February 23, 2024

ಬಿಡುಗಡೆ



"ಶಶಾಂಕ್ , ನಂಗೆ ನಿನ್ನತ್ರ ಒಂದು ವಿಷಯ ಹೇಳಬೇಕು. " ರಶ್ಮಿ ಮೆಲ್ಲಗೆ ಹೇಳಿದಳು.

"ಹ್ಮ್. ಹೇಳು " ಹಾಸಿಗೆಯ ಮೇಲೆ ದಿಂಬಿಗೊರಗಿ ಕಾಲು ನೀಡಿ ಕುಳಿತು ಮೊಬೈಲ್ ನೋಡುತ್ತಿದ್ದ ಶಶಾಂಕ್ ಅವಳತ್ತ ನೋಡದೆಯೇ ಕೇಳಿದ .

"ಸ್ವಲ್ಪ ಆ ಫೋನ್ ಪಕ್ಕಕ್ಕಿಡ್ತೀಯಾ? ಯೋಚನೆ ಮಾಡಬೇಕಿರೋ ವಿಷಯ ಇದು . " ರಶ್ಮಿ ಸಿಡುಕಿದಳು .

"ಆಯ್ತು ತಾಯಿ . ಹೇಳು. " ಫೋನ್ ಪಕ್ಕಕ್ಕಿಟ್ಟು ಹೆಂಡತಿಯತ್ತ ಮುಖ ಮಾಡಿದ .

"ಅದು..ಸ್ವಲ್ಪ ದಿನದಿಂದ ಅತ್ತೆ ಏನೋ ವಿಚಿತ್ರವಾಗಿ ನಡ್ಕೋತಿದಾರೆ ಅನ್ಸ್ತಿದೆ ನಂಗೆ. "

"ಏನು ಹಾಗಂದ್ರೆ ? ಏನಾಯ್ತು ? "
"ಇತ್ತೀಚೆ ಅತ್ತೆ ಹೆಚ್ಚು ಹೊತ್ತು ರೂಮಲ್ಲಿ ಬಾಗಿಲು ಹಾಕ್ಕೊಂಡೆ ಇರ್ತಾರೆ. "

"ಹ್ಮ್… ಅದರಲ್ಲೇನು ವಿಚಿತ್ರ ಅನ್ಸೋದು ? ಬೇಜಾರಿರತ್ತಲ್ವ? 42 ವರ್ಷ ಜತೆಲಿದ್ರು. ಈಗ ಒಮ್ಮೆಲೇ ಒಂಟಿ ಅನಸ್ತಿರಬಹುದು . ಸಹಜ ತಾನೇ? "

"ಅದು ಸರೀಪ್ಪಾ , ಅರ್ಥ ಆಗತ್ತೆ ನಂಗೂ. ಮಾವ ಹೋದ ಶುರುವಿಗೆ ಅತ್ತೆ ಹೀಗೆ ರೂಮಲ್ಲಿ ಕೂತು ಏನೋ ಓದ್ತಾ ಇರ್ತಿದ್ರು. ಆದ್ರೆ ರೂಂ ಬಾಗಿಲು ಹಾಕ್ಕೋತಾ ಇರ್ಲಿಲ್ಲ. ಸ್ವಲ್ಪ ದಿನಕ್ಕೆ ಮೊದಲಿನ ತರ ಆಗಿದ್ರು . ಆದ್ರೆ ಈಗ ಮತ್ತೆ ಹಾಗೇನೆ . ರೂಮಿಂದ ಹೊರಗೆ ಬಂದಷ್ಟು ಹೊತ್ತು ಸರಿಯಾಗೇ ಮಾತಾಡ್ತಾರೆ. ಆದ್ರೆ ಹೊರಗೆ ಬರೋದೇ ಕಮ್ಮಿ ಆಗೋಗಿದೆ. ಬೆಳಿಗ್ಗೆ ತಿಂಡಿ ತಿಂದು ನೀನು ಹೋದಮೇಲೆ ರೂಂ ಹೊಕ್ಕರೆ ಊಟಕ್ಕೆ ,ಕಾಫಿಗೆ ಮಾತ್ರ ಬರ್ತಾರೆ.
ಅಬ್ಬಬ್ಬಾ ಅಂದ್ರೆ ಅರ್ಧ ಗಂಟೆ. ಮುಂಚಿನ ತರ ಟಿವಿ ನೋಡೋದು,ಪೇಪರ್ ಓದೋದು ಏನೂ ಇಲ್ಲ . ಮಕ್ಕಳು ಸ್ಕೂಲಿಂದ ಬಂದ ಮೇಲೆ ಸ್ವಲ್ಪ ಹೊತ್ತು ಅವರ ಜೊತೆ ಮಾತಾಡ್ತಾ ಕೂರ್ತಾರೆ . "

"ಮನಸಾಗಲ್ವೇನೋ ! ಇನ್ನೂ ನಾಲ್ಕೇ ತಿಂಗಳು ಆಗ್ತಿದೆ ಅಷ್ಟೇ. ನೀನಾಗಿ ಅವರ ರೂಮಿಗೆ ಹೋಗಿ ಮಾತಾಡ್ಸು . ಚಿಯರ್ ಅಪ್ ಮಾಡು "

"ಅದೂ ಮಾಡ್ತೀನಿ. ಆದ್ರೆ, ಬಾಗಿಲು ತೆಗದ್ರೆ ತಾನೇ ಮಾತಾಡ್ಸೋದು ? ಅವರ ರೂಂ ಬಾಗಿಲು ಒಳಗಿಂದ ಲಾಕ್ ಮಾಡಿರ್ತಾರೆ. ಮೊದಲು ಹೀಗೆ ಮಾಡ್ತಿರಲಿಲ್ಲ . ಪದೇ ಪದೇ ನಾನು ಹೋಗಿ ಬಾಗಿಲು ತಟ್ಟೋದು , ಅವರು ಎದ್ದು ಬಂದು ಬಾಗಿಲು ತೆಗೆಯೋದು ..ಯಾಕೋ ನಂಗೆ ಸರಿ ಹೋಗಲ್ಲ. ಅವರಿಗೆ ಡಿಸ್ಟರ್ಬ್ ಮಾಡ್ತೀನಾ ಅನ್ಸಿ ಬಿಡತ್ತೆ. ಸುಮಾರು ಸಲ ನಾನು ಅವರ ಬಾಗಿಲ ಹತ್ರ ಹೋದಾಗ ಅವರು ಯಾರತ್ರನೋ ಫೋನ್ ಲ್ಲಿ ಮಾತಾಡ್ತಾ ಇರೋದು ಕೆಳಿಸತ್ತ್ತೆ. ಯಾರ ಜೊತೆ ಅಂತ ಗೊತ್ತಿಲ್ಲ. "

" ಯಾರೋ ಅಮ್ಮನ ಫ್ರೆಂಡ್ ಅಥವಾ ಸಂಬಂಧಿಕರು ಇರಬಹುದು ಕಣೆ. ಈ ಸಂದರ್ಭದಲ್ಲಿ ಜನ ಫೋನ್ ಮಾಡೋದು ಸಹಜ ಆಲ್ವಾ ? "

"ಇರಬಹುದು. ಆದ್ರೆ ನಂಗೆ ವಿಚಿತ್ರ ಅನ್ಸಿದ್ದು ಏನು ಗೊತ್ತಾ? ಈಚೆ ಇರೋವಾಗ ಫೋನ್ ಬಂದ್ರೆ ರೂಮಲ್ಲಿ ಹೋಗಿ ಬಾಗಿಲು ಹಾಕ್ಕೊಂಡೆ ಮಾತಾಡ್ತಾರೆ. ಏನೋ ಹುಡುಕ್ತಿದಾರೆ ಅನ್ಸತ್ತೆ ಒಂದೊಂದ್ ಸಲ . ನಾನು ಒಂದ್ಸಲ ರೂಮಿಗೆ ಹೋದಾಗ ಮಂಚದ ಮೇಲೆಲ್ಲಾ ಬಟ್ಟೆ ಹರಡಿತ್ತು . ಮೊದಲು ಯಾವಾಗಲು ಹೀಗೆ ಮಾಡಿಲ್ಲ . ದುಃಖನೆಲ್ಲ ಒಳಗೇ ಒತ್ತಿಟ್ಟುಕೊಂಡು ಆಮೇಲೆ ಅರೋಗ್ಯ ಹಾಳಾಗಬಾರದಲ್ವ ?" ರಶ್ಮಿ ಗೊಂದಲದಲ್ಲೇ ಹೇಳಿದಳು

"ಹೌದಾ ? ಅಂಥಾದ್ದೇನ್ ಇರತ್ತೆ. ಆದ್ರೂ ಕಪಾಟು ಸೇರಿಸ್ಕೊತಿರಬಹುದು. ಏನಾದ್ರೂ ಮನಸನ್ನು ಡೈವರ್ಟ್ ಮಾಡ್ಕೋಳೋಕೆ. ನನಗೇನೋ ನೀನು ಸುಮ್ಮನೆ ಏನೇನೋ ಯೋಚಿಸ್ತೀಯ ಅನಸ್ತಿದೆ. ಮಲ್ಕೋ ಈಗ . "

ಹೆಂಡತಿಗೆ ಜಾಸ್ತಿ ಯೋಚನೆ ಮಾಡಬೇಡ ಅಂತ ಹೇಳಿ ಪಕ್ಕಕ್ಕೆ ತಿರುಗಿ ಮುಸುಕೆಳೆದ ಶಶಾಂಕ್ .

ಅತ್ತ ರಶ್ಮಿಗೆ ಚಿಂತೆ ತಲೆ ತಿಂತಾನೆ ಇತ್ತು. ಗಂಡ ಏನೋ ಯೋಚನೆ ಮಾಡಬೇಡ ಅಂದ್ರೂ ಅದು ಹೇಗೆ ಸಾಧ್ಯ? ಯಾವತ್ತೂ ನಗ ನಗ್ತಾ, ಮಾತಾಡ್ತಾ ಇರ್ತಿದ್ದ ಅತ್ತೆ ಇದ್ದಕ್ಕಿದ್ದ ಹಾಗೆ ರೂಮಲ್ಲಿ ಇಡೀ ದಿನ ಬಾಗ್ಲು ಹಾಕೊಂಡಿರೋದು ಅವಳಿಗೆ ವಿಚಿತ್ರ ಅನಸ್ತಿತ್ತು . ಜೊತೆಗೇ ಗಾಬರಿನೂ .
ಮಾವ ತೀರಿ ಕೊಂಡಾಗಲೂ ಹೆಚ್ಚು ಅಳುತ್ತಾ ಕೂರದೇ ಅದನ್ನು ಎಲ್ಲರೂ ಒಂದಲ್ಲ ಒಂದು ದಿನ ಜಗತ್ತನ್ನು ಬಿಟ್ಟು ಹೋಗೋರೆ ಎಂಬಂತೆ ಮೌನವಾಗಿ ಸ್ವೀಕರಿಸಿದ ಅತ್ತೆಯ ಬಗ್ಗೆ ಆಗಿಂದಲೂ ರಶ್ಮಿಗೆ ಯೋಚನೆ ಆಗುತ್ತಿತ್ತು. ದುಃಖವನ್ನು ಮನದಲ್ಲೇ ಕಟ್ಟಿ ಇಟ್ಟುಕೊಂಡು ಅದರಿಂದಾಗಿ ಆರೋಗ್ಯ ಹಾಳಾಗುವ ಬಗ್ಗೆ ಓದಿದ್ದಳು. ಅವಳಿಗೆ ಅತ್ತೆಯೂ ದುಃಖವನ್ನು ತಡೆದಿಟ್ಟು ಕೊಂಡಿದ್ದಾರೆ ಎಂದೇ ಅನಿಸುತ್ತಿತ್ತು. ಆಮೇಲೆ ಕೂಡ ಮೊದಲಿನಂತೆ ಮಾತಾಡದೆ ಹಲವು ವಾರ ಗಳ ಕಾಲ ಮಹಾಭಾರತ, ಭಗವದ್ಗೀತೆ , ಸಹಸ್ರನಾಮ ಇತ್ಯಾದಿ ಓದುತ್ತಾ ರೂಮಲ್ಲಿ ಇರುತ್ತಿದ್ದರು. ಆಗೆಲ್ಲ ಒಳಗೊಳಗೇ ಗಾಬರಿ ರಶ್ಮಿಗೆ.

ತಿಂಗಳು ಕಳೆದಂತೆ ಅತ್ತೆ ಸ್ವಲ್ಪ ನಾರ್ಮಲ್ ಗೆ ಬಂದಂತೆ ಅನಿಸಿ ಸಮಾಧಾನವಾಗಿತ್ತು .

ಮತ್ತೆ ಈಗ ಅತ್ತೆಯ ಹೊಸ ರೀತಿಗೆ ತಲೆಬಿಸಿಯಾಗ್ತಾ ಇತ್ತು . ಕಾರಣ ಏನಿರಬಹುದು ಎಂಬ ಯೋಚನೆ ತಲೆ ತಿನ್ನುತ್ತಿತ್ತು. ಹಾಗೆ ಯೋಚಿಸುತ್ತಿದ್ದವಳಿಗೆ 2 ವಾರಗಳ ಮೊದಲು ಅತ್ತೆಯ ಹತ್ತಿರದ ಗೆಳತಿ ಶಶಿಕಲಾ ಬಂದು ಉಳಿದಿದ್ದರು. ಅತ್ತೆಯ ವರ್ತನೆ ಬದಲಾಗಿದ್ದು ಆ ನಂತರ ಎಂದು ಹೊಳೆಯಿತು . ಆದರೂ ಕಾರಣ ಮಾತ್ರ ಹೊಳೆಯಲಿಲ್ಲ.

ಮತ್ತೆ ಕಾರಣ ಹುಡುಕುತ್ತಾ ಕುಳಿತವಳು ಶಶಿ ಆಂಟಿ ಬರುವ ಕೆಲದಿನಗಳ ಮುಂಚೆ ನಡೆದಿದ್ದು ನೆನಪಿಸಿಕೊಂಡಳು!
ಅಂದು ಅತ್ತೆಯ ಫೋನ್ ಜಗುಲಿಯಲ್ಲಿದ್ದಿದ್ದು ನೋಡಿದ ರಶ್ಮಿ ಅದನ್ನು ಕೊಡಲು ಅವರ ರೂಮಿಗೆ ಹೋಗಿದ್ದಳು. ಅಲ್ಲಿ ಜಾಹ್ನವಿ ತಮ್ಮ ಗಂಡನ ಕಪಾಟನ್ನು ತೆರೆದು ಬಟ್ಟೆ ಗಳನ್ನು ತೆಗೆದು ಮಂಚದ ಮೇಲೆ ಇಡುತ್ತಿದ್ದರು. ಅವರೊಂದಿಗೆ ಕೈ ಜೋಡಿಸಿದ ರಶ್ಮಿ ಇದೇ ಸಮಯವೆಂದು ಅವರನ್ನು ಮಾತಿಗೆಳೆದಳು.

"ಇವನ್ನೆಲ್ಲ ಏನು ಮಾಡ್ತಿರಾ ಅತ್ತೆ? "

"ಏನಿಲ್ಲಮ್ಮ, ಏನು ಮಾಡೋದು ? ಅದೆಷ್ಟೋ ಹೊಸ ಶರ್ಟ್ ಪ್ಯಾಂಟ್ ಎಲ್ಲ ಇವೆ. ಅದನ್ನೆಲ್ಲ ತೆಗದು ಯಾವುದಾದರೂ ಆಶ್ರಮಕ್ಕೆ ಕೊಡಬಹುದಾ ಅಂತ ಯೋಚನೆ ಮಾಡ್ತಿದ್ದೆ. ಇನ್ನೇನು ಮಾಡೋದು ಹೇಳು ? ಯಾರು ಹಾಕ್ತಾರೆ ಇನ್ನು ? " ನಿರ್ಲಿಪ್ತರಾಗಿ ಹೇಳಿದರು.

"ಶಶಾಂಕ್ ಗೆ ಹೇಳ್ತೀನಿ ಅತ್ತೆ. ನೋಡೋಣ. "

ಇಬ್ಬರೂ ಸೇರಿ ಬಟ್ಟೆ ಗಳನ್ನು ವಿಂಗಡಿಸಿ ಇಟ್ಟರು.

ಈ ಕಪಾಟಿನ ಲಾಕರ್ ಒಂದು ತೆಗೆದು ನೋಡೋಣ ರಶ್ಮಿ . ಏನಾದ್ರೂ ಇದೆಯಾ ಅಂತ. ಎನ್ನುತ್ತಾ ಜಾಹ್ನವಿ ಬೀಗದ ಕೀ ಗೊಂಚಲನ್ನು ತಂದರು . ಆದರೆ ಲಾಕರ್ ನ ಕೀ ಮಾತ್ರ ಇರಲಿಲ್ಲ. ರೂಮಿನಲ್ಲಿ ಸಾಧಾರಣವಾಗಿ ಇರಬಹುದಾದ ಜಾಗವೆಲ್ಲಾ ಹುಡುಕಿದರೂ ಅದು ಸಿಗಲಿಲ್ಲ.
"ರಶ್ಮಿ, ಇದರದ್ದು ಡೂಪ್ಲಿಕೇಟ್ ಕೀ ಶಶಾಂಕ್ ಹತ್ರ ಏನಾದ್ರೂ ಇದೆಯಾ ಕೇಳಬೇಕು . ಲಾಕ್ ಮಾಡಿದ್ದಾರೆ ಅಂದ್ರೆ ಏನಾದರೂ ಇಟ್ಟಿರಬಹುದು. ನೋಡೋದು ಒಳ್ಳೇದು . "

"ಇರಿ ಅತ್ತೆ, ನಮ್ಮ ರೂಮಿನಲ್ಲಿ ಇರೋ ಕೀ ಬಂಚ್ ತರ್ತೀನಿ. ನೋಡೋಣ . "

ರಶ್ಮಿ ತಂದ ಗೊಂಚಲಿನಲ್ಲೂ ಅದರ ಕೀ ಸಿಕ್ಕಲಿಲ್ಲ.
ಸರಿ , ಶಶಾಂಕ್ ಬರಲಿ ನೋಡೋಣ ಎಂದು ಇಬ್ಬರೂ ಅಲ್ಲಿಗೆ ಬಿಟ್ಟರು.

ಸಂಜೆ ಶಶಾಂಕ್ ಬಂದಮೇಲೆ ಕೇಳಿದಾಗ ಅವನಿಗೂ ಗೊತ್ತಿರಲಿಲ್ಲ.

"ಒಂದು ಕೆಲಸ ಮಾಡು ಶಶಾಂಕ್ , ನಾಳೆ ಆ ಮುನಿಯಪ್ಪ ಇದಾನಲ್ಲ ಬೀಗದಂಗಡಿ ಇದೆ ನೋಡು ಅವನದು , ಅವನ್ನ ಬರೋಕೆ ಹೇಳು. ಅವನು ತೆಗಿತಾನೆ. ಆಮೇಲೆ ಅದಕ್ಕೆ ಬೇರೆ ಬೀಗ ಹಾಕ್ಸಿದ್ರಾಯ್ತು. "

"ಸರಿ. ಆದ್ರೆ , ನಾಳೆ ಆಗತ್ತೋ ಇಲ್ವೋ ಸ್ವಲ್ಪ ಕೆಲಸ ಜಾಸ್ತಿ ಇದೆ. ಶನಿವಾರ ನೋಡೋಣ. "

"ಶಶಾಂಕ್, ಶನಿವಾರ ಅಂದ್ರೆ ಇನ್ನೂ ನಾಲ್ಕು ದಿನ ಕಣೋ ."

"ಅಮ್ಮಾ, ಏನಿದೆ ಅರ್ಜೆಂಟ್ ಈಗ ? ಇಷ್ಟು ದಿನ ಆ ಕಡೆ ನೋಡಿಲ್ಲ ಇನ್ನೊಂದ್ ನಾಲ್ಕು ದಿನ ತಾನೇ? "

"ಹಾಗಲ್ಲ ಕಣೋ , ನಂಗೆ ತಲೇಲಿ ಒಂದು ವಿಷಯ ಕೂತ್ರೆ ಕೊರೆಯೋಕೆ ಶುರುವಾಗತ್ತೆ . ಗೊತ್ತಲ್ವ ನಿಂಗೂ ?"

ರಶ್ಮಿ ಸಹಾಯಕ್ಕೆ ಬಂದಳು. " ಒಂದ್ ಕೆಲಸ ಮಾಡು ಶಶಾಂಕ್ , ಆಫೀಸ್ ಗೆ ಹೋಗೋವಾಗ ಅವನಿಗೆ ಹೇಳ್ಬಿಟ್ಟು ಹೋಗು ಹೇಗೂ ನಾನು ಇದೀನಲ್ಲ ಮನೇಲಿ ? ಅವನು ಬಂದು ಓಪನ್ ಮಾಡ್ಕೊಟ್ಟು ಹೋಗ್ಲಿ. ಅತ್ತೆಗೂ ಸಮಾಧಾನ “

"ಸರಿ ಬಿಡು . ಇಬ್ರೂ ಸೇರ್ಕೊಂಡ ಮೇಲೆ ನಾನೇನು ಮಾಡೋದು . ಹೇಳಿ ಹೋಗ್ತೀನಿ "

ಮರುದಿನ ಮಧ್ಯಾನದ ಹೊತ್ತಿಗೆ ಮುನಿಯಪ್ಪ ಬಂದ. ಎರಡೇ ನಿಮಿಷಕ್ಕೆ ಬೀಗ ತೆಗೆದು ಕೊಟ್ಟ. ಅವನಿಗೆ ಜಗುಲಿಯಲ್ಲಿ ಕಾಯಲು ಹೇಳಿ ರಶ್ಮಿ ದುಡ್ಡು ತರಲು ಹೋದಾಗ, ಜಾಹ್ನವಿ ಲಾಕರ್ ತೆರೆದು ಒಳಗೆ ಏನೇನಿದೆ ಎಂದು ಆತುರದಿಂದ ನೋಡಿದರು. ಮೂಲೆಯವರೆಗೂ ಕೈ ಹಾಕಿ ನೋಡಿದರು. ಕೈಗೆ ಸಿಕ್ಕ ಕಾಗದ ಪತ್ರ ಎಲ್ಲವನ್ನೂ ನೋಡಿ ಒಮ್ಮೆ ಸಮಾಧಾನದ ಉಸಿರು ಬಿಟ್ಟರು .

ಅಷ್ಟರಲ್ಲಿ ರಶ್ಮಿ ಒಳಬಂದಳು

"ಏನಾದ್ರೂ ಸಿಕ್ತಾ ಅತ್ತೆ ? "

" ಕೆಲವು ಮುಗಿದು ಹೋದ ಇನ್ಶುರನ್ಸ್ ನ ಕಾಗದ ಪತ್ರಗಳು , ಪೋಸ್ಟ್ ಆಫೀಸಿನಲ್ಲಿ ಇಟ್ಟ ಡಿಪಾಸಿಟ್ ಒಂದರ ಕಾಗದ ಇದೆ. ಮತ್ತೆ ನೋಡು ಇದೊಂದಿತ್ತು " ಎಂದು ಕವರ್ ಒಂದನ್ನು ಮುಂದೆ ಹಿಡಿದರು .

ತೆರೆದು ನೋಡಿದ ರಶ್ಮಿ “ ಅತ್ತೆ ಇದರಲ್ಲಿ ದುಡ್ಡಿದೆ “ . ಎಣಿಸಿದಳು. "ಅರವತ್ತು ಸಾವಿರ ಇದೆ ಅತ್ತೆ. ತೊಗೊಳಿ " ಎಂದು ಕೈಗಿಟ್ಟಳು .

"ನನಗೇಕೆ ರಶ್ಮಿ ? ನಿನ್ನತ್ರ ಇರಲಿ "

"ಅತ್ತೆ, ಇದು ಮಾವ ಇಟ್ಟ ದುಡ್ಡು. ನಿಮಗೆ ಸೇರಬೇಕು. ಇಟ್ಟುಕೊಳ್ಳಿ . ನಂಗೆ ಬೇಕಾದ್ರೆ ನಾನೇ ಕೇಳ್ತೀನಿ ."

ಈ ಘಟನೆ ಆಗಿ ಸುಮಾರು 4 - 5 ದಿನಕ್ಕೆ ಶಶಿ ಆಂಟಿ ಬಂದಿದ್ದು . ಅವರು ಹೋದ ಮೇಲಿಂದ ಅತ್ತೆ ಹೀಗೆ ಆಡ್ತಾ ಇರೋದು . ಎಂದು ರಶ್ಮಿ ನೆನಪಿಸಿಕೊಂಡಳು. ಆದರೆ ಯಾಕಿರಬಹುದು ಅಂತ ಮಾತ್ರ ಅವಳಿಗೆ ಹೊಳೀತಾ ಇಲ್ಲ .
ಅವರು ಏನಾದ್ರೂ ಅಂದಿರಬಹುದಾ ? ಅತ್ತೆಗೆ ಅದರಿಂದ ಬೇಜಾರಾಗಿರಬಹುದ? ಇಲ್ಲ, ಅದು ಸಾಧ್ಯವಿಲ್ಲ. ಅತ್ತೆಗೆ ಅವರು ಬೆಸ್ಟ್ ಫ್ರೆಂಡ್. ಅವರು ತಮ್ಮ ಗೆಳತಿಗೆ ಬೇಸರವಾಗೋ ತರ ಏನೂ ಮಾತಾಡೋಲ್ಲ. ಹಾಗಿದ್ರೆ ಇನ್ನೆನಿರ ಬಹುದು? ರಶ್ಮಿಗೆ ಇದು ಯಕ್ಷ ಪ್ರಶ್ನೆಯಂತಾಯಿತು .

ಹೀಗಿರೋವಾಗ ಎರಡು ಮೂರು ದಿನದ ನಂತರ ಕೆಲಸದ ವಿಜಯಾ
“ ಅಕ್ಕಾ , ದೊಡ್ದಮ್ಮಾರು ಊರಿಗೆನಾದ್ರೂ ಹೋಗ್ತಾರೆನಕ್ಕ ?" ಅಂತ ಕೇಳಿದ್ಲು .

"ಯಾಕೆ ? ಹಿಂಗ್ಯಾಕೆ ಕೇಳ್ತಿಯೇ ? "

"ಅಯ್ಯೋ , ಏನಿಲ್ಲಕ್ಕ , ಇವತ್ತು ರೂಂ ಕ್ಲೀನ್ ಮಾಡೋವಾಗ ಮೇಲಿಂದ ಆ ದೊಡ್ಡ ಬ್ಯಾಗ್ ಮತ್ತೆ ಸೂಟ್ ಕೇಸ್ ತೆಕ್ಕೊದು ಅಂತ ಕೆಳಗೆ ಇಳಿಸ್ಕಂದ್ರು . ಯಾಕ್ರಮ್ಮಾ ಅಂತ ಕೇಳ್ದೆ . ಬಟ್ಟೆ ತುಂಬಿಡಬೇಕು ಕಣೆ ಅಂತ ಅಂದ್ರು . "

"ಹೇಳಿದಾರಲ್ಲ ಮತ್ತೆ ? ಇನ್ನೇನು ಊರಿಗೆ ಹೋಗ್ತಾರಾ ಅಂತ ನನ್ನತ್ರ ಕೇಳೋದು ನೀನು ? "
ಹಾಗೆಂದು ವಿಜಯಾಳ ಬಾಯಿ ಮುಚ್ಚಿಸಿದರೂ ರಶ್ಮಿಗೆ ಇದು ಹೊಸ ಹುಳ ಬಿಟ್ಟಂತೆ ಆಯ್ತು.

ರಾತ್ರಿ ಮತ್ತೆ ಶಶಾಂಕ್ ಗೆ ವರದಿ ಮಾಡಿದಳು.
“ ಶಶಾಂಕ್ , ಏನಾಗ್ತಾ ಇದೆ ಅಂತ ಗೊತಾಗ್ತಿಲ್ಲ . ಈಗ ಬ್ಯಾಗ್ , ಸೂಟ್ ಕೇಸ್ ಎಲ್ಲ ಯಾಕೆ ತೆಗೆಸಿದರು ? “

"ನೋಡೋಣ ಇರು . ಅವಳಾಗಿ ಏನಾದ್ರೂ ಹೇಳ್ತಾಳಾ ಅಂತ . ಇಲ್ಲಾ ಅಂದ್ರೆ ನಾನೇ ಕೇಳ್ತೀನಿ ಆಯ್ತಾ? "

ಮರುದಿನ ಭಾನುವಾರ . ಮಧ್ಯಾಹ್ನದ ನಿದ್ದೆ ಮುಗಿಸಿಡ ಶಶಾಂಕ್ ರೂಮಿಂದ ಹೊರಗೆ ಬಂದ.. ಡೈನಿಂಗ್ ಟೇಬಲ್ ಮೇಲೆ ಅದಾಗಲೇ ಕುರುಕಲು ತಿಂಡಿ ಯ ಪ್ಲೇಟ್ ಬಂದಾಗಿತ್ತು. ಅವನನ್ನು ನೋಡಿ ರಶ್ಮಿ “ ಅತ್ತೇ , ನೀವು ಬನ್ನಿ ಕಾಫಿಗೆ “ ಎಂದು ಕರೆದು ಕಾಫಿ ತರಲು ಒಳಗೆ ಹೋದಳು .
ಮಕ್ಕಳು ಅದಾಗಲೇ ಪಕ್ಕದ ಮನೆಯ ಮಕ್ಕಳ ಜೊತೆ ಆಡಲು ಹೋಗಿಯಾಗಿತ್ತು.

ಕಾಫಿ ಕುಡಿಯುತ್ತಾ ಜಾಹ್ನವಿ ಹೇಳಿದರು
“ ಶಶಾಂಕ, ನಾನು ಸ್ವಲ್ಪ ದಿನ ಎಲ್ಲಾದರೂ ಹೋಗೋಣ ಅಂದ್ಕೊಂಡಿದೀನಿ “

ಶಶಾಂಕ್ ಮತ್ತು ರಶ್ಮಿ ಆಶ್ಚರ್ಯದಿಂದ ಒಬ್ಬರನ್ನೊಬ್ಬರು ನೋಡಿದರು. ಅಂದ್ರೆ ಊಹೆ ಪೂರ್ತಿ ತಪ್ಪಿಲ್ಲ ! ಆದರೆ, ತಮ್ಮ ಹಳ್ಳಿ , ಊರು ಅಂತೆಲ್ಲ ಈಗ ಏನೂ ಉಳಿದೇ ಇಲ್ಲ . ಇನ್ನೆಲ್ಲಿ ಹೋಗೋದು ಇವರು ? ಅದೂ ಈಗ ?

"ಅಮ್ಮಾ, ಇನ್ನೂ ನಾಲ್ಕೇ ತಿಂಗಳು ಆಗಿರೋದು…. "

"ಅಂದ್ರೆ ? "

"ಅದೂ, ಜನ ಸುಮ್ನೆ ಆಡ್ಕೊತಾರೆ ಅಂತ .."

"ಊರಿಗೆಲ್ಲ ಡಂಗುರ ಸಾರಬೇಕಿಲ್ಲ ಕಣೋ "

"ಹಾಗಲ್ಲಮ್ಮ, ಅಷ್ಟಕ್ಕೂ , ನಂಗೆ ಈಗ ರಜೆ ಸಿಕ್ಕಲ್ಲ ನಿನ್ನ ಕರ್ಕೊಂಡು ಹೋಗೋಕೆ. ಮಕ್ಕಳಿಗೆ ಸ್ಕೂಲ್ ಸೊ, ರಶ್ಮಿ ಬರೋಕಾಗಲ್ಲ . "

"ನೀವು ಕರ್ಕೊಂಡು ಹೋಗಿ ಅಂತ ಹೇಳ್ತಿಲ್ಲ ಕಣೋ . ನಾನು ಹೋಗ್ಬರ್ತೀನಿ ಅಂದೆ."

"ವರ್ಷ ಕಳೆಯೋದ್ರೊಳಗೆ ಯಾತ್ರೆ ಅಂತ ಹೇಗಮ್ಮ ಹೋಗ್ತೀಯಾ? ಅಷ್ಟಕ್ಕೂ .. ಈಗ ಎಲ್ಲಿಗೆ ಹೋಗ್ಬೇಕು ಅಂತ ? ಒಳ್ಳೆ ಟ್ರಾವೆಲ್ಸ್ ನ ಹುಡುಕ್ತೀನಿ ಸ್ವಲ್ಪ ದಿನ ತಡೆಯಮ್ಮ .. "

ಜಾಹ್ನವಿ ಆಶ್ಚರ್ಯದಿಂದ ಎಂಬಂತೆ ಮಗನ ಮುಖವನ್ನೇ ನೋಡಿದರು .

"ಅಲ್ಲ ಕಣೋ , ನಾನು ಹೋಗ್ಬೇಕು ಅಂದ ಕೂಡ್ಲೇ ಯಾತ್ರೆಗೆ ಹೋಗೋದು ಅಂತ ನೀ ಹೇಗೆ ಡಿಸೈಡ್ ಮಾಡಿದ್ಯೋ ? "

"ಅಂದ್ರೆ ? ಅಮ್ಮಾ , ಒಗಟಾಗಿ ಮಾತಾಡ್ಬೇಡ. ಸರಿ, ಈಗ ನೀನೇ ಹೇಳು ಎಲ್ಲಿಗೆ ಹೋಗ್ಬೇಕು ಅಂದ್ಕೊಂಡಿದೀಯಾ? " ಶಶಾಂಕ್ ದೀರ್ಘ ಉಸಿರೆಳೆದುಕೊಂಡು ಕೇಳಿದ.

" ಸಿಂಗಾಪುರ್ ! "

ಗಂಡ ಹೆಂಡತಿ ಇಬ್ಬರೂ ಅವಾಕ್ಕಾದರು .

" ಏನ್ ತಮಾಷೆನಮ್ಮ ಇದು ? " ಶಶಾಂಕ್ ಈಗ ಸ್ವಲ್ಪ ಬೇಸರದ ದನಿಯಲ್ಲಿ ಹೇಳಿದ. ರಶ್ಮಿ ಅತ್ತೆಯ ಮುಖವನ್ನೇ ನೋಡುತ್ತಾ ಕುಳಿತಿದ್ದಳು ನಂಬಲಾರದಂತೆ .

"ತಮಾಷೆ ಅಲ್ಲ ಕಣೋ . ನಿಜಕ್ಕೂ ಸಿಂಗಾಪುರಕ್ಕೆ ಹೋಗ್ಬೇಕು ನಂಗೆ . "

" ಏನ್ ಹೇಳ್ತಿದೀಯ ಅಮ್ಮ , ಹುಶಾರಿದೀಯ ? ಅಪ್ಪ ಸತ್ತು ನಾಲ್ಕು ತಿಂಗಳ ಕೂಡ ಆಗ್ಲಿಲ್ಲ . ಬೇರೆ ಯಾರೋ ಆಗಿದ್ರೆ ಬೇಜಾರಿಂದ ಮನೇಲೆ ಕೂತಿರೋರು , ಇಲ್ಲ ಹೋಗೋದಿದ್ರೂ ಯಾವ್ದೋ ಯಾತ್ರಾ ಸ್ಥಳಕ್ಕೆ ಹೋಗೋರು . ನೀನು ನೋಡಿದ್ರೆ ಸಿಂಗಾಪುರ್ ಸುತ್ತಾಡೋಕೆ ಹೋಗ್ಬೇಕು ಅಂತೀಯ? ಏನಮ್ಮ ಇದು ? ಅಷ್ಟಕ್ಕೂ ಅದೇನು ಪಕ್ಕದ ಊರಾ ? ಪಾಸ್ಪೋರ್ಟ್ , ವೀಸಾ ಎಲ್ಲ ಬೇಕು . ನಂಗೆ ರಜೆ ಇಲ್ಲ ಅಂತ ಆಗ್ಲೇ ಹೇಳ್ದೆ. ಅಲ್ಲೇನು ನೆಂಟರ ಮನೆ ಇದ್ಯಾ ? ಅಲ್ಲದೆ ಖರ್ಚು ? "ಶಶಾಂಕ್ ಸಿಡುಕಿದ .

"ಪಾಸ್ ಪೋರ್ಟ್, ಲಂಡನ್ ಲ್ಲಿ ನಿಮ್ಮನೆಗೆ ಬರೋವಾಗ ಮಾಡ್ಸಿದ್ವಲ್ಲ ? ಅದು ಅಷ್ಟು ದಿನ ರೂಮೆಲ್ಲ ಹುಡುಕಿದರೂ ಸಿಕ್ಕಿರಲಿಲ್ಲ. ಅಂತೂ ಅವತ್ತು ನಿಮ್ಮಪ್ಪನ ಲಾಕರ್ ಲ್ಲಿ ಸಿಕ್ತು . ಇನ್ನೂ ವ್ಯಾಲಿಡ್ ಇದೆ. ವೀಸಾ , ಫ್ಲೈಟ್ , ಹೋಟೆಲ್ ಯಾವುದರ ಬಗ್ಗೆನೂ ನೀನು ಯೋಚನೆ ಮಾಡಬೇಡ. ಎಲ್ಲ ವ್ಯವಸ್ಥೇನೂ ಆಗಿದೆ. ನೀನು ಬರೋ ಅಗತ್ಯ ಕೂಡ ಇಲ್ಲ. ನಾನು, ಶಶಿ ಹೋಗ್ತಿದೀವಿ. ಅವಳು ಎಲ್ಲ ನೋಡ್ಕೊಂಡಿದಾಳೆ. ಟಿಕೆಟ್ ಕೂಡ ಆಗತ್ತೆ ಇನ್ನೆರಡು ದಿನಕ್ಕೆ. ಅಷ್ಟೇ ಅಲ್ಲ , ನೀನು ದುಡ್ಡಿನ ಬಗ್ಗೆ ಕೂಡ ಯೋಚನೆ ಮಾಡಬೇಡ. ನನ್ನತ್ರ ಇದೆ ." ಶಾಂತವಾಗಿ ಹೇಳಿದಳು ಜಾಹ್ನವಿ .

"ಅಂದ್ರೆ ? ಎಲ್ಲ ತಯಾರಿನೂ ಮಾಡ್ಕೊಂಡ್ ಆಗಿದ್ಯಾ? ಏನಾಗಿದೆ ಅಮ್ಮ ನಿಂಗೆ? ಏನಿದು ಹುಚ್ಚಾಟ ? "

" ಅಲ್ಲ ಕಣೋ , ಇನ್ನು ಅಪ್ಪ ಸತ್ತು ಒಂದು ವರ್ಷನೂ ಆಗಿಲ್ಲ ಅನ್ನೋದು ಅಥವಾ ಯಾತ್ರೆಗೆ ಹೋಗೋದು ಬಿಟ್ಟು ಸುತ್ತೋಕೆ ಹೋಗ್ತೀಯ ಅಂದ್ಯಲ್ಲ … " ಒಂದು ದೀರ್ಘ ಉಸಿರೆಳೆದು ಕೊಂಡಳು ಜಾಹ್ನವಿ .
" ಈಗ ನಾನು ಹೇಳೋದು ಸರಿಯಾಗಿ ಕೇಳು . ನಾನು ದುಃಖ ಮರೀಬೇಕು ಅಂತ ಹೋಗೊದಾಗಿದ್ರೆ , ಯಾವುದೋ ತೀರ್ಥ ಕ್ಷೇತ್ರಕ್ಕೆ ಹೋಗಿ ಧ್ಯಾನ ಮಾಡಿ, ಪೂಜೆ ಮಾಡಿ ಸಮಾಧಾನ ಮಾಡಿಕೊಳ್ಳೋಕೆ ಪ್ರಯತ್ನ ಮಾಡ್ತಿದ್ದೆ. ಆದರೆ ಹಾಗಲ್ಲ
ನನಗೆ ಒಂಥರಾ ನನ್ನ ಬಿಡುಗಡೆ ನ ಸೆಲೆಬ್ರೇಟ್ ಮಾಡ ಬೇಕಾಗಿದೆ . ಸಿಂಗಪುರಕ್ಕೆ ಹೋಗ್ಬೇಕು ಅನ್ನೋದು ನನ್ನ ಎಷ್ಟೋ ವರ್ಷಗಳ ಕನಸು . ನಾನು ಮತ್ತೆ ಮತ್ತೆ ಅಲ್ಲಿಗೆ ಹೋಗೋ ಮಾತಾಡ್ತಿದ್ದೆ ಅಂತ ನಿಮ್ಮಪ್ಪ ನನ್ನಿಂದ ಪಾಸ್ ಪೋರ್ಟ್ ಕಸಿದು ಇಟ್ಗೊಂಡಿದ್ರು . "

ಮಗ ಸೊಸೆ ಇಬ್ರೂ ಆಶ್ಚರ್ಯದಿಂದ ಅಮ್ಮನ ಮುಖವನ್ನೇ ನೋಡ್ತಾ ನಿಂತರು .

"ಏನಮ್ಮ ನೀನು ? ಬಿಡುಗಡೆ ಅಂತೆ? ಯಾರಿಂದ? ಯಾವ ಜೈಲಿನಲ್ಲಿ ಇಟ್ಟಿದ್ರು ನಿನ್ನ ? ಹುಷಾರಾಗಿ ಇದೀಯಾ ಅಮ್ಮ ? ಏನೇನೋ ಮಾತಾಡ್ತಾ ಇದೀಯಲ್ಲ ? ಅಪ್ಪ ಸತ್ತು ಇನ್ನು ಸರಿಯಾಗಿ ನಾಲ್ಕು ತಿಂಗಳು ಕೂಡ ಆಗಿಲ್ಲ ನೀನು ಸುತ್ತೋಕೆ ಹೋಗ್ತೀನಿ ಅಂತೀಯಲ್ಲ ? ಯಾರು ಏನಂತಾರೆ ಅಂತ ಜ್ಞಾನ ಬೇಡವೆನಮ್ಮ ? "

"ಯಾರು ಏನಂತಾರೆ ಅಂತ ಯೋಚ್ನೆ ಮಾಡ್ತಾ ನನ್ನ ಜೀವನಾ ನೆ ಕಳೆದುಹೋಯ್ತು . ಬೇರೆಯವರಿಗೊಸ್ಕರ ನಮ್ಮ ಕನಸುಗಳನ್ನು ಎಷ್ಟು ದಿನ ಅಂತ ಬಚ್ಚಿಡಬೇಕು? ಅಷ್ಟಕ್ಕೂ ಯಾಕೆ ಬಚ್ಚಿಡಬೇಕು? ಹೇಳೋರು ನಮ್ಮ ಕಷ್ಟಕ್ಕೆ ಆಗ್ತಾರ?
ಅಲ್ಲ ಕಣೋ. ನೀನು ಮನೆಗೆ ವಾಪಸ್ ಬಂದು ಎಷ್ಟು ಸಮಯ ಆಯ್ತೋ ? ಪೂರ್ತಿ ಒಂದು ವರ್ಷ ಕೂಡ ಆಗಿಲ್ಲ. ಅದೂ ನಿಮ್ಮಪ್ಪನಿಗೆ ತೀರಾ ಹುಷಾರಿಲ್ಲ ನಂಗೆ ಒಬ್ಬಳಿಗೆ ಕಷ್ಟ ಆಗತ್ತೆ ನೋಡ್ಕೊಳೋದು ಅಂತ ಆದಾಗ ಮನೆಗೆ ವಾಪಸ್ ಬಂದೆ. ನೀನು ಮನೆ ಬಿಟ್ಟು ಎಷ್ಟು ವರ್ಷ ಆಯ್ತು ಹೇಳು ? ಪಿಯುಸಿ ಮುಗ್ಸಿ ಓದೋಕೆ ಹೊರಗೆ ಹೋದೊನು ಸರಿಯಾಗಿ ಮನೇಲಿ ಉಳಿಯೋಕೆ ಬಂದಿದ್ದು ಈಗ ತಾನೆ? ಅಂದ್ರೆ ಹೆಚ್ಚು ಕಮ್ಮಿ 20- 22 ವರ್ಷಗಳು . ಅಲ್ವಾ ? "

" ಅದಕ್ಕೂ ಇದಕ್ಕೂ ಏನಮ್ಮ ಸಂಬಂಧ ? "

" ಇದೆ ಕಣೋ . ಈ ಇಪ್ಪತ್ತೆರಡು ವರ್ಷಗಳಲ್ಲಿ ನನ್ನ ಜೀವನ ಹೇಗಿತ್ತು ಅಂತ ಯಾವಾಗದ್ರು ಸರಿಯಾಗಿ ಗಮನಿಸಿದ್ಯಾ ? ನಿನ್ ತಪ್ಪಿಲ್ಲ ಬಿಡು . ಕೆಲವು ವಾರಗಳ ರಜೆಗೆ ಬಂದಾಗ ಎಲ್ಲವೂ ಸರಿಯಾಗೇ ಇದ್ದಂಗೆ ಕಾಣಿಸತ್ತೆ. ಚಿಕ್ಕ ಪುಟ್ಟ ಬದಲಾವಣೆಗಳು ಕಂಡರೂ ಆ ಬಗ್ಗೆ ಯಾರೂ ಅಷ್ಟಾಗಿ ತಲೆ ಕೆಡಿಸ್ಕೊಳೋದಿಲ್ಲ . ನಾಲ್ಕು ದಿನ ಖುಷಿಯಾಗಿ ಇದ್ದು ಹೋದರಾಯ್ತು ಅಂದ್ಕೋತಾರೆ.
ನಿಂಗಾಗಿದ್ದೂ ಅದೇ . ನಿನ್ನಪ್ಪ ಮತ್ತು ನನ್ನ ನಡುವಿನ ಅಂತರ ಹೆಚ್ಚಾಗಿದ್ದು ನಿನ್ ಕಣ್ಣಿಗೆ ಯಾವತ್ತೂ ಬೀಳಲಿಲ್ಲ. ಅಥವಾ ನಾನು ಅದನ್ನ ಮರೆ ಮಾಚ್ತಾ ಇದ್ದೆ. ಆದ್ರೆ ನಾನು ಅನುಭವಿಸಿದ ನರಕ ನನಗೊಬ್ಬಳಿಗೆ ಗೊತ್ತು . "

" ಅಮ್ಮಾ, ಅಪ್ಪ ಈಗ ಇಲ್ಲ ಅಂತ ಏನೇನೋ ಮಾತಾಡ್ಬೇಡ. ಅಪ್ಪ ಯಾವತ್ತೂ ನಿನ್ನ ಮಿಸ್ ಟ್ರೀಟ್ ಮಾಡಿದ್ದು ನೋಡಿಲ್ಲ ನಾನು .ಎಲ್ಲೇ ಹೋದ್ರೂ ಯಾವಾಗಲೂ ಜೊತೇಲೆ ಹೋಗ್ತಾ ಇದ್ರಿ . ಅಪ್ಪಂಗೆ ಏನಿಷ್ಟ ಅಂತ ಅದನ್ನ ನೀನು ಮಾಡ್ತಾ ಇದ್ದೆ . ಅದೆಲ್ಲ ನೋಡಿ ನನಗೆಷ್ಟು ಖುಷಿ ಆಗ್ತಿತ್ತು ಗೊತ್ತ ನಿಂಗೆ? ಅಪ್ಪ ಒಂದಿನ ನಿಂಗೆ ಜೋರಾಗಿ ಒಂದು ಮಾತು ಹೇಳಿದ್ದು ನಾನು ಕೇಳಿಲ್ಲ. ಅಂಥಾದ್ರಲ್ಲಿ ನೀನು ಹೀಗೆ ಹೇಳ್ತೀಯಲ್ಲಮ್ಮ ? "

" ಹ್ಮ್, ಎಷ್ಟು ವಿಚಿತ್ರ ಆಲ್ವಾ? ಸ್ಟೇಜ್ ಮೇಲೆ ರಾಮಂದೋ, ಬುದ್ಧಂದೋ ಪಾತ್ರ ಮಾಡ್ತಿರೋವ್ನು ಪರದೆಯ ಹಿಂದೆ ಮೇಕಪ್ ರೂಂ ನಲ್ಲಿ ಸಿಗರೇಟ್ ಅಥ್ವಾ ಬೀಡಿ ಸೇದಿರಬಹುದು ಅಂದ್ರೆ ನಾವೂ ನಂಬೋಕೆ ತಯಾರಿರಲ್ಲ .ನಂಬೋದು ತಮ್ಮೆದುರು ಏನು ಕಾಣತ್ತೋ ಅದನ್ನ ಮಾತ್ರ . .ಕೇವಲ ಹೊಡೆದು ಬಯ್ದು ಮಾಡಿದ್ರೆ ಮಾತ್ರ ಹಿಂಸೆ ಕೊಟ್ಟಂಗೆ ಅಂತ ಯಾಕೆ ಅಂದ್ಕೋತಾರೆ ಎಲ್ರೂ ? ಜೋರಾಗಿ ಬಯ್ದೇನೂ ಬರೀ ಮೆಲು ಮಾತಲ್ಲೇ ನೋವು ಕೊಡಬಹುದು ಅನ್ನೋದು ಗೊತ್ತ ನಿಂಗೆ? ಕೈ ಎತ್ತದೇನೂ ಮನಸಿನ ಮೇಲೆ ಎಂಥಾ ಗಾಯ ಮಾಡಬಹುದು ಅನ್ನೋದು ಗೊತ್ತೇನೋ ನಿಂಗೆ ? ಎಲ್ಲರೆದುರು ಶಾಂತವಾಗಿದ್ದು ಒಳ್ಳೆತನದ ಮುಖವಾಡ ಹಾಕಿ ಹಿಂದಿಂದ ಹೇಗೆ ಚುಚ್ಚಿ ಚುಚ್ಚಿ ಚಿತ್ರಹಿಂಸೆ ಕೊಡ ಬಹುದು ಅನ್ನೋದು ಗೊತ್ತ ನಿಂಗೆ? ಇದೆಲ್ಲವನ್ನೂ ಇನ್ನೊಬ್ಬರಿಗೆ, ಅಷ್ಟೇನು ಹೆತ್ತ ಮಗನಿಗೆ ಗೊತ್ತಾಗದೆ ಇರೋ ತರ ಮುಚ್ಚಿಟ್ಟು ಬದುಕೋ ಹಿಂಸೆ ಹೇಗಿರತ್ತೆ ಗೊತ್ತಾ ನಿಂಗೆ?

ಈಗ ಇವೆಲ್ಲವುದರಿಂದ ನಂಗೆ ಬಿಡುಗಡೆ ಸಿಕ್ಕಿದದಂತಲ್ವಾ ? ಅದನ್ನ ಸೆಲೆಬ್ರೇಟ್ ಮಾಡೋದ್ರಲ್ಲಿ ಏನೂ ತಪ್ಪಿಲ್ಲ. ನನ್ನ ಗಂಡ ಅನ್ನೋ ಅಭಿಮಾನ -ಪ್ರೀತಿ ಎಲ್ಲ ಸುಟ್ಟು ಯಾವ್ದೋ ಕಾಲ ಆಗೋಗಿದೆ. ಜೊತೇಲಿ ಒಂದೇ ಮನೇಲಿ , ಉಸಿರು ಕಟ್ಟಿದಂತೆ ಆದ್ರೂ ಒಟ್ಟಿಗೆ ಬದುಕಿದ್ದು ಕೇವಲ ಮದ್ವೆ ಆಗಿದಿನಲ್ಲ ಅನ್ನೋ ಕಾರಣಕ್ಕಾಗಿ . ಸಮಾಜಕ್ಕೆ ಹೆದರಿಕೊಂಡು . ಬಿಟ್ಟು ಹೋಗೋ ಧೈರ್ಯ ಇರಲಿಲ್ಲ ನೋಡು ಅದಕ್ಕಾಗಿ . ಮಗನಿಗೆ ಅಪ್ಪ ಬೇಕಲ್ಲ ಅನ್ನೋದಕ್ಕಾಗಿ.
ಇನ್ನು ಅದ್ಯಾವ ಹಂಗೂ ಬೇಡ ನಂಗೆ. ಯಾರು ಏನು ಬೇಕಾದ್ರೂ ಅಂದಕೊಳ್ಳಿ. ಅವರ್ಯಾರೂ ನನ್ನ ಕಷ್ಟದಲ್ಲಿ ಜೊತೆಯಾಗಿಲ್ಲ. ನಂಜೊತೆ ಆಸರೆಯಾಗಿ ನಿಂತೊಳು ಶಶಿ ಮಾತ್ರ .

ನೆನಪಿಟ್ಕೋ ಶಶಾಂಕ್, ಒಬ್ಬ ಹೆಂಡತಿ, ನಲವತ್ತು ವರ್ಷಕ್ಕೂ ಹೆಚ್ಚು ಕಾಲ ಗಂಡ ಅನಿಸಿಕೊಂಡೋನು ಸತ್ತಿದ್ದನ್ನ ತನ್ನ ಬಿಡುಗಡೆ ಅಂತ ಸೆಲೆಬ್ರೇಟ್ ಮಾಡಬೇಕು ಅಂದುಕೊಳೋದು ಒಂಥರಾ ಅವಳು ಅವನಿಂದ ಅದೆಷ್ಟು ನೋವನ್ನ ಅನುಭವಿಸಿರಬಹುದು ಅನ್ನೋದನ್ನ ತೋರಿಸಲ್ವ ?

ಇದಕ್ಕಿಂತ ಜಾಸ್ತಿ ವಿವರಿಸಿ ಹೇಳೋದು ಸಾಧ್ಯ ಇಲ್ಲ ಕಣೋ. ನಾನು ನಿರ್ಧಾರ ಮಾಡಿ ಆಗಿದೆ. ಶಶಿ ಎಲ್ಲಾನೂ ಅರೇಂಜ್ ಮಾಡಿದ್ದಾಳೆ. ನಾವಿಬ್ರೂ ಹೋಗಿ ಬರ್ತೀವಿ.

ನೀವುಗಳು ಅರ್ಥ ಮಾಡ್ಕೋತೀರಾ ಅಂದುಕೊತೀನಿ "

ಜಾಹ್ನವಿ ನಿಧಾನವಾಗಿ ಎದ್ದು ತಮ್ಮ ರೂಮಿಗೆ ನಡೆದರು.

ಶಶಾಂಕ್ ಹಾಗೂ ರಶ್ಮಿ ನಂಬಲಾರದವರಂತೆ ಅವರನ್ನೇ ನೋಡುತ್ತಾ ಕುಳಿತಿದ್ದರು.

November 24, 2023

ಸಾಗುತಿರಲಿ ಬದುಕು...


ಕೈಲಿ ಬಿಸಿ ಕಾಫಿಯ ಕಪ್ ಹಿಡಿದು ಎಂದಿನಂತೆ ಆ ಕಲ್ಲು ಬೆಂಚಿನ ಮೇಲೆ ಕುಳಿತಾಗ ಅದಾಗಲೇ ಎದುರಿಗಿರುವ ಕೆರೆಯ ನೀರಿನ ಜೊತೆ ಮುಳುಗುತ್ತಿರುವ ಸೂರ್ಯ ಹೊರಡುವ ಮುನ್ನ ಕಡೆಯ ಸಲ ಎಂಬಂತೆ ಚೆಲ್ಲಾಟ ವಾಡುತ್ತಿದ್ದ. ಅವನ ತುಂಟಾಟಕ್ಕೋ ಎಂಬಂತೆ ಕೆರೆಯಲ್ಲ ಕಂಡೂ ಕಾಣದಂಥ ಅಲೆಗಳು ನಾಚಿ ಕೆಂಪಾಗುತ್ತಿದ್ದವು .
ಬಿಸಿ ಕಾಫಿ ಗಂಟಲಲ್ಲಿ ಇಳಿಯುತ್ತಾ ಹಿತವೆನಿಸುತ್ತಿದ್ದಂತೆ ಅವಳ ಕೈ ಅಯಾಚಿತವಾಗಿ ಬೆಂಚಿನಲ್ಲಿ ತನ್ನ ಪಕ್ಕದ ಖಾಲಿ ಜಾಗವನ್ನು ನೇವರಿಸಿತು. ಕೆರೆಯ ಮೇಲಿಂದ ಬೀಸಿ ಬಂದ ತಂಪು ಗಾಳಿಗೆ ಮೈ ಒಮ್ಮೆ ಸಣ್ಣಗೆ ನಡುಗಿತು. ಮೊದಲಾದರೆ ಇಂಥಾ ಸಂಜೆಗಳಲ್ಲಿ ಬೆಚ್ಚಗೆ ಬಳಸಿ ಕೂರಲು ಅವನಿರುತ್ತಿದ್ದ .
ವೀಕೆಂಡ್ ಗಳಲ್ಲಿ ಸಂಜೆಗೂ ಮೊದಲು ಇಲ್ಲಿ ಬಂದು ಇದೆ ಬೆಂಚ್ ನ ಮೇಲೆ ಕುಳಿತು ಕತ್ತಲಾಗುವವರೆಗೂ ಮಾತನಾಡುತ್ತ , ಕೆಲವೊಮ್ಮೆ ಒಬ್ಬರನ್ನೊಬ್ಬರು ಬಳಸಿ ಮೌನವಾಗಿ ಮುಳುಗುವ ಸೂರ್ಯನನ್ನು ನೋಡುತ್ತಾ ಕುಳಿತುಕೊಳ್ಳುವುದನ್ನು ಅವನೇ ಕಲಿಸಿದ್ದ .
ಬೆಳ್ಳಿಯಂತೆ ಹೊಳೆಯುವ ನೀರು ಮೆಲ್ಲಗೆ ಬಣ್ಣ ಬದಲಾಯಿಸುತ್ತಾ , ಕೆಂಪಾಗುತ್ತಾ ಕೊನೆಗೆ ಕಪ್ಪಾಗುವ , ಆ ಕತ್ತಲಲ್ಲಿ ಕೆರೆಯಾಚೆ ಈಚೆಗಿನ ಕಟ್ಟಡಗಳ , ದೀಪಗಳು, ಬೀದಿ ದೀಪಗಳು ಹೊತ್ತಿಕೊಂಡು ಆ ಕಪ್ಪು ನೀರಲ್ಲಿ ಪ್ರತಿಫಲಿಸುವವರೆಗೂ ಆ ಬೆಂಚ್ ನ ಮೇಲಿಂದ ಏಳುತ್ತಿರಲಿಲ್ಲ ಅವರು. ಆಮೇಲೆ ಕೈ ಹಿಡಿದು ಅಷ್ಟು ದೂರ ನಿಧಾನವಾಗಿ ವಾಕ್ ಮಾಡಿ ಮರಳುವುದು ಅಭ್ಯಾಸ. ಆ ನಡುವೆ ಅಲ್ಲೇ ಹುಟ್ಟಿಕೊಂಡಿದ್ದ ಪುಟ್ಟ ಹೋಟೆಲ್ ನಲ್ಲಿ ಚಹಾ ಅಥವಾ ಕಾಫಿ ಕುಡಿದು ಕಲ್ಲು ಬೆಂಚ್ ನ ಕಡೆ ಹೋಗುವುದು ರೂಢಿಯಾಯಿತು .
ಅವರಿಬ್ಬರನ್ನು ಪ್ರತಿ ವಾರಾಂತ್ಯದಲ್ಲಿ , ಕೆಲವೊಮ್ಮೆ ವಾರದ ದಿನಗಳಲ್ಲೂ ನೋಡಿ ಅಂಗಡಿಯವರಿಗೂ ಅಭ್ಯಾಸವಾಯಿತು. ಮಳೆಗಾಲದಲ್ಲೂ ತಪ್ಪದೆ ಬರುವ ಅವರು ಆ ಟೀ ಸ್ಟಾಲ್ ನ ಹೊರಮೂಲೆಯ ಇಬ್ಬರೆ ಕುಳಿತುಕೊಳ್ಳುವ ಟೇಬಲ್ ನ ಕಾಯಂ ಗಿರಾಕಿಗಳಾಗಿ ಬಿಟ್ಟರು. ಪರಿಚಯ ಮುಗುಳ್ನಗುವಿನಿಂದ ಹೇಗಿದೀರಾ ಸಾರ್ ಎನ್ನುವವರೆಗೆ, ಕೊನೆಗೆ ಆ ಟೀ ಸ್ಟಾಲ್ ನವನ ಮದುವೆಗೆ ಅಟೆಂಡ್ ಆಗುವವರೆಗೂ ಬೆಳೆಯಿತು .
ಅವನ ಹೆಂಡತಿಯೂ ಬಂದ ಮೇಲೆ , ಕೇವಲ ಟೀ/ ಕಾಫಿ ಬಿಸ್ಕಟ್ ಸಿಗುತ್ತಿದ್ದ ಸ್ಟಾಲ್ ನಲ್ಲಿ , ಬಿಸಿ ಮೆಣಸಿನಕಾಯಿ ಭಜಿ, ಈರುಳ್ಳಿ ಪಕೋಡಾ , ಮಸಾಲೆ ಮಂಡಕ್ಕಿಗಳು ಜನಪ್ರಿಯವಾಗ ತೊಡಗಿ ಗಿರಾಕಿಗಳೂ ಹೆಚ್ಚಾದರು . ಆದರೂ ಇವರಿಬ್ಬರಿಗೂ ಇದ್ದ ವಿಶೇಷ ಸ್ಥಾನ ಬದಲಾಗಲಿಲ್ಲ .
ಹೋಟೆಲ್ ನ ದಂಪತಿಗೆ ಮಗುವೂ ಆಯಿತು . ಮಗುವಿಗೆ ಎರಡು ತಿಂಗಳಾಗುತ್ತಲೇ ಅವಳು ಶಿಶುವನ್ನು ಕಟ್ಟಿಕೊಂಡು ಕೆಲಸ ಶುರು ಮಾಡಿದ್ದಳು.
ಕೇಳಿದಾಗ, ಅಯ್ಯೋ ಅಕ್ಕ, ಇಲ್ಲಿ ಒಬ್ರೇ ಆದ್ರೆ ವ್ಯಾಪಾರ ಕಮ್ಮಿ ಆಗೋಗತ್ತೆ. ಮಗಿನ್ನ ನೋಡ್ಕೊಳೋಕೆ ಮನೇಲಿ ಯಾರು ಇಲ್ಲ . ಅದಕೆ ಇಲ್ಲೇ ಕರ್ಕೊಂಡ್ ಬರ್ತೀನಿ ಅಕ್ಕಾ ಎಂದಿದ್ದಳು ನಗುತ್ತಲೇ .
ಇದ್ದಕ್ಕಿದ್ದಂತೆ ಒಂದು ವೀಕೆಂಡ್ ಅವರಿಬ್ಬರೂ ಬರಲೇ ಇಲ್ಲ . ಅದರ ನಂತರದ ವೀಕೆಂಡಲ್ಲೂ ಅವರು ಕಾಣಿಸಲಿಲ್ಲ ! ಇನ್ನೂ ಕೆಲವು ವಾರಗಳು ಅವರಿಬ್ಬರ ಪತ್ತೆಯೇ ಇಲ್ಲದೆ ಕಳೆದವು !
ಅಂದು ಟೀ ಸ್ಟಾಲ್ ನಲ್ಲಿ ಸಿಕ್ಕಾಪಟ್ಟೆ ರಶ್ ಇತ್ತು. ಕೊನೆಯಲ್ಲಿ ಪಾತ್ರೆ ತೊಳೆದು ಟೇಬಲ್ ಎತ್ತಿಡುತ್ತಿರುವಾಗ ಟೀ ಸ್ಟಾಲ್ ನವನ ಹೆಂಡತಿ ಆ ಬಗ್ಗೆ ಗಂಡನ ಗಮನ ಸೆಳೆದಳು . ಏನೋ ತೊಂದರೆ ಆಗಿರಬಹುದು ಕಣೆ , ಊರಿಗೆ ಹೋಗಿರಬಹುದು , ತುಂಬಾ ಕೆಲ್ಸನೂ ಏನೋ, ಮದ್ವೆ ಆಗಿ ಹನೀಮೂನ್ ಗೆ ಹೋಗಿರಬಹುದು ಎಂದು ಗಂಡ ನಕ್ಕ !
ಮದ್ವೆ ಆದ್ರೆ ನಮಗೆ ಹೇಳ್ತಿರಲಿಲ್ವೇನ್ರಿ? ಏನಾದ್ರೂ ಹುಷಾರಿಲ್ವೇನೋ .. ಹೆಂಡತಿ ಕೊನೆಯ ಸಾಧ್ಯತೆಯ ಬಗ್ಗೆ ಹೇಳುವಾಗ ಒಮ್ಮೆಲೇ ಅವರಿಬ್ಬರೂ ಕಳವಳಗೊಂಡರು.
ಇನ್ನೂ ಎರಡು ವೀಕೆಂಡ್ ಕಳೆದರೂ ಪತ್ತೆ ಇಲ್ಲದಾಗ ಟೀ ಅಂಗಡಿಯವನೂ , ಅವನ ಹೆಂಡತಿಯೂ ಗಾಬರಿಯಾಗತೊಡಗಿದರು.ಅವರಿಗೂ ಏನೋ ತಳಮಳ . ಅವ್ರ ಫೋನ್ ನಂಬರ್ ಕೂಡ ತಮಗೆ ಗೊತ್ತಿಲ್ಲವಲ್ಲ ಎಂಬ ಅಪರಾಧಿ ಪ್ರಜ್ಞೆ !
ಪೂರ್ತಿ ಐದು ತಿಂಗಳುಗಳ ಮೇಲೆ ಅವಳು ಬಂದಳು . ಒಬ್ಬಳೇ. ಒಂದು ಸ್ಟ್ರಾಂಗ್ ಕಾಫಿ ಕೊಡು ಎನ್ನುವಾಗ ಅವಳ ಮುಖದಲ್ಲಿ ಬೇರೇನೂ ಕೇಳಬೇಡ ಪ್ಲೀಸ್ ಎಂಬ ಭಾವ ವಿತ್ತು. ಮಾಮೂಲು ಟೇಬಲ್ ಗೆ ಹೋಗಿ ಕುಳಿತು ಮುಳುಗುತ್ತಿದ್ದ ಸೂರ್ಯನತ್ತ ದೃಷ್ಟಿ ನೆಟ್ಟು ನಿಧಾನವಾಗಿ ಕಾಫಿ ಹೀರುತ್ತಿದ್ದವಳನ್ನು ಗಂಡ ಹೆಂಡತಿ ಇಬ್ಬರೂ ಕದ್ದು ಕದ್ದು ನೋಡುತ್ತಿದ್ದರು . ಆಳಕ್ಕಿಳಿದಿದ್ದ ಕಣ್ಣುಗಳು , ಬಾಡಿದ್ದ ಮುಖ , ಸೋತು ಹೋದಂತಿದ್ದ ಭಾವ ಯಾಕೋ ಎಲ್ಲವೂ ಸರಿ ಇಲ್ಲ ಎಂಬುದನ್ನು ಎದ್ದು ಹೇಳುತ್ತಿದ್ದವು . ಕೇಳುವುದೋ ಬೇಡವೋ ಎಂಬ ದ್ವಂದ್ವ .
ಮರುದಿನವೂ ಒಬ್ಬಳೇ ಬಂದಳು . ರಶ್ ಇತ್ತು. ಮಾಮೂಲು ಟೇಬಲ್ ಕೂಡ ಖಾಲಿ ಇರಲಿಲ್ಲ.
ಅಕ್ಕಾ, ನೀವು ಆ ಬೆಂಚ್ ಲ್ಲಿ ಕೂತಿರಿ . ನಾನು ಅಲ್ಲೇ ಕಳಿಸ್ತೀನಿ ಎಂದ ಅಂಗಡಿಯವನು.
ಅವಳು ಒಲ್ಲದ ಮನಸಿಂದ ಕಾಲೆಳೆಯುತ್ತಾ ಹೋಗಿ ಬೆಂಚ್ ಮೇಲೆ ಕುಳಿತಳು . ಪಕ್ಕದ ಜಾಗವನ್ನು ನೇವರಿಸುತ್ತಾ , ಸ್ವಲ್ಪ ಹೊತ್ತಿಗೆ ಹುಡುಗನೊಬ್ಬ ಕಾಫಿ ತಂದುಕೊಟ್ಟ .
ಮತ್ತೆ ಮುಂದಿನ ಪ್ರತಿ ವೀಕೆಂಡ್ ಗೂ ಅವಳು ಬಂದಳು . ಒಬ್ಬಳೇ !
ಅವಳು ಹೋಗಿ ಕಲ್ಲುಬೆಂಚ್ ನ ಮೇಲೆ ಕುಳಿತುಕೊಳ್ಳುವುದೂ ,ಅಲ್ಲಿಗೆ ಕಾಫೀ ಬರುವುದೂ , ಹೊರಡುವಾಗ ಕಾಫೀ ಲೋಟ ಹಾಗೂ ದುಡ್ಡನ್ನು ಗಲ್ಲ ಪೆಟ್ಟಿಗೆಯ ಮೇಲೆ ಅವಳು ಇಟ್ಟು ವಾಪಸಾಗುವುದೂ ನಡೆಯುತ್ತಲೇ ಇತ್ತು. ಏನಾಯ್ತು ಎಂದು ಎಷ್ಟೋ ಸಲ ಕೇಳಬೇಕೆನಿಸಿದರೂ , ಗಂಡ ಹೆಂಡತಿ ಸುಮ್ಮನಾಗುತ್ತಿದ್ದರು. ಮೊದಮೊದಲು ಸೋತಂತಿದ್ದ ಅವಳ ಮುಖ ನಿಧಾನವಾಗಿ ಚೇತರಿಸಿಕೊಳ್ಳುತ್ತಿದುದನ್ನು ನೋಡಿ ಅವರಿಗೆ ಗಾಯವನ್ನು ಕೆದಕುವ ಮನಸಾಗುತ್ತಿರಲಿಲ್ಲ . ಅದೆಷ್ಟೋ ವಾರಗಳು ಹೀಗೆ ಕಳೆದವು.
ಕೊನೆಗೊಂದು ದಿನ ತೀರಾ ಬಸವಳಿದಂತೆ ಕಾಣುತ್ತಿದ್ದವಳು ಎಂದಿಗಿಂತ ತಡವಾಗಿ ಬಂದಳು . ಅಂಗಡಿಯಿಂದ ನೋಡುತ್ತಿದ್ದ ಇಬ್ಬರಿಗೂ ಅವಳು ಪದೇ ಪದೇ ಕಣ್ಣೊರೆಸಿಕೊಳ್ಳುತ್ತಿದ್ದಾಳೆ ಎಂದು ಅನಿಸುತ್ತಿತ್ತು . ತೀರಾ ಕತ್ತಲಾದರೂ ಅವಳು ಏಳದಾಗ , ಹೆಂಡತಿ ಬೆಂಚ್ ನ ಬಳಿ ಹೋದಳು .
ಕಾಲುಗಳನ್ನು ಮಡಚಿ ಮೇಲಿಟ್ಟುಕೊಂಡು ಎರಡೂ ಕೈಯಿಂದ ಕಾಲುಗಳನ್ನು ಬಳಸಿ ಮಂಡಿಯಮೇಲೆ ಗಲ್ಲವೂರಿ ಶೂನ್ಯದಲ್ಲಿ ದೃಷ್ಟಿ ನೆಟ್ಟವಳಿಗೆ ತನ್ನೆದುರು ಟೀ ಅಂಗಡಿಯವನ ಹೆಂಡತಿ ಬಂದು ಕುಳಿತಿದ್ದೂ ಅರಿವಿರಲಿಲ್ಲ.
ಅವಳು ಮೆಲ್ಲಗೆ " ಅಕ್ಕಾ" ಎಂದಾಗ ಎಚ್ಚರಾಯಿತು. " ಅಕ್ಕಾ ಏನಾಯ್ತಕ್ಕಾ ? ತುಂಬಾ ಬೇಜಾರಲ್ಲಿದೀರಾ. ನಿಮಗೆ ಪರವಾಗಿಲ್ಲ ಅಂದರೆ ನಂಗೆ ಹೇಳಿ ಅಕ್ಕಾ ... "
ಕೆಲವು ಸೆಕೆಂಡ್ಗಳು ಅವಳ ಮುಖ ನೋಡಿದ ಈಕೆ , "ರಾಧಾ" ಎಂದು ಟೀ ಸ್ಟಾಲ್ ನವಳನ್ನು ಗಟ್ಟಿಯಾಗಿ ಅಪ್ಪಿಕೊಂಡು ಬಿಕ್ಕ ತೊಡಗಿದಳು . ಗಾಬರಿಯಾದ ರಾಧಾ .. ಮೆಲ್ಲಗೆ ಬೆನ್ನು ನೇವರಿಸಿದಳು .
" ಅವನು ನನ್ನ ಬಿಟ್ಟು ಹೋಗಿಬಿಟ್ಟ ಕಣೇ.,..." ಬಿಕ್ಕು ಹೆಚ್ಚಾಯಿತು.
ರಾಧಾಗೆ ಏನೂ ಅರ್ಥವಾಗದೇ , ಏನು ಹೇಳಬೇಕೋ ತಿಳಿಯದೆ ಸುಮ್ಮನೆ ನಿಂತಳು.
"ಇಲ್ಲ, ಅವನಾಗೆ ಹೋಗಲಿಲ್ಲ. ನನ್ನ ದುರ್ದೈವ ಕಿತ್ಕೊಳ್ತು. " ಮತ್ತೆ ಬಿಕ್ಕಿದಳು.
"ಅಕ್ಕಾ "….. ಮುಂದೇನೂ ಹೇಳಲಾಗದೆ ರಾಧಾ ತಡವರಿಸಿದಳು.
" ಅಪ್ಪ ಅಮ್ಮನ ಹತ್ರ ನಮ್ ವಿಷಯ ಹೇಳ್ತೀನಿ ಅಂತ ಊರಿಗೆ ಹೋದ. ಹೋಗೋವಾಗ ಬಸ್ ಆಕ್ಸಿಡೆಂಟ್ ಲ್ಲಿ…… " ಬಿಕ್ಕಿದಳು.
" ಕೊನೇ ಬಾರಿಗೆ ಅವನ ಮುಖ ನೋಡೋಕೂ ಆಗಲಿಲ್ಲ. ಬದುಕಿದರೂ ಪ್ರತಿ ದಿನವೂ ಸಾಯ್ತಾ ಇದೀನಿ. ಇವತ್ತು ಅವನ ಹುಟ್ಟು ಹಬ್ಬ ಆಗಿತ್ತು , ಆದ್ರೆ.... " ಅವಳ ಬಿಕ್ಕು ಹೆಚ್ಚಾಯಿತು.
ಏನು ಹೇಳುವುದೋ ತಿಳಿಯದೇ ರಾಧಾ ಒಮ್ಮೆ ಸ್ತಬ್ಧವಾದಳು. ಮೆಲ್ಲಗೆ “ ಅಕ್ಕಾ., ಏನು ಮಾಡೋದು? ಎಲ್ಲ ನಮ್ಮ ಹಣೆಬರಹ! ದೇವರಿಗೆ ಕರುಣೆ ಇಲ್ಲ “ ಸಮಾಧಾನಿಸುವ ಪ್ರಯತ್ನ ಮಾಡಿದಳು.
ಅಂದು ಅವರು ಗಂಡ ಹೆಂಡತಿ ಇಬ್ಬರೂ ತಮ್ಮವರೇ ಯಾರನ್ನೋ ಕಳೆದುಕೊಂಡಂತೆ ಅವಳ ದುಃಖದಲ್ಲಿ ಪಾಲುದಾರರಾದರು.
ದಿನ ಉರುಳುತ್ತಿತ್ತು.
ಒಂದು ತಂಪಾದ ಸಂಜೆ ಕಾಫಿ ತೆಗೆದುಕೊಂಡು ಹೋದ ರಾಧಾ ಅವಳ ಪಕ್ಕ ಕುಳಿತು
“ ಅಕ್ಕಾ, ನಿಮಗೆ ಹೇಳೋ ಜಾಗದಲ್ಲಿ ನಾನಿಲ್ಲ. ಆದ್ರೂ ನೀವು ನಮಗೆ ಒಂಥರಾ ಮನೆ ಜನ ಇದ್ದಂಗೆ ಆಗಿದೀರಾ . ಅದ್ಕೆ ಹೇಳ್ತಿದೀನಿ, ಹೋಗೋರು ಹೋಗಿಬಿಟ್ರು. ಆದ್ರೆ ನೀವು ಹೀಂಗೆ ಬೇಜಾರಲ್ಲೇ ಇರ್ತೀನಿ ಅಂದ್ರೆ ಸರೀನಾ? ನಾವೂ ಕೂಡ ಹಳೇದನ್ನ ಹಿಂದೆ ಬಿಟ್ಟು ಮುಂದ್ ಹೋಗೋದನ್ನ ಕಲೀಬೇಕು ಅಲ್ವಾ? "
ಅವಳು ರಾಧಾಳ ಮುಖವನ್ನೇ ದಿಟ್ಟಿಸಿದಳು.
" ಅಕ್ಕಾ, ಅವರನ್ನ ವಾಪಸ್ ತರೋಕೆ ಆಗಲ್ಲ. ಅವರಿಗಾಗಿ ಜೀವನ ಇಡೀ ಕಣ್ಣೀರು ಹಾಕಿದ್ರೆ, ಅವರ ಆತ್ಮಕ್ಕೆ ಶಾಂತಿ ಸಿಗುತ್ತಾ? ನೀವೂ ಹೊಸದಾಗಿ ಬದುಕು ಶುರು ಮಾಡಿ ಅಂತ ನಾನು ಹೇಳೋದು ಅಕ್ಕಾ. “
ಅವಳು ಮೌನವಾಗಿ ಶೂನ್ಯವನ್ನೇ ದಿಟ್ಟಿಸುತ್ತಾ ಕುಳಿತಳು. ಜೀವವಿಲ್ಲದ ದನಿಯಲ್ಲಿ “ ರಾಧಾ, ಅಷ್ಟು ಸುಲಭನೇನೆ ?ನಾಲ್ಕು ವರ್ಷ ಒಟ್ಟಿಗೆ ಇದ್ವಿ. ಮುಂದೆ ಹೇಗಿರಬೇಕು, ಏನ್ ಮಾಡಬೇಕು ಅಂತೆಲ್ಲ ಇಬ್ರೂ ಒಟ್ಟಿಗೆ ಕನಸು ಕಂಡಿದ್ವಿ. ಈಗ ನಡುವೇನೆ ಅವ್ನು ಬಿಟ್ಟು ಹೋಗ್ಬಿಟ್ಟ. ಅವನ ಹಿಂದೇನೆ ಎಲ್ಲಾನೂ ಮರ್ತು ಬಿಡು ಅಂದ್ರೆ ಆಗತ್ತಾ? “
"ಹಾಗಲ್ಲ ಅಕ್ಕಾ, ಅಣ್ಣನ್ನ ಮರ್ತು ಬಿಡಿ ಅಂದಿಲ್ಲ ನಾನು. ಆದ್ರೆ ನೀವು ಬದುಕೊದನ್ನ ಮರೀಬೇಡಿ ಅಂದೆ. ಅವರ ನೆನಪನ್ನು ಜೊತೆಗಿಟ್ಟುಕೊಂಡು ನೀವು ಹೊಸದಾಗಿ ಜೀವನ ಶುರು ಮಾಡಬಹುದಲ್ವ? ಅಣ್ಣನ ಆತ್ಮಕ್ಕೂ ನೆಮ್ಮದಿ ಆಗಬಹುದಲ್ಲವ? ಪ್ರಯತ್ನ ಮಾಡಿ ಅಕ್ಕಾ . "
ಅವಳು ನಿಟ್ಟುಸಿರಿಟ್ಟಳು.
ಮುಂದಿನ ದಿನಗಳಲ್ಲಿ ನಿಧಾನವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣ ಕಂಡಿತು. ಆಕೆಯ ಮುಖದಲ್ಲಿ ಸಣ್ಣ ನಗು ಕಾಣತೊಡಗಿತು. ಹೋಟೆಲ್ ನವನು ಅವನ ಹೆಂಡತಿ ಸಮಾಧಾನದ ಉಸಿರು ಬಿಟ್ಟರು.
ಒಂದು ಸಂಜೆ , ಕಾಫಿ ಲೋಟ ಮರಳಿಸ ಬಂದವಳು ರಾಧಳನ್ನು ನೋಡಿ ಏನೋ ಹೊಳೆದಂತೆ
"ರಾಧಾ, ಇಷ್ಟು ಬೇಗ ಎರಡನೇದಾ ? ಮೊದಲಿನದು ಗಂಡು ಅಲ್ವ? ಎಲ್ಲಿ ಕಾಣ್ತಾ ಇಲ್ಲ? ತುಂಬಾ ದಿನದಿಂದ ನೋಡೇ ಇಲ್ಲ ನಾನು ? "
"ಅದೂ… ಅಕ್ಕಾ, ಹೌದು ಗಂಡು ಮಗು . ಆದ್ರೆ ಹುಟ್ಟಿ ನಾಲ್ಕನೇ ತಿಂಗಳಲ್ಲಿ ಅದೇನೋ ಜ್ವರ ಬಂದಿದ್ದೇ ನೆಪ ಆಗಿ ಹೋಗ್ಬಿಟ್ಟ. ಏನು ಅಂತ ಗೊತ್ತಾಗೊದ್ರೊಳಗೆ ಹೋಗಿಬಿಟ್ಟ . ಸರಿಯಾಗಿ ಟ್ರೀಟಮೆಂಟ್ ಕೂಡ ಕೊಡ್ಸೋಕೆ ಆಗ್ಲಿಲ್ಲ ಅಕ್ಕಾ. " ರಾಧಾ ಳ ಕಣ್ಣಲ್ಲಿ ನೀರು ತುಂಬಿತ್ತು.
ಮರು ಕ್ಷಣವೇ, “ತುಂಬಾ ದಿನ ಅತ್ತೆ ಅಕ್ಕ, ಎಷ್ಟಂದ್ರು ಹೆತ್ತ ಕರುಳು ಅಲ್ವಾ? ನಿಧಾನವಾಗಿ ನೋವು ಕಮ್ಮಿ ಆಯ್ತು. ಪೂರ್ತಿ ಹೋಗೋ ನೋವಲ್ಲ ಅದು. ಆದ್ರೆ, ಅಲ್ಲಿಗೆ ನನ್ ಜೀವ್ನ ಮುಗೀತು ಅನಿಸಲಿಲ್ಲ. ಮತ್ತೊಂದು ಮಗು ಮಾಡ್ಕೊಂಡು ಕಣ್ಣು ರೆಪ್ಪೇಲಿ ಇಟ್ಟು ನೋಡ್ಕೋತೀವಿ ಅಂತ ನಿರ್ಧಾರ ಮಾಡಿದ್ವಿ. ಈಗ ನೋಡಿ ಇನ್ನೊಂದು 5 ತಿಂಗಳು ಅಷ್ಟೇ. ಪ್ರೀತಿಯಿಂದ ಹೊಟ್ಟೆ ನೇವರಿಸಿ ಕೊಂಡಳು.
ಈಗ ಇವಳಿಗೆ ಏನು ಹೇಳುವುದೋ ತಿಳಿಯದೇ, ಸಪ್ಪೆ ನಗು ನಕ್ಕು ರಾಧಾಳ ಕೆನ್ನೆಯನ್ನು ಮೃದುವಾಗಿ ತಟ್ಟಿದಳು.
ಕಾಲ ಯಾರನ್ನೂ ಕಾಯುವುದಿಲ್ಲ ಓಡುತ್ತಲೇ ಇರುತ್ತದೆ.
ಅವನು ಸತ್ತು ಒಂದು ವರ್ಷವೇ ಕಳೆಯಿತು. ಅವಳು ಮಾತ್ರ ತಪ್ಪದೆ ಬರುತ್ತಾಳೆ. ರಾಧಾ ತುಂಬು ಬಸುರಿ ಆದರೂ ಇವಳಿಗೆ ತಾನೇ ಕಾಫಿ ತಂದು ಕೊಡುತ್ತೇನೆ ಎಂದು ಹಠ ಮಾಡುತ್ತಾಳೆ. ಅವಳ ಪಕ್ಕ ಬೆಂಚ್ ಮೇಲೆ ಕುಳಿತು ಸ್ವಲ್ಪ ಹೊತ್ತು ಸುಖ ದುಃಖ ಹಂಚಿ ಕೊಳ್ಳುತ್ತಾಳೆ .
ಅಂದೂ ಕೂಡ ಹಾಗೆಯೇ ಹರಟೆ ಆದ್ಮೇಲೆ “ ಅಕ್ಕಾ, ನಾಳೆಯೇ ಲಾಸ್ಟ್ . ಆಮೇಲೆ ನಾನೂ ಹೆರಿಗೆ ರಜ ತೊಗೋತೀನಿ . ನೀವು ನಾಳೆ ಸ್ವಲ್ಪ ಹೊತ್ತಿಗಾದರೂ ಸರಿ ಬಂದು ಹೋಗಿ “ ಎಂದಳು .
"ಅಷ್ಟು ಬೇಗ ಹೆರಿಗೆ ದಿನಾನು ಬಂತೇನೆ ? ಯಾವ ಆಸ್ಪತ್ರೆಗೆ ಹೋಗ್ತೀಯಾ? "
"ಇಲ್ಲೇ ಹತ್ರ ಪ್ರಶಾಂತಿ ನರ್ಸಿಂಗ್ ಹೋಂ ಅಕ್ಕಾ . ಗೋಪಿಗೂ ಬಂದು ಹೋಗೋದಕ್ಕೆ ಅನುಕೂಲ . ಎಲ್ಲಾ ಸರಿ ಆದ್ರೆ ಸಾಕು ಅಕ್ಕಾ. "
"ಎಲ್ಲ ಸರಿ ಆಗತ್ತೆ . ಯೋಚನೆ ಮಾಡಬೇಡ. ನಾನು ನಾಳೆ ಬರ್ತೀನಿ . "
ಮರುದಿನ ಸಂಜೆ ಅವಳು ಎಂದಿಗಿಂತ ಬೇಗನೆ ಬಂದಳು. ಆದರೆ ಹೋಟೆಲ್ ನಲ್ಲಿ ಗೋಪಿ ಮತ್ತು ರಾಧಾ ಇಬ್ಬರು ಕಾಣಲಿಲ್ಲ.
ಅಲ್ಲಿದ್ದ ಹುಡುಗ ಹೇಳಿದ “ ರಾಧಕ್ಕಂಗೆ ರಾತ್ರೆನೆ ಅಡ್ಮಿಟ್ ಮಾಡಿದ್ರು. ಡೆಲಿವರಿ ಆಯ್ತೋ ಇಲ್ವೋ ಗೊತ್ತಿಲ್ಲ ಅಕ್ಕ “
ತಕ್ಷಣ ಅವಳು ನರ್ಸಿಂಗ್ ಹೋಂ ಹುಡುಕಿಕೊಂಡು ಹೊರಟಳು. ಒಳಹೊಕ್ಕು ರಿಸೆಪ್ಶನ್ ಲ್ಲಿ ವಿಚಾರಿಸುವಾಗ ಗೋಪಿ ಕಂಡ.
ಮುಖ ಅರಳಿಸಿಕೊಂಡು ಬಂದವನು “ ಅಕ್ಕಾ, ಹೆಣ್ಣು ಮಗು ಆಯ್ತು. ಬೆಳಿಗ್ಗೆ . ಇಬ್ರೂ ಹುಷಾರಾಗಿದಾರೆ . ಬನ್ನಿ " ಎಂದು ವಾರ್ಡ್ ಗೆ ಕರೆದೊಯ್ದ.
ರಾಧಾ ಮಲಗಿದಲ್ಲಿಂದಲೇ ನಕ್ಕಳು . ಪಕ್ಕದ ತೊಟ್ಟಿಲಲ್ಲಿ ಮಗು ನಿದ್ರಿಸುತ್ತಿತ್ತು.
ಮಗುವನ್ನು ನೋಡಿ , ರಾಧಾ ಬಳಿ ಹೋಗಿ ಕೆನ್ನೆ ತಟ್ಟಿದಳು , ಅಷ್ಟರಲ್ಲೇ ಮೊಬೈಲ್ ರಿಂಗಣಿಸಿತು. ಹೊರ ಹೋಗಿ ಮಾತನಾಡಿ ಬಂದವಳು ,
“ ರಾಧಾ, ತುಂಬಾ ಮುದ್ದಾಗಿದಾಳೆ ಮಗಳು “ ಎಂದಳು .
“ ಜಾಸ್ತಿ ಕಷ್ಟ ಇಲ್ದೆ ಹೆರಿಗೆ ಆಯಿತು. ಮಗೂನು ಆರೋಗ್ಯವಾಗಿದೆ ಅಂದ್ರು ಡಾಕ್ಟರ್. ತುಂಬಾ ಸಮಾಧಾನ ಆಯ್ತಕ್ಕಾ. . ಈಗ ನೀವು ನೋಡೋಕೆ ಅಂತ ಅಸ್ಪತ್ರೆ ಹುಡಿಕ್ಕಂಡು ಬಂದ್ರಿ . ಇನ್ನೂ ಖುಷಿ ಅಕ್ಕ ನಂಗೆ “
ಅಷ್ಟರಲ್ಲಿ ಬಾಗಿಲ ಬಳಿ ಯಾರೋ ಬಂದಂತಾಯ್ತು.
“ರಾಧಾ, ನಿಂಗೆ ಇನ್ನೂ ಸ್ವಲ್ಪ ಖುಷಿ ಪಡಿಸೋಣ ಅಂತ ….. ಇವರು ಸೂರಜ್. ನನ್ನ ಜೊತೆ ಕೆಲಸ ಮಾಡ್ತಾರೆ . ನೀನು ಎಷ್ಟೋ ಸಲ ಹೇಳಿದ್ದೆ ಅಲ್ವ ? ನೆನಪುಗಳ ಜೊತೆ ನಿಂತು ಬಿಡಬಾರದು ಅಂತ ? ಅದಕ್ಕೆ, ನಾನು ಆ ನೆನಪುಗಳನ್ನ ಜೊತೇಲಿ ಇಟ್ಕೊಂಡು ಇವರ ಜೊತೆ ಮುಂದೆ ನಡೆಯೋದು ಅಂತ ತೀರ್ಮಾನ ಮಾಡಿದೀನಿ . ಖುಷಿನಾ?"
ಗೋಪಿಯ ನಗು ದೊಡ್ದವಾಯ್ತು . ರಾಧಾಳ ಕಣ್ಣ ರಳಿತು ಇವಳ ಕೈಯನ್ನು ಬಿಗಿಯಾಗಿ ಹಿಡಿದು ಮನ ಬಿಚ್ಚಿ ನಕ್ಕಳು.

July 10, 2023

ಮೊಬೈಲ್-ಫೋಟೋ

 ನನ್ನ ಹೆಂಡತಿ ಹಬ್ಬ-ಹುಣ್ಣಿಮೆ ಫಂಕ್ಷನ್ನು ಅಂತ ರೆಡಿಯಾಗತಾ ಇದ್ರೆ ನಂಗೆ ಫುಲ್ ಟೆನ್ಶನ್. 

ನಿಜಕ್ಕೂ ಹೌದು ಸ್ವಾಮೀ !


ಹೊಸ ಬಟ್ಟೆ , ಆಭರಣ ತಗೊಂಡ್ರೆ ಏನು ತೊಂದರೆ ಇಲ್ಲ.  ಆದರೆ  ಅದೆಲ್ಲ ಹಾಕಿ ಮೇಕಪ್ ಗೀಕಪ್  ಮಾಡಿ ರೆಡಿ ಆಗ್ತಾಳಲ್ಲ ಅದೇ ಕಷ್ಟ ! ಅವಳು ರೆಡಿಯಾದ್ರೆ ನಿಂಗೇನು ಕಷ್ಟ ಅಂತ  ಮೂಗು ಎಳಿಬೇಡಿ. ಹೇಳ್ತೀನಿ ಇರಿ. 


ಹೊಸಾ ಬಟ್ಟೆ / ಸೀರೆ  ತೊಟ್ಟು , ಚೆನ್ನಾಗಿ ಅಲಂಕಾರ ಮಾಡ್ಕೊಂಡು  ರೆಡಿ ಆಗ್ತಾಳ ? (ಸುಂದರವಾಗೇ  ಕಾಣ್ತಾಳೆ ಅಂತ ನಾನು ಹೇಳಿ ಬಿಡ್ತೀನಿ ) . ಏನಾದ್ರೂ ಫಂಕ್ಷನ್ ಗೆ ಹೋಗೋ ಪ್ಲಾನ್ ಇದ್ರೆ  ಹೊರಡಬೇಕಾಗಿರೋ   ಟೈಮ್ ಮುಗದು  ಒಂದರ್ಧ ಗಂಟೆ ಆಗಿರತ್ತೆ ಆಗಲೇ .  "ಆಯ್ತಾ ? ಇನ್ನೂ ಎಷ್ಟು ಹೊತ್ತು"  ಅಂತ ಕೇಳೋ ಅಭ್ಯಾಸ ನಂಗಿಲ್ಲ !( ಅದೆಲ್ಲ ಬಿಟ್ಟು ಬಹಳ ಸಮಯ ಆಯ್ತು. ಅದು ಬೇರೆ ವಿಷ್ಯ ) . ನನ್ನ ಕರದ್ಲು ಅಂದ್ರೆ ರೆಡಿ ಆದರು ಅಮ್ಮಾವ್ರು,  ಇನ್ನು  ನಾನು  ಖುರ್ಚಿಯಿಂದ ಏಳಬೇಕು ಅಂತ ಅರ್ಥ . 

ಆಯ್ತಾ ?ಅಂತೂ ಹೊರಟ್ರಾ ? ಅಂತ ಕೇಳಬೇಡಿ .  ಇರಿ  ಇರಿ .. 

   

ಅವಳು ಕರೆದಳು ಅಂದ್ರೆ , ಈಗ ನಾನು ಮೊಬೈಲ್ ರೆಡಿಮಾಡಿಕೊಂಡು ಹೋಗಬೇಕು ಅಂತ ಅರ್ಥ. 

ಇಷ್ಟೊತ್ತಿಂದ ರೆಡಿಯಾಗಿದಾಳಲ್ಲ  ಅವಳ ಫೋಟೋ ತೆಗೀಬೇಕು. ಮೇಕಪ್, ಡ್ರೆಸ್ ಎಲ್ಲ ಫ್ರೆಶ್ ಇರತ್ತೆ ನೋಡಿ ಅದಕ್ಕೇ.

ಅಲ್ಲ,ಫೋಟೋ ತೆಗೆಯೋಕೆ ನಂಗೆ ಏನೂ  ಬೇಜಾರಿಲ್ಲ .ಆದರೆ ಅದು ಚೆನ್ನಾಗಿ ಬರಬೇಕು ಅಂತ ಅವಳು   ಎಕ್ಸ್ ಪೆಕ್ಟ್   ಮಾಡ್ತಾಳಲ್ಲ  ಅದೇ ಕಷ್ಟ ! 


ಅದು ಹೆಂಗೆ ತೆಗೆದರೂ ನಾನು ತೆಗೆದಿರೋ  ಫೋಟೋ  ಅವಳಿಗೆ ಇಷ್ಟ ಆಗಲ್ಲ. ಏನೋ ಒಂದು ಕೊರತೆ ಇದ್ದೇ ಇರುತ್ತೆ .

 “ಕೈಯಿ ದಪ್ಪ  ಕಾಣ್ತಿದೆ , ಈ ಆಂಗಲ್ ಇಂದ ತೆಗಿಬೇಕಿತ್ತು. ಮೂಗು ಯಾಕೆ ಇಷ್ಟು  ಉದ್ದ ಕಾಣ್ತಿದೆ?   ಕೂದಲು ಹರಡಿದೆ, ಹೇಳಬಾರದಾ? ಸರಿ ಅದರೂ ಮಾಡ್ಕೋತಿದ್ದೆ .  ಹೊಟ್ಟೆ ದೊಡ್ಡ ಕಾಣಿಸ್ತಿದೆ ಕ್ಲಿಕ್ ಮಾಡೋವಾಗ ಹೇಳಿದ್ರೆ ಸರಿಯಾಗಿ ನಿಂತ್ಕೊತಿದ್ದೆ ” … ಹೀಗೆ ಒಟ್ನಲ್ಲಿ ನಾನು ತೆಗೆದಿರೋ ಫೋಟೋಗಳಲ್ಲಿ ಒಂದಲ್ಲ ಒಂದು ಕೊರತೆ ಕಂಡು  ಅವಳಿಗೆ  ಸಿಟ್ ಬರುತ್ತೆ. ನಾನು ಏನ್ ಸ್ವಾಮಿ ಮಾಡ್ಲಿ?  ನನಗೇನೋ  ನಾನು ತೆಗೆದಿರೋ  ಎಲ್ಲಾ ಫೋಟೋಗಳೂ ಚೆನ್ನಾಗೆ ಕಾಣ್ತವೆ. ಅವಳಿಗೆ ಮಾತ್ರ ಒಂದು ಫೋಟೋ ನೂ  ಇಷ್ಟ ಆಗಲ್ಲ .


ಅಲ್ಲಿಂದ ಶುರು ನೋಡಿ ..

ಅಲ್ಲಾ,  ನೀವ್ ಹೇಳಿ , ನೀನು ಚೆನ್ನಾಗಿ ಫೋಟೋ ತೆಗಿಯಲ್ಲ , ನಿಂಗೆ ಫೋಟೋ ತೆಗ್ಯೋಕೆ ಬರಲ್ಲ ಅಂತೆಲ್ಲ  ಹೇಳ್ತಾಳೆ . ಆದರೆ ಮತ್ತೆ ಮತ್ತೆ ನನ್ನೇ ಯಾಕೆ ಕರೀಬೇಕು ? ಫೋಟೋ ತೆಗೀತಿಯಾ ಪ್ಲೀಸ್ ..ಅಂತ. ಅದು ಸರಿನಾ?

ನನಗೂ ಬೇಜಾರಾಗಿ ಒಂದ್ಸಲ( ಧೈರ್ಯ ಮಾಡಿ)  ಹೇಳಿದೆ “ ನೋಡು ನಾನು ತೆಗೆದಿದ್ದು ಹೇಗೂ ಸರಿಯಾಗಲ್ಲ . ನೀನು ಮತ್ತೆ ಸೆಲ್ಫಿ ತೆಕ್ಕೋ ಬೇಕು, ಸುಮ್ನೆ ಡಬಲ್ ಕೆಲಸ . ಇದಕ್ಕಿಂತ ನನ್ನ ಕರಿಲೇ ಬೇಡ ಫೋಟೋ ತೆಗೆಯೋಕೆ “ ಅಂದೆ . 


ತಗೊಳಪ್ಪ, ಇನ್ನೊಂದು ರಾಮಾಯಣ ಶುರು ಆಯ್ತು!

“ ಇಷ್ಟು ವರ್ಷ ಆಯ್ತು  ನೀನು  ಫೋಟೋ ತೆಗಿತಾ . ನೀನು ತೆಗೆದಿರೋ ಫೋಟೋದಲ್ಲಿ   ಏನು ಸರಿಬಂದಿಲ್ಲ  ಅಂತನೂ ಎಷ್ಟು ಸಲ ಹೇಳಿದೆ . ಯಾವ ಆಂಗಲ್ ನಲ್ಲಿ ಕ್ಯಾಮೆರ ಹಿಡ್ಕೋಬೇಕು ಅಂತನೂ ತೋರ್ಸಿಕೊಟ್ಟೆ.   ಇಷ್ಟಾದರೂ ನೀನು ಇನ್ನು ಕಲ್ತಿಲ್ಲಾ ! “   ಅಂತ ಸಿಟ್ಟು ಅವಳದ್ದು  .

ಅಷ್ಟೇ ಅಲ್ಲ “ನನ್ ಫ್ರೆಂಡ್ಸ್ ಎಲ್ಲಾ ನೋಡು, ಎಷ್ಟು ಒಳ್ಳೆ ಫೋಟೋ ಹಾಕ್ತಾ ಇರ್ತಾರೆ ಎಫ್ ಬಿ ಮತ್ತೆ ಇನ್ಸ್ಟಾ ದಲ್ಲಿ. ಅವರ ಗಂಡಂದಿರು ತೆಗೆಯೋ ಕ್ಯಾಂಡಿಡ್ ಫೋಟೋ ಎಷ್ಟು ಚೆನ್ನಾಗಿರುತ್ತೆ ! ನೀನಾಗಿ ಯಾವಾಗದ್ರು ನನ್ನ ಫೋಟೋ ತೆಗಿದಿದಿಯಾ?  ನಿಂಗೆ ನಾನೇ ದಮ್ಮಯ್ಯ ಹಾಕ ಬೇಕು ಫೋಟೋ ತೆಕ್ಕೊಡು ಅಂತ.   ಎಷ್ಟು ಸಲ ಹೇಳಿ ಕೊಟ್ಟರೂ  ಇನ್ನೂ ಒಂದು ಫೋಟೋ ಸರಿಯಾಗಿ ತೆಗ್ಯೋಕೆ ಕಲಿತಿಲ್ಲ.  ಏನ್ ಮಾಡೋದು ಎಲ್ಲಾ ನನ್ನ ಹಣೆಬರಹ “ ಅಂತ ಮುಖ ದಪ್ಪ ಮಾಡಿಕೊಂಡು ಕಣ್ತುಂಬಿಕೊಂಡು ಧಿಮಿ ಧಿಮಿ ಅಂತ ಕಾಲು ಅಪ್ಪಳಿಸುತ್ತ  ಒಳಗೆ ಹೋದ್ಲು ಅಂದ್ರೆ,  ಅಲ್ಲಿಗೆ ಇನ್ನು 2 ದಿವಸ ಮನೇಲಿ ಮಾತುಕತೆ ಇಲ್ಲ ಅಂತ ನಾನು ತಿಳ್ಕೊತೀನಿ. 


ಮೊನ್ನೆ ಮೊನ್ನೆ ಅಂತೂ ಹೊಸಾ ಧಮಕಿ ಸಿಕ್ಕಿದೆ . “ನೀನು ಹೀಗೇ ಕೆಟ್ಟದಾಗಿ ಫೋಟೋ ತೆಗಿತಾ ಇದ್ರೆ , ಬರೀ ಫೋಟೋ ತೆಗ್ಯೋಕೆ ಅಂತ ಒಬ್ಬನ್ನ ಫ್ರೆಂಡ್ ಮಾಡ್ಕೊಬೇಕಾಗತ್ತೆ ನೋಡು !”  ಅಂತ. 


ಮದುವೆ ಆದ ಹೊಸತರಲ್ಲಿ ನನ್ನತ್ರ ಕ್ಯಾಮೆರಾ ಇರಲಿಲ್ಲ. ಕ್ಯಾಮೆರಾ ಫೋನ್ ಗಳೂ  ಹೆಚ್ಚಿರಲಿಲ್ಲ. ಇರೋವನ್ನ ತೊಗೊಳೋ ಕೆಪ್ಯಾಸಿಟಿ ನಮಗಿರಲಿಲ್ಲ. ಹೀಗಾಗಿ  ಸ್ವಲ್ಪ ಹಾಯಾಗಿದ್ದೆ. ಇಲ್ಲ ಅಂದ್ರೆ , ಬಹುಶಃ ಹನೀಮೂನ್ ಮುಗ್ಯೋಕು ಮುಂಚೆ ಡೈವೋರ್ಸ್ ಮಾಡಿ ಬಿಡ್ತಿದ್ಲೋ ಏನೋ ! 

ಆಮೇಲೆ ಊರಿಗೆ ಬಂದೋಳು ನೀರಿಗೆ ಬರ್ಬೇಕಲ್ಲ ಅನ್ನೋ ತರ ನಮ್ಮನೆಗೂ ಒಂದು  ಕ್ಯಾಮೆರ ಫೋನ್ ಬಂತು ಬಿಡಿ.   

 ಆಗ  ಇದ್ದಿದ್ದು VGA ಕ್ಯಾಮೆರಾ. ಫೋಟೋ ಕ್ವಾಲಿಟಿ ಕೇಳಬಾರದು !  ಆದ್ರೂ ಭಾರೀ ಉತ್ಸಾಹದಿಂದ ( ಎಲ್ಲರೂ ಹಾಗೆ ತಾನೆ?) ಫೋಟೋ ತೆಗೆದಿದ್ದೇ ತೆಗೆದಿದ್ದು .  ಅದನ್ನ ನೋಡಿ ಚೆನ್ನಾಗಿದೆ ಅಂತ ಒತ್ತಾಯದಿಂದ, ನಮ್ಮದೇ ಸಮಾಧಾನಕ್ಕೆ ಹೇಳ್ಕೋತಾ ಇದ್ವಿ . ಬೇರೆ ಕಾಮೆಂಟ್ ಹೊಡಿಯೋಕೆ , ಫೋಟೋ ಸ್ಪಷ್ಟವಾಗಿ ಕಾಣಿಸ ಬೇಕಲ್ವೆ?


ಈಗ ನೋಡಿ ಶುರುವಾಗಿದ್ದು  ಪರದಾಟ ! ಅದ್ಯಾರಿಗೆ , ಯಾಕೆ ಈ ಮೊಬೈಲ್ ಲ್ಲಿ  ಫೋಟೋ ತೆಗೆಯೋ ಹಾಗೆ ಅದೂ ಕ್ಯಾಮೆರಾ ಲೆವೆಲ್ ಗೆ ಫೋಟೋ ತೆಗೆಯೋ ಹಾಗೆ ಮಾಡೋ ಆಲೋಚನೆ ಬಂತೋ . ನಮ್ಮಂತೋರೆಲ್ಲ ಒದ್ದಾಡೋ ಪರಿಸ್ಥಿತಿ ತಂದುಬಿಟ್ಟ .


ಈಗೀಗ ಮೊಬೈಲ್ ಅನ್ನೋದು ಫೋನ್ ಕಿಂತ ಕ್ಯಾಮೆರಾ  ಕೆಲಸ ಜಾಸ್ತಿ ಮಾಡ್ತಿದೆ ! ಪ್ರತಿ ದಿನ ಫೋನ್ ಲ್ಲಿ  ಕ್ಯಾಮೆರಾ ಲೆನ್ಸಗಳ ಸಂಖ್ಯೆ, ಪಿಕ್ಸಲ್ ರೇಟ್ ಹೆಚ್ಚಾಗ್ತಾನೆ ಇದೆ. ಜೊತೆಗೆ ಬೆಲೆ ನೂ. ಬೇರೆ ಏನು ವರ್ಕ್ ಆಗತ್ತೋ ಇಲ್ವೋ ಕ್ಯಾಮೆರಾ ಅಂತೂ ಸೂಪರ್ ಆಗಿರ್ಬೇಕು ಅಂತ ಹೇಳೋರೆ ಜಾಸ್ತಿ ಆಗಿದಾರೆ. ನಮ್ಮನೆಲೂ ಅದೇ ಕೆಟಗರಿ ಬಿಡಿ!

 

ಇನ್ನೇನು ಈ ಸಲ ಬಹುಶಃ ಒಂದು ಕಿಡ್ನಿ ಮತ್ತೆ ಒಂದು ಕಣ್ಣು  ಮಾರಾಟ ಮಾಡಿ ಫೋನ್ ತೊಗೊಳೋ ಚಾನ್ಸ್ ಇದೆ. ಫೋಟೋ ಚೆನ್ನಾಗಿ ಬರಬೇಕು ನೋಡಿ ?

ಸರಿ, ನಂಗೆ ಕರೆಯ ಬಂತು. ಹೋಗ್ಬೇಕು ಈಗ. ಇಲ್ಲ ಅಂದ್ರೆ ಕಿಡ್ನಿ ನಂದೇ ಮಾಯಾ ಆಗೋ ಚಾನ್ಸ್ ಇದೆ.  ಬರ್ಲಾ?


ಪಾಶ

 ಓ ಮಂಜಕ್ಕ ಆರಾಮನೆ? 


ಪಾರ್ವತಕ್ಕನ ಮನೆ ಅಡುಗೆ ಮನೆಯಲ್ಲಿ ಸಾರಿನ ಪುಡಿಗೆ ಹುರಿಯುತ್ತಿದ್ದ ಮಂಜಕ್ಕ ದನಿ ಬಂದತ್ತ ನೋಡಿದಳು.


“ಅರೆ , ಶಾಂತಾ! ಆರಾಮಾ? ಈಗ 4 ಗಂಟೆ ಬಸ್ಸಿಗೆ ಬಂದ್ಯಾ? ಒಬ್ಳೇ ಬಂದ್ಯಾ?  ರಾಗಣ್ಣ ನೂ  ಬಂದ್ನಾ? ಕಾಫಿ ಮಾಡ್ಲಾ?”


“ಹ್ಞೂ ,ಇಬ್ರೂ ಬಂದ್ಯ . ಒಂದರ್ಧ ಅರ್ಧ  ಕಪ್ ಕಾಫಿ ಮಾಡು. ಅತ್ತಿಗೆ ಎಲ್ಲಿ ?”

 ಕೈಚೀಲ ಕೆಳಗಿಟ್ಟು ಕಾಲು ತೊಳೆದು ಬಂದು ಕುಳಿತ ಶಾಂತಾ ಗೆ ಕಾಫಿ ಲೋಟ ತಂದು ಕೊಟ್ಟಳು ಮಂಜಕ್ಕ.


ಬಿಸಿ ಕಾಫಿ ಕುಡಿಯುತ್ತಾ, "ಅರ್ಧ ಲೋಟ ಆದರು ಕಾಫಿ ಕುಡಿದೆ ಹೋದ್ರೆ ಒಂಥರಾ ಜಡ್ಡು ನೋಡೇ. ಅಲ್ದೇ, ನೀನು ಮನೆ ಮದ್ವೆ ತಯಾರಿ  ಬಿಟ್ಟು ಇನ್ನು ಈ ಬದಿಗೆ ಇದ್ಯಲೇ ಮಂಜಕ್ಕ ?"


 ಹುರಿಯುತ್ತಿದ್ದ ಮಂಜಕ್ಕ  ತಲೆ ಎತ್ತದೆ ಕೇಳಿದಳು. 

"ಯಾವ ಮದ್ವೇನೆ ಶಾಂತಾ?"


"ಅಯ್ಯೋ, ಎಂತ ಹೀಂಗೆ ಕೇಳ್ತೆ? ಮೊನ್ನೆ ಸಾಗರದಲ್ಲಿ ಸಂತೆ ಪೇಟೆಲಿ ನಿನ್ ತಂಗಿ ಮಾಲತಿ ಗಂಡ ತಿಮ್ಮಪ್ಪಣ್ಣ ಸಿಕ್ಕಿದ್ನಡ ಇವರಿಗೆ.    ಶುಕ್ರವಾರ 12 ನೆ ತಾರೀಖು ಮಗನ ಮದ್ವೆ , ಗೋಪಾಲ ಕೃಷ್ಣ ದೇವಸ್ಥಾನದಲ್ಲಿ.ಅದೇ ತಯಾರಿ  ಗಡಿಬಿಡಿಲಿ ಇದ್ದಿ ಮಾರಾಯ ಅಂತ ಹೇಳಿದ  ಅಂದ್ರು ಇವ್ರು. ನಿಂಗೆ ಕರೆಯ ಬರಲ್ಯಾ? "


ಮಂಜಕ್ಕ ಒಂದು ಕ್ಷಣ ಸ್ಥಬ್ದಳಾದಳು.


ಅಷ್ಟರಲ್ಲಿ ಅಲ್ಲಿಗೆ ಬಂದ ಪಾರ್ವತಕ್ಕ  ಶಾಂತಾಗೆ  ಕಣ್ಣ ಸನ್ನೆಯಲ್ಲೇ ಸುಮ್ಮನಿರುವಂತೆ ಹೇಳುತ್ತಾ

 "ಮಂಜಕ್ಕಾ, ಸಂಬಾರ ಪರಿಮಳ ಬರ್ತಾ ಇದ್ದು. ಕೆಳಗೆ ಇಳಿಸಿ ಬಿಡು. ಹಾಂಗೆ ಹೊರಗೆ ರಾಗಣ್ಣ ಮತ್ತೆ ಹೆಗಡೇರಿಗೆ ಕಾಫಿ ಕೊಟ್ಟಿಕ್ ಬಾ "ಎಂದಳು.


ಅವಳು ಆಚೆ ಹೋಗುತ್ತಲೇ  "ಶಾಂತಾ,  ಹಿಂದೆ ಮುಂದೆ ನೋಡಿ ಮಾತಾಡದು ಯಾವಾಗ್ ಕಲೀತೆ ಮಾರಾಯ್ತಿ? ಅವಳ ವಿಷಯ ಗೊತ್ತಿಲ್ಯ ನಿಂಗೆ? ಸುಮ್ನೆ ಪಾಪ ಬೇಜಾರು ಮಾಡಿಸ್ದೆ ನೋಡು."


" ಅಯ್ಯೋ  ಅತ್ಗೆ, ಕೇಳಿದ್ ಮೇಲೆ ನಂಗೂ ಅನಸ್ತು . ತಪ್ಪಾಗೊತು ಹೇಳಿ. " ಶಾಂತಾ ಅಲವತ್ತುಕೊಂಡಳು .


ಖಾಲಿ ಟ್ರೇ ಹಿಡಿದು ಒಳಗೆ ಬಂದ ಮಂಜಕ್ಕ ಏನೂ ಆಗಿಲ್ಲವೆಂಬಂತೆ  ಮುಂದಿನ ಕೆಲಸಕ್ಕೆ ತೊಡಗಿದಳು. 


ಐದೂವರೆಯ  ಹೊತ್ತಿಗೆ ಸುಮಾರಾಗಿ ಎಲ್ಲ ಕೆಲಸ ಮುಗಿಸಿದ ಮಂಜಕ್ಕ  " ಪಾರ್ವತಕ್ಕಾ, ಇನ್ನೆಂತ ಮಾಡದು ಇದ್ರೆ ಹೇಳು. ಮುಗಸಿಕ್ಕೆ ಮನಿಗೆ ಹೋಗ್ತಿ.  ನಾಳೆ -ನಾಡಿದ್ದು  ಸಾಧ್ಯಾ ಆದ್ರೆ ಬರ್ತಿ. ಇಲ್ದೆ ಇದ್ರೆ ಮದ್ವೆಗೆ ಎರಡು ದಿನ ಇರಕಿದ್ರಿಂದ ಈ ಬದಿಗೆ ಇರ್ತಿ. "  ಎಂದು ತನ್ನ ಚೀಲ ತೆಗೆದುಕೊಂಡು ಹೊರಟಳು. 


" ಮಂಜಕ್ಕಾ, ಸ್ವಲ್ಪ ಹುಳಿ -ಪಲ್ಯ ತಗಂಡು ಹೋಗು . ಸಂಜಿಗೆ ಮತ್ತೆ ಅಡುಗೆ ಎಂತ ಮಾಡ್ಕ್ಯತ್ತೆ  "  ಎಂದು ಕರೆಯುತ್ತಿದ್ದ  ಪಾರ್ವತಕ್ಕನ ದನಿ ಕಿವಿಗೆ ಬೀಳಲಿಲ್ಲವೇನೋ ಎಂಬಂತೆ ಬಿರಬಿರನೆ ಮನೆಯತ್ತ ಹೆಜ್ಜೆ ಹಾಕಿದಳು.


ಮನೆಗೆ ಬಂದು ಕೈಕಾಲು ತೊಳೆದು  ದೇವರಿಗೆ ದೀಪ ಹಚ್ಚಿಟ್ಟು  ಅಲ್ಲೇ ಕುಸಿದು ಕುಳಿತ ಮಂಜಕ್ಕ ಜೋರಾಗಿ ಅಳತೊಡಗಿದಳು . 


“ರಾಘವೇಂದ್ರಾ , ಇದೆಂತ ಶಿಕ್ಷೆ ಕೊಡ್ತೆ ನಂಗೆ?  ಇನ್ನೆಷ್ಟು ಪರೀಕ್ಷೆ ? ನೀನೇ ಗತಿ ಹೇಳಿ ನಂಬಿದ್ರೆ ಇಷ್ಟು ಮೋಸ ಮಾಡ್ತ್ಯ ನೀನು ? ಎಂತಕ್ ಪೂಜೆ ಮಾಡ್ಲಿ ನಿಂದು? ಎಂತಕ್  ಎಲ್ಲ ನಿನ್ ಮುಂದೆ ಹೇಳ್ಕ್ಯಳವು ? ನಿಂಗೆ ಈ ಬಡವೆ ಮೇಲೆ ಸ್ವಲ್ಪ ಆದ್ರೂ ಕರುಣೆ ಇದ್ದಾ?”  ಎಂದು ರಾಘವೇಂದ್ರ ಸ್ವಾಮಿಯ  ಫೋಟೋದೆದುರು   ಬಡಬಡಿಸುತ್ತಾ ಕುಳಿತ ಮಂಜಕ್ಕನ ಕಣ್ಣಿಂದ ನೀರು ಧಾರೆಯಾಗಿ ಹರಿದು ಕೆನ್ನೆ ಕುತ್ತಿಗೆ ತೋಯಿಸುತ್ತಿತ್ತು. 


ಒಂದು ಅಡುಗೆ ಮನೆ ಹಾಗೂ ಒಂದು ಜಗುಲಿಯ ಪುಟ್ಟ ಮನೆ ಮಂಜಕ್ಕನದು. ಹಿಂದೆ ಅಂಟಿಕೊಂಡಿರುವ ಬಚ್ಚಲು,  ಅದಕ್ಕೆ ತಾಗಿ ಒಂದು ಓರಿ . ಸ್ವಲ್ಪ ದೂರದಲ್ಲಿ ಸಂಡಾಸು. 


ಆ ಊರಿಗೆ ಬಂದಾಗಿಂದ ಮಂಜಕ್ಕ ತನ್ನ ಗಂಡನ ಜೊತೆ ಊರ ತುದಿಗಿದ್ದ ಶೇಷಣ್ಣನ ಜಾಗದಲ್ಲಿ ಒಂದು ಗುಡಿಸಲು ಕಟ್ಟಿಕೊಂಡು ಬದುಕುತ್ತಿದ್ದಳು. ಗಂಡ ನಾರಾಯಣ ಕಷ್ಟಪಟ್ಟು ದುಡಿಯುವವ. ಯಾವ  ಕೆಲಸಕ್ಕೂ ಸೈ .ಹುಟ್ಟಿದಾಗಿಂದ ಬಡತನ ಬಿಟ್ಟು ಬೇರೆ ಕಾಣದ  ಮಂಜಕ್ಕ ಕೂಡ ಕಮ್ಮಿಯೇನಿಲ್ಲದಂತೆ ಕೇರಿಯ  ಬ್ರಾಹ್ಮಣರ   ಮನೆಯಲ್ಲಿ ಚಿಕ್ಕ ಪುಟ್ಟ ಕೆಲಸ ಮಾಡಿಕೊಡುತ್ತಾ, ಹಬ್ಬ ಹುಣ್ಣಿಮೆಗಳಲ್ಲಿ ,  ಚಿಕ್ಕ ಪುಟ್ಟ ಕಾರ್ಯಗಳಲ್ಲಿ   ಅಡುಗೆ ಕೆಲಸ ಅದೂ ಇದೂ ಸಹಾಯ ಎನ್ನುತ್ತಾ  ಬದುಕಿನ ಬಂಡಿ ಎಳೆಯಲು ಕೈಜೋಡಿಸಿದ್ದಳು . ನಾರಾಯಣ  ಹಾವು ಕಚ್ಚಿ  ಸತ್ತಾಗ , ಮತ್ತೆ ಯಾರೂ ಇಲ್ಲದ ಮಂಜಕ್ಕನಿಗೆ , ಶೇಷಣ್ಣ,  ಹೆಂಡತಿ ಪಾರ್ವತಿಯ ಕೋರಿಕೆಯ ಮೇರೆಗೆ  ಮಂಜಕ್ಕನ ಗುಡಿಸಿಲಿದ್ದ ಜಾಗವನ್ನು ಅವಳ ಹೆಸರಿಗೆ ಮಾಡಿಕೊಟ್ಟು ಸರಕಾರಿ  ಮನೆ ಕಟ್ಟಿಸಿ ಕೊಳ್ಳಲು,  ಅಷ್ಟೇ ಅಲ್ಲದೆ  ವಿಧವಾ ವೇತನ  ಕೂಡ  ಬರಲು  ಸಹಾಯ ಮಾಡಿದ್ದರು. ಹೀಗೆ  ಪಾರ್ವತಕ್ಕನ ಮೇಲಿನ  ಮಂಜಕ್ಕನ ಗೌರವ  ಮತ್ತಷ್ಟು ಗಟ್ಟಿಯಾಗಿತ್ತು 


ಗಂಡ ಸತ್ತಾಗ  ಮಂಜಕ್ಕನ ಮಗನಿಗೆ ೫-೬ ವರ್ಷವಷ್ಟೇ.  ಕಣ್ಣ ಮುಂದೆ ಭವಿಷ್ಯ   ಕತ್ತಲಾಗಿ ಬಿಟ್ಟಿತ್ತು .  ತಾನು ಮಾಡುವ ಚಿಕ್ಕ ಪುಟ್ಟ ಕೆಲಸದಿಂದ ಎಷ್ಟು ಸಿಗುತ್ತದೆ?  ಬರುತ್ತಿರುವ ವಿಧವಾ ವೇತನ ಸೇರಿಸಿದರೂ  ಇಬ್ಬರ ಜೀವನ ಸಾಗಬಲ್ಲದೇ  ಎಂಬ ಪ್ರಶ್ನೆ  ಭೂತಾಕಾರವಾಗಿ ನಿಂತಿತ್ತು .  ತಾನೇನೋ  ಅರೆ ಹೊಟ್ಟೆ ಉಂಡೋ ಅದೂ ಇಲ್ಲದಾಗ ಉಪವಾಸವಾದರೂ ಇದ್ದೇನು , ಮಗನ ಗತಿಯೇನು  ಎಂಬ ಯೋಚನೆ  ಹೈರಾಣ ಮಾಡುತಿತ್ತು.  ಬೆಳೆಯುವ ಹುಡುಗನ ಹಸಿವು ಇಂಗಿಸಬಲ್ಲೇನೆ ? ವಿದ್ಯಾಭ್ಯಾಸ, ಬಟ್ಟೆ , ಪುಸ್ತಕ  ಇದಕ್ಕೆಲ್ಲ ಯಾರೆದುರು  ಕೈ ಜೋಡಿಸಲಿ ಎಂದು ಕುಸಿಯುತ್ತಿದ್ದ ಮಂಜಕ್ಕನಿಗೆ ಆಗ ಬೆಳಕಾಗಿ ಬಂದವಳು ಅವಳ ತಂಗಿ ಮಾಲತಿ . 

" ಅಕ್ಕಾ, ನೀ ತಪ್ಪು ತಿಳಿದೇ ಇದ್ರೆ ಒಂದು ಮಾತು.  ಅಪ್ಪಿ ಇನ್ನೂ ಸಣ್ಣ. ಅವನ ವಿದ್ಯಾಭ್ಯಾಸ , ಹೊಟ್ಟೆ- ಬಟ್ಟೆ  ಎಲ್ಲದೂ ನಿನ್ನತ್ರ ಸಾಧ್ಯ ಇಲ್ಲೇ. ನಂಗೆ  ದೇವ್ರು ದೊಡ್ಡ ಮನೆ, ದುಡ್ಡು ಬಂಗಾರ ಎಲ್ಲಾ ಕೊಟ್ಟ. ಆದ್ರೆ ಮಕ್ಕಳನ್ನೊಂದು ಕೊಡಲ್ಲೇ . ಹೀಂಗಾಗಿ  ನಾ ಹೇಳದು ಏನು ಅಂದ್ರೆ , ಅವನ್ನ ನಾ ಕರ್ಕ ಹೋಗ್ತಿ. ಅವನ್ನ ನನ್ನ ಮಗನ ಹಾಂಗೆ ಸಾಕ್ತಿ. ಅವಂಗೆ ಯಾವದೇ ಕಮ್ಮಿ ಇಲ್ದೆ ಹೋದಂಗೆ ಬೆಳಸ್ತಿ . ರಜೆ ಇದ್ದಾಗೆಲ್ಲ ಪ್ರಕಾಶ ಇಲ್ಲಿ ಬಂದು  ಉಳಿಲಿ.  ಏನು ನಿನ್ನ ಅಭಿಪ್ರಾಯ " ಎಂದು ಕೇಳಿದಾಗ ಮಂಜಕ್ಕನಿಗೆ ಏನು ಹೇಳಬೇಕೋ ತಿಳಿಯದ ಪರಿಸ್ಥಿತಿ. 


ಇದ್ದೊಬ್ಬ ಮಗನನ್ನೂ ಕಳಿಸಿದರೆ ತಾನು ಒಬ್ಬಂಟಿಯಾಗಿ ಜೀವನ ಕಳೆಯಬೇಕೆಂಬ  ನೋವು. ತನ್ನ ಜೊತೆ ಇಟ್ಟುಕೊಂಡರೆ ಅವನನ್ನು ಬೆಳೆಸುವುದು ಹೇಗೆಂಬ ಪ್ರಶ್ನೆ . ಅದನ್ನು ಆಕೆ  ಹೇಳಿಯೂ ತೋರಿಸಿದಳು . 

" ಮಾಲತಿ, ನೀ ಹೇಳಿದ್ದು ನಿಜಾನೆ ಆದ್ರೂ ,  ಪ್ರಕಾಶನ್ನೂ ಕಳಿಸಿ ಬಿಟ್ರೆ ನಾನು ಒಬ್ಬಳೇ ಇರದು ಹೆಂಗೆ ? ಅವ ಒಬ್ಬನೇ  ಈಗ ನಂದು ಹೇಳಿ ಇರದು ..  ನಂಗೆ ಏನು ಮಾಡದು ತಿಳಿತಾ ಇಲ್ಲೇ.  " 


ಕೊನೆಗೂ ಮಗನ ಭವಿಷ್ಯದ ಕನಸು ಗೆದ್ದಿತು. ಮಾಲತಿ ಪ್ರಕಾಶನನ್ನು ಕರೆದುಕೊಂಡು ಹೋದಳು . 

ಮೊದ ಮೊದಲು , ಪ್ರತಿ ರಜೆಗೂ ಅಮ್ಮನನ್ನು ನೋಡಲು ಬರುತ್ತಿದ್ದ ಪ್ರಕಾಶ  ದೊಡ್ದಾದಂತೆ ,  ಬರುವುದು ಕಮ್ಮಿ ಆಗತೊಡಗಿತು. ದೊಡ್ಡ ಕ್ಲಾಸು , ಓದುವುದು ಜಾಸ್ತಿ ಇರುತ್ತೆ ಎಂದು ಅಕ್ಕನನ್ನು ನಂಬಿಸಿದ ಮಾಲತಿ , ಚಿಕ್ಕಮ್ಮನ ಮನೆಯಲ್ಲಿ  ರಾಜಕುಮಾರನಂತೆ ಏನೂ  ಕೊರತೆಯಿಲ್ಲದೆ ಮುದ್ದಿನಿಂದ ಬೆಳೆಯುತ್ತಿದ್ದ   ಅವನಿಗೆ, ಅಮ್ಮನ ಚಿಕ್ಕ ಮನೆಯಲ್ಲಿ  ಎದ್ದು ಕಾಣುವ ಬಡತನ ಇಷ್ಟವಾಗುತ್ತಿರಲಿಲ್ಲ , ಅಮ್ಮ ಬೇರೆಯವರ ಮನೆಯಲ್ಲಿ ಕೆಲಸ ಮಾಡುವುದು ಮುಜುಗರ ಎನಿಸುತ್ತಿತ್ತು   ಎನ್ನುವುದನ್ನು ಮರೆ ಮಾಚಿದಳು .

ಕಾಲೇಜು ಸೇರಿದ ಮೇಲಂತೂ ಅವನ ದರ್ಶನ ಅಪರೂಪವೇ ಆಗಿ  ಕೊನೆಗೆ ಕೆಲಸಕ್ಕೆ ಸೇರಿದ್ದು ಕೂಡ ಮಾಲತಿ ಹೇಳಿದ ಮೇಲೆ ಮಂಜಕ್ಕನಿಗೆ ತಿಳಿದಿದ್ದು. 

ಮಗ  ನೌಕರಿ ಶುರು ಮಾಡಿದ ಮೇಲೆ ತನ್ನನ್ನು ಕರೆದೊಯ್ಯುತ್ತಾನೆ , ಅಥವಾ ತನಗೆ ಸ್ವಲ್ಪವಾದರೂ ಸಹಾಯ ಮಾಡುತ್ತಾನೆ ಎಂದು ಕನಸು ಕಾಣುತ್ತಿದ್ದ ಮಂಜಕ್ಕ  ಸಂಪೂರ್ಣವಾಗಿ ನಿರಾಶಳಾದಳು . ಒಮ್ಮೆ ಮಾಲತಿಯ ಜೊತೆ ಬಂದ ಮಗ  ಕಾಟಾಚಾರಕ್ಕೆ ಎಂಬಂತೆ  ಎರಡು ಮಾತನಾಡಿ ಜಗುಲಿಯಲ್ಲಿ ಇದ್ದ ಒಂದೇ ಒಂದು ಖುರ್ಚಿಯ ಮೇಲೆ ಚಡಪಡಿಸುತ್ತಾ ಕುಳಿತಿದ್ದು ಅವಳ ಗಮನಕ್ಕೆ ಬಾರದಿರಲಿಲ್ಲ.  ಉಳಿಯಲು ಸುತಾರಾಂ ಒಪ್ಪದೇ ಅಂದೆ ಮರಳಿ ಹೋದವನು ಮತ್ತೆ ಬಂದಿರಲಿಲ್ಲ. ಹೋಗುವ ಮೊದಲು ಬೇಡವೆಂದರೂ ತನ್ನ  ಕೈಲಿ 500 ರುಪಾಯಿ ಇಟ್ಟಿದ್ದು ಕೂಡ ಮಾಲತಿಯ ಸನ್ನೆಯ ಮೇರೆಗೆ ಎನ್ನುವುದನ್ನೂ ಮಂಜಕ್ಕ ಗಮನಿಸಿದ್ದಳು .


ಇದೀಗ ಅವನ ಮದುವೆ ಎಂಬ ಸುದ್ದಿ ಕೇಳಿ ಮಂಜಕ್ಕ ನಿಗೆ ಇಷ್ಟು ವರ್ಷ ಎದೆಯಲ್ಲೇ ಬಚ್ಚಿಟ್ಟ ನೋವೆಲ್ಲ  ಒಮ್ಮೆಲೇ ಉಕ್ಕಿ ಹರಿಯತೊಡಗಿತು . ಅಲ್ಲಾ , ಅವನಂತೂ ತಾನು ಅವನ ಸ್ವಂತ ಅಮ್ಮ ಎನ್ನುವುದನ್ನು ಮರೆತೇ ಬಿಟ್ಟಿದ್ದಾನೆ . ಮಾಲತಿಯಾದರೂ  ಒಂದು ಮಾತು ತಿಳಿಸ ಬಹುದಿತ್ತಲ್ಲ ? ಎಷ್ಟಾದರೂ ತಾನು  ಅವನನ್ನು ಹೆತ್ತಿಲ್ಲವೇ? ಮಂಜಕ್ಕನಿಗೆ   ತನ್ನ ಬಡತನದ ಬಗ್ಗೆ, ಅಸಹಾಯಕತೆಯ ಬಗ್ಗೆ  ಅತೀವ ದುಃಖವಾಯಿತು. 

ರಾತ್ರಿ ಊಟ ಸೇರದೆ ಹಾಗೆ ಮಲಗಿದವಳಿಗೆ ನಿದ್ರೆಯೂ ಹತ್ತದೆ ಒದ್ದಾಡಿದಳು.  ಮರುದಿನ ಕೂಡ ಕಣ್ಣೀರು ಹರಿಸುತ್ತ, ರಾಘವೇಂದ್ರ ಸ್ವಾಮಿಗಳ ಫೋಟೋ ಜೊತೆ ಜಗಳ ಮಾಡುತ್ತಾ , ದಿನ ಕಳೆದಳು. 

ಗುರುವಾರ ಸಂಜೆ , ಏನೋ ನಿರ್ಧಾರ ಮಾಡಿ ಅಡುಗೆ ಮನೆಯ ಮೂಲೆಯಲ್ಲಿ ತನ್ನ ಇದ್ದೆರಡು  ಹೊಸಾ ಸೀರೆ , ಪರ್ಸ್ ಇತ್ಯಾದಿಗಳನ್ನಿಟ್ಟಿದ್ದ ಪುಟ್ಟ ಹಳೆಯ ಕಪಾಟಿನಿಂದ  ಹಳೆಯ ಗಂಟನ್ನು ತೆಗೆದಳು . ಹಾಗೆಯೇ, ಕಪಾಟಿನಲ್ಲಿ  ಇದ್ದ ಒಟ್ಟು ದುಡ್ಡನ್ನು  ಎಣಿಸಿ ಪರ್ಸಿಗೆ  ಹಾಕಿಕೊಂಡಳು . 

ಬೆಳಿಗ್ಗೆ , ಇದ್ದುದರಲ್ಲೇ ಹೊಸತಾದ ಸೀರೆಯುಟ್ಟು ಬ್ಯಾಗನ್ನು  ಹೆಗಲಿಗೇರಿಸಿ  ಎಂಟು ಗಂಟೆಯ  ಬಸ್ ಹತ್ತಿದಳು . 


ಸಾಗರದಲ್ಲಿ ಇಳಿದು ಗೋಪಾಲಕೃಷ್ಣ ದೇವಸ್ಥಾನದ ಹತ್ತಿರ ಬಂದಾಗ ಮದುವೆ ಮನೆಯ ಸಡಗರ ಕಾಣುತ್ತಿತ್ತು. ಪರಿಚಯದ ಕೆಲವರು ಮಾತನಾಡಿಸಿದರು.  ಒಳಗೆ ಬಂದ ಮಂಜಕ್ಕನನ್ನು ನೋಡಿ ಮಾಲತಿಯ ಮುಖ ಬಿಳುಚಿತು . ವರಪೂಜೆಗೆ ತಯಾರಾಗಿ ಕುಳಿತಿದ್ದ ಪ್ರಕಾಶ ಕಂಡೂ ಕಾಣದಂತೆ ಗೆಳೆಯರೊಡನೆ ಮಾತನಾಡುತ್ತ ಕುಳಿತಿದ್ದ. . 


“ಅಕ್ಕ,  ಬಾ, 8  ಗಂಟೆ ಬಸ್ಸಿಗೆ ಬಂದ್ಯಾ ?..” 


" ಹ್ಞೂ .  ಅಲ್ದೇ  ಮಾಲತಿ, ಒಂದು ಮಾತೂ ಹೇಳಲೆ ಕಷ್ಟ ಆತ  ನಿಂಗೆ? ನೀನೇ ಬೆಳೆಸಿ ದೊಡ್ಡ ಮಾಡಿದ್ದು ನಿಜ. ಸ್ವಂತ ಮಗನಂಗೆ ಸಾಕಿದ್ದೂ ಹೌದು . ಅದ್ರ ಬಗ್ಗೆ ಮಾತಿಲ್ಲೇ ನಂದು . ಆದ್ರೆ  ಹಡೆದವಳು ನಾನೇ ಅಲ್ದಾ? ನನ್ನ ಪರಿಸ್ಥಿತಿ ಹಾಂಗಿತ್ತು. ಪ್ರಕಾಶ ನಿನ್ನ ಮಗ ಆಗಿ ಬೆಳೆದ. ಬೆಳಿತಾ ಬೆಳಿತಾ ಸ್ವಂತ ಅಮ್ಮ ಅಂದ್ರೆ ಬೇಡ ಆತು ಅವಂಗೆ.  ನೀನು ತಿದ್ದಲಾಗಿತ್ತು ಆದರೆ  ತಿದ್ದಲ್ಲೇ .  ಇರಲಿ . ಈಗಲಾದ್ರೂ ನ್ಯಾಯವಾಗಿ ನೀನು ನಂಗೆ ಒಂದು ಮಾತು ಹೇಳಕಾಗಿತ್ತು. ಅಲ್ದಾ?  ಹೋಗ್ಲಿ ,ಮದ್ವೆಗೆ ಬಾ ಅಕ್ಕ  ಹೇಳೂ ಕರಿಯಲ್ಲೇ. ಇದು ಸರಿನಾ?  ನಾನು ಎಷ್ಟೇ ತಡಕತ್ತಿ ಅಂದ್ರೂ ಹೊಟ್ಟೆಲಿ ಹುಟ್ಟಿದ ಮಗ ಹೇಳ ಪಾಶ ಬಿಡಲ್ಲೆ. ಅದಕ್ಕೆ ಕರಿದೆ ಇದ್ರೂ ಬಂದಿ.  ಮಗನ ಮದ್ವೆ ನೋಡಕ್ಕೂ ಹೇಳ ಆಸೆ ನೋಡು ... " ಮಂಜಕ್ಕನ ಗಂಟಲುಬ್ಬಿ ಬಂತು. 


ಮಾಲತಿ ಏನೂ ಹೇಳಲೂ ತೋಚದೆ " ಅಕ್ಕಾ , ಅದೂ  ಹಾಂಗಲ್ಲ. ಇವರತ್ರೆ ಹೇಳಿದ್ದಿ . ನಿಂಗೆ ಕರೆಯಲೇ.  ಗಡಿಬಿಡಿಲಿ ಮರೆತು ಹೋದರು ಕಾಣ್ತು. “ ತಡವರಿಸುತ್ತಿದ್ದಳು . ಅಷ್ಟರಲ್ಲಿ ಅವಳನ್ನು ಹುಡುಕಿಕೊಂಡು ಯಾರೋ ಬಂದಿದ್ದರಿಂದ ಪಾರಾದೆ ಎಂದು ಉಸಿರು ಬಿಡುತ್ತ ,  

“ಅಕ್ಕಾ ಯಾರೋ ಕರಿತಾ ಇದ್ದ ನನ್ನ, ನೀನು ತಿಂಡಿ ತಿಂದಕ ಬಾ ಮಾತಾಡನ. ಸುಜಾತಾ , ಅಕ್ಕನ್ನ ತಿಂಡಿಗೆ ಕರ್ಕ ಹೋಗು “

ಎನ್ನುತ್ತಾ  ಮಾಲತಿ ನಡೆದಳು .


ಊಟದ ಹಾಲ್ ಗೆ ಹೋಗಿ  ತಿಂಡಿಯ ಪ್ಲೇಟ್ ಎದುರು ಕೂತರೂ  ಹೊಟ್ಟೆಯ ಸಂಕಟಕ್ಕೆ ಏನೂ ಸೇರದಂತಾಗಿ ಕಷ್ಟದಿಂದ ಒಂದು ಇಡ್ಲಿ ತಿಂದು, ಅರ್ಧ ಕಪ್ ಕಾಫಿ ಕುಡಿದು ಎದ್ದು ಬಿಟ್ಟಳು .


ಮತ್ತೆ ಒಳಗೆ ಬಂದಾಗ  ಮದುವೆಯ ವಿಧಿಗಳು ಶುರುವಾಗಿದ್ದವು. ಮುಂದಿನ ಸಾಲುಗಳೆಲ್ಲ ಆಗಲೇ ತುಂಬಿದ್ದರಿಂದ ಮೂರನೇ ಸಾಲಿನಲ್ಲಿ  ಒಂದು ಕಡೆ ಕೂತಳು ಮಂಜಕ್ಕ . 

ಮಾಲತಿ ಪ್ರಕಾಶ ನನ್ನು ಕರೆದುಕೊಂಡು ಎಲ್ಲ ಹಿರಿಯರಿಗೂ ನಮಸ್ಕಾರ ಮಾಡಿಸುತ್ತಿದ್ದಳು. ಹಾಗೆ ಮಂಜಕ್ಕನ ಸಾಲಿಗೂ ಬಂದ ಪ್ರಕಾಶ ನಮಸ್ಕಾರ ಮಾಡಿದ ಶಾಸ್ತ್ರ ಮಾಡಿ  ಯಾಂತ್ರಿಕವಾಗಿ ,"ಆರಾಮಿದ್ಯ"  ಎಂದು ಕೇಳಿ ಅವಳು ಉತ್ತರಿಸುವ ಮೊದಲೇ ಮುಂದೆ ಹೋಗಿಬಿಟ್ಟ. ಅವಮಾನದಿಂದ ಕರುಳಿಗೆ ಬೆಂಕಿಯಿಟ್ಟಂತೆ ಆದರೂ  ಉಕ್ಕಿಬರುತ್ತಿದ್ದ ಕಣ್ಣೀರನ್ನು ಕಷ್ಟದಿಂದ ನಿಯಂತ್ರಿಸಿಕೊಂಡು  ಕಲ್ಲಾಗಿ ಕುಳಿತುಬಿಟ್ಟಳು . ಬಂದವರಲ್ಲಿ ಹೆಚ್ಚಿನವರು ಮಾಲತಿಯ ಗಂಡನ ಮನೆ ಕಡೆಯ ಸಂಬಂಧಿಕರೆ ಆಗಿದ್ದರಿಂದ ಮಂಜಕ್ಕನನ್ನು ಚೆನ್ನಾಗಿ ಪರಿಚಯವಿರುವವರು  ಬಹಳ ಕಮ್ಮಿ ಜನರಿದ್ದರು .


ಕಣ್ಣ ಮುಂದೆಯೇ  ಮಗನ ಮದುವೆ  ವೈಭವದಿಂದ ಸಾಗುತ್ತಿದ್ದುದನ್ನು  ಕಣ್ಣು ತುಂಬಿಸಿಕೊಳ್ಳುತ್ತಿದ್ದರೂ  ಮಂಜಕ್ಕನ ಮನಸ್ಸು ಅಲ್ಲಿರಲಿಲ್ಲ.  ತಾನು ಬಂದು ತಪ್ಪು ಮಾಡಿಬಿಟ್ಟೆನೆ  ಎಂದು ಒಮ್ಮೆ ಅನಿಸಿದರೂ , ಇದು ತನ್ನ ಕರ್ತವ್ಯವಲ್ಲವೇ? ಅದನ್ನು ಹೇಗೆ ಬಿಡಬಲ್ಲೆ ಎಂದೂ ಒಮ್ಮೆ ಅನಿಸುತ್ತಿತ್ತು .


ಅಂತೂ , ಶಾಸ್ತ್ರಗಳು ಮುಗಿದು ಮದುಮಕ್ಕಳು ಮಂಟಪದಲ್ಲಿಯೇ ಕೂತಿರುವಾಗ ಕೆಲವರು ಉಡುಗೊರೆ ಕೊಡುತ್ತಿರುವುದನ್ನು ಕಂಡ ಮಂಜಕ್ಕ ತಾನೂ ಎದ್ದಳು . 

 ಉಡುಗೊರೆ ಕೊಡುವವರ ಸಾಲಿನಲ್ಲಿ ನಿಂತ  ತನ್ನನ್ನು  ನೋಡಿ ಪ್ರಕಾಶನ ಮುಖ  ಇಳಿದಿದ್ದೂ, ಅವನ ಕಣ್ಣು ಮಾಲತಿಯನ್ನು ಅರಸಿದ್ದೂ  ಮಂಜಕ್ಕನಿಗೆ ಕಂಡಿತು .  ಅಂತೂ ಮದುಮಕ್ಕಳ ಎದುರು  ಹೋಗಿ ನಿಂತ ಮಂಜಕ್ಕ ,  ಪ್ರಕಾಶ  ಬಾಯಿ ತೆರೆಯುವ ಮುನ್ನ ಅವನ ಹೆಂಡತಿಗೆ ತನ್ನ ಪರಿಚಯ ಮಾಡಿಕೊಂಡಳು. 

“ ನಾನು ಪ್ರಕಾಶಂಗೆ ಒಂದು ರೀತಿಯಿಂದ ದೊಡ್ದಮ್ಮನೆ  ಆಗವು .  ಇಬ್ರೂ ನೂರು ವರ್ಷ ಸುಖವಾಗಿರಿ “ ಎಂದು ಆಶೀರ್ವಾದ ಮಾಡಿದಳು . ಆಮೇಲೆ ತನ್ನ ಬ್ಯಾಗಿನಿಂದ  ಒಂದು ಚಿಕ್ಕ ಪರ್ಸ್ ತೆಗೆದು ಅದರಲ್ಲಿದ್ದ  ಉಂಗುರವನ್ನು ಅವನ ಬೆರಳಿಗೆ ತೊಡಿಸಿದಳು. ಅದೇ ಪರ್ಸ್ ನಿಂದ ಕೆಂಪು ಬಣ್ಣದ ಪೇಪರ್ ನ ಮಡಿಕೆಯೋಳಗಿಂದ ಒಂದು ಜೊತೆ ಪುಟ್ಟ  ಕಿವಿಯೋಲೆ ತೆಗೆದು ಅವನ ಹೆಂಡತಿಯ ಕೈಲಿಟ್ಟಳು.

ಮುಜುಗರದಿಂದ ಪ್ರಕಾಶ “ ಇದೆಲ್ಲ ಎಂತಕೆ …. “  ಎನ್ನುವಷ್ಟರಲ್ಲಿ ,  

" ಇದು ನ್ಯಾಯವಾಗಿ ನಿಂಗೆ ಸೇರಕಾಗಿದ್ದು.  ನಂಗಾದ್ರೂ ಬೇರೆ ಯಾರಿದ್ದ ಇದನ್ನ ಕೊಡಲೆ ?   "  ಎಂದವಳೇ ಅಲ್ಲಿಂದ  ಹೊರಟಳು . 

ಅಷ್ಟರಲ್ಲಾಗಲೇ ಅಲ್ಲಿಗೆ ಬಂದಿದ್ದ ಮಾಲತಿ “ ಅಕ್ಕಾ ಊಟಕ್ಕೆ ತಯಾರಿದ್ದು  “  ಎಂದಿದ್ದು ಕೇಳಿಸಲೇ ಇಲ್ಲ ಎಂಬಂತೆ ಮಾಲತಿ ನೋಡುತ್ತಾ ಇರುವಂತೆ   ಬಿರ ಬಿರನೆ ಅಲ್ಲಿಂದ ಬಾಗಿಲ ಕಡೆ ನಡೆದಳು.


ಮೂರುಗಂಟೆ ಬಸ್ ಹಿಡಿದು ಮನೆ ತಲುಪಿದವಳಿಗೆ ಬಾಗಿಲು ತೆರೆಯುತ್ತಿದ್ದಂತೆ ಅಷ್ಟು ಹೊತ್ತಿಂದ ತಡೆ ಹಿಡಿದ ದುಃಖದ ಕಟ್ಟೆ ಒಡೆದಂತೆ  ಬಿಕ್ಕಿ ಬಿಕ್ಕಿ ಅಳ ತೊಡಗಿದಳು . ಅಂದಿಡೀ  ಊಟ ಮಾಡದೇ  ಉಪವಾಸವೇ ಮಲಗಿದ ಮಂಜಕ್ಕನಿಗೆ  ರಾತ್ರಿಯಿಡೀ  ನಿದ್ದೆಯಿಲ್ಲದೆ ಹೊರಳಾಡಿ  ಬೆಳಗಿನ ಜಾವದಲ್ಲಿ ಸ್ವಲ್ಪ ನಿದ್ರೆ ಹತ್ತಿತು  . ಎಚ್ಚರವಾದಾಗ  ಮಧ್ಯಾನ್ಹವಾಗಿತ್ತು . ಮನೆ ಕೆಲಸ ಮುಗಿಸಿ ಚುರುಗುಡುತ್ತಿದ್ದ ಹೊಟ್ಟೆಗೆ ಸ್ವಲ್ಪ ಅನ್ನ ಮಾಡಿಕೊಂಡು ಮಜ್ಜಿಗೆ ಕಲಸಿ ಉಂಡಳು.   ನಾಲ್ಕು ಗಂಟೆಯ ಹೊತ್ತಿಗೆ  ಶೇಷಣ್ಣನ ಮನೆಯತ್ತ ನಡೆದಳು. 

 

ಮನೆಯವರಿಗೆ , ನೆಂಟರಿಗೆ ಕಾಫಿ  ಕೊಟ್ಟು  ಅದೇ ತಾನೇ  ಶಾಂತಾ ಮತ್ತು ಕೆಲವು ಹೆಂಗಸರೊಂದಿಗೆ  ಕಾಫಿ ಲೋಟ ಹಿಡಿದು  ಕುಳಿತಿದ್ದ  ಪಾರ್ವತಕ್ಕನಿಗೆ ಮಂಜಕ್ಕನನ್ನು ನೋಡಿ ಆಶ್ಚರ್ಯವಾಯಿತು .ಅವಳ ಮುಖ ನೋಡಿ  ಯಾಕೋ ಎಲ್ಲವೂ ಸರಿ ಇಲ್ಲ ಎಂದೆನಿಸಿದರೂ ತೋರಿಸಿ ಕೊಳ್ಳದೇ 

“ ಮಂಜಕ್ಕ,   ಬಂದ್ಯ ? ಬಾ,  ಕೂತ್ಗ .   ಕಾಫಿ ಕುಡಿಲಕ್ಕಡ “  ಎಂದು ಕಾಫಿ ಲೋಟ ಮುಂದಿತ್ತಳು .

ಮಾತನಾಡದೆ ಮಂಜಕ್ಕ ಅವರ ಜೊತೆಗೆ ಕಾಫಿ ಕುಡಿದಳು  .ಕಾಫಿ ಕುಡಿದು ಆದ ಮೇಲೆ  ನೆಂಟರಿಗೆ ಹಂಚುವ ಸೀರೆಗಳನ್ನು  ತೋರಿಸುತ್ತಿದ್ದ ಪಾರ್ವತಕ್ಕ ಕೊನೆಯಲ್ಲಿ ಒಂದು ಕಡ್ಡಿಯಂಚಿನ ಕಡುನೀಲಿ  ರೇಶಿಮೆ ಸೀರೆಯನ್ನು  ಮಂಜಕ್ಕನ ಕೈಲಿಟ್ಟಳು . 

“ಮಂಜಕ್ಕ , ಇದು ನಿಂಗೆ ಹೇಳಿ ಆರ್ಸಿದ್ದಿ. ಇಷ್ಟ ಆತಾ?”


ಥಟ್ಟನೆ  ಪಾರ್ವತಕ್ಕನ ಮುಖ ನೋಡಿದ  ಮಂಜಕ್ಕ

 “ ನಂಗೆಂತಕೆ  ಸೀರೆ ಪಾರ್ವತಕ್ಕಾ ? ಅದೂ  ದುಬಾರಿ ಸೀರೆ ! ನಾ ಎಲ್ಲಿಗ ಹೋಗ್ತಿ  ರೇಷ್ಮೆ ಸೀರೆ ಎಲ್ಲ ಉಟಗಂಡು ? " 


" ಮಂಜಕ್ಕಾ, ನೀನು ಮನೆ ಜನವೇಯ ನಂಗಕ್ಕೆ. ಮನೆ ಮದ್ವೇಲಿ  ರೇಷ್ಮೆ ಸೀರೆ ಉಡದೇ  ಇದ್ರೆ ಹೆಂಗೆ ಮಾರಾಯ್ತಿ ? " ಪಾರ್ವತಕ್ಕ  ನಕ್ಕಳು . 

ಮತ್ತೊಮ್ಮೆ ಅವಳ ಮುಖ ನೋಡಿ ಸೀರೆಯನ್ನು ಒಮ್ಮೆ ನೇವರಿಸಿದ  ಮಂಜಕ್ಕ  , " ಹೋಪಕಿದ್ರೆ ತಗ ಹೋಗ್ತಿ "  ಎಂದು ಅಡುಗೆಮನೆಯತ್ತ ನಡೆದವಳ ಮುಖದಲ್ಲಿ ಮೂಡಿದ್ದು ಸಂತಸವಾ , ವಿಷಾದವಾ ಎಂದು ಗೊತ್ತಾಗಲಿಲ್ಲ ಪಾರ್ವತಕ್ಕಂಗೆ .


 ಸಂಜೆ ಕೆಲಸಗಳೆಲ್ಲ  ಮುಗಿದು  ಹೊರಡುವ ಮುನ್ನ ಮಂಜಕ್ಕ ಪಾರ್ವತಕ್ಕನನ್ನು ಕರೆದಳು . 

“ ಪಾರ್ವತಕ್ಕ, ಒಂದ್ಸಲ  ಅಪ್ಪಿ ಕರಿತ್ಯಾ ? “ 


ಯಾಕೆಂದು ಕೇಳದೇ  ಪಾರ್ವತಕ್ಕ  ಮಗನನ್ನು ಕರೆದಳು . 

ಅವನು ಬಂದಾಗ ಮಂಜಕ್ಕ ತನ್ನ  ಕೈಚೀಲದಿಂದ  ಪೊಟ್ಟಣವೊಂದನ್ನು ತೆಗೆದು  ಅದರಲ್ಲಿದ್ದ ಪುಟ್ಟ ಚಿನ್ನದ ಚೈನ್ ಅನ್ನು ಅವನ ಕೈಗಿಟ್ಟಳು . ಅವನು ಏನೂ ಅರ್ಥವಾಗದೆ ಅಮ್ಮನತ್ತ ನೋಡಿದ.

ಅವಕ್ಕಾದ ಪಾರ್ವತಕ್ಕ “ ಮಂಜಕ್ಕ , ಇದೆಂತದೆ … ? “ 


“ ಪಾರ್ವತಕ್ಕ, ಮದುವೆ ಆಗಿ ಬಂದಾಗಿಂದ ನಿಮ್ಮಲ್ಲಿ ಕೆಲಸ ಮಾಡಿದ್ದಿ.  ನಿಂಗನೂ ಯಾವತ್ತೂ ನನ್ನ  ಹೊರಗಿನವಳ ತರ ನೋಡಲ್ಲೇ . ಸಂದೀಪನೂ ನನ್ನ ಕಣ್ಣೆದುರೇ ಹುಟ್ಟಿ ಬೆಳೆದವ. ನಂಗೆ ಅವ  ಮಗನಾಂಗೆಯಾ . ಅದಕ್ಕೆ ಅವನ ಮದ್ವೆಗೆ ನಂದು ಸಣ್ಣ ಉಡುಗೊರೆ . ಮದ್ವೆ ದಿನ ಎಲ್ಲ ಕೊಡಲೇ ನಾಚ್ಕೆ ನಂಗೆ. ಹಾಂಗಾಗಿ ಈಗಲೇ ಕೊಟ್ ಬಿಡ್ತಿ “ 


“ಆದ್ರೂ ಮಂಜಕ್ಕಾ , ಇದೆಲ್ಲ  ಕೊಡವು ಹೇಳಿಲ್ಲೆ. ನೀನು ಆಶೀರ್ವಾದ ಮಾಡು ಸಾಕು. ಅದೇ ದೊಡ್ಡ ಉಡುಗೊರೆ . ಇದೆಲ್ಲ ನಿನ್ ಮಗಂಗೆ ಸೇರಕಾಗಿದ್ದು .  “


“ ಪಾರ್ವತಕ್ಕಾ, ನನ್ ಮಗಂಗೆ ಸೇರಕಾಗಿದ್ದಿದ್ದು ನಿನ್ನೆ ಅವಂಗೆ ಕೊಟ್ಟಿಕ್ ಬಂದಿ . ಅವನ ಅಪ್ಪನ ಉಂಗುರ , ನಂಗೆ ಮದ್ವೇಲಿ ಹಾಕಿದ್ದ ಒಂದು ಜೊತೆ ಕಿವಿ ಓಲೆನ ಪ್ರಕಾಶಂಗೆ, ಅವನ ಹೆಂಡತಿಗೆ  ಕೊಟ್ಟಿದ್ದಿ.  ಇದು ನಾನು ನನ್ನ ಇಷ್ಟು ವರ್ಷದ ದುಡಿಮೆಲಿ ಮಾಡ್ಸಿದ್ದು.  ಮಗನ ಮದುವೆ ಆದಾಗ  ಕೊಡಲಾತು ಹೇಳಿ. ಆದ್ರೆ ಅಮ್ಮ -ಮಗ  ಹೇಳ ಪಾಶ ನನಗೊಬ್ಬಳಿಗೆ ಇದ್ದಿದ್ದು ಹೇಳಿ ಅರ್ಥಾ ಅದಮೇಲೆ ಅವಂಗೆ ಕೊಡ ಅಗತ್ಯ ಕಂಡಿದ್ದಿಲ್ಲೇ. ಆಗ್ಲೇ ಹೇಳಿದ್ನಲೇ ? ಸಂದೀಪನೂ ನಂಗೆ  ಮಗನಾಂಗೆಯಾ ಹೇಳಿ ?  ಅದಕ್ಕೆ  ಈ ಮಗನ ಮದುವೆಗೆ ಇದು ನನ್ನ  ಉಡುಗೊರೆ. ಜಾಸ್ತಿ ದಪ್ಪ ಚೈನ್ ಅಲ್ಲ .ಆದರೂ ನನ್ ಕೈಲಿ ಆಗಿದ್ದು  ಇಷ್ಟು . “ 


ಕಣ್ಣೀರು ತುಂಬಿಕೊಂಡ ಪಾರ್ವತಕ್ಕ ಮಂಜಕ್ಕನನ್ನು ಅಪ್ಪಿಕೊಂಡಳು . ಬಗ್ಗಿ ನಮಸ್ಕಾರ ಮಾಡಿದ ಸಂದೀಪನ ಕಣ್ಣಲ್ಲಿ ನೀರಿತ್ತು .  

 ,


April 22, 2023

ನಾವಿಲ್ಲ !


ಚಿಗುರು ಮೂಡುವ ಮೊದಲೇ
ಕೊಡಲಿಯಲಿ ಕಡಿಯುವೆವು
ನಮ್ಮ ಬಣ್ಣಗಳಲ್ಲಿ ಹಸುರಿಲ್ಲ !

ಭೂಮಿಯನು ಅಗೆದಗೆದು
ಬರಿದಾಗಿಸಿದೆವು ಜಲವ
ಬಾಯಾರಿದರೆ ಗುಟುಕು ನೀರಿಲ್ಲ !

ಬೋಳಾಗಿಸಿದೆವು ಮರವ
ಬರಡಾಗಿಸಿದೆವು ನೆಲವ
ಹಂಬಲಿಸಿದರು ಚೂರು ನೆರಳಿಲ್ಲ

ಈ ಭೂಮಿ ನಮದಲ್ಲ
ನಮ್ಮ ಮಕ್ಕಳ ಆಸ್ತಿ
ಈ ಸತ್ಯವನು ನಾವು ತಿಳಿದಿಲ್ಲ !

ಕನಸು ಕಾಣುವ ಮೊದಲು
ವಾಸ್ತವವ ನೋಡಿದರೆ
ನಮ್ಮ ನಾಳೆಗಳಲ್ಲಿ ನಾವಿಲ್ಲ !

( ಫೋಟೋ ಕೃಪೆ : ಅಂತರ್ಜಾಲ )

April 21, 2023

ನೂರುವರ್ಷ

 

ಮಬ್ಬು ಬೆಳಕಿನ ಕೋಣೆಯಲ್ಲಿ ಹಾಸಿಗೆಯ ಮೇಲೆ ಮಲಗಿದ್ದ  ಸೀತಜ್ಜಿ ಗೆ  ಕಿರಿಕಿರಿ ಆಗ್ತಾ ಇತ್ತು . ದಿನಾ ಮಧ್ಯಾಹ್ನ ಊಟವಾದ ಮೇಲೆ ಒಂದು ಸಣ್ಣ ನಿದ್ರೆ ಮಾಡುವುದು  ಅವಳ ಅಭ್ಯಾಸ. ಅದೆಷ್ಟೋ ದಶಕಗಳಿಂದ ರೂಢಿಯಾಗಿದ್ದು .  ಆದರೆ ಇವತ್ತೇಕೋ ನಿದ್ದೆ ಬರುವ ಲಕ್ಷಣ ಇರಲಿಲ್ಲ . ಆಚೀಚೆ ಹತ್ತು ಸಲ ಮಗ್ಗುಲು ಬದಲಿಸಿದಳು  , ಸೆಖೆ ಎನಿಸಿ ಕಾಲ ಮೇಲೆ ಎಳೆದುಕೊಂಡಿದ್ದ ಹೊದಿಕೆಯನ್ನು  ತೆಗೆದಳು .  ಮತ್ತೊಂದು ಸ್ವಲ್ಪ ಹೊತ್ತಿಗೆ ಚಳಿ ಎನಿಸಿ  ಮತ್ತೆ  ಹೊದ್ದುಕೊಂಡಳು … ಊಹುಂ .. ನಿದ್ರೆ ಮಾತ್ರ  ದೂರವೇ !


ಎದ್ದು ಹೊರಗೆ ಹೋಗೋಣ ಎಂದರೆ  ಹೋಗಿ ಮಾಡೋದಾದರೂ ಏನು ? ಯಾರಿದ್ದಾರೆ ಮಾತಾಡಲು ?  ಈ ದೊಡ್ಡ ಮನೆಯಲ್ಲಿ ದಿನದ ಹೆಚ್ಚು ಭಾಗ ಒಬ್ಬಳೇ ಇರೋದು ! ಕೆಲಸ ಇದ್ದರೆ  ಬಂದು ಹೋಗುವ ಆಳುಗಳು , ಮನೆವಾರ್ತೆ ಮುಗಿಸಿ ಒಮ್ಮೆ ಬಂದು ಮಾತನಾಡಿಸಿಕೊಂಡು ಹೋಗುವ ಪಕ್ಕದ ಮನೆಯ ಸರೋಜಾ ,  ಬೆಳಿಗ್ಗೆ ಒಮ್ಮೆ ಬಂದು ಮನೆಕೆಲಸ ಮಾಡಿ ಕೊಟ್ಟು ಮತ್ತೆ  ಸಂಜೆ ಹೊತ್ತಿಗೆ ಬಂದು ಕಟ್ಟೆಯ ಮೇಲೆ ಕುಳಿತು ಕವಳ  ತಿನ್ನುತ್ತಾ ಒಂದು ಗಳಿಗೆ  ಹರಟೆ ಹೊಡೆದು ಹೋಗುವ ನಾಗಿ , ಇಷ್ಟು ಜನರನ್ನು ಬಿಟ್ಟರೆ ಬೇರೆ ಸಾಧಾರಣವಾಗಿ ಬೇರೆ ಯಾರೂ ಕಾಣುವುದಿಲ್ಲ.


ರಾತ್ರಿ ಊಟವಾದ ಮೇಲೆ ಸರೋಜಾಳ  ಮಗಳು ಶ್ರುತಿ ಬರುತ್ತಾಳೆ ಮಲಗಲು . ಕಾಲೇಜಿಗೆ ಹೋಗುವ ಹುಡುಗಿ. ಅಜ್ಜಿ ಎಂದರೆ ಇಷ್ಟವೇ. ಕಾಲೇಜಿನ ಸುದ್ದಿ, ಊರಿನಲಿ ಏನೇನು ನಡೀತಿದೆ, ಇಂಥದ್ದೆಲ್ಲ ಅಜ್ಜಿಗೆ ಹೇಳುತ್ತಾ,  ಮಾತನಾಡುತ್ತಾ ಮಲಗುತ್ತಾಳೆ.  ಅವಳಿಗೆ ಪರೀಕ್ಷೆ ಇದ್ದರೆ  ಓದುತ್ತಾ ಕುಳಿತುಕೊಳ್ಳುತ್ತಾಳೆ . ಆಗ ಮಾತ್ರ ಮಾತೂ ಕಡಿಮೆ .

ನೆಂಟರು ಇಷ್ಟರು ಇದ್ದಾರೆ ಎನ್ನುವುದೇ ಮರೆತು ಹೋದಂತಾಗಿದೆ . ಮದುವೆ ಮುಂಜಿ ಇದ್ದರೆ ತೀರ ಹತ್ತಿರದವರು ಪದ್ಧತಿ ಬಿಡಲಾಗದು ಎಂದು ಕರೆಯಲು ಬರುತ್ತಾರೆ.  ಹೇಗೂ ತಾನು ಬರುವುದಿಲ್ಲ ಎಂದು ಗೊತ್ತಿದ್ದರೂ ರೂಢಿ ತಪ್ಪ ಬಾರದೆಂದು ಕರೆದು ಹೋಗುತ್ತಾರೆ.  ಹಾಗೆ ಬಂದವರಿಗೆ  ಒಂದು ಊಟವಿರಲಿ  ಚಾ- ಕಷಾಯ ಮಾಡಿಕೊಡುವುದೂ ತನಗೆ ಕಷ್ಟವೇ. 


ಹಾಗೆ ನೋಡಿದರೆ ಅವಳ  ವಯಸ್ಸಿಗೆ ಹೀಗೆ ತನ್ನ  ಕೆಲಸ ತಾನು ಮಾಡಿಕೊಂಡಿರುವಷ್ಟು  ಗಟ್ಟಿ ಇದ್ದಿದ್ದೇ ದೊಡ್ಡದು. ಹಾಸಿಗೆ ಹಿಡಿದರೆ ನೋಡುವರ್ಯಾರು? ದೇವರೇ, ಇಷ್ಟಾದರೂ ಗಟ್ಟಿ ಇರುವಾಗಲೇ ಕರೆದೊಯ್ಯಪ್ಪಾ   ಎಂದು ಪ್ರಾರ್ಥಿಸುತ್ತಾಳೆ. ಆ ದೇವರು ಯಾಕೋ ಕಿವುಡಾಗಿದ್ದಾನೆ . ಕುರುಡನೂ ಆಗಿದ್ದಾನೆ ಎನ್ನೋದು ಅಜ್ಜಿಯ ವ್ಯಥೆ.


 ವಯಸ್ಸಾದರೂ ಕಮ್ಮಿ ಆಯ್ತೆ?  ಬರುವ ಜ್ಯೇಷ್ಠ ಮಾಸದಲ್ಲಿ ತೊಂಭತ್ತನೆ ವರ್ಷಕ್ಕೆ ಕಾಲಿಡುವುದೇ . ಆದರೆ ಆಚರಿಸಿ ಸಂಭ್ರಮಿಸಲು ಯಾರಿದ್ದಾರೆ ?  ಹಲವು ನಿರಾಸೆಗಳು, ಹುಟ್ಟಿಯೂ ದಕ್ಕದ 3-4 ಮಕ್ಕಳ ನಂತರ ಬದುಕಿದ ಇಬ್ಬರು ಮಕ್ಕಳೂ ಕಣ್ಣೆದುರೇ  ಹೋಗಿಬಿಟ್ಟರು .  ವಂಶೋದ್ಧಾರಕ  ಎಂದು ಮುದ್ದಲ್ಲಿ ಬೆಳೆಸಿದ ಮಗ , ಕೆಲಸಕ್ಕೆಂದು ಬೇರೆ ಊರಿಗೆ ಹೋದ. ಇನ್ನು  ಅವನಿಗೆ ಮದುವೆ ಮಾಡಿ, ಆದಷ್ಟು ಬೇಗ ಮೊಮ್ಮಕ್ಕಳನ್ನು ಆಡಿಸುತ್ತಾ ಹಾಯಾಗಿರಬಹುದು   ಎಂದು ಕೊಳ್ಳುತ್ತಾ ಇರುವಾಗ ಆಕ್ಸಿಡೆಂಟ್ ಲ್ಲಿ ಹೋಗಿಬಿಟ್ಟ ಎಂಬ ಸುದ್ದಿ ಬಂತು . ಆಗ ಗೋಳಾಡಿದ್ದೆಷ್ಟು! 

ಅದೇ ದುಃಖದಲ್ಲಿ  ಹಾಸಿಗೆ ಹಿಡಿದ ಗಂಡ  ಎರಡು ವರ್ಷದಲ್ಲಿ ತೀರಿಕೊಂಡರು . ಮಕ್ಕಳಾಗಲಿಲ್ಲ ಎಂದು ಅಳಿಯ ಎರಡನೇ ಮದುವೆ ಆದ್ಮೇಲೆ ತವರಿಗೆ ಬಂದು ಉಳಿದ ಮಗಳು ಅದೇನೋ ಕಾಯಿಲೆ ಬಂದು  ಯಾವ ಔಷಧಿ ಉಪಚಾರಗಳೂ ತಾಗದೆ ತೀರಿಕೊಂಡು ೧೫ ವರ್ಷಗಳೇ ಆಯಿತು . ಇನ್ಯಾರಿದ್ದಾರೆ ಕಷ್ಟ ಸುಖ ಕೇಳಲು ? ಅಪ್ಪ ಅಮ್ಮ ಹೋದ ಮೇಲೆ ಸಡಿಲವಾಗ ತೊಡಗಿದ ತೌರಿನ ಋಣ ಈಗಂತೂ ಮುಗಿದೇ ಹೋಗಿ ಎಷ್ಟು  ವರ್ಷವಾಯಿತೆಂದೇ ನೆನಪಿಲ್ಲ . ಒಟ್ಟಿನಲ್ಲಿ  ತನ್ನವರು ಎನ್ನಲು ಯಾರೂ ಇಲ್ಲ . 


ಯಾಕೋ , ಕೇರಿ ಮನೆಯಾಗಿ  ಅಕ್ಕ ಪಕ್ಕಕ್ಕೆ ಅಂಟಿ  ಕೊಂಡಂತೆ ಮನೆಗಳಿರುವ ಕಾರಣ  ತೀರಾ ಒಂಟಿ ಎನಿಸದೆ ಜೀವನ ಕಳೀತಾ ಇದೆ. ಒಬ್ಬರಲ್ಲಾ ಒಬ್ಬರು  ವಿಚಾರಿಸಿಕೊಂಡು ಹೋಗುತ್ತಾರೆ. 

ಆಚೆ ಮನೆಯ ರಾಮು , ಚಿಕ್ಕವನಿದ್ದಾಗಿಂದ ಅಜ್ಜಿ ಎನ್ನುತ್ತಾ ಹಚ್ಚಿಕೊಂಡವನು. ಅವನಿಗೆ ತನ್ನ ಜಮೀನಿನ ಜವಾಬ್ದಾರಿ ವಹಿಸಿಯಾಗಿದೆ. ತನ್ನ ಊಟತಿಂಡಿ, ಬಟ್ಟೆ ಮತ್ತು  ಅವಶ್ಯಕತೆಗಳಿಗೆ  ಆಗುವಷ್ಟು ಕೊಟ್ಟು ಉಳಿದಿದ್ದೆಲ್ಲಾ ಅವನಿಗೆ ಇಟ್ಟುಕೊಳ್ಳಲು ಹೇಳಿಯಾಗಿದೆ. ತನಗಾದರೂ ಇನ್ಯಾರಿದ್ದಾರೆ  ಆಸ್ತಿ ಬರೆದುಕೊಡಲು ? ಆದರೂ ಅವನು ಅಡಿಕೆ ಮಾರಿದ ದುಡ್ಡನ್ನು ಬ್ಯಾಂಕಿನಲ್ಲಿ ತನ್ನ ಹೆಸರಿನ ಖಾತೆ ಮಾಡಿ ಅದರಲ್ಲಿ ಹಾಕುತ್ತಾನೆ. ನಿನ್ನ ದುಡ್ಡು ನಿನಗೆ ಇರಲಿ ಎಂಬ  ಗುಣ ಅವನದು .

ರಾಮುವಿನ ಹೆಂಡತಿ ಸರೋಜಾ ಕೂಡ ಒಳ್ಳೆ ಹುಡುಗಿ. ಅಜ್ಜಿ ನಿನಗೆ ನಾನೇ ಊಟ ತಂದು ಕೊಡ್ತೀನಿ  ನೀ ಯಾಕೆ ಸುಮ್ಮನೆ ಕಷ್ಟ ಪಡೋದು ಅಂತ ಎಷ್ಟೋ ಸಲ ಹೇಳಿದ್ದಾಳೆ. ಆದರೆ ತಾನೇ ನಿರಾಕರಿಸಿದ್ದು. ಆ ಅಡುಗೆ ಬೇಯಿಸಿಕೊಂಡಾದರೂ ಸ್ವಲ್ಪ ಹೊತ್ತು  ಹೇಗೋ ಕಳೆಯುತ್ತಲ್ಲಾ ಅಂತ. ತೀರ ಯಾವಾಗಾದರೂ ಹುಷಾರಿಲ್ಲದೆ  ಸುಸ್ತು ಎನಿಸಿದಾಗ ಮಾತ್ರ  ಅವಳು ತನಗೆ ಅಡುಗೆ ಮಾಡಲು ಬಿಡದೇ ಅವಳೇ  ಊಟ ತಂದು  ಪ್ರೀತಿಯಿಂದ ಗದರುತ್ತಾ ಊಟ ಮಾಡಿಸಿ ಹೋಗುತ್ತಾಳೆ 


ಮಗಳು ಸತ್ತ ಕೆಲ ಸಮಯದ ನಂತರ ,ಒಳಕೋಣೆಯಲ್ಲಿ ಮಲಗಿರುವಾಗ ತನಗೇನಾದರೂ ಆದರೆ ಜನರಿಗೆ ತಿಳಿಯುವುದೂ ಕಷ್ಟವಾದೀತು ಎಂಬ ಯೋಚನೆ ಬಂದು  ಒಳ ಜಗುಲಿಯ ಒಂದು ಭಾಗಕ್ಕೆ  ಹಲಗೆಯ ಗೋಡೆ ಮಾಡಿಸಿ, ಬಾಗಿಲಿಲ್ಲದ ಕೋಣೆಯಂತೆ  ಮಾರ್ಪಾಟು ಮಾಡಿ ಕೊಂಡಾಯ್ತು.  ಆಗಲೇ ರಾಮು ಅದಕ್ಕೊಂದು ಅಂಟಿಕೊಂಡಂತೆ ಬಚ್ಚಲು ಸಂಡಾಸು ಮಾಡಿಕೊಳ್ಳೋದು ಒಳ್ಳೇದು ಅಂತ ಒತ್ತಾಯಿಸಿದ್ದು. 

ಮೊದಲು ಸ್ವಲ್ಪ ಮುಜುಗರ ಎನಿಸಿದರೂ ಮುಂದಿನ ವಿಚಾರ ಮಾಡಿದಾಗ ಅದು ಸರಿ ಎನಿಸಿತ್ತು. ಇಲ್ಲದಿದ್ರೆ ಈಗೆಲ್ಲಾ ಎಷ್ಟು ಕಷ್ಟ ಆಗಿರೋದು!  ರಾತ್ರಿ ಕೆಲವೊಮ್ಮೆ ಎರಡು ಮೂರು ಸಲ ಏಳಬೇಕು . ಸದ್ಯ ಪಕ್ಕಕ್ಕೆ ಬಚ್ಚಲುಮನೆ ಇರೋದಕ್ಕೆ ಸಲೀಸು. ಇನ್ನೂ ಎಷ್ಟು ದಿನ ಅಂತ ಹೀಗೆ ಬದುಕಿರಬೇಕೋ !

ಸೀತಜ್ಜಿಯ ತಲೆಯಲ್ಲಿ  ಆಲೋಚನೆಗಳು ಓಡುತ್ತಲೇ ಇದ್ದವು.


ಅಲ್ಲಾ , ನೂರುವರ್ಷ ಬಾಳು ಅಂತ ಯಾರಾದ್ರೂ ಆಶೀರ್ವಾದ ಮಾಡಿದ್ದು ನಿಜವಾಗಿ ಬಿಡುತ್ತಾ ಅಂತ ?  ಹಾಗೆ ಮಾಡಿದ ಆಶೀರ್ವಾದಗಳೆಲ್ಲ ನಿಜವಾಗೋ ಹಾಗಿದ್ರೆ, ದೀರ್ಘ ಸುಮಂಗಲಿ ಭವ ಅಂದಿದ್ದಾಗಲೀ, ಅಷ್ಟ ಪುತ್ರವತೀ ಭವ ಎಂದಿದ್ದಾಗಲಿ ಯಾಕೆ ನಿಜವಾಗಲಿಲ್ಲ ಎಂದು ಯೋಚಿಸುತ್ತಾಳೆ. ಅಷ್ಟೇ ಯಾಕೆ, ನೂರುವರ್ಷ ಸುಖವಾಗಿ ಬಾಳು ಅಂದಿದ್ದರಲ್ಲಿ ಅರ್ಧ ಭಾಗವಷ್ಟೇ ನಿಜವಾಗುತ್ತದ? ಎಂದು ಯೋಚಿಸುತ್ತಾಳೆ 


ಯಾರೆಲ್ಲ ಆಶೀರ್ವಾದ ಮಾಡಿದ್ದರು ಎಂದು ನೆನಪಿಸಿ ಕೊಳ್ಳುವ ಪ್ರಯತ್ನ ಮಾಡುತ್ತಾಳೆ . ಹಾಗೆ ತನಗೆ ಆಶೀರ್ವಾದ ಮಾಡಿದ  ಯಾರ ನಾಲಿಗೆ ಮೇಲೆ ಮಚ್ಚೆ ಇದ್ದಿರಬಹುದು ? ಅವರಿಗಾದರೂ ಕಲ್ಪನೆ ಬೇಡವೇ? ಒಂಟಿಯಾಗಿ ನೂರುವರ್ಷ ಬದುಕೋದು ಎಂಥಾ ಹಿಂಸೆ ಅಂತ? 

ತಮ್ಮ ಕಣ್ಣ ಮುಂದೆ ಗಂಡ ಮಕ್ಕಳು ಎಲ್ಲರೂ  ಮಣ್ಣಾದಾಗ  ಹೊಟ್ಟೆಯಲ್ಲಿ ಎಂಥಾ ಬೆಂಕಿ ಸುಡುತ್ತದೆ ಅಂತ? ಕೈಲಾಗದಿದ್ದರೂ ಹೇಗೋ ತಮ್ಮ ಕೆಲಸ ಮಾಡಿಕೊಂಡು , ಒಂದು ಗಂಜಿಯನ್ನಾದರೂ ಬೇಯಿಸಿಕೊಂಡು ದೊಡ್ಡ ಮನೆಯಲ್ಲಿ ಒಂಟಿ ಭೂತದಂತೆ ತಿರುಗುವುದು ಎಷ್ಟು ಹುಚ್ಚು ಹಿಡಿಯುವಂತೆ ಮಾಡುತ್ತದೆ ಅಂತ? ಸತ್ತ ಮೇಲೆ  ತನಗಾಗಿ ಅಳುವವರು , ಚಿತೆಗೆ ಬೆಂಕಿ ಇಡುವವರು ಇಲ್ಲದೆ ಅನಾಥ ಹೆಣವಾಗಿಬಿಡುವ  ಸಾಧ್ಯತೆಯನ್ನು ಅವರು ಯೋಚಿಸಿಲ್ಲವೇ? ಬಹುಶಃ  ಅವರಿಗೇ ತಮ್ಮ ಆಶೀರ್ವಾದದ ಮೇಲೆ ನಂಬಿಕೆ ಇರಲಿಕ್ಕಿಲ್ಲ  ಎಂದು ಅವಳಿಗೆ ನಗು ಬಂತು.


ಗಂಡ ತೀರಿಕೊಂಡಾಗ ಬಂದಿದ್ದ ಮಂಕಾಳತ್ತೆ ಯಾರಿಗೋ  “ಸೀತೆ ಹೇಳಿ ಹೆಸರಿರೋರಿಗೆ ಕಷ್ಟ ತಪ್ಪಿದ್ದಲ್ಲವಂತೆ  , ಆ ಸೀತಾಮಾತೆಯೆ ಏನೆಲ್ಲ ಕಷ್ಟ ಅನುಭವಿಸಿದಳು” ಎಂದು ಹೇಳಿದ್ದು  ಅಜ್ಜಿಗೆ ನೆನಪಾಯ್ತು. 

ಹಾಗಾದರೆ, ಇದು ತನ್ನ ಅಪ್ಪ ಅಮ್ಮನಿಗೆ ಗೊತ್ತಿರಲಿಲ್ಲವೇ? ಗೊತ್ತಿದ್ದೂ ಯಾಕೆ ತನಗೆ ಸೀತೆ ಎಂದೇ ಹೆಸರಿಟ್ಟರು? ತಮ್ಮ ಮಗಳಿಗೆ ಹಾಗೇನೂ ಆಗದು ಎಂಬ ಹುಚ್ಚು ಭರವಸೆ ಇತ್ತೇ? ಅವರಿದ್ದಿದ್ದರೆ ಕೇಳಿಯೇ ಬಿಡಬಹುದಿತ್ತು ಎಂದುಕೊಂಡವಳಿಗೆ ಅಲ್ಲೇ  ತನ್ನ ತಲೆ ಎಲ್ಲೆಲ್ಲೋ ಓಡುತ್ತಿರುವ ರೀತಿಗೆ ಸಣ್ಣಗೆ ನಗು ಬಂತು.


ಮಗಳು ಸತ್ತು, ತಾನು ತೀರಾ ಒಂಟಿಯಾದ  ಶುರುವಿಗಂತೂ ತಾನಾದರೂ ಇನ್ನೇಕೆ ಬದುಕಬೇಕು ಎನಿಸಿ ಜೀವ ಕಳೆದುಕೊಳ್ಳುವ ಯೋಚನೆ ಅದೆಷ್ಟೋ ಸಲ ಬಂದಿತ್ತು.  ನೇಣು ಹಾಕಿ ಕೊಳ್ಳಬೇಕು ಅಥವಾ  ಅಂಗಳದಾಚೆ ತೋಟದ ಬದಿಯಲ್ಲಿಯ ಹಳ್ಳ ಮಳೆಗಾಲದಲ್ಲಿ ತುಂಬಿ ಹರಿವಾಗ ಅದರಲ್ಲಿ ಬಿದ್ದು ಬಿಡಬೇಕು ಎಂದೆಲ್ಲ  ಅದೆಷ್ಟೋ ಸಲ ಅನಿಸಿದ್ದಿತ್ತು. ಆದರೆ ,  ಆತ್ಮಹತ್ಯೆ ಮಹಾಪಾಪ, ಹಾಗೆ ಮಾಡಿಕೊಂಡವರು ಅಂತರ್ ಪಿಶಾಚಿಯಾಗಿ ಅಲೆಯುತ್ತಾರೆ  ಎಂಬ ಭಯವಿತ್ತಲ್ಲ ? ಅದರಿಂದಾಗಿ ಹಿಂಜರಿದಿದ್ದಾಯ್ತು.  ಹಾಗೆ  ನೋಡಿದರೆ ಈಗಲಾದರೂ ಇನ್ನೇನು ? ಒಂಥರಾ  ಒಂಟಿ ಪಿಶಾಚಿಯಂತೆ ಅಲೆಯುತ್ತಿಲ್ಲವೇ ಎನಿಸಿ ನಿಟ್ಟುಸಿರು  ಹೊರಬರುತ್ತದೆ. 


ಆ ದೇವರಿಗಾದರೂ ಯಾಕೆ ತನ್ನ ಮೇಲೆ ಕರುಣೆಯಿಲ್ಲ ? ಕಳೆದ ವರ್ಷ ತುದಿ ಮನೆ ಪರಮುನ ಮಗಳು ಜ್ವರ ಬಂದಿದ್ದೆ ನೆಪವಾಗಿ  ತೀರಿ ಕೊಂಡೆ ಬಿಟ್ಟಳಲ್ಲ ? ಇನ್ನೂ ಶಾಲೆಗೆ  ಹೋಗುವ ಚಿಕ್ಕ ಹುಡುಗಿ . ಆ ದೇವರಿಗೆ ಇಲ್ಲಿ ಸಾವನ್ನೇ ಕಾಯ್ತಾ ಕೂತಿರೋ ತಾನು ಕಾಣಲಿಲ್ವೆ? 

ಯಾವ ಪಾಪಕ್ಕೆ ಇಂಥಾ ಶಿಕ್ಷೆ  ಕೊಡ್ತಿದಾನೆ?  ತಪ್ಪದ್ದೆ ಶ್ರದ್ಧಾ ಭಕ್ತಿಯಿಂದ ಎಲ್ಲಾ ಹಬ್ಬ ಹುಣ್ಣಿಮೆ , ವ್ರತ ಮಾಡಿದ್ದೇನೆ . ಆದರೂ ಯಾಕೆ ಹೀಗೆ?

ಒಟ್ಟಿನಲ್ಲಿ ತಾನು ಅನುಭವಿಸುತ್ತಿರುವುದನು ನೋಡಲು ತನ್ನವರು ಎಂದು ಯಾರೂ ಇಲ್ಲವಲ್ಲ ಎಂದು ನಿಟ್ಟುಸಿರು ಬಿಟ್ಟಳು.


ಛೆ, ಹಾಳಾದ್ದು , ಇವತ್ತು ಯಾಕೆ ನಿದ್ದೆ ಬರುತ್ತಿಲ್ಲ ಎನಿಸಿ ಒಳಗೇ ಸ್ವಲ್ಪ ಸಿಟ್ಟೂ ಬರ ತೊಡಗಿತು. ಮತ್ತೆ ಮಗ್ಗುಲು ಬದಲಾಯಿಸಿ ಮಲಗಿದಳು.

ಇದ್ದಕ್ಕಿದ್ದ ಹಾಗೇ ಮತ್ತೊಂದು ಹುಳ ತಲೆ ಕೊರೆಯ ತೊಡಗಿತು! 

ತಾನೇನಾದರೂ  ಈಗ ಸತ್ತೇ ಹೋದರೆ ಬೇರೆಯವರಿಗೆ ತಿಳಿಯುವುದಾದರೂ ಹೇಗೆ?

ಸಂಜೆ ನಾಗಿ ಬಂದು,  ತಾನು ಇನ್ನೂ ಎದ್ದಿಲ್ಲದ್ದು ನೋಡಿ , ಸರೋಜಾಳನ್ನು ಕರೆ ತಂದರೆ….ಆಗ ತಿಳಿಯಬಹುದೇನೋ  . ಇವರೆಲ್ಲ ತನ್ನ ಜೀವನದ ಒಂದು ಭಾಗವಾಗಿದ್ದವರು. ತಾನು ಸತ್ತಿದ್ದಕ್ಕೆ ಅಳಬಹುದೇ ಎಂಬ ಕೆಟ್ಟ ಕುತೂಹಲ ಮೂಡಿತು. ಅಲ್ಪ ಸ್ವಲ್ಪ ದುಖವಾಗಬಹುದು,  ಜೊತೆಗೇ ಸಾವಿಗಾಗಿ ಎಷ್ಟೋ ವರ್ಷಗಳಿಂದ ಕಾದು ಕುಳಿತಿರುವ ತಾನು ಸತ್ತರೆ ಅವರಿಗೂ ಒಮ್ಮೆ  ಸಮಾಧಾನವೇ ಆಗಬಹುದು ಎಂದು ಯೋಚಿಸಿದಾಗ  ಬೇಡವೆಂದರೂ ಮನದ ಮೂಲೆಯಲ್ಲೆಲ್ಲೋ ತನಗಾಗಿ ದುಃಖಿಸುವವರು  ಯಾರು ಇಲ್ಲವಲ್ಲ ಎಂದು  ಪಿಚ್ಚೆನಿಸಿತು.

 

ಆಮೇಲೆ ಮುಂದಿನ ಕಾರ್ಯಗಳನ್ನು ಯಾರು ಮಾಡಬಹುದು ಎಂಬ ಕುತೂಹಲ ಮೂಡಿತು. ಒಂದು ಕಾಲದಲ್ಲಿ ಜರ್ಬಿನಿಂದಲೇ ಬಾಳಿ, ಇಷ್ಟು ದೀರ್ಘ ಕಾಲ ಗೌರವದಿಂದಲೇ ಬದುಕಿದ್ದು ,ಸತ್ತ ಮೇಲೆ ಅನಾಥ ಹೆಣವಾಗಿ ಬಿಡುವೆನೆ ಎಂದೆನಿಸಿ ದುಃಖವಾಯಿತು.

ಯಾವುದಕ್ಕೂ ಇಂದು ಸಂಜೆ ರಾಮು ಮತ್ತೆ ಸರೋಜಾ ರನ್ನು ಕೂರಿಸಿಕೊಂಡು ಈ ಬಗ್ಗೆ ಮಾತನಾಡಬೇಕು. ಕೊಳ್ಳಿ ಇಡುವ ಕೆಲಸವೊಂದು ನೀನೇ ಮಾಡು ಎಂದು ರಾಮುವನ್ನು ಕೇಳಿಕೊಳ್ಳಬೇಕು . ಎಷ್ಟೆಂದರೂ ದಾಯಾದಿಯೇ ಆಗುತ್ತಾನೆ. ಇಲ್ಲ ಎನ್ನಲಾರ .

ನಂತರದ ಕ್ರಿಯೆಗಳನ್ನು ಮಾಡುವ ಅಗತ್ಯವಿಲ್ಲ ಎಂದು ಹೇಳಬೇಕು. ಅದೆಷ್ಟೋ ಜನ ಅನಾಥರಾಗಿ ಸಾಯುವುದಿಲ್ಲವೇ? ಅಂಥಾ ಅನಾಥ ಹೆಣಗಳನ್ನು ಯಾರೋ ಸುಡುತ್ತಾರೆ. ಆದರೆ ಮುಂದಿನ ಕಾರ್ಯ ಯಾರೂ ಮಾಡುವುದಿಲ್ಲ. ಹಾಗಿದ್ದರೆ ಅವರ ಆತ್ಮ ಮುಕ್ತಿಯಿಲ್ಲದೆ ಅಲೆಯುತ್ತದೆಯೇ? ಆ ರೀತಿ ಏನಾದರೂ ಆದರೆ, ಇಂಥಾ ಆತ್ಮಗಳದ್ದೆ ದೊಡ್ಡ ಜಾತ್ರೆಯಾದೀತು!


ಅದೇಕೋ ತನ್ನ ಆಲೋಚನೆಗೆ ಅವಳಿಗೇ ನಗು ಬಂತು!


ಮತ್ತೆ ಮಗ್ಗುಲಾಗಿ ಗೋಡೆಯ ಕಡೆ ತಿರುಗಿ ಮಲಗಿದಳು.  

ನಾಳೆ ನಾಡಿದ್ದು ಯಾವಾಗಲಾದರೂ  ಈ ಹಾಸಿಗೆ ಬಟ್ಟೆನಾ ಒಂದ್ಸಲ ತೊಳೀಬೇಕು ಕಮಟಾಗಿ ಬಿಟ್ಟಿವೆ. ಸರೋಜಾ ಗೆ ಹೇಳಿದ್ರೆ ಅವರ ಮನೆ ಮಷಿನ್ ಲ್ಲಿ  ತೊಳೆದು ಕೊಡ್ತಾಳೆ. ಸ್ನಾನ ಮಾಡಿ ತನ್ನ ನೈಟಿಯನ್ನು ತೊಳೆದುಕೊಳ್ಳಲು ತನಗೆ ಒಮ್ಮೊಮ್ಮೆ ಕಷ್ಟ ಎನಿಸಿದ್ದಿದೆ. ಆದರೆ ಅದು ಅನಿವಾರ್ಯ ! ಈ ನೈಟಿಯನ್ನಾದರೂ ಹಾಕಿಸಲು ಸರೋಜಾ ಅದೆಷ್ಟು ವಾದ ಮಾಡಿ ಒಪ್ಪಿಸಿದ್ದು ! 

ಈಗ ಇದೇ ಹಾಯಿ ಎನಿಸುತ್ತದೆ. ನಿಂತು ಸೀರೆ ಉಟ್ಟುಕೊಳ್ಳುವುದು ಬಹುಶಃ ತನಗೆ ಈಗ ಕಷ್ಟವೇ ಆಗ್ತಾ ಇತ್ತೇನೋ . 

ದೇವರೇ, ಸದ್ಯ ತನ್ನವರನ್ನೆಲ್ಲ ಕರೆಸಿಕೊಂಡರೂ ಮನೆಯವರಂತೆಯೆ ನೋಡಿಕೊಳ್ಳುವ ಜನರನ್ನಾದರೂ ಕೊಟ್ಟಿದ್ದೀಯಲ್ಲ ಎಂದು ಮನದಲ್ಲೇ ನಮಸ್ಕಾರ ಮಾಡಿದ್ಲು.  

ಈ ಎಲ್ಲ ಯೋಚನೆಗಳ ನಡುವೆ ಅಂತೂ ಅವಳಿಗೆ ಯಾವಾಗ ನಿದ್ರೆ  ಬಂತೋ ತಿಳಿಯಲಿಲ್ಲ. ಮತ್ತೆ ಎಚ್ಚರವಾಗಿದ್ದು ನಾಗಿಯ ಜೋರಾದ ದನಿಯಿಂದ  . ದಿನದಂತೆ ಬಂದು  ಕಟ್ಟೆಯಮೇಲೆ ಕುಳಿತ ನಾಗಿ, ಸೀತಜ್ಜಿ ಕಾಣದ್ದು  ನೋಡಿ  ಜಗುಲಿಗೆ ಹೋಗಿ  ಕರೆದಳು . ಎರಡು ಮೂರು ಸಲ ಕರೆದರೂ ಉತ್ತರವಿಲ್ಲದ್ದು ನೋಡಿ  ಗಾಬರಿಯಾಗಿ  ಜೋರಾಗಿ ಕೂಗಿದಳು. ಆಗಲೇ ಅಜ್ಜಿಗೆ ಎಚ್ಚರವಾಗಿದ್ದು. 

ಎದ್ದು ಬಂದ ಅಜ್ಜಿ ಯನ್ನು ನೋಡಿ , ನಾಗಿಯೂ ನಿಟ್ಟುಸಿರು ಬಿಟ್ಟಳು. 


“ ಎಂತ ಅಮಾ, ಆ ನಮನಿ ನಿದ್ರೆ? ನಾ ಒಂದ್ ಸಲ ನಿಮಗೆ ಎಂತೋ ಆಯ್ತು ಅಂದ್ಕಂಡೆ “


“ಆಗಿದ್ರೆ ಒಂದು ಸಮಾಧಾನ ಇರ್ತಿತ್ತಲೇ ನಾಗಿ ? ಎಂತ ಮಾಡದು ? ಆ ದೇವರಿಗೆ ನಾ ಕಾಣದೆ ಇಲ್ಲಲ್ಲೇ”  ಎಂದು ಅಲವತ್ತುಕೊಂಡಳು ಸೀತಜ್ಜಿ. 


ದಿನದ ಹಾಗೇ  ಅದೂ ಇದೂ ಸುದ್ದಿ ಹೇಳಿ ನಾಗಿ  ಮನೆಗೆ ಹೊರಟಳು. ಅವಳು ಕಟ್ಟೆಯಿಂದ ಅಂಗಳಕ್ಕೆ ಇಳಿಯುತ್ತಿರುವಾಗ ಅದೇನೋ ನೆನಪಾದಂತಾಗಿ  ಸೀತಜ್ಜಿ ಅವಳನ್ನು ಕರೆದಳು. ತಿರುಗಿ ಬಂದವಳಿಗೆ “ ನಾಗಿ , ಹೋಗ್ತಾ ಆ ಶ್ರೀಧರ ಭಟ್ರ ಮನೆ ವಿನಾಯಕ ಮನೇಲಿದ್ರೆ ಒಂದ್ ಸತಿ ಬರಲಿಕ್ಕೆ  ಹೇಳು . ಅರ್ಜೆಂಟ್ ಎಲ್ಲ ಇಲ್ಲ.  ಆದ್ರೂ  ಇವತ್ತೇ ಬಂದ್ ಹೋಗಬೇಕಂತೆ ಹೇಳು .” ಎಂದಳು 


ನಾಗಿಗೆ ಒಮ್ಮೆ ಆಶ್ಚರ್ಯವಾದರೂ  “ಅಡ್ಡಿಲ್ಲ, ಹೇಳಿ ಹೋಗ್ತೇನೆ “ ಎಂದು ಹೊರಟಳು .


“ಹಾಂಗೆ ನಿನ್ ಮಗ ಶಿವಪ್ಪಂಗು ಒಂದ್ಸಲ ಬಂದು ಹೋಗಲಿಕ್ಕೆ ಹೇಳು.”


 ನಾಗಿಗೆ  ಈಗ ಸ್ವಲ್ಪ ಗಲಿಬಿಲಿಯಾಯಿತು. ಆದರೂ ತೋರಿಸಿಕೊಳ್ಳದೆ  “ಆಯ್ತು ಅಮಾ” ಎನ್ನುತ್ತಾ ಗೇಟ್ ದಾಟಿದಳು..

 

ಒಳ ಹೋಗಿ ದೀಪ ಹಚ್ಚಿ ,ದೇವರಿಗೆ ಕೈ ಮುಗಿದು  ಜಗುಲಿಯ ಮೇಲೆ  ಕುಳಿತು ರಾಮಾಯಣ ಓದ ತೊಡಗಿದರೂ ಸೀತಜ್ಜಿಯ ತಲೆಯಲ್ಲಿ  ಹತ್ತೆಂಟು ಯೋಚನೆಗಳು.

ದಿನದಂತೆ ಶ್ರದ್ಧೆಯಿಂದ ಓದಲಾಗದೇ ಅದನ್ನು ಹಾಗೇ ಮುಚ್ಚಿಟ್ಟು ಸುಮ್ಮನೆ ಕುಳಿತಳು .


ಅಷ್ಟೊತ್ತಿಗೆ ವಿನಾಯಕ ಗಡಿಬಿಡಿಯಿಂದ ಮನೆ ಮೆಟ್ಟಿಲು ಹತ್ತುತ್ತಿರುವುದು ಕಂಡಿತು.  ಜಗುಲಿಯಲ್ಲಿ  ಪುಸ್ತಕ ತೊಡೆಯ ಮೇಲಿಟ್ಟು ಕುಳಿತ ಅಜ್ಜಿಯನ್ನು ನೋಡಿ ಅವನೂ ಸಮಾಧಾನದ ಉಸಿರು ಬಿಟ್ಟ. 


"ಎಂತ ಆ ಯ್ತೆ ಅಜ್ಜಿ ? ಹೇಳಿ ಕಳಿಸಿದ್ದೆ ?ನಾಗಿ ಹೇಳಿದ ಕೂಡ್ಲೇ  ನಾನು ಒಂದ್ಸಲ ಗಾಬರಿ ಆಗೋದೆ ನೋಡು . "


ದೊಡ್ಡದಾಗಿ ನಕ್ಕ ಸೀತಜ್ಜಿ , “ಅಯ್ಯ, ನಾನಿನ್ನೂ ಬದುಕಿದ್ದೆ ಮಾರಾಯ. ಇವತ್ತು ತಲೇಲಿ ಏನೇನೋ ಯೋಚನೆ ಬರ್ತಿತ್ತು. ಅದಕ್ಕೇ ಕೆಲವು ವಿಷಯಾನಾ ಒಂದ್ ಹಂತಕ್ಕೆ ತಂದಿಡದು ಒಳ್ಳೇದು ಅನಸ್ತು. ಅದಕ್ಕೇ ನಿಂಗೆ ಹೇಳಿ ಕಳಿಸ್ದೆ .  ಆ ರಾಮು  ನ ಒಂದ್ಸಲ  ಕರದ್ ಬಿಡು ನೀನೇ. ಸರೋಜಾನ್ನೂ ಬರಾಕ್ ಹೇಳು .


ವಿನಾಯಕಂಗೆ ಗೊಂದಲವಾಯಿತು.. ಅದರೂ ಮೊಬೈಲ್ ತೆಗೆದು ರಾಮುಗೆ ಕಾಲ್ ಮಾಡಿ  ಅಜ್ಜಿ ಹೇಳಿದ್ದನ್ನು ಹೇಳಿದ. 

ಐದು ನಿಮಿಷದಲ್ಲಿ ರಾಮು ಸರೋಜಾ ಇಬ್ಬರು ಗಡಬಡಿಸುತ್ತಾ ಬಂದರು .  


ಎಂತ ಆಯಿತು  ಅಜ್ಜಿಗೆ  ವಿನಾಯಕಣ್ಣ?ಎಂದು  ಕೇಳುತ್ತಾ ಒಳ ಹೊಕ್ಕವರು  ಅಜ್ಜಿ ಆರಾಮಾಗಿ ಕುಳಿತಿದ್ದು ನೋಡಿ ನಿರಾಳವಾದರು.


ನಾನು ಗಟ್ಟಿನೆ ಇದೀನಪ್ಪಾ. ಒಂದು ಮುಖ್ಯವಾದ ವಿಷಯ ಮಾತಾಡ್ಬೇಕು. ಅದಕ್ಕೆ ಕರೆದಿದ್ದು .


ಮೂರು ಜನ ಮುಖ ಮುಖ ನೋಡಿಕೊಂಡರು. 


ಪುಸ್ತಕ ಬದಿಗಿಟ್ಟು ಕಾಲು ನೀಡಿಕೊಂಡ ಸೀತಜ್ಜಿ ಶುರು ಮಾಡಿದಳು. 


ರಾಮು,  ಇವತ್ತು ಮಧ್ಯಾನ ಯಾಕೋ ತಲೇಲಿ ಏನೇನೋ ಯೋಚನೆಗಳು . ನಿದ್ರೆನೂ ಸರಿಯಾಗಿ ಬರ್ಲಿಲ್ಲ . ಆವಾಗಲೇ ನಿಮ್ಮಿಬ್ಬರ ಹತ್ರ ಈ ವಿಷಯನ ಮಾತಾಡ ಬೇಕು ಅಂತ. 

ಒಂದು ಕ್ಷಣ ಸುಮ್ಮನಾದ ಅಜ್ಜಿ  , “ ನಾ ಸತ್ತ ಮೇಲೆ  ಚಿತೆಗೆ ಬೆಂಕಿ ಕೊಡೊ ಕೆಲಸ ನೀ ಮಾಡ್ತೀಯ ರಾಮು ? “ ಬೇಡಿಕೆಯ ದನಿಯಲ್ಲಿ ಕೇಳಿದಳು.


“ಅಜ್ಜೀ , ಇದೇನೇ ಇದ್ದಕ್ಕಿದ್ದ ಹಾಗೆ?”   ಸರೋಜಾ ಗಾಬರಿಯಾದಳು.

“ಅಜ್ಜೀ, ನೀನು ನೂರುವರ್ಷ ಮುಗ್ಸಿಯೇ ಹೋಗೋದು. ಯಾಕೆ ಸುಮ್ನೆ ಏನೇನೋ ಮಾತು ? “  ರಾಮು ತಮಾಷೆ ಮಾಡಿದ. 


ಹಾಗಲ್ಲ ರಾಮು , ನಾನು ನೂರುವರ್ಷ ಬದುಕಿ  ಮಾಡೋಕೆ ಏನಿದೆ  ಹೇಳು ? ಈಗಲೇ ಬೇಕಾಗಿದ್ದಕ್ಕಿಂತ ಜಾಸ್ತಿ ವರ್ಷ  ಆಯ್ತು ಈ ಭೊಮಿ ಮೇಲೆ  ! ಸಾಯೋ ವಯಸ್ಸಂತು ಆಗಿ ಯಾವ್ದೋ ಕಾಲ ಆಗೋಯ್ತು . ನಂಗೆ ನೂರುವರ್ಷ ಬದುಕೋ ಇಚ್ಛೆ  ಇಲ್ವೆ ಇಲ್ಲ. ಯಾಕಾಗಿ , ಯಾರಿಗಾಗಿ ಬದುಕಬೇಕು ಹೇಳು ?  ಯಾವ್ ಕ್ಷಣ ದೇವ್ರು ಕರೀತಾನೆ ಅಂತ ಕಾದು ಕೂತಿರೋಳು.ಅದಕ್ಕೆ ಹೇಳ್ತಾ ಇದ್ದೀನಿ.  ನೋಡು ದಯವಿಟ್ಟು ನನ್ನ ಹೆಣಕ್ಕೆ ಕೊಳ್ಳಿ ಇಡಾ ಕೆಲಸ ನೀನೇ ಮಾಡು. ಬೇರೆ ಏನೂ  ವಿಧಿಗಳನ್ನ ಮಾಡೋದು ಅಗತ್ಯ ಇಲ್ಲ.  ನಾನೇನೂ ಭೂತ ಆಗಿ ಕಾಟ ಕೊಡೋದಿಲ್ಲ ! ಯೋಚನೆ ಮಾಡಬೇಡ .


"ಅಜ್ಜಿ , ಎಂತ ಮಾರಾಯ್ತಿ ನೀನು ? ಹೀಗೆಲ್ಲ  ಕೇಳಿ ಮನಸಿಗೆ ಹಿಂಸೆ ಕೊಡ್ತೀಯಲ್ಲ ?" ರಾಮು ಭಾರವಾದ ದನಿಯಲ್ಲಿ ಹೇಳಿದ . 


“ಅಯ್ಯ , ಹಾಗಲ್ಲ ಮಾರಾಯ , ಹಾಗೆ ನೋಡಿದ್ರೆ , ನೀನು ನನಗೆ ದಾಯಾದಿಯೇ . ಆದ್ರೂ ನಾನು ಸತ್ತ ಮೇಲೆ ಮುಂದಿನದೆಲ್ಲ ಯಾರು ಮಾಡೋದು,ಹೇಗೆ,  ಏನು ಅನ್ನೋ ಪ್ರಶ್ನೆ ಎಲ್ಲ ಬರಬಾರದು ನೋಡು. ಅದಕ್ಕೆ ಮುಂಚೆನೇ ಕೇಳಿದ್ದು.”  ದೊಡ್ಡಕೆ ನಕ್ಕಳು .


ಉಳಿದ ಮೂವರೂ ಏನು ಹೇಳಬೇಕೋ ತಿಳಿಯದೇ ಕುಳಿತಿದ್ದರು . 


ಅದೇ ಹೊತ್ತಿಗೆ ಶಿವಪ್ಪ ಗಡಿಬಿಡಿಯಿಂದ ಬಂದ. ಜಗುಲಿಯ ಮೇಲೆ ಕುಳಿತ ಇವರನ್ನೆಲ್ಲ ನೋಡಿದವ ಗಾಬರಿಯಾದ.


ಸೀತಜ್ಜಿ ನಗುತ್ತಾ,  “ಎಂತ ಹೆದರ್ಬೇಡವೋ. ನಾ ಒಂದು ಮುಖ್ಯ ನಿರ್ಣಯ ಮಾಡ್ತಾ ಇದ್ದೆ ಅಷ್ಟೇ. ನೀನು ಬಾ ಕೂತ್ಕೋ”  ಎಂದು ಕರೆದಳು. 

ಸಂಕೋಚದಿಂದ ಜಗುಲಿಯ ತುದಿಯಲ್ಲಿ  ಕುಳಿತ ಶಿವಪ್ಪ .


“ವಿನಾಯಕ , ಈಗ ನಿನ್ನ ಯಾಕೆ ಕರಸಿದ್ದು ಅಂದ್ರೆ ,  ನೋಡು ನಮ್ಮನೆ ಜಮೀನಲ್ಲಿ ಅರ್ಧದಷ್ಟು ಆಗ ನನ್ ಮಗಳು ಯಮುನಾನ ಆಸ್ಪತ್ರೆ ಔಷಧಿ ಗೆ ಅಂತ ಮಾರಿದ್ದಾಯ್ತು. ಆದ್ರೂ ಪ್ರಯೋಜನ ಏನು ಆಗ್ಲಿಲ್ಲ “. ಸೀತಜ್ಜಿಯ ಮುಖದಲ್ಲಿ ವಿಷಾದ ಕಾಣುತ್ತಿತ್ತು . 


“ಇಷ್ಟು ವರ್ಷದಿಂದ ತೋಟದ್ದೆಲ್ಲ ಈ ರಾಮು ನೋಡ್ಕೋತಾನೆ. ನನ್ನ ಹೊಟ್ಟೆ ಬಟ್ಟೆ ಔಷಧಿ ಅಗತ್ಯದ ವಸ್ತುಗಳು ಎಲ್ಲಾ ಅವನೇ ತಂದು ಕೊಡ್ತಾನೆ.  ಇನ್ನು ಒಂದೆಕರೆ ಗದ್ದೆನ ಈ  ಶಿವಪ್ಪನೇ ಮಾಡ್ಸಿ ,ಕರಾರಿನ ಪ್ರಕಾರ  ಅವನ ಪಾಲಿನದು ಎಷ್ಟೋ ಅಷ್ಟೇ ಇಟ್ಟುಕೊಂಡು ಉಳಿದಿದ್ದೆಲ್ಲ  ಪ್ರಾಮಾಣಿಕವಾಗಿ ಇಲ್ಲಿ ತಂದು ಹಾಕಿ ಹೋಗ್ತಾನೆ . ಇವರಿಬ್ಬರಿಂದಾಗಿ ನಾನು ಇಷ್ಟು ವರ್ಷ ಜಮೀನಿನ ಚಿಂತೆ ಇಲ್ಲದೆ ಆರಾಮಾಗಿದ್ದೀನಿ.  ಈಗ ನಾಳೆ ನಾನು ಸತ್ತೊದ್ರೆ , ಇದೆಲ್ಲ ಅವರವರಿಗೆ  ಅಂತ ಆಗ್ಬೇಕು . ಹಾಗೆ ಈ ಮನೆನೂ . ಇದು ಅಜ್ಜಿಯ ಉಡುಗೊರೆ ಅಂತ ಶ್ರುತಿಗೆ ಕೊಡೋದು ಅಂತ ಮಾಡಿದ್ದೀನಿ.  ಸತ್ತೋದೆ ಅಂತ ಗೊತ್ತಾದ ಮೇಲೆ ನನ್ನನ್ನು ಇಲ್ಲೀ ವರೆಗೆ ಒಂದು ಸಲಾನೂ ನೋಡದೆ ಇರೋ ಯಾರೋ ಒಬ್ರು  ಯಾವುದೊ ಸಂಬಂಧದ ಎಳೆ ಹಿಡಕೊಂಡು ಆಸ್ತಿಗಾಗಿ ಬರಬಹುದು , ಆದ್ರೆ ನಾನು ಇಲ್ಲಿ ಒಬ್ಬಳೇ ಇದ್ರೂನು ಒಂಟಿ ಅಲ್ಲ ಅನ್ನೋ ಭಾವನೆ  ಇರೋದು ಇವರಿಂದ. ಇವರೇ  ನನ್ನ ಕುಟುಂಬ . ಹೀಗಾಗಿ ನನ್ನ ನಂತರ ಇದೆಲ್ಲ  ನ್ಯಾಯವಾಗಿ ಇವರಿಗೆ ಸೇರಲಿ ಅಂತ ನನ್ನಾಸೆ. ನೀನು ವಕೀಲ.  ಅದಕ್ಕೆ ನಿನ್ನೆದುರಿಗೆ ಹೇಳಿಬಿಟ್ರೆ ಸರಿ ಆಗಬಹುದು ಅಂತ ಅನಿಸ್ತು .. … ಸೀತಜ್ಜಿ  ನಿಲ್ಲಿಸಿದಳು . 


ರಾಮು ಸರೋಜಾ ಏನು ಹೇಳಲೂ ತೋಚದೆ ಕುಳಿತಿದ್ದರು. ಸರೋಜಾ ಸುರಿಯುವ ಕಣ್ಣೀರನ್ನು ಒರೆಸುವ ಪ್ರಯತ್ನ ಮಾಡುತ್ತಿದ್ದಳು. 


ಸ್ವಲ್ಪ ಹೊತ್ತಿಗೆ ಮತ್ತೇನೋ ನೆನಪಾದಂತೆ  , ಹಾಂ , ಜಮೀನಿನ ಉತ್ಪನ್ನ ಎಲ್ಲ ಮಾರಿ ಬಂದ ದುಡ್ಡು ಬ್ಯಾಂಕಲ್ಲಿ ರಾಮು ನನ್ನ  ಖಾತೆಯಲ್ಲಿ ಹಾಕ್ತಾ ಬಂದಿದ್ದಾನೆ.. ಎಷ್ಟಿದ್ಯೋ ಸರಿಯಾಗಿ  ಗೊತ್ತಿಲ್ಲ .  ಅದನ್ನ ಊರಿನ ಶಾಲೆಗೇ ದಾನ ಮಾಡ್ತೀನಿ  ಎಂದಳು ಸೀತಜ್ಜಿ 


ದಂಗಾಗಿ ಕುಳಿತಿದ್ದ ವಿನಾಯಕ ಗಂಟಲು ಸರಿ ಮಾಡಿಕೊಂಡ. 


“ಸೀತಜ್ಜಿ , ನಿಜ ಅಂದ್ರೆ ನಂಗೆ ಏನು ಹೇಳೋಕು ತಿಳಿತಾ ಇಲ್ಲ . ನಿನ್ನ ಮನಸ್ಸು ಅರ್ಥ ಆಗತ್ತೆ . ಸಂಕಟ  ತಿಳಿಯತ್ತೆ. ಈ ನಿನ್ನ ಇಚ್ಛೆ ತುಂಬಾ ದೊಡ್ಡ ಮನಸ್ಸಿಂದು .ಆದರೆ ನೀನು ಹೇಳ್ತಿರೋದು ಚಿಕ್ಕ ಪುಟ್ಟ ವಿಷಯ ಅಲ್ಲ.  ಇದೆಲ್ಲ ನಾವೂ ಬರೀ  ಮಾತಲ್ಲಿ ಹೇಳಿದ್ರೆ ಅದರಿಂದ ಏನು ಆಗಲ್ಲ. ನಿಂಗೆ ರಾಮು ನಿನ್ನ ಕುಟುಂಬ ದವನೇ ಅನ್ನೋ ಭಾವನೆ ಇದ್ರೂನು ಕಾನೂನು ಪ್ರಕಾರ ಅವನು ನಿನ್ನ ಉತ್ತರಾಧಿಕಾರಿ ಅಲ್ಲ. 

ಹೀಗಾಗಿ , ನಾವೂ ಏನು ಮಾಡಬೇಕು ಅಂದ್ರೆ , ನೀನು ಈಗ ಹೇಳಿದ್ದೆಲ್ಲ  ಕಡೆ ಪಕ್ಷ  ಒಂದು ಕಾಗದದ ಮೇಲೆ ಬರೆದು  ನಿನ್ನ ಸಹಿ  ಹಾಕ ಬೇಕು ,ಇಲ್ಲವೇ ಹೆಬ್ಬೆಟ್ಟು ಒತ್ತಬೇಕು  . ಅದಕ್ಕೆ ಸಾಕ್ಷಿದಾರರು ಬೇಕು . ಅದನ್ನ ಆಮೇಲೆ ರಿಜಿಸ್ಟರ್ ಮಾಡ್ಬೇಕು . ಆಗ ಮಾತ್ರ ಕಾನೂನು ಪ್ರಕಾರ ಮಾಡೋಕ್ ಬರದು “


ಸೀತಜ್ಜಿ  ಒಂದು ಗಳಿಗೆ ಸುಮ್ಮನೆ ಕುಳಿತಳು . ಆಮೇಲೆ  “ರಾಮು, ಹೋಗು ಕಾಗದ ಪೆನ್ನು ತಗಂಬಾ . ಹಾಗೆ ಶಾಯಿನೂ ತಗಂಬಾ “  ಎಂದು ಕಳಿಸಿದಳು. 


ಅವನು ಬಂದ ಮೇಲೆ  ವಿನಾಯಕನಿಗೆ  ನೀನೇ ಬರೆ  ಎಂದು ಈ ವರೆಗೆ ಹೇಳಿದ್ದನ್ನು ಪುನಃ  ಹೇಳಿ ಬರೆಸಿದಳು . ಎಲ್ಲ ಬರೆದಾದ ಮೇಲೆ  ವಿನಾಯಕ ಅದನ್ನೊಮ್ಮೆ ಓದಿ ಹೇಳಿದ.  ಆ ನಂತರ ಅಜ್ಜಿ  ಅದರ ಮೇಲೆ ಹೆಬ್ಬೆಟ್ಟು ಒತ್ತಿದಳು .


“ವಿನಾಯಕ,  ನೀನೇ ಸಾಕ್ಷಿದಾರ  ಅಂತ  ಸಹಿ ಮಾಡಿಬಿಡು . ಸಾಧ್ಯ ಆದ್ರೆ ನಾಳೆನೇ ರಿಜಿಸ್ಟರ್ ಮಾಡ್ಸು .”


“ಆಗ್ಲಿ ಅಜ್ಜಿ . ಆದಷ್ಟು ಬೇಗ ರಿಜಿಸ್ಟರ್ ಮಾಡ್ಸಿ ಕೊಡ್ತೀನಿ . “

 

“ ವಿನಾಯಕ , ವಕೀಲ್ರೆಲ್ಲ ಜಾಸ್ತಿ ಫೀಸ್  ತಗೋತಾರೆ ಅಂತ ಆಗಿನ್ ಕಾಲದಲ್ಲೇ ನಮ್ಮ ಯಜಮಾನ್ರು ಹೇಳ್ತಾ ಇದ್ರು.ನಿನ್ನ ಫೀಸ್ ಕೊಡೋಕೆ ನನ್ನತ್ರ ಈಗ ದುಡ್ಡಿಲ್ಲ .   ಅದನ್ನ ಆ ಬ್ಯಾಂಕಿಂದ ಬರೋ ದುಡ್ಡಲ್ಲಿ ಮುರಕೊಂಡು ಬಿಡು” ಎಂದು ನಕ್ಕಳು 


 ಅಜ್ಜೀ … ಎಂದ ವಿನಾಯಕನ ದನಿ ಒದ್ದೆ ಆಗಿತ್ತು. 


ಸ್ವಲ್ಪ ಹೊತ್ತು ಅಲ್ಲಿ ಮೌನವೇ ಆವರಿಸಿತ್ತು.ಸರೋಜಾಳ ಸಣ್ಣದಾಗಿ ಬಿಕ್ಕುವ ಸದ್ದು ಬಿಟ್ಟರೆ.ರಾಮುವಿಗೆ ಮನಸ್ಸು ಭಾರವಾಗಿದ್ದು ಕೃತಜ್ಞತೆಗೋ, ನೋವಿಗೋ ತಿಳಿಯಲಾರದಂತಾಗಿತ್ತು.  ಶಿವಪ್ಪ ಇನ್ನೂ ಸುಧಾರಿಸಿಕೊಳ್ತಾ  ಇದ್ದ . 


ಹೂಂ, ಸರಿ. ವಿನಾಯಕ ಇದೊಂದು ಕೆಲಸ ಆದಷ್ಟು ಬೇಗ ಮಾಡ್ಕೊಡು.

ರಾಮು ಸರೋಜಾ, ನಡಿರಿ ಮನೆಗೆ. ನಂಗೂ ಹಸಿವಾಗ್ತಿದೆ.ನಾನೂ ಇನ್ನು  ಊಟಾ ಮಾಡ್ತೀನಿ. ಎಂದು ಅಜ್ಜಿ ಏಳ ತೊಡಗಿದಳು.


ಅತ್ತ ಕೆಳ ಜಗುಲಿಯ ಮೇಲೆ ಕುಳಿತಿದ್ದ ಶಿವಪ್ಪ ಏನೂ ಹೇಳಲೂ ತಿಳಿಯದೆ ಎದ್ದು ಬಂದು ಸೀತಜ್ಜಿಯ ಕಾಲಿಗೆ ಬಿದ್ದ. 

ಅಮ್ಮಾ, ನಾ ಎಂತ ಹೇಳುಕು ಆಗುದಿಲ್ಲ. ನೀವು ದೇವ್ರಂತವ್ರು ಎನ್ನುತ್ತಾ ಕೈಮುಗಿದು ನಿಂತ.


ಜೋರಾಗಿ ನಕ್ಕ ಅಜ್ಜಿ,  ಆ ಮಟ್ಟಕ್ಕೆ ಏರಿಸ್ಬೇಡ ಮಾರಾಯ. ಆ ದೇವ್ರಿಗ್ ನನ್ ಮೇಲೆ ಇನ್ನೂ ಸಿಟ್ಟು ಬಂದ್ರೆ ಕಷ್ಟ.  ಮನಿಗ್ ಹೋಗು ಇನ್ನು.


ಎನ್ನುತ್ತಾ ಎದ್ದು ದೇವರ ಕೋಣೆಯ ಕಡೆ ನಡೆದ ಸೀತಾಜ್ಜಿಯ ಮನದಲ್ಲಿ ಶಾಂತಿ ನೆಲೆಸಿತ್ತು. ಊಟ ಮುಗಿಸಿ  ಮಲಗಿದ ಅಜ್ಜಿಗೆ ಹಾಯಾಗಿ ನಿದ್ರೆ ಆವರಿಸಿತು.