸರಿಯಾಗಲ್ಲ . ನೀನು ಮತ್ತೆ ಸೆಲ್ಫಿ ತೆಕ್ಕೋ ಬೇಕು, ಸುಮ್ನೆ ಡಬಲ್ ಕೆಲಸ . ಇದಕ್ಕಿಂತ ನನ್ನ ಕರಿಲೇ ಬೇಡ ಫೋಟೋ ತೆಗೆಯೋಕೆ “ ಅಂದೆ .
ತಗೊಳಪ್ಪ, ಇನ್ನೊಂದು ರಾಮಾಯಣ ಶುರು ಆಯ್ತು!
“ ಇಷ್ಟು ವರ್ಷ ಆಯ್ತು ನೀನು ಫೋಟೋ ತೆಗಿತಾ . ನೀನು ತೆಗೆದಿರೋ ಫೋಟೋದಲ್ಲಿ ಏನು ಸರಿಬಂದಿಲ್ಲ ಅಂತನೂ ಎಷ್ಟು ಸಲ ಹೇಳಿದೆ . ಯಾವ ಆಂಗಲ್ ನಲ್ಲಿ ಕ್ಯಾಮೆರ ಹಿಡ್ಕೋಬೇಕು ಅಂತನೂ ತೋರ್ಸಿಕೊಟ್ಟೆ. ಇಷ್ಟಾದರೂ ನೀನು ಇನ್ನು ಕಲ್ತಿಲ್ಲಾ ! “ ಅಂತ ಸಿಟ್ಟು ಅವಳದ್ದು .
ಅಷ್ಟೇ ಅಲ್ಲ “ನನ್ ಫ್ರೆಂಡ್ಸ್ ಎಲ್ಲಾ ನೋಡು, ಎಷ್ಟು ಒಳ್ಳೆ ಫೋಟೋ ಹಾಕ್ತಾ ಇರ್ತಾರೆ ಎಫ್ ಬಿ ಮತ್ತೆ ಇನ್ಸ್ಟಾ ದಲ್ಲಿ. ಅವರ ಗಂಡಂದಿರು ತೆಗೆಯೋ ಕ್ಯಾಂಡಿಡ್ ಫೋಟೋ ಎಷ್ಟು ಚೆನ್ನಾಗಿರುತ್ತೆ ! ನೀನಾಗಿ ಯಾವಾಗದ್ರು ನನ್ನ ಫೋಟೋ ತೆಗಿದಿದಿಯಾ? ನಿಂಗೆ ನಾನೇ ದಮ್ಮಯ್ಯ ಹಾಕ ಬೇಕು ಫೋಟೋ ತೆಕ್ಕೊಡು ಅಂತ. ಎಷ್ಟು ಸಲ ಹೇಳಿ ಕೊಟ್ಟರೂ ಇನ್ನೂ ಒಂದು ಫೋಟೋ ಸರಿಯಾಗಿ ತೆಗ್ಯೋಕೆ ಕಲಿತಿಲ್ಲ. ಏನ್ ಮಾಡೋದು ಎಲ್ಲಾ ನನ್ನ ಹಣೆಬರಹ “ ಅಂತ ಮುಖ ದಪ್ಪ ಮಾಡಿಕೊಂಡು ಕಣ್ತುಂಬಿಕೊಂಡು ಧಿಮಿ ಧಿಮಿ ಅಂತ ಕಾಲು ಅಪ್ಪಳಿಸುತ್ತ ಒಳಗೆ ಹೋದ್ಲು ಅಂದ್ರೆ, ಅಲ್ಲಿಗೆ ಇನ್ನು 2 ದಿವಸ ಮನೇಲಿ ಮಾತುಕತೆ ಇಲ್ಲ ಅಂತ ನಾನು ತಿಳ್ಕೊತೀನಿ.
ಮೊನ್ನೆ ಮೊನ್ನೆ ಅಂತೂ ಹೊಸಾ ಧಮಕಿ ಸಿಕ್ಕಿದೆ . “ನೀನು ಹೀಗೇ ಕೆಟ್ಟದಾಗಿ ಫೋಟೋ ತೆಗಿತಾ ಇದ್ರೆ , ಬರೀ ಫೋಟೋ ತೆಗ್ಯೋಕೆ ಅಂತ ಒಬ್ಬನ್ನ ಫ್ರೆಂಡ್ ಮಾಡ್ಕೊಬೇಕಾಗತ್ತೆ ನೋಡು !” ಅಂತ.
ಮದುವೆ ಆದ ಹೊಸತರಲ್ಲಿ ನನ್ನತ್ರ ಕ್ಯಾಮೆರಾ ಇರಲಿಲ್ಲ. ಕ್ಯಾಮೆರಾ ಫೋನ್ ಗಳೂ ಹೆಚ್ಚಿರಲಿಲ್ಲ. ಇರೋವನ್ನ ತೊಗೊಳೋ ಕೆಪ್ಯಾಸಿಟಿ ನಮಗಿರಲಿಲ್ಲ. ಹೀಗಾಗಿ ಸ್ವಲ್ಪ ಹಾಯಾಗಿದ್ದೆ. ಇಲ್ಲ ಅಂದ್ರೆ , ಬಹುಶಃ ಹನೀಮೂನ್ ಮುಗ್ಯೋಕು ಮುಂಚೆ ಡೈವೋರ್ಸ್ ಮಾಡಿ ಬಿಡ್ತಿದ್ಲೋ ಏನೋ !
ಆಮೇಲೆ ಊರಿಗೆ ಬಂದೋಳು ನೀರಿಗೆ ಬರ್ಬೇಕಲ್ಲ ಅನ್ನೋ ತರ ನಮ್ಮನೆಗೂ ಒಂದು ಕ್ಯಾಮೆರ ಫೋನ್ ಬಂತು ಬಿಡಿ.
ಆಗ ಇದ್ದಿದ್ದು VGA ಕ್ಯಾಮೆರಾ. ಫೋಟೋ ಕ್ವಾಲಿಟಿ ಕೇಳಬಾರದು ! ಆದ್ರೂ ಭಾರೀ ಉತ್ಸಾಹದಿಂದ ( ಎಲ್ಲರೂ ಹಾಗೆ ತಾನೆ?) ಫೋಟೋ ತೆಗೆದಿದ್ದೇ ತೆಗೆದಿದ್ದು . ಅದನ್ನ ನೋಡಿ ಚೆನ್ನಾಗಿದೆ ಅಂತ ಒತ್ತಾಯದಿಂದ, ನಮ್ಮದೇ ಸಮಾಧಾನಕ್ಕೆ ಹೇಳ್ಕೋತಾ ಇದ್ವಿ . ಬೇರೆ ಕಾಮೆಂಟ್ ಹೊಡಿಯೋಕೆ , ಫೋಟೋ ಸ್ಪಷ್ಟವಾಗಿ ಕಾಣಿಸ ಬೇಕಲ್ವೆ?
ಈಗ ನೋಡಿ ಶುರುವಾಗಿದ್ದು ಪರದಾಟ ! ಅದ್ಯಾರಿಗೆ , ಯಾಕೆ ಈ ಮೊಬೈಲ್ ಲ್ಲಿ ಫೋಟೋ ತೆಗೆಯೋ ಹಾಗೆ ಅದೂ ಕ್ಯಾಮೆರಾ ಲೆವೆಲ್ ಗೆ ಫೋಟೋ ತೆಗೆಯೋ ಹಾಗೆ ಮಾಡೋ ಆಲೋಚನೆ ಬಂತೋ . ನಮ್ಮಂತೋರೆಲ್ಲ ಒದ್ದಾಡೋ ಪರಿಸ್ಥಿತಿ ತಂದುಬಿಟ್ಟ .
ಈಗೀಗ ಮೊಬೈಲ್ ಅನ್ನೋದು ಫೋನ್ ಕಿಂತ ಕ್ಯಾಮೆರಾ ಕೆಲಸ ಜಾಸ್ತಿ ಮಾಡ್ತಿದೆ ! ಪ್ರತಿ ದಿನ ಫೋನ್ ಲ್ಲಿ ಕ್ಯಾಮೆರಾ ಲೆನ್ಸಗಳ ಸಂಖ್ಯೆ, ಪಿಕ್ಸಲ್ ರೇಟ್ ಹೆಚ್ಚಾಗ್ತಾನೆ ಇದೆ. ಜೊತೆಗೆ ಬೆಲೆ ನೂ. ಬೇರೆ ಏನು ವರ್ಕ್ ಆಗತ್ತೋ ಇಲ್ವೋ ಕ್ಯಾಮೆರಾ ಅಂತೂ ಸೂಪರ್ ಆಗಿರ್ಬೇಕು ಅಂತ ಹೇಳೋರೆ ಜಾಸ್ತಿ ಆಗಿದಾರೆ. ನಮ್ಮನೆಲೂ ಅದೇ ಕೆಟಗರಿ ಬಿಡಿ!
ಇನ್ನೇನು ಈ ಸಲ ಬಹುಶಃ ಒಂದು ಕಿಡ್ನಿ ಮತ್ತೆ ಒಂದು ಕಣ್ಣು ಮಾರಾಟ ಮಾಡಿ ಫೋನ್ ತೊಗೊಳೋ ಚಾನ್ಸ್ ಇದೆ. ಫೋಟೋ ಚೆನ್ನಾಗಿ ಬರಬೇಕು ನೋಡಿ ?
ಸರಿ, ನಂಗೆ ಕರೆಯ ಬಂತು. ಹೋಗ್ಬೇಕು ಈಗ. ಇಲ್ಲ ಅಂದ್ರೆ ಕಿಡ್ನಿ ನಂದೇ ಮಾಯಾ ಆಗೋ ಚಾನ್ಸ್ ಇದೆ. ಬರ್ಲಾ?
ಪಾಶ
ಓ ಮಂಜಕ್ಕ ಆರಾಮನೆ?
ಪಾರ್ವತಕ್ಕನ ಮನೆ ಅಡುಗೆ ಮನೆಯಲ್ಲಿ ಸಾರಿನ ಪುಡಿಗೆ ಹುರಿಯುತ್ತಿದ್ದ ಮಂಜಕ್ಕ ದನಿ ಬಂದತ್ತ ನೋಡಿದಳು.
“ಅರೆ , ಶಾಂತಾ! ಆರಾಮಾ? ಈಗ 4 ಗಂಟೆ ಬಸ್ಸಿಗೆ ಬಂದ್ಯಾ? ಒಬ್ಳೇ ಬಂದ್ಯಾ? ರಾಗಣ್ಣ ನೂ ಬಂದ್ನಾ? ಕಾಫಿ ಮಾಡ್ಲಾ?”
“ಹ್ಞೂ ,ಇಬ್ರೂ ಬಂದ್ಯ . ಒಂದರ್ಧ ಅರ್ಧ ಕಪ್ ಕಾಫಿ ಮಾಡು. ಅತ್ತಿಗೆ ಎಲ್ಲಿ ?”
ಕೈಚೀಲ ಕೆಳಗಿಟ್ಟು ಕಾಲು ತೊಳೆದು ಬಂದು ಕುಳಿತ ಶಾಂತಾ ಗೆ ಕಾಫಿ ಲೋಟ ತಂದು ಕೊಟ್ಟಳು ಮಂಜಕ್ಕ.
ಬಿಸಿ ಕಾಫಿ ಕುಡಿಯುತ್ತಾ, "ಅರ್ಧ ಲೋಟ ಆದರು ಕಾಫಿ ಕುಡಿದೆ ಹೋದ್ರೆ ಒಂಥರಾ ಜಡ್ಡು ನೋಡೇ. ಅಲ್ದೇ, ನೀನು ಮನೆ ಮದ್ವೆ ತಯಾರಿ ಬಿಟ್ಟು ಇನ್ನು ಈ ಬದಿಗೆ ಇದ್ಯಲೇ ಮಂಜಕ್ಕ ?"
ಹುರಿಯುತ್ತಿದ್ದ ಮಂಜಕ್ಕ ತಲೆ ಎತ್ತದೆ ಕೇಳಿದಳು.
"ಯಾವ ಮದ್ವೇನೆ ಶಾಂತಾ?"
"ಅಯ್ಯೋ, ಎಂತ ಹೀಂಗೆ ಕೇಳ್ತೆ? ಮೊನ್ನೆ ಸಾಗರದಲ್ಲಿ ಸಂತೆ ಪೇಟೆಲಿ ನಿನ್ ತಂಗಿ ಮಾಲತಿ ಗಂಡ ತಿಮ್ಮಪ್ಪಣ್ಣ ಸಿಕ್ಕಿದ್ನಡ ಇವರಿಗೆ. ಶುಕ್ರವಾರ 12 ನೆ ತಾರೀಖು ಮಗನ ಮದ್ವೆ , ಗೋಪಾಲ ಕೃಷ್ಣ ದೇವಸ್ಥಾನದಲ್ಲಿ.ಅದೇ ತಯಾರಿ ಗಡಿಬಿಡಿಲಿ ಇದ್ದಿ ಮಾರಾಯ ಅಂತ ಹೇಳಿದ ಅಂದ್ರು ಇವ್ರು. ನಿಂಗೆ ಕರೆಯ ಬರಲ್ಯಾ? "
ಮಂಜಕ್ಕ ಒಂದು ಕ್ಷಣ ಸ್ಥಬ್ದಳಾದಳು.
ಅಷ್ಟರಲ್ಲಿ ಅಲ್ಲಿಗೆ ಬಂದ ಪಾರ್ವತಕ್ಕ ಶಾಂತಾಗೆ ಕಣ್ಣ ಸನ್ನೆಯಲ್ಲೇ ಸುಮ್ಮನಿರುವಂತೆ ಹೇಳುತ್ತಾ
"ಮಂಜಕ್ಕಾ, ಸಂಬಾರ ಪರಿಮಳ ಬರ್ತಾ ಇದ್ದು. ಕೆಳಗೆ ಇಳಿಸಿ ಬಿಡು. ಹಾಂಗೆ ಹೊರಗೆ ರಾಗಣ್ಣ ಮತ್ತೆ ಹೆಗಡೇರಿಗೆ ಕಾಫಿ ಕೊಟ್ಟಿಕ್ ಬಾ "ಎಂದಳು.
ಅವಳು ಆಚೆ ಹೋಗುತ್ತಲೇ "ಶಾಂತಾ, ಹಿಂದೆ ಮುಂದೆ ನೋಡಿ ಮಾತಾಡದು ಯಾವಾಗ್ ಕಲೀತೆ ಮಾರಾಯ್ತಿ? ಅವಳ ವಿಷಯ ಗೊತ್ತಿಲ್ಯ ನಿಂಗೆ? ಸುಮ್ನೆ ಪಾಪ ಬೇಜಾರು ಮಾಡಿಸ್ದೆ ನೋಡು."
" ಅಯ್ಯೋ ಅತ್ಗೆ, ಕೇಳಿದ್ ಮೇಲೆ ನಂಗೂ ಅನಸ್ತು . ತಪ್ಪಾಗೊತು ಹೇಳಿ. " ಶಾಂತಾ ಅಲವತ್ತುಕೊಂಡಳು .
ಖಾಲಿ ಟ್ರೇ ಹಿಡಿದು ಒಳಗೆ ಬಂದ ಮಂಜಕ್ಕ ಏನೂ ಆಗಿಲ್ಲವೆಂಬಂತೆ ಮುಂದಿನ ಕೆಲಸಕ್ಕೆ ತೊಡಗಿದಳು.
ಐದೂವರೆಯ ಹೊತ್ತಿಗೆ ಸುಮಾರಾಗಿ ಎಲ್ಲ ಕೆಲಸ ಮುಗಿಸಿದ ಮಂಜಕ್ಕ " ಪಾರ್ವತಕ್ಕಾ, ಇನ್ನೆಂತ ಮಾಡದು ಇದ್ರೆ ಹೇಳು. ಮುಗಸಿಕ್ಕೆ ಮನಿಗೆ ಹೋಗ್ತಿ. ನಾಳೆ -ನಾಡಿದ್ದು ಸಾಧ್ಯಾ ಆದ್ರೆ ಬರ್ತಿ. ಇಲ್ದೆ ಇದ್ರೆ ಮದ್ವೆಗೆ ಎರಡು ದಿನ ಇರಕಿದ್ರಿಂದ ಈ ಬದಿಗೆ ಇರ್ತಿ. " ಎಂದು ತನ್ನ ಚೀಲ ತೆಗೆದುಕೊಂಡು ಹೊರಟಳು.
" ಮಂಜಕ್ಕಾ, ಸ್ವಲ್ಪ ಹುಳಿ -ಪಲ್ಯ ತಗಂಡು ಹೋಗು . ಸಂಜಿಗೆ ಮತ್ತೆ ಅಡುಗೆ ಎಂತ ಮಾಡ್ಕ್ಯತ್ತೆ " ಎಂದು ಕರೆಯುತ್ತಿದ್ದ ಪಾರ್ವತಕ್ಕನ ದನಿ ಕಿವಿಗೆ ಬೀಳಲಿಲ್ಲವೇನೋ ಎಂಬಂತೆ ಬಿರಬಿರನೆ ಮನೆಯತ್ತ ಹೆಜ್ಜೆ ಹಾಕಿದಳು.
ಮನೆಗೆ ಬಂದು ಕೈಕಾಲು ತೊಳೆದು ದೇವರಿಗೆ ದೀಪ ಹಚ್ಚಿಟ್ಟು ಅಲ್ಲೇ ಕುಸಿದು ಕುಳಿತ ಮಂಜಕ್ಕ ಜೋರಾಗಿ ಅಳತೊಡಗಿದಳು .
“ರಾಘವೇಂದ್ರಾ , ಇದೆಂತ ಶಿಕ್ಷೆ ಕೊಡ್ತೆ ನಂಗೆ? ಇನ್ನೆಷ್ಟು ಪರೀಕ್ಷೆ ? ನೀನೇ ಗತಿ ಹೇಳಿ ನಂಬಿದ್ರೆ ಇಷ್ಟು ಮೋಸ ಮಾಡ್ತ್ಯ ನೀನು ? ಎಂತಕ್ ಪೂಜೆ ಮಾಡ್ಲಿ ನಿಂದು? ಎಂತಕ್ ಎಲ್ಲ ನಿನ್ ಮುಂದೆ ಹೇಳ್ಕ್ಯಳವು ? ನಿಂಗೆ ಈ ಬಡವೆ ಮೇಲೆ ಸ್ವಲ್ಪ ಆದ್ರೂ ಕರುಣೆ ಇದ್ದಾ?” ಎಂದು ರಾಘವೇಂದ್ರ ಸ್ವಾಮಿಯ ಫೋಟೋದೆದುರು ಬಡಬಡಿಸುತ್ತಾ ಕುಳಿತ ಮಂಜಕ್ಕನ ಕಣ್ಣಿಂದ ನೀರು ಧಾರೆಯಾಗಿ ಹರಿದು ಕೆನ್ನೆ ಕುತ್ತಿಗೆ ತೋಯಿಸುತ್ತಿತ್ತು.
ಒಂದು ಅಡುಗೆ ಮನೆ ಹಾಗೂ ಒಂದು ಜಗುಲಿಯ ಪುಟ್ಟ ಮನೆ ಮಂಜಕ್ಕನದು. ಹಿಂದೆ ಅಂಟಿಕೊಂಡಿರುವ ಬಚ್ಚಲು, ಅದಕ್ಕೆ ತಾಗಿ ಒಂದು ಓರಿ . ಸ್ವಲ್ಪ ದೂರದಲ್ಲಿ ಸಂಡಾಸು.
ಆ ಊರಿಗೆ ಬಂದಾಗಿಂದ ಮಂಜಕ್ಕ ತನ್ನ ಗಂಡನ ಜೊತೆ ಊರ ತುದಿಗಿದ್ದ ಶೇಷಣ್ಣನ ಜಾಗದಲ್ಲಿ ಒಂದು ಗುಡಿಸಲು ಕಟ್ಟಿಕೊಂಡು ಬದುಕುತ್ತಿದ್ದಳು. ಗಂಡ ನಾರಾಯಣ ಕಷ್ಟಪಟ್ಟು ದುಡಿಯುವವ. ಯಾವ ಕೆಲಸಕ್ಕೂ ಸೈ .ಹುಟ್ಟಿದಾಗಿಂದ ಬಡತನ ಬಿಟ್ಟು ಬೇರೆ ಕಾಣದ ಮಂಜಕ್ಕ ಕೂಡ ಕಮ್ಮಿಯೇನಿಲ್ಲದಂತೆ ಕೇರಿಯ ಬ್ರಾಹ್ಮಣರ ಮನೆಯಲ್ಲಿ ಚಿಕ್ಕ ಪುಟ್ಟ ಕೆಲಸ ಮಾಡಿಕೊಡುತ್ತಾ, ಹಬ್ಬ ಹುಣ್ಣಿಮೆಗಳಲ್ಲಿ , ಚಿಕ್ಕ ಪುಟ್ಟ ಕಾರ್ಯಗಳಲ್ಲಿ ಅಡುಗೆ ಕೆಲಸ ಅದೂ ಇದೂ ಸಹಾಯ ಎನ್ನುತ್ತಾ ಬದುಕಿನ ಬಂಡಿ ಎಳೆಯಲು ಕೈಜೋಡಿಸಿದ್ದಳು . ನಾರಾಯಣ ಹಾವು ಕಚ್ಚಿ ಸತ್ತಾಗ , ಮತ್ತೆ ಯಾರೂ ಇಲ್ಲದ ಮಂಜಕ್ಕನಿಗೆ , ಶೇಷಣ್ಣ, ಹೆಂಡತಿ ಪಾರ್ವತಿಯ ಕೋರಿಕೆಯ ಮೇರೆಗೆ ಮಂಜಕ್ಕನ ಗುಡಿಸಿಲಿದ್ದ ಜಾಗವನ್ನು ಅವಳ ಹೆಸರಿಗೆ ಮಾಡಿಕೊಟ್ಟು ಸರಕಾರಿ ಮನೆ ಕಟ್ಟಿಸಿ ಕೊಳ್ಳಲು, ಅಷ್ಟೇ ಅಲ್ಲದೆ ವಿಧವಾ ವೇತನ ಕೂಡ ಬರಲು ಸಹಾಯ ಮಾಡಿದ್ದರು. ಹೀಗೆ ಪಾರ್ವತಕ್ಕನ ಮೇಲಿನ ಮಂಜಕ್ಕನ ಗೌರವ ಮತ್ತಷ್ಟು ಗಟ್ಟಿಯಾಗಿತ್ತು
ಗಂಡ ಸತ್ತಾಗ ಮಂಜಕ್ಕನ ಮಗನಿಗೆ ೫-೬ ವರ್ಷವಷ್ಟೇ. ಕಣ್ಣ ಮುಂದೆ ಭವಿಷ್ಯ ಕತ್ತಲಾಗಿ ಬಿಟ್ಟಿತ್ತು . ತಾನು ಮಾಡುವ ಚಿಕ್ಕ ಪುಟ್ಟ ಕೆಲಸದಿಂದ ಎಷ್ಟು ಸಿಗುತ್ತದೆ? ಬರುತ್ತಿರುವ ವಿಧವಾ ವೇತನ ಸೇರಿಸಿದರೂ ಇಬ್ಬರ ಜೀವನ ಸಾಗಬಲ್ಲದೇ ಎಂಬ ಪ್ರಶ್ನೆ ಭೂತಾಕಾರವಾಗಿ ನಿಂತಿತ್ತು . ತಾನೇನೋ ಅರೆ ಹೊಟ್ಟೆ ಉಂಡೋ ಅದೂ ಇಲ್ಲದಾಗ ಉಪವಾಸವಾದರೂ ಇದ್ದೇನು , ಮಗನ ಗತಿಯೇನು ಎಂಬ ಯೋಚನೆ ಹೈರಾಣ ಮಾಡುತಿತ್ತು. ಬೆಳೆಯುವ ಹುಡುಗನ ಹಸಿವು ಇಂಗಿಸಬಲ್ಲೇನೆ ? ವಿದ್ಯಾಭ್ಯಾಸ, ಬಟ್ಟೆ , ಪುಸ್ತಕ ಇದಕ್ಕೆಲ್ಲ ಯಾರೆದುರು ಕೈ ಜೋಡಿಸಲಿ ಎಂದು ಕುಸಿಯುತ್ತಿದ್ದ ಮಂಜಕ್ಕನಿಗೆ ಆಗ ಬೆಳಕಾಗಿ ಬಂದವಳು ಅವಳ ತಂಗಿ ಮಾಲತಿ .
" ಅಕ್ಕಾ, ನೀ ತಪ್ಪು ತಿಳಿದೇ ಇದ್ರೆ ಒಂದು ಮಾತು. ಅಪ್ಪಿ ಇನ್ನೂ ಸಣ್ಣ. ಅವನ ವಿದ್ಯಾಭ್ಯಾಸ , ಹೊಟ್ಟೆ- ಬಟ್ಟೆ ಎಲ್ಲದೂ ನಿನ್ನತ್ರ ಸಾಧ್ಯ ಇಲ್ಲೇ. ನಂಗೆ ದೇವ್ರು ದೊಡ್ಡ ಮನೆ, ದುಡ್ಡು ಬಂಗಾರ ಎಲ್ಲಾ ಕೊಟ್ಟ. ಆದ್ರೆ ಮಕ್ಕಳನ್ನೊಂದು ಕೊಡಲ್ಲೇ . ಹೀಂಗಾಗಿ ನಾ ಹೇಳದು ಏನು ಅಂದ್ರೆ , ಅವನ್ನ ನಾ ಕರ್ಕ ಹೋಗ್ತಿ. ಅವನ್ನ ನನ್ನ ಮಗನ ಹಾಂಗೆ ಸಾಕ್ತಿ. ಅವಂಗೆ ಯಾವದೇ ಕಮ್ಮಿ ಇಲ್ದೆ ಹೋದಂಗೆ ಬೆಳಸ್ತಿ . ರಜೆ ಇದ್ದಾಗೆಲ್ಲ ಪ್ರಕಾಶ ಇಲ್ಲಿ ಬಂದು ಉಳಿಲಿ. ಏನು ನಿನ್ನ ಅಭಿಪ್ರಾಯ " ಎಂದು ಕೇಳಿದಾಗ ಮಂಜಕ್ಕನಿಗೆ ಏನು ಹೇಳಬೇಕೋ ತಿಳಿಯದ ಪರಿಸ್ಥಿತಿ.
ಇದ್ದೊಬ್ಬ ಮಗನನ್ನೂ ಕಳಿಸಿದರೆ ತಾನು ಒಬ್ಬಂಟಿಯಾಗಿ ಜೀವನ ಕಳೆಯಬೇಕೆಂಬ ನೋವು. ತನ್ನ ಜೊತೆ ಇಟ್ಟುಕೊಂಡರೆ ಅವನನ್ನು ಬೆಳೆಸುವುದು ಹೇಗೆಂಬ ಪ್ರಶ್ನೆ . ಅದನ್ನು ಆಕೆ ಹೇಳಿಯೂ ತೋರಿಸಿದಳು .
" ಮಾಲತಿ, ನೀ ಹೇಳಿದ್ದು ನಿಜಾನೆ ಆದ್ರೂ , ಪ್ರಕಾಶನ್ನೂ ಕಳಿಸಿ ಬಿಟ್ರೆ ನಾನು ಒಬ್ಬಳೇ ಇರದು ಹೆಂಗೆ ? ಅವ ಒಬ್ಬನೇ ಈಗ ನಂದು ಹೇಳಿ ಇರದು .. ನಂಗೆ ಏನು ಮಾಡದು ತಿಳಿತಾ ಇಲ್ಲೇ. "
ಕೊನೆಗೂ ಮಗನ ಭವಿಷ್ಯದ ಕನಸು ಗೆದ್ದಿತು. ಮಾಲತಿ ಪ್ರಕಾಶನನ್ನು ಕರೆದುಕೊಂಡು ಹೋದಳು .
ಮೊದ ಮೊದಲು , ಪ್ರತಿ ರಜೆಗೂ ಅಮ್ಮನನ್ನು ನೋಡಲು ಬರುತ್ತಿದ್ದ ಪ್ರಕಾಶ ದೊಡ್ದಾದಂತೆ , ಬರುವುದು ಕಮ್ಮಿ ಆಗತೊಡಗಿತು. ದೊಡ್ಡ ಕ್ಲಾಸು , ಓದುವುದು ಜಾಸ್ತಿ ಇರುತ್ತೆ ಎಂದು ಅಕ್ಕನನ್ನು ನಂಬಿಸಿದ ಮಾಲತಿ , ಚಿಕ್ಕಮ್ಮನ ಮನೆಯಲ್ಲಿ ರಾಜಕುಮಾರನಂತೆ ಏನೂ ಕೊರತೆಯಿಲ್ಲದೆ ಮುದ್ದಿನಿಂದ ಬೆಳೆಯುತ್ತಿದ್ದ ಅವನಿಗೆ, ಅಮ್ಮನ ಚಿಕ್ಕ ಮನೆಯಲ್ಲಿ ಎದ್ದು ಕಾಣುವ ಬಡತನ ಇಷ್ಟವಾಗುತ್ತಿರಲಿಲ್ಲ , ಅಮ್ಮ ಬೇರೆಯವರ ಮನೆಯಲ್ಲಿ ಕೆಲಸ ಮಾಡುವುದು ಮುಜುಗರ ಎನಿಸುತ್ತಿತ್ತು ಎನ್ನುವುದನ್ನು ಮರೆ ಮಾಚಿದಳು .
ಕಾಲೇಜು ಸೇರಿದ ಮೇಲಂತೂ ಅವನ ದರ್ಶನ ಅಪರೂಪವೇ ಆಗಿ ಕೊನೆಗೆ ಕೆಲಸಕ್ಕೆ ಸೇರಿದ್ದು ಕೂಡ ಮಾಲತಿ ಹೇಳಿದ ಮೇಲೆ ಮಂಜಕ್ಕನಿಗೆ ತಿಳಿದಿದ್ದು.
ಮಗ ನೌಕರಿ ಶುರು ಮಾಡಿದ ಮೇಲೆ ತನ್ನನ್ನು ಕರೆದೊಯ್ಯುತ್ತಾನೆ , ಅಥವಾ ತನಗೆ ಸ್ವಲ್ಪವಾದರೂ ಸಹಾಯ ಮಾಡುತ್ತಾನೆ ಎಂದು ಕನಸು ಕಾಣುತ್ತಿದ್ದ ಮಂಜಕ್ಕ ಸಂಪೂರ್ಣವಾಗಿ ನಿರಾಶಳಾದಳು . ಒಮ್ಮೆ ಮಾಲತಿಯ ಜೊತೆ ಬಂದ ಮಗ ಕಾಟಾಚಾರಕ್ಕೆ ಎಂಬಂತೆ ಎರಡು ಮಾತನಾಡಿ ಜಗುಲಿಯಲ್ಲಿ ಇದ್ದ ಒಂದೇ ಒಂದು ಖುರ್ಚಿಯ ಮೇಲೆ ಚಡಪಡಿಸುತ್ತಾ ಕುಳಿತಿದ್ದು ಅವಳ ಗಮನಕ್ಕೆ ಬಾರದಿರಲಿಲ್ಲ. ಉಳಿಯಲು ಸುತಾರಾಂ ಒಪ್ಪದೇ ಅಂದೆ ಮರಳಿ ಹೋದವನು ಮತ್ತೆ ಬಂದಿರಲಿಲ್ಲ. ಹೋಗುವ ಮೊದಲು ಬೇಡವೆಂದರೂ ತನ್ನ ಕೈಲಿ 500 ರುಪಾಯಿ ಇಟ್ಟಿದ್ದು ಕೂಡ ಮಾಲತಿಯ ಸನ್ನೆಯ ಮೇರೆಗೆ ಎನ್ನುವುದನ್ನೂ ಮಂಜಕ್ಕ ಗಮನಿಸಿದ್ದಳು .
ಇದೀಗ ಅವನ ಮದುವೆ ಎಂಬ ಸುದ್ದಿ ಕೇಳಿ ಮಂಜಕ್ಕ ನಿಗೆ ಇಷ್ಟು ವರ್ಷ ಎದೆಯಲ್ಲೇ ಬಚ್ಚಿಟ್ಟ ನೋವೆಲ್ಲ ಒಮ್ಮೆಲೇ ಉಕ್ಕಿ ಹರಿಯತೊಡಗಿತು . ಅಲ್ಲಾ , ಅವನಂತೂ ತಾನು ಅವನ ಸ್ವಂತ ಅಮ್ಮ ಎನ್ನುವುದನ್ನು ಮರೆತೇ ಬಿಟ್ಟಿದ್ದಾನೆ . ಮಾಲತಿಯಾದರೂ ಒಂದು ಮಾತು ತಿಳಿಸ ಬಹುದಿತ್ತಲ್ಲ ? ಎಷ್ಟಾದರೂ ತಾನು ಅವನನ್ನು ಹೆತ್ತಿಲ್ಲವೇ? ಮಂಜಕ್ಕನಿಗೆ ತನ್ನ ಬಡತನದ ಬಗ್ಗೆ, ಅಸಹಾಯಕತೆಯ ಬಗ್ಗೆ ಅತೀವ ದುಃಖವಾಯಿತು.
ರಾತ್ರಿ ಊಟ ಸೇರದೆ ಹಾಗೆ ಮಲಗಿದವಳಿಗೆ ನಿದ್ರೆಯೂ ಹತ್ತದೆ ಒದ್ದಾಡಿದಳು. ಮರುದಿನ ಕೂಡ ಕಣ್ಣೀರು ಹರಿಸುತ್ತ, ರಾಘವೇಂದ್ರ ಸ್ವಾಮಿಗಳ ಫೋಟೋ ಜೊತೆ ಜಗಳ ಮಾಡುತ್ತಾ , ದಿನ ಕಳೆದಳು.
ಗುರುವಾರ ಸಂಜೆ , ಏನೋ ನಿರ್ಧಾರ ಮಾಡಿ ಅಡುಗೆ ಮನೆಯ ಮೂಲೆಯಲ್ಲಿ ತನ್ನ ಇದ್ದೆರಡು ಹೊಸಾ ಸೀರೆ , ಪರ್ಸ್ ಇತ್ಯಾದಿಗಳನ್ನಿಟ್ಟಿದ್ದ ಪುಟ್ಟ ಹಳೆಯ ಕಪಾಟಿನಿಂದ ಹಳೆಯ ಗಂಟನ್ನು ತೆಗೆದಳು . ಹಾಗೆಯೇ, ಕಪಾಟಿನಲ್ಲಿ ಇದ್ದ ಒಟ್ಟು ದುಡ್ಡನ್ನು ಎಣಿಸಿ ಪರ್ಸಿಗೆ ಹಾಕಿಕೊಂಡಳು .
ಬೆಳಿಗ್ಗೆ , ಇದ್ದುದರಲ್ಲೇ ಹೊಸತಾದ ಸೀರೆಯುಟ್ಟು ಬ್ಯಾಗನ್ನು ಹೆಗಲಿಗೇರಿಸಿ ಎಂಟು ಗಂಟೆಯ ಬಸ್ ಹತ್ತಿದಳು .
ಸಾಗರದಲ್ಲಿ ಇಳಿದು ಗೋಪಾಲಕೃಷ್ಣ ದೇವಸ್ಥಾನದ ಹತ್ತಿರ ಬಂದಾಗ ಮದುವೆ ಮನೆಯ ಸಡಗರ ಕಾಣುತ್ತಿತ್ತು. ಪರಿಚಯದ ಕೆಲವರು ಮಾತನಾಡಿಸಿದರು. ಒಳಗೆ ಬಂದ ಮಂಜಕ್ಕನನ್ನು ನೋಡಿ ಮಾಲತಿಯ ಮುಖ ಬಿಳುಚಿತು . ವರಪೂಜೆಗೆ ತಯಾರಾಗಿ ಕುಳಿತಿದ್ದ ಪ್ರಕಾಶ ಕಂಡೂ ಕಾಣದಂತೆ ಗೆಳೆಯರೊಡನೆ ಮಾತನಾಡುತ್ತ ಕುಳಿತಿದ್ದ. .
“ಅಕ್ಕ, ಬಾ, 8 ಗಂಟೆ ಬಸ್ಸಿಗೆ ಬಂದ್ಯಾ ?..”
" ಹ್ಞೂ . ಅಲ್ದೇ ಮಾಲತಿ, ಒಂದು ಮಾತೂ ಹೇಳಲೆ ಕಷ್ಟ ಆತ ನಿಂಗೆ? ನೀನೇ ಬೆಳೆಸಿ ದೊಡ್ಡ ಮಾಡಿದ್ದು ನಿಜ. ಸ್ವಂತ ಮಗನಂಗೆ ಸಾಕಿದ್ದೂ ಹೌದು . ಅದ್ರ ಬಗ್ಗೆ ಮಾತಿಲ್ಲೇ ನಂದು . ಆದ್ರೆ ಹಡೆದವಳು ನಾನೇ ಅಲ್ದಾ? ನನ್ನ ಪರಿಸ್ಥಿತಿ ಹಾಂಗಿತ್ತು. ಪ್ರಕಾಶ ನಿನ್ನ ಮಗ ಆಗಿ ಬೆಳೆದ. ಬೆಳಿತಾ ಬೆಳಿತಾ ಸ್ವಂತ ಅಮ್ಮ ಅಂದ್ರೆ ಬೇಡ ಆತು ಅವಂಗೆ. ನೀನು ತಿದ್ದಲಾಗಿತ್ತು ಆದರೆ ತಿದ್ದಲ್ಲೇ . ಇರಲಿ . ಈಗಲಾದ್ರೂ ನ್ಯಾಯವಾಗಿ ನೀನು ನಂಗೆ ಒಂದು ಮಾತು ಹೇಳಕಾಗಿತ್ತು. ಅಲ್ದಾ? ಹೋಗ್ಲಿ ,ಮದ್ವೆಗೆ ಬಾ ಅಕ್ಕ ಹೇಳೂ ಕರಿಯಲ್ಲೇ. ಇದು ಸರಿನಾ? ನಾನು ಎಷ್ಟೇ ತಡಕತ್ತಿ ಅಂದ್ರೂ ಹೊಟ್ಟೆಲಿ ಹುಟ್ಟಿದ ಮಗ ಹೇಳ ಪಾಶ ಬಿಡಲ್ಲೆ. ಅದಕ್ಕೆ ಕರಿದೆ ಇದ್ರೂ ಬಂದಿ. ಮಗನ ಮದ್ವೆ ನೋಡಕ್ಕೂ ಹೇಳ ಆಸೆ ನೋಡು ... " ಮಂಜಕ್ಕನ ಗಂಟಲುಬ್ಬಿ ಬಂತು.
ಮಾಲತಿ ಏನೂ ಹೇಳಲೂ ತೋಚದೆ " ಅಕ್ಕಾ , ಅದೂ ಹಾಂಗಲ್ಲ. ಇವರತ್ರೆ ಹೇಳಿದ್ದಿ . ನಿಂಗೆ ಕರೆಯಲೇ. ಗಡಿಬಿಡಿಲಿ ಮರೆತು ಹೋದರು ಕಾಣ್ತು. “ ತಡವರಿಸುತ್ತಿದ್ದಳು . ಅಷ್ಟರಲ್ಲಿ ಅವಳನ್ನು ಹುಡುಕಿಕೊಂಡು ಯಾರೋ ಬಂದಿದ್ದರಿಂದ ಪಾರಾದೆ ಎಂದು ಉಸಿರು ಬಿಡುತ್ತ ,
“ಅಕ್ಕಾ ಯಾರೋ ಕರಿತಾ ಇದ್ದ ನನ್ನ, ನೀನು ತಿಂಡಿ ತಿಂದಕ ಬಾ ಮಾತಾಡನ. ಸುಜಾತಾ , ಅಕ್ಕನ್ನ ತಿಂಡಿಗೆ ಕರ್ಕ ಹೋಗು “
ಎನ್ನುತ್ತಾ ಮಾಲತಿ ನಡೆದಳು .
ಊಟದ ಹಾಲ್ ಗೆ ಹೋಗಿ ತಿಂಡಿಯ ಪ್ಲೇಟ್ ಎದುರು ಕೂತರೂ ಹೊಟ್ಟೆಯ ಸಂಕಟಕ್ಕೆ ಏನೂ ಸೇರದಂತಾಗಿ ಕಷ್ಟದಿಂದ ಒಂದು ಇಡ್ಲಿ ತಿಂದು, ಅರ್ಧ ಕಪ್ ಕಾಫಿ ಕುಡಿದು ಎದ್ದು ಬಿಟ್ಟಳು .
ಮತ್ತೆ ಒಳಗೆ ಬಂದಾಗ ಮದುವೆಯ ವಿಧಿಗಳು ಶುರುವಾಗಿದ್ದವು. ಮುಂದಿನ ಸಾಲುಗಳೆಲ್ಲ ಆಗಲೇ ತುಂಬಿದ್ದರಿಂದ ಮೂರನೇ ಸಾಲಿನಲ್ಲಿ ಒಂದು ಕಡೆ ಕೂತಳು ಮಂಜಕ್ಕ .
ಮಾಲತಿ ಪ್ರಕಾಶ ನನ್ನು ಕರೆದುಕೊಂಡು ಎಲ್ಲ ಹಿರಿಯರಿಗೂ ನಮಸ್ಕಾರ ಮಾಡಿಸುತ್ತಿದ್ದಳು. ಹಾಗೆ ಮಂಜಕ್ಕನ ಸಾಲಿಗೂ ಬಂದ ಪ್ರಕಾಶ ನಮಸ್ಕಾರ ಮಾಡಿದ ಶಾಸ್ತ್ರ ಮಾಡಿ ಯಾಂತ್ರಿಕವಾಗಿ ,"ಆರಾಮಿದ್ಯ" ಎಂದು ಕೇಳಿ ಅವಳು ಉತ್ತರಿಸುವ ಮೊದಲೇ ಮುಂದೆ ಹೋಗಿಬಿಟ್ಟ. ಅವಮಾನದಿಂದ ಕರುಳಿಗೆ ಬೆಂಕಿಯಿಟ್ಟಂತೆ ಆದರೂ ಉಕ್ಕಿಬರುತ್ತಿದ್ದ ಕಣ್ಣೀರನ್ನು ಕಷ್ಟದಿಂದ ನಿಯಂತ್ರಿಸಿಕೊಂಡು ಕಲ್ಲಾಗಿ ಕುಳಿತುಬಿಟ್ಟಳು . ಬಂದವರಲ್ಲಿ ಹೆಚ್ಚಿನವರು ಮಾಲತಿಯ ಗಂಡನ ಮನೆ ಕಡೆಯ ಸಂಬಂಧಿಕರೆ ಆಗಿದ್ದರಿಂದ ಮಂಜಕ್ಕನನ್ನು ಚೆನ್ನಾಗಿ ಪರಿಚಯವಿರುವವರು ಬಹಳ ಕಮ್ಮಿ ಜನರಿದ್ದರು .
ಕಣ್ಣ ಮುಂದೆಯೇ ಮಗನ ಮದುವೆ ವೈಭವದಿಂದ ಸಾಗುತ್ತಿದ್ದುದನ್ನು ಕಣ್ಣು ತುಂಬಿಸಿಕೊಳ್ಳುತ್ತಿದ್ದರೂ ಮಂಜಕ್ಕನ ಮನಸ್ಸು ಅಲ್ಲಿರಲಿಲ್ಲ. ತಾನು ಬಂದು ತಪ್ಪು ಮಾಡಿಬಿಟ್ಟೆನೆ ಎಂದು ಒಮ್ಮೆ ಅನಿಸಿದರೂ , ಇದು ತನ್ನ ಕರ್ತವ್ಯವಲ್ಲವೇ? ಅದನ್ನು ಹೇಗೆ ಬಿಡಬಲ್ಲೆ ಎಂದೂ ಒಮ್ಮೆ ಅನಿಸುತ್ತಿತ್ತು .
ಅಂತೂ , ಶಾಸ್ತ್ರಗಳು ಮುಗಿದು ಮದುಮಕ್ಕಳು ಮಂಟಪದಲ್ಲಿಯೇ ಕೂತಿರುವಾಗ ಕೆಲವರು ಉಡುಗೊರೆ ಕೊಡುತ್ತಿರುವುದನ್ನು ಕಂಡ ಮಂಜಕ್ಕ ತಾನೂ ಎದ್ದಳು .
ಉಡುಗೊರೆ ಕೊಡುವವರ ಸಾಲಿನಲ್ಲಿ ನಿಂತ ತನ್ನನ್ನು ನೋಡಿ ಪ್ರಕಾಶನ ಮುಖ ಇಳಿದಿದ್ದೂ, ಅವನ ಕಣ್ಣು ಮಾಲತಿಯನ್ನು ಅರಸಿದ್ದೂ ಮಂಜಕ್ಕನಿಗೆ ಕಂಡಿತು . ಅಂತೂ ಮದುಮಕ್ಕಳ ಎದುರು ಹೋಗಿ ನಿಂತ ಮಂಜಕ್ಕ , ಪ್ರಕಾಶ ಬಾಯಿ ತೆರೆಯುವ ಮುನ್ನ ಅವನ ಹೆಂಡತಿಗೆ ತನ್ನ ಪರಿಚಯ ಮಾಡಿಕೊಂಡಳು.
“ ನಾನು ಪ್ರಕಾಶಂಗೆ ಒಂದು ರೀತಿಯಿಂದ ದೊಡ್ದಮ್ಮನೆ ಆಗವು . ಇಬ್ರೂ ನೂರು ವರ್ಷ ಸುಖವಾಗಿರಿ “ ಎಂದು ಆಶೀರ್ವಾದ ಮಾಡಿದಳು . ಆಮೇಲೆ ತನ್ನ ಬ್ಯಾಗಿನಿಂದ ಒಂದು ಚಿಕ್ಕ ಪರ್ಸ್ ತೆಗೆದು ಅದರಲ್ಲಿದ್ದ ಉಂಗುರವನ್ನು ಅವನ ಬೆರಳಿಗೆ ತೊಡಿಸಿದಳು. ಅದೇ ಪರ್ಸ್ ನಿಂದ ಕೆಂಪು ಬಣ್ಣದ ಪೇಪರ್ ನ ಮಡಿಕೆಯೋಳಗಿಂದ ಒಂದು ಜೊತೆ ಪುಟ್ಟ ಕಿವಿಯೋಲೆ ತೆಗೆದು ಅವನ ಹೆಂಡತಿಯ ಕೈಲಿಟ್ಟಳು.
ಮುಜುಗರದಿಂದ ಪ್ರಕಾಶ “ ಇದೆಲ್ಲ ಎಂತಕೆ …. “ ಎನ್ನುವಷ್ಟರಲ್ಲಿ ,
" ಇದು ನ್ಯಾಯವಾಗಿ ನಿಂಗೆ ಸೇರಕಾಗಿದ್ದು. ನಂಗಾದ್ರೂ ಬೇರೆ ಯಾರಿದ್ದ ಇದನ್ನ ಕೊಡಲೆ ? " ಎಂದವಳೇ ಅಲ್ಲಿಂದ ಹೊರಟಳು .
ಅಷ್ಟರಲ್ಲಾಗಲೇ ಅಲ್ಲಿಗೆ ಬಂದಿದ್ದ ಮಾಲತಿ “ ಅಕ್ಕಾ ಊಟಕ್ಕೆ ತಯಾರಿದ್ದು “ ಎಂದಿದ್ದು ಕೇಳಿಸಲೇ ಇಲ್ಲ ಎಂಬಂತೆ ಮಾಲತಿ ನೋಡುತ್ತಾ ಇರುವಂತೆ ಬಿರ ಬಿರನೆ ಅಲ್ಲಿಂದ ಬಾಗಿಲ ಕಡೆ ನಡೆದಳು.
ಮೂರುಗಂಟೆ ಬಸ್ ಹಿಡಿದು ಮನೆ ತಲುಪಿದವಳಿಗೆ ಬಾಗಿಲು ತೆರೆಯುತ್ತಿದ್ದಂತೆ ಅಷ್ಟು ಹೊತ್ತಿಂದ ತಡೆ ಹಿಡಿದ ದುಃಖದ ಕಟ್ಟೆ ಒಡೆದಂತೆ ಬಿಕ್ಕಿ ಬಿಕ್ಕಿ ಅಳ ತೊಡಗಿದಳು . ಅಂದಿಡೀ ಊಟ ಮಾಡದೇ ಉಪವಾಸವೇ ಮಲಗಿದ ಮಂಜಕ್ಕನಿಗೆ ರಾತ್ರಿಯಿಡೀ ನಿದ್ದೆಯಿಲ್ಲದೆ ಹೊರಳಾಡಿ ಬೆಳಗಿನ ಜಾವದಲ್ಲಿ ಸ್ವಲ್ಪ ನಿದ್ರೆ ಹತ್ತಿತು . ಎಚ್ಚರವಾದಾಗ ಮಧ್ಯಾನ್ಹವಾಗಿತ್ತು . ಮನೆ ಕೆಲಸ ಮುಗಿಸಿ ಚುರುಗುಡುತ್ತಿದ್ದ ಹೊಟ್ಟೆಗೆ ಸ್ವಲ್ಪ ಅನ್ನ ಮಾಡಿಕೊಂಡು ಮಜ್ಜಿಗೆ ಕಲಸಿ ಉಂಡಳು. ನಾಲ್ಕು ಗಂಟೆಯ ಹೊತ್ತಿಗೆ ಶೇಷಣ್ಣನ ಮನೆಯತ್ತ ನಡೆದಳು.
ಮನೆಯವರಿಗೆ , ನೆಂಟರಿಗೆ ಕಾಫಿ ಕೊಟ್ಟು ಅದೇ ತಾನೇ ಶಾಂತಾ ಮತ್ತು ಕೆಲವು ಹೆಂಗಸರೊಂದಿಗೆ ಕಾಫಿ ಲೋಟ ಹಿಡಿದು ಕುಳಿತಿದ್ದ ಪಾರ್ವತಕ್ಕನಿಗೆ ಮಂಜಕ್ಕನನ್ನು ನೋಡಿ ಆಶ್ಚರ್ಯವಾಯಿತು .ಅವಳ ಮುಖ ನೋಡಿ ಯಾಕೋ ಎಲ್ಲವೂ ಸರಿ ಇಲ್ಲ ಎಂದೆನಿಸಿದರೂ ತೋರಿಸಿ ಕೊಳ್ಳದೇ
“ ಮಂಜಕ್ಕ, ಬಂದ್ಯ ? ಬಾ, ಕೂತ್ಗ . ಕಾಫಿ ಕುಡಿಲಕ್ಕಡ “ ಎಂದು ಕಾಫಿ ಲೋಟ ಮುಂದಿತ್ತಳು .
ಮಾತನಾಡದೆ ಮಂಜಕ್ಕ ಅವರ ಜೊತೆಗೆ ಕಾಫಿ ಕುಡಿದಳು .ಕಾಫಿ ಕುಡಿದು ಆದ ಮೇಲೆ ನೆಂಟರಿಗೆ ಹಂಚುವ ಸೀರೆಗಳನ್ನು ತೋರಿಸುತ್ತಿದ್ದ ಪಾರ್ವತಕ್ಕ ಕೊನೆಯಲ್ಲಿ ಒಂದು ಕಡ್ಡಿಯಂಚಿನ ಕಡುನೀಲಿ ರೇಶಿಮೆ ಸೀರೆಯನ್ನು ಮಂಜಕ್ಕನ ಕೈಲಿಟ್ಟಳು .
“ಮಂಜಕ್ಕ , ಇದು ನಿಂಗೆ ಹೇಳಿ ಆರ್ಸಿದ್ದಿ. ಇಷ್ಟ ಆತಾ?”
ಥಟ್ಟನೆ ಪಾರ್ವತಕ್ಕನ ಮುಖ ನೋಡಿದ ಮಂಜಕ್ಕ
“ ನಂಗೆಂತಕೆ ಸೀರೆ ಪಾರ್ವತಕ್ಕಾ ? ಅದೂ ದುಬಾರಿ ಸೀರೆ ! ನಾ ಎಲ್ಲಿಗ ಹೋಗ್ತಿ ರೇಷ್ಮೆ ಸೀರೆ ಎಲ್ಲ ಉಟಗಂಡು ? "
" ಮಂಜಕ್ಕಾ, ನೀನು ಮನೆ ಜನವೇಯ ನಂಗಕ್ಕೆ. ಮನೆ ಮದ್ವೇಲಿ ರೇಷ್ಮೆ ಸೀರೆ ಉಡದೇ ಇದ್ರೆ ಹೆಂಗೆ ಮಾರಾಯ್ತಿ ? " ಪಾರ್ವತಕ್ಕ ನಕ್ಕಳು .
ಮತ್ತೊಮ್ಮೆ ಅವಳ ಮುಖ ನೋಡಿ ಸೀರೆಯನ್ನು ಒಮ್ಮೆ ನೇವರಿಸಿದ ಮಂಜಕ್ಕ , " ಹೋಪಕಿದ್ರೆ ತಗ ಹೋಗ್ತಿ " ಎಂದು ಅಡುಗೆಮನೆಯತ್ತ ನಡೆದವಳ ಮುಖದಲ್ಲಿ ಮೂಡಿದ್ದು ಸಂತಸವಾ , ವಿಷಾದವಾ ಎಂದು ಗೊತ್ತಾಗಲಿಲ್ಲ ಪಾರ್ವತಕ್ಕಂಗೆ .
ಸಂಜೆ ಕೆಲಸಗಳೆಲ್ಲ ಮುಗಿದು ಹೊರಡುವ ಮುನ್ನ ಮಂಜಕ್ಕ ಪಾರ್ವತಕ್ಕನನ್ನು ಕರೆದಳು .
“ ಪಾರ್ವತಕ್ಕ, ಒಂದ್ಸಲ ಅಪ್ಪಿ ಕರಿತ್ಯಾ ? “
ಯಾಕೆಂದು ಕೇಳದೇ ಪಾರ್ವತಕ್ಕ ಮಗನನ್ನು ಕರೆದಳು .
ಅವನು ಬಂದಾಗ ಮಂಜಕ್ಕ ತನ್ನ ಕೈಚೀಲದಿಂದ ಪೊಟ್ಟಣವೊಂದನ್ನು ತೆಗೆದು ಅದರಲ್ಲಿದ್ದ ಪುಟ್ಟ ಚಿನ್ನದ ಚೈನ್ ಅನ್ನು ಅವನ ಕೈಗಿಟ್ಟಳು . ಅವನು ಏನೂ ಅರ್ಥವಾಗದೆ ಅಮ್ಮನತ್ತ ನೋಡಿದ.
ಅವಕ್ಕಾದ ಪಾರ್ವತಕ್ಕ “ ಮಂಜಕ್ಕ , ಇದೆಂತದೆ … ? “
“ ಪಾರ್ವತಕ್ಕ, ಮದುವೆ ಆಗಿ ಬಂದಾಗಿಂದ ನಿಮ್ಮಲ್ಲಿ ಕೆಲಸ ಮಾಡಿದ್ದಿ. ನಿಂಗನೂ ಯಾವತ್ತೂ ನನ್ನ ಹೊರಗಿನವಳ ತರ ನೋಡಲ್ಲೇ . ಸಂದೀಪನೂ ನನ್ನ ಕಣ್ಣೆದುರೇ ಹುಟ್ಟಿ ಬೆಳೆದವ. ನಂಗೆ ಅವ ಮಗನಾಂಗೆಯಾ . ಅದಕ್ಕೆ ಅವನ ಮದ್ವೆಗೆ ನಂದು ಸಣ್ಣ ಉಡುಗೊರೆ . ಮದ್ವೆ ದಿನ ಎಲ್ಲ ಕೊಡಲೇ ನಾಚ್ಕೆ ನಂಗೆ. ಹಾಂಗಾಗಿ ಈಗಲೇ ಕೊಟ್ ಬಿಡ್ತಿ “
“ಆದ್ರೂ ಮಂಜಕ್ಕಾ , ಇದೆಲ್ಲ ಕೊಡವು ಹೇಳಿಲ್ಲೆ. ನೀನು ಆಶೀರ್ವಾದ ಮಾಡು ಸಾಕು. ಅದೇ ದೊಡ್ಡ ಉಡುಗೊರೆ . ಇದೆಲ್ಲ ನಿನ್ ಮಗಂಗೆ ಸೇರಕಾಗಿದ್ದು . “
“ ಪಾರ್ವತಕ್ಕಾ, ನನ್ ಮಗಂಗೆ ಸೇರಕಾಗಿದ್ದಿದ್ದು ನಿನ್ನೆ ಅವಂಗೆ ಕೊಟ್ಟಿಕ್ ಬಂದಿ . ಅವನ ಅಪ್ಪನ ಉಂಗುರ , ನಂಗೆ ಮದ್ವೇಲಿ ಹಾಕಿದ್ದ ಒಂದು ಜೊತೆ ಕಿವಿ ಓಲೆನ ಪ್ರಕಾಶಂಗೆ, ಅವನ ಹೆಂಡತಿಗೆ ಕೊಟ್ಟಿದ್ದಿ. ಇದು ನಾನು ನನ್ನ ಇಷ್ಟು ವರ್ಷದ ದುಡಿಮೆಲಿ ಮಾಡ್ಸಿದ್ದು. ಮಗನ ಮದುವೆ ಆದಾಗ ಕೊಡಲಾತು ಹೇಳಿ. ಆದ್ರೆ ಅಮ್ಮ -ಮಗ ಹೇಳ ಪಾಶ ನನಗೊಬ್ಬಳಿಗೆ ಇದ್ದಿದ್ದು ಹೇಳಿ ಅರ್ಥಾ ಅದಮೇಲೆ ಅವಂಗೆ ಕೊಡ ಅಗತ್ಯ ಕಂಡಿದ್ದಿಲ್ಲೇ. ಆಗ್ಲೇ ಹೇಳಿದ್ನಲೇ ? ಸಂದೀಪನೂ ನಂಗೆ ಮಗನಾಂಗೆಯಾ ಹೇಳಿ ? ಅದಕ್ಕೆ ಈ ಮಗನ ಮದುವೆಗೆ ಇದು ನನ್ನ ಉಡುಗೊರೆ. ಜಾಸ್ತಿ ದಪ್ಪ ಚೈನ್ ಅಲ್ಲ .ಆದರೂ ನನ್ ಕೈಲಿ ಆಗಿದ್ದು ಇಷ್ಟು . “
ಕಣ್ಣೀರು ತುಂಬಿಕೊಂಡ ಪಾರ್ವತಕ್ಕ ಮಂಜಕ್ಕನನ್ನು ಅಪ್ಪಿಕೊಂಡಳು . ಬಗ್ಗಿ ನಮಸ್ಕಾರ ಮಾಡಿದ ಸಂದೀಪನ ಕಣ್ಣಲ್ಲಿ ನೀರಿತ್ತು .
,
April 22, 2023
ನಾವಿಲ್ಲ !

ಕೊಡಲಿಯಲಿ ಕಡಿಯುವೆವು
ನಮ್ಮ ಬಣ್ಣಗಳಲ್ಲಿ ಹಸುರಿಲ್ಲ !
ಭೂಮಿಯನು ಅಗೆದಗೆದು
ಬರಿದಾಗಿಸಿದೆವು ಜಲವ
ಬಾಯಾರಿದರೆ ಗುಟುಕು ನೀರಿಲ್ಲ !
ಬೋಳಾಗಿಸಿದೆವು ಮರವ
ಬರಡಾಗಿಸಿದೆವು ನೆಲವ
ಹಂಬಲಿಸಿದರು ಚೂರು ನೆರಳಿಲ್ಲ
ಈ ಭೂಮಿ ನಮದಲ್ಲ
ನಮ್ಮ ಮಕ್ಕಳ ಆಸ್ತಿ
ಈ ಸತ್ಯವನು ನಾವು ತಿಳಿದಿಲ್ಲ !
ಕನಸು ಕಾಣುವ ಮೊದಲು
ವಾಸ್ತವವ ನೋಡಿದರೆ
ನಮ್ಮ ನಾಳೆಗಳಲ್ಲಿ ನಾವಿಲ್ಲ !
( ಫೋಟೋ ಕೃಪೆ : ಅಂತರ್ಜಾಲ )
February 28, 2022
ಸಾಕ್ಷಿ
ಅಲ್ಲಿ ಆಗಿದ್ದನ್ನು ನೋಡಿದವನ ಎದೆ ಧಸಕ್ ಎಂದಿತು ! ಏನು ಮಾಡುವುದೋ ತೋಚದಂತಾಯಿತು .
ಒಂದು ಸಣ್ಣ ದೌರ್ಬಲ್ಯದಿಂದ ಆದ ಅನಾಹುತಕ್ಕೆ ಹಳ ಹಳಿಸಿದ . ಗಡಿಯಾರ ನೋಡಿದ . ಇನ್ನು ಹೆಚ್ಚೆಂದರೆ ಇಪ್ಪತ್ತು ನಿಮಿಷದೊಳಗೆ ಅವಳು ಬರುತ್ತಾಳೆ . ಅಷ್ಟರಲ್ಲಿ , ಇಲ್ಲಿ ನಡೆದುದರ ಕುರುಹೇ ಇಲ್ಲದಂತೆ ಮಾಡಬೇಕು ! ಅವಳಿಗೆ ಗೊತ್ತಾದರೆ ಏನಾಗಬಹುದೆಂದು ಯೋಚಿಸಿಯೇ ಅವನು ಬೆವರುತ್ತಿದ್ದ .
ಊಹ್ಞೂ ಯೋಚಿಸುತ್ತಾ ನಿಲ್ಲಲು ಸಮಯವಿಲ್ಲ ! ತಕ್ಷಣ ಎಚ್ಚೆತ್ತುಕೊಂಡು ಕಾರ್ಯ ಪ್ರವೃತ್ತನಾದ ! ಎದುರಿಗೆ ಸಾಕ್ಷಿಯಾಗಿದ್ದೆಲ್ಲವನ್ನೂ ಬದಿಗೆ ಒತ್ತಿದ . ಮೊದಲು ಬರೀ ನೀರು ಹಾಕಿ ಒರೆಸಿದ , ಹೋಗಲಿಲ್ಲ , ನಂತರ ಸೋಪ್ ಹಾಕಿ ಬ್ರಶ್ ನಿಂದ ತಿಕ್ಕಿದ , ಎಲ್ಲೂ ಕಲೆ ಕಾಣದಂತೆ , ಈ ಘಟನೆಯೇ ನಡೆದಿಲ್ಲ ಎನ್ನುವಂತೆ ಮಾಡುವುದು ಅಷ್ಟು ಸುಲಭವಿರಲಿಲ್ಲ ! ಮೂರು -ಮೂರು ಸಲ ಸೋಪ್ ಹಚ್ಚಿ , ಬ್ರಶ್ ನಿಂದ ತಿಕ್ಕಿ , ಆಮೇಲೆ ಬಟ್ಟೆಯಿಂದ ಉಜ್ಜಿ ಉಜ್ಜಿ ಒರೆಸಿದ ಮೇಲೆ ಅಂತೂ ಒಂದು ಹಂತಕ್ಕೆ ಬಂತು . ಇನ್ನು ಐದೇ ನಿಮಿಷ ! ಅಷ್ಟರಲ್ಲಿ ಮತ್ತೊಮ್ಮೆ ಎಲ್ಲವನ್ನೂ ಪರಿಶೀಲಿಸಿದ . ಅವಳಿಗೆ ಖಂಡಿತ ತಿಳಿಯಲಾರದು ಎಂಬ ವಿಶ್ವಾಸ ಬಂತು. ತನ್ನ ಕೆಲಸಕ್ಕೆ ತಾನೇ ಬೆನ್ನು ತಟ್ಟಿಕೊಂಡ!
ಬೆಲ್ ಹೊಡೆದು ಕೊಂಡಿತು . ಢವಗುಟ್ಟುತ್ತಿದ್ದ ಎದೆಯೊಂದಿಗೆ ಬಾಗಿಲು ತೆಗೆದ. ಬಂದವಳನ್ನು ನಗುಮುಖದಿಂದ ಸ್ವಾಗತಿಸಿದ. ದೇವರೇ , ಆಗಿದ್ದು ಅವಳಿಗೆ ತಿಳಿಯದಿರಲಿ ಎಂದು ಪ್ರಾರ್ಥಿಸುತ್ತ ಅಲ್ಲೇ ಓರೆಗಣ್ಣಲ್ಲಿ ತಾನು ಸ್ವಚ್ಛಗೊಳಿಸಿದತ್ತ ನೋಡಿ ಸಮಾಧಾನಗೊಂಡ.
ಅವಳು ಎಂದಿನಂತೆ ಬ್ಯಾಗ್ ನ್ನು ರೂಮ್ ನಲ್ಲಿ ಟೇಬಲ್ ಮೇಲಿಟ್ಟು , ಕೈ ಕಾಲು ತೊಳೆದು ಅಡುಗೆ ಮನೆಗೆ ಹೋದಳು .
ಅವನೂ ರಿಲ್ಯಾಕ್ಸ್ ಆಗಿ ಸೋಫಾ ಮೇಲೆ ಕುಳಿತು ಚಾನಲ್ ಬದಲಾಯಿಸತೊಡಗಿದ!
ಆಗಲೇ ಅವಳು ಜೋರಾಗಿ ಕರೆದಳು ! ಇವನೂ ಓಡಿದ .
ಅವಳು ಇವನತ್ತ ಸೀರಿಯಸ್ ಆಗಿ ನೋಡುತ್ತಾ ಕೇಳಿದಳು . "ನೀನು ಕ್ಲೀನ್ ಮಾಡಿದ್ರೆ ನಂಗೇನು ಗೊತ್ತಾಗಲ್ಲ ಅಂದ್ಕೊಂಡ್ಯಾ? ಎಷ್ಟ್ ಸತಿ ಹೇಳಿದೀನಿ ನಿಂಗೆ ನಾನು ಬಂದಮೇಲೆ ಎಲ್ಲ ಮಾಡ್ತೀನಿ , ನೀನು ಹಾಲು ಸ್ಟವ್ ಮೇಲಿಟ್ಟು ಕ್ರಿಕೆಟ್ ನೋಡ್ತಾ ಕೂತ್ಕೋಬೇಡ ಅಂತ !!! ".......
ಅವಳು ಇನ್ನೂ ಏನೇನೋ ಹೇಳ್ತಾ ಇದ್ದಳು . ಇವನ ಕಿವಿಗೆ ಬೀಳಲಿಲ್ಲ !
ಇಷ್ಟು ಕ್ಲೀನ್ ಮಾಡಿದ್ರೂ ಅದು ಅವಳಿಗೆ ಗೊತ್ತಾಗಿದ್ದು ಹೇಗೆ ಅಂತ ಅವನು ಯೋಚಿಸ್ತಾ ಇದ್ದ .
ಅತ್ತ ಇವನೇ ಬದಿಗೆ ಇಟ್ಟಿದ್ದ , ಹಾಲು ಉಕ್ಕಿ ಕರೆಗಟ್ಟಿದ್ದ ಹಾಲಿನ ಪಾತ್ರೆ ಇವನನ್ನು ಅಣಕಿಸುತ್ತಿತ್ತು !
ಒಲೆ, ಅಡುಗೆ ಕಟ್ಟೆ ಎಲ್ಲವನ್ನೂ ಉಜ್ಜಿ ಚೊಕ್ಕಟಗೊಳಿಸಿದವನು ಹಾಲಿನ ಪಾತ್ರೆಯನ್ನು ಮರೆತೇ ಬಿಟ್ಟಿದ್ದ!!
December 20, 2021
ಸಂಶಯ
ಸಂಬಂಧಿಕರೊಬ್ಬರ ಮನೆಯ ಕಾರ್ಯಕ್ರಮದಿಂದ ಬಂದು ಸೀರೆ ಬದಲಿಸುತ್ತಿದ್ದವಳ ಲಕ್ಷ್ಯಕನ್ನಡಿಯಲ್ಲಿ ಕಾಣುತ್ತಿದ್ದ ಪ್ರತಿಬಿಂಬದತ್ತ ಹೋಯಿತು . ಸೂಕ್ಷ್ಮವಾಗಿ ಗಮನಿಸಿದಳು !