April 20, 2008

ಸತ್ಯನಾರಾಯಣ ಕಥೆ ಪ್ರಸಂಗ

ಮಲೆನಾಡ ಹವ್ಯಕರಲ್ಲಿ , ಸತ್ಯನಾರಾಯಣ ಕಥೆ ಅಂಥಾ ಅಪರೂಪದ್ದೇನಲ್ಲ.
ಮನೆಯಲ್ಲಿ ಯಾವುದೇ ಮಂಗಲ ಕಾರ್ಯದ ನಂತರ ಸತ್ಯನಾರಾಯಣ ಕಥೆ ಆಗಲೇಬೇಕೆಂಬುದು ಅಲಿಖಿತ ನಿಯಮದಂತಾಗಿದೆ. ಅಲ್ಲದಿದ್ದರೂ ವರ್ಷಕ್ಕೊಂದೋ -ಎರಡೊ ಇರಲೇ ಬೇಕು. ಪ್ರತಿ ಹುಣ್ಣಿಮೆ / ಅಮಾವಾಸ್ಯೆಗೆ ಸತ್ಯನಾರಾಯಣ ಪೂಜೆ ಮಾಡಿಸುವವರೂ ಇದ್ದಾರೆ. ಹೀಗಿದ್ದರೂ , ಪ್ರತೀ ಸಲವೂ ಅದೊಂದು ಹಬ್ಬದಂತೆ ಸಡಗರ - ಸಂಭ್ರಮದಿಂದ ನೆರವೇರುತ್ತದೆ. ನೆಂಟರು- ಇಷ್ಟರು ಬರುತ್ತಾರೆ. ಮಕ್ಕಳಿಗೆ ಅಂದು ಶಾಲೆಗೆ ಹೋಗುವ ಕಾಟವಿಲ್ಲ. ಮರುದಿನ ಮಾಸ್ತರಿಗೆ ಒಂದು ಪ್ರಸಾದದ ಪೊಟ್ಟಣ ತಲುಪಿಸಿದರೆ , ಚಕ್ಕರ್ ಹಾಕಿದ್ದರ ಬಗ್ಗೆ ಕಾರಣ ಹೇಳಬೇಕಾಗಿಲ್ಲ. ( ಎಷ್ಟೋ ಸಲ ಮಾಸ್ತರರನ್ನೇ ಪೂಜೆಯ ದಿನ ಊಟಕ್ಕೆ ಕರೆಯುವುದೂ ಉಂಟು. ಹಾಗಾದರಂತೂ ಇನ್ನೂ ಸಲೀಸು).

ನಡೀರಿ ಇವತ್ತು ತಿಮ್ಮಣ್ಣ ಮಾವನ ಮನೆ ’ ಸತ್ನಾರಣ ಕತೆಗೆ ’ ಹೋಗನ.
ಬೆಳಿಗ್ಗೆ ಸುಮಾರು ೧೦ ಗಂಟೆ. ಮನೆಯ ಯಜಮಾನ ತಿಮ್ಮಣ್ಣ ಮಾವ ಬೆಳಿಗ್ಗೆ ಆಸರಿ ಕುಡಿದವ್ನೇ, ಯಥಾ ಪ್ರಕಾರ ಬಾಯಿಗೆ ಕವಳ ತುಂಬಿಕೊಂಡು ಕೈಯಲ್ಲಿ ಕತ್ತಿ ಹಿಡಿದು ತೋಟಕ್ಕೆ ಹೋಯ್ದ. ಪದ್ದತ್ತೆಗೆ ಗಡಿಬಿಡಿಯೋ ಗಡಿಬಿಡಿ. ಮನೇಲಿ ಪೂಜೆ, ಅಡಿಗೆ ಕೆಲಸ ಸುಮಾರಿದ್ದು, ಬೆಳಗಿನ ಆಸರಿ ಮುಗಿಸಿ, ಅಂಗಳದಲ್ಲಿ ಆಡ ಹುಡುಗ್ರೇನೂ ಸ್ನಾನಕ್ಕೆ ಹೋಗ ಲಕ್ಷಣಾನೇ ಇಲ್ಲೆ. ’"ಹೇಳಿದ ಮಾತು ಕೇಳದೂ ಹೇಳೇ ಇಲ್ಲ ಕೊಳಕು ಹುಡುಗ್ರಿಗೆ’’ ಎಂದು ಗೊಣಗುತ್ತಾ ತಾನೇ ಸ್ನಾನಕ್ಕೆ ಹೊರಟಿದ್ದು.

ಅಂಗಳದ ಸರಗೋಲು ಶಬ್ದ ಆದ ಕೂಡ್ಲೇ , ಗೋಲಿ ಆಟದಿಂದ ತಲೆ ಮೇಲೆತ್ತಿ , ಒಳಬರುವವರನ್ನು ನೋಡಿ,
" ಆಯೀ, ಮಾಲೇಶ್ರ ಮಾವ , ಅತ್ತೆ ಬಂದ್ವೇ, " ಸುದ್ದಿ ಮುಟ್ಟಿಸಲು ಒಳಗೆ ಓಡಿಬಂದ ಸಣ್ಣ ಮಾಣಿ ಸುರೇಶನ ಗಾಡಿ ಅಲ್ಲೇ ರಿವರ್ಸ್ ಹೊಡೆದು ವಾಪಸ್ಸಾತು.

ಜಗುಲಿಗೆ ಬಂದ ಕೂಸು ವಿದ್ಯಾ , ಹಾಸಿಟ್ಟಿದ್ದ ಕಂಬಳಿಯನ್ನು ಮತ್ತೆ ಸರಿ ಮಾಡಿ " ಮಾವ ಅಂದಿ, ಅತ್ತೆ ಅಂದಿ . ಕೂತ್ಗಳಿ ,ಆಸರಿಗೆ ?’

ಅಷ್ಟೊತ್ತಿಗೆ , ಸ್ನಾನ ಮಾಡಿ ಮಡಿ ಸೀರೆ ಸುತ್ತಿ ಸೆರಗು - ನೆರಿಗೆ ಸರಿಮಾಡಿಕೊಳ್ಳುತ್ತಾ ಬಂದ ಪದ್ದತ್ತೆಗೇನು ಸಂಭ್ರಮ ! (ಎಷ್ಟಂದ್ರೂ ಅಪ್ಪನ ಮನೀಂದ ಜನ ಬಂದ ಅಂದ್ರೆ , ಯಾರಿಗಾದ್ರೂ ಖುಶೀನೇಯಾ !)

’ ಅಣ್ಣಯ್ಯಾ ಅಂದಿ, ಅತ್ಗೇ ಅಂದಿ. ಆರಾಮಾ? ಅಪ್ಪಯ್ಯ , ಆಯಿ ಎಲ್ಲ ಆರಮಿದ್ವ? ಆಸರಿಗೆ ತಂಪಾಗಿ ಅಡ್ಡಿಲ್ಯ , ಬಿಸಿಯ? ’
’ ಈಗೆಂತ ಬ್ಯಾಡ್ದೇ ತಂಗಿ. ಅಲ್ಲಾ, ನೀ ಮಾಡದಾದ್ರೆ ಹನೀ ತಂಪಾಗಿ ಪಾನಕಾನೇ ಅಡ್ಡಿಲ್ಲೆ.’

ಮಾಲೇಶ್ರ ಮಾವ ಎದ್ದು, ಹೊರಗೆ ’ ಹೇಡಿಗೆ" ( ಹೊರಗಿನ ಕಟ್ಟೆ) ತುದಿಗೆ ಹೋಗಿ ಬಾಯಲ್ಲಿದ್ದ ಕವಳ ತುಪ್ಪಿಕ್ಕೆ ಬಂದು ಜಗುಲಿ ಮೇಲೆ ಕೂತ್ಗಂಡ.

ಗೌರತ್ತೆ ಅಷ್ಟೊತ್ತಿಗೆ ,ತಗಳಕಾರೆ ಹೊಸದೇ ಆಗಿದ್ದ ಬ್ಯಾಗಿಂದ ಕಿತ್ತಳೆ ತೊಳೆಯ ಆಕಾರದ ಲಿಂಬೇ ಹುಳಿ ಪೆಪ್ಪರ್ಮಿಂಟ್ ನ ಕಾಗದದ ಪೊಟ್ಟಣ ತೆಗೆದು , ಹೊರಗೆ ಆಡುತ್ತಿದ್ದ ಸುರೇಶನ್ನ ಕರತ್ತು. ’ ಅಪ್ಪೀ, ಇಲ್ಬಾ. ಪೇಪಿ ತಗ.’ ಕರೆಯದ್ನೇ ಕಾಯ್ತಿದ್ದಂಗೆ ಅಂವ ಓಡಿ ಬಂದು ಅಂಗಿಯ ತೋಳಿಗೆ ಸುಂಬಳ ಒರೆಸಿಕೊಂಡು ಅತ್ತೆಯ ಕೈಯಿಂದ ಪೊಟ್ಟಣ ತಗಂಡು ಅದೇ ಸ್ಪೀಡಲ್ಲಿ ವಾಪಸ್ ಓಡಿದ್ದಾತು .
" ಎಲ್ಲರಿಗೂ ಕೊಟ್ಗಂಡು ತಿನ್ನವು ಕೇಳ್ತ? " ಅತ್ತೆಯ ಮಾತು ಕಿವಿಗೆ ಬಿದ್ದರಲ್ದಾ?
ಹಾಂಗೇಯಾ, ಇನ್ನೊಂದು ಬಾಳೆ ಎಲೆ ಪೊಟ್ಟಣ ತೆಗೆದು ವಿದ್ಯಾನ ಹತ್ರೆ ಕೊಟ್ತು ಅತ್ತೆ. ’ ತಂಗೀ, ಒಳಗೆ ತಗಂಡೋಗಿಡು. ಹೂವಿದ್ದು ಕೇಳ್ತ? ’

ತಂಪು ಪಾನಕ ಕುಡಿದು ಮಾವ ಇನ್ನೊಂದು ಎಲೆಗೆ ಸುಣ್ಣ ಹಚ್ಚಲು ಕುಳಿತರೆ , ಅತ್ತೆ ಸವಾರಿ ಅಡಿಗೆ ಮನೆ ಬದಿಗೆ .
ದೊಡ್ಡ ಒರಳ ಮುಂದೆ ಕುಳಿತು ಪದಾರ್ಥಕ್ಕೆ ಬೀಸುತ್ತಿದ್ದ ಪದ್ದತ್ತೆ ಹತ್ರೆ ಬಂದು ಗೋಡೆಗೊರಗಿ ಕೂತ್ಗಂಡು ಸುದ್ದಿ ಹೇಳಲೆ ಶುರು ಮಾಡ್ತು. .

” ಯಾ ನಮನಿ ಬಿಸ್ಲೇ ಮಾರಾಯ್ತಿ. ೯.೩೦ ಬಸ್ಸಿಗೆ ಹೊಂಟ್ರೂ ತಲೆ ಸುಡ್ತು. ಸಾಲ್ಕಣಿ ಕತ್ರೀಲಿ ಇಳ್ಕಂಡು ನಡ್ಕಂಡು ಬರವರಿಗೆ ಸಾಕೋಬೇಕೊ ಹೇಳಾತು ನೋಡು. ’

’ ಹೌದೇ ಅತ್ಗೆ. ಈ ಸಾರಿ ಅಂತೂ ಉರಿ ಬಿಸ್ಲೇಯ . ಒಂದು ಬೆಳಗಾ ಮುಂಚಿಂದಾನೇ ಸೆಕೆ ಶುರುವಾಗ್ತು ನೋಡು.ಯಂತಾ ನಮನಿ ಹೇಳೇ ತಿಳೀತಿಲ್ಲೆ !’

’ಆನೂ ಬೀಸಿಕೊಡಲಾಗಿತ್ತು . ಆದರೆ ಮಡೀಲೆ ಆಗವನ ಅಲ್ದ? ಮತ್ತೆ ಪದಾರ್ಥಕ್ಕೆ ಕೊರೆಯದೆಂತದ್ರೂ ಇದ್ರೆ ಹೇಳು. ಅದಾರೆ ಮಡೀನೆ ಬೇಕು ಹೇಳಿಲ್ಯಲೆ? ಅದೂ ಎಲ್ಲ ಆಗೋಜ ಮತ್ತೆ? ’

’ ಅತ್ಗೆ, ನೀ ಬರದೇ ಅಪರೂಪ. ಈ ಹೆಳೆ( ನೆವ) ಲ್ಲಾದ್ರೂ ದಾರಿ ಕಂಡ್ತು ನಮ್ಮನೆದು. ಎರಡು ವರ್ಷಾನೇ ಅಗೋತನ ನೀ ಬರದ್ದೇಯ ? ನೀ ಸುದ್ದಿ ಹೇಳು.ಕೆಲ್ಸ ಎಲ್ಲಾ ಆಗೋಜು. ಭಟ್ರು ಬರದ್ರೊಳಗೆ ಪದಾರ್ಥ ಒಂದು ಬೀಸ್ಕ್ಯಂಡ್ರೆ ಕಡಿಗೆ ಅನ್ನಕ್ಕಿಟ್ಕಂಡು ಪ್ರಸಾದ ಕಾಯ್ಸದೊಂದೇಯ. ’

’ಅಯ್ಯಯ್ಯ, ಸುಮ್ನೆ ಕೂತ್ಗಂಬದೇಯ ಹೇಳಾತು ಎಂಗೆ. ಅಲ್ದೇ, ಎಮ್ಮನೆ ವೀಣಾ ನಿನ್ನೆ ಸಂಜೆಪ್ಪಾಗ ಶ್ಯಾವಂತಿಗೆ ಹೂ ಕೊಯ್ದು , ಚೊಲೋ ದಂಡೆ ಮಾಡಿ ಕೊಟ್ಟಿದ್ದು. ’ ಅತ್ತೆ ಹತ್ರೇ ಸೂಡ್ಕ್ಯಳವಡ ಹೇಳು ’ ಹೇಳಿ ಬ್ಯಾರೆ ಹೇಳಿದ್ದು ಮಾರಾಯ್ತಿ. ವಿದ್ಯಾನ ಹತ್ರೆ ಕೊಟ್ಟಿದ್ದಿ ನೋಡು. ಸೂಡ್ಕ್ಯ ಮತ್ತೆ ’

” ಅಯ್ಯ, ಮಳ್ಳು ಕೂಸು. ಅತ್ತೆ ಅಂದ್ರೆ ಏನು ಪ್ರೀತ್ಯನ ’ ಹೆಮ್ಮೆ , ಪ್ರೀತಿ ತುಂಬಿದ ಪದ್ದತ್ತೆ ಉವಾಚ !

ಅಷ್ಟೊತ್ತಿಗೆ, ಹೊರಗಿಂದ ಸುರೇಶನ ಲೌಡ್ ಸ್ಪೀಕರ್ ಕೇಳಿಸ್ತು. ’ ಆಯೀ, ಭಟ್ರು ಬಂದ್ರೇ "

’ ಅಯ್ಯ , ಭಟ್ರು ಬಂದೇ ಬಿಟ್ರ ! . ತಂಗೀ , ಭಟ್ರಿಗೆ ನೀರು , ಆಸರಿ ಎಲ್ಲ ಕೊಡು. " ಒರಳು ಗುಂಡು ತಿರುಗದು ಜೋರಾತು !

 ವಿದ್ಯಾ ಒಂದು ಗಿಂಡಿ ( ಚೊಂಬು) ನೀರು ಭಟ್ರ ಎದ್ರಿಗೆ ಇಟ್ಟು ಸ್ಕರ್ಟ್ ಸರಿ ಮಾಡ್ಕ್ಯಂಡು ನಮಸ್ಕಾರ ಮಾಡಿಕ್ಕೆ ಆಸರಿ ಕೇಳಿಯಾತು .

’ ತಂಗೀ, ಅಪ್ಪಯ್ಯ ಮಡಿ ಉಟ್ಟಿದ್ನನೆ ? ’
’ ಅಪ್ಪಯ್ಯ ತ್ವಾಟಕ್ಕೆ ಹೋಜ ’
’ ಅಯ್ಯ, ಇನ್ನೂ ಮಿಂದಾಜಿಲ್ಯ ಅವಂಗೆ ಹಂಗಾರೆ ? ’ ಕಾಲು ತೊಳೆದು ಒಳಗೆ ಬಂದು ಹಾಸಿಟ್ಟ ಜಮಖಾನೆಯ ಮೇಲೆ ಕಾಲು ನೀಡಿ ಆರಾಮಾಗಿ ಕೂತ್ಕಂಡು ಭಟ್ಟರು ಕವಳದ ಬುಟ್ಟಿಗೆ ಕೈ ಹಾಕಿದ್ರು.

" ಇನ್ನೆಂತ ಸುದ್ದಿಯ ನಿಂಗಳ ಬದಿಗೆ ಮಾಲೇಶ್ರ? "
'’ ಎಂತಾ ವಿಶೇಷ ಹೇಳಿಲ್ರ ಭಟ್ರೇ. ಎಲ್ಲಾ ಬದೀಗೆ ಇದ್ದಿದ್ದೇಯಾ . ಕೆಲಸಕ್ಕೆ ಆಳೇ ಸಿಕ್ತ್ವಿಲ್ಲೆ, ಕೊನೆ ಕೊಯ್ಯವಂಗಂತೂ ಕಾರು ತಗಂಡೋಗಿ ಕರಕಬರವು . ಮುಂಚೆನೇ ಅಡಿಕೆ ದರ ಬೇರೆ ಇಳ್ದೋಯ್ದು ! ಎಂತಾ ಮಾಡವನ ! ’'

ಗಡಬಡೇಲೇ ಬಂದು ಭಟ್ಟರನ್ನು ಮಾತಾಡಿಸಿದ ಪದ್ದತ್ತೆ , ಮಗನನ್ನು ಕರೆದು ’ ತಮ್ಮಾ, ಅಪ್ಪಯ್ಯನ್ನ ಕರೆದಿಕ್ಕೆ ಬಾ . ಭಟ್ರು ಬಂದಿಗಿದ್ರು ಹೇಳು ’

ಆಟ ಬಿಟ್ಟು ಹೋಗುವ ಮನಸಿಲ್ಲದ ಮಾಣಿ, ಅಂಗಳದ ತುದಿಯವರೆಗೆ ಹೋಗಿ ಮತ್ತೆ ಲೌಡ್ ಸ್ಪೀಕರ್ ’ಆನ್’ ಮಾಡಿದ.
’ ಅಪ್ಪಯ್ಯಾ , ಬೇಗ್ನೆ ಬರವಡೋ . ಭಟ್ರು ಬಂದಿಗಿದ್ರು .. "

ತಿಮ್ಮಾವ ಐದೇ ನಿಮಿಷದಲ್ಲಿ ಗಡಬಡಿಸುತ್ತಾ ಪ್ರತ್ಯಕ್ಷವಾದ . ಕಟ್ಟೆ ತುದೀಗೆ ಕವಳ ತುಪ್ಪಿಕ್ಕೆ
’ ಭಟ್ರೇ, ಈಗ ಬಂದ್ರ ? ’
’ ಥೋ ಮಾರಾಯಾ, ನಿಂಗಿನ್ನೂ ಮಿಂದಾಜಿಲ್ಲೆ. ತಡ ಆಗೋತಲ ?
’ ಈಗ ೫ ನಿಮಿಷದಲ್ಲಿ ಸ್ನಾನ ಮುಗಿಸ್ಕ್ಯ ಬತ್ತಿ. ನೀವು ಮಡಿ ಉಡಷ್ಟ್ರಲ್ಲಿ ನಂಗೂ ಆಗೋಗ್ತು’

ಅಂತೂ , ಪೂಜೆ ಶುರುವಾಗುವಷ್ಟೊತಿಗೆ ಕೇರಿ ಮನೆಯವು , ಇನ್ನೂ ಅಷ್ಟು ನೆಂಟರೂ ಹಾಜರು.
ಪೂಜೆ ಹೊತ್ತಿಗೆ ಭಟ್ರು ದೊಡ್ಡ ದನಿಯಲ್ಲಿ ’ ಯಜಮಾನತಿ ಎಲ್ಲೋದ್ಯೆ? ನೈವೇದ್ಯ ತಗಂಬಾ ’ ಹೇಳೊಂದ್ಸಲ , ’ಮಂಗಳಾರತಿಗಾತು ಯಜಮಾನತಿ ಎಲ್ಲಿ ’ ಹೇಳಿ ಒಂದ್ಸಲ ಕರೆಯವು. ಪದ್ದತ್ತೆ ’ ಬಂದಿ ಬಂದಿ, ನೈವೇದ್ಯ ತಗಂಡು ಬಂದಿ ಹೇಳಿ ಗಡಿಬಿಡಿಲಿ ಓಡಾಡವು , ನಡುವೆ ತಿಮ್ಮಣ್ಣ ಮಾವನ ಕೆಂಗಣ್ಣು ನೋಡ್ತಾ ಅಂತೂ ಯಜಮಾನರ ಪಕ್ಕ ಕೂತ್ಗಂಡ್ರೆ , ಪೂಜೆ ಶುರು . ಹೆಂಗಸರ ಸಂಭ್ರಮನೇ ಸಂಭ್ರಮ ! ’ತಂಗಿ, ಯಾರಾರೂ ಹಾಡು ಹೇಳ್ರೇ .’ ಒಂದು ಮೂಲೆಲಿ ಕೂತ್ಕಂಡು ಗಂಗಜ್ಜಿ ಕರಕರೆ ಶುರುವಾತು. ”ಈಗಿನ ಹೆಣ್ಮಕ್ಕ ಅಂತೂ ಒಂದು ಹಾಡು -ಹಸೆ ಹೇಳಿ ಕಲ್ತ್ಗತ್ವೇ ಇಲ್ಯಪ ..ಯಂಗಳ ಕಾಲದಲ್ಲಾರೆ , ಹಾಡು ಹಸೆ ಬರದೇ ಹೋದ್ರೆ , ಕೂಸಿನ ಮದ್ವೆನೇ ಆಗ್ತಿತ್ತಿಲ್ಲೆ... " ಅಜ್ಜಿಯ ಗೊಣಗಾಟಕ್ಕೆ ಅಚೆಮನೆ ತುಂಗತ್ತೆ ಹಾಡು ಶುರು.. ’

" ಪೂಜಿಸುವೆನು ಸತ್ಯನಾರಾಯಣ ದೇವಾ ss ನಿಜ ರೂಪದಿ ಬಂದು ಸ್ವೀಕರಿಸುss.... "
ಪೂಜೆಗೆ ಕುಳಿತ ಪದ್ದತ್ತೆಗೆ ಹೆಂಗಸ್ರ ಸಲಹೆ ,
’ ಅತ್ಗೆ, ಆ ಹೊಸಾ ಸರ ಮ್ಯಾಲೆ ಕಾಣ್ವಾಂಗೆ ಹಾಕ್ಯಳೆ .
’ ಸೆರಗು ಹನಿ ಬದೀಗ್ ಮಾಡ್ಕ್ಯಳೆ, ಊದುಬತ್ತಿ ತಾಗ್ ಹೋಕು ’ .
’ ಮನ್ನೆ ಹಬ್ಬಕ್ಕೆ ತಗಂಡಿದ್ದು ನೀಲಿ ಸೀರೆ ಉಟ್ಕಳಕಾಗಿತ್ತು ಅತ್ಗೆ.ನಿಂಗೆ ಚೊಲೋ ಕಾಣ್ತಿತ್ತು’ ಇತ್ಯಾದಿ ಇತ್ಯಾದಿ..

ಮಂಗಳಾರತಿ ಶುರುವಾದ್ ಕೂಡ್ಲೇ , ಅದರ ಸಂತಿಗೆ  ಮಕ್ಕಳ ಜಗಳದ ಹಿಮ್ಮೇಳವೂ ಶುರು. ಜಾಂವಟೆ ( ಜಾಗಟೆ) ಬಾರ್ಸವ್ ಯಾರು  ಹೇಳಿ  ತಕರಾರು.
ತನಗೆ ದೊಡ್ಡ ಜಂವಟೆ ಯೇ ಬೇಕು ಎಂದು ಸುರೇಶನ ಹಟವೂ , ತಾನು ದೊಡ್ಡವ ಅದು ತನ್ನ ಹಕ್ಕು ಎಂದು ಜಂವಟೆ ಕಸಿಯುವ ಅವನಣ್ಣನೂ ಗಲಾಟೆ ಶುರು ಮಾಡಿ , ಸುರೇಶನ ಸ್ವರ ದೊಡ್ಡದಾಗಿ, ಭಟ್ರ ಮಂತ್ರಕ್ಕಿಂತಲೂ ತಾರಕಕ್ಕೇರಿದಾಗ, ಮಾವನ ಸಿಟ್ಟೂ ನೆತ್ತಿಗೇರುತ್ತಿತ್ತು.

’ಏ ಪ್ರಕಾಶ, ಕೊಡ ಅವಂಗೆ ಜಂವಟೆಯಾ, ನೀ ಶಂಖ ಊದಾ. ಪೂಜೆ ಮಾಡವ ನಿಂಗಳ ಜಗಳ ಸುಧಾರಿಸವ ? ಇಬ್ರಿಗೂ ಎರಡು ಬಿಡ್ತಿ ನೋಡಿ ಈಗ " , ಅಪ್ಪಯ್ಯನ ಕೆಂಗಣ್ಣಿಗೆ ಸುರೇಶನ ದನಿ ಸ್ವಲ್ಪ ಸಣ್ಣಾತು.
ಈಗ ಪದ್ದತ್ತೆಯ ಸರದಿ " ತಮ್ಮಾ , ಅವನ್ನ ಅಳಿಸಡದ,ನೀ ದೊಡ್ಡವ ಅಲ್ದನ ,ಕೊಡು ಅವಂಗೆ " .
ಅಂತೂ , ಸಣ್ಣವನ ಕೈಗೆ ದೊಡ್ಡ ಜಂವಟೆ ಸಿಕ್ಕಿ, ಅವನು ಪ್ರಪಂಚವನ್ನೇ ಗೆದ್ದ ಖುಶಿಯಿಂದ ಅದನ್ನು ಡಣ್ ಢಣ್ ಎಂದು ಎಲ್ಲ ಶಕ್ತಿ ಪ್ರಯೋಗಿಸಿ ಬಾರಿಸುತ್ತಾ ’ ಹೆಂಗಾತು ’ ಎಂಬ ದೃಷ್ಟಿಯನ್ನು ಅಣ್ಣನ ಕಡೆಗೆ ಎಸೆದರೆ , ಅಣ್ಣನೋ ,ಸಿಟ್ಟು , ಅವಮಾನದಿಂದ ಧುಮು ಧುಮು ಎನ್ನುತ್ತಾ ಹೊರಗೊಂದು ಬಾ ನೋಡ್ಕ್ಯತ್ತಿ ಎಂಬ ಕಣ್ಣೋಟದಿಂದ ತಮ್ಮನನ್ನು ಹೆದರಿಸುತ್ತಿದ್ದ .
ಅಷ್ಟೊತ್ತಿಗೆ , ’ ಮಂಗಳಾರತಿಗೆ ಎಲ್ಲರನ್ನೂ ಕರೀರಿ . ಮೆತ್ತಿ ಮೇಲೆ ಕುಂತವಕೆಲ್ಲ ಆಟ ಕಡೀಗೆ ಮುಂದುವರ್ಸವಡ ಹೇಳಿ .ಬರಲಿ ಅವೆಲ್ಲ ’ ಭಟ್ರು ತಮಾಶೆಯಾಗಿ ಹೇಳಿದಮೇಲೆ , ಮೆತ್ತಿಗೆ ಇಸ್ಫೀಟ್ ಹಿಡಿದು ಕುಳಿತವರಿಗೆ ಕರೆಯ ಹೋಗವು.

ಇನ್ನು ಸತ್ಯನಾರಾಯಣ ಪ್ರಸಾದಕ್ಕೆ ಹುಡುಗ್ರದ್ದು ಗಲಾಟೆನೋ ಗಲಾಟೆ . ’ ಭಟ್ರೇ, ನಂಗಿನ್ನೊಂದು ಚೂರು’ ಎನ್ನುತ್ತಾ ಮುಂದುಮಾಡದೇ ಕೆಲಸ . ಭಟ್ಟರೋ ’ ತಗ ಮಾಣೀ, ರಾಶಿ ಕೊಡ್ತಿ ನಿಂಗೆ ’ ಎನ್ನುತ್ತಾ , ಖಾಲಿ ಚಮಚದಿಂದ ಪ್ರಸಾದ ಹಾಕಿದಾಂಗೆ ಮಾಡಿ , ತಮಾಶೆ ಮಾಡದು. ಒಳ್ಳೆ ಮಜಾನೇಯಾ !

ಇಷ್ಟಾದ ಮೇಲೆ ಪಟ್ಟಾಗಿ ಕೂತು ರುಚಿಯಾದ ಊಟ ಉಂಡರೆ ಅಲ್ಲಿಗೆ ಸತ್ಯನಾರಾಯಣ ಕಥೆ ಮುಗಿದಾಂಗೆ.
-----------------------------------------------
ಇಲ್ಲಿ ಪುಣೆಯಲ್ಲಿ ಬಂದು ೧೫ ವರ್ಷಗಳಲ್ಲಿ ಎಷ್ಟೋ ಮನೆಗಳಲ್ಲಿ ಸತ್ಯನಾರಾಯಣ ಪೂಜೆಗೆ ಹೋಗಿದ್ದೇನೆ. ನಮ್ಮ ಹಳ್ಳಿಗಳಂತೆ, ಆಚೀಚಿನವರನ್ನೂ , ನೆಂಟರಿಷ್ಟರನ್ನೂ ಪೂಜೆಗೆ ಕರೆದು ಊಟ ಹಾಕುವ ಪದ್ಧತಿ ಪೇಟೆಗಳಲ್ಲಿಲ್ಲ. ಇಲ್ಲಿ ಸಾಧಾರಣವಾಗಿ ಕರೆಯುವುದು ಪೂಜೆಗಲ್ಲ. "ಸಂಜೆ ಬಂದು ಪ್ರಸಾದ ತೊಗೊಂಡು ಹೋಗಿ’ ಎಂದು .ಹೀಗೆ ಕರೆದವರ ಮನೆಗೆ ಸಂಜೆ ಹೊತ್ತಿಗೆ ಹೋಗಿ , ದೇವರಿಗೆ ನಮಸ್ಕಾರ ಹಾಕಿ, ಮನೆಯೊಡತಿಯ ಹೊಸ ಸೀರೆ- ಒಡವೆಗಳನ್ನು ಹೊಗಳಿ, ಪೇಪರ್ ನ ಪುಟ್ಟ ತಟ್ಟೆಯಲ್ಲಿ ಕೊಟ್ಟ ಒಂದು ಚಮಚ ಪ್ರಸಾದ ತಿಂದಿದ್ದೇನೆ. ಆದರೆ ನಮ್ಮ ಕಡೆಯ ಪ್ರಸಾದದ ರುಚಿ ಇಲ್ಲಿಲ್ಲ .ನಾವಂತೂ ಸಣ್ಣವರಿದ್ದಾಗ ( ಅಷ್ಟೇ ಏನು, ಸಾಧ್ಯವಾದರೆ ಈಗಲೂ ) ಕೊಡುವವರಿಗೆಲ್ಲ ಪ್ರಸಾದ ಪೊಟ್ಟಣ ಕಟ್ಟಿಟ್ಟ ಮೇಲೆ, ತಪ್ಪಲೆ ಕೆರೆಸಲು ಕಾಯುತ್ತಿದ್ದೆವು. ಪಾತ್ರೆಯ ತಳದಲ್ಲಿ ಹಿಡಿದುಕೊಂಡಿರುವ ಪ್ರಸಾದದ ರುಚಿಯೇ ರುಚಿ. ಆಹಾ !

ಇಲ್ಲಾದರೋ ’ ಶಿರಾ’ ಕ್ಕೆ ದ್ರಾಕ್ಷಿ, ಗೋಡಂಬಿ ಇತ್ಯಾದಿ ಹಾಕಿ ಮಾಡಿದಂತಿರುವ ಪ್ರಸಾದಕ್ಕೆ ಹಾಲು , ಬಾಳೆಹಣ್ಣು ಎಲ್ಲ ಶಾಸ್ತ್ರಕ್ಕಾಗಿ ಮಾತ್ರ. ( ಕೆಲವು ಕಡೆ ಸಕ್ಕರೆಯನ್ನೂ ಶಾಸ್ತ್ರಕ್ಕೆಂಬಂತೆ ಹಾಕಿರುತ್ತಾರೆ! ) ಆಗೆಲ್ಲ ,ರವೆಗೆ ಸಮಪ್ರಮಾಣದಲ್ಲಿ ಹಾಲು, ಸಕ್ಕರೆ,ಬಾಳೆಹಣ್ಣೂ ,ತುಪ್ಪ ಹಾಕಿ ಮಾಡಿದ ನಮ್ಮೂರ ಪ್ರಸಾದ ನೆನಪಾಗುತ್ತದೆ. ಅದರಲ್ಲೂ , ಅಜ್ಜನ ಮನೆಯ ’ ಅಬ್ಬೆ’ ( ನಮ್ಮ ಅಜ್ಜಿ ) ಮಾಡಿದ ಪ್ರಸಾದದ ರುಚಿಯಂತೂ ಈಗಲೂ ನೆನೆಸಿಕೊಂಡಾಗೆಲ್ಲ ಬಾಯಲ್ಲಿ ನೀರು ತರುತ್ತದೆ.

ಆ ರುಚಿಯನ್ನು ’ ಕಾಪಿ ’ ಮಾಡುವ ಪ್ರಯತ್ನದಲ್ಲಿ ತಕ್ಕ ಮಟ್ಟಿಗೆ ಯಶಸ್ವಿಯಾಗಿದ್ದೇನೆ. ನಮ್ಮ ಆಫೀಸಿನಲ್ಲಿ ವರ್ಷಕ್ಕೊಮ್ಮೆ ಮಾಡುವ ಸತ್ಯನಾರಾಯಣ ಪೂಜೆಗೆ ಪ್ರಸಾದದ ಜವಾಬ್ದಾರಿ ನನ್ನದು! ಆಗ ಪ್ರಸಾದಕ್ಕೆ ಸಿಗುವ ’ ಕಾಂಪ್ಲಿಮೆಂಟ್’ ಕೇಳಿ ಮಹೇಶ್
’ ಮತ್ತೆಂತ ಅಲ್ಲದೇ ಹೋದರೂ ಪ್ರಸಾದ ಅಂತೂ ಮಾಡಲೆ ಬತ್ತು ಹೇಳಾತು ನೋಡು ನಿಂಗೆ ’ ಎಂದು ರೇಗಿಸಿ ನನ್ನ ಕೆಂಗಣ್ಣೆದುರಿಸುತ್ತಾರೆ.

No comments: