ಸಂಜೆ ಬೆಳಕು ಕತ್ತಲೆಯತ್ತ ಜಾರುತ್ತಿದೆ . ಮೆಲ್ಲಗೆ ಹರಿಯುತ್ತಿರುವ ಯಮುನೆಯ ಮೇಲಿಂದ ತೇಲುತ್ತಿರುವ ತಂಗಾಳಿ ಮೈಯನ್ನು ನವುರಾಗಿ ನೀವುತ್ತಿದೆ . ಹಕ್ಕಿಗಳು ತಮ್ಮ ಗೂಡಿಗೆ ಮರಳುವ ಸಮಯ . ಯಮುನೆಯ ಘಟ್ಟದ ಮೆಟ್ಟಿಲುಗಳಿಂದ ಸ್ವಲ್ಪವೇ ದೂರದ ಬಂಡೆಯ ಮೇಲೆ ಕುಳಿತಿದ್ದಾಳೆ ಅವಳು ! ರಾಧೆ ! ಚಿತ್ತಾರವಿರುವ ಬಿಂದಿಗೆಯನ್ನು ಮಡಿಲಲ್ಲಿಟ್ಟು ಅದರ ಮೇಲೆ ಗಲ್ಲವೂರಿ ,ಬಳುಕುತ್ತಾ ಸಾಗಿರುವ ನದಿಯನ್ನೇ ನೋಡುತ್ತಾ .
ಅಲ್ಲಿಂದ ಕೊಂಚವೇ ದೂರದಲ್ಲಿ ರಸ್ತೆಯ ಮೇಲೆ ಧೂಳು ಹಾರಿಸುತ್ತ ಮನೆಗೆ ಮರಳುವ ಹಸು ಕರುಗಳ ಕೊರಳ ಗಂಟೆಯ ಕಿಣಿ ಕಿಣಿ ನಾದ ಅವಳ ಕಿವಿಗೂ ಬೀಳುತ್ತಿದೆ . ಯಾವಾಗಲೂ ಮುದಗೊಳಿಸುತ್ತಿದ್ದ ಆ ಸದ್ದು ಇಂದು ಅವಳ ಮನದೊಳಗೆ ಇಳಿಯುತ್ತಿಲ್ಲ ! ಶೂನ್ಯದಲ್ಲಿ ನೆಟ್ಟಿರುವ ಕಣ್ಣಿನ ಜೊತೆ ಅವಳ ಮನದಲ್ಲೂ ಶೂನ್ಯ ಭಾವ !
ಇಂದಾದರೂ ಬರಬಹುದೇ ಅವನು ? ಅದೆಷ್ಟೋ ವಾರಗಳೇ ಕಳೆದು ಹೋದವು . ಅವನ ಸುಳಿವಿಲ್ಲದೆ ! ಕೊಳಲ ದನಿಯಿಲ್ಲದೆ !ಮರೆತೇ ಬಿಟ್ಟನೇ ?
ಹಿಂದಿನಿಂದ ಮೆಲ್ಲಗೆ ಬಂದು ಕೈಯಲ್ಲಿಯ ನವಿಲು ಗರಿಯಿಂದ ತೆರೆದ ಸೊಂಟದ ಮೇಲೆ ಮೃದುವಾಗಿ ಕಚಗುಳಿಯಿಡು ತ್ತಿದ್ದ . ಹಗುರವಾಗಿ ಅಪ್ಪಿ , ಹೆರಳನ್ನು ಮೂಸುತ್ತಾ ಪ್ರೀತಿಯ ಮಾತುಗಳನ್ನು ಕಿವಿಯಲ್ಲಿ ಉಸುರಿ ಮೈ ನವಿರೇಳಿಸುತ್ತಿದ್ದ. ಕೆಲವೊಮ್ಮೆ ಸದ್ದು ಮಾಡದೆ ಬಂದು ತನ್ನೆಡೆ ಸೆಳೆದು ತುಟಿಗೆ ತುಟಿ ಜೋಡಿಸುತ್ತಿದ್ದ . ಜೀವನದ ಪ್ರೀತಿಯನ್ನೆಲ್ಲ ಬೊಗಸೆ ತುಂಬುತ್ತಿದ್ದ ! ನೀನಿಲ್ಲದೆ ನನ್ನ ಉಸಿರೇ ಇಲ್ಲ ಕಣೆ ಎನ್ನುತ್ತಾ ಮಗುವಿನಂತೆ ಮಡಿಲಲ್ಲಿ ಮಲಗಿ ಬಿಡುತ್ತಿದ್ದ .
ನೆನಪಿನ ತೆರೆಗಳಲ್ಲಿ ಮುಳುಗೇ ಳುತ್ತಿದ್ದ ರಾಧೆಯ ಎದೆಯಲ್ಲಿ ನವಿರಾದ ಕಂಪನ.
ಅವನನ್ನು ಮೊದಲ ಬಾರಿಗೆ ನೋಡಿದಾಗ ಅವನು ಆಗಿನ್ನೂ ಚಿಗುರುಮೀಸೆ ಮೂಡಿದ ಹದಿಹರೆಯದ ಹುಡುಗ, ತನಗಿಂತ ಕಿರಿಯ. ಸ್ವಲ್ಪ ಕಪ್ಪಾದರೂ ಅತ್ಯಂತ ಆಕರ್ಷಕವಾಗಿದ್ದ ಅವನ ಮೊಗದಿಂದ ಕಣ್ಣು ಸರಿಸಲು ಬಲು ಕಷ್ಟವಾಗಿತ್ತು .
ಪಕ್ಕದಲ್ಲಿ ಯಾರೋ ಹೇಳಿದರು. ನೋಡು ಅವನೇ ನಂದಗೋಪನ ಮಗ, ಯಶೋದೆಯ ಮುದ್ದು ಕಂದ ! ಸಾಮಾನ್ಯನಲ್ಲ ಇವನು ! ಶಿಶುವಾಗಿದ್ದಾಗಿಂದ ಒಂದಲ್ಲಾ ಒಂದು ರಾಕ್ಷಸರನ್ನು ಸಾಯಿಸುತ್ತಲೇ ಬಂದವನು ! ಇವನ ಕೊಳಲ ದನಿಗೆ ಮರುಳಾಗದವರಿಲ್ಲ !ಮನುಷ್ಯ ಮಾತ್ರರೇನು ? ಪ್ರಾಣಿ ಪಕ್ಷಿಗಳೂ ಮರುಳಾಗಿ ನಿಲ್ಲುತ್ತವೆ. ಅಷ್ಟೇ ಏನು , ಇಡೀ ಪ್ರಕೃತಿಯೇ ತಲೆದೂಗುತ್ತದೆ . ಗೋಕುಲದ ಹುಡುಗಿಯರ ಕನಸಲ್ಲೆಲ್ಲಾ ಇವನೇ . ಆಕೆ ಇನ್ನೂ ಏನೇನೋ ಹೇಳುತ್ತಲೇ ಇದ್ದಳು ಅವನ ಬಗ್ಗೆ . ಆದರೆ ರಾಧೆ ಯ ಕಿವಿಯ ಮೇಲೆ ಬೀಳುತ್ತಲೇ ಇರಲಿಲ್ಲ. ಅವಳ ಮನಸ್ಸು ಆಗಲೇ ಅವನ ಹಿಂದೆ ಹೊರಟು ಹೋಗಿತ್ತು .
ಅವನೂ ರಾಧೆಯತ್ತ ಒಮ್ಮೆ ನೋಡಿದವನು ಅದೆಷ್ಟೋ ಹೊತ್ತು ಅವಳ ಕಣ್ಣಲ್ಲಿ ಕಣ್ಣು ನೆಟ್ಟಿದ್ದ .
ಕೆಲ ದಿನಗಳ ನಂತರ ಸಂಜೆ ನೀರು ಹೊತ್ತು ಮನೆಗೆ ಹೊರಟವಳ ಎದುರು ಅದ್ಯಾವ ಮಾಯದಲ್ಲೋ ಬಂದು ನಿಂತಿದ್ದ .ರಾಧೆಯ ಎದೆ ಅವಳಿಗೆ ಕೇಳುವಷ್ಟು ಜೋರಾಗಿ ಹೊಡೆದುಕೊಳ್ಳುತ್ತಿತ್ತು . ಕೊಡ ಹಿಡಿದ ಕೈಗಳು ಕಂಪಿಸಿದವು .
" ರಾಧೆ ಅಲ್ಲವೇ ನಿನ್ನ ಹೆಸರು ? "
ಅವಳು ಸುಮ್ಮನೆ ತಲೆ ಅಲುಗಿಸಿದಳಷ್ಟೇ .
"ರಾಧೆ , ನನ್ನ ಪರಿಚಯ ಈಗಾಗಲೇ ಆಗಿರಬೇಕು ಅವರಿವರಿಂದ . ಆದರೂ ಹೇಳುತ್ತೇನೆ ಕೇಳು . ಅಪ್ಪ ಈ ಗೋಕುಲದ ಹಿರಿಯ, ನಂದಗೋಪ . ಅಮ್ಮ ಯಶೋದೆ .ನನ್ನನ್ನು ಹೆಚ್ಚಿನವರು ಕೃಷ್ಣ ಎನ್ನುತ್ತಾರೆ. ಬೇರೆ ಬೇರೆ ಹೆಸರಿಂದಲೂ ಕರೆಯುವವರಿದ್ದಾರೆ. ಈ ಗೋಪಾಲ ಬಾಲಕರೆಲ್ಲಾ ನನ್ನ ಆತ್ಮೀಯರು. ಗೋವುಗಳೆಂದರೆ ನನಗೆ ಅತಿ ಪ್ರಾಣ .
ಇದು ನನ್ನ ಚಿಕ್ಕ ಪರಿಚಯ . ಗೋಕುಲದ ಬಾಲೆಯರ ಮನದಲ್ಲಿ ನಾನಿದ್ದೇನೆ ಎಂದು ನನಗೆ ಗೊತ್ತು . ಆದರೆ , ಅಂದು ನಿನ್ನನ್ನು ನೋಡಿದಾಗಿಂದ ನೀನು ನನ್ನ ಜನ್ಮದ ಗೆಳತಿ ಎಂದೆನಿಸುತ್ತಿದೆ . ನನಗೆ ನಿನ್ನ ಸ್ನೇಹ ಬೇಕಾಗಿದೆ . ದಯಮಾಡಿ ಇಲ್ಲವೆನಬೇಡ " ಪ್ರೇಮ ತುಂಬಿದ ದನಿಯಲ್ಲಿ ಅವನು ಹೇಳಿದಾಗ ಅವಳ ಗಂಟಲು ಆರಿತ್ತು .
" ನೋಡು , ನಾನಿಲ್ಲಿಗೆ ಹೊಸಬಳು . ನಿನಗಿಂತ ದೊಡ್ಡವಳು . ಅಲ್ಲದೆ ನನಗಾಗಲೇ ಮದುವೆಯಾಗಿದೆ . ನಿನ್ನ ಗೆಳತಿಯಾಗುವುದು ಅಸಾಧ್ಯ ! ನೀನು ಈ ಹುಚ್ಚಾಟ ಬಿಟ್ಟು ಬಿಡು "
ಏನೋ ಹೇಳ ಹೊರಟವನು , ಅಷ್ಟರಲ್ಲಿ ಯಾರೋ ಬರುವ ಸಪ್ಪಳ ಕೇಳಿ ಹೊರತು ಹೋದ . ಹೋದ ಜೀವ ಮರಳಿ ಬಂದಂತೆ ಸಮಾಧಾನಗೊಂಡ ರಾಧೆ ಬಿರ ಬಿರನೆ ಮನೆ ತಲುಪಿದ್ದಳು . ಆದರೂ ಮನದಲ್ಲಿ ಅವನ ಕಿರುನಗೆ ಅಚ್ಚೊತ್ತಿ ತಲ್ಲಣವಾಗುತ್ತಿತ್ತು
ಮತ್ತೆ ಕೆಲ ದಿನಗಳು ಅವನು ಕಾಣಿಸಿಕೊಳ್ಳಲಿಲ್ಲ. ಒಮ್ಮೆ ನಿರಾಳವೆನಿಸಿದರೂ ಒಳಗೊಳಗೇ , ಅವನನ್ನು ನೋಡಬೇಕೆಂಬ ಹಂಬಲ ಬಲಿಯುತ್ತಿತ್ತು .
ಮತ್ತೊಂದು ಸಂಜೆ , ಮನೆಗೆ ಮರಳುವಾಗ ಮಧುರವಾದ ಮುರಳೀ ನಾದ ಅವಳನ್ನು ಸಮ್ಮೋ ಹಿಸಿತು . ನಡಿಗೆ ನಿಧಾನವಾಯಿತು , ಮನ ಪುಳಕಗೊಳ್ಳುತ್ತಾ ಕಣ್ಣು ಆಚೀಚೆ ಅರಸಿತು. ಕುಳಿತಿದ್ದ ಅವನು. ದಾರಿಯ ಪಕ್ಕದ ಮರದ ಬುಡದಲ್ಲಿ .
ಕಣ್ಣು ಮುಚ್ಚಿ ತಲ್ಲೀನನಾಗಿ ಕೊಳಲೂದುತ್ತಿದ್ದ . ಅವನನ್ನು ಕಂಡು ಎದೆ ಬಡಿತ ವೇಗವಾದಾಗ ಬೇಗ ದಾಟಿ ಬಿಡೋಣವೆಂದು ಹೆಜ್ಜೆ ಹಾಕಿದಳು . ಅವನ ಧ್ವನಿ ನಿಲ್ಲಿಸಿತು ಅವಳನ್ನು .
"ರಾಧೆ, ನನ್ನ ಮನಸೆಲ್ಲಾ ನೀನೆ ತುಂಬಿದ್ದೀಯಾ .ದಯವಿಟ್ಟು ದೂರ ಓಡಬೇಡ. "
"ಕೃಷ್ಣ , ನಾನು ಅಂದೇ ಹೇಳಿದೆ ಇಂಥಾ ಹುಚ್ಚುತನವನ್ನು ಬಿಟ್ಟು ಬಿಡು . ಮದುವೆಯಾದವಳು ನಾನು . ನೀನಿನ್ನೂ ಚಿಕ್ಕವನು . ಗೋಕುಲದ ಸುಂದರಿಯರಲ್ಲೊಬ್ಬಳನ್ನು ವರಿಸು. ನಿನ್ನ ಒಂದು ನೋಟಕ್ಕಾಗಿ ಕಾತರಿಸುವವರೆಷ್ಟೋ ಜನರಿದ್ದಾರೆ . ಮತ್ತೆ ನಾನೇಕೆ? "
"ನನಗಾಗಿ ಎಷ್ಟೋ ಜನ ಕಾತರಿಸಿದರೂ , ನಾನು ನಿನಗಾಗಿ ಹಂಬಲಿಸುವಂತೆ ಮಾಡಿದ್ದೀಯ . ನಿನ್ನನ್ನು ಅಂದು ನೋಡಿದಾಗಿಂದ ಬೇರೆ ಯಾರೂ ನನ್ನ ಕಣ್ಣಿಗೆ ಕಾಣುತ್ತಿಲ್ಲ . ನಿನಗೂ ನನ್ನ ಮೇಲೆ ಮಧುರ ಭಾವವಿದೆ ಎಂದು ನಂಗೆ ಗೊತ್ತು . ಅದನ್ನು ಒಪ್ಪಿಕೊಳ್ಳಬಾರದೆ ? ಪ್ರೀತಿಗೆ ವಯಸ್ಸಿನ ಹಂಗಿಲ್ಲ . ನೀನು ಮದುವೆಯಾಗಿದ್ದರೂ , ನಿನ್ನನ್ನು ಪ್ರೀತಿಸಲು ನನಗದು ಅಡ್ಡಿಯಲ್ಲ . ಇದು ನಮ್ಮ ಮನಸ್ಸಿಗೆ ಸಂಬಂಧಿಸಿದ್ದು .ಇಲ್ಲವೆನಬೇಡವೇ ...."
ಅವಳ ಹೃದಯ ಅವನ ಪ್ರೀತಿಯ ಮಾತಿಗೆ , ಚುಂಬಕದಂತೆ ಸೆಳೆಯುವ ಕಣ್ಣ ನೋಟಕ್ಕೆ ಸೋತಿರುವುದು ಅವಳಿಗೆ ಅರಿವಾಗಿತ್ತು .
ಅವಳ ಬುದ್ಧಿ ತಿಳಿ ಹೇಳುವ ಪ್ರಯತ್ನ ಮಾಡುತ್ತಿತ್ತು . 'ಅವನು ಗೋಕುಲದ ಹಿರಿಯನ ಮಗನೆ ಇರಬಹುದು , ಅವನಿಗೆ ನಿನ್ನ ಮೇಲೆ ಎಷ್ಟೇ ಪ್ರೀತಿ ಯಿರಬಹುದು ಆದರೆ , ನೀನು ಮದುವೆಯಾದವಳು ಎನ್ನುವುದನ್ನು ಮರೆಯಬೇಡ ' ಎಂದು ಎಚ್ಚರಿಸುತ್ತಿತ್ತು .
ಅವನಿಗೆ ಉತ್ತರಿಸದೆ , ಭಾರವಾದ ಮನದೊಂದಿಗೆ ಬಿರ ಬಿರನೆ ಮನೆಯತ್ತ ನಡೆದಳು . ಅಂದು ಸಂಜೆಯೆಲ್ಲ ಅವಳು ಅವಳಾಗಿರಲಿಲ್ಲ . ಯಾರೊಡನೆ ಮಾತು ಬೇಕಿಲ್ಲ , ಏನು ಕೆಲಸ ಮಾಡುತ್ತಿದ್ದಳೋ ಎಂಬ ಅರಿವೂ ಇರಲಿಲ್ಲ .
ಅವನಿಗೆ ಉತ್ತರಿಸದೆ , ಭಾರವಾದ ಮನದೊಂದಿಗೆ ಬಿರ ಬಿರನೆ ಮನೆಯತ್ತ ನಡೆದಳು . ಅಂದು ಸಂಜೆಯೆಲ್ಲ ಅವಳು ಅವಳಾಗಿರಲಿಲ್ಲ . ಯಾರೊಡನೆ ಮಾತು ಬೇಕಿಲ್ಲ , ಏನು ಕೆಲಸ ಮಾಡುತ್ತಿದ್ದಳೋ ಎಂಬ ಅರಿವೂ ಇರಲಿಲ್ಲ .
ಅವನೂ ಹಠ ತೊಟ್ಟವನಂತೆ ಪದೇ ಪದೇ ಅವಳೆದುರು ಬಂದು ನಿಲ್ಲುತ್ತಿದ್ದ. ತನ್ನ ಹೃದಯವನ್ನು ಅವಳೆದುರು ತೆರೆದಿಡುತ್ತಿದ್ದ .
ಕ್ರಮೇಣ ಹೃದಯದ ಮಾತು ಮೇಲಾಯಿತು . ಯಾವಾಗ ಅವನ ಬೇಡಿಕೆಗೆ ಒಪ್ಪಿಕೊಂಡಳೋ , ಅವಳಿಗೆ ತಿಳಿಯಲಿಲ್ಲ .
ಕ್ರಮೇಣ ಹೃದಯದ ಮಾತು ಮೇಲಾಯಿತು . ಯಾವಾಗ ಅವನ ಬೇಡಿಕೆಗೆ ಒಪ್ಪಿಕೊಂಡಳೋ , ಅವಳಿಗೆ ತಿಳಿಯಲಿಲ್ಲ .
ಆ ದಿನ ಅವನ ಸಂತೋಷಕ್ಕೆ ಪಾರವೇ ಇರಲಿಲ್ಲ . ಅಂದು ಸಂಜೆಯಿಡೀ ಅವನು ತನ್ಮಯನಾಗಿ ಕೊಳಲೂದುತ್ತಿದ್ದರೆ ಅವಳು ಅವನಲ್ಲೇ ಲೀನವಾದಂತೆ ಒರಗಿ ಕುಳಿತಿದ್ದಳು . ಕ್ರಮೇಣ ಪ್ರತಿ ಸಂಜೆ ನದೀ ತೀರದಲ್ಲಿ ಭೇಟಿಯಾಗುವುದು ಅಲಿಖಿತ ನಿಯಮವಾಯಿತು. ಒಬ್ಬರನ್ನೊಬ್ಬರು ಬಿಟ್ಟಿರಲಾಗದಷ್ಟು ಹೃದಯಗಳು ಬೆಸೆದುಕೊಂಡಿದ್ದವು . ಗೋಕುಲದಲ್ಲಿ ಪಿಸುಮಾತುಗಳು ಕೇಳಿ ಬಂದರೂ ಕೃಷ್ಣನ ಬಗ್ಗೆ ಮಾತನಾಡುವವರಾರೂ ಇರಲಿಲ್ಲ .
ಕೆಲ ದಿನಗಳ ಹಿಂದೆ ಗೆಳತಿ ಸುಮತಿ ಹೇಳಿದ ವಿಷಯ ಕೇಳಿ ನೆಲವೇ ಕುಸಿದು ಹೋದಂತೆ ಆಗಿತ್ತಲ್ಲವೇ ?
"ರಾಧೇ , ಗೊತ್ತೇನೆ ? ರಾಜಕುಮಾರಿ ರುಕ್ಮಿಣಿ ಯಂತೆ , ತುಂಬಾ ಸುಂದರಿಯಂತೆ . ಅವಳು ನಮ್ಮ ಕೃಷ್ಣ ನಿಗೆ ಮನಸೋತಿದ್ದಾಳಂತೆ . ತಾನು ಮದುವೆಯಾದರೆ ಅವನನ್ನು ಮಾತ್ರ , ಇಲ್ಲವಾದರೆ ಸಾವೇ ಗತಿ ಎಂದು ಹಠ ಹಿಡಿದಿದ್ದಾಳಂತೆ . "
ಎದೆ ಬಡಿತ ನಿಂತಿತ್ತು ! ಆದರೂ ಮುಖದಲ್ಲಿ ತೋರಿಸದೆ , ನಿರಾಸಕ್ತಳಂತೆ ಕೇಳಿದ್ದಳು .
"ಕೃಷ್ಣನಿಗೆ ಗೊತ್ತೇ ಇದು ? "
"ಇಲ್ಲವೇ ಮತ್ತೆ ? ಅವನಿಗೂ ಅವಳ ಮೇಲೆ ಮನಸಂತೆ . ಹೀಗಾಗಿ ಅವಳನ್ನು ಹೇಗಾದರೂ ಕರೆತಂದು ಮದುವೆ ಮಾಡಿಕೊಳ್ಳುತ್ತೇನೆ ಎಂದು ಹೋಗಿದ್ದಾನಂತೆ ! "
ಮಜ್ಜಿಗೆ ಕಡೆಯುತ್ತಿದ್ದ ಕೈ ಒಮ್ಮೆಲೇ ನಿಂತಿತ್ತು ! ಎದೆಯಲ್ಲಿ ಸಂಕಟ , ಗಂಟಲಲ್ಲಿ ಏನೋ ಸಿಕ್ಕಿ ಕೊಂಡಂತೆ . ಉಕ್ಕಿ ಬರುತ್ತಿದ್ದ ಅಳುವನ್ನು ಹೇಗೋ ತಡೆ ಹಿಡಿದವಳು ಸುಮತಿ ಹೋದಮೇಲೆ ಬಿಕ್ಕಿ ಬಿಕ್ಕಿ ಅತ್ತಿದ್ದಳು .
ಹಾಗಾದರೆ .... ಅವನು ಹೇಳಿದ್ದೆಲ್ಲ ಬರೀ ಸುಳ್ಳೇ? ನೀನಿಲ್ಲದೆ ನಾನಿಲ್ಲ ಕಣೆ ಎಂದಿದ್ದನಲ್ಲ? ಈಗ ರಾಜಕುಮಾರಿ ಪ್ರೀತಿಸುತ್ತಿದ್ದಾಳೆ ಎಂದೊಡನೆ ಅಷ್ಟು ಸುಲಭವಾಗಿ ಹೊರಟೆ ಹೋದನಲ್ಲ ? ತನ್ನ ಬಗ್ಗೆ ಒಂದು ಕ್ಷಣವೂ ಯೋಚಿಸಲಿಲ್ಲವೇ ? ಅಷ್ಟು ಬೇಗ ಮರೆತೇ ಬಿಟ್ಟನೇ ? ಬಿಕ್ಕುತ್ತಲೇ ಇದ್ದಳು
ಒಳಗೆಲ್ಲೋ ತನ್ನದೇ ಧ್ವನಿ ಪ್ರತಿನುಡಿಯಿತು " ನಿನಗೆ ಇದೆಲ್ಲ ಗೊತ್ತಿರಲಿಲ್ಲವೇ? ಅವನು ನಿನಗಿಂತ ಚಿಕ್ಕವನು . ಮದುವೆಯಾಗ ಬೇಕಷ್ಟೇ ಇನ್ನು . ನೀನೋ ಆಗಲೇ ಮದುವೆಯಾದವಳು . ಮನಸಿನ ಮಾತು ಕೇಳಿ ಅವನ ಹಿಂದೆ ಮರುಳಾಗಿ ಹೋಗುವ ಮೊದಲು ನನ್ನ ಮಾತನ್ನು ಸ್ವಲ್ಪವಾದಲೂ ಕೇಳಿದ್ದರೆ , ಇಂದು ಇಂಥಾ ನೋವು ಬರುತ್ತಿತ್ತೆ ? " ಉತ್ತರವಿರಲಿಲ್ಲ ಅವಳಲ್ಲಿ .
ಹಳೆಯ ನೆನಪುಗಳು ಚುಚ್ಚ ತೊಡಗಿದವು . ಇಂದೂ ಬಾರದಿದ್ದರೆ , ಇನ್ನೆಂದೂ ಅವನ ಮುಖ ನೋಡಲಾರೆ ಎಂದು ನಿಶ್ಚಯಿಸಿದಳು . ಆಗಲೇ ಕತ್ತಲಾಗತೊಡ ಗಿತ್ತು. ಒಂದೊಂದಾಗಿ ನಕ್ಷತ್ರಗಳು ಹೊಳೆಯತೊಡಗಿದವು . ಇನ್ನೊಂದು ಗಳಿಗೆ ಕಳೆದರೆ ತನ್ನ ಗಂಡ ಹುಡುಕಿಕೊಂಡು ಬರುತ್ತಾನೆ . ಸಾಕು ಕಾದಿದ್ದು . ಇನ್ನು ಮನೆಗೆ ಹೋಗುವುದೇ ಲೇಸು ಎಂದು ನಿಧಾನವಾಗಿ ಮೇಲೆದ್ದು ಕೊಡವನ್ನು ಸೊಂಟಕ್ಕೇರಿಸಿ,ಭಾರವಾದ ಹೆಜ್ಜೆಯಿಂದ ಮನೆಯ ದಾರಿ ಹಿಡಿದಳು . ಹತ್ತು ಹೆಜ್ಜೆ ನಡೆದಿದ್ದಳೇನೋ , ಪಕ್ಕದ ಪೊದೆಯ ಹಿಂದಿನಿಂದ ಯಾರೋ ಅವಳ ಸೊಂಟದಿಂದ ಕೊಡವನ್ನು ಕಸಿದರು . ಗಾಬರಿಗೊಂಡ ಅವಳ ಬಾಯಿಂದ ಕೂಗು ಹೊರಡುವ ಮೊದಲೇ ಅವಳನ್ನು ಬಳಿಗೆ ಸೆಳೆದು ತುಟಿಗೆ ತುಟಿಯಿಟ್ಟು ಚುಂಬಿಸಿದರು . ಆ ಸ್ಪರ್ಶ, ಅವಳಿಗರಿವಾಗಿತ್ತು . ಕಣ್ಣಿಂದ ಸುರಿಯುವ ಕಂಬನಿಯನ್ನು ಒರೆಸಿ ಕೊಳ್ಳುವ ಪ್ರಯತ್ನವನ್ನೂ ಮಾಡದೆ ಅವನನ್ನು ಗಟ್ಟಿಯಾಗಿ ಅಪ್ಪಿದ್ದಳು .
" ಕೃಷ್ಣಾ , ನೀನು ಹೀಗೆ ಇದ್ದಕ್ಕಿದ್ದ ಹಾಗೆ ಹೋಗಿಬಿಟ್ಟರೆ ನನಗೇನಾಗಬಹುದು ಎಂದೂ ಯೋಚಿಸಲಿಲ್ಲವೇನೋ ?
ಇನ್ನೀಗ ನಿನಗೊಬ್ಬ ಚಂದದ ಹೆಂಡತಿ ಬರುತ್ತಾಳೆ , ಆಮೇಲೆ ನನ್ನನ್ನು ಮರೆಯುವುದೇ ಅಲ್ಲವೇ? ಅದಕ್ಕೂ ಮೊದಲು , ನಾನೇ ದೂರವಾಗುವುದು ಲೇಸಲ್ಲವೇ ? "
" ರಾಧೇ, ನಂಬಿಕೆಯಿಲ್ಲವೇನೆ ನನ್ನ ಮೇಲೆ? ಸಂದರ್ಭ ಹಾಗಿತ್ತು ಕಣೆ , ನಿನಗೆ ಸುಳಿವು ಕೊಡದೆ ಹೋಗಬೇಕಾಯ್ತು . ಕ್ಷಮಿಸುವುದಿಲ್ಲವೇನೆ ? ನನ್ನ ಜೀವನದಲ್ಲಿ ಯಾರೇ ಬಂದರೂ, ಎಷ್ಟೇ ಜನ ಬಂದರೂ , ನಿನ್ನ ಜಾಗ ಬೇರೆಯೇ ಕಣೆ . ಅದನ್ಯಾರೂ ಮುಟ್ಟುವುದು ಸಾಧ್ಯವಿಲ್ಲ. ನೀನು ಬರೀ ಪ್ರೆಮಿಕೆಯಲ್ಲವೇ , ನನ್ನ ಜೀವದ ಗೆಳತಿ . ನಿನ್ನೆದುರು ನಾನು ಕೇವಲ " ನಾನಾಗಿ " ಇರಬಲ್ಲೆ . ನನ್ನೆಲ್ಲ ಮುಖವಾಡ ಕಳಚಿ. ಸಾಮಾನ್ಯನಂತೆ , ನಿನ್ನ ಪ್ರೀತಿಯಲ್ಲಿ ಮುಳುಗಬಲ್ಲೆ . ನಿನ್ನ ಜೊತೆ ಇದ್ದಾಗ ಮಾತ್ರ ನನ್ನೆಲ್ಲ ಚಿಂತೆಗಳನ್ನು , ಬಗೆ ಹರಿಸ ಬೇಕಾದ ಸಮಸ್ಯೆಗಳನ್ನು ಮರೆತು ನೆಮ್ಮದಿಯಿಂದ ಇರಬಲ್ಲೆ . ನನ್ನೆದೆಯ ಉರಿಗೆ ತಂಪೆರೆಯುವ ಜೀವ ಜಲ ಕಣೆ ನೀನು . ನೀನು ಮಾತ್ರ ನನ್ನಿಂದ ದೂರವಾಗುವ ಮಾತನಾಡಬೇಡವೇ " ಅವನ ಕಣ್ಣಿಂದಲೂ ಧಾರೆ !
ಇಬ್ಬರ ಪ್ರೇಮಕ್ಕೆ , ವಿರಹಕ್ಕೆ , ಪುನರ್ಮಿಲನಕ್ಕೆ ಸಾಕ್ಷಿಯಾಗುತ್ತಾ ತನ್ನ ಪಾಡಿಗೆ ಯಮುನೆ ಜುಳು ಜುಳು ಹರಿಯುತ್ತಿದ್ದಳು !
6 comments:
ರಾಧಾ-ಕೃಷ್ಣರ ಶುದ್ಧ ಪ್ರೇಮದ ನವಿರಾದ ಕತೆ. ಮನಸ್ಸನ್ನು ಸೆರೆ ಹಿಡಿಯುತ್ತದೆ.
ಥ್ಯಾಂಕ್ಸ್ ಸುನಾಥ್ ಕಾಕಾ !
ರಾಧಾ ಕೃಷ್ಣರ ಪವಿತ್ರ ಪ್ರೇಮವನ್ನು ಮನಮುಟ್ಟುವಂತೆ ಚಿತ್ರಿಸಿದ್ದೀರಾ..ಇಂತಹ ಶುದ್ಧ ಪ್ರೇಮಸಾಧಕರ ಬಗ್ಗೆ ನಮಗೆ ಮಾತನಾಡಲು ಶಕ್ತಿ ಸಾಲದೆನ್ನಿಸುತ್ತದೆ.
ಮನ ಸೆಳೆದ ಮನ ಮೋಹಕ ಕಥನ.
(ತಾವು ದಯವಿಟ್ಟು ತಮ್ಮ ಫೇಸ್ ಬುಕ್ ಐಡಿ ತಿಳಿಸಿರಿ,
3K ಗುಂಪಿನಲ್ಲಿ ಈ ಬರಹ share ಮಾಡುವೆ.
ನನ್ಮ id: Badarinath Palavalli)
ಅ೦ತೂ ನಿಮ್ಮ ಒಂದು ಬ್ಲಾಗ್ ಇದೆ ಅನ್ನುವುದು ನಿಮಗೆ ನೆನಪು ಇದೆ ಅಂತ ಆಯ್ತು :)
ಚೆನ್ನಾಗಿದೆ ಬರಹ :)
ಸುಧೇಶ್ ,
ನಿಮ್ಮ " ಅನುಭೂತಿ" ನೆನಪಿದೆಯೇ ??
:P :P
Post a Comment