ನಾನು ಯಾಜ್ಞಸೇನಿ ! ದ್ರುಪದ ರಾಜನ ಮಗಳಾದ್ದರಿಂದ ದ್ರೌಪದಿ ಎಂಬ ಹೆಸರಿನಿಂದ ಸುಪರಿಚಿತಳು .
ಉತ್ತರ ನನಗೆ ಸರಿ ಹೋಗಲಿಲ್ಲ " ಅಕಸ್ಮಾತ್ , ಇದರಲ್ಲಿ ಗೆದ್ದವನು ನನಗೆ ಹಿಡಿಸದೇ ಹೋದರೆ?
ಪಾಂಚಾಲ ದೇಶದ ರಾಜಕುಮಾರಿಯಾದ್ದರಿಂದ " ಪಾಂಚಾಲಿ" ಎಂದೂ ಕರೆಯುವರು .
ಶ್ಯಾಮಲ ವರ್ಣದ ನನ್ನನ್ನು " ಕೃಷ್ಣೆ " ಎಂದರು. ಆ ಬಗ್ಗೆ ನನಗೆ ಬೇಸರವಿಲ್ಲ ! ಆದರೂ ಈ ಎಲ್ಲ ಹೆಸರುಗಳಲ್ಲಿ ನನ್ನ ನಿಜವಾದ ಹೆಸರು ನನಗೆ ನೆನಪಿಲ್ಲದಂತಾಗಿದೆ !
ಮಕ್ಕಳಿಲ್ಲ ಎಂದು ನೊಂದು ಗುರುಗಳ ಸಲಹೆಯಂತೆ ಯಾಗ ಮಾಡಿದಾಗ ಹುಟ್ಟಿದವಳು ನಾನು ! ನನ್ನೊಂದಿಗೆ ಅಣ್ಣನೂ ಇದ್ದ. ನಮ್ಮಿಬ್ಬರನ್ನೂ ಸರಿಸಮಾನರಾಗಿ ಬೆಳೆಸಿದ ಅಪ್ಪ ದ್ರುಪದ ರಾಜ !
ಸ್ವಲ್ಪ ಕಪ್ಪಾದರೂ , ನಾನು ಅತ್ಯಂತ ಸುಂದರಿ ಎಂದು ಎಲ್ಲರೂ ಹೇಳುತ್ತಿದ್ದರು . ನನ್ನ ಮುಖದ ತೇಜಸ್ಸು , ಕಣ್ಣಲ್ಲಿನ ತೀಕ್ಷ್ಣತೆಗೆ ಬೆರಗಾಗದವರಿಲ್ಲ !
ಬಾಲ್ಯದಿಂದಲೂ ಸ್ವಲ್ಪ ಹಟಮಾರಿಯಾಗೆ ಬೆಳೆದವಳು ! ಹೆಣ್ಣು ಮಕ್ಕಳಿಗೆ ಸಹನೆ ಬೇಕು , ಹಠ ಸಲ್ಲ ಎಂಬ ಅಮ್ಮನ ಮಾತು ನನ್ನ ಕಿವಿಗೆ ಬೀಳುತ್ತಿರಲಿಲ್ಲ! ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇ ಬೇಕೆಂಬ ಹಠ ನನ್ನದು , ಅನ್ಯಾಯವನ್ನು ಸಹಿಸಲಾರೆ ಎಂಬ ಧೋರಣೆ ನನ್ನದು !
ಯೌವನಕ್ಕೆ ಕಾಲಿಟ್ಟು ಶೋಭಿಸುತ್ತಿರುವ ನನ್ನ ಮದುವೆಯ ಯೋಚನೆ ಅಪ್ಪನಿಗೆ ಬರುವುದು ಸಹಜ ! ಅವನ ಮನಸ್ಸಿನಲ್ಲಿ ಹಸ್ತಿನಾಪುರದ ರಾಜಕುಮಾರ ಪರಾಕ್ರಮಿ ಅರ್ಜುನ ತನ್ನ ಅಳಿಯನಾಗಬೇಕೆಂಬ ಬಯಕೆ ಇತ್ತು. ಆದರೆ ಪಾಂಡವರ ಹತ್ಯೆಯ ಸಂಚು ನಡೆದು ಲಾಕ್ಷಾಗೃಹದಲ್ಲಿ ಹೊತ್ತಿಕೊಂಡ ಅಗ್ನಿಗೆ ಅವರೆಲ್ಲ ಆಹುತಿ ಆದರೆಂಬ ಸುದ್ದಿ ಕೇಳಿದಾಗಿಂದ ಅಪ್ಪನ ಉತ್ಸಾಹವೇ ಕುಂದಿದ್ದನ್ನು ನಾನು ಕಂಡಿದ್ದೆ . ಆದರೆ , ಕಾಲ ನಿಲ್ಲುವುದಿಲ್ಲ , ಹಾಗೆಯೇ ಕರ್ತವ್ಯವನ್ನು ನಿಲ್ಲಿಸಬಾರದು .
ಅಂತೆಯೇ ಒಂದು ದಿನ ನನ್ನನ್ನು ಕರೆಸಿಕೊಂಡು " ಮಗಳೇ , ಇಷ್ಟು ವರ್ಷ ನಿನ್ನ ಆಟೋಟ , ಬೆಳವಣಿಗೆಗಳನ್ನು ಕಂಡು ಸಂತೋಷಪಡುತ್ತಿದ್ದ ನಮಗೆ ಈಗ ಬೆಳೆದು ನಿಂತಿರುವ ನಿನ್ನ ಮದುವೆ ಮಾಡುವ ಯೋಚನೆ ಬಂದಿದೆ . ಅದಕ್ಕೋಸ್ಕರ "ಸ್ವಯಂವರ" ದ ಏರ್ಪಾಡು ಮಾಡಲು ಹೇಳಿದ್ದೇನೆ ." ಎಂದ .
"ಅಪ್ಪಾ, ನನ್ನನ್ನು ನಿಮಗಿಂತ ಚೆನ್ನಾಗಿ ಬಲ್ಲವರು ಯಾರಿದ್ದಾರೆ? ನನ್ನ ಗುಣ- ಅವಗುಣಗಳು, ಇಷ್ಟ-ಅ ಇಷ್ಟಗಳು
ಎಲ್ಲವೂ ನಿಮಗೆ ಸುಪರಿಚಿತ. ನೀವೇ ನನಗೊಬ್ಬ ಸೂಕ್ತ ವರನನ್ನು ಹುಡುಕ ಬಲ್ಲಿರಿ . ಆ ನಂಬಿಕೆ ನನಗಿದೆ . ಮತ್ತೆ ಸ್ವಯಂವರವೇಕೆ ?"
"ಹಾಗಲ್ಲ ಮಗಳೇ , ನಿನ್ನಂಥಾ ಕುವರಿಯನ್ನು ಪಡೆದಿದ್ದು ನನ್ನ ಸೌಭಾಗ್ಯ . ನಿನ್ನನ್ನು ಮದುವೆಯಾಗುವವನೂ ಎಲ್ಲಾ ರೀತಿಯಿಂದ ನಿನಗೆ ಯೋಗ್ಯನಾಗಿರ ಬೇಕೆಂಬುದು ನನ್ನ ಆಸೆ . ನೀನು ಒಂದು ಪ್ರತಿಷ್ಠಿತ ಸಾಮ್ರಾಜ್ಯದ ಬಲಿಷ್ಠ ರಾಜನ ಮಹಾರಾಣಿ ಆಗಬೇಕೆಂಬುದು ನಮ್ಮ ಬಯಕೆ . ಅದಕ್ಕೆಂದೇ , ಈ ಸ್ವಯಂವರದಲ್ಲಿ ಒಂದು ಪರೀಕ್ಷೆಯಿಟ್ಟಿದ್ದೇನೆ . ಮೇಲೆ ತಿರುಗುತ್ತಿರುವ ಚಕ್ರಕ್ಕೆ ಒಂದು ಮತ್ಸ್ಯವನ್ನು ಕಟ್ಟಿ, ಕೆಳಗಿರುವ ಎಣ್ಣೆಯ ಪಾತ್ರೆಯಲ್ಲಿ ಆ ಮತ್ಸ್ಯದ ಪ್ರತಿಬಿಂಬವನ್ನು ನೋಡಿ ತನ್ನ ಬಾಣದಿಂದ ಅದರ ಕಣ್ಣನ್ನು ಭೇದಿಸಿದವನು ನಿನ್ನನ್ನು ವರಿಸುವನು . "
ಅಪ್ಪನ ಮಾತುಗಳನ್ನು ನಡುವೆಯೇ ತುಂಡರಿಸಿ ಕೇಳಿದೆ , " ಅಪ್ಪಾ , ಸ್ವಯಂವರ ಎಂದರೆ ನಾನು ಸ್ವತಃ ವರನನ್ನು ಆರಿಸ ಬೇಕಲ್ಲವೇ? ಈಗ ಇದು ಮತ್ಸ್ಯ ಭೇದಿಸಿದವರಿಗೆ ನಾನು ಬಹುಮಾನವಾಗಿ ಸಿಕ್ಕಂತಾಗಲಿಲ್ಲವೇ? "
ಅಪ್ಪ, ನನ್ನ ಪ್ರಶ್ನೆ ಕಿವಿಗೆ ಬೀಳಲಿಲ್ಲ ಎಂಬಂತೆ ಮುಂದುವರಿಸಿದ . "ಇದು ಅಷ್ಟು ಸುಲಭವಲ್ಲ ಮಗಳೇ ! ಮತ್ಸ್ಯ ಸದಾ ತಿರುಗುತ್ತಿರುತ್ತದೆ, ಬಾಣ ಹೂಡುವವನು ಅದನ್ನು ನೇರವಾಗಿ ನೋಡದೆ ಕೆಳಗಿನ ಪಾತ್ರೆಯಲ್ಲಿರುವ ಪ್ರತಿಬಿಂಬವನ್ನೂ ನೋಡುತ್ತಾ ಮೇಲಿನ ಮತ್ಸ್ಯಕ್ಕೆ ಗುರಿ ಇಟ್ಟು ಅದರ ಕಣ್ಣನ್ನು ಭೇದಿಸಬೇಕು !! ತಾಳ್ಮೆ, ವೇಗ, ಲಕ್ಷ್ಯ , ಎಲ್ಲವೂ ಆತನಲ್ಲಿರಬೇಕು . ಅಲ್ಲದೆ , ಅಲ್ಲಿ ಇಡುತ್ತಿರುವ ಧನುಸ್ಸು ಕೂಡ ಸಾಮಾನ್ಯದ್ದಲ್ಲ ! ಅತ್ಯಂತ ಭಾರವಾದ್ದು . "
"ಇಲ್ಲ ಮಗಳೇ, ಗೆದ್ದವನನ್ನು ನೀನು ವರಿಸಲೇ ಬೇಕು ಅದು ನಿಯಮ ! "
"ಅಕಸ್ಮಾತ್, ಒಬ್ಬರಿಗಿಂತ ಹೆಚ್ಚು ಜನ ಯಶಸ್ವಿ ಆದರೆ .... ? "
"ಹಾಗಾಗದು ಮಗಳೇ , ನನಗೆ ತಿಳಿದಂತೆ ಕೇವಲ ಒಬ್ಬಿಬ್ಬರಷ್ಟೇ ಈ ಪಂಥವನ್ನು ಗೆಲ್ಲ ಬಲ್ಲವರು ."
"ಅಕಸ್ಮಾತ್ ಆ ಇಬ್ಬರೂ ಗೆದ್ದರೆ? " ನನ್ನ ಪ್ರಶ್ನೆಗಳು ಮುಗಿಯುತ್ತಿರಲಿಲ್ಲ
"ಮಗೂ, ಮೊದಲು ಯಾರು ಯಶಸ್ವಿಯಾಗುತ್ತಾರೋ , ಅವರೇ ನಿನ್ನನ್ನು ವರಿಸುವವರು ."
"ಆದರೆ ಅಪ್ಪ, ಅದು ಅನ್ಯಾಯವಲ್ಲವೇ? ಇನ್ನೊಬ್ಬ ಸ್ಪರ್ಧಿಗೆ ಅವಕಾಶವನ್ನೇ ಕೊಡದೆ ಫಲಿತಾಂಶ ಘೋಷಿಸುವುದು ತಪ್ಪಲ್ಲವೇ ? ಎಲ್ಲಕ್ಕಿಂತ ಮುಖ್ಯವಾಗಿ ಇದರಲ್ಲಿ ನನ್ನ ಆಯ್ಕೆಗೆ ಅವಕಾಶವೇ ಇಲ್ಲದಿರುವಾಗ ಸ್ವಯಂವರ ಹೇಗಾಗುತ್ತದೆ? "
ಅಪ್ಪ ನ ಹಣೆಯಲ್ಲಿ ನೆರಿಗೆ ಮೂಡಿತು . ಉತ್ತರ ಕೊಡಲು ತಡವರಿಸುವಾಗ .. ಅಷ್ಟೊತ್ತೂ ಇದನ್ನೆಲ್ಲಾ ಕೇಳುತ್ತಾ ಕುಳಿತಿದ್ದ ಅಮ್ಮ ಸಿಡುಕಿದಳು .
" ಈಗ ಸ್ವಯಂವರ ಘೋಷಣೆಯ ಆಜ್ಞೆಯಾಗಿದೆ . ನೀನು ತಯಾರಿ ಮಾಡಿಕೊ ಸಾಕು . ಉಳಿದಂತೆ ನಿನ್ನ ಅಭಿಪ್ರಾಯ ಬೇಕಿಲ್ಲ " ಎಂದಳು.
" ಈಗ ಸ್ವಯಂವರ ಘೋಷಣೆಯ ಆಜ್ಞೆಯಾಗಿದೆ . ನೀನು ತಯಾರಿ ಮಾಡಿಕೊ ಸಾಕು . ಉಳಿದಂತೆ ನಿನ್ನ ಅಭಿಪ್ರಾಯ ಬೇಕಿಲ್ಲ " ಎಂದಳು.
ಅವಮಾನವಾಗಿ ನಾನು ಅಲ್ಲಿಂದಾ ಧುಮುಗುಡುತ್ತ ನನ್ನ ಕೋಣೆಗೆ ಹೋದೆ .
ಅಂತೂ ಆ ದಿನ ಬಂದೆ ಬಿಟ್ಟಿತು . ಹಿಂದಿನ ರಾತ್ರಿಯೆಲ್ಲ ನನಗೆ ನಿದ್ರೆಯಿಲ್ಲ . ಸ್ವಯಂವರ ಹೆಸರಿಗೆ ಮಾತ್ರ . ಇಲ್ಲಿ ನನಗೆ ಆಯ್ಕೆಯ ಸ್ವಾತಂತ್ರ್ಯವಿಲ್ಲ ಎಂದು ಮನಸ್ಸು ಕೆರಳುತ್ತಿತ್ತು . ಬಾಲ್ಯದಲ್ಲಿ ನಾನು ಕೇಳಿದ್ದೆಲ್ಲವನ್ನೂ ಇಲ್ಲವೆನ್ನದೆ ಕೊಟ್ಟು ಮುದ್ದು ಮಾಡಿದ ತಂದೆ-ತಾಯಿ , ಈಗ ನನ್ನ ಜೀವನದ ಅತ್ಯಂತ ಮಹತ್ವದ ಹಂತದಲ್ಲೇ ನನಗೆ ಆಯ್ಕೆಯ ಸ್ವಾತಂತ್ರ್ಯವನ್ನು ನಿರಾಕರಿಸಿದ್ದು ನನಗೆ ನಂಬಲಾಗುತ್ತಿಲ್ಲ
ಮರುದಿನ ಸಾಲಂಕೃತಳಾಗಿ ಸಭಾಮಂಟಪದಲ್ಲಿ ನಡೆದು ಬರುವಾಗ ಎಲ್ಲರ ಕಣ್ಣುಗಳೂ ನನ್ನ ಮೇಲಿದ್ದಿದ್ದು ಕಸಿವಿಸಿ ತರುತ್ತಿತ್ತು . ರಾಜಕುಮಾರಿಯಾದ ನಾನು ಇಂದು ಇಲ್ಲಿ ಪ್ರದರ್ಶನದ ವಸ್ತುವಾದೆ ಎಂಬ ಭಾವನೆಯಿಂದ ಕ್ರುದ್ಧಳಾಗುತ್ತಿದ್ದೆ . ಎಲ್ಲಾ ಹೆಣ್ಣು ಮಕ್ಕಳಂತೆ ತಲೆ ತಗ್ಗಿಸಿ ನಾಚುತ್ತಾ ನಡೆಯುವ ಸ್ವಭಾವ ನನ್ನದಲ್ಲ ! ಅತ್ತಿತ್ತ ಕುಳಿತ ವಿವಾಹಾರ್ಥಿಗಳನ್ನು ಅಳೆಯುವಂತೆ ನೋಡುತ್ತಾ ಗಂಭೀರವಾಗಿ ಮುಂದೆ ಸಾಗಿ ನನ್ನ ಜಾಗದಲ್ಲಿ ಕುಳಿತವಳನ್ನು ಅಲ್ಲಿ ನೆರೆದ ಎಲ್ಲರ ಕಣ್ಣುಗಳೂ ಹಿಂಬಾಲಿಸುತ್ತಿದ್ದವು .
ಪಕ್ಕದಲ್ಲಿ ಕುಳಿತ ಸಖಿ ಕುಮುದಿನಿ ಸಣ್ಣ ದನಿಯಲ್ಲಿ ಅಲ್ಲಿ ಬಂದಿರುವವರ ಕಿರುಪರಿಚಯ ಮಾಡಿಕೊಡುತ್ತಿದ್ದಳು .
ಸ್ಥೂಲವಾಗಿ ಅವರನ್ನು ಅವಲೋಕಿಸುತ್ತಿದ್ದೆ.
ಅನ್ಯ ಮನಸ್ಕಳಾಗಿ ನನ್ನದೇ ಯೋಚನಾ ಲಹರಿಯಲ್ಲಿ ಮುಳುಗಿರುವಾಗ , ಅದೆಷ್ಟೋ , ರಾಜರು, ರಾಜಕುಮಾರರು , ಮತ್ಸ್ಯ ಯಂತ್ರ ಭೇದಿಸುವ ಪ್ರಯತ್ನ ಮಾಡಿ ಸೋತರು . ನನ್ನ ಕಣ್ಣು ಆ ದಿಕ್ಕಿಗಿತ್ತೆ ಹೊರತು ಲಕ್ಷ್ಯವಿರಲಿಲ್ಲ . ಅಷ್ಟರಲ್ಲಿ ಸಭೆಯಲ್ಲಿ ಗದ್ದಲ ಕೇಳಿ ಅತ್ತ ನೋಡಿದೆ. ಒಬ್ಬ ಸುಧೃಡ ಸುಂದರ ಯುವಕ ಎದ್ದೇಳುತ್ತಿದ್ದ . ಆದರೆ ಅತ್ತಿತ್ತಲಿನವರೆಲ್ಲ ಅಸಮಧಾನ ವ್ಯಕ್ತಪಡಿಸುತ್ತಿದ್ದರು. ಯಾರೋ ಒಬ್ಬರು ಎಲ್ಲರಿಗೂ ಕೇಳುವಂತೆ " ಕೇವಲ ಕ್ಷತ್ರಿಯ ರಾಜಕುಮಾರರು ಭಾಗವಹಿಸ ಬಹುದು . ಸೂತರಲ್ಲ ! " ಎಂದು ಕುಹಕವಾಡಿದರು. ಆತ ಅವಮಾನವಾಗಿ ಕುಳಿತು ಬಿಟ್ಟ . ಅಲ್ಲಿದ್ದ ಎಲ್ಲ ರಾಜರುಗಳು ಪ್ರಯತ್ನಿಸಿ ಸೋತರು . ಅಪ್ಪನ ಮುಖದಲ್ಲಿ ಆತಂಕದ ನೆರಳು ಸುಳಿಯುತ್ತಿತ್ತು. ಅಲ್ಲೇ ಪಕ್ಕದಲ್ಲಿ ಕುಳಿತಿದ್ದ ಕೃಷ್ಣ ಮುಗುಳು ನಗುತ್ತಲೇ, ಅಪ್ಪನನ್ನು ಸಮಾಧಾನಿಸುತ್ತಿದ್ದ .
ಆಗ , ಸ್ವಯಂವರ ನೋಡಲು ನೆರೆದಿದ್ದ ಬ್ರಾಹ್ಮಣರ ನಡುವೆಯಿಂದ ಒಬ್ಬ ಎದ್ದೇಳುತ್ತಿದ್ದ . ಕುಮುದಿನಿ ಅಚ್ಚರಿಯಿಂದ " ರಾಜಕುಮಾರರೆ ಸೋತಿರುವಾಗ ಈ ಬ್ರಾಹ್ಮಣ ಯುವಕ ಏನು ಮಾಡುವನೋ ? " ಎಂದು ಉದ್ಗರಿಸಿದಳು . ನನಗೂ ಕುತೂಹಲವಾಯ್ತು !
ನಾನೊಬ್ಬ ದೊಡ್ಡ ಸಾಮ್ರಾಜ್ಯದ ಮಹಾರಾಣಿ ಆಗಬೇಕೆಂಬ ಅಪ್ಪನ ಇಚ್ಛೆಯನ್ನೂ ನೆನೆಸಿಕೊಂಡೆ ! ಇವನೇನಾದರೂ ಗೆದ್ದರೆ , ಒಬ್ಬ ಬ್ರಾಹ್ಮಣನಿಗೆ ಅಪ್ಪ ಧಾರೆ ಎರೆಯುವನೆ? ಎಂದು ನೆನೆಸಿಕೊಂಡು , ಮನಸಲ್ಲೇ ನಕ್ಕು ಬಿಟ್ಟೆ.
ಈ ಯುವಕನ ಮುಖದಲ್ಲಿ ತೇಜಸ್ಸಿತ್ತು ಆದರದು ' ಕ್ಷಾತ್ರ ತೇಜಸ್ಸು " ಎಂದು ನನಗೆ ಎನಿಸಿತು . ಹೊದ್ದುಕೊಂಡ ಉತ್ತರೀಯವು ಹರವಾದ ಎದೆ, ಬಲಿಷ್ಠ ಬಾಹುಗಳು ಮತ್ತು ಅವುಗಳ ಮೇಲಿನ ಗಾಯದ ಕಲೆಗಳನ್ನು ಮರೆಮಾಚಲು ಅಸಫಲವಾಗಿತ್ತು ! ಸಭೆಯಲ್ಲಿ ಪುನಃ ಗಲಿಬಿಲಿ ಶುರುವಾಯಿತು .
ಗೊಂದಲಗೊಂಡ ಅಪ್ಪನಿಗೆ ಕೃಷ್ಣ ಕಿವಿಯಲ್ಲಿ ಏನೋ ಉಸುರಿ ಸಮಾಧಾನಿಸಿದ ಮೇಲೆ , ಅಪ್ಪ ಆ ಯುವಕನಿಗೆ ಅನುಮತಿ ಕೊಟ್ಟ.
ಅವನು ತನ್ನ ಪಕ್ಕದಲ್ಲಿದ್ದ ಇನ್ನಿಬ್ಬರು ಬ್ರಾಹ್ಮಣರಿಗೆ ವಂದಿಸಿ , ಯಂತ್ರದ ಬಳಿ ಬಂದ . ಅಲ್ಲಿಂದಲೇ ಅಪ್ಪನಿಗೂ , ಕೃಷ್ಣನಿಗೂ ವಂದಿಸಿದಾಗ , ಮತ್ತೆ ಗುಸು ಗುಸು ಶುರುವಾಯಿತು .
ಅತ್ತಿತ್ತ ಗಮನ ಕೊಡದೇ ಒಮ್ಮೆ ಧನುಸ್ಸನ್ನೂ, ಮೇಲೆ ತಿರುಗುತ್ತಿರುವ ಮೀನನ್ನೂ ಲಕ್ಷ್ಯಕೊಟ್ಟು ನೋಡಿದ . ನಂತರ ಬಾಗಿ ಬಿಲ್ಲನ್ನೆತ್ತಿಕೊಂಡ . ಠೀವಿಯಿಂದ ಹೆದೆಯೇರಿಸಿದವನನ್ನು ನೋಡಿ ಸಭೆಯ ಗೊಂದಲ ಒಮ್ಮೆಲೆ ಶಾಂತವಾಯ್ತು . ಕೆಳಗಿದ್ದ ತೈಲದ ಪಾತ್ರೆಯಲ್ಲಿ ಕಾಣುವ ಮತ್ಸ್ಯದ ಪ್ರತಿಬಿಂಬವನ್ನೇ ತದೇಕ ಚಿತ್ತದಿಂದ ನೋಡುತ್ತಾ ಗುರಿಯಿಡತೊಡಗಿದ . ಎಲ್ಲರೂ ಈಗ ಉಸಿರು ಬಿಗಿ ಹಿಡಿದು ಕುತೂಹಲದಿಂದ ನೋಡುತ್ತಿದ್ದರು . ಅವನ ಮುಖದಲ್ಲಿ ಸ್ವಲ್ಪವೂ ಗೊಂದಲ ,ಉದ್ವೇಗ ಕಾಣುತ್ತಿರಲಿಲ್ಲ ! ನೋಡುತ್ತಿದ್ದ ನನ್ನ ಎದೆ ಬಡಿತ ಹೆಚ್ಚ ತೊಡಗಿತು .
ಅಷ್ಟರಲ್ಲಿ , ಹುರಿಯಿಂದ ಚಿಮ್ಮಿದ ಬಾಣ ಮೇಲೆ ತಿರುಗುತ್ತಿದ್ದ ಮೀನಿನ ಕಣ್ಣನ್ನು ಭೇದಿಸಿ ಬಿಟ್ಟಿತು ! ಬ್ರಾಹ್ಮಣರ ಸಮೂಹದಿಂದ ಹರ್ಷೋದ್ಗಾರಗಳು ಕೇಳಿದವು . ಕುಳಿತಿದ್ದ ರಾಜರು, ರಾಜಕುಮಾರರು ತಮ್ಮ ಕಣ್ಣನ್ನೇ ನಂಬದವರಂತೆ ಮುಖ ಮುಖ ನೋಡ ತೊಡಗಿದರು . ಕೆಲವರಿಂದ ಮೆಚ್ಚುಗೆಯ ಮಾತು ಕೇಳಿತಾದರೂ , ಹೆಚ್ಚಿನವರ ಮುಖದಲ್ಲಿ ಅಸಹನೆ ಎದ್ದು ತೋರುತ್ತಿತ್ತು .
ಅಪ್ಪನ ಮುಖದ ಲ್ಲಿ ನಿರಾಳ ಭಾವ ತೋರಿದರೂ , ಚಿಂತೆಯ ಸುಳಿಹೂ ಜೊತೆಯಲ್ಲೇ ಇತ್ತು . ಅಮ್ಮ ನ ಮುಖದಲ್ಲಿ ನಿರಾಸೆ , ಆತಂಕವಿತ್ತು . ಆದರೆ ಸ್ವಯಂವರದ ನಿರ್ಧಾರ ಅವರದ್ದೇ ಆಗಿದ್ದರಿಂದ ಈಗ ಅದರ ನಿಯಮ ಪಾಲಿಸದೆ ಗತ್ಯಂತರವಿಲ್ಲ .
ಅಪ್ಪನ ಸಂಜ್ಞೆಯ ಮೇರೆಗೆ , ನಾನು ಮೆಲ್ಲನೆ ಎದ್ದು ವರಮಾಲೆಯೊಡನೆ ಗೆದ್ದ ಯುವಕನತ್ತ ನಡೆದೆ. ಮಾಲೆ ಹಾಕಲು ಹೊರಟಾಗ ಅವನು ನನ್ನನ್ನು ತಡೆದು , ಅಪ್ಪನತ್ತ ತಿರುಗಿ ನಮಸ್ಕರಿಸಿದ . ಗಂಭೀರವಾದ ದನಿಯಲ್ಲಿ " ಮಹಾರಾಜ , ನಾನು ಉದ್ಧಟ ಎಂದು ಕೊಳ್ಳಬೇಡಿ. ಆದರೆ ನಾನು ವಿಜಯಿಯೇ ಆಗಿದ್ದರೂ ನಿಮ್ಮ ಮಗಳನ್ನು ವರಿಸುವ ಮುನ್ನ ನನ್ನ ತಾಯಿಯ ಅಪ್ಪಣೆ ಕೇಳ ಬಯಸುತ್ತೇನೆ. ದಯವಿಟ್ಟು ಅನುಮತಿ ನೀಡಿ ." ಎಂದು ವಿನೀತನಾಗಿ ನುಡಿದ .
ಆತನ ಕೋರಿಕೆ ಸಾಧುವೇ ಆಗಿದ್ದರಿಂದ ಅಪ್ಪನಿಗೆ ಬೇರೆ ದಾರಿಯಿರಲಿಲ್ಲ . " ನಿಮ್ಮ ಮನೆ ಎಲ್ಲಿದೆ ಎಂದು ತಿಳಿಸಿದರೆ ಈ ಕ್ಷಣವೇ ರಥವನ್ನು ಕಳಿಸಿ ನಿಮ್ಮ ತಾಯಿಯನ್ನು ಗೌರವದಿಂದ ಇಲ್ಲಿ ಕರೆಯಿಸುತ್ತೇನೆ "
ಅಪ್ಪನ ಮಾತಿಗೆ ಆತ ನಮ್ರನಾಗಿಯೇ . " ಕ್ಷಮಿಸಿ ಮಹಾರಾಜಾ, ನನ್ನ ತಾಯಿ ಹೊರಗೆಲ್ಲೂ ಬರುವುದಿಲ್ಲ. ಆದ್ದರಿಂದ ನಾನೇ ರಾಜಕುಮಾರಿಯನ್ನು ಮನೆಗೆ ಕರೆದೊಯ್ಯುತ್ತೇನೆ. ದಯವಿಟ್ಟು ಕಳಿಸಿಕೊಡಿ " ಎಂದ.
ಅಪ್ಪನ ಗೊಂದಲ ಹೆಚ್ಚಿತು. ಮದುವೆಗೂ ಮುಂಚೆ ಮಗಳನ್ನೂ ಹೀಗೆ ಪರ ಪುರುಷನೊಂದಿಗೆ ಕಳಿಸುವ ಪದ್ಧತಿಯಿಲ್ಲ . "ಅಕಸ್ಮಾತ್ ನಿಮ್ಮ ತಾಯಿ ಯಾವುದೇ ಕಾರಣದಿಂದ ಒಪ್ಪದಿದ್ದಲ್ಲಿ...... "
"ಮಹಾರಾಜಾ , ಆ ಬಗ್ಗೆ ಯೋಚನೆ ಬೇಡ. ಅಮ್ಮನ ಅನುಮತಿ ಖಂಡಿತ ಸಿಗುವುದೆಂಬ ನಂಬಿಕೆ ನನಗಿದೆ. ನೀವು ರಾಜಕುಮಾರಿಯನ್ನು ಯಾವ ಸಂಶಯವೂ ಇಲ್ಲದೆ ಕಳಿಸಿಕೊಡಿ . ನಿಮ್ಮ ಗೌರವಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು ".
ಅಂತೂ ನಾನು ನನ್ನ ಭಾವೀ ಪತಿಯ ಜೊತೆ ಅವನ ತಾಯಿಯನ್ನು ಭೇಟಿಯಾಗಲು ಹೊರಟೆ. ಇಲ್ಲಿ ನನ್ನನ್ನು ಕೇಳುವವರು ಯಾರೂ ಇರಲಿಲ್ಲ . ಅವರೇ ನಿರ್ಧರಿಸಿದ್ದನ್ನು ಪಾಲಿಸುವುದಷ್ಟೇ ನನ್ನ ಕರ್ತವ್ಯ !
ನನ್ನ ಕೋರಿಕೆಯ ಮೇರೆಗೆ ಕುಮುದಿನಿಯನ್ನೂ ನನ್ನ ಜೊತೆ ಕಳಿಸಲು ಹಾಗೂ ಕರೆದೊಯ್ಯಲು ಅಪ್ಪ ಮತ್ತು ಆ ಯುವಕ ಒಪ್ಪಿದರು
ಪಟ್ಟಣದ ಮೂಲೆಯಲ್ಲಿ ರಥ ಹೋಗದಷ್ಟು ಚಿಕ್ಕ ಗಲ್ಲಿಯ ಬಳಿ ಇಳಿದು , ನಾನು ಯುವಕ ಹಾಗು ಅವನ ೪ ಸೋದರರೊಂದಿಗೆ ಮನೆಯತ್ತ ಹೊರಟೆ. ಗಲ್ಲಿಯ ಎರಡೂ ಕಡೆಯಲ್ಲಿದ್ದ ಮನೆಗಳಿಂದ ಜನರು ಹೊರಬಂದು ಕುತೂಹಲದಿಂದ ನೋಡುತ್ತಿದ್ದರು .
ರಾಜಕುಮಾರಿ ತಮ್ಮ ಮನೆಗಳ ಮುಂದೆ ೪ ಜನ ಬ್ರಾಹ್ಮಣ ಯುವಕರೊಂದಿಗೆ ಕಾಲ್ನಡಿಗೆಯಲ್ಲಿ ಹೋಗುತ್ತಿರುವುದು ಅವರಿಗೆ ನಂಬಲಾಗುತ್ತಿಲ್ಲ . ನಾನೋ , ಮುಜುಗರದಿಂದ ಕೆಂಪಾಗಿ ನೆಲ ನೋಡುತ್ತಾ ನಡೆಯುತ್ತಿದ್ದೆ . ಎಂದು ತಲೆ ತಗ್ಗಿಸಿ ನಡೆಯದವಳು ಇಂದು ಹೀಗೆ ಹೋಗುತ್ತಿರುವುದು ನನಗೆ ನಾನೇ ಅಪರಿಚಿತಳೆನಿಸುತ್ತಿತ್ತು.
ಅಂತೂ ಆ ರಸ್ತೆಯ ತುದಿಗಿಂತ ಸ್ವಲ್ಪ ಮುಂಚೆ ಒಂದು ಚಿಕ್ಕ ಮನೆಯೆದುರು ನಿಂತರು. ಯುವಕ ನನ್ನತ್ತ ತಿರುಗಿ ,
"ರಾಜಕುಮಾರೀ, ಇದೆ ನಮ್ಮ ಮನೆ , ಚಿಕ್ಕದೆಂದು ನೊಂದುಕೊಳ್ಳಬೇಡ . ನಿನಗೆ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳುತ್ತೇವೆ " ಎಂದ .
"ರಾಜಕುಮಾರೀ, ಇದೆ ನಮ್ಮ ಮನೆ , ಚಿಕ್ಕದೆಂದು ನೊಂದುಕೊಳ್ಳಬೇಡ . ನಿನಗೆ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳುತ್ತೇವೆ " ಎಂದ .
ನಾನು ಏನು ಹೇಳಬೇಕು ಎಂದು ತಿಳಿಯದೇ, ಮನೆಯೊಳಗೆ ಹೊಕ್ಕ ಆ ಸೋದರರನ್ನು ಹಿಂಬಾಲಿಸಿದೆ .
ಜಗುಲಿಯಲ್ಲಿ ನಿಂತು ಅವನು " ಅಮ್ಮಾ , ನೋಡಿಲ್ಲಿ , ನಾನು ಇಂದು ಏನನ್ನು ತಂದಿದ್ದೇನೆ ! " ಎಂದು ಹೆಮ್ಮೆಯಿಂದ ಹೇಳಿದ.
ಅಡುಗೆ ಮನೆಯಲ್ಲಿದ್ದ ತಾಯಿ ಅಲ್ಲಿಂದಲೇ ನುಡಿದಳು " ಮಗೂ , ಅದೇನೇ ತಂದರೂ ನೀವು ಐವರೂ ಸಮನಾಗಿ ಹಂಚಿಕೊಳ್ಳಬೇಕು ಎಂದು ನಾನು ಯಾವತ್ತೂ ಹೇಳಿರುವೆನಲ್ಲ ! "
ನನಗಾದ ಆಘಾತವನ್ನು ಹೇಗೆ ವರ್ಣಿಸಲಿ? ಕುಮುದಿನಿ ಅಂತೂ ಮೂರ್ಚೆ ಹೋದಳು . ಯುವಕನ ಮುಖವೂ ಬಿಳುಚಿತು.
ಅವನು ಇನ್ನೊಮ್ಮೆ " ಅಮ್ಮಾ .. ನೀನೊಮ್ಮೆ ನೋಡು ಬಾ " ಎಂದ
ಅವನು ಇನ್ನೊಮ್ಮೆ " ಅಮ್ಮಾ .. ನೀನೊಮ್ಮೆ ನೋಡು ಬಾ " ಎಂದ
ಸೆರಗಿಗೆ ಕೈ ಒರೆಸಿಕೊಳ್ಳುತ್ತಾ ಹೊರಬಂದ ಆಕೆ ನನ್ನನ್ನು ನೋಡುತ್ತಲೇ " ಹೇ ದೇವಾ, ಇದೇನು ಮಾಡಿಬಿಟ್ಟೆ ನಾನು " ಎಂದು ಉದ್ಗರಿಸುತ್ತಾ ಬಾಗಿಲನ್ನು ಆಧರಿಸಿ ಕುಳಿತುಬಿಟ್ಟಳು ! "ಉದ್ದೇಶಪೂರ್ವಕವಾಗಿ ಹೇಳಿದ್ದಲ್ಲ ಮಗೂ ಘೋರ ಅಪರಾಧವಾಗಿ ಬಿಟ್ಟಿತು ನನ್ನಿಂದ" ಎಂದು ನೊಂದುಕೊಂಡಳು.
ಅಷ್ಟರಲ್ಲಿ ಸ್ವಲ್ಪ ಸುಧಾರಿಸಿಕೊಂಡ ಯುವಕ " ರಾಜಕುಮಾರಿ, ನಮ್ಮೆಲ್ಲರನ್ನೂ ಪರಿಚಯ ಮಾಡಿಕೊಡುತ್ತೇನೆ .
ಮೊದಲನೆಯದಾಗಿ ನಾವು ವಿಪ್ರರಲ್ಲ ! ಹಸ್ತಿನಾವತಿಯ ರಾಜ ಪಾಂಡುವಿನ ಪುತ್ರರು . ಈಕೆ ನಮ್ಮ ತಾಯಿ ಕುಂತೀ ದೇವಿ ... " ಆತ ಹೇಳುತ್ತಲೇ ಇದ್ದ. ನನಗೆ ತಕ್ಷಣ ಅವನ್ಯಾರೆಂದು ಹೊಳೆದು ಎದೆಬಡಿತ ಹೆಚ್ಚಾಯಿತು !
ಇವನು ಅರ್ಜುನ !!! ಅಪ್ಪ ಯಾರು ತನ್ನ ಅಳಿಯನಾಗಬೇಕೆಂದು ಬಯಸಿದ್ದನೋ , ಅದೇ ಅರ್ಜುನ ! ನಾನೀಗ ಈ ಮಹಾ ಪರಾಕ್ರಮಿಯ ಪತ್ನಿಯಾಲಿದ್ದೇನೆ ಎಂಬ ಆಲೋಚನೆಯಿಂದಲೇ ಮನಸ್ಸು ಪ್ರಫುಲ್ಲವಾಯಿತು . ಮುಖ ನಾಚಿಕೆ ಸಂತೋಷದಿಂದ ಕೆಂಪೇರಿತು .
ಈ ಹೊಸ ಭಾವಗಳಲ್ಲಿ ತೇಲಾಡುತ್ತಿರುವಾಗಲೇ ಅವನು ಗಂಭೀರವಾಗಿ ನುಡಿದ " ರಾಜಕುಮಾರೀ , ಸ್ವಯಂವರದ ಪ್ರಕಾರ ನಾನು ಗೆದ್ದರೂ , ಅಮ್ಮನ ಮಾತನ್ನು ಮೀರಲಾರೆ . ಆದರಿಂದ ನಾವು ಐವರೂ ನಿನ್ನನ್ನು ವರಿಸುತ್ತೇವೆ . "
ನಾನು ಅಪ್ರತಿಭಳಾಗಿ ನಿಂತುಬಿಟ್ಟೆ ! ಅವರೆಲ್ಲರೂ ವೀರರು , ಬಲಶಾಲಿಗಳು , ಒಬ್ಬ ಹೆಣ್ಣು ಬಯಸುವ ಎಲ್ಲ ಸದ್ಗುಣಗಳು ಅವರಲ್ಲಿದ್ದವು. ಹಾಗೆಂದು ಎಲ್ಲರನ್ನೂ ವರಿಸುವುದು ಸಾಧ್ಯವೇ ?
ಒಬ್ಬ ರಾಜಕುಮಾರ ಹಲವು ಕನ್ಯೆಯರನ್ನು ಮದುವೆಯಾಗುವುದು ಸಾಧಾರಣ ವಿಷಯ . ಆದರೆ ಒಬ್ಬ ರಾಜಕುಮಾರಿ , ಹಲವು ರಾಜಕುಮಾರರನ್ನು ಮದುವೆಯಾಗುವುದು ಈ ವರೆಗೆ ಕೇಳಿಲ್ಲದ್ದು .
ಮರಳಿ ಅರಮನೆ ತಲುಪಿದಾಗ ನಾನಿನ್ನೂ ಅಯೋಮಯ ಸ್ಥಿತಿಯಲ್ಲೇ ಇದ್ದೆ . ಅದಾಗಲೇ ವಿಷಯ ಅಪ್ಪನನ್ನು ತಲುಪಿತ್ತು . ಗುಪ್ತವಾಗಿ ನಮ್ಮನ್ನು ಹಿಂಬಾಲಿಸಿದ ಅಣ್ಣ ದೃಷ್ಟದ್ಯುಮ್ನ , ಅವರು ಯಾರೆಂಬುದನ್ನು ಅಪ್ಪನಿಗೆ ತಿಳಿಸಿದ್ದ . ಆದರೆ ಮುಂದೆ ನಡೆದಿದ್ದು , ಅವನಿಗೂ ಗೊತ್ತಿರಲಿಲ್ಲ .
ಅಪ್ಪನೆದುರು ಹಿರಿಯ ಪಾಂಡವ ಯುಧಿಷ್ಟಿರ ಮದುವೆಯ ವಿಷಯ ಪ್ರಸ್ತಾಪಿಸಿದಾಗ , ಅಪ್ಪನಿಗೂ ಆಘಾತ !
ಹೀಗೆಲ್ಲಾದರೂ ಉಂಟೇ? ಅದಗಾದ ಮಾತು ಎಂದು ಪ್ರತಿಭಟಿಸಿದಾಗ , ಮತ್ತೆ ಸಮಾಧಾನಿಸಿ ಅಪ್ಪನನ್ನು ಒಪ್ಪಿಸಿದ್ದು ಕೃಷ್ಣ !
ಮೊದಲಬಾರಿಗೆ ನಡೆದ ಇಂಥಾ ಮದುವೆಯಲ್ಲಿ ನಾನು ಐವರು ಪಾಂಡವರ ಪತ್ನಿಯಾದೆ ! ನನ್ನ ಅಭಿಪ್ರಾಯ ಏನೆಂದು ಯಾರೂ ಕೇಳಲಿಲ್ಲ.
ಯಾರೇ ಆಗಲಿ ಹೆಮ್ಮೆ ಪಡುವಂಥ ಐವರು ಗಂಡಂದಿರನ್ನು ಪಡೆದೂ ನಾನು ಮುಂದಿನ ಜೀವನವನ್ನ ವಿವಿಧ ಬಗೆಯ ನೋವು, ಅವಮಾನಗಳಿಂದ ಕಳೆಯಬೇಕಾಗುವುದೆಂದು ಆಗ ಯಾರಿಗೂ ತಿಳಿದಿರಲಿಲ್ಲ . ಗೊತ್ತಿದ್ದ ಒಬ್ಬನೇ ಒಬ್ಬ " ಶ್ರೀ ಕೃಷ್ಣ " ಎಂದಿನಂತೆ ಮುಗುಳ್ನಗುತ್ತ ಸುಮ್ಮನ್ನಿದು ಬಿಟ್ಟ !
ಅಕಸ್ಮಾತ್, ಅಂದು ಕುಂತೀ ದೇವಿ , ತನ್ನ ಆಜ್ಞೆ ಹೆಣ್ಣಿಗೆ ಅನ್ವಯಿಸುವುದಿಲ್ಲ , ಹೆಣ್ಣನ್ನು ಹಂಚಿ ಕೊಳ್ಳುವುದಕ್ಕೆ ತನ್ನ ಸಮ್ಮತಿಯಿಲ್ಲ ಎಂದಿದ್ದರೆ?
ಅರ್ಜುನ ತಾನು ಗೆದ್ದ ವಸ್ತು ತನ್ನದು ಮಾತ್ರ ಎಂದಿದ್ದರೆ ? ಅಪ್ಪ ಖಡಾ ಖಂಡಿತವಾಗಿ ನಿರಾಕರಿಸಿದ್ದರೆ ?
ಅರ್ಜುನ ತಾನು ಗೆದ್ದ ವಸ್ತು ತನ್ನದು ಮಾತ್ರ ಎಂದಿದ್ದರೆ ? ಅಪ್ಪ ಖಡಾ ಖಂಡಿತವಾಗಿ ನಿರಾಕರಿಸಿದ್ದರೆ ?
ಯಾರಾದರೂ ನನ್ನ ಮನದಲ್ಲೇನಿದೆ ಎಂದು ಕೇಳಿದ್ದರೆ? .. .
ಕೇವಲ " ರೆ " ಗಳಷ್ಟೇ ಉಳಿದು ಬಿಟ್ಟವು !
ಕೇವಲ " ರೆ " ಗಳಷ್ಟೇ ಉಳಿದು ಬಿಟ್ಟವು !
2 comments:
ಮೂಲ ಮಹಾಭಾರತದಲ್ಲಿ ದ್ರೌಪದಿಯ ಅಂತರಂಗದ ಬಗೆಗೆ ಬರದೇ ಇಲ್ಲ. ನೀವು ಈ ಪ್ರಸಂಗವನ್ನು ಹೊಸ ದೃಷ್ಟಿಯಿಂದ ನೋಡಿ, ನೂತನ ಶೈಲಿಯಲ್ಲಿ ನಿರೂಪಿಸಿದ್ದೀರಿ. ದ್ರೌಪದಿಗೆ ನ್ಯಾಯವನ್ನು ದೊರಕಿಸಿದ್ದೀರಿ. ಕೆಲವರು ಈ ಆಖ್ಯಾನವನ್ನು feminist view poin ಎಂದು ಕರೆಯಬಹುದು. ನಾನು ಹಾಗೆನ್ನುವುದಿಲ್ಲ. ಇದು fair and just thinking ಎನ್ನುವುದು ನನ್ನ ಅಭಿಪ್ರಾಯ.
ಕಾಕಾ,
ಧನ್ಯವಾದಗಳು . ನಮ್ಮ ಪುರಾಣಗಳಲ್ಲಿನ ಬಹಳಷ್ಟು ಸ್ತ್ರೀಯರ ಕಥೆಗಳು ನನಗೆ ಬೇರೆಯೇ ಕೋನದಿಂದ ನೋಡುವಂತೆ ಪ್ರೇರೇಪಿಸುತ್ತವೆ.ಚಿಕ್ಕವಳಿದ್ದಾಗಿಂದ ಇದು ಹೀಗೆಯೇ ! ನನ್ನ ಪ್ರಶ್ನೆಗಳು, ಅಭಿಪ್ರಾಯಗಳಿಂದಾಗಿ ಅಜ್ಜ-ಅಜ್ಜಿಯರಿಂದ ಬಹಳಷ್ಟು ಶಾಲಾ ಬೈಸಿಕೊಂಡಿದ್ದೇನೆ .
ಒಬ್ಬ ಹೆಣ್ಣಿಗೆ ಸಂಬಂಧಿಸಿದ ವಿಷಯವನ್ನು , ಹೆಣ್ಣಿನ ದೃಷ್ಟಿಯಿಂದ ನೋಡಿ ಅಭಿಪ್ರಾಯ ವ್ಯಕ್ತ ಪಡಿಸಿದಾಕ್ಷಣ " ಫೆಮಿನಿಸ್ಟ್ " ಎಂಬ ಹಣೆಪಟ್ಟಿ ಕಟ್ಟಿ ವಿಚಿತ್ರವಾಗಿ ನೋಡುವ ಬಗೆ ಮಾತ್ರ ನನಗಿನ್ನೂ ಅರ್ಥವಾಗೆ ಇಲ್ಲ !
Post a Comment