February 28, 2022

ಸಾಕ್ಷಿ

 ಅಲ್ಲಿ ಆಗಿದ್ದನ್ನು ನೋಡಿದವನ ಎದೆ ಧಸಕ್ ಎಂದಿತು ! ಏನು ಮಾಡುವುದೋ ತೋಚದಂತಾಯಿತು .

ಒಂದು ಸಣ್ಣ ದೌರ್ಬಲ್ಯದಿಂದ ಆದ ಅನಾಹುತಕ್ಕೆ  ಹಳ ಹಳಿಸಿದ .   ಗಡಿಯಾರ ನೋಡಿದ .  ಇನ್ನು ಹೆಚ್ಚೆಂದರೆ ಇಪ್ಪತ್ತು ನಿಮಿಷದೊಳಗೆ ಅವಳು ಬರುತ್ತಾಳೆ . ಅಷ್ಟರಲ್ಲಿ , ಇಲ್ಲಿ ನಡೆದುದರ  ಕುರುಹೇ ಇಲ್ಲದಂತೆ ಮಾಡಬೇಕು ! ಅವಳಿಗೆ ಗೊತ್ತಾದರೆ   ಏನಾಗಬಹುದೆಂದು ಯೋಚಿಸಿಯೇ  ಅವನು ಬೆವರುತ್ತಿದ್ದ .

ಊಹ್ಞೂ  ಯೋಚಿಸುತ್ತಾ ನಿಲ್ಲಲು ಸಮಯವಿಲ್ಲ ! ತಕ್ಷಣ ಎಚ್ಚೆತ್ತುಕೊಂಡು ಕಾರ್ಯ ಪ್ರವೃತ್ತನಾದ !  ಎದುರಿಗೆ ಸಾಕ್ಷಿಯಾಗಿದ್ದೆಲ್ಲವನ್ನೂ ಬದಿಗೆ ಒತ್ತಿದ . ಮೊದಲು ಬರೀ ನೀರು ಹಾಕಿ  ಒರೆಸಿದ , ಹೋಗಲಿಲ್ಲ , ನಂತರ ಸೋಪ್ ಹಾಕಿ ಬ್ರಶ್ ನಿಂದ ತಿಕ್ಕಿದ , ಎಲ್ಲೂ ಕಲೆ  ಕಾಣದಂತೆ , ಈ ಘಟನೆಯೇ  ನಡೆದಿಲ್ಲ ಎನ್ನುವಂತೆ ಮಾಡುವುದು ಅಷ್ಟು ಸುಲಭವಿರಲಿಲ್ಲ ! ಮೂರು -ಮೂರು ಸಲ  ಸೋಪ್ ಹಚ್ಚಿ , ಬ್ರಶ್ ನಿಂದ ತಿಕ್ಕಿ , ಆಮೇಲೆ ಬಟ್ಟೆಯಿಂದ ಉಜ್ಜಿ ಉಜ್ಜಿ ಒರೆಸಿದ ಮೇಲೆ  ಅಂತೂ  ಒಂದು ಹಂತಕ್ಕೆ ಬಂತು . ಇನ್ನು ಐದೇ ನಿಮಿಷ ! ಅಷ್ಟರಲ್ಲಿ ಮತ್ತೊಮ್ಮೆ  ಎಲ್ಲವನ್ನೂ ಪರಿಶೀಲಿಸಿದ . ಅವಳಿಗೆ ಖಂಡಿತ   ತಿಳಿಯಲಾರದು ಎಂಬ ವಿಶ್ವಾಸ ಬಂತು. ತನ್ನ ಕೆಲಸಕ್ಕೆ ತಾನೇ ಬೆನ್ನು ತಟ್ಟಿಕೊಂಡ! 

ಬೆಲ್ ಹೊಡೆದು ಕೊಂಡಿತು . ಢವಗುಟ್ಟುತ್ತಿದ್ದ  ಎದೆಯೊಂದಿಗೆ  ಬಾಗಿಲು ತೆಗೆದ.  ಬಂದವಳನ್ನು ನಗುಮುಖದಿಂದ ಸ್ವಾಗತಿಸಿದ. ದೇವರೇ , ಆಗಿದ್ದು ಅವಳಿಗೆ  ತಿಳಿಯದಿರಲಿ ಎಂದು ಪ್ರಾರ್ಥಿಸುತ್ತ ಅಲ್ಲೇ ಓರೆಗಣ್ಣಲ್ಲಿ ತಾನು ಸ್ವಚ್ಛಗೊಳಿಸಿದತ್ತ ನೋಡಿ ಸಮಾಧಾನಗೊಂಡ. 

ಅವಳು ಎಂದಿನಂತೆ ಬ್ಯಾಗ್ ನ್ನು ರೂಮ್ ನಲ್ಲಿ ಟೇಬಲ್ ಮೇಲಿಟ್ಟು , ಕೈ ಕಾಲು ತೊಳೆದು ಅಡುಗೆ ಮನೆಗೆ ಹೋದಳು .

ಅವನೂ ರಿಲ್ಯಾಕ್ಸ್  ಆಗಿ  ಸೋಫಾ ಮೇಲೆ ಕುಳಿತು  ಚಾನಲ್ ಬದಲಾಯಿಸತೊಡಗಿದ!


ಆಗಲೇ ಅವಳು ಜೋರಾಗಿ ಕರೆದಳು !  ಇವನೂ ಓಡಿದ . 

ಅವಳು  ಇವನತ್ತ ಸೀರಿಯಸ್ ಆಗಿ ನೋಡುತ್ತಾ ಕೇಳಿದಳು . "ನೀನು ಕ್ಲೀನ್ ಮಾಡಿದ್ರೆ ನಂಗೇನು ಗೊತ್ತಾಗಲ್ಲ ಅಂದ್ಕೊಂಡ್ಯಾ?  ಎಷ್ಟ್ ಸತಿ ಹೇಳಿದೀನಿ ನಿಂಗೆ  ನಾನು ಬಂದಮೇಲೆ ಎಲ್ಲ ಮಾಡ್ತೀನಿ , ನೀನು ಹಾಲು ಸ್ಟವ್ ಮೇಲಿಟ್ಟು ಕ್ರಿಕೆಟ್  ನೋಡ್ತಾ ಕೂತ್ಕೋಬೇಡ ಅಂತ !!! ".......

ಅವಳು  ಇನ್ನೂ ಏನೇನೋ ಹೇಳ್ತಾ ಇದ್ದಳು . ಇವನ ಕಿವಿಗೆ ಬೀಳಲಿಲ್ಲ !

ಇಷ್ಟು ಕ್ಲೀನ್ ಮಾಡಿದ್ರೂ ಅದು ಅವಳಿಗೆ ಗೊತ್ತಾಗಿದ್ದು ಹೇಗೆ  ಅಂತ  ಅವನು ಯೋಚಿಸ್ತಾ ಇದ್ದ . 

ಅತ್ತ ಇವನೇ ಬದಿಗೆ ಇಟ್ಟಿದ್ದ , ಹಾಲು ಉಕ್ಕಿ ಕರೆಗಟ್ಟಿದ್ದ ಹಾಲಿನ ಪಾತ್ರೆ ಇವನನ್ನು ಅಣಕಿಸುತ್ತಿತ್ತು ! 

ಒಲೆ, ಅಡುಗೆ ಕಟ್ಟೆ  ಎಲ್ಲವನ್ನೂ ಉಜ್ಜಿ ಚೊಕ್ಕಟಗೊಳಿಸಿದವನು ಹಾಲಿನ ಪಾತ್ರೆಯನ್ನು  ಮರೆತೇ ಬಿಟ್ಟಿದ್ದ!! 


December 20, 2021

ಸಂಶಯ

 ಸಂಬಂಧಿಕರೊಬ್ಬರ ಮನೆಯ ಕಾರ್ಯಕ್ರಮದಿಂದ ಬಂದು ಸೀರೆ ಬದಲಿಸುತ್ತಿದ್ದವಳ ಲಕ್ಷ್ಯಕನ್ನಡಿಯಲ್ಲಿ ಕಾಣುತ್ತಿದ್ದ ಪ್ರತಿಬಿಂಬದತ್ತ ಹೋಯಿತು . ಸೂಕ್ಷ್ಮವಾಗಿ ಗಮನಿಸಿದಳು !

ಕಳೆಯಿರದ  ಆಳಕ್ಕಿಳಿದ ಕಣ್ಣಿನ ಸುತ್ತ ಕಪ್ಪು ವರ್ತುಲ. ಕಣ್ಣಂಚಿನಲ್ಲಿ ಸಣ್ಣದಾಗಿ ಮೂಡಿದ ಹತ್ತಾರು ಗೆರೆಗಳು, 
ಹೊಳಪಿರದ ಕೆನ್ನೆ , ಕೊಂಚ ಜಗ್ಗಿದ ಗಲ್ಲ, ಹಣೆಯ ಮೇಲೆ ಕಂಡೂ ಕಾಣದ ಒಂದೆರಡು ನೆರಿಗೆಗಳು, ಮೊದಲು ದಟ್ಟವಾಗಿದ್ದ , ಈಗ  ಉದುರಿ ತೆಳುವಾದ ,ಹಚ್ಚಿದ ಬಣ್ಣ ಮಾಸುತ್ತಿರುವ ಕೂದಲು 
ಚರ್ಮ ಸಡಿಲಾದ ಕತ್ತು , ಬಿಗಿಯಿರದ ಎದೆ , ಹಲವು ಸುತ್ತು ದಪ್ಪವಾದ ಸೊಂಟ  .... ನೋಡುತ್ತಾ ನೋಡುತ್ತಾ ಹೊಟ್ಟೆಯಲ್ಲಿ ಏನೋ ತಳಮಳವಾಯಿತು.  ಕನ್ನಡಿಯಲ್ಲಿ ಕಾಣುತ್ತಿರುವುದು ,ಪಕ್ಕದ ಟೇಬಲ್ ಮೇಲಿದ್ದ  ದಶಕಗಳ ಹಿಂದಿನ ಫೋಟೋದಲ್ಲಿದ್ದ  ತನ್ನ ನೆರಳು ಎಂದು ಅವಳಿಗೆ ಭಾಸವಾಯಿತು . ಜೊತೆಗೆ , ಸಂಕಟ ಹೆಚ್ಚಿತು. 

ಟೇಬಲ್ ಮೇಲಿನ ಫೋಟೋವನ್ನು ಕೈಗೆತ್ತಿಕೊಂಡು ನೋಡಿದಳು . ಮದುವೆಯ 10ನೇ ವಾರ್ಷಿಕೋತ್ಸವದಲ್ಲಿ ತೆಗೆದ ಫೋಟೋ . ಅದರಲ್ಲಿ ತಾನೆಷ್ಟು ಬೇರೆಯೇ ಕಾಣುತ್ತಿದ್ದೆ ಎಂದುಕೊಂಡಳು . ಮುಖದಲ್ಲಿ ಸಂತೋಷದ ಕಳೆಯಿತ್ತು .  ಆ ಫೋಟೋ ನೋಡಿ ಎಷ್ಟೊಂದು ಜನ  ಎಷ್ಟು ಮುದ್ದಾಗಿ ಕಾಂತೀಯ ಒಂದು ದೃಷ್ಟಿ ತೆಗೆಸಿಕೊ ಎಂದೆಲ್ಲ ಹೇಳಿದ್ದು ನೆನಪಾಯಿತು.  ಹಾಗೆ ಕಣ್ಣು ಗೋಡೆಯ ಮೇಲೆ ಹಾಕಿದ್ದ ಮತ್ತೊಂದು ಫೋಟೋದತ್ತ ಹೋಯಿತು.  ಮಕ್ಕಳಿಬ್ಬರ ಜೊತೆ ತೆಗೆಸಿದ್ದು !  ಅದನ್ನು ನೋಡಿದವರೆಲ್ಲ  " ಇದನ್ನ ನೋಡಿದ್ರೆ, ನೀನು ಅಮ್ಮ ಅಲ್ಲ ,ಅವರಿಬ್ಬರ ಅಕ್ಕನ ತರಾ ಕಾಣ್ತೀಯಾ  "  ಎಂದು ಹೇಳುವಾಗ ಎಷ್ಟು ಹೆಮ್ಮೆ ಆಗಿತ್ತು ! ಅದೆಲ್ಲ ನೆನಪಾದಾಗ ಅವಳ ಮುಖದಲ್ಲಿ ವಿಷಾದ ದಟ್ಟವಾಗುತ್ತಿತ್ತು . 
ಮತ್ತೆ ಮತ್ತೆ ಫೋಟೋಗಳನ್ನೂ ಕನ್ನಡಿಯನ್ನೂ ನೋಡುತ್ತಿದ್ದವಳಿಗೆ  ತಾನು ನಿಜಕ್ಕೂ  ಕೆಟ್ಟದಾಗಿ ಕಾಣುತ್ತಿದ್ದೇನಾ  ಎನಿಸಿ  ಅಳುವೇ ಬಂದಂತಾಯಿತು.. 
ಕೊನೆಗೊಮ್ಮೆ ಎಚ್ಚರವಾಗಿ  ಧಡಬಡಿಸಿಕೊಂಡು ಸೀರೆ ಬದಲಿಸಿ ಹೊರಗೆ  ಹೆಜ್ಜೆ  ಹಾಕಿದಳು .
  
ಆ ದಿನವಿಡೀ ಮನಸಿಗೆ ಕಸಿವಿಸಿ , ಸಂಶಯ . ನೆಮ್ಮದಿಯೇ ಇಲ್ಲ . ಗಂಡನಿಗೂ  ಹೀಗೆ ಅನಿಸಿರಬಹುದೇ? ನಿನ್ನ ನೋಡಿದ ತಕ್ಷಣ ನಾನು ಕ್ಲೀನ್ ಬೋಲ್ಡ್ ಆಗಿದ್ದೆ ಕಣೆ  ಎಂದು ಗಂಡ ಹೇಳ್ತಾ ಇದ್ದಿದ್ದು ನೆನಪಾಯ್ತು. ಈಗ? ತನ್ನ ಮೇಲಿನ ಆಸಕ್ತಿ ಕಮ್ಮಿ ಆಗಿರಬಹುದೇ? ಹಾಗೇನಾದರೂ ಆಗಿ  ಬೇರೆ ಯಾರಾದರೂ ಚಂದ ಕಂಡು.... ... 
ತಕ್ಷಣ , ಇಂಥಾ ಆಲೋಚನೆ ಮಾಡಿದ್ದರ ಬಗ್ಗೆ  ತನಗೆ ತಾನೇ ಬೈದುಕೊಂಡಳು. ಆದರೂ ಸಮಾಧಾನವಿಲ್ಲ.
 
 ಬೆಳಿಗ್ಗೆ  ತಿಂಡಿ ತಿನ್ನುತ್ತಾ  ಹಿಂದಿನ ದಿನದ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಿದ್ದಾಗ ಗಂಡ ಇದ್ದಕ್ಕಿದ್ದ ಹಾಗೆ  "  ಎಷ್ಟು ವರ್ಷ ಆದ್ಮೇಲೆ ಸತೀಶ ಸಿಕ್ಕಿದ ನಿನ್ನೆ ! ಅವನ  ಹೆಂಡತಿ ರಶ್ಮಿ ಚೂರೂ ಬದಲಾಗಿಲ್ಲ ನೋಡು! ಹತ್ತು ವರ್ಷದ ಹಿಂದೆ ಹೇಗಿದ್ಲೋ ಹಾಗೆ ಇದಾಳೆ" ಎಂದಾಗ  ಕಸಿವಿಸಿ ಹೆಚ್ಚೇ ಆಯಿತು.

ಅಂದು ರಾತ್ರಿ ಮಲಗುವ ಮುನ್ನ ಸ್ವಲ್ಪ ಹೆಚ್ಚೇ ಹೊತ್ತು  ಕನ್ನಡಿ ನೋಡಿದಳು .
ನಂತರದ  3-4 ದಿನಗಳು ಹೀಗೆ  ಕಳೆದವು. 
 ಗಂಡನ ಪ್ರತಿ ಮಾತು  ನಡವಳಿಕೆಯಲ್ಲೂ ತನ್ನ ಬಗ್ಗೆ ನಿರಾಸಕ್ತಿ ಕಾಣಿಸುತ್ತಿದೆ ಎಂದೆನಿಸ ತೊಡಗಿತು. 
ಕೇಳಿಬಿಡಲೇ? ಅಂದುಕೊಂಡಳು. ಅದರ ಹಿಂದೆಯೇ , ಛೆ, ಯಾವ ರೀತಿ ಯೋಚನೆ ಮಾಡುತ್ತಿದ್ದೇನೆ  ಎಂದು ನಾಚಿಕೆಯೂ ಆಗಿ ಸುಮ್ಮನಿದ್ದಳು . 

ಕೊನೆಗೆ ಅಂತೂ ಧೈರ್ಯ ಮಾಡಿಕೊಂಡು ಒಂದು ರಾತ್ರಿ ಗಂಡನೆದುರು ವಿಷಯ ಪ್ರಸ್ತಾಪಿಸಿದಳು. 
" ರೀ, ಒಂದು ವಿಷಯ ಕೇಳಬೇಕಿತ್ತು "  

" ಅದಕ್ಕೇನು ಪೀಠಿಕೆ? ಕೇಳು " ಮೊಬೈಲಿಂದ ಕಣ್ಣು ಸರಿಸದೆ ಕೇಳಿದ.

" ನಾನು ಇತ್ತೀಚೆ ತುಂಬಾ ಕೆಟ್ಟದಾಗಿ ಕಾಣ್ತಿದೀನ ?" 

ಅವನು ಆಶ್ಚರ್ಯದಿಂದ ಮೊಬೈಲ್  ಬದಿಗಿಟ್ಟು ಅವಳ ಮುಖ ನೋಡಿದ. 
"ಏನು ಹಾಗಂದ್ರೆ? "

"ಅಂದ್ರೇ,..... ತುಂಬಾ ವಯಸ್ಸಾದ ಹಾಗೆ ಕಾಣತಾ ಇದೀನ? "

" ಯಾಕೆ? ಏನಾಯ್ತು  ಇದ್ದಕ್ಕಿದ್ದ ಹಾಗೆ? " ಅವನು ಅನುಮಾನದಿಂದ ಕೇಳಿದ 

 "ಏನೂ ಇಲ್ಲ. ಯಾಕೋ  ಕನ್ನಡಿ ನೋಡೋವಾಗ ಹಾಗೆ ಅನಿಸ್ತು ."

" ಎಷ್ಟು ಸಲ ಹೇಳಿದೀನಿ ಕನ್ನಡಕ ಹಾಕೊಂಡಿರು ಅಂತ . ಕೇಳಲ್ಲ ನೀನು."  ತಮಾಷೆ ಮಾಡುತ್ತಾ ನಕ್ಕು ಬಿಟ್ಟ .

" ರೀ, ನಾನು ಸೀರಿಯಸ್ ಆಗಿ ಕೇಳ್ತಾ ಇದೀನಿ " ಅವಳ  ಅಳುದನಿ .  

" ಹ್ಮ್ಮ್ . ನಂಗೇನು ಹಾಗೆ ಅನಿಸಲ್ವೇ ? ನೀನು ಸದಾ ಸುಂದರಿ ನನ್ನ ಕಣ್ಣಿಗೆ . " ಪ್ರೀತಿಯಿಂದ ಕೆನ್ನೆ ತಟ್ಟಿದ .
  ಆದರೆ ನಿಂಗ್ಯಾಕೆ ಹಾಗೆ ಅನಿಸ್ತಾ ಇದೆ ?

" ಏನೋ , ಹಳೆ ಫೋಟೋ ಕ್ಕೂ ಕನ್ನಡಿಲಿ ಕಾಣೋ ರೂಪಕ್ಕೂ ತುಂಬಾ ವ್ಯತ್ಯಾಸ ಇದೆ ಅನಿಸ್ತು ."....   

ಆಶ್ಚರ್ಯದಿಂದ ಕೆಲ   ಸೆಕೆಂಡ್ ಅವಳ ಮುಖ ದಿಟ್ಟಿಸಿದವನು ನಕ್ಕು ಬಿಟ್ಟ.

" ಹಹಹ..ಒಳ್ಳೆ ಕಥೆ ಕಣೆ ನಿಂದು !  ವಯಸ್ಸಾದ ಹಾಗೆ ಬದಲಾಗಲ್ವೇನೇ?
 ಈಗ ನೋಡು ಈ ಫೋಟೋದಲ್ಲಿ ನಾನು ಹೇಗಿದ್ದೆ ! ತಲೆ ತುಂಬಾ ಕಪ್ಪು ಕೂದಲು ಒಳ್ಳೆ ಹದವಾದ ಮೈಕಟ್ಟು .. ಈಗ ನೋಡು , ತಲೆ ಬೋಳು , ಇರೋ ಕೂದಲೂ ಬಿಳಿಯಾಗಿದೆ , ಹೊಟ್ಟೆ  ಬಂದಿದೆ .. "

ಅವನನ್ನೊಮ್ಮೆ ನೋಡಿದವಳಿಗೆ .. ಹೌದಲ್ಲ, ತಾನು ಫೋಟೋದಲ್ಲಿ  ಇದನ್ನು ಗಮನಿಸಿಯೇ ಇಲ್ಲ  ಅನಿಸಿತು .

"ಅದು ಸರಿ , ಆದರೂ ತಲೇಲಿ ಒಂಥರಾ ಯೋಚನೆಗಳು ... " ದ್ವನಿ ಮೆತ್ತಗಾಯಿತು 

"ಏನು ಯೋಚನೆ ಅಮ್ಮಾವ್ರಿಗೆ  ?"

" ಅದೂ .. ಮತ್ತೆ .. ನೀವು ತಪ್ಪು ತಿಳೀಬಾರದು ."  ಅನುಮಾನಿಸಿದಳು .

"25 ವರ್ಷ ಆಯ್ತು ಮದ್ವೆ ಆಗಿ , ಇನ್ನೂ ಹೀಗೆ ಮಾಡ್ತಿಯಲ್ಲೇ? "

" ಅಲ್ಲಾ.. ನಾನು  ನೋಡೋಕೆ ಚೆನ್ನಾಗಿದ್ದೆ  ಅಂತ ನೀವು ಮೊದಲನೇ ಸಲ ನೋಡಿದಾಗಲೇ ಮೆಚ್ಚಿಕೊಂಡಿದ್ದು ಅಂದಿದ್ರಿ ಅಲ್ವ? " 

" ಹ್ಮ್ಮ್... ಹೌದು ಅದು ನಿಜ. "

 " ಮತ್ತೇ.. ಈಗ  ಮುಂಚಿನ ತರಾ ಇಲ್ಲ ಅಂತ ಅನಿಸಿ  ನೀವೇನಾದ್ರೂ ಬೇರೆ ...  "   ಅಲ್ಲಿಗೆ ನಿಲ್ಲಿಸಿದಳು .

ಎರಡು ಕ್ಷಣ ಅವಳನ್ನು ದಿಟ್ಟಿಸಿದವನು ಅವಳು ಹೇಳಿದ್ದು ಅರ್ಥವಾಗುತ್ತಲೇ  ನಕ್ಕು ಬಿಟ್ಟ 
"ನಾನೇನಾದ್ರೂ  ಬೇರೆ ಏನು?  ಗರ್ಲ್ ಫ್ರೆಂಡ್  ಮಾಡ್ಕೊಂಡಿದೀನಿ ಅಂತಾನ?"   ಜೋರಾಗಿ ನಕ್ಕವನು , ಅವಳ ಅಳುಮೋರೆ ನೋಡಿ ಬಳಿ ಸೆಳೆದುಕೊಂಡ.  ಅವಳನ್ನು ಬಳಸುತ್ತಾ ಹೇಳಿದ 
"  ಒಬ್ಬರನ್ನೇ ಸುಧಾರಿಸೋದು ಕಷ್ಟ ನಂಗೆ ..  ಇನ್ನು ಗರ್ಲ್ ಫ್ರೆಂಡ್  ಮ್ಯಾನೇಜ್ ಮಾಡೋಕಾಗಲ್ಲ ಅಮ್ಮಾವ್ರೇ.  ಅಷ್ಟಕ್ಕೂ ಈ ಮುದುಕನ ಹಿಂದೆ ಯಾರೇ ಬರ್ತಾರೆ? ಇಂಥಾದ್ದೆಲ್ಲಾ ಯೋಚನೆ ಬರತ್ತಲ್ಲ ನಿಂಗೆ?  ಕರ್ಮಾ ! "

ಅವಳು ತನ್ನ ಯೋಚನೆಯ ಬಗ್ಗೆ ತಾನೇ ನಾಚಿಕೊಂಡಳು .
" ಸಾರಿ ರೀ . ಅದೂ, ಯಾಕೋ ಹಾಗನಿಸ್ತು ನಂಗೆ. ಕೇಳಿಬಿಟ್ಟೆ. ನಿಜಕ್ಕೂ ಸಾರಿ " 

" ಅಲ್ಲ ಕಣೆ , ನಾನು ಹೀಗೆ ಕೇಳಬಹುದಾ? ಈ ಮುದುಕ ಗಂಡ ಬೇಜಾರಾಯ್ತು ಹೊಸಾ ಹುಡುಗನ್ನ ಹುಡುಕೋಣ ಅಂತ ನೀನು ಪ್ಲಾನ್  ಹಾಕಿದೀಯಾ  ಅಂತ ?"
 
" ಸುಮ್ನಿರಿ ಸಾಕು"   ಎಂದು ಅವನ ತೋಳಿಗೆ ಗುದ್ದಿ ಗಟ್ಟಿಯಾಗಿ ಅಪ್ಪಿಕೊಂಡಳು 

October 2, 2021

ಅಭಿಮಾನಿ !

 

ಕೈಲಿದ್ದ ಪತ್ರವನ್ನು ಮತ್ತೊಮ್ಮೆ ಓದುತ್ತಿದ್ದೆ !  ಮುಜುಗರವೋ, ಸಂತೋಷವೋ ತಿಳಿಯದ ಪರಿಸ್ಥಿತಿ .

 

" ನಾನು ನಿಮ್ಮ ಅಭಿಮಾನಿ . ತುಂಬಾ  ಜನ ಹೇಳ್ತಿರಬಹುದು. ಹಾಗೆಯೇ ಇವನೂ ಕೂಡ ಅಂದ್ಕೊ ಬೇಡಿ . 

 4 ವರ್ಷಗಳ ಹಿಂದೆ ಮೊದಲ ಬಾರಿಗೆ  ನಿಮ್ಮ ಕಥೆ ಓದಿದಾಗಿಂದ ನಿಮ್ಮ ಕಥಾ ಶೈಲಿ ತುಂಬಾ ಇಷ್ಟವಾಗಿ ಹೋಯ್ತು . ಮನುಷ್ಯ ಸಂಬಂಧಗಳು, ಭಾವನೆಗಳು , ತುಮುಲಗಳನ್ನು  ಚಂದವಾಗಿ  ಶಬ್ದಗಳಲ್ಲಿ ಬಿಚ್ಚಿಡುತ್ತೀರಿ ನೀವು . ಇಲ್ಲಿಯವರೆಗೆ ಪ್ರಕಟವಾಗಿರುವ  ನಿಮ್ಮ ಕಥೆಗಳು  ಎಲ್ಲವನ್ನೂ ಓದಿದ್ದೇನೆ . ನಮ್ಮ ಏರಿಯಾದಲ್ಲಿರುವ ಲೈಬ್ರರಿಯ ಹಳೆಯ ಸದಸ್ಯ ನಾನು.  ಅಲ್ಲಿ ಬರುವ ಎಲ್ಲ ಪತ್ರಿಕೆಗಳನ್ನು ತಪ್ಪದೆ ಓದುತ್ತೇನೆ. ಯಾವುದರಲ್ಲಾದರೂ ನಿಮ್ಮ ಕಥೆ  ಬಂದಿದ್ದರೆ , ಆ ಪತ್ರಿಕೆಯನ್ನು ಕೊಂಡು ಕೊಳ್ಳುವೆ . ಇಲ್ಲಿಯವರೆಗೆ ಓದಿದ ಎಲ್ಲ ಕಥೆಗಳ  ಪುಟಗಳನ್ನೂ ತೆಗೆದು ಫೈಲ್  ಮಾಡಿ ಇಟ್ಟಿದ್ದೇನೆ . ಮತ್ತೆ ಮತ್ತೆ ಓದುತ್ತೇನೆ  . 

ನಿಮ್ಮ ಬಗೆಗಿನ ನನ್ನ  ಅಭಿಮಾನ ಅತಿಯಾಗುತ್ತಾ, ಒಳಗೊಳಗೇ  ನಿಮ್ಮನ್ನು ಪ್ರೀತಿಸುತ್ತಿದ್ದೇನಾ ಎಂಬ ಸಂಶಯ ನನಗೆ ಇತ್ತೀಚೆ ಬರುತ್ತಿದೆ . 

ಇಲ್ಲಿಯವರೆಗೆ ನಿಮ್ಮ ಭಾವಚಿತ್ರ ವನ್ನು ಎಲ್ಲೂ ನೋಡಿಲ್ಲ  ಆದರೆ ನೀವು ಹೇಗಿರಬಹುದು  ಎಂದು ಕಲ್ಪನೆ ನನ್ನ ತಲೆಯಲ್ಲಿದೆ . ನಿಮ್ಮದು  ಸುಮಾರು 25-32 ರ ಒಳಗಿನ ವಯಸ್ಸು ಎಂದು ನನ್ನ ಅನುಮಾನ .  ನಿಮ್ಮ ಕಥಾ ನಾಯಕಿಯರಲ್ಲಿ ನಿಮ್ಮ ರೂಪವನ್ನು ಕಲ್ಪಿಸಿಕೊಳ್ಳುತ್ತೇನೆ  

‘ಮುಗುಳ್ನಗು’ ವಿನ  ಸ್ಮಿತಾಳಂತೆ   ಕೆನ್ನೆ ಮೇಲೆ ಗುಳಿ ,  " ಜೊತೆಯಾಗಿ"  ಕಥೆಯ  ರಾಧಾಳಂತೆ ಉದ್ದ ಜಡೆ , 'ಕರೆವುದು  ದೂರ ತೀರ ' ದ ಸುನೀತಾಳಂತೆ ಬಟ್ಟಲುಗಣ್ಣು  ..  

ಇವನೆಂತಾ ತಿಕ್ಕಲು ಎಂದು ಕೋಪಿಸಿಕೊಳ್ಳಬೇಡಿ .  ಇಷ್ಟು ವರ್ಷಗಳ ನಂತರ ಇಂದು ಧೈರ್ಯ ಮಾಡಿ ನನ್ನ ಮನಸ್ಸನ್ನು  ನಿಮ್ಮೆದುರು ತೆರೆದಿಡುವ ಪ್ರಯತ್ನ  ಮಾಡುತ್ತಿದ್ದೇನೆ. 

ನಿಮ್ಮನ್ನು ಒಂದೇ ಒಂದು ಸಲವಾದರೂ ಭೇಟಿಯಾಗ ಬೇಕೆನಿಸುತ್ತಿದೆ. ದಯವಿಟ್ಟು ಇಲ್ಲವೆನ್ನ ಬೇಡಿ.  ನನ್ನ ಕೋರಿಕೆಯನ್ನು ತಪ್ಪು ತಿಳಿಯದೆ ನನಗೆ ನಿಮ್ಮನ್ನು  ಎದುರಿಗೆ ನೋಡುವ ಅದೃಷ್ಟ ಕಲ್ಪಿಸಿಕೊಡಿ . 

ನಿಮ್ಮ ಅಭಿಮಾನಿ ಆಕಾಶ್ "

ಅವನು ನನ್ನ ವಯಸ್ಸನ್ನೂ ಸುಮಾರು ಸರಿಯಾಗೇ ಅಂದಾಜಿಸಿದ ಬಗ್ಗೆ ಆಶ್ಚರ್ಯವಾಯ್ತು . 

ಬಹುದಿನಗಳ ಕಾಲ ಅಳೆದೂ ಸುರಿದೂ ಕೊನೆಗೊಮ್ಮೆ ಗಟ್ಟಿ ಮನಸ್ಸು ಮಾಡಿ ಈ ಅಭಿಮಾನಿ ಯಾರು ಎಂದು ನೋಡಿಯೇ ಬಿಡೋಣ ಎಂದು  ನಿರ್ಧರಿಸಿದ್ದಾಗಿತ್ತು. ಸೂಚಿಸಿ ಮೇಲ್  ಕಳಿಸಿದ ನಂತರ ಐವತ್ತು ಸಲವಾದರೂ ಥ್ಯಾಂಕ್ಸ್  ಹೇಳಿದ್ದ ಈ ಅಭಿಮಾನಿ !  ನಿರ್ಧರಿಸಿದಂತೆ  ಇಂದು ಸಂಜೆ  6 ಕ್ಕೆ  ಕಾಫೀ ಹೌಸ್ ನಲ್ಲಿ  ಭೇಟಿಯಾಗುವುದಿತ್ತು. 


ರೆಡಿಯಾಗಿ  ಮನೆಯಿಂದ ಹೊರಟೆ . ನನ್ನನ್ನು ನೋಡಿ ಆತ ಹೇಗೆ ಪ್ರತಿಕ್ರಿಯಿಸಬಹುದು ಎಂಬ ಕುತೂಹಲವೂ ಇತ್ತು . 


6 ಗಂಟೆ  10 ನಿಮಿಷಕ್ಕೆ ಗಾಡಿ ಪಾರ್ಕ್ ಮಾಡಿ  ಒಳ ಹೊಕ್ಕೆ . ಮುಂಚೆ ನಿರ್ಧರಿಸಿದಂತೆ ಬಾಗಿಲ ಎಡಭಾಗದಲ್ಲಿ  ಮೂಲೆಯಲ್ಲಿದ್ದ  ಟೇಬಲ್ ಎದುರು ಅವನು ಕುಳಿತಿದ್ದ. ಟಿಪ್ ಟಾಪ್ ಆಗಿ ಡ್ರೆಸ್ ಮಾಡಿಕೊಂಡು . 

ಅವನದೂ  ಸುಮಾರು 30 ರ  ಆಚೀಚಿನ ವಯಸ್ಸು . ನೋಡಲು  ಚೆನ್ನಾಗೇ ಇದ್ದ . ಟೇಬಲ್ ಮೇಲೆ ಗುಲಾಬಿ ಗುಚ್ಛವಿತ್ತು . ಸ್ವಲ್ಪ ನರ್ವಸ್ ಆದಂತೆ  ಕಾಣುತ್ತಿದ್ದ .


ಮೊಬೈಲ್ ನೋಡುತ್ತಾ ಕುಳಿತಿದ್ದವನ ಎದುರು ನಿಂತೆ . ಮುಗುಳ್ನಗುತ್ತ  "ಹಲೋ ಇಲ್ಲಿ ಕೂತ್ಕೋ ಬಹುದಾ"   ಎಂದೆ . 

ಸ್ವಲ್ಪ ಗಲಿಬಿಲಿಗೊಂಡ ಆತ , ಸಾರಿ, ನಾನು ಒಬ್ರನ್ನ ಕಾಯ್ತಾ ಇದೀನಿ ... ನೀವು ಬೇರೆ ಟೇಬಲ್  ನೋಡ್ಕೋತೀರಾ ಪ್ಲೀಸ್? 


ನಕ್ಕು ಬಿಟ್ಟೆ ! ಮಿ . ಆಕಾಶ್,  ನೀವು ಕಾಯ್ತಾ ಇರೋ ವ್ಯಕ್ತಿ ನಾನೇ .  "


ಆತ ಸ್ವಲ್ಪ ಗಲಿಬಿಲಿಗೊಂಡ . "  ನಾನು .ಅದು.. .. ಕೀರ್ತಿ ... "  ತಡವರಿಸಿದ .


" ಹಾಂ ನಾನೇ  ನೀವು ಅಷ್ಟು ಅಭಿಮಾನ  ಇಟ್ಟಿರೋ  'ಕೀರ್ತಿ ' , ಕೀರ್ತಿ ಕುಮಾರ್ !!  ನಾನು ಕೈ ಚಾಚಿದೆ   ಅವನ  ಮುಖದಲ್ಲಿದ್ದ  ಗೊಂದಲ, ಅಪನಂಬಿಕೆ , ನಿರಾಶೆ  ನನಗೆ ಅರ್ಥವಾಗುತ್ತಿತ್ತು ! 


September 28, 2021

ನಿರ್ಧಾರ !

 ಕೇಳಬಾರದ ಪ್ರಶ್ನೆಯೇನೂ ಆಗಿರಲಿಲ್ಲ ಅದು .ಅದರ ಬಗ್ಗೆ ಇಷ್ಟು ಕೋಪಿಸಿಕೊಂಡು ತಿಂಗಳಾದರೂ ಮಾತಾಡದೆ ಇರುವಂಥಾದ್ದಾಗಿರಲಿಲ್ಲ ! ಯಾವುದೇ ಹೆತ್ತವರಿಗಿರುವ ಕಾಳಜಿಯಿಂದಲೇ ಅಪ್ಪಯ್ಯ ಕೇಳಿದ ಪ್ರಶ್ನೆ .

ಇಷ್ಟಕ್ಕೂ ಅಪ್ಪಯ್ಯ ಕೇಳಿದ್ದಾದರೂ ಏನು ? ನಿನಗೆ ಸಂಬಳ ಎಷ್ಟು ಬರುತ್ತೆ ? ನಿನ್ನ ಸಂಸಾರವನ್ನೂ , ನಿನ್ನ ಅಪ್ಪ ಅಮ್ಮಂದಿರನ್ನೂ ನೋಡಿಕೊಳ್ಳಲು ತೊಂದರೆ ಇಲ್ಲ ತಾನೇ ಎಂದಷ್ಟೇ .
ಹಳ್ಳಿಯಲ್ಲೇ ಜೀವನವೆಲ್ಲ ಕಳೆದ ಅಪ್ಪಯ್ಯ ಅಷ್ಟಾಗಿ ನಯ ನಾಜೂಕಿನ ಮಾತಾಡುವವನಲ್ಲ. ಅವನು ಕೇಳಿದ್ದರಲ್ಲಿ ಸಹಜವಾದ ಕಾಳಜಿ ಇತ್ತೇ ಹೊರತು ವ್ಯಂಗ್ಯವಿರಲಿಲ್ಲ .
ಪ್ರಶ್ನೆ ಕೇಳಿದ ತಕ್ಷಣ ತನ್ನ ಮುಖವನ್ನೂ ತೀಕ್ಷ್ಣವಾಗಿ ನೋಡಿದಾಗಲೇ ಗೊತ್ತಾಗಿತ್ತು . ಇದೇಕೋ ಸರಿ ಹೋಗಿಲ್ಲ ಎಂದು. ಪುಣ್ಯಕ್ಕೆ ಅಪ್ಪಯ್ಯನ ಮುಖಕ್ಕೆ ಹೊಡೆದಂತೆ ಏನೋ ಒಂದು ಹೇಳದೆ "ಅದಕ್ಕೆಲ್ಲ ತೊಂದರೆ ಇಲ್ಲ " ಎಂದಷ್ಟೇ ಹೇಳಿದ್ದ.
ಆದರೆ , ತಾನು ಗೇಟ್ ವರೆಗೆ ಕಳಿಸಿಕೊಡಲು ಹೋದಾಗ ಮುಖ ದಪ್ಪವಾಗಿದ್ದು ಕಂಡಿತ್ತು .
ಮರು ದಿನ ಫೋನ್ ಮಾಡಿದರೆ ಸರಿಯಾಗಿ ಮಾತಾಡಿರಲೂ ಇಲ್ಲ . ನಿನ್ನ ಅಪ್ಪನಿಗೆ ಹೇಗೆ ಮಾತಾಡ ಬೇಕು ಅನ್ನೋ ನಯ ನಾಜೂಕಿಲ್ಲ ಎಂದು ಬಿಟ್ಟಿದ್ದ . ತಾನು ಆ ಬಗ್ಗೆ ಏನು ಹೇಳಬೇಕು ಎಂದು ಯೋಚಿಸುತ್ತಿರುವಾಗಲೇ ಫೋನ್ ಕಟ್ ಆಗಿತ್ತು ಆಮೇಲೆ ಅದೆಷ್ಟೋ ದಿನಗಳ ವರೆಗೂ ಅವನಾಗಿ ಫೋನ್ ಮಾಡಲೆ ಇಲ್ಲ ತಾನೇ ಮಾಡಿದರೂ ಚುಟುಕಾದ ಉತ್ತರ ಅಷ್ಟೇ ! ಮನಸಿಗೆ ಏನೋ ಕಸಿವಿಸಿ !
ಅಪ್ಪನ ತಪ್ಪೇನಿತ್ತು ? ಹಾಗೆ ನೋಡಿದರೆ ತನ್ನದು ಸಂಪ್ರದಾಯಸ್ಥ ಮನೆತನ , ಊರಿನ ಗೌರವಾನ್ವಿತ ಕುಟುಂಬ ! ಹಾಗಿದ್ದರೂ ಕೂಡ , ಮಗಳು ತಾನು ಇವನನ್ನು ಮದುವೆ ಆಗುತ್ತೇನೆ ಎಂದು ಪರಿಚಯಿಸಿದ ಹುಡುಗನ ಜಾತಿ, ಕುಲ ಗೋತ್ರ ಯಾವುದನ್ನೂ ಅಪ್ಪ ಕೇಳಲಿಲ್ಲ ! ಅವನಿಗೆ ಮಗಳ ಮುಖದ ನಗುವಿಗಿಂತ ಹೆಚ್ಚಿನದು ಬೇರೆ ಯಾವುದೂ ಆಗಲಿಲ್ಲ ಮದುವೆ ಆದಮೇಲೆ ಮಗಳು ಸುಖವಾಗಿರಬಲ್ಲಳೆ ? ಯಾವುದೇ ಬಗೆಯ ಕೊರತೆ ಆಗಲಿಕ್ಕಿಲ್ಲವಷ್ಟೇ ಎಂಬ ಯೋಚನೆ ಅಷ್ಟೇ ಅವನದು ! ಅದು ತಪ್ಪಲ್ಲವಲ್ಲ ?
ಬಳಿಕ ಅದೆಷ್ಟೋ ದಿನ ಅವನು ಮಾತನಾಡ್ಲೆ ಇಲ್ಲ .
ಮನಸ್ಸು ತಡೆಯದೆ ಇವಳೆ ಫೋನ್ಮಾ ಡ್ದಾಗ ಜಾಬ್ ಚೇಂಜ್ ಮಾಡೊ ಗಡಿಬಿಡಿಲಿ ಇದೀನಿ ಆಮೆಲೆ ತಾನೆ ಮಾಡ್ತೀನಿ ಅಂತ ಇಟ್ಟು ಬಿಟ್ಟ .
ಅದಾಗಿ ಎರಡು ವಾರಗಳಾದ ಮೇಲೆ ಅವನ ಫೋನ್ . ಖುಶಿಯಲ್ಲಿದ್ದ . ದೊಡ್ಡ ಕಂಪನಿ , ದೊಡ್ಡ ಸಂಬಳ! ವಿದೇಶಕ್ಕೆ ಹೋಗೊ ಚಾನ್ಸ್ ಅಂತೆಲ್ಲ ಖುಶಿಯಿಂದ ಹೇಳಿಕೊಂಡ . ಕೊನೆಯಲ್ಲಿ ಅವಳ ಸಂತೋಷದ ಬಲೂನಿಗೆ ಪಿನ್ ಚುಚ್ಚುವಂತೆ ಈಗ ಇದನ್ನೆಲ್ಲ ನಿಮ್ಮಪ್ಪಂಗೆ ಹೇಳಿ ನಂಗೆ ನಿನ್ನ ಸಾಕೊ ಕೆಪ್ಯಾಸಿಟಿ ಇದೆ ನಂಗೆ ಅಂತ ಕನ್ಫ಼ರ್ಮ್ ಮಾಡಬಹುದು ನೋಡು ! ಅಂದಾಗ ಒಮ್ಮೆ ಕೆನ್ನೆಗೆ ಬೀಸಿ ಹೊಡೆದಂತಾಯ್ತು.
ಹಾಗೆ ಹೇಳೋ ಅಗತ್ಯ ಇತ್ತಾ? ಆ ಕ್ಷಣಕ್ಕೆ ಬಂದ ಕೋಪವನ್ನು ಹೇಗೋ ತಡೆದುಕೊಂಡಳು.
ಅಮ್ಮ ಹೇಳುತ್ತಿದ್ದಳು . ಮಾತಿನಿಂದ ನಮಗೆ ತುಂಬಾ ಪ್ರಿಯವಾದ ಸಂಬಂಧ ಕೆಡಿಸಿಕೊಳ್ಳೋಕಿಂತ , ಕಷ್ಟ ಆದ್ರೂ ಕೆಲವೊಮ್ಮೆ ಸುಮ್ಮನಿದ್ದು ಅದನ್ನ ಉಳಿಸಿಕೊಳ್ಳೋದ್ರಲ್ಲಿ ಅರ್ಥ ಇದೆ ಕಣೆ ಅಂತ . ಅದನ್ನು ನೆನಪಿಸಿಕೊಂಡು ಸುಮ್ಮನಾಗಿ ಬಿಟ್ಟಳು .
ಒಂದು ದಿನ ಗೆಳೆಯರೊಂದಿಗೆ ಪಾರ್ಟಿ ಕೂಡ ಆಯ್ತು ಎಲ್ಲವೂ ಒಂದು ನಾರ್ಮಲ್ ಹಂತಕ್ಕೆ ಬರುತ್ತಿರುವ ಬಗ್ಗೆ ಸಮಾಧಾನ ಆಗುತ್ತಿತ್ತು.
ಶುಕ್ರವಾರ ಮಧ್ಯಾಹ್ನ ಫೋನ್ ಬಂತು ಅವನದ್ದು . ಧ್ವನಿಯಲ್ಲಿ ಎಲ್ಲಿಲ್ಲದ ಉತ್ಸಾಹ !
" ಹೇಯ್ , ಸಂಜೆ ಸ್ವಲ್ಪ ಬೇಗ ಬರೋಕಾಗತ್ತಾ ಆಫೀಸಿಂದ? ನಾನೇ ಪಿಕ್ ಮಾಡ್ತೀನಿ. "
" ಏನಪ್ಪಾ ವಿಶೇಷ? ವೀಕೆಂಡ್ ಸ್ಪೆಷಲ್ ಏನಾದ್ರೂ ಪ್ಲಾನ್ ಮಾಡಿದ್ಯಾ? "
"ಅದೆಲ್ಲಾ ಆಮೇಲೆ ಹೇಳ್ತೀನಿ. ಪ್ಲೀಸ್ ಪ್ಲೀಸ್ ಸ್ವಲ್ಪ ಬೇಗ ಹೊರಡು. 4-4.30 ಗೆ ಆಗತ್ತಾ? "
ಅವಳು ಗಡಿಯಾರ ನೋಡಿಕೊಂಡಳು . 12.30 ಆಗಿತ್ತು. ಕೆಲಸ ಸುಮಾರು ಆಗಿತ್ತು. ಬೇಗ ಹೊರಡಲು ತೊಂದರೆ ಇಲ್ಲ ಎನಿಸಿತು .
" ಸರಿ , ಬರ್ತೀನಿ. ನೀನು ಗೆಟ್ ಹತ್ರ ಬಂದ ಕೂಡ್ಲೇ ಫೋನ್ ಮಾಡು . ಕೆಳಗಡೆ ಇಳಿದು ಬರ್ತೀನಿ "
" ಓಕೇ ... ಥ್ಯಾಂಕ್ಯೂ ಡಿಯರ್ ! "
" ಬಟ್, ಏನು ವಿಶೇಷ ಅಂತ ಹೇಳಲೇ ಇಲ್ವಲ್ಲಾ ? "
" ಭೇಟಿ ಆದ ಕೂಡ್ಲೇ ಹೇಳ್ತೀನಿ ... ಬಾಯ್ "
ಫೋನ್ ಕಟ್ ಆಯ್ತು .
ಯಾಕಿರಬಹುದು ಎಂದು ಕೊಳ್ಳುತ್ತಾ ಕೆಲಸ ಮುಂದುವರಿಸಿದಳು .
ಅವನು ಹಾರಾಡೋ ರೀತಿ ನೋಡಿದ್ರೆ ಬೇರೆ ದೇಶಕ್ಕೆ ಹಾರೋ ತರಾ ಇದೆ ಎಂದು ಮನಸಲ್ಲೇ ಅಂದುಕೊಂಡಳು .
4 ಕ್ಕೆ ರೆಸ್ಟ್ ರೂಮ್ ಗೆ ಹೋಗಿ ಸಲ್ಪ ತಲೆ ಬಾಚಿ ಮುಖ ತೊಳೆದು ಫ್ರೆಶ್ ಆಗಿ ಜಾಗಕ್ಕೆ ಬರೋ ಹೊತ್ತಿಗೆ ಅವನ ಫೋನ್ !
ಪಕ್ಕದವಳಿಗೆ ಹೇಳಿ ಬ್ಯಾಗ್ ತೆಗೆದುಕೊಂಡು ಕೆಳಗಿಳಿದು ಬಂದಳು .
"ಹೇಳು ಈಗ್ಲಾದ್ರೂ . ಏನ್ ವಿಷಯ ? ಎಲ್ಲಿಗ್ ಕರ್ಕೊಂಡು ಹೋಗ್ತಿದೀಯಾ ಈಗ?"
"ನಮ್ಮನೆಗೆ !! "
"ವಾಟ್ ?" ಅವಳಿಗೆ ಅಚ್ಚರಿ !
"ಹಾ, ಅಮ್ಮ ನಿನ್ನ ಮೀಟ್ ಮಾಡಬೇಕು ಅಂದ್ಲು. ಅದಕ್ಕೆ ..... "
ಒಮ್ಮೆ ಅವಳ ಕಡೆ ನೋಡಿದವನು , "ನೀನು ಆಫೀಸ್ ಗೆ ಯಾವಾಗ್ಲೂ ಜೀನ್ಸ್ ಹಾಕೊಂಡೆ ಬರ್ತೀಯ ?"
ಅವಳಿಗೆ ವಿಚಿತ್ರ ಎನಿಸಿತು ." ಹೌದು . ಜೀನ್ಸ್ ಅಥವಾ trouser ನಾರ್ಮಲ್ ಆಗಿ ಹಾಕ್ತೀನಿ. ಸಲ್ವಾರ್ ಕಮೀಜ್ ಅಥ್ವಾ ಸೀರೆ ಸ್ವಲ್ಪ ಕಮ್ಮಿ ನೇ . ಅದೇನ್ ಒಳ್ಳೆ ಹೊಸದಾಗಿ ನೋಡ್ತಿರೋ ತರ ಕೇಳ್ತೀಯಲ್ಲ? "
"ಸರಿ ಕೂತ್ಕೋ" ಎಂದವನು ಬೈಕ್ ಸ್ಟಾರ್ಟ್ ಮಾಡಿದ.
ಅವನ ಹಿಂದೆ ಮೆಲ್ಲಗೆ ಮನೆಯೊಳಗೆ ಕಾಲಿಟ್ಟವಳನ್ನು ಅವನಮ್ಮ ನಗುತ್ತಲೇ ಸ್ವಾಗತಿಸಿದರು.
ನಮಸ್ಕಾರ ಎಂದು ಕೈ ಜೋಡಿಸಿದವಳನ್ನು ಕೈ ಹಿಡಿದು ಸೋಫಾದಲ್ಲಿ ಪಕ್ಕಕ್ಕೆ ಕೂರಿಸಿಕೊಂಡರು . ಅವಳ ಅಪ್ಪ,ಅಮ್ಮ, ಮನೆ ಊರು ಎಲ್ಲ ವಿವರ ವಿಚಾರಿಸುವಾಗ ಅವಳಿಗೆ ಯಾಕೋ ಏನೋ ಮುಜುಗರ ಆಗ್ತಾ ಇತ್ತು .
ಕಾಫಿ ತಿಂಡಿ ಎಲ್ಲ ಎಲ್ಲ ಆಗುವಷ್ಟರಲ್ಲಿ ಅವನ ಅಪ್ಪ ಕೂಡ ಬಂದರು . ಮತ್ತೊಮ್ಮೆ ಎಲ್ಲ ವಿವರಗಳು.. ಅವಳ ಮುಜುಗರ ಹೆಚ್ಚಾಗುತ್ತಲೇ ಇತ್ತು .
ಮನೆಗೆ ಹೋದಾಗಿನಿಂದ ಅವನು ಅವಳ ಪಕ್ಕ ಇರಲೇ ಇಲ್ಲ . ಅಮ್ಮನ ಪಕ್ಕ ಸ್ವಲ್ಪ ಹೊತ್ತು ಕೂತವನು "ನೀವಿಬ್ರು ಮಾತಾಡ್ಕೊಳಿ ನಾನು ಈಗ ಬಂದೆ" ಎಂದು ತನ್ನ ರೂಮಿಗೆ ಹೊರಟು ಹೋದವನು ಪತ್ತೆ ಇರಲಿಲ್ಲ !
ಅವನಮ್ಮ ಕೇಳಿದರು " ನಿಂಗೆ ಸಂಬಳ ಎಷ್ಟು ಬರತ್ತೆ ? "
ಸಂಕೋಚದಿಂದಲೇ ಹೇಳಿದಾಗ " ಅದನ್ನೆಲ್ಲ ಏನ್ ಮಾಡ್ತಿಯಾ? ಚಿನ್ನ ಗಿನ್ನ ಮಾಡ್ಸಿಕೊಂಡಿದೀಯ ?
"ನಂಗೆ ಅದ್ರಲ್ಲಿ ಅಷ್ಟು ಇಷ್ಟ ಇಲ್ಲ ಆಂಟಿ ! ಅಮ್ಮಂಗೆ ಒಂದು ನೆಕ್ಲೇಸ್ ಕೊಡ್ಸಿದೆ ಅಷ್ಟೇ . "
"ಅಮ್ಮಂಗೆ ನಿಮ್ಮ ತಂದೆ ಕೊಡಸಲ್ವಾ ? "
ಇವಳಿಗೆ ಕೋಪ ಏರುತ್ತಿತ್ತು
"ಹಾಗೇನಿಲ್ಲ ಆಂಟಿ , ಮಗಳು ಅಮ್ಮಂಗೆ ಕೊಡಿಸಬಾರದು ಅಂತೇನಿಲ್ವಲ್ಲ ? "
ಅವನಪ್ಪ ನಡುವೆ ಬಂದರು " ಇರಲಿ ಬಿಡೆ , ಈಗ ಅವಳಮ್ಮನಿಗೆ ಅವಳು ಕೊಡ್ಸಿದ್ದಾಳೆ . ಮದ್ವೆ ಆದ್ಮೇಲೆ ನಿಂಗೆ ಕೊಡಸ್ತಾಳೆ ಅದ್ಯಾಕ್ ಅಷ್ಟು ಟೆನ್ ಶನ್ ಮಾಡ್ಕೊತೀಯ " ದೊಡ್ಡದಾಗಿ ನಕ್ಕರು .
"ಅದು ಸರಿನೇ ಬಿಡಿ . ಆದ್ರೂ, ನೋಡಮ್ಮ , ಮದ್ವೆ ಆದ್ಮೇಲೆ ನೀನು ತವರು ಮನೇವ್ರಿಗೆ ಚಿಕ್ಕ ಪುಟ್ಟದು , ಸೀರೆ ಬಟ್ಟೆ ಎಲ್ಲ ಓಕೆ ಆದರೆ ಚಿನ್ನ ಬಣ್ಣ ಅಂತ ಕೊಡಸೋದು ಅಂಥಾದ್ದೆಲ್ಲ ನಮಗೆ ಅಷ್ಟು ಸರಿ ಹೋಗಲ್ಲ . ಎಷ್ಟಂದ್ರೂ ಮದ್ವೆ ಆದ್ಮೇಲೆ ನೀನು ನಮ್ಮ ಮನೆಗೆ ಸೇರಿದೋಳು . ಮತ್ತೆ ನಮ್ಮವರಲ್ಲಿ , ವರದಕ್ಷಿಣೆ , ಚಿನ್ನ ಬೆಳ್ಳಿ ಇತ್ಯಾದಿ ಸಲ್ಪ ಜಾಸ್ತಿ ನೇ .
ಮಗ ಮೆಚ್ಚಿದ್ದಾನೆ ಅಂದ್ಮೇಲೆ , ವರದಕ್ಷಿಣೆ ಎಲ್ಲ ನಾವೂ ಕೇಳೋಲ್ಲ . ಆದ್ರೆ, ನೀನು ಸ್ವಲ್ಪ ಒಡವೆ ಎಲ್ಲ ಚೆನ್ನಾಗಿ ಹಾಕೋಬೇಕು ಮದ್ವೆಲಿ .ಹೀಗಾಗಿ ನಿಮ್ಮ ಮನೇಲಿ ಹೇಳಿ ನಿಂಗೊಸ್ಕರ ಮಾಡಿಸ್ಕೋ . ನಮ್ಮ ಕಡೆ ಜನ ಆಡ್ಕೋ ಬಾರದು ನೋಡು "
ಇವಳ ತಲೆ ಗಿರ್ರೆನ್ನುತ್ತಿತ್ತು !
ಅಷ್ಟೊತ್ತಿಗೆ ಬಂದು ಅಮ್ಮನ ಪಕ್ಕದಲ್ಲಿ ಕುಳಿತಿದ್ದವನ ಕಡೆ ನೋಡಿದಳು. ಅವನು ತನಗೆ , ಸಂಬಂಧವೇ ಇರದ ರೀತಿ ಮೊಬೈಲ್ ನಲ್ಲಿ ಮುಳುಗಿದ್ದ.
ಹೇಗೋ ಮತ್ತೆ ಹತ್ತು ನಿಮಿಷಗಳು ಕಳೆದ ಮೇಲೆ , ಇವಳೇ ಎದ್ದಳು . ನಂಗೆ ಲೇಟ್ ಆಗ್ತಿದೆ ರಾತ್ರಿ ಬಸ್ ಗೆ ಊರಿಗೆ ಹೋಗ್ಬೇಕು ಎಂದಳು .
"ಓಹ್ ಹೌದ , ಸರಿ ಸರಿ , ಹೋಗೋ ಅವಳನ್ನು ಡ್ರಾಪ್ ಮಾಡಿ ಬಾ" . ಅಮ್ಮನ ಆಜ್ಞೆಯಾದ ಮೇಲೆ ಮಗ ಮೆಲ್ಲಗೆ ಎದ್ದ .
ದಾರಿಯುದ್ದಕ್ಕೂ ಅವನೇ ಮಾತನಾಡುತ್ತಿದ್ದ . ಅವನ ಫ್ಯಾಮಿಲಿ ಬಗ್ಗೆ , ಅವರ ಶ್ರೀಮಂತ ಸಂಬಂಧಿಕರು , ಲೈಫ್ ಸ್ಟೈಲ್ , ಕುಟುಂಬದ ಕಟ್ಟಳೆಗಳು ಇತ್ಯಾದಿ . ಅವಳು ಅನ್ಯ ಮನಸ್ಕಳಾಗಿ ಕೇಳುತ್ತಿದ್ದಳು . ಮನಸಲ್ಲಿ ಮಹಾ ಯುದ್ಧವೇ ನಡೆಯುತ್ತಿತ್ತು .
ಪಿ ಜಿ ಎದುರು ಇಳಿದವಳು ಹೆಚ್ಚು ಮಾತನಾಡದೆ , ಗುಡ್ ನೈಟ್ ಹೇಳಿ ಒಳಗೆ ಬಂದಳು .
ತಲೆಯಲ್ಲಿ ಏನೋ ಗೊಂದಲ . ಅವನ ಬಗ್ಗೆ ಕೋಪ ಬರುತ್ತಿತ್ತು . ತಾನು ಕಳೆದ ಎರಡೂವರೆ ವರ್ಷದಿಂದ ನೋಡಿದ ವ್ಯಕ್ತಿ ಇವನೇನಾ ಎನಿಸಿತು . ಮನೆ ತಲುಪಿ 5 ನಿಮಿಷಕ್ಕೆಲ್ಲ ಅವನ ಫೋನ್.
"ಅಲ್ಲ, ಅಮ್ಮ ಏನೋ ಕೇಳಿದ್ದಕ್ಕೆ ತಿರುಗಿ ಹೇಳಿದ್ಯಂತೆ ? ಆದರೂ ಅವರೇನೂ ಅಂದ್ಕೊಂಡಿಲ್ಲ .ಪರವಾಗಿಲ್ಲ ಬಿಡೋ ಅಂದ್ರು. ಮತ್ತೆ ಕೇಳಿಲ್ಲಿ , ಗುಡ್ ನ್ಯೂಸ್ ಅಂದ್ರೆ ಅಮ್ಮ ಅಪ್ಪಂಗೆ ನೀನು ಇಷ್ಟ ವಾಗಿದೀಯ . ಮುಂದಿನ ವಾರ ನೇ ನಿಮ್ಮನೆಗೆ ಹೋಗಿ ಮಾತಾಡೋಣ ಅಂದಿದಾರೆ . ಹೇಳಿಬಿಡು" ಅಂದವನು ಉತ್ತರಕ್ಕೂ ಕಾಯದೆ ಫೋನ್ ಇಟ್ಟಾಗ , ಮನಸಿಗೆ ಕಿರಿಕಿರಿ ಹೆಚ್ಚಾಗುತ್ತಲೇ ಇತ್ತು .
ಅದೇ ಗೊಂದಲದಲ್ಲೇ , ಊರಿಗೆ ಫೋನ್ ಮಾಡಿದಳು . ಫೋನ್ ಎತ್ತಿಕೊಂಡ ಅಮ್ಮ , " ಆಫೀಸಿಗೆ ಫೋನ್ ಮಾಡಿದ್ದೆ , ನೀನು ಬೇಗ ಹೋಗಿದ್ಯಂತೆ . ಹುಷಾರಾಗಿದೀಯ ತಾನೇ? ನಿನ್ನ ಮೊಬೈಲ್ ಗೆ ಮಾಡೋಣ ಅಂದ್ರೆ , ನಂಗೆ ನಂಬರ್ ಸಿಕ್ತಾ ಇರಲಿಲ್ಲ . ಅಪ್ಪ ಬೇರೆ ಆಚೆ ಹೋಗಿದ್ರು . ಹೇಗಿದ್ದೀಯ? ಆರಾಮಾಗಿದಿಯ ತಾನೇ ? "
"ಹಾಂ ಅಮ್ಮ , ಹುಷಾರಾಗಿದೀನಿ . ಯೋಚನೆ ಮಾಡ್ಬೇಡ . ಇವತ್ತು ರಾತ್ರಿ ಬಸ್ ಬುಕ್ ಮಾಡಿದೀನಿ . ಬೆಳಿಗ್ಗೆ ಮನೆಲಿರ್ತೀನಿ. ಈಗ ಊಟ ಮಾಡಿ ರೆಡಿ ಆಗ್ಬೇಕು . ಲೇಟ್ ಆಗತ್ತೆ ಆಮೇಲೆ ."
"ಸರಿ ಕಣೆ , ಹುಷಾರಾಗಿ ಬಾ . ಬೆಳಿಗ್ಗೆ ಚಂದು ಬರ್ತಾನೆ ಬಸ್ ಸ್ಟಾಪ್ ಗೆ . ಇಡ್ತೀನಿ "
ರಾತ್ರಿಯಿಡೀ ಬಸ ನಲ್ಲಿ ಅವಳಿಗೆ ನಿದ್ದೆ ಕೊಡದಂತೆ ನೂರೆಂಟು ಯೋಚನೆಗಳು .
ಬೆಳಿಗ್ಗೆ ಬಸ್ ಸ್ಟ್ಯಾಂಡ್ ಗೆ ಬಂದಿದ್ದ ತಮ್ಮನ ಹತ್ತಿರವೂ ಎಂದಿನಂತೆ ಕೀಟಲೆ ಮಾತಾಡದೆ ಮನೆಗೆ ಬಂದವಳು " ಅಮ್ಮ ಬಸ್ಸಲ್ಲಿ ನಿದ್ದೆ ಬಂದಿಲ್ಲ ,ತಲೆ ನೋಯ್ತಿದೆ . ಸಲ್ಪ ಕಾಫಿ ಕೊಡು, ಕುಡದು ಸಲ್ಪ ಮಲ್ಕೋತೀನಿ ಎಂದು ಕಾಫಿ ಕುಡಿದು ಮಲಗಿ ಬಿಟ್ಟಳು . ಹಾಸಿಗೆಯಲ್ಲಿ ಅಡ್ಡಾದರೂ ಅದೆಷ್ಟೋ ಹೊತ್ತು ಒದ್ದಾಡಿದ ಮೇಲೆ ಅಂತೂ ನಿದ್ರೆ ಒಲಿಯಿತು .
ಮಧ್ಯಾಹ್ನ ದ ಹೊತ್ತಿಗೆ ಎದ್ದು ತಿಂಡಿ ತಿಂದು ಸಪ್ಪಗೆ ಕುಳಿತ ಮಗಳನ್ನು ನೋಡಿ ಅಪ್ಪ ಅಮ್ಮ ಮುಖ ಮುಖ ನೋಡಿಕೊಂಡರು .
" ಯಾಕೆ ಪುಟ್ಟ ? ಏನಾಯ್ತು? ಹೀಗ್ಯಾಕಿದೀಯಾ ? ಆಫೀಸಲ್ಲಿ ಏನಾದ್ರು ತೊಂದ್ರೆ ನ ? " ಅಪ್ಪ ಕೇಳಿದಾಗ , ಇಲ್ಲವೆನ್ನುವಂತೆ ತಲೆ ಅಲ್ಲಾಡಿಸಿದಳು .
ಅಮ್ಮ ಮೆಲ್ಲಗೆ ಕೇಳಿದಳು " ನೀವಿಬ್ರೂ ಏನಾದ್ರೂ ಜಗಳ ಮಾಡ್ಕೊಂಡ್ರೆನೇ? "
ಥಟ್ ಎಂದು ಅಮ್ಮನ ಮುಖ ನೋಡಿದವಳಿಗೆ ಅಲ್ಲಿ ಆತಂಕ ಕಂಡಿತು .
"ಪುಟ್ಟಾ, ಏನೋ ಚಿಕ್ಕ ಪುಟ್ಟ ಮಾತು , ಜಗಳ ಸಹಜ ಲೈಫಲ್ಲಿ . ಅದನ್ನೆಲ್ಲ ಸೀರಿಯಸ್ ಆಗಿ ತೊಗೊಂಡು ಸಂಬಂಧ ಹಾಳು ಮಾಡ್ಕೋ ಬಾರ್ದು , ಮನಸಲ್ಲಿ ಕಹಿ ತಂದ್ಕೊ ಬಾರ್ದು "
ಅಮ್ಮನ ಮಾತು ಕೇಳಿ ಮನಸು ತಡೆಯದೆ , ಹಿಂದಿನ ದಿನ ತಾನು ಅವನ ಮನೆಗೆ ಹೋಗಿದ್ದು , ಅಲ್ಲಿ ನಡೆದ ಮಾತುಕತೆಗಳನ್ನೆಲ್ಲ ಹೇಳಿದವಳಿಗೆ ಏಕೋ ಹಗುರವೆನಿಸಿತು .
" ಅಯ್ಯೋ , ಮಗಾ, ಇಷ್ಟೇನಾ? ಅವರು ಅವರ ಪ್ರಕಾರ ಯೋಚನೆ ಮಾಡ್ತಾರೆ ,ಅವರ ಪದ್ಧತಿ , ರೀತಿ-ನೀತಿ ಪ್ರಕಾರ ಮಾತಾಡಿದ್ರು . ನಿನಗೆ ಅವೆಲ್ಲ ಗೊತ್ತಿಲ್ಲದೇ ಇರೋದ್ರಿಂದ ಅದು ಸರಿ ಅನಿಸಿಲ್ಲ ಅಷ್ಟೇ .
ನೀನು ಬೆಳೆದಿರೋ ರೀತಿ ಬೇರೆ ಅಲ್ವ? ಅದಕ್ಕೆ . ಇಷ್ಟಕ್ಕೆಲ್ಲ ಹೀಗೆ ತಲೆ ಮೇಲೆ ಆಕಾಶ ಬಿದ್ದವರ ತರಾ ಆಡ್ತಿಯಲ್ಲ ?" ಅಪ್ಪ ನಗುತ್ತ ತಲೆ ಸವರಿದಾಗ , ಅಪ್ಪನ ಭುಜಕ್ಕೆ ತಲೆಯಿಟ್ಟು ಸುಮ್ಮನೆ ಕುಳಿತು ಬಿಟ್ಟಳು .
"ಅವರು ಯಾವಾಗ ಬರ್ತಾರೆ ಅಂತ ಸರಿಯಾದ ಡೇಟ್ ಹೇಳಿದ್ರೆ , ನಾವೂ ಸ್ವಲ್ಪ ತಯಾರಿ ಮಾಡ್ಕೋ ಬಹುದಲ್ವೇನೆ?ಎಷ್ಟಂದ್ರೂ ದೊಡ್ಡ ಊರಿಂದ ಬರೋರು. ವ್ಯವಸ್ಥೆ ಮಾಡಬೇಕಲ್ವ?" ಅಮ್ಮ ಅಲವತ್ತು ಕೊಂಡಳು
ಇವಳಿಗೆ ಏನೋ ಗೋಜಲು , ಮನಸಿನಲ್ಲಿ ಎಲ್ಲವೂ ಸರಿಯಿರದ ಭಾವ . ಅಷ್ಟರಲ್ಲಿ ಮೊಬೈಲ್ ರಿಂಗಣಿಸಿತು .
ಆ ತುದಿಯಲ್ಲಿ ಅವನು ಖುಷಿಯಿಂದ ಹೇಳುತ್ತಿದ್ದ. " ಕೇಳು , ಮುಂದಿನ ವಾರ ಅಪ್ಪ ಅಮ್ಮ ನಿಮ್ಮನೆಗೆ ಹೋಗೋಣ ಮಾತು ಕತೆ ಮುಗಿಸೋಣ ಅಂತಿದಾರೆ. ನೀನು ಮನೇಲಿ ಹೇಳ್ಬಿಡು . ಅವರು ಎಲ್ಲ ಸರಿಯಾಗಿ ತಯಾರಿ ಮಾಡ್ಕೋಬೇಕು ಅಂತ ಹೇಳ್ಬಿಡು . ಇಲ್ಲಿಂದ ಅಲ್ಲಿ ಬಂದು ಅಪ್ಪ- ಅಮ್ಮಂಗೆ ಏನೂ ತೊಂದರೆ ಆಗ್ಬಾರ್ದಲ್ವ ? . ನೀನು ವಾಪಾಸ್ ಬಂದ್ ತಕ್ಷಣ ಫೋನ್ ಮಾಡು ಮಾತಾಡೋಣ " ಒಂದೇ ಉಸಿರಲ್ಲಿ ಹೇಳುತ್ತಿದ್ದ.
ಇವಳು ಕಣ್ಣು ಮುಚ್ಚಿ ಮೌನವಾಗಿ ಕೇಳಿಸಿಕೊಳ್ಳುತ್ತಿದ್ದಳು. ಕಣ್ಣು ಬಿಟ್ಟಾಗ , ಅವನು " ಹಲೋ , ಕೇಳಿಸ್ತಿದ್ಯಾ ? ಇದ್ದೀಯ ಲೈನ್ ಲ್ಲಿ ? ಎನ್ನುತ್ತಿದ್ದ .
ಅಪ್ಪ ಅಮ್ಮ ಇಬ್ಬರೂ ತನ್ನ ಮುಖವನ್ನೇ ನೋಡುತ್ತಿರುವುದು ಗಮನಕ್ಕೆ ಬಂತು .
ಗಂಟಲು ಸರಿ ಮಾಡಿ ಕೊಂಡವಳು " ಹಾ, ಕೇಳಿಸ್ಕೊಂಡೆ .
"ಮತ್ತೆ ಏನೂ ರಿಪ್ಲೈ ಮಾಡಿಲ್ಲ ? "
" ಅವರು ಇಲ್ಲಿ ಬರೋ ಅಗತ್ಯ ಇಲ್ಲ ಅನಿಸ್ತಿದೆ ಕಣೋ. ಬೇಡ ಅಂತ ಹೇಳ್ಬಿಡು !"
" ಏ, ಯಾಕೆ ? ಏನರ್ಥ ಹಂಗಂದ್ರೆ ? ಏನಾಯ್ತೆ ನಿಂಗೆ? ಅವರನ್ನ ಒಪ್ಪಿಸೋಕೆ ನಾನೆಷ್ಟು ಕಷ್ಟ ಪಟ್ಟಿದೀನಿ ಗೊತ್ತಾ ? ಊರಿಗ್ ಹೋದ ತಕ್ಷಣ ತಲೆ ತಿರಗೋಯ್ತಾ ನಿಂಗೆ? ಏನ್ ಹೇಳಿದ್ರು ನಿಮ್ಮಪ್ಪ ?
ಸಿಟ್ಟು ಒಮ್ಮೆಲೇ ತಲೆಗೇರಿದರೂ ಎದುರಿಗೆ ಅಪ್ಪ ಅಮ್ಮ ಇರುವುದರ ಅರಿವಾಗಿ
" ನೋಡು , ನಾನು ಹೇಳಿದ್ದು ನನ್ನದೇ ಅಭಿಪ್ರಾಯ . ಬೇರೆ ಯಾರೂ ಏನೂ ಹೇಳಿಲ್ಲ . ವಾಪಸ್ ಬಂದಮೇಲೆ ನಾನೇ ಫೋನ್ ಮಾಡ್ತೀನಿ . ಬೈ " ಎಂದು ಫೋನ್ ಕಟ್ ಮಾಡಿದಳು .
ಏನೂ ತಿಳಿಯದೆ , ಗೊಂದಲದಿಂದ ನೋಡುತ್ತಿರುವ ಅಪ್ಪ-ಅಮ್ಮನತ್ತ ನೋಡಿ
"ಸರಿಯಾದ ನಿರ್ಧಾರ ತೊಗೊಂಡಿದೀನಿ ಅಪ್ಪಾ, ಯೋಚನೆ ಮಾಡ್ಬೇಡ" ಎಂದು ಮುಗುಳು ನಕ್ಕಳು!

February 14, 2021

ವ್ಯಾಲಂಟೈನ್ ಡೇ !

 ನರ್ವಸ್ ಆಗುತ್ತಿದ್ದೆ ನಾನು .  ಇನ್ನೇನು ಸ್ವಲ್ಪ ಹೊತ್ತಿಗೆ ಅವಳು ಬಂದು ಬಿಡುತ್ತಾಳೆ . 

ಜೀವನದ ಮೊಟ್ಟಮೊದಲ ವ್ಯಾಲಂಟೈನ್ ಡೇ  ಇದು . 
ಯಾವ ಹೋಟೆಲ್ ಗೆ ಹೋಗಬೇಕು ಎಂದು  ಅವಳೇ  ಡಿಸೈಡ್ ಮಾಡಿದ್ದಳು .  ಸ್ವಲ್ಪ ಮೇಲ್ದರ್ಜೆಯ ಹೋಟೆಲ್ ಅದು . 
" ನಿಮ್ಮ ಅಪ್ಪ ಅಮ್ಮನ  ಲೆವೆಲ್ ಗೆ ಓಕೆ ಕಣೆ ಅದು.  ನನ್ನ ಜೇಬಿಗೆ  ಸ್ವಲ್ಪ ಹೆಚ್ಚಾಯ್ತೆನೋ" ಅಂತ  ಗೊಣಗಿದ್ದಕ್ಕೆ  ಅವಳು  ಹುಸಿಮುನಿಸು ತೋರಿದ್ದಳು . 
"ಒಂದ್ಸಲ ಆ ಹೋಟೆಲ್ ಗೆ ಕರ್ಕೊಂಡು ಹೋಗೋಕೆ ಕಂಜೂಸಿ ಮಾಡ್ತೀಯಾ? ಹೆದರ್ಕೋಬೇಡ ನಂಗೆ ಪರಿಚಯದವರಿದ್ದಾರೆ ಅಲ್ಲಿ. ಒಂದು ಡಿಸ್ಕೌಂಟ್ ಕೂಪನ್ ಅರೇಂಜ್ ಮಾಡ್ತೀನಿ." ಅಂತಾನೂ ಹೇಳಿದ್ಲು. 
"ಸ್ವಲ್ಪ ಚೆನ್ನಾಗಿ ಡ್ರೆಸ್ ಮಾಡ್ಕೊಂಡು ಬಾ .  ಅಲ್ಲಿರೋರು ನಮ್ಮನ್ನೇ ನೋಡಿ  ಹೊಟ್ಟೆ ಉರ್ಕೋ ಬೇಕು .   "  ಅಂತ ನಕ್ಕಿದ್ಲು. 
 
ಅವಳು ಹೇಳಿದ ಟೈಮ್ ಗೆ ಸ್ವಲ್ಪ ಮುಂಚೆನೇ ಬಂದು ಕಾಯ್ತಿದ್ದೆ.  ಅಷ್ಟೊತ್ತಿಗೆ ಅವಳ ಫೋನ್ ಬಂತು. 
ನಾನು ಟೇಬಲ್ ಬುಕ್ ಮಾಡ್ಸಿದೀನಿ. ನಿನ್ನ ಹೆಸರಲ್ಲಿ!  ಅಲ್ಲೇ ಹೋಗಿ ಕೂತಿರು .  ೧೦ ನಿಮಿಷದಲ್ಲಿ ಬಂದೆ . " 
ಸರಿ  ಅವಳು ಬುಕ್ ಮಾಡಿದ ಟೇಬಲ್ ಗೆ ಹೋಗಿ ಕೂತೆ.  ಎ ಸಿ ಯ ತಂಪಲ್ಲೂ  ನಂಗೆ ಬೆವರುತ್ತಿತ್ತು. 
ಮನೇಲಿ ಗೊತ್ತಾದ್ರೆ ? ಆಗೋ ಎಡವಟ್ಟುಗಳನ್ನು ನೆನೆದು   ತಲೆಯಲ್ಲಿ ನೂರಾರು ಯೋಚನೆಗಳು !
ಎರಡು ಗ್ಲಾಸ್ ನೀರು ಖಾಲಿ ಆಗುವಷ್ಟರಲ್ಲಿ  ಅವಳು  ಕಾಣಿಸಿಕೊಂಡಳು . ಕೆಂಪು ಡ್ರೆಸ್ ನಲ್ಲಿ ಚೆಂದದ ಗುಲಾಬಿ ಹೂವಿನಂತೆ  ಮುದ್ದಾಗಿ ಕಾಣುತ್ತಿದ್ದಳು.  ಅವಳ ಕೈಯಲ್ಲಿ ಕೆಂಪು ಗುಲಾಬಿಯ ಗುಚ್ಛ ನೋಡಿದಾಗ , ಎದೆ ಧಸಕ್ಕೆಂದಿತು ! ನಾನು ಗುಲಾಬಿ ಹೂ ತರಲು ಮರೆತು ಬಿಟ್ಟಿದ್ದೆ !  ಮನಸಲ್ಲಿ ಹಳಹಳಿಸಿದೆ !  ನಗುತ್ತಾ ಬಂದವಳು ಹೂಗುಚ್ಛವನ್ನು ನನ್ನ ಕೈಲಿಟ್ಟು  ಹಗುರಾಗಿ ಅಪ್ಪಿಕೊಂಡು " ಹ್ಯಾಪಿ ವ್ಯಾಲಂಟೈನ್ ಡೇ " ಎಂದು  ಕೆನ್ನೆಗೆ ಮುತ್ತಿಟ್ಟಳು .  

ನಾನು ಮೆಲ್ಲಗೆ ಜೇಬಿನಿಂದ ದೊಡ್ಡ ಚಾಕೊಲೇಟ್  ತೆಗೆದು  ಅವಳ ಕೈಲಿಟ್ಟೆ . 
" ಹ್ಯಾಪಿ ವ್ಯಾಲಂಟೈನ್ ಡೇ "  ಥ್ಯಾಂಕ್ಸ್  ನಿನ್ ಜೊತೆ ನನ್ನ ಕರಕೊಂಡು ಬಂದಿದ್ದಕ್ಕೆ ... " 
" ನಿಂಗಿಂತ ಬೆಸ್ಟ್ ವ್ಯಾಲಂಟೈನ್ ಯಾರೂ  ಸಿಕ್ಕಲ್ಲ ಗೊತ್ತಾ ? ನನ್ನ ಮುದ್ದು ಅಜ್ಜಾ " ಎನ್ನುತ್ತಾ  ಕೆನ್ನೆ ಎಳೆದಳು ಮೊಮ್ಮಗಳು. 
" ಸರಿ , ಮನೇಲಿ ಏನಂತ ಹೇಳಿದೆ? 
"ನಿಜಾನೆ ಹೇಳಿದ್ದು. ನಿನ್ನಜೊತೆ ಆಚೆ ಹೋಗ್ತಾ ಇದ್ದೀನಿ ಅಂತ. ಅಜ್ಜಂಗೆ  ಅದೇನು ಕಾಟ ಕೊಡ್ತೀಯಾ ನೀನು ಅಂತ ಬೈದ್ಲು ಅಮ್ಮ  "  ನಕ್ಕಳು ನನ್ನ ವ್ಯಾಲಂಟೈನ್ !
"  ಸರಿ ಹೋಯ್ತು  ! ಇಷ್ಟೊತ್ತಿಗೆ ಅವಳು  ನಮ್ಮನೆಗೆ ಫೋನ್ ಮಾಡಿ,  ತಮ್ಮಂಗೆ  ಹೇಳಿ , ಅಪ್ಪನ ವ್ಯಾಲಂಟೈನ್ ಡೇ ಅಂತ  ಇಬ್ಬರೂ ನಕ್ಕಿರ್ತಾರೆ ಜೋರಾಗಿ !  " ನಾನು ಹುಳಿ  ನಗೆ ನಕ್ಕೆ . 
" ನಗಲಿ  ಬಿಡು ಅಜ್ಜಾ ! ನಾವು ಇಲ್ಲಿ  ಡಿನ್ನರ್ ಎಂಜಾಯ್ ಮಾಡೋಣ ! ಆಮೇಲೆ  ನಂಗೆ ಐಸ್ ಕ್ರೀಮ್  ಬೇಕು  ದೊಡ್ಡದು  !" 
" ಖಂಡಿತಾ ! ನಿಂಗೆ ಬೇಡ ಆಂತೀನಾ ನಾನು ? " 
"  ಓಹ್  ಅಜ್ಜಾ ....  ಐ ಲವ್ ಯೂ !  ಖುರ್ಚಿಯಿಂದ ಎದ್ದು ಬಂದು ಗಟ್ಟಿಯಾಗಿ ಅಪ್ಪಿಕೊಂಡಳು ಮೊಮ್ಮಗಳು.







--

Chitra

February 8, 2021

ಎಲ್ಲ ಮರೆತಿರುವಾಗ.....

 


Shared with Kannad

ಅತ್ತೆ, ಅತ್ತೆ, ಯಾರೋ ಮೆಲ್ಲನೆ ಕರೆದಂತಾಯ್ತು , ನಿದ್ದೆಯಲ್ಲೇ ಹ್ಞೂ ಗುಟ್ಟಿದೆ .
ಅತ್ತೇ , ಅಮ್ಮ ಏಳಿಸೋಕೆ ಹೇಳಿದ್ಲು ,ಎಲ್ಲಾರದ್ದೂ ತಿಂಡಿ ಮುಗೀತಾ ಬಂತು . ಏಳ್ತೀಯಾ ?
ಹಾಂ , ಬಂದೆ . ನೀ ಹೋಗು ಎಂದು ಮಗ್ಗುಲಾದೆ . ಮತ್ತೆರಡು ನಿಮಿಷಕ್ಕೆ ಮೆಲ್ಲಗೆ ಕಣ್ಣು ಬಿಟ್ಟವಳಿಗೆ ಎಲ್ಲ ಅಯೋಮಯ ! ಎಲ್ಲಿದ್ದೇನೆ ಎಂಬ ಕನ್ಫ್ಯೂಷನ್ . ಕಿಡಕಿಯಿಂದ ಬೆಳಕಿನ ರೇಖೆ ಮುಖ ಸವರುತ್ತಿತ್ತು .
ಥಟ್ ಎಂದು ಎದ್ದು ಕುಳಿತವಳಿಗೆ ಊರಲ್ಲಿ ಮನೆಯಲ್ಲಿರುವುದು ನೆನಪಾಯಿತು . ಹಿಂದಿನ ದಿನ ಊರು ತಲುಪುವಾಗಲೇ ಕತ್ತಲಾಗಿತ್ತು. ಎಲ್ಲರನ್ನೂ ಮಾತನಾಡಿಸಿ , ಊಟ ಮುಗಿಸುವಷ್ಟರಲ್ಲಿ ಕಣ್ಣು ಬಿಡಲಾಗದಷ್ಟು ನಿದ್ರೆ . ಅಂತೂ ಮಲಗಿದವಳಿಗೆ ಈಗಲೇ ಎಚ್ಚರಾಗಿದ್ದು . ಅದೂ ಅಣ್ಣನ ಮಗಳು ಕರೆದಾಗ .
ಕೆಳಗಿಳಿದು ಬಚ್ಚಲಿಗೆ ಹೋಗಿ ಮುಖ ತೊಳೆದು ಫ್ರೆಶ್ ಆಗಿ ಅಡುಗೆ ಮನೆಗೆ ಕಾಲಿಟ್ಟಾಗ ಅತ್ತಿಗೆ ತೆಳ್ಳೇವು ಮಾಡುತ್ತಿದ್ದಳು .
"ಗುಡ್ ಮಾರ್ನಿಂಗ್ ! ಚೆನ್ನಾಗಿ ನಿದ್ರೆ ನಿಂಗೆ ಅದಕ್ಕೆ ಬೇಗ ಏಳಿಸಿಲ್ಲ . ಎಲ್ಲಾರದ್ದೂ ತಿಂಡಿ ಮುಗೀ ತಾ ಬಂತು. ಆಮೇಲೆ ನಿಂಗೆ ಹಿಟ್ಟು ಖರ್ಚಾಗೋದ್ರೆ ಅಂತ ಎಳ್ಸೋಕೆ ಹೇಳಿದ್ದು" ಅಂತ ನಕ್ಕಳು
"ಅಯ್ಯೋ ಅತ್ಗೆ , ಹಾಸಿಗೆ ಮೇಲೆ ಬಿದ್ದವಳಿಗೆ ಸಹನಾ ಕರೆಯೋವರೆಗೂ ಏನೇನೂ ಎಚ್ಚರ ಇರ್ಲಿಲ್ಲ ನೋಡು !" ನಗುತ್ತ ಎದುರಿಗಿದ್ದ ಪ್ಲೇಟಿನಿಂದ ತೆಳ್ಳೇವು ಚೂರು ಮಾಡಿ ಬೆಲ್ಲ ಹಚ್ಚ ತೊಡಗಿದೆ .
"ನಾಳೆಯಿಂದ ಇನ್ನು ಮನೆ ತುಂಬಾ ಜನ . ಇವತ್ತೊಂದಿನ ನಿನ್ನತ್ರ ಸುದ್ದಿ ಹೇಳೋಕಾಗೋದು" ಎನ್ನುತ್ತಾ ಅತ್ತಿಗೆ ಬಿಸಿ ಬಿಸಿ ಚಹಾ ಲೋಟ ತಂದಿಟ್ಟಳು .
ಹನ್ನೆರಡು ವರ್ಷಗಳ ನಂತರ ಊರಿಗೆ ಬಂದಿದ್ದು . ಅದೂ ಅಣ್ಣನ ಮಗಳ ಮದುವೆಗೆ ಎಂದು . ಮಾತಾಡಲು ಬೇಕಷ್ಟಿದೆ .
ಮದುವೆ ಆಗಿ ಅಮೆರಿಕಾ ಕ್ಕೆ ಹೋಗಿ ಇಪ್ಪತ್ತು ವರ್ಷಗಳೇ ಆಗೋಯ್ತು. ನಡುವೆ -ಒಂದು ಎರಡು ವರ್ಷಕ್ಕೊಮ್ಮೆ ಬರುತ್ತಿದ್ದರೂ ಬೆಂಗಳೂರುವರೆಗಷ್ಟೇ . ಅಪ್ಪ ಅಮ್ಮ , ಮತ್ತೆ ಅತ್ತೆ ಮಾವ ಕೂಡ ಅಲ್ಲೇ ಇರೋದ್ರಿಂದ ಅಲ್ಲಿಗಷ್ಟೇ ಟ್ರಿಪ್ . ಊರಲ್ಲಿದ್ದಿದ್ದು ದೊಡ್ಡಪ್ಪನ ಕುಟುಂಬ . ತುಂಬಾ ಪ್ರೀತಿ ಮಾಡಿಕೊಳ್ಳುತ್ತಿದ್ದರೂ ಯಾಕೋ ಅಲ್ಲಿಗೆ ಹೋಗಲು ಟೈಮ್ ಸಿಕ್ತಾ ಇರಲಿಲ್ಲ . ಮಕ್ಕಳು ಚಿಕ್ಕವರಿದ್ದಾಗ ಒಮ್ಮೆ ಬಂದಿದ್ದು, ಅದಾಗಿ ಹನ್ನೆರಡು ವರ್ಷಗಳು !!
ಯೋಚಿಸುತ್ತಾ ತಿಂಡಿ ತಿನ್ನುತ್ತಿದ್ದವಳಿಗೆ ಅತ್ತಿಗೆ ಹೇಳಿದ್ಲು.
"ಮಕ್ಳನ್ನೂ ಕರ್ಕೊಂಡ್ ಬರ್ಬೇಕಿತ್ತು. ಎಷ್ಟು ವರ್ಷ ಆಗೋಯ್ತು ನೋಡಿ. "
"ಅವರಿಬ್ಬರಿಗೂ ರಜೆ ಸಿಕ್ಕಲ್ಲ ಅತ್ಗೆ ಈಗ. ಕಾಲೇಜ್ ಅಲ್ವ ? ನಂಗೆ ಯಾಕೋ ತುಂಬಾ ಆಸೆ ಆಯ್ತು ಸಹನಾ ಮದ್ವೇಗ್ ಬರಲೇ ಬೇಕು ಅಂತ . ಅದಕ್ಕೆ , ದೀಪಕ್ ಹೇಳಿದ , ಮಕ್ಕಳ ಜೊತೆ ಇದ್ದೀನಿ ನೀ ಹೋಗು ಅಂತ .ಬಂದ್ಬಿಟ್ಟೆ ! "
"ಒಳ್ಳೆದಾಯ್ತು ಬಿಡು . ನಮಗೂ ಎಷ್ಟು ಖುಷಿಯಾಯ್ತು ! " ಅತ್ತಿಗೆ ಮುಖ ಹೊಳೀತಿತ್ತು .
ಒಬ್ಬೊಬ್ಬರೇ ನೆಂಟರು ಬರತೊಡಗಿ ನಾಲ್ಕುದಿನಕ್ಕೆ ಭರ್ಜರಿಯಾಗಿ ಮದುವೆಯೂ ಮುಗೀತು . ಮತ್ತೆರಡು ದಿನ ಊರಲ್ಲೇ ಕಳೆಯಬೇಕೆನಿಸಿತು ಇಷ್ಟು ವರ್ಷಗಳ ಬಾಕಿ ಇತ್ತಲ್ಲ ? ಬಾಲ್ಯದ ನೆನಪು , ಚಿಕ್ಕವಳಿದ್ದಾಗ ಸುತ್ತಿದ್ದ ಜಾಗಗಳಿಗೆಲ್ಲ ಮತ್ತೆ ಹೋಗಿ ನೋಡಬೇಕೆನಿಸುತ್ತಿತ್ತು . ಚಿಕ್ಕಪ್ಪನ ಮಗಳು ಮಾಧವಿಯ ಜೊತೆ ತೋಟ , ಗದ್ದೆ ,ಹೊಳೆ , ದೇವಸ್ಥಾನ ಎಲ್ಲ ಅಲೀತಾ ಇದ್ದೆ . ತುಂಬಾ ಬದಲಾವಣೆ ಏನೂ ಇರಲಿಲ್ಲ . ಅದೇ ಶಾಂತ ಪರಿಸರ, ಆತ್ಮೀಯತೆಯಿಂದ ಮಾತಾಡಿಸೋ ಜನ .
ಅವತ್ತು ಲಕ್ಷ್ಮತ್ತೆ ಮನೆಗೆ ಹೋಗುವಾಗ ಅವ ಕಂಡ . ಅವನೇ ಹೌದೋ ಅಲ್ಲವೋ ಎಂದು ಯೋಚಿಸುತ್ತಿರುವಾಗಲೇ ಮಾಧವಿ ಮಾತಾಡಿಸಿದಳು. "ವಿನಯಣ್ಣ , ಯಾಕೋ ಮೊನ್ನೆ ಮದ್ವೆಗೆ ಬರ್ಲೆ ಇಲ್ಲ? ಊರ ಮನುಷ್ಯರೇ ಹೀಂಗೆ ಮಾಡಿದ್ರೆ ಎಂತ ಮಾರಾಯ ? "
"ಅಯ್ಯೋ, ಹೌದೇ ಮಾರಾಯ್ತಿ. ಅವತ್ತೇ ಸಲ್ಪ ಕೋರ್ಟಲ್ಲಿ ಕೆಲಸ ಇತ್ತು. ಎಂತ ಮಾಡದು? ಮನೇವ್ರೆಲ್ಲ ಬಂದಿದ್ರಲ್ಲೇ " ಎನ್ನುತ್ತಾ, ಹಿಂದಿದ್ದ ನನ್ನನ್ನು ನೋಡಿ " ಅರೆ, ಇದೇನು ಭಾರಿ ಅಪರೂಪದ ಜನ ಬಂದ್ರಲ್ಲ ? " ಎಂದು ನಕ್ಕ .
" ಗುರ್ತು ಸಿಕ್ತಲ್ಲ ಮಾರಾಯ ನಂದು . ಮರೆತೇ ಹೋಯ್ತೆನ ಅಂದ್ಕಂಡಿದ್ದೆ "
" ಅದು ಹ್ಯಾಂಗೆ ಗುರ್ತ ಸಿಕ್ಕಲ್ಲ ಮಾರಾಯ್ತಿ ? ನೀನೇನು ಜಾಸ್ತಿ ಬದಲಾಗಿಲ್ಲ. ನನ್ನ ನೋಡು " ಎಂದು ದೊಡ್ಡದಾಗಿ ನಕ್ಕು
" ಮತ್ತೆ? ಎಲ್ಲ ಆರಾಮ ? ಎಷ್ಟ್ ವರ್ಷ ಆಗೋಯ್ತು ನಿನ್ನ ನೋಡಿ. ಒಂದ್ ಕೆಲಸ ಮಾಡು. ಸಂಜೆ ಬಾ ಮನೆಗೆ ಚಾ ಕುಡಿಯೋಕೆ . ಆರಾಮಾಗಿ ಸುದ್ದಿ ಹೇಳ್ವ . ಈಗ ಕೆಲಸ ಇದೆ . ಮಾಧವಿ ಇವಳನ್ನ ಕರ್ಕೊಂಡ್ ಬಾ, ನಿನ್ನ ಜವಾಬ್ದಾರಿ ಮತ್ತೆ " ಎಂದವನು "ಸಿಗುವ ಸಂಜೆಗೆ" ಎನ್ನುತ್ತಾ ನಡೆದು ಬಿಟ್ಟ .
ನಾನು ಅವನು ಹೋದತ್ತ ನೋಡುತ್ತಾ ನಿಂತುಬಿಟ್ಟೆ . ಬದಲಾಗಿದ್ದ ಅವನು ಹೊರನೋಟಕ್ಕಂತೂ ! ಅರ್ಧ ಬೋಳಾದ ತಲೆಯಲ್ಲಿ ಉಳಿದಿದ್ದು ಸಲ್ಪ ಬಿಳಿಕೂದಲು . ಮುಖದಲ್ಲಿ ಎದ್ದು ಕಾಣುವ ನೆರಿಗೆಗಳು . ಎಲೆ ಅಡಿಕೆ ತಿಂದು ಕೆಂಪಾದ ಹಲ್ಲುಗಳು . ವಯಸ್ಸಾಗಿದ್ದಕ್ಕಿಂತ ಹೆಚ್ಚೇ ಎನಿಸುವ ಶರೀರ . ಹೇಗಿದ್ದವನು ಹೇಗಾಗಿ ಬಿಟ್ಟ !! ನಾನು ನೋಡಿದ್ದ, ಇಷ್ಟ ಪಟ್ಟಿದ್ದ , ತಲೆತುಂಬ ಕೂದಲಿನ , ಬಿಳಿ ನಗೆಯ , ಸ್ಪುರದ್ರೂಪಿ ವಿನಯ ಇವನಲ್ಲ ಎನಿಸಿತು ಮನಸ್ಸಿಗೆ .
"ಏ ಅಕ್ಕ, ವಿನಯಣ್ಣ ಅವರ ಮನೆಗೆ ಸಂಜೆ ಕರೆದಿದ್ದು . ಈಗ ನಡಿ ಲಕ್ಷ್ಮತ್ತೆ ಮನೆಗೆ . ಕಾಯ್ತಿರ್ತಾಳೆ ಅವಳು " ಎನ್ನುತ್ತಾ ಎಚ್ಚರಿಸಿದಳು .
ಸಂಜೆಯವರೆಗೂ ವಿನಯ ತಲೆಯಲ್ಲಿ ಸುತ್ತುತ್ತಿದ್ದ .
ಚಿಕ್ಕವಳಿದ್ದಾಗ ಬೇಸಿಗೆ ರಜೆಗೆ ಊರಿಗೆ ಹೋದಾಗೆಲ್ಲ ಜೊತೆಗೆ ಆಡುತ್ತಿದ್ದೆವು , ಅಲೆಯುತ್ತಿದ್ದೆವು . ಮಾವಿನ ಹಣ್ಣು , ಗೇರು ಹಣ್ಣು , ಕವಳಿ ಕಾಯಿ, ಕೊಯ್ಯಲು ಅವನೇ ಜೊತೆ. ಬೆಟ್ಟದಲ್ಲಿ ಹೊಳೆ ದಾಸಾಳ ಹಣ್ಣು ಕೊಯ್ಯುವಾಗ ಒಮ್ಮೊಮ್ಮೆ ಇಡೀ ಗೊಂಚಲನ್ನೆ ಕೊಯ್ದು ಕೈಗಿಡುತ್ತ ನೋಡು ಒಳ್ಳೆ ಕೆಂಪು ಹೂ ತರಾ ಇದೆ . ಮುಡ್ಕೋ . ಚಂದ ಕಾಣತ್ತೆ ಎನ್ನುತ್ತಿದ್ದ. ದೊಡ್ಡಾಗುತ್ತಿದ್ದಂತೆ ಹಾಗೆ ಅಲೆಯುವುದು ಕಮ್ಮಿ ಆದರೂ ಸಂಜೆ ಗದ್ದೆ ಬದಿಯಲ್ಲಿ ಕುಳಿತು ಸುದ್ದಿ ಹೇಳುವುದು ಕಮ್ಮಿ ಆಗಿರಲಿಲ್ಲ . ಮೆಲ್ಲಗೆ ಕನಸುಗಳು ಮನದಲ್ಲಿ ಕಾಲಿಡಿತ್ತಿದ್ದುದು ನನಗೆ ಅರಿವಾಗುತ್ತಿತ್ತು . ಇಂಜಿನಿಯರಿಂಗ್ ಮಾಡಲೆಂದು ಬೆಂಗಳೂರಿಗೆ ಬಂದವನು ಹಾಸ್ಟೆಲ್ ವ್ಯವಸ್ಥೆ ಆಗುವ ವರೆಗೂ ನಮ್ಮಲ್ಲೇ ಇದ್ದ . ಆಗ ನನ್ನ ಕನಸುಗಳು ಮತ್ತಷ್ಟು ಗಟ್ಟಿ ಆಗ ತೊಡಗಿದ್ದವು . ಅವನನ್ನೇ ಮದುವೆ ಆಗಬೇಕೆನಿಸುತ್ತಿತ್ತು . ಅವನಿಗೆ ಹೇಳಬೇಕೆಂದರೂ ಆಗದ ನಾಚಿಕೆ. ಅವನು ಎಂಜಿನಿಯರಿಂಗ್ ಮುಗಿಸಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ ಮೇಲೂ ಆಗೀಗ ಮನೆಗೆ ಬರ್ತಿದ್ದ. ಅಪ್ಪ ಅಮ್ಮ ನನಗೆ ಮದುವೆ ಮಾಡುವ ತಯಾರಿಯಲ್ಲಿದ್ದರು. ಮನೆಗೆ ಬಂದವನಿಗೆ .
"ನಮ್ಮ ರೂಪಾಗೆ ಗಂಡು ನೋಡ್ತಾ ಇದೀವಿ. ನಿಂಗ್ಯಾರಾದ್ರೂ ಒಳ್ಳೆ ಹುಡುಗ ಗೊತ್ತಿದ್ರೆ ಹೇಳು ಮಾರಾಯ , ನೀನು ಸಣ್ಣ ಇದ್ದಾಗಿಂದ ನೋಡಿದ ಹುಡುಗಿ " ಅಮ್ಮ ಹೇಳುತ್ತಿದ್ದರೆ , ನನ್ನ ಎದೆ ಬಡಿತ ಏರುತ್ತಿತ್ತು . ಇವನೇ ಅಡ್ಡಿಲ್ಲ ನಂಗೆ ಎಂದು ಹೇಳಿಬಿಡಲೇ ಎಂಬ ತುಡಿತ . ಹೊರಡುವಾಗ ಅವನು ನನ್ನನ್ನು ಕರೆದ . ನಾನು ಬಯಸಿದ್ದನ್ನು ಅವನು ಹೇಳಬಹುದೇನೋ ಎಂದು ಕಲ್ಪಿಸಿ ಪುಳಕಗೊಂಡೆ .

" ರೂಪಾ , ನಿಂಗೆ ಇಂಥದ್ದೇ ಹುಡುಗ ಬೇಕು ಅಂತ ಏನಾದ್ರೂ ಇದ್ರೆ , ನಂಗೆ ಹೇಳು . ನೋಡ್ತೀನಿ, ಎಷ್ಟೆಂದ್ರೂ ಚೈಲ್ಡ್ ಹುಡ್ ಫ್ರೆಂಡ್ ನೀನು . ಸಂಕೋಚ ಮಾಡ್ಕೋಬೇಡ " ಎಂದು ನಕ್ಕು , ತಲೆ ಮೇಲೆ ಮೆಲ್ಲಗೆ ತಟ್ಟಿ ಹೊರಟೆ ಹೋದ !
ನನ್ನ ಕನಸುಗಳು ಚೂರಾದಂತೆನಿಸಿತು . ಪೂರ್ತಿ ಗೊಂದಲ ! ಹಾಗಿದ್ದರೆ , ಅವನಿಗೆ ನನ್ನ ಬಗ್ಗೆ ಏನೂ ಭಾವನೆಗಳೇ ಇರಲಿಲ್ಲವೇ? ಅದು ಬರೀ ಸ್ನೇಹ ಮಾತ್ರನಾ ? ನಾನಷ್ಟೇ ಪ್ರೀತಿ -ಪ್ರೇಮ ಅಂತ ಕನಸು ಕಾಣ್ತಿದ್ದೆನಾ ? ಏಕೋ ನನಗೆ ಅರಗಿಸಿಕೊಳ್ಳುವುದು ಕಷ್ಟ ಆಗ್ತಾ ಇತ್ತು. ಕೆಲವು ದಿನ ಮಂಕಾಗಿದ್ದೆ .
ಮತ್ತೆ ಇವೆಲ್ಲವನ್ನೂ ಕೊಡವಿಕೊಂಡು ಬಿಟ್ಟೆ . ಅವನಿಗೆ ನನ್ನ ಬಗ್ಗೆ ಸ್ನೇಹವಲ್ಲದೆ ಮತ್ತೇನೂ ಭಾವನೆ ಇರದಾಗ , ನಾನು ಏನೋ ಕಲ್ಪಿಸಿಕೊಂಡು ಬೇಜಾರಾಗುವುದರಲ್ಲಿ ಅರ್ಥವಿಲ್ಲ ಎನಿಸಿತು. ದೀಪಕ್ ನ ಮದುವೆ ಆಗಿ ಅಮೆರಿಕಾಕ್ಕೆ ಹಾರಿ ಬಿಟ್ಟೆ . ಕ್ರಮೇಣ ಇವೆಲ್ಲ ಮರೆತೇ ಹೋದಂತಾಯಿತು. ನೆನಪಾದರೂ ನನ್ನ ಹುಚ್ಚುತನವನ್ನು ನೆನೆದು " ಸಿಲ್ಲಿ " ಅನಿಸುವಷ್ಟು .
ಈಗ 20 ವರ್ಷಗಳ ನಂತರ ಮತ್ತೆ ಅವನು ಎದುರು ಬಂದಾಗ ಹಳೆಯದೆಲ್ಲ ನೆನಪಾಗಿ ಬಿಟ್ಟಿತು .
ಸಂಜೆ ವಿನಯನ ಮನೆಗೆ ಹೊರಡಲು ತಯಾರಾಗುತ್ತಿದ್ದೆ. ತಂದಿದ್ದ ಕೆಲವೇ ಡ್ರೆಸ್ ಗಳು ತೊಳೆದು ಒಣಗುತ್ತಿದ್ದವು. ಇದ್ದ ಒಂದೆರಡು ಸೀರೆಗಳು ರೇಶಿಮೆಯವು . ಏನು ಹಾಕಿಕೊಂಡು ಹೋಗುವುದು ಎಂಬ ತಲೆಬಿಸಿಯಲ್ಲಿದ್ದೆ .

ಅತ್ತಿಗೆ ಹೇಳಿದ್ಲು. "ಅಯ್ಯೋ ನೀನು ಪ್ಯಾಂಟ್ ಹಾಕ್ಕೊಂಡೆ ಹೋಗೆ . ಅಡ್ಡಿಲ್ಲ . ಈಗೆಲ್ಲ ಯಾರೂ ಅಷ್ಟೆಲ್ಲ ಮಾತಾಡಲ್ಲ ಬಟ್ಟೆ ಬಗ್ಗೆ. ಅದ್ರಲ್ಲೂ ಊರಲ್ಲಿ ಎಲ್ಲರಿಗೂ ಗೊತ್ತು ನೀನು ಅಮೆರಿಕಾದಲ್ಲಿರೊಳು ಅಂತ " ಎನ್ನುತ್ತಾ ನಕ್ಕು ಬಿಟ್ಟಳು .
ಸರಿ ಎಂದು , ಜೀನ್ಸ್ ಏರಿಸಿ ಒಂದು ಕುರ್ತಾ ಹಾಕಿ ರೆಡಿ ಆದೆ . ಮಾಧವಿಯ ಜೊತೆ ಹೆಜ್ಜೆ ಹಾಕಿದೆ .

ಅವನ ಮನೆ ಇದ್ದಲ್ಲೇ ಇತ್ತು . ಸ್ವಲ್ಪ ಹೊಸರೂಪ ಪಡೆದಿತ್ತು . ಗೇಟ್ ಶಬ್ದವಾದಾಗ , ಹೊರಗೆ ಬಂದವನು , ಎಲೆ ಅಡಿಕೆ ತುಪ್ಪಿ, ಬಾಯ್ತುಂಬಾ ನಗುತ್ತಾ ಬನ್ನಿ ಬನ್ನಿ ಎಂದು ಕರೆದ .
ಒಳಗೆ ಹೋಗಿ ಖುರ್ಚಿಯ ಮೇಲೆ ಕೂತೆವು .
ಸೀರೆ ಸೆರಗಿಗೆ ಕೈ ಒರೆಸುತ್ತಾ ಬಂದ ಹೆಂಡತಿಯನ್ನು, ಓದುತ್ತಾ ಕುಳಿತದ್ದ ಮಗನನ್ನು ಪರಿಚಯಿಸಿದ . ಬೇಡವೆಂದರೂ ಎರಡೆರಡು ಬಾರಿ ಶಿರಾ ಬಡಿಸಿದಳು ಅವನ ಹೆಂಡತಿ. ಚಹಾ ಕುಡಿಯುತ್ತಾ ಶುರುವಾದ ಹರಟೆ ಮುಗಿಯುತ್ತಲೇ ಇರಲಿಲ್ಲ .
ಹಳೆಯದನ್ನೆಲ್ಲ ನೆನಪಿಸಿಕೊಂಡು ನಕ್ಕೆವು. ಅವನ ಹೆಂಡತಿಯೂ ಆಸಕ್ತಿಯಿಂದ ಕೇಳುತ್ತಿದ್ದಳು .

ಅಷ್ಟರಲ್ಲಿ ಮಾಧವಿಯ ಮೊಬೈಲ್ ರಿಂಗಣಿಸಿತು. ಮಾತಾಡಿದವಳು , "ಅಕ್ಕಾ ನಾನು ಅರ್ಜೆಂಟ್ ಮನೆಗೆ ಹೋಗ್ಬೇಕು. ನಿನ್ನ ಭಾವ ಬಂದಿದಾರಂತೆ . ನೀನು ಆರಾಮಾಗಿ ಸುದ್ದಿ ಹೇಳ್ಕೊಂಡು ಆಮೇಲೆ ಬಾ . "
ನಂಗೆ ಒಮ್ಮೆಲೇ ಮುಜುಗರ ಎನಿಸ ತೊಡಗಿತು.
ಅಷ್ಟ್ರಲ್ಲಿ ಅವನೇ ಹೇಳಿದ , "ನೀ ಹೋಗು ಮಾಧವಿ, ಇವಳು ಸಲ್ಪ ಹೊತ್ತು ಇರಲಿ. ತುಂಬಾ ವರ್ಷ ಆಯ್ತು. ಮತ್ತೆ ಸಿಗೋದು ಯಾವಾಗ್ಲೋ ! ನಾನು ಬಿಟ್ಟು ಕೊಡ್ತೇನೆ ಅವಳಿಗೆ".

ಮಾಧವಿ ಹೋದಮೇಲೂ ತಾಸುಗಟ್ಟಲೆ ನಾವು ಹರಟುತ್ತಿದ್ದೆವು. ಮನೆ , ಜಮೀನು, ಮಕ್ಕಳು , ಅಮೆರಿಕಾ , ಅದು ಇದು ಏನೇನಿಲ್ಲ !
" ನೀನು ಅಷ್ಟೇನೂ ಬದಲಾಗಿಲ್ಲ ನೋಡು . ಇನ್ನೂ ಚಿಕ್ಕ ಹುಡುಗಿ ತರಾನೇ ಕಾಣಿಸ್ತೀಯ , ಹಾಗೆ ಮಾತಾಡ್ತೀಯಾ" ಎಂದು ತಮಾಷೆ ಮಾಡಿದ . "ನಾನು ನೋಡು ಹೇಗಾಗಿದೀನಿ ಅಂತ! ಏನೋ ನನ್ನ ಹೆಂಡ್ತಿ ಇನ್ನು ನನ್ನ ಜೊತೆ ಇದಾಳೆ ನನ್ನ ಪುಣ್ಯ" ಎಂದು ನಕ್ಕ.

ನಂಗೆ ಕುತೂಹಲವಾಗಿ ಕೇಳಿದೆ . "ಹೌದೂ ,ನೀನು ಜಾಬ್ ಮಾಡ್ತಾ ಇದ್ಯಲ್ಲ ಮಾರಾಯ ? ಮತ್ತೆ ಯಾಕೆ ಬಿಟ್ಟೆ ? ಊರಿಗೆ ಯಾವಾಗ್ ಬಂದೆ ? "

ಅವನು ಗಂಭೀರನಾದ . ದೊಡ್ಡ ಉಸಿರು ಬಿಟ್ಟು ಹೇಳಿದ. "ಅಯ್ಯೋ ದೊಡ್ಡ ಕತೆ ! ನಾಲ್ಕೇ ವರ್ಷ ನಾನು ಜಾಬ್ ಮಾಡಿದ್ದು. ಯಾಕೋ ಸರಿ ಹೋಗಲಿಲ್ಲ. ಅಷ್ಟೊತ್ತಿಗೆ , ಅಪ್ಪಂಗೆ ಬಿದ್ದು ಕಾಲು ಮುರೀತು . ಆವಾಗ ನೋಡ್ಕೊಳೋಕೆ ಅಂತ ಮನೆಗೆ ಬಂದವನಿಗೆ ವಾಪಸ್ ಹೋಗ್ಬೇಕು ಅನಿಸಲಿಲ್ಲ . ಇಲ್ಲೇ ಉಳ್ಕೊಂಡು ಬಿಟ್ಟೆ. ಇರೋದ್ರಲ್ಲಿ ಅದು ಇದು ಅಂತ ಮಾಡ್ಕೊಂಡ್ ಆರಕ್ಕೆ ಹೆಚ್ಚಿಲ್ಲ ಮೂರಕ್ಕೆ ಕಮ್ಮಿ ಇಲ್ಲ ಅನ್ನೋ ತರಾ ಇದೆ ಜೀವನ. , ಶ್ರೀಮಂತಿಕೆ ಇಲ್ಲದೆ ಹೋದ್ರೂ ಕೊರತೆ ಅಂತೇನು ಇಲ್ಲ . ಜೀವನಕ್ಕೆ ಸಾಕು . ಕಷ್ಟಪಟ್ಟು ಒಂದ್ ಮದ್ವೆ ಮಾಡ್ಕೊಂಡೆ , ಅದೂ ಈಗ ಊರಲ್ಲಿರೋರಿಗೆ ಹೆಣ್ಣು ಕೊಡೋಲ್ಲ ನೋಡು , ಅದ್ಕೆ ಹೇಳಿದ್ದು ಕಷ್ಟ ಪಟ್ಟು ಮದ್ವೆ ಅಂತ ." ದೊಡ್ಡದಾಗಿ ನಕ್ಕ .
ಅವನ ಹೆಂಡತಿ ಹುಸಿಮುನಿಸಿನಿಂದ ಅವನತ್ತ ನೋಡಿದ್ದು ಕಂಡಿತು .
ಅಂತೂ ಹೊರಗೆ ಸುಮಾರು ಕತ್ತಲಾದಾಗ , ನಾನು ಎದ್ದೆ .
"ಲೇಟಾಗೋಯ್ತು ಹೊರಡ್ತೀನಿ . "

"ಇರು , ಒಬ್ಳೆ ಬೇಡ . ನಾನು ಬಿಟ್ ಕೊಡ್ತೀನಿ" ಎಂದು ಎದ್ದ . ಅವನ ಹೆಂಡತಿಯೂ ದನಿಗೂಡಿಸಿದಳು .

ಅರಿಶಿನ ಕುಂಕುಮ ಇಟ್ಟು ಒಂದು ಸೀರೆಯನ್ನು ಕೈಲಿಟ್ಟಳು. "ನಿಂಗೆ ಇಷ್ಟ ಆಗತ್ತೋ ಇಲ್ವೋ , ಅರ್ಜೆಂಟಲ್ಲಿ ಇವರು ತೊಗೊಂಡ್ ಬಂದ್ರು" ಎಂದು ಸಂಕೋಚದಿಂದ ಹೇಳಿದಳು .

ಹೆಗಲಿಗೊಂದು ಟವೆಲ್ ಹಾಕಿ ಹೋರಟ. "ನೀನ್ ನೋಡು ಟಿಪ್ ಟಾಪ್ ಆಗಿ ಪ್ಯಾಂಟ್ ಹಾಕಿ ಬಂದಿದ್ಯ. ನಾನು ಹೀಗೆ ಹಳೆ ಲುಂಗಿ ಬನಿಯನ್ ! "ನಕ್ಕ .
ನಿಧಾನವಾಗಿ ಹೊರಟೆವು .ಗದ್ದೆಯಲ್ಲಿ ನಡೆಯುತ್ತಿರುವಾಗ ತಲೆಯಲ್ಲಿ ನೂರೆಂಟು ಪ್ರಶ್ನೆಗಳು . ಅಕಸ್ಮಾತ್ ನಾನು ಇವನನ್ನು ಮದುವೆ ಆಗಿದ್ದರೆ ,ಈಗ ಇದೇ ಹಳ್ಳಿಯಲ್ಲಿರುತ್ತಿದ್ದೆ. ಒಂದು ಹಳೆ ಸೀರೆಯನ್ನೂ, ನೈಟಿಯನ್ನೋ ಹಾಕಿರುತ್ತಿದ್ದೆ. ಮನೆ- ಮಕ್ಕಳು , ನೆಂಟರು ,ಕೊಟ್ಟಿಗೆಯ ಪ್ರಪಂಚದಲ್ಲಿ. ಬೆಂಗಳೂರಲ್ಲಿ ಹುಟ್ಟಿ ಬೆಳೆದವಳು ಇಲ್ಲಿಗೆ ಹೊಂದಿಕೊಳ್ಳುತ್ತಿದ್ದೆನಾ? ಸಾಧ್ಯವಾಗದಿದ್ದರೆ ಬೇರೆ ಆಪ್ಷನ್ ಇತ್ತಾ? ಅವನಿಗೆ ಹಳ್ಳಿ ಜೀವನ ಇಷ್ಟ . ಆದರೆ ನಂಗೆ ಸರಿ ಹೋಗ್ತಾ ಇತ್ತಾ ? ಯಾಕೋ , ಆಗಿದ್ದೆಲ್ಲ ಒಳಿತೇ ಆಯಿತು ಎಂದೆನಿಸಿಬಿಟ್ಟಿತು . ಆದರೂ ಒಂದು ಕುತೂಹಲ ಕಾಡ್ತಾನೇ ಇತ್ತು . ಅವನಿಗೆ ನಿಜಕ್ಕೂ ನನ್ನ ಬಗ್ಗೆ ಯಾವ ಭಾವನೆಗಳೂ ಇರಲಿಲ್ವಾ? ಇವತ್ತು ಕೇಳಿಯೇ ಬಿಡಬೇಕೆನಿಸಿತು.

ಅಷ್ಟರಲ್ಲಿ ಪಿಚಕ್ ಎಂದು ಎಲೆ ಅಡುಕೆ ತುಪ್ಪಿದವನನ್ನು ಕೇಳಿದೆ "ಎಂತ ಮಾರಾಯ ಬಿಡದೆ ಕವಳ ಹಾಕ್ತೀಯಲ್ಲ? "
ನಕ್ಕು ಬಿಟ್ಟ . "ಏನ್ ಮಾಡೋದೇ ? ಊರಿಗೆ ಬಂದ ಮೇಲೆ ಇಲ್ಲಿನವರ ಜೊತೆ ಸೇರಿ ಅಭ್ಯಾಸ ಆಗೋಗಿದೆ ಬಿಡಬೇಕು ಅಂದ್ರೆ ಕಷ್ಟ . "
"ವಿನಯ, ಒಂದು ವಿಷ್ಯ ಕೇಳಲಾ ? ಹುಚ್ಚು ಎನಿಸ ಬಹುದು ನಿಂಗೆ , ಆದ್ರೆ ನಿಜ ಹೇಳು ನಿಂಗೆ ಯಾವತ್ತೂ ನನ್ನ ಬಗ್ಗೆ ಏನೂ ಫೀಲಿಂಗ್ಸ್ ಇರಲೇ ಇಲ್ವಾ? "

ನಿರೀಕ್ಷಿಸಿರದ ಪ್ರಶ್ನೆಗೆ ಮೌನವಾಗಿಬಿಟ್ಟ . ಒಂದೇ ಕ್ಷಣ ! ಮತ್ತೆ ನಕ್ಕು ಬಿಟ್ಟ .
"ಎಂತ ಹುಡುಗಿ ಮಾರಾಯ್ತಿ. ಹಂಗೆಲ್ಲಾ ಇದಿದ್ರೆ , ನೀನು ಇವತ್ತು ಈ ಹಳ್ಳಿ ಮೂಲೇಲಿ ದನ ಕರೀತಾ ಇರ್ಬೇಕಾಗ್ತಿತ್ತು ನೋಡು ! ಈಗ ಎಷ್ಟ್ ಆರಾಮಾಗಿ , ಅಮೆರಿಕಾದಲ್ಲಿ ಝಂ ಅಂತ ಕಾರಲ್ಲಿ ಓಡಾಡ್ಕೊಂಡು, ವಿಮಾನದಲ್ಲಿ ಹಾರಾಡಿಕೊಂಡು ಇದೀಯಾ . ಹುಚ್ಚು ಯೋಚನೆ ಮಾಡ್ಬೇಡ. " ಅದೇ ಆತ್ಮೀಯತೆಯಿಂದ ತಲೆ ಮೇಲೆ ಮೆಲ್ಲಗೆ ತಟ್ಟಿದ .
ಅಷ್ಟ್ರಲ್ಲಿ ಮನೆ ಬಂತು. ಗೇಟ್ ತೆಗೆಯುವಷ್ಟರಲ್ಲಿ , "ನಾ ಮತ್ತೆ ಒಳಗೆ ಬರೋದಿಲ್ಲ . ನೀ ಸಿಕ್ಕಿದ್ದು , ಇಷ್ಟೊತ್ತು ಕೂತು ಮಾತಾಡಿದ್ದು ತುಂಬಾ ಖುಷಿ ಆಯಿತು ರೂಪಾ . ಇನೊಂದ್ಸಲ ಯಾವಾಗ ಸಿಗೋದೋ ಗೊತ್ತಿಲ್ಲ . ಮತ್ತೆ ಭಾರತಕ್ಕೆ ಬಂದಾಗ ಸಾಧ್ಯ ಆದಾಗೆಲ್ಲ ಬಂದು ಹೋಗು . ಖುಷಿ ಆಗತ್ತೆ "ಅಂದ .

ಹೃದಯ ಭಾರವಾದಂತೆನಿಸಿ ಅವನ ಕೈ ಹಿಡಿದು ಒತ್ತಿದೆ ." ಖಂಡಿತಾ ಬರ್ತೀನಿ ಕಣೋ . ನಂಬರ್ ಇದೆಯಲ್ಲ ಈಗ . ವಾಟ್ಸ್ ಅಪ್ ಮಾಡು ಯಾವಾಗಾದ್ರೂ ." ಎಂದು ಗೇಟ್ ತೆಗೆದೆ .

" ರೂಪಾ " ಕರೆದ ಅವನು . ತಿರುಗಿದೆ .
"ನಿಜ ಅಂದ್ರೆ , ನಿನ್ನ ಮದ್ವೆ ಆದ್ಮೇಲೆ ಯಾಕೋ ಬೆಂಗಳೂರಲ್ಲಿ ಇರ್ಬೇಕು ಅನಿಸ್ಲಿಲ್ಲ ಕಣೇ . ಅದ್ಕೆ ಅಪ್ಪನ ಕಾಲು ಮುರಿದಿದ್ದೇ ನೆವ ಮಾಡಿ ಊರಿಗೇ ಬಂದ್ಬಿಟ್ಟೆ. ಅಷ್ಟೇ ಮತ್ತೇನೂ ಕೇಳ್ಬೇಡ "
ಅವನು ಬಿರಬಿರನೆ ಹೆಜ್ಜೆ ಹಾಕುತ್ತಾ ನಡೆದು ಬಿಟ್ಟ .

ನಾನು ಕಲ್ಲಾಗಿ ನಿಂತುಬಿಟ್ಟೆ . ಯಾಕೋ ಪ್ರಶ್ನೆ ಕೇಳಿ ತಪ್ಪು ಮಾಡಿಬಿಟ್ಟೆ ಎನಿಸಿಬಿಟ್ಟಿತು.

October 28, 2020

ಕಲ್ಲಾದವಳು

  ಋಷಿಮುನಿಗಳಿಗೆ  ಮದುವೆ  ಎನ್ನುವುದು  ಜೀವನದಲ್ಲಿ  ಆಗಲೇ ಬೇಕಾದ ಅನಿವಾರ್ಯತೆಯೇ ಹೊರತು  ಯಾವುದೇ ಬಗೆಯ ಸಂತೋಷಕ್ಕಲ್ಲ . 

ಸಂತಾನ, ಅದರಲ್ಲೂ ಪುತ್ರ ಸಂತಾನವಿಲ್ಲದಿದ್ದಲ್ಲಿ ಸದ್ಗತಿ  ದೊರೆಯುವುದು ಹೇಗೆ  ಎಂಬ ಒಂದೇ ಕಾರಣಕ್ಕಾಗಿ ಮದುವೆ ! 
ಅಲ್ಲದೆ ಮನುಷ್ಯನಾಗಿ ಹುಟ್ಟಿದ ಮೇಲೆ  ೪ ಆಶ್ರಮಗಳನ್ನು  ನಿಭಾಯಿಸ ಬೇಕೆಂಬ ನಿಯಮ . 
ಬ್ರಹ್ಮಚರ್ಯದಿಂದ  ಗ್ರಹಸ್ಥಾಶ್ರಮಕ್ಕೆ  ಹೋಗಲೇ ಬೇಕಾದ ಅನಿವಾರ್ಯತೆ.  

ಮದುವೆ ಇವರಿಗೆ ಕೇವಲ  ಪಿತೃ ಋಣ  ಕಳೆಯಲಿಕ್ಕಷ್ಟೇ. 
ಕೈ ಹಿಡಿದ ಹೆಣ್ಣಿನ ಬಗ್ಗೆ  ಹೆಚ್ಚು ಯೋಚಿಸುವುದು ಎಂದರೆ  ತಮ್ಮ ತಪಸ್ಸು ಅನುಷ್ಟಾನಕ್ಕೆ  ಭಂಗ ತರುವುದು ಎಂಬ ಭಾವನೆ. 

 ಪ್ರತಿನಿತ್ಯದ ಅಗ್ನಿಹೋತ್ರಕ್ಕೆ  ಸರ್ವವನ್ನೂ ಸಿದ್ಧ ಗೊಳಿಸುವುದು, ಸಮಯಕ್ಕೆ ಸರಿಯಾಗಿ  ತಮ್ಮ ಎಲ್ಲಾ ಅಗತ್ಯಗಳನ್ನೂ  ನೋಡಿಕೊಳ್ಳುವುದು. ಆಶ್ರಮಕ್ಕೆ ಬರುವ ಅತಿಥಿ ಅಭ್ಯಾಗತರ  ಸತ್ಕಾರಗಳನ್ನು  ಗೋವುಗಳ , ವಟುಗಳ , ವಿದ್ಯಾರ್ಥಿಗಳ ದೇಖರೇಖೆ  ಇವೆಲ್ಲವುಗಳನ್ನು  ನಿರ್ವಹಣೆಗೆ   ಪತ್ನಿ ಬೇಕು . ಅಷ್ಟೇ. 
ಆಕೆಯ ಇಷ್ಟಾನಿಷ್ಟಗಳು,  ಕಷ್ಟಗಳು, ಉಳಿದ ಯಾವುದೇ ಭಾವನೆಗಳಿಗೆ  ಇಲ್ಲಿ ಬೆಲೆಯಿಲ್ಲ ! 
ವರ್ಷದ  ಹೆಚ್ಚಿನ ದಿನಗಳು ಆಶ್ರಮದಿಂದ ದೂರದಲ್ಲೆಲ್ಲೋ  ತಪಸ್ಸಿನಲ್ಲಿ  ಅಥವಾ ಪ್ರಪಂಚ ಪರ್ಯಟನೆಯಲ್ಲಿ ಕಳೆಯುವವರು  ಸಂತಾನಾಭಿಲಾಷಿಗಳಾಗಿ ಮಾತ್ರ ಕೆಲ ಸಮಯವನ್ನು ಪತ್ನಿಯೊಂದಿಗೆ ಕಳೆಯುತ್ತಾರೆ . 
ಅದೂ ಕೂಡ  ತೀರಾ ಯಾಂತ್ರಿಕವಾಗಿ ಮಾತ್ರ . 

ಪತ್ನಿ ಗರ್ಭಿಣಿಯಾದರೆ , ಮಕ್ಕಳಾದರೆ ಅವರ ಮುಖ್ಯ  ಕರ್ತವ್ಯ ಪೂರೈಸಿದಂತೆ. 
ಗೌತಮರೂ ಕೂಡ ಇದಕ್ಕೆ ಹೊರತಲ್ಲ . ಆದರೆ  ನಾನು ತಪಸ್ವಿನಿಯಲ್ಲ !  ಎಲ್ಲರಂತೆ ಆಸೆಗಳು ನನಗೂ ಇವೆ. ಅವುಗಳನ್ನು ಹತೋಟಿಯಲ್ಲಿಡುವುದು ನನಗೆ ಬಹು ಕಷ್ಟದ ವಿಷಯ. 

ಆಶ್ರಮದ ಎಳೆಯ ದಂಪತಿಗಳನ್ನು ನೋಡುವಾಗ ಎದೆಯಲ್ಲಿ ಏನೋ ಚುಚ್ಚುತ್ತದೆ. 
ಆ ನವ ವಧುವಿನ ಮುಖದ  ಹೊಳಪು , ನಾಚಿ ಕೆಂಪಾದ ಕದಪು  ಮಧುರ ಭಾವಗಳನ್ನು ಮೀಟುತ್ತವೆ . ಆದರೆ ನನ್ನ  ಅದೃಷ್ಟ ಅಷ್ಟು ಒಳ್ಳೆಯದಿಲ್ಲ !

ಇನ್ನೂ ಯೌವನ ತುಂಬಿದ ವಯಸ್ಸು  ನನ್ನದು. ಬಯಕೆ ತುಂಬಿದ  ದೇಹ ನನ್ನದು  ಏನೇನೋ ಬೇಡುತ್ತದೆ ಒಮ್ಮೊಮ್ಮೆ . ಆದರೆ ಗೌತಮರು  ಅಂಥಾ ಬಯಕೆಗಳನ್ನು ನಿಗ್ರಹಿಸಿಕೊ ಎಂಬ ಸಲಹೆ  ನೀಡುತ್ತಾರೆ.  ಅವರ ಪ್ರಕಾರ ಪತಿ ಪತ್ನಿಯರ ನಡುವೆ ದೈಹಿಕ ಸಂಬಂಧ  ಪುತ್ರ ಸಂತಾನಕ್ಕಾಗಿ ಬೇಕಾದ ಅನಿವಾರ್ಯತೆ.  ಅದೊಂದು ಕರ್ತವ್ಯ ಮಾತ್ರ .  ಮನಸ್ಸಿನ ಕಾಮನೆಗಳನ್ನು  ಪ್ರೋತ್ಸಾಹಿಸ ಬಾರದು ಎಂಬುದು ಅವರ ಅಭಿಪ್ರಾಯ . 
ಆದರೆ ಹೇಳಿದೆನಲ್ಲ? ನಾನೊಬ್ಬ ಸಾಧಾರಣ ಮನುಷ್ಯಳು . ಪ್ರಕೃತಿ ಸಹಜ ಬಯಕೆಗಳು ನನ್ನನ್ನು ಕಾಡುತ್ತವೆ ಎಂದು ?

ಇಂಥಾ ಒಂದು  ದಿನದಲ್ಲಿ ' ಆತ ' ಬಂದ . ಗೌತಮರದೆ ವೇಷದಲ್ಲಿ .  ಮೊದಲ ನೋಟಕ್ಕೆ  ನಾನು  ನಂಬಿಬಿಟ್ಟೆ. ನಿತ್ಯದ ಅನುಷ್ಠಾನಕ್ಕೆಂದು  ಹೋದವರು ಅದೇಕೆ ಇಷ್ಟು ಬೇಗ ಬಂದುಬಿಟ್ಟರೆ?  ನನ್ನ ನೆನಪಾಗಿ ಬರಲಿಲ್ಲವಷ್ಟೆ?   ಇನ್ನೂ  ಬೆಳಕು ಹರಿದಿರಲಿಲ್ಲ .  ನನ್ನನ್ನು ಬಳಿಗೆ ಕರೆದಾಗ ಅತೀವ ಆಶ್ಚರ್ಯದಿಂದ ಉಬ್ಬಿ ಹೋದೆ. ನನಗೆ ಸಂಶಯವೂ ಸಂತೋಷವೂ ಒಟ್ಟಿಗೆ ಆಗುತ್ತಿತ್ತು

" ಅಹಲ್ಯೆ , ನೀನಿಷ್ಟು ಚೆಲುವೆ ಎಂಬುದನ್ನು ಇಷ್ಟು ವರ್ಷ ನಾನು ಗಮನಿಸಲೇ ಇಲ್ಲವಲ್ಲೆ ? "  ಎನ್ನುತ್ತಾ ಬಳಿ ಸೆಳೆದರು. 

ಆದರೆ ಒಮ್ಮೆ ಕಣ್ಣಲ್ಲಿ ಕಣ್ಣಿಟ್ಟು ನೋಡಿದಾಗ ನನಗೆ ಸಂಶಯ ಬಂತು . ಮೊದಲ ಸ್ಪರ್ಶದಲ್ಲಿ ಖಚಿತವಾಗಿಬಿಟ್ಟಿತು. ಇದು ಗೌತಮರಲ್ಲ ಎಂದು. 
 ಅದೆಷ್ಟೇ ಚೆನ್ನಾಗಿ ವೇಷ ಬದಲಿಸಿದರೂ ಕೂಡ  ಹೆಣ್ಣಿಗೆ ತನ್ನ ಪತಿಯ ಗುರುತು ತಿಳಿಯದೆ ? ಅದರಲ್ಲೂ ಏಕಾಂತದಲ್ಲಿರುವಾಗ !

ಆದರೂ ಆ ಕ್ಷಣದಲ್ಲಿ ನಾನು ಸೋತು ಬಿಟ್ಟಿದ್ದೆ. ಮನಸ್ಸು ಬುದ್ಧಿಯ ಹಿಡಿತಕ್ಕೆ ಸಿಕ್ಕುತ್ತಿರಲಿಲ್ಲ  ! ಆ ಸ್ಪರ್ಶ , ಬಿಸಿಯುಸಿರು ನನಗೆ ಮೈಮರೆಸುತ್ತಿತ್ತು . ಇಷ್ಟು ಕಾಲ ನನ್ನಲ್ಲಿ ಬಂದಿಯಾಗಿದ್ದ ಕಾಮನೆಗಳು ಒಮ್ಮೆಲೇ ಭುಗಿಲೆದ್ದವು . ಆ ಜ್ವಾಲೆಗೆ ಆತನ ಪಿಸುಮಾತುಗಳು ತುಪ್ಪ ಸುರಿದು ಮತ್ತಷ್ಟು ಜ್ವಲಿಸುವಂತೆ ಮಾಡು ತ್ತಿದ್ದವು. ಸಮಯ ಮೀರಿಲ್ಲ ಎಚ್ಚೆತ್ತುಕೊ ಎಂದು ಎಚ್ಚರಿಸುತ್ತಿದ್ದ ನನ್ನ  ಬುದ್ಧಿಯನ್ನು ಕತ್ತಲಲ್ಲಿ ಕೂಡಿಹಾಕಿಬಿಟ್ಟೆ ! ಆ ಕ್ಷಣ ನನಗೆ  ಅದೆಲ್ಲವೂ ಬೇಕಿತ್ತು . ನಾನು ಆ ಜ್ವಾಲೆಯಲ್ಲಿ ಕರಗಿ ಬಿಟ್ಟೆ !

ಆ ಮಧುರ ಕ್ಷಣಗಳು ಬೇಗನೆ ಕಳೆದು ಹೋದವು .
ಕೆಲ ಸಮಯದಲ್ಲೇ  " ದೇವಿ, ನನಗೆ ಈಗ ಹೊರಡಲೇ ಬೇಕಿದೆ . ನಿನ್ನ ಮೇಲಿನ ಆಸೆಯಿಂದ  ಮರಳಿ ಬಂದೆ . ಆದರೆ ಇನ್ನು ನಿಲ್ಲುವುದಿಲ್ಲ . " ಎಂದು ಹೊರಟಾಗ,  ಮಂದ  ಬೆಳಕಲ್ಲಿ  ಮುಖ ನೋಡಿದೆ . ಮರೆಸಿಕೊಂಡಿದ್ದ ವೇಷ  ಹಾಸಿಗೆಯಲ್ಲಿ, ಬೆವರಿನಲ್ಲಿ ಅರ್ಧ  ಕಳಚಿ ಹೋಗಿತ್ತು . ಅವನ್ಯಾರೆಂಬುದು ನನಗೆ ತಿಳಿದು ಬಿಟ್ಟಿತು ! 
ಅವನಾಗಲೇ ಬಾಗಿಲ ಬಳಿಯಿದ್ದ. 

" ನಿಲ್ಲು ! ನೀನ್ಯಾರೆಂದು ನನಗೆ ಈಗ  ತಿಳಿದು ಬಿಟ್ಟಿದೆ . ಆ ಒಂದು ಗಳಿಗೆಯಲ್ಲಿ ನಾನು ಜಾರಿ ಬಿಟ್ಟೆ. ಅದು ನನ್ನ  ತಪ್ಪು .  ಆದರೆ ಮತ್ತೆಂದೂ ಇತ್ತ ಸುಳಿಯ ಬೇಡ . ಚೆನ್ನಾಗಿರುವುದಿಲ್ಲ "   

" ಅಹಲ್ಯೆ , ನನ್ನನ್ನು ಕ್ಷಮಿಸು. ನಿನ್ನಂಥ ಚೆಲುವೆಯನ್ನು ನೋಡಿ ನನ್ನ ಮನಸ್ಸು ನಿಲ್ಲಲಿಲ್ಲ . ಹೀಗಾಗಿ ಈ ರೀತಿ ಮಾಡಿದೆ . ಇನ್ನು ಹೀಗಾಗುವುದಿಲ್ಲ  "  ಎಂದವನೇ  ನಡೆದುಬಿಟ್ಟ . 

ನಾನು  ಬಚ್ಚಲಿಗೆ ಹೋಗಿ  ತಣ್ಣೀರು ಸುರಿದುಕೊಂಡೆ . ನನ್ನ ಪರಿಸ್ಥಿತಿಯ ಬಗ್ಗೆ ನನಗೆ ಕೆಟ್ಟದೆನಿಸುತ್ತಿತ್ತು.  ನನ್ನ ಸಂಯಮ ಕಳೆದುಕೊಂಡಿದ್ದಕ್ಕೆ , ಪರಪುರುಷನೊಂದಿಗೆ ರಮಿಸಿದ್ದಕ್ಕೆ ನನ್ನ ಮೇಲೆ ನನಗೆ ಅಸಹ್ಯ ಎನಿಸುತ್ತಿತ್ತು . 

ಅದೇ ಕ್ಷಣ  ಆಲೋಚನೆಗಳು ಬೇರೊಂದು ದಿಶೆಯಲ್ಲೂ ನಡೆಯುತ್ತಿದ್ದವು . 
ಪ್ರಕೃತಿ ಸಹಜವಾದ ಬಯಕೆಗಳನ್ನು   ಬದಿಗೊತ್ತಲೇ ಬೇಕಾಗಿದ್ದು ಅಗತ್ಯವೇ ? ಅನಿವಾರ್ಯವೇ? ಪತಿಯಾದವನಿಗೆ ತನ್ನ ಪತ್ನಿಯ ಸಹಜ ಬಯಕೆಗಳನ್ನು ಪೂರೈಸುವ ಬಾಧ್ಯತೆ ಇಲ್ಲವೇ? ದೈಹಿಕ ಕಾಮನೆಗಳನ್ನು ಕಡೆಗಣಿಸುವುದು  ಅಥವಾ ಅಂಥಾ ಆಸೆಗಳನ್ನು ತಪ್ಪೆಂದುಕೊಳ್ಳುವುದು  ಸರಿಯೇ? ಅದು ಎಲ್ಲರಿಂದ ಸಾಧ್ಯವೇ? ಋಷಿ ಪತ್ನಿಯಾದ ಮಾತ್ರಕ್ಕೆ ನಾನು ಇವೆಲ್ಲವುಗಳಿಂದ ಹೊರತಾಗಿಬಿಡುವೆನೆ? ಅಂಥಾ ಸಂಯಮ ನನ್ನಲ್ಲಿದೆಯೇ?  ಅಷ್ಟಕ್ಕೂ  ನಾನು ಧನ ಕನಕಗಳನ್ನು , ಐಶ್ವರ್ಯವನ್ನು, ಸುಪ್ಪತ್ತಿಗೆಯನ್ನು ಎಂದೂ ಬಯಸಲಿಲ್ಲ !  ನಾನು ಬಯಸಿದ್ದು  ಪ್ರೀತಿಯ ಸಾಂಗತ್ಯ ! ಅದೂ ಪತಿಯಿಂದಲೇ ! ಅದು ತಪ್ಪೇ?
ದೈಹಿಕವಾಗಿ ಕೂಡುವಿಕೆ  ಕೇವಲ ಸಂತಾನಕ್ಕಾಗಿ ಮಾತ್ರ . ಸಂತೋಷಕ್ಕಲ್ಲ . ಅದರಿಂದ ಪರಮಾತ್ಮನ ಚಿಂತನೆಯಲ್ಲಿ ತೊಡಗುವ ಋಷಿಮುನಿಗಳ  ತಪಸ್ಸಾಧನೆಯಲ್ಲಿ ಭಂಗ ಬರುತ್ತದೆ  ಎಂದು  ಯಾರು ಹೇಳಿದರೋ ! ಇದೊಂದು ರೀತಿಯಿಂದ  ಪ್ರಾಣಿಗಳು ಸೇರುವಂತೆಯೇ ಆಯಿತಲ್ಲ? 
ಅತ್ತಿತ್ತ ಹರಿಯುತ್ತಿದ್ದ ನನ್ನ ಆಲೋಚನೆಗಳು  ಈಗ ಆಗಿ ಹೋಗಿದ್ದನ್ನು ಎಲ್ಲೋ ಒಂದು ಕಡೆ ಕ್ಷೀಣವಾಗಿ ಸಮರ್ಥಿಸುತ್ತಿವೆ ಎನಿಸಿತು. 
ಆದರೆ , ನಾನೀಗ ಕಠೋರಳಾಗಿದ್ದೆ.  ಕಾರಣವೇನೆ ಇದ್ದರೂ , ನಾನು ನನ್ನ ಮನಸ್ಸನ್ನು ಹತೋಟಿಯಲ್ಲಿಡಲಾಗದ್ದು  ನನ್ನ ದೌರ್ಬಲ್ಯ ಎನಿಸಿಬಿಟ್ಟಿತು . ಅದನ್ನು ಎಂದಿಗೂ ಕ್ಷಮಿಸಲಾರೆ .  ಗೌತಮರು ಬರುತ್ತಲೇ , ಅವರಲ್ಲಿ ಎಲ್ಲವನ್ನೂ ನಿವೇದಿಸಿ ತಪ್ಪೊಪ್ಪಿಕೊಳ್ಳಬೇಕು , ಇನ್ನೆಂದೂ ಹೀಗಾಗದು , ಒಂದೇ ಒಂದು ಅವಕಾಶ ಕೊಡಿ ಎಂದು ಬೇಡಿಕೊಳ್ಳ ಬೇಕು  ಪ್ರಾಯಶ್ಚಿತ್ತವಾಗಿ   ಅವರೇನೇ ಶಿಕ್ಷೆ ವಿಧಿಸಿದರೂ  ಅದನ್ನು ಸ್ವೀಕರಿಸಬೇಕು ಎಂದು ನಿಶ್ಚಯಿಸಿದ್ದೆ. 
ಮುಂದಿನ ಅದೆಷ್ಟೋ ಕ್ಷಣಗಳನ್ನು  ಕಣ್ಣೀರಲ್ಲಿ , ಪಶ್ಚಾತ್ತಾಪದಲ್ಲಿ  ಕಳೆದೆ . 

ಕೆಲ ಸಮಯದಲ್ಲಿ ಗೌತಮರು ಬಂದರು . ಅವರಿಗಾಗಲೇ ಹೇಗೋ ವಿಷಯ ತಿಳಿದಿತ್ತು.  ಕೋಪದಿಂದ ಕುದಿಯುತ್ತಲೇ ಬಂದವರು ನನ್ನ ಮೇಲೆ ಕೆಂಡ ಕಾರತೊಡಗಿದರು.  ಅದು ಸಹಜವೇ , ನಾನು  ಇದನ್ನು ನಿರೀಕ್ಷಿಸಿಯೇ ಇದ್ದೆ. 
"ಎಷ್ಟು ದಿನದಿಂದ ಈ ನಾಟಕ ನಡೆದಿದೆ?  ಇವನೊಬ್ಬನೆಯೋ ? ಮತ್ತೂ ಇದ್ದಾರೋ ? "

"ಸ್ವಾಮೀ , ನಾನು ತಪ್ಪು ಮಾಡಿದ್ದೇನೆ ನಿಜ . ಆದರೆ , ಇದು ಮೊದಲ ಹಾಗೂ ಕಡೆಯ ತಪ್ಪು.  ಆತ ನಿಮ್ಮ ವೇಷದಲ್ಲಿ ಬಂದ . ನಾನು ಒಳಗೆ ಕರೆದುಕೊಂಡೇ. ನಿಜದ ಅರಿವಾದಾಗ , ನಾನು ಮೈಮರೆತು ಬಿಟ್ಟಿದ್ದೆ.  ಇದು ನನ್ನ ತಪ್ಪು . ಇದನ್ನು ನಾನು ಒಪ್ಪಿಕೊಳ್ಳುತ್ತೇನೆ , ನನ್ನನು ಕ್ಷಮಿಸಿ "

"ಅಂದರೆ , ನನ್ನ ವೇಷದಲ್ಲಿ ಯಾರು ಬೇಕಾದರೂ ಬಂದು  ನಿನ್ನನ್ನು ಮರುಳು ಮಾಡಬಹುದೋ?  ಇದೊಂದು ನೆವ ಹೇಳಬೇಡ .  ಇನ್ನೆಷ್ಟು  ಜನರೊಂದಿಗೆ ಹೀಗೆ ನಡೆದಿದೆಯೋ ! "    
ಕೋಪದಿಂದ ಗೌತಮರ ಮೈ ನಡುಗುತ್ತಿತ್ತು . ಕಣ್ಣುಗಳು ಕಿಡಿ ಕಾರುತ್ತಿದ್ದವು. 

ನಾನು ನಡುಗಿಬಿಟ್ಟೆ . ಆದರೆ ಧೈರ್ಯದಿಂದ ಹೇಳಿದೆ. 
 "ಆರ್ಯರೇ, ನಾನು ಹೇಳುತ್ತಿರುವುದು ನಿಜ.  ನಮ್ಮ ಮದುವೆಯಾದ ಇಷ್ಟು ವರ್ಷಗಳಲ್ಲಿ ಹೀಗೆಂದೂ ಆಗಿರಲಿಲ್ಲ.  ಇದು ಮೊದಲ ಬಾರಿ ಹಾಗೂ ಕೊನೆಯ ಸಲ ಕೂಡ. ನನ್ನ ತಪ್ಪನ್ನು ನಾನು ಒಪ್ಪಿಕೊಂಡಿದ್ದೇನೆ. ಅದಕ್ಕೆ ಪ್ರಾಯಶ್ಚಿತ್ತಕ್ಕೂ ತಯಾರಿದ್ದೇನೆ.  ಆದರೆ ನಾನು ಸುಳ್ಳು ಹೇಳುತ್ತಿರುವೆ  ಎಂದೋ , ಸದಾ ಪರಪುರುಷರ ಸಹವಾಸದಲ್ಲಿದ್ದೇನೆ ಎಂದೋ  ಅಪವಾದ ಹೊರಿಸಬೇಡಿ . 
ಈಗಲಾದರೂ ಸಹ , ನಾನು  ನೀವೇ ಎಂಬ ಭ್ರಮೆಯಲ್ಲಿ ಅವನನ್ನು ಕೂಡಿದೆ.  ಸಾಧಾರಣ ಮನುಷ್ಯಳಾದ ನನ್ನ ಮನಸಿನಲ್ಲಿ ಅದುಮಿಟ್ಟ ಸಹಜ ಬಯಕೆಗಳು  ನನ್ನ ಭ್ರಮೆಯ ಪಟ್ಟಿಯನ್ನು  ಭದ್ರವಾಗಿಸಿ ಬಿಟ್ಟವು. ದಯವಿಟ್ಟು ನನ್ನನ್ನು ಕ್ಷಮಿಸಿ "

"ನಿರ್ಲಜ್ಜ  ಹೆಣ್ಣು ನೀನು.  ನಿನ್ನ ತಪ್ಪಿಗೆ ನನ್ನನ್ನು ಕಾರಣವಾಗಿಸುತ್ತೀಯಾ?  ನಿನಗಿಲ್ಲಿ ಜಾಗವಿಲ್ಲ . ಈಗಲೇ ಹೊರಡು. ಈ ಆಶ್ರಮದ ಸುತ್ತ ಮುತ್ತೆಲ್ಲೂ ಕಾಣಿಸಬೇಡ. ನಿನ್ನಂಥವಳ  ಜೊತೆ ಸಂಸಾರ ಮಾಡಿದ ಪಾಪ ತೊಳೆಯಲು ನಾನು ಇನ್ನೆಷ್ಟು ತಪಸ್ಸು ಮಾಡಬೇಕೋ ! ತೊಲಗು ಇಲ್ಲಿಂದ "
ಗೌತಮರ ಧ್ವನಿ ಆಶ್ರಮದಲ್ಲಿ ಮೊಳಗುತ್ತಿತ್ತು .
 ಕುಟೀರದ  ಹೊರಗೆ ಕುತೂಹಲದಿಂದ ಇಣುಕುವ  ಕಣ್ಣುಗಳು ಕಾಣ ತೊಡಗಿದವು.  ನಿಂತ ನೆಲ ಕುಸಿಯಬಾರದೇ  ಎಂದೆನಿಸಿತು . 

"ಸ್ವಾಮೀ, ನಾನೆಲ್ಲಿ ಹೋಗಲಿ ? ಇಲ್ಲಿಯೇ ಒಂದು ಮೂಲೆಯಲ್ಲಿ ನನ್ನ ನೆರಳೂ ನಿಮಗೆ ಸೋಕದಂತೆ ಇದ್ದುಬಿಡುತ್ತೇನೆ. ದಯವಿಟ್ಟು ಕ್ಷಮಿಸಿ  , ಒಂದೇ ಒಂದು ಅವಕಾಶ ಕೊಟ್ಟು ನೋಡಿ"
 ಗಂಟಲುಬ್ಬಿ ಬಂದು ಹೇಳುವಾಗ ಕಣ್ಣೀರು ಹರಿಯುತ್ತಿತ್ತು . 

"ಎಲ್ಲಿ ಬೇಕಾದರೂ ಹೋಗು. ನಿನ್ನ ಗೆಳೆಯನಲ್ಲಿ  ಹೋಗಿರು.  ನಿನಗೇಕೆ  ಸಂಸಾರ ? ನನಗೂ ನಿನಗೂ ಇನ್ನು ಯಾವ ಸಂಬಂಧವೂ ಇಲ್ಲ ! ಮಹಾವಿಷ್ಣುವೆ ಬಂದು ನೀನು ಪವಿತ್ರಳು ಎಂದು ಹೇಳಲಿ ಆಗ ನಿನ್ನನ್ನು ಪರಿಗ್ರಹಿಸುತ್ತೇನೆ . ಹ್ಞೂ , ಇನ್ನೂ ಏಕೆ ನಿಂತಿದ್ದೀಯಾ? ಈ ಕ್ಷಣ ಇಲ್ಲಿಂದ ತೊಲಗು " 
ಮತ್ತೊಮ್ಮೆ  ದನಿ ಅಪ್ಪಳಿಸಿತು . 

ಅಪಮಾನದಿಂದ ಹಿಡಿಯಷ್ಟಾಗಿ ತಲೆ ತಗ್ಗಿಸಿ ಬೆನ್ನು ಬಾಗಿಸಿಕೊಂಡು ಅಲ್ಲಿಂದ ಹೊರಟುಬಿಟ್ಟೆ. 
ಆಶ್ರಮದ ಪರಿಸರವನ್ನು ದಾಟಿ  ಬಂದು  ಅಲ್ಲೇ ಇದ್ದ ವಿಶಾಲವಾದ ಮರದ ಬುಡದಲ್ಲಿ ನಿಂತೆ

ನಾನು ಚೂರಾಗಿದ್ದೆ.  ನನ್ನ ತಪ್ಪಿತ್ತು ನಿಜ . ಆದರೆ , ಅದನ್ನು ಒಪ್ಪಿಕೊಂಡಿದ್ದೆ. ಪ್ರಾಯಶ್ಚಿತ್ತಕ್ಕೂ  ತಲೆಬಾಗಿದ್ದೆ. ಆದರೆ,ಇದು ಏಕೆ ಘಟಿಸಿತು ಎಂಬ ಹಿನ್ನೆಲೆಯನ್ನು ಅವರು ಪರಿಗಣಿಸಲಿಲ್ಲವೇಕೆ? ಹೀಗೇಕೆ ಮಾಡಿದೆ  ಒಂದು ಸಲ ಕೇಳ  ಬಹುದಿತ್ತು. ಇದೇ ಮೊದಲು, ಇದೆ ಕಡೆ ಎಂದು ನಾನು ಸಾರಿ ಸಾರಿ ಹೇಳಿದ್ದನ್ನು ನಂಬ ಬಹುದಿತ್ತು. ಒಂದೇ ಒಂದು ಅವಕಾಶ ಕೊಡಬಹುದಿತ್ತು .  ಕೊಟ್ಟ ಶಿಕ್ಷೆ ಅನುಭವಿಸಲು ತಯಾರಿದ್ದೆ  . ಆದರೆ , ಅಪವಾದವನ್ನು ಎಲ್ಲರೆದುರು ಸಾರಬೇಕಿತ್ತೆ?  ತಪ್ಪು ನನ್ನೊಬ್ಬಳದು ಮಾತ್ರ ವೇ?  ತಪ್ಪೆಸಗಲು  ಅವರೂ ಕಾರಣರಲ್ಲವೇ? ಕಾರಣವಾದವರಿಗೆ ಪಾಪವಿಲ್ಲವೇ? ಒಮ್ಮೆ ಅಪರಾಧ  ನಡೆದುಹೋಯಿತು.  
ನಿಜ . ಆದರೆ ಅದು ಒಮ್ಮೆ ಮಾತ್ರವೇ ಆಗಿದ್ದು. ಹಿಂದೆಂದೂ ಆಗಿರಲಿಲ್ಲ, ಮುಂದೆಯೂ ಆಗುತ್ತಿರಲಿಲ್ಲ. ಆದರೆ ಅಪವಾದ ಮಾತ್ರ ಅಜೀವ ಪರ್ಯಂತವೇ! 
ಮುಂದೇನೋ ಒಂದು ಕಾಲದಲ್ಲಿ ಮಹಾವಿಷ್ಣುವೇ ಅವತಾರವೆತ್ತಿ ಬಂದು ನನ್ನ ಪಾವಿತ್ರ್ಯವನ್ನು  ಧೃಢಪಡಿಸಿದಾಗ ಮಾತ್ರ  ಮರಳ ಬಹುದು ಎಂದರಲ್ಲ ?  ಏನರ್ಥ?  ಮಹಾವಿಷ್ಣುವಿನ ಆಗಮನದ ವರೆಗೆ ನಾನು ನನ್ನ ಕಳಂಕವನ್ನು ಹೊತ್ತೇ ತಿರುಗಬೇಕೇ? ನನ್ನ  ಬೇಡಿಕೆಗೆ  ಮನ್ನಣೆಯಿಲ್ಲವೇ? ಪತಿ ಪತ್ನಿಯರ ನಡುವಿನ   ಈ ಸಮಸ್ಯೆ ಯನ್ನು ನಾವು ನಾವೇ ಪರಿಹರಿಸಿಕೊಳ್ಳಲು ಸಾಧ್ಯವಿಲ್ಲವೇ?  ನಾನು  ಪರಿಶುದ್ಧಳೆಂದು ಯಾರೋ  ಮೂರನೆಯವರೇ ಹೇಳ ಬೇಕೆ? 

ಸಾವಿರ ಪ್ರಶ್ನೆಗಳು  ತಲೆಯಲ್ಲಿ ತಿರುಗತೊಡಗಿದವು .  ಇಂಥಾ ಬದುಕು ಬೇಕೇ  ಎನಿಸತೊಡಗಿತು.  ಅಪರಾಧಕ್ಕೆ ಪಶ್ಚತ್ತಾಪದಿಂದ ಪ್ರಾಯಶ್ಚಿತ್ತ ಎಂದು ಕೇಳಿದ್ದೆ. ಆದ್ರೆ ಅದು ಸುಳ್ಳಾಯಿತಲ್ಲ ಎನಿಸಿತು . ಮನಸ್ಸು ಒಮ್ಮೆಲೇ ನಿರ್ಲಿಪ್ತವಾಯಿತು.  ಎಲ್ಲ ಭಾವಗಳೂ  ನಶಿಸಿಹೋದವು . 

 ಮನಸು  ಕಲ್ಲಾಯಿತು ! ನಾನು ಕಲ್ಲಾಗಿಬಿಟ್ಟೆ !



 

October 18, 2020

ಹೆಸರಿಲ್ಲದ ಕಥೆ !

 


"ಮಾವಾ,   ಅಯ್ಯೋ ಮಳೆ ಶುರು ಆಗ್ತಿದೆ ಒಳಗಡೆ ಬನ್ನಿ .  ಟೀ ಮಾಡಿದೀನಿ  ಆರೋಗತ್ತೆ ಬನ್ನಿ . "

ಸವಿತಾ  ಹೊರಗೆ ಗಾರ್ಡನ್ ಲ್ಲಿದ್ದ ಮಾವನನ್ನು ಕರೆದಳು . 

ಸೊಸೆಯ ದನಿ ಕೇಳಿ ಗಡಬಡಿಸಿದ  ಶಂಕರಣ್ಣ  ಒಳಗೆ ಬಂದರು . 

ಕೈ ಕಾಲು ತೊಳೆದು  ಡೈನಿಂಗ್ ಟೇಬಲ್ ಹತ್ತಿರ ಬರೋ ಹೊತ್ತಿಗೆ  ಸೊಸೆ ಬಿಸಿಬಿಸಿ ಟೀ  ಕಪ್ ತಂದು ಎದುರಿಗಿಟ್ಟಳು . 

"ಮಳೆ ಬರೋ  ಹೊತ್ತಿಗೆ  ಅಲ್ಲೇನ್ ಮಾಡ್ತಿದ್ರಿ ಮಾವ?  ಗಾಳಿ ಬೇರೆ ಇದೆ . ಶೀತ ಶುರು ಆದ್ರೆ ಕಷ್ಟ ಅಲ್ವ ?" 

"ಅದೂ..  ಅವತ್ತು  ನೆಟ್ಟಿದ್ದ  ಗುಲಾಬಿ ಗಿಡಕ್ಕೆ ಮೊಗ್ಗೆನಾದ್ರೂ ಬಂತಾ ಅಂತ .. "

"ಅಯ್ಯೋ,  ಈಗಿನ್ನೂ  ಚಿಗುರ್ತಾ ಇದೆ ಅದು . ಇಷ್ಟ್ ಬೇಗ ಮೊಗ್ಗೆಲ್ಲಿಂದ ಬರ್ಬೇಕು .  ಸ್ವಲ್ಪ ದಿನ ನೀವು ಆಚೆ ಹೋಗ್ಬೇಡಿ ಹೆಚ್ಚು.  ವೆದರ್ ಬೇರೆ ಸರಿ ಇಲ್ಲ . "  ತನ್ನ ಟೀ ಕಪ್ ನಿಂದ ಚಹಾ ಗುಟುಕರಿಸುತ್ತ ಹೇಳಿದಳು ಸವಿತಾ . 

"ನೀ ಹೇಳೋದು ಸರೀನೇ . ಆದ್ರೆ , ಮನೇಲೆ ಕೂತು ಕೂತು  ಕಾಲು ಜೋಮು ಹಿಡಿಯತ್ತೆ  ಸ್ವಲ್ಪ ಗಾರ್ಡನ್ ಲ್ಲಿ  ಓಡಾಡಿದ್ರೆ , ಆಚೆ ವಾಕಿಂಗ್ ಹೋದ್ರೆ ಸಮಾಧಾನ . ಅದೂ ಮನೇಲೆ ಕೂತು ಅಭ್ಯಾಸ ಬೇರೆ ಇಲ್ವಲ್ಲಮ್ಮ ? "

"ಹಾಗಿದ್ರೆ, ಜಾಸ್ತಿ ಹೊತ್ತು ಹೋಗ್ಬೇಡಿ. ಗಾಳಿ ತುಂಬಾ ಇದೆ .  ಬೇಕಾದ್ರೆ , ಸಿಟ್  ಔಟ್ ನಲ್ಲೋ , ಮೇಲ್ಗಡೆ ಬಾಲ್ಕನಿಲೋ  ಕೂತ್ಕೊಳ್ಳಿ. "

"ಸರಿ ಬಿಡು ." ಟೀ  ಕುಡಿದು ಎದ್ದ  ಶಂಕರಣ್ಣ   ನಿಧಾನವಾಗಿ  ತಮ್ಮ ರೂಮಿಗೆ ಹೋದರು . 

ಒಂದೂವರೆ ವರ್ಷದ ಹಿಂದೆ ಅತ್ತೆ ತೀರಿಕೊಂಡಮೇಲೆ  ಒಬ್ಬರೇ  ಊರಲ್ಲಿ ಬೇಡ ಎಂದು ತಾನೇ ಒತ್ತಾಯಿಸಿ ಮಾವನನ್ನು  ಇಲ್ಲಿಗೆ ಕರೆದುಕೊಂಡು ಬಂದಿದ್ದಳು . 
ಅವರಿನ್ನೂ  ಪತ್ನಿಯ  ನೆನಪಿಂದ ಆಚೆ ಬಂದಿಲ್ಲ ಎಂದು ಎಷ್ಟೋ ಸಲ ಅನಿಸುತ್ತಿತ್ತು . 

ಯಾಕೋ ಇತ್ತೀಚೆ ಎರಡು ಮೂರು ತಿಂಗಳಿಂದ   ಅವರ  ನಡವಳಿಕೆ  ಸ್ವಲ್ಪ ಬದಲಾದಂತೆ ಅವಳ ಮನಸಿಗೆ ಭಾಸವಾಗುತ್ತಿತ್ತು. 
ಹೆಚ್ಚು ಹೊತ್ತು ಮನೆಯ ಹೊರಗೆ ಗಾರ್ಡನ್ ಲ್ಲಿ  ಕಾಲ ಕಳೆಯು ತ್ತಿದ್ದರು . ಓದುವಾಗಲೂ  ಅಲ್ಲಿದ್ದ ಜೋಕಾಲಿ ಮೇಲೆ ಕುಳಿತು ಓದುತ್ತಿದ್ದರು . ಆಚೆ ನೋಡುತ್ತಾ  ಮೈ ಮರೆತು ಕುಳಿತು ಬಿಡುತ್ತಿದ್ದರು . ಯಾರಾದರೂ ಕರೆದರೆ , ಗಾಬರಿಯಾಗಿ ಎದ್ದು ಬರುತ್ತಿದ್ದರು . 

ಸವಿತಾ  ಇದನ್ನು ಕಿರಣನಿಗೆ  ಹೇಳಿದ್ದಳು. ಅವನು " ಅಪ್ಪಂಗೆ ಊರಿನ  ನೆನಪಾಗ್ತಿರಬೇಕು ಕಣೆ . ಎಷ್ಟಂದ್ರೂ ಜೀವನ ಎಲ್ಲ ಅಲ್ಲೇ ಕಳೆದಿದ್ದಲ್ವ?   ಮಕ್ಕಳಿಗೆ ರಜೆ ಶುರು ಆದ್ಮೇಲೆ  ಊರಿಗೆ ಹೋಗಿ ಸ್ವಲ್ಪ ದಿನ ಇದ್ದು ಬರೋಣ. ಅಪ್ಪಂಗೂ ಸಮಾಧಾನ ಆಗ್ಬಹುದು "

 ಹೌದೆನಿಸಿದರೂ ಯಾಕೋ ಅವಳ ಮನಸ್ಸಿಗೆ ಪೂರ್ತಿ ಸಮಾಧಾನ ಆಗಲಿಲ್ಲ . 
 ಸುಮಾರು ಒಂದು ವಾರದ ನಂತರ ಒಂದು ಸಂಜೆ  ಮೊಬೈಲ್ ನೋಡುತ್ತಾ ಕುಳಿತಿದ್ದಳು . 
  
"ಅಮ್ಮಾ, ಅಜ್ಜ ಎಲ್ಲಿ  ? " ಎನ್ನುತ್ತಾ  ಬಂದ  ನಿಯತಿ  ಅಮ್ಮನ ಪಕ್ಕ ಕುಳಿತಳು . 

 "ಆಚೆ ಗಾರ್ಡನ್ ಲ್ಲಿರಬೇಕು . ಯಾಕೆ? "

 ಒಮ್ಮೆ ಹೊರಗೆ ಇಣುಕಿ ಕಂಫರ್ಮ್  ಮಾಡಿಕೊಂಡ ನಿಯತಿ  ಮೆಲ್ಲಗೆ 
 "ಅಮ್ಮಾ,   ನಿಂಗೆ ಏನೋ ಹೇಳ್ಬೇಕು  " 

ಸವಿತಾಳ ಎದೆ ಧಸಕ್ಕೆಂದಿತು . 15 ರ ಮಗಳು  ಏನು ಹೇಳುತ್ತಾಳೋ ಎಂದು  ಎದೆ ಢವಗುಟ್ಟಿತು . 

" ಅಮ್ಮಾ, ಇತ್ತೀಚೆ  ಅಜ್ಜ ಸ್ವಲ್ಪ ಬೇರೆ ತರಾ ಆಡ್ತಿದಾರೆ ಅನ್ಸಲ್ವಾ ?  " 

 ಸಮಾಧಾನದ ಉಸಿರು ಬಿಟ್ಟ ಸವಿತಾಗೆ ಅಷ್ಟೇ ಕುತೂಹಲವೂ ಆಯಿತು . ತನಗನಿಸಿದ್ದೆ ಮಗಳಿಗೂ ಅನಿಸ್ತಾ ಇದೆ ಅಂದ್ರೆ .. 

" ಏನೋ ಯೋಚ್ನೆ ಮಾಡ್ತಿರ್ತಾರೆ, ಮುಂಚೆಗಿಂತ ನೀಟಾಗಿ ಡ್ರೆಸ್  ಮಾಡ್ಕೋತಾರೆ " 

" ಯೋಚ್ನೆ ಮಾಡ್ತಿರೋದು ಗಮನಿಸ್ದೆ . ಆದ್ರೆ  ಡ್ರೆಸ್ ಮಾಡ್ಕೊಳೋದು  ಗಮನಿಸಲಿಲ್ವಲ್ಲೇ ನಾನು ? . ಆದ್ರೆ , ಅದ್ರಲ್ಲೇನು ? ಪಾಪ, ಏನೋ ಸ್ವಲ್ಪ  ಫ್ರೆಶ್ ಆಗಿರೋಣ  ಅನಿಸತ್ತೋ ಏನೋ " 

" ಅಲ್ಲಮ್ಮ, ನಾನು ಸ್ವಲ್ಪ ಸ್ಟಡಿ ಮಾಡಿದೆ  ಅಜ್ಜನ್ನ ! ಎದುರುಗಡೆ ಮನೆಗೆ ಹೊಸಾ ಫ್ಯಾಮಿಲಿ ಬಂದಾಗಿಂದ ಅಜ್ಜ ಸ್ವಲ್ಪ ಬದಲಾಗಿದ್ದಾರೆ " 

" ಅದಕ್ಕೂ ಇದಕ್ಕೂ ಏನೇ ಸಂಬಂಧ? " 

" ಇಲ್ಲಮ್ಮ, ನಿಜಕ್ಕೂ . ಮೊನ್ನೆ ಸಂಜೆ ಅಜ್ಜ ಆಚೆ ಹೋಗಿದ್ರಲ್ಲ ತುಂಬಾ ದಿನ ಆಯಿತು ವಾಕಿಂಗ್  ಹೋಗ್ತೀನಿ  ಅಂತ ?  ವಾಪಸ್ ಬರೋವಾಗ ಎದುರು ಮನೆ ಕಡೆ ನೋಡ್ತಾ ನಿಧಾನ ಬಂದ್ರು. ಅಷ್ಟೊತ್ತಿಗೆ  ಅವ್ರಮನೇಲಿ ಒಬ್ರು ಚಂದದ  ಅಜ್ಜಿ ಇದಾರೆ,  ಅವರು ಹೊರಗೆ ಬಂದು ಅಜ್ಜನ್ನ ನೋಡಿ   ಹಲೋ ಅಂತ ಕರದ್ರು .  ತಕ್ಷಣ ಅಜ್ಜ ಕೇಳಿಸದೇ ಇರೋತರ ಬೇಗ ಬೇಗ  ಮನೆಗೆ ಬಂದ್ಬಿಟ್ರು. ನಾನು  ಗಾರ್ಡನ್ ಲ್ಲಿದ್ದವಳು ನೋಡ್ತಾ ಇದ್ದೆ " 

" ಯಾರೋ ಕರದ್ರು ಅಂತ ಗಾಬರಿ ಆಗಿರ್ಬೇಕು ಕಣೆ " 

" ಅಯ್ಯೋ , ಅಮ್ಮ  ನನ್ನ ಅಬ್ಸರ್ವೇಶನ್  ಪ್ರಕಾರ , ಅಜ್ಜ ,  ಎದುರುಗಡೆ ಮನೆ ಅಜ್ಜಿ ನ ನೋಡ್ತಾ ಇರ್ತಾರೆ . ಅದಕ್ಕೆ , ಹೊರಗಡೇನೆ ಜಾಸ್ತಿ ಕಾಲ ಕಳೆಯೋದು . ಆದರೆ ಮಾತಾಡಲ್ಲ "

" ಸುಮ್ನಿರೇ , ಏನೇನೋ  ಮಾತಾಡಬೇಡ ." ಸವಿತಾ ಗದರಿದಳು . 

" ಅಮ್ಮಾ, ನಿಜ ಹೇಳ್ತಾ ಇದ್ದೀನಿ. ಬೇಕಾದ್ರೆ ನೀನೆ ಗಮನಿಸು " ನಿಯತಿ ಎದ್ದು ರೂಮಿ ಗೆ ಹೋದಳು . 

 ಸವಿತಾಗೆ ಯೋಚನೆ ಶುರುವಾಯ್ತು. 
 ಮಗಳು ಹೇಳಿದ್ದು ನಿಜ ಇರಬಹುದಾ? ಮಾವ ಆ ಹೆಂಗಸನ್ನು ಯಾಕೆ ನೋಡ್ತಾ ಇರ್ತಾರೆ?  ಪರಿಚಯದವರಿರಬಹುದಾ?  ಇದ್ದರೆ  ಮನೇಲಿ ಹೇಳ್ತಿದ್ರಲ್ವಾ?  ಕಿರಣಂಗಾದ್ರೂ  ಗೊತ್ತಿರ್ತಾ ಇರ್ತು. 
ಹಾಗಿದ್ರೆ  ಮಾವ ಏನಾದ್ರೂ ಆಕೆ ಬಗ್ಗೆ ...  "
 ಛೆ, ಹಾಗೆಲ್ಲ ಯೋಚ್ನೆ  ಯಾಕೆ ಮಾಡ್ತಾ ಇದ್ದೀನಿ   ಅಂತೆಲ್ಲ  ಕೊರೆಯೋಕೆ ಶುರು ಆಯ್ತು. 

ಗಂಡಂಗೆ ಹೇಳೋದಾ ಅಂದುಕೊಂಡಳು ಮತ್ತೆ .. ಬೇಡ ಯಾಕೆ ಸುಮ್ನೆ  ಅಂತ ಅನಿಸ್ತು. 

ಮಾವನ್ನ ಕೇಳಿ ಬಿಡೋದಾ ?  ಬೇಡ , ಸುಮ್ನೆ  ಅವರಿಗೆ ಮುಜುಗರ ತರೋದ್ಯಾಕೆ ? ಏನೋ ಕೇಳೋಕೆ ಹೋಗಿ ಅವ್ರಿಗೆ ಯಾಕೆ ಬೇಜಾರು ಮಾಡ್ಸೋದು  .  ಸವಿತಾಗೆ  ತಲೆ ಚಿಟ್ಟು ಹಿಡಿಯೋ ತರಾ ಆಯ್ತು . 

 ಮರುದಿನದಿಂದ  ಮಾವನನ್ನು ಹೆಚ್ಚು ಗಮನಿಸತೊಡಗಿದಳು . ಎಲ್ಲೋ ಒಂದು ಕಡೆ ಮಗಳು ಹೇಳಿದ್ದು ನಿಜವೇನೋ ಎಂಬ ಅನುಮಾನ ಶುರು ಆಯ್ತು . 

ಎರಡು ದಿನ ಬಿಟ್ಟು ಅವಳಿಗೇನೂ ಹೊಳೀತು. ಅದನ್ನೇ ಮಗಳಲ್ಲೂ ಹೇಳಿದ್ಲು . 

ಅವತ್ತು ಸಂಜೆ ಅಡುಗೆ ಮನೇಲಿ ಬ್ಯುಸಿ ಆಗಿದ್ದ ಸೊಸೆನ ನೋಡಿ , ಶಂಕರಣ್ಣ ತಮಾಷೆ ಮಾಡಿದ್ರು !
 ಏನು ಸವಿತಾ , ಏನೋ ಸ್ಪೆಷಲ್ ಮಾಡೋ ತರಾ ಇದೆ ? ಯಾರಾದ್ರೂ ಬರ್ತಿದಾರೆ?

" ಹೌದು ಮಾವ . ಅದೇ ಎದುರು ಮನೆಗೆ ಹೊಸಬರು ಬಂದಿದಾರಲ್ವ?  ಅವರನ್ನ  ಕಾಫಿಗೆ ಕರ್ದಿದೀನಿ . ಪರಿಚಯನೂ ಆಗತ್ತೆ ಅಂತ. "  
 ಮಾವ ಒಮ್ಮೆಲೇ ಗಾಬರಿ ಆಗಿದ್ದು , ಮುಖ ಸಣ್ಣಗಾಗಿದ್ದನ್ನು ಕುಡಿಗಣ್ಣಲ್ಲಿ ಗಮನಿಸಿದಳು . 

" ಒಹ್,  ಹೌದ ? ಸರಿ .  ನಾನು ಪಕ್ಕದ ಬೀದಿ ಪಾರ್ಕಿಗೆ ವಾಕಿಂಗ್  ಹೋಗ್ ಬರ್ತೀನಿ  " 

" ಮಾವ, ಕಿರಣ್ ಬೇರೆ ಬರೋದು ಎಷ್ಟೊತ್ತಿಗೋ ,  ನೀವು ಮನೇಲೆ ಇದ್ರೆ , ನಂಗೂ  ಅವ್ರೆಲ್ಲ ಬಂದಾಗ ಮಾತಾಡೋಕೆ  ಅನುಕೂಲ . ಪ್ಲೀಸ್ ಮನೇಲಿರ್ತೀರಾ ? 

 "ನಾನು ಏನು ಮಾತಾಡೋದು?  ಹಳ್ಳಿಯವ್ನು  .... "

ಅಷ್ಟೊತ್ತಿಗೆ ಕಾಲಿಂಗ್ ಬೆಲ್ ಶಬ್ದ ಆಯ್ತು. ಬಾಗಿಲು ತೆಗೆದ ನಿಯತಿ  " ಬನ್ನಿ ಬನ್ನಿ  ಎಂದು ಸ್ವಾಗತ ಮಾಡಿದ್ದೂ ಕೇಳ್ತು . 

" ಓಹ್ , ಬಂದ್ಬಿಟ್ರು ಅನ್ಸತ್ತೆ .ಬನ್ನಿ ಮಾವ " 

 ಬೇರೆ ದಾರಿಯಿಲ್ಲದೆ ಕಾಲೆಳೆಯುತ್ತಾ ಸೊಸೆಯನ್ನು ಹಿಂಬಾಲಿಸಿದರು  ಶಂಕರಣ್ಣ . 

 ಜಗುಲಿಯಲ್ಲಿ ಸೋಫಾ ಮೇಲೆ ಇಬ್ಬರು ಹೆಂಗಸರು ಒಬ್ಬ ೧೨-೧೩ ರ ಹುಡುಗನೂ ಕುಳಿತಿದ್ದರು . 
ಇವರನ್ನು  ನೋಡುತ್ತಲೇ , ವಯಸ್ಸಾದ ಹೆಂಗಸು  ಮುಖ ತುಂಬಾ ನಗು ತುಂಬಿಕೊಂಡು ಎದ್ದು ನಿಂತಳು . 
ಶಂಕರಣ್ಣ ನ ಕಾಲು ನಡುಗುತ್ತಿತ್ತು. 

"  ಸುಂಕನಳ್ಳಿ  ಶಂಕರ ಅಲ್ವ? " 

ಸವಿತಾ ಆಶ್ಚರ್ಯದಿಂದ ಅವರಿಬ್ಬರ ಮುಖ ನೋಡುತ್ತಿದ್ದಳು .  ಮಾವನ ಮುಖದಲ್ಲಿ ಗಾಬರಿ ಎದ್ದು ಕಾಣುತ್ತಿದುದು ವಿಚಿತ್ರವೆನಿಸಿತು . 

" ನಿಮಗೆ ಗೊತ್ತಾ  ಇವ್ರು ? "

" ಗೊತ್ತಿಲ್ದೆ? ಆ ದಿನ ನಾನು ಕರೀತಾ ಇದ್ದೀನಿ  ತನಗೆ ಅಲ್ವೇನೋ ಅನ್ನೋ ತರಾ  ಓಡೋಡಿ  ಮನೆಗೆ  ಹೋಗ್ಬಿಟ್ಟ  !"

ನಿಯತಿ ಹೇಳಿದ್ದು ಸುಳ್ಳಲ್ಲ ಹಾಗಿದ್ರೆ . ( ಏಕವಚನದಲ್ಲೇ ಮಾತಾಡಿಸ್ತಾರೆ  ಅಂದ್ರೆ .. ಅಷ್ಟು ಸಲಿಗೆ ಇತ್ತು ಅಂತಾನಾ? )  ಸವಿತಾ ಮಗಳ ಮುಖ ನೋಡಿದ್ಲು. 

" ನಾವಿಬ್ರೂ ಒಂದೇ ಕಾಲೇಜಲ್ಲಿ ಓದಿದ್ದು . ಒಂದು ವರ್ಷ ಸೀನಿಯರ್ ಇವನು ನನಗಿಂತ .  ಯಾಕೋ ಶಂಕರ ? ಗುರುತು ಸಿಗಲಿಲ್ವಾ? ನಾನು  ಚಂದ್ರಮತಿ . ಹೊಸಳ್ಳಿ ರಾಮಣ್ಣ ನ ಮಗಳು ! "

" ಹಾ... ನೆನಪಾಯ್ತು.  ಹೌದೋ ಅಲ್ವೋ ಅಂದ್ಕೋತಾ ಇದ್ದೆ . ತುಂಬಾ ವರ್ಷ ಆಗೋಯ್ತಲ್ವಾ ?  ವಯಸ್ಸು ಬೇರೆ ಆಯ್ತು .. ಹೀಗಾಗಿ ...  ತಪ್ಪು ತಿಳ್ಕೋಬೇಡ "   ಸಣ್ಣ ಧ್ವನಿಯಲ್ಲಿ ಹೇಳಿದರು ಶಂಕರಣ್ಣ   !

" ಪರವಾಗಿಲ್ಲ ಬಿಡು . .  ಇವಳು ನನ್ನ  ಸೊಸೆ . ಮಗ ಮಲ್ಟಿ ನ್ಯಾಷನಲ್ ಕಂಪೆನಿಲಿ ಇದಾನೆ . ನಾಲ್ಕು  ವರ್ಷ್  ಸಿಂಗಾಪುರದಲ್ಲಿದ್ರು. ಈಗ  ಇಲ್ಲಿಗೆ ಬಂದಿದಾರೆ. ಇಲ್ಲೇ ಮನೆ ತೊಗೊಂಡ್ರು . ನಂಗೂ ಒಳ್ಳೇದೇ ಆಯ್ತು. 
ನೀನು ಹೆಚ್ಚು ಬದಲಾಗಿಲ್ಲ. ಅದಕ್ಕೆ ನಿನ್ನ ನೋಡಿದ ತಕ್ಷಣ ಗುರ್ತು ಸಿಕ್ತು ನಂಗೆ ಆದ್ರೂ ಒಂ ದ್ಸಲ  ಕನ್ಫರ್ಮ್  ಮಾಡ್ಕೊಳೋಣ ಅಂತ ಅವತ್ತು ಕರದೆ . ನೀನು  ಗಾಬರಿ ಆಗಿ ಓಡಿ  ಬಂದೆ  ಮನೆಗೆ "  ಆಕೆ ದೊಡ್ಡದಾಗಿ ನಕ್ಕರು . 

ಆಮೇಲೆ ನಿಧಾನವಾಗಿ ಕಾಫಿ ಕುಡೀತಾ ಮಾತುಕತೆಗಳು ನಡೆದವು  ಒಂದು ಒಂದೂವರೆ ತಾಸಿನ ಮೇಲೆ  ಅವ್ರು ಎದ್ದರು . 

"ಸರಿ ತುಂಬಾ ಹೊತ್ತಾಯ್ತು ಮಾತಾಡ್ತಾ  ಹೊತ್ತು ಹೋಗಿದ್ದೆ ಗೊತಾಗ್ಲಿಲ್ಲ. ಖುಷಿ ಆಯ್ತು  ನಂಗಂತೂ " 

" ನಮಗೂ ಖುಷಿ ಆಯ್ತು ಆಂಟಿ. ಬರ್ತಿರಿ ನೀವು  . ಹೇಗೂ ಹಳೆ ಪರಿಚಯ ಇದೆ ಅಂತಾಯ್ತು " ಸವಿತಾ ನಕ್ಕಳು . 

" ಓಹೋ  ಖಂಡಿತಾ ! ಈಗ ಹೊರಡ್ತೀವಿ. ಶಂಕರ , ಈಗ ಹೇಗೂ ಗೊತ್ತಾಯತಲ್ಲ ನಾನೇ ಅಂತ ?  ಬಾ ಮನೆಗೆ . ಮಗನ ಪರಿಚಯನೂ  ಆಗತ್ತೆ . ಹಳೆ  ಸುದ್ದಿ  ಮಾತಾಡ್ತಾ ಕೂತ್ಕೋ ಬಹುದು " ಎಂದು ನಗುತ್ತ  ಆಮಂತ್ರಣ ಕೊಟ್ಟ ಚಂದ್ರಮತಿ ಹೊರಟರು. 

ಬಾಗಿಲು ಹಾಕಿ ಬಂದ  ಸವಿತಾ  
" ಏನ್ ಮಾವ ನೀವು ? , ಕಾಲೇಜ್ ಫ್ರೆಂಡ್ ಅಂತೇ  , ಮರ್ತೆ ಹೋಗ್ಬಿಟ್ಟಿದೀರಾ  ?  ನಕ್ಕಳು 

" ಗುರ್ತು ಸಿಕ್ಕಿತು ಕಣಮ್ಮ . ಆದ್ರೆ , ಹೇಗೆ ಕೇಳೋದು ?  ಆಮೇಲೆ ಅವಳಲ್ಲ ಅಂದ್ಬಿಟ್ರೆ  ಒಂಥರಾ ಆಗಲ್ವ?  ಅದಕ್ಕೆ .... " 

" ಸರಿ ಬಿಡಿ , ನಿಮಗೆ ಇನ್ನು ಮಾತಾಡೋಕೆ ಒಬ್ರು ಸಿಕ್ಕಿದ ಹಾಗಾಯ್ತು .  "   ಕಪ್ ಮತ್ತು ತಟ್ಟೆಗಳನ್ನು ಎತ್ತಿಕೊಂಡು  ಒಳಗೆ ಹೋದಳು ಸವಿತಾ . 

ಸ್ವಲ್ಪ ಹೊತ್ತಿಗೆ , ಹೊರಗೆ ಗಾರ್ಡನ್ ಲ್ಲಿ  ಜೋಕಾಲಿ ಮೇಲೆ ಕುಳಿತಿದ್ದ ಅಜ್ಜನ  ಪಕ್ಕ ಹೋಗಿ ಕುಳಿತ ನಿಯತಿ ,

"ಅಜ್ಜಾ, ಅವರು ನಿಮ್ ಕಾಲೇಜ್ ಜ್ಯುನಿಯರ್ ಅಂತೆ ?  ಅಷ್ಟು ಆರಾಮಾಗಿ  ನಿಮ್ಮನ್ನ ಮಾತಾಡಿಸ್ತಾ ಇದ್ರೂ ? ನಿಮಗೆ ನಿಜಕ್ಕೂ ನೆನಪಿರ್ಲಿಲ್ವ ?  

" ಅದೂ..  ಹೌದೋ ಅಲ್ವೋ ಅಂತ ಸಂಶಯ  ಬಂತು . ಸುಮ್ನೆ ಒಂದಕ್ಕೊಂದು ಆಗೋದು ಬೇಡ ಅಂತ  ಸುಮ್ನಾದೆ  ಪುಟ್ಟಿ  " 

"ಆದ್ರೂ ಅಜ್ಜಾ...  ಆ ಅಜ್ಜಿ ಈಗ್ಲೂ ಎಷ್ಟು ಚಂದ ಇದಾರೆ.  ಕಾಲೇಜ್ ಟೈಮ್ ಲ್ಲಿ   ಹೇಗಿರ್ಬಹುದು ? ನಿಜವಾಗ್ಲೂ  ನೀವು ಲೈನ್ ಗೀನ್ ಹೊಡೀಲಿಲ್ವ ಅಜ್ಜ?  "  ಕಿಚಾಯಿಸಿದಳು ನಿಯತಿ . 

 "ಏನೇನೋ ಅಂತೀಯಾ ? ತಲೆ ಹರಟೆ ? "

"ಅಲ್ಲ  ಅಜ್ಜ.. ಅವ್ರು ಎಷ್ಟು ಫ್ರೀ ಆಗಿ ಮಾತಾಡಿದ್ರು ನಿಮ್ಮತ್ರ ಹೋಗೋ ಬಾರೋ ಅಂತಾನೆ  ?  ನೀವು ನೋಡಿದ್ರೆ ....  " 

ಎರಡು ನಿಮಿಷ ಸುಮ್ಮನೆ ಕುಳಿತ ಶಂಕರಣ್ಣ    ಮುಜುಗರದಿಂದ  ಮೊಮ್ಮಗಳಿಗೆ ಹೇಳಿದರು . 

"ನಿಜ ಹೇಳ್ಳಾ  ? ನಂಗೆ ಅವಳು ತುಂಬಾ ಇಷ್ಟ ಆಗ್ತಾ ಇದ್ಲು . ಆದ್ರೆ ಅವಳಿಗೆ ಹೇಳೋಕೆ  ಧೈರ್ಯ ಬರ್ಲಿಲ್ಲ. 
ತುಂಬಾ ಕಷ್ಟ ಪಟ್ಟು ಒಂದು ಪತ್ರ ಬರೆದೆ .  ಎಡಗೈಲಿ . ಹ್ಯಾಂಡ್ ರೈಟಿಂಗ್  ಗೊತ್ತಾಗ್ಬಾರ್ದು ಅಂತ . ಹೆಸರು ಹಾಕ್ಲಿಲ್ಲ ನಂದು .  ಯಾರಿಗೂ ಕಾಣಿಸದ ಹಾಗೆ ಅವಳ ಡೆಸ್ಕಲ್ಲಿ ಇಟ್ಟು ಓಡಿ  ಬಂದಿದ್ದೆ. ಆದ್ರೆ , ಅದು ಇನ್ಯಾರ ಕೈಗೊ ಸಿಕ್ಕಿ  ತುಂಬಾ ಗಲಾಟೆ ಆಗೋಯ್ತು.  ಪ್ರಿನ್ಸಿಪಾಲ್ ವರೆಗೆ  ವಿಷಯ ಹೋಗಿ , ಅವ್ರು ಅವಳನ್ನ  ಕರೆಸಿ ,  ವಾರ್ನ್ ಮಾಡಿ, ಅವಳ ಮನೆಯೋರು ಕಾಲೇಜಿನಿಂದಾನೇ  ಬಿಡಿಸಿ  ಎಲ್ಲ ಆಗೋಯ್ತು. ಆಗೆಲ್ಲ ತುಂಬಾ ಸ್ಟ್ರಿಕ್ಟ್ ಅಲ್ವಾ?  ಇಷ್ಟೆಲ್ಲಾ ಆದಮೇಲಂತೂ ನಾನು ಇನ್ನೂ ಹೆದರಿ ಬಿಟ್ಟೆ.  ನನ್ನಿಂದ ಹೀಗಾಯ್ತು ಅಂತ  ತುಂಬಾ ಬೇಜಾರಾಯ್ತು ನಂಗೆ . ಅದು ಇನ್ನೂ ವರೆಗೂ ಕೊರೀತಾ ಇದೆ.  ಆ ಪತ್ರ ಬರೆದಿದ್ದು ನಾನೇ ಅಂತ ಅವಳಿಗೆ ಗೊತ್ತಾಗಿದ್ರೆ ,  ಅವಳು ಅದನ್ನ ನನ್ನತ್ರ ಕೇಳ್ಬಿಟ್ರೆ   ಮುಖ ತೋರ್ಸೋದು ಹೇಗೆ ಅಂತ  ... 

"ಅಯ್ಯೋ ಅಜ್ಜ ! "  ನಿಯತಿ  ಅಜ್ಜನ  ಕತ್ತು  ಬಳಸಿದಳು . 
"ಅಜ್ಜಾ..  ನಿಮ್ಮ ಕಾಲೇಜ್ ಮುಗಿದು ಹತ್ರ ಹತ್ರ ೫೦ ವರ್ಷ ಆದ್ರೂ ಆಗಿರ್ಬೇಕು. ಅಷ್ಟು ಹಳೇದನ್ನ  ಇನ್ನೂ ನೆನಪಿಟ್ ಗೊಂಡು  ಗಾಬರಿ ಆಗ್ತಿದೀರಲ್ಲ?  ಆ ಅಜ್ಜಿಗಂತೂ  ಈ ಬಗ್ಗೆ ಗೊತ್ತಾಗಿಲ್ಲ.  ಅಥ್ವಾ ಅವ್ರು ಅದನ್ನೆಲ್ಲಾ ಯಾವಾಗ್ಲೋ ಮರ್ತು ಬಿಟ್ಟಿದ್ದಾರೆ ಅಂತ ನಂಗನಿಸತ್ತೆ .  ಈಗ  ಅದೆಲ್ಲ ಬದಿಗಿಟ್ಟು , ಹಾಯಾಗಿ  ಹಳೆ ಲವ್  ಹತ್ರ ಹರಟೆ ಹೊಡೀರಿ !  ಈಗ್ಲಾದ್ರೂ ಧೈರ್ಯ ಮಾಡಿ ಹೇಳ್ಬಿಡಿ . ನೀವು ಆಕೇನ ಇಷ್ಟ ಪಡ್ತಾ ಇದ್ರಿ ಅಂತ ! "  ಜೋರಾಗಿ ನಕ್ಕಳು ನಿಯತಿ . 

" ತಲೆ ಹರಟೆ "  ಮುದ್ದಿನಿಂದ ಮೊಮ್ಮಗಳಿಗೆ ಗದರಿದ  ಶಂಕರಣ್ಣ  ಮೆಲ್ಲಗೆ 
" ನೋಡು ಇದೆಲ್ಲ  ಅಪ್ಪ-ಅಮ್ಮನ ಹತ್ರ ಹೇಳ್ಬೇಡ ಪ್ಲೀಸ್.  ನಂಗೆ ತುಂಬಾ ಸಂಕೋಚ ಆಗತ್ತೇ ಆಮೇಲೆ  " 

 "ಒಳ್ಳೆ ಅಜ್ಜ !  ಹೇಳಲ್ಲ ಬಿಡಿ . ಬೇಕಾಗತ್ತೆ ನಂಗೆ ಯಾವಾಗ್ಲಾದ್ರೂ ನಿಮ್ಮನ್ನ ಬ್ಲ್ಯಾಕ್ ಮೇಲ್  ಮಾಡೋಕೆ  ! "
 ಕೆನ್ನೆಗೆ  ಮುತ್ತಿಟ್ಟು ನಗುತ್ತ ಒಳಗೆ  ಹೋದ  ಮೊಮ್ಮಗಳನ್ನೇ ನೋಡುತ್ತಾ  ಎರಡು ನಿಮಿಷ ಕುಳಿತ  ಶಂಕರಣ್ಣ , ಅವಳು ಹೇಳಿದ್ದು ನಿಜವಿರಬಹುದೇನೋ  ಎನಿಸಿ ಮುಗುಳ್ನಗುತ್ತ  ಎದುರು ಮನೆಯತ್ತ ನೋಡಿದರು !