February 5, 2010

ಟಿವಿ ಎಂಬ ಮಾಯೆ !

" ಅಯ್ಯೋ ಪಾರ್ವತಿ ಗಂಡ ಅವಳನ್ನ ಬಿಟ್ಟು ಬೇರೆಯವಳ ಜೊತೆ ಸುತ್ತುತಾ ಇದಾನಲ್ರೀ ಜಯಮ್ಮ ! "

" ಥೂ ನೋಡ್ರೀ ಗೀತಾ , ಅವನಿಗೇನು ಬಂತು ಕೇಡು ಅಂತೀನಿ. ಇಂಥಾ ಬಂಗಾರದಂಥಾ ಹೆಂಡತೀ ನ ಬಿಟ್ಟು ಆ ಮಾಟಗಾತಿ ಹಿಂದೆ ಹೋಗಿದಾನಲ್ಲ ! ಪಾಪ ಕಣ್ರೀ ಪಾರ್ವತಿ . ಅವಳ ದುಃಖ ನೋಡೋಕಾಗಲ್ಲ ನನ್ನ ಹತ್ರ ! ಮುಂದೆ ಅವಳ ಗತಿ ಏನಾಗತ್ತೋ "

" ಆ ಸಾಧನಾ ನೋಡಿದ್ರಾ , ಅಕ್ಕ ಅಕ್ಕ ಅಂತ ಅಷ್ಟು ಒದ್ದಾಡ್ತಾಳೆ ಪಾಪ ! ಅವಳ ಅಕ್ಕ ನೋಡಿದ್ರೆ ಅವಳಿಗೆ ಮನೆ ಬಿಟ್ಟು ಹೋಗು ಅನ್ತಾಳಲ್ರೀ ? "

" ಹೌದುರೀ , ಇನ್ನು ಆ ಅಕ್ಷರಾ ದಂತೂ ಇನ್ನೂ ವಿಚಿತ್ರ ! ಮತ್ತೆ ಮತ್ತೆ ತಪ್ಪು ಮಾಡಿ ಅತ್ತೆ ಹತ್ರ , ಮನೆಜನರ ಹತ್ರ ಯಾಕೆ ಬೈಸಿಕೊ ಬೇಕು ಹೇಳಿ ? "

ಯಾವ ಪಾರ್ವತಿ ಗಂಡ ಅಂತ , ಯಾರ ಮನೆ ಸಾಧನಾ , ಈ ಅಕ್ಷರಾ ಯಾರು ಅಂತೆಲ್ಲ ಕಿವಿ ಉದ್ದ ಮಾಡಿಕೊಂಡು ಕುತೂಹಲದಿಂದ ಕೇಳ ಹೋಗುವ ಅಗತ್ಯವಿಲ್ಲ ! ಇದು ಯಾವುದೋ ಧಾರಾವಾಹಿಯ ಪಾತ್ರಗಳ ಬಗ್ಗೆ ಮೂಡಿದ ಅನುಕಂಪ ಅಷ್ಟೇ ! ಇಂಥ ಚರ್ಚೆಗಳಂತೂ ನಾಲ್ಕು ಹೆಂಗಸರು ಕೂಡಿದಲ್ಲಿ ಸರ್ವೇ ಸಾಮಾನ್ಯವಾಗಿಬಿಟ್ಟಿದೆ .

ಟಿವಿ ಅನ್ನೋದು ಈಗ ಒಂಥರಾ ಮನೆಯಲ್ಲಿ ಅನಿವಾರ್ಯ ವಸ್ತುವಾಗಿಬಿಟ್ಟಿದೆ. ಮನೆಯಲ್ಲಿ ನೋಡುವ ಜನರಿರಲಿ ಬಿಡಲಿ , ಅಡುಗೆ ಮನೆಯಲ್ಲಿ ಅಕ್ಕಿ ಇರಲಿ ಬಿಡಲಿ , ಮನೆಗೆ ಕರೆಂಟ್ ಕನೆಕ್ಷನ್ ಇರಲಿ ಬಿಡಲಿ,
ಟೀ ವಿ ಅಂತು ಬೇಕೇ ಬೇಕು ! ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಅನ್ನೋ ತರ , ಕುಳಿತುಕೊಳ್ಳಲು ಕುರ್ಚಿ ಇಡಲು ಜಾಗವಿಲ್ಲದಿದ್ದರೂ ಪರವಾಗಿಲ್ಲ , ದೊಡ್ಡದೊಂದು ಬಣ್ಣದ ಟಿವಿ ಇರಲೇ ಬೇಕು ಅನ್ನೋ ಪರಿಸ್ಥಿತಿ .

ನಿಮ್ಮನೇಲಿ ಯಾವ ಟಿವಿ ಇದೆ ಅನ್ನೋದು ನಿಮ್ಮ ಅಂತಸ್ತನ್ನು ತೋರಿಸುತ್ತೆ. ಇತ್ತೀಚೆಗಂತೂ , ಹಾಲ್ ನ ಗೋಡೆಯ ಮೇಲೆ ಫ್ಲಾಟ್ LCD ಟಿವಿ ಇದ್ದರೆ ಮನೆಗೆ ಶೋಭೆ ಎಂಬ ಭಾವನೆ ಇದೆ .

ಊಟ ತಿಂಡಿ ಬದಿಗಿಟ್ಟು ಟೀ ವಿ ಧಾರಾವಾಹಿಗಳಲ್ಲಿ ಮುಳುಗುವವರಿಗೆ ಬರಗಾಲವೇ ಇಲ್ಲ ! ಸಂಜೆ ಹೊತ್ತಿಗೆ ಮನೆಗೆ ಯಾರಾದರೂ ಬಂದರೆ " ಈಗ್ಯಾಕೆ ಬಂದರಪ್ಪ ಇವರು .. ಒಳ್ಳೆ ಧಾರಾವಾಹಿ ತಪ್ಪಿಸಿಬಿಡ್ತಾರೆ ಇನ್ನು " ಎಂದು ಮನದಲ್ಲೇ ಶಾಪ ಹಾಕುವವರು ಕಮ್ಮಿಯೇನಿಲ್ಲ ! ಕುಟುಂಬದವರೇ ಯಾರೋ ಮೃತ ಪಟ್ಟರೂ ಅಷ್ಟಾಗಿ ಹಚ್ಚಿಕೊಳ್ಳದ ಇವರು ಧಾರಾವಾಹಿಯ ಪಾತ್ರಗಳ ಕಷ್ಟಕ್ಕೆ ಮರುಗಿ ಕಣ್ಣೀರು ಸುರಿಸುತ್ತಾರೆ .

ಮಕ್ಕಳಿಗೆ ಕಾರ್ಟೂನ್ ಚಾನಲ್ , ಮ್ಯೂಸಿಕ್ ಚಾನಲ್ ಗಳಾದರೆ, ಗಂಡಸರಿಗಂತೂ ೨೪ ಗಂಟೆ ' Breaking News " " Business News " ಅಥವಾ ಕ್ರಿಕೆಟ್ ನ ಮನರಂಜನೆ ಈ ಟಿವಿಯಿಂದಾಗಿ.

ಮುಂಚೆ ದೂರದರ್ಶನದ ನಿಗದಿತ ಕಾಲಾವಧಿಯ ಕಾರ್ಯಕ್ರಮಗಳಿಂದಲೇ ಪುಳಕಗೊಳ್ಳುತ್ತಿದ್ದ ಜನರು ಈಗ Satelite ಯುಗದಲ್ಲಿ ನೂರೆಂಟು ಚಾನಲ್ ಗಳು ದಿನವಿಡೀ ಪ್ರಸಾರ ಮಾಡುವ ಕಾರ್ಯಕ್ರಮಗಳಿಂದಾಗಿ ಹುಚ್ಚಾಗಿ ಹೋಗಿದ್ದಾರೆ.

ನಾನು ಮೊದಲ ಬಾರಿಗೆ ಟಿವಿನೋಡಿದ್ದು ನಾನು ೮ನೇ ತರಗತಿಯಲ್ಲಿದ್ದಾಗ . ಪ್ರಧಾನಿ ಇಂದಿರಾಗಾಂಧಿಯವರ ಅಂತಿಮ ಕ್ರಿಯೆಯ ನೇರ ಪ್ರಸಾರ ಟಿವಿಯಲ್ಲಿ ತೋರಿಸುತ್ತಾರೆ ಎಂದು ಕೇಳಿ ನನ್ನ ಅಪ್ಪಾಜಿ ನನ್ನನ್ನು ಶಿವಮೊಗ್ಗದ ನನ್ನ ಸೋದರಮಾವನ ಮನೆಗೆ ಕರೆದುಕೊಂಡು ಹೋಗಿದ್ದರು . ಅವರ ಮನೆಯಲ್ಲಿ ಹೊಸದಾಗಿ ಬಂದಿದ್ದ ಕಪ್ಪು ಬಿಳುಪು ಟಿವಿಯ Antenna ಸರಿಯಿಲ್ಲದೆ , ಜೋರಾಗಿ ಮಳೆ ಬೀಳುತ್ತಿರುವಂತೆ ಕಾಣುತ್ತಿದ್ದ ಪರದೆಯನ್ನೇ ಕಣ್ಣು ಕೀಲಿಸಿಕೊಂಡು ನೋಡಿದೆವು . . ನಂತರ ಅವರ ಸ್ನೇಹಿತರ ಮನೆಯಲ್ಲಿ ಬಣ್ಣದ ಟಿವಿ ಇದೆ ಎಂದು, ಅದರಲ್ಲಿ ನೋಡಲು ಚೆನಾಗಿರುತ್ತದೆ ಎಂದು ಅಲ್ಲಿಗೆ ಹೋದೆವು. ಅವರ ಮನೆಯ ಹಾಲ್ ಆಗಲೇ ಮುಕ್ಕಾಲು ಭಾಗ ತುಂಬಿ ಹೋಗಿತ್ತು. ಮನೆಯೊಡತಿಗೆ , ಆ ಸಂದರ್ಭದಲ್ಲೂ ಬಂದವರಿಗೆಲ್ಲ ಚಹಾ ಮಾಡಿ ಕೊಡುವ ಸಂಭ್ರಮ ! ಶಿವಮೊಗ್ಗದಿಂದ ಮರಳಿದ ಮೇಲೆ ನನಗೆ ಒಂಥರಾ ಹೆಮ್ಮೆ ! ಸಂದರ್ಭ ಏನೇ ಇರಲಿ ಶಾಲೆಯಲ್ಲಿ ಬಣ್ಣದ ಟಿವಿ ನೋಡಿ ಬಂದ ಮೊದಲಿಗಳಲ್ಲವೇ ನಾನು?

ಕೆಲ ವರ್ಷಗಳಲ್ಲಿ ಪುಟ್ಟದೊಂದು ಕಪ್ಪು ಬಿಳುಪು ಟಿವಿ ನನ್ನ ಅಜ್ಜನ ಮನೆಯಲ್ಲೂ ಬಂತು ! ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಮೊದಲ ಟಿವಿ ಅದು ! ಸಂಜೆಯ ಹೊತ್ತಿಗೆ ಜಗುಲಿ ಎನ್ನುವುದು ಒಂಥರಾ ಸಿನೆಮಾ ಟಾಕೀಸಿನಂತೆ ತುಂಬಿ ತುಳುಕುತ್ತಿತ್ತು. ಕೆಲ ದಿನಗಳು ಮುಂದುವರೆದ ಸಂಭ್ರಮ ಕ್ರಮೇಣ ಕಮ್ಮಿ ಆಯ್ತು ಅನ್ನಿ. ಆದರೆ ನನ್ನ ಅಜ್ಜಿ ಮಾತ್ರ ಭಕ್ತಿಯಿಂದ ಕುಳಿತು ' ವಾರ್ತೆಗಳನ್ನು ' ನೋಡುತ್ತಿದ್ದರು. ಕನ್ನಡ ಬಿಟ್ಟರೆ ಬೇರೆ ಭಾಷೆಯ ಗಂಧ ಗಾಳಿಯೂ ಇಲ್ಲದ ಅಜ್ಜಿ ಅಷ್ಟು ಆಸಕ್ತಿಯಿಂದ ಕುಳಿತು ನೋಡುವ ಪರಿಗೆ ನಾವು ಕುತೂಹಲಪಡುತ್ತಿದ್ದೆವು. ಅದನ್ನು ಕೇಳಿದಾಗ ಅಬ್ಬೆ ಹೇಳಿದ್ದು
" ನಂಗೆ ಒಂದುಸಲ ಆದರೂ ರಾಜೀವ್ ಗಾಂಧೀ ಮುಖ ನೋಡದ್ದೆ ಇದ್ರೆ ಸಮಾಧಾನ ಇಲ್ಲೆ ನೋಡು. ವಾರ್ತೆಲಿ ಹೆಂಗೂ ಒಂದ್ಸಲ ಮುಖ ಕಂಡೇ ಕಾಣ್ತು ಹಾಂಗಾಗಿ ತಪ್ಪದ್ದೆ ನೋಡದು "

" ಅದೆಂತಕೆ ರಾಜೀವ್ ಗಾಂಧೀ ಮೇಲೆ ಅಷ್ಟು ಪ್ರೀತಿ ಅಬ್ಬೆ? "

" ಅಲ್ಲಾ , ಅದೆಂತದೋ ವಿಮಾನ ಹಾರಿಸಿಕ್ಯಂಡು ಇದ್ದಿದ್ದ , ತಾಯಿ ಸತ್ತಾಗ ಬೇಜಾರು ಮಾಡ್ಕ್ಯಂಡು ಬದೀಗೆ ಕೂತ್ಗಳದ್ದೆ ಈ ಎಳೇ ವಯಸ್ಸಲ್ಲೇ ಹ್ಯಾಂಗೆ ಮುಂದೆ ಬಂದು ಧೈರ್ಯದಿಂದ ದೇಶ ನಡೆಸಿಕ್ಯಂದು ಹೋಗ್ತಿದ್ದ ನೋಡು . ಅದಕ್ಕೆ ಒಂಥರಾ ಅಭಿಮಾನ "
ಅಬ್ಬೆಯ ಮಾತಿಗೆ ಅವಳ ಲೋಕಜ್ಞಾನಕ್ಕೆ ನಾವು ಒಮ್ಮೆ ಬೆರಗಾದೆವು ! ಹಾಗೇ ರಾಜೀವ್ ಗಾಂಧಿಯ ಧೈರ್ಯವನ್ನೂ ಮೆಚ್ಚಿದೆವು !!! ( ಈಗ , ಅಬ್ಬೆಯ ಸಹಾನುಭೂತಿ , ಅವಳ ಮಾತಿನಲ್ಲೇ ಹೇಳುವುದಾದರೆ , ' ಪರದೇಶದಿಂದ ಬಂದು , ಅತ್ತೆ ಹಾಗೂ ಗಂಡನನ್ನು ಕಳೆದುಕೊಂಡರೂ , ಎದೆಗುಂದದೆ, ತವರಿಗೆ ವಾಪಸಾಗದೆ , ಮಕ್ಕಳಿಬ್ಬರನ್ನೂ ಬೆಳೆಸಿ ಈಗ ದೇಶವನ್ನು ನಡೆಸುತ್ತಿರುವ ದೇಶದ ಸೊಸೆ ' ಸೋನಿಯಾ ಗಾಂಧಿಯ ಕಡೆಗಿದೆ ! )

ಅಬ್ಬೆಗೂ ಟಿವಿಗೂ ಒಂಥರಾ ಬಾಂಧವ್ಯ ! ಭಾಷೆ ಬಾರದಿದ್ದರೂ ಭಕ್ತಿಯಿಂದ ಕುಳಿತು ಕಾರ್ಯಕ್ರಮಗಳನ್ನು ನೋಡುತ್ತಾಳೆ. ಆಗ ಹಿಂದಿ ವಾರ್ತೆ ಓದಲು ಬರುವ "ಸರಳಾ ಮಹೇಶ್ವರಿ" ಅಬ್ಬೆಯ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದಳು.

" ಎಷ್ಟು ಪಟ್ಟಾಗಿ ಎಣ್ಣೆ ಹಚ್ಚಿ ಮಂಡೆ ( ಕೂದಲು) ಬಾಚಿ ಗಂಟು ಹಾಕ್ಯಂಡು , ಹಣೆ ಮೇಲೆ ದೊಡ್ಡ ಕುಂಕುಮ ಇಟ್ಗಂಡು , ಲಕ್ಷಣವಾಗಿ ಸೀರೆ ಉಟ್ಗಂಡು ಬರದು ನೋಡಿದ್ರೆ , ಯಾರೋ ನಮ್ಮ ಬದಿ ಹೆಂಗಸೇ ಆಗಿಕ್ಕು ಅಲ್ದಾ ತಂಗಿ ? " ಎಂದು ನನ್ನನ್ನು ಕೇಳಿದ ಅಬ್ಬೆಗೆ ಪಕ್ಕದ ಮನೆಯ ಶಿವಣ್ಣಯ್ಯ ,
" ಹೌದು ಚಿಕ್ಕೀ, ಕಡ್ಲೆ ಬೈಲಿನ ಸುಬ್ರಾಯ ಬಾವನ ಹೆಂಡ್ತಿ ಸಂಬಂಧ ಇವಳಿಗೆ " ಎನ್ನಬೇಕೇ? ಅಬ್ಬೆ ಅದನ್ನು ನಂಬಿಯೂ ಆಗಿತ್ತು . ಅಷ್ಟರಲ್ಲಿ ನಾವೆಲ್ಲ ಕಿಸಕ್ಕೆಂದು ನಕ್ಕಿದ್ದು ಕಂಡು ಅವಳಿಗೆ ತನ್ನನ್ನು ರೇಗಿಸಿದ್ದು ತಿಳಿಯಿತು.

" ಥೋ , ಎಂತದ್ರ ನಿಂಗ ಎಲ್ಲ ಹೀಂಗೆ ಸುಳ್ಳು ಹೇಳ್ತಿ." ಎಂದು ತಾನು ನಕ್ಕವಳು ನಂತರ ಗಂಭೀರವಾಗಿ " ಅಲ್ಲಾ ನಾವೆಲ್ಲಾ ಟಿವಿ ಮುಂದೆ ಕೂತ್ಗಂಡು ಹೀಂಗೆ ಮಾತಾಡದು ಕೇಳಿ ಅವಳು ಮನೆಗೆ ಹೋಗಿ ನಮ್ಮ ಬಗ್ಗೆ ಹೇಳಿಕ್ಯಂಡು ಎಷ್ಟು ನೆಗ್ಯಾಡ್ತೆನ ! " ಎಂದು ಹೇಳಿದಾಗ ಜಗುಲಿಯಲ್ಲಿ ಮತ್ತೊಮ್ಮೆ ನಗುವಿನ ಅಲೆ !

ನನ್ನತ್ತೆಗೂ ಹಾಗೇ, ಸಂಜೆಯಾಗುತ್ತಿದ್ದಂತೆ ಟಿವಿ ಹಚ್ಚುವುದು ಎಷ್ಟು ಅಭ್ಯಾಸವಾಗಿ ಹೋಗಿತ್ತು ಎಂದರೆ ಒಮ್ಮೆ ಸಂಜೆ ಕೊಟ್ಟಿಗೆಯಿಂದ ಹಾಲು ಕರೆದುಕೊಂಡು ಬಂದವರು .. ಜಗುಲಿಯಲ್ಲಿ ಟಿವಿ ಹಚ್ಚಿರದ್ದನ್ನು ಕಂಡು ಮಾವನವರಿಗೆ ಜೋರು ಮಾಡಿದ್ದರು . " ಸಂಜೆಯಾತು , ಒಂದು ಟಿವಿ ನೂ ಹಚ್ಚಿದ್ರಿಲ್ಲೇ ನೀವು ! ಲೈಟ್ ಹಾಕಕಾದ್ರೆ ಅಲ್ಲೇ ಟಿವಿ ಸ್ವಿಚ್ಚೂ ಹಾಕಿದ್ರೆ ಆಗ್ತಿತ್ತಿಲ್ಯಾ? " ಎಂದು. ಅವರ ಮಟ್ಟಿಗೆ , ಟಿವಿ ಹಾಕುವುದು ಸಂಜೆ ಮನೆಯ ದೀಪ ಬೆಳಗುವಷ್ಟೇ ಸಹಜವಾಗಿತ್ತು !

ಈ ಟಿವಿ ಎಂಬ ಮಾಯಾಂಗನೆ ನಮ್ಮನ್ನೆಲ್ಲ ಆವರಿಸಿಕೊಂಡು ಬಿಟ್ಟಿದ್ದಾಳೆ . ನೂರೆಂಟು ಚಾನಲ್ ಗಳು , ತಮ್ಮ ಜನಪ್ರಿಯತೆಗಾಗಿ ಏನೆಲ್ಲಾ ಸರ್ಕಸ್ ಮಾಡುತ್ತಾ ಪ್ರತಿಯೊಂದನ್ನೂ "Breaking News " ಆಗಿಯೇ ಪ್ರಕಟಿಸುತ್ತಾ ಜನರ ಶಾಂತಿ ಕದಡುವಲ್ಲಿ ಯಶಸ್ವಿಯಾಗಿವೆ . ಇವರ ಪಾಲಿಗೆ ಯಾರದೋ ಮನೆಯಲ್ಲಿ ಗಂಡ -ಹೆಂಡತಿಯ ನಡುವಿನ ಚಿಕ್ಕ ಸಂಘರ್ಷವೂ Breaking News ಆಗಿಬಿಡುತ್ತದೆ ! ಸಮಾಜದ ಬಗೆಗಿನ ತಮ್ಮ ಜವಾಬ್ದಾರಿಯನ್ನು ಇವು ಮರೆತೇ ಬಿಟ್ಟಿವೆ.

ಒಂದು ಕಾಲದಲ್ಲಿ ಸದಭಿರುಚಿಯ , ನವಿರು ಹಾಸ್ಯದ ಚಿಕ್ಕ ಚಿಕ್ಕ ಮಾಲಿಕೆಗಳು ದೂರದರ್ಶನದಲ್ಲಿ ಜನರನ್ನು ರಂಜಿಸುತ್ತಿದ್ದವು .ಆದರೆ ಇಂದು ?

ಪ್ರತಿ ಚಾನಲ್ ನಲ್ಲೂ ರಿಯಾಲಿಟಿ ಷೋ ಗಳಲ್ಲಿ ನಡೆಯುವ ನಾಟಕ , ಗಂಭೀರ ವಿಷಯವೇ ಇಲ್ಲದ ಬಿಸಿ ಚರ್ಚೆಗಳು , ಕೇಳುಗರ ಕಿವಿ ಕಿವುಡಾಗುವಂತೆ , ಬೆದರಿಸುತ್ತಾ ಕಿರುಚಾಡುವ ರಿಪೋರ್ಟರ್ ಗಳು ... ಇಂದು ಅತ್ಯಂತ ಪ್ರಭಾವೀ ಮಾಧ್ಯಮವಾದ ಟಿವಿ ಯ ದುರವಸ್ಥೆಯನ್ನು ತೋರಿಸುತ್ತವೆ !

ಇನ್ನು ಧಾರಾವಾಹಿಗಳಂತೂ ಕೇಳುವುದೇ ಬೇಡ ! ವರ್ಷಗಟ್ಟಲೆ ಮುಂದುವರಿಯುವ ಇವುಗಳಲ್ಲಿ , ಯಾರು ಎಷ್ಟು ಸಲ ಮದುವೆಯಾಗುತ್ತಾರೋ , ಯಾರ ಹೆಂಡತಿ ಯಾರು , ಆಕೆ ಮುಂದೆ ಇನ್ಯಾರನ್ನು ಮದುವೆಯಾದಳು ಎಂಬುದು ನಿರ್ದೇಶಕನಿಗೂ ಕಗ್ಗಂಟಾಗಿ ಉಳಿಯುತ್ತದೆ! ಶುರುವಿನಲ್ಲಿ , ಮಧ್ಯಮ ವರ್ಗದ ಕುಟುಂಬದಿಂದ ಬಂದ ನಾಯಕಿ ಅತ್ಯಂತ ಪ್ರಾಮಾಣಿಕಳೂ, ಅತಿ ಧೈರ್ಯಸ್ಥೆಯೂ , ಸತ್ಯಕ್ಕಾಗಿ ಏನು ಮಾಡಲೂ ಸಿದ್ಧವಿರುವವಳೂ , ಮಾನವ ಸಂಬಂಧಗಳನ್ನು ತುಂಬಾ ಗೌರವಿಸುವವಳೂ ಆಗಿರುತ್ತಾಳೆ . ಒಮ್ಮೆ ಆಗರ್ಭ ಶ್ರೀಮಂತ ನಾಯಕನನ್ನು ಮದುವೆಯಾಗಿದ್ದೇ ಅವಳ ಗೋಳಾಟ ಆರಂಭವಾಗುತ್ತದೆ ! ಆಕೆಯ ಗಂಡನಮನೆಯಲ್ಲಿರುವ ಹೆಂಗಸರೆಲ್ಲರಿಗೂ ಒಬ್ಬರಿಗೊಬ್ಬರ ವಿರುದ್ಧ ಪ್ಲಾನ್ ಮಾಡಿಯೇ ಮುಗಿಯದು . ಇದರ ನಡುವೆ ನಮ್ಮ ನಾಯಕಿ , ಕುಟುಂಬದ ಪ್ರತಿಷ್ಠೆ ಉಳಿಸಲು ತ್ಯಾಗ ಮಾಡುತ್ತಾ ಕಣ್ಣೇರು ಹರಿಸುತ್ತಾ ಇರುತ್ತಾಳೆ ! ಆಕೆಯನ್ನು ನೋಡುತ್ತಾ ನಮ್ಮ ಪ್ರೇಕ್ಷಕ ಮಹಿಳೆಯರೂ ದುಃಖಿಸುತ್ತಾರೆ ! ಆಕೆ ತಮ್ಮದೇ ಕುಟುಂಬದ ಮಗಳೇನೋ ಎಂಬಂತೆ ! ಇವೆಲ್ಲವೂ ಎಂದಿಗೆ ಕೊನೆಯೂ ಗೊತ್ತಿಲ್ಲ !

ಆದರೆ, ಈ ಋಣಾತ್ಮಕ ಅಂಶಗಳ ಹೊರತಾಗಿಯೂ ಇಂದು ಟಿವಿ ಒಂದು ದೊಡ್ಡ ಉದ್ಯಮವಾಗಿ ಬೆಳೆದಿರುವುದೂ ಅಷ್ಟೇ ನಿಜ ! ಇದರಲ್ಲೀಗ ಹಣದ ಹೊಳೆ ಹರಿಯುತ್ತಿದೆ ! ಸಾವಿರಾರು ಜನರಿಗೆ ಉದ್ಯೋಗ ದೊರೆತಿದೆ, ಅದೆಷ್ಟೋ ಜನರು ಕಲಾವಿದರಾಗಿ, ನಿರ್ದೇಶಕರಾಗಿ ಯಶಸ್ಸಿನ ರುಚಿ ಸವಿದಿದ್ದಾರೆ . ಕೆಲದಿನಗಳ ಹಿಂದೆ , ಅನಾಮಿಕರಾಗಿದ್ದವರು ಒಮ್ಮೆ ಯಾವುದೋ ಕಾರ್ಯಕ್ರಮದಲ್ಲಿ ಮುಖ ತೋರಿಸಿದ್ದೇ , ಜನಪ್ರಿಯರಾಗಿದ್ದಾರೆ . ಯುವಪೀಳಿಗೆ ಇಂದು ಟಿವಿ ಯತ್ತ ಹೆಚ್ಚು ಆಕರ್ಷಿತರಾಗುತ್ತಿರುವುದೂ ಇದೇ ಕಾರಣಕ್ಕಾಗಿ ! ಕೆಲ ಜನಪ್ರಿಯ ಹಿಂದಿ ಧಾರಾವಾಹಿಗಳ ಮುಖ್ಯ ಕಲಾವಿದರು ದಿನವೊಂದಕ್ಕೆ ೧ ಲಕ್ಷ ರೂ. ಸಂಭಾವನೆ ಪಡೆದಿದ್ದೂ ಇದೆ. ವರ್ಷಗಟ್ಟಲೆ ಮುಂದುವರಿಯುವ ಇಂತಹ ಧಾರಾವಾಹಿಗಳಲ್ಲಿ ಅವರು ಎಷ್ಟು ಹಣ ಗಳಿಸಿರಬಹುದೋ ಯೋಚಿಸಿ !

ಕೆಲ ವರ್ಷಗಳ ಹಿಂದೆ ಕಿರುತೆರೆಯ ಸಾಮ್ರಾಜ್ಞಿ ಎಂದೇ ಪ್ರಖ್ಯಾತಳಾದ " ಏಕತಾ ಕಪೂರ್" ಒಡೆತನದ ಬಾಲಾಜಿ ಪ್ರೊಡಕ್ಷನ್ಸ್ , ವಿವಿಧ ಭಾಷೆಗಳಲ್ಲಿ ಪ್ರತಿದಿನ ೩೫ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿತ್ತು ಎಂದರೆ ಕಿರುತೆರೆಯ ಹಿರಿಮೆ ಸ್ವಲ್ಪ ಮಟ್ಟಿಗೆ ಅರ್ಥವಾಗಬಹುದು !

ಕೇವಲ ಜನಪ್ರಿಯತೆಯನ್ನೇ ಗುರಿಯಾಗಿಸಿಕೊಳ್ಳದೆ ತಮ್ಮ ಜವಾಬ್ದಾರಿಯ ಗಂಭೀರತೆಯನ್ನು ಅರ್ಥ ಮಾಡಿಕೊಂಡು ಆ ಪ್ರಕಾರ ಜನರಲ್ಲಿ ಸಾಮಾಜಿಕ ಅರಿವನ್ನೂ ನೀಡುವ ಕೆಲಸವನ್ನು ಕಿರುತೆರೆ ಮಾಡಬೇಕಿದೆ !
ಬ್ರೆಕಿಂಗ್ ನ್ಯೂಸ್ ನ ಹೆಸರಿನಲ್ಲಿ ಘಟನೆಯ , ಹಿಂದೂ ಮುಂದು , ಸತ್ಯಾಸತ್ಯತೆಯನ್ನೂ ಅರಿತುಕೊಳ್ಳದೆ ಏನೆಲ್ಲಾ ಪ್ರಸಾರ ಮಾಡುವ ರಿಪೋರ್ಟರ್ ಗಳನ್ನು ನೋಡುವಾಗ , ಕೆಲ ವರ್ಷಗಳ ಹಿಂದೆ ಟಿವಿಯಲ್ಲೇ ನೋಡಿದ ಒಂದು ದೃಶ್ಯ ನೆನಪಾಗುತ್ತದೆ .

ಶೇಖರ್ ಸುಮನ್ ತಮ್ಮ ಷೋ ಒಂದರಲ್ಲಿ ಇಂದಿನ ರಿಪೋರ್ಟರ್ ಗಳನ್ನು ಕುರಿತು ಹೀಗೆ ಹಾಸ್ಯ ಮಾಡಿದ್ದರು
" ಇಂದಿನ ಅತ್ಯಂತ ಮಹತ್ವದ ಘಟನೆ ಎಂದರೆ ಎ ಬಿ ಸಿ ರಸ್ತೆಯ ಈ ಗಲ್ಲಿಯಲ್ಲಿ ಸತ್ತು ಬಿದ್ದಿರುವ ಈ ನಾಯಿಯನ್ನು ನೋಡಿ , ಇದು ಸಾಧಾರಣ ಸಾವಲ್ಲ , ಕೊಲೆ ! ನಿಷ್ಕರುಣಿ ಚಾಲಕನ ದುರ್ಲಕ್ಷ್ಯದಿಂದಾಗಿ ಈ ನಾಯಿ ಇಂದು ಸತ್ತು ಬಿದ್ದಿದೆ. ಇದರ ನಿರ್ಜೀವ ಬಾಲವನ್ನ ಒಮ್ಮೆ ನೋಡಿ , ಹೇಗೆ ಮುರುಟಿಕೊಂಡಿದೆ , ಅತ್ತಿತ್ತ ರಕ್ತ ಚೆಲ್ಲಾಡಿದೆ ... ಅದರ ಹೊರ ಚಾಚಿರುವ ನಾಲಿಗೆ ನೋಡಿ ... ಈ ದುರ್ಘಟನೆಯನ್ನು ನಿಮ್ಮೆದುರು ಬೇರೆಲ್ಲರಿಗಿಂತ ಮೊದಲೇ ತೆರೆದಿಡಲು ನಮ್ಮ ವರದಿಗಾರರು ಆ ಸ್ಥಳದಲ್ಲಿ ದುರ್ಘಟನೆಯ ನಡೆಯುವುದಕ್ಕೂ ಬಹುಮುಂಚಿತವಾಗಿ ಕಾದಿದ್ದರು ! "

ಬ್ರೆಕಿಂಗ್ ನ್ಯೂಸ್ ಗಳನ್ನು ನೋಡುವಾಗ ಇಂದಿಗೂ ಈ ಪ್ರಸಂಗ ನೆನಪಾಗಿ ನಗುಬಂದುಬಿಡುತ್ತದೆ !

January 2, 2010

ನೀವೇ ಹೇಳಿ ನಂದೇನು ತಪ್ಪು ?

ನಮ್ಮ ಬಿಲ್ಡಿಂಗ್ ನಲ್ಲಿ ಒಬ್ಬ ಚಿಕ್ಕ ಹುಡುಗಿಯಿದ್ದಾಳೆ .' ರಾಧಾ' . ಕೇವಲ ೫-೬ ವರ್ಷವಷ್ಟೇ ! ಬಹಳ ಚುರುಕಿನ ಹುಡುಗಿ.
ಬಲು ಮಾತುಗಾತಿ . ಅಷ್ಟೇ ಅಲ್ಲಾ , ಪ್ರತಿಭಾವಂತೆ ! ಯಾವ ಸ್ಪರ್ಧೆಯಲ್ಲಿ ಭಾಗವಹಿಸಿದರೂ ಒಂದು ಬಹುಮಾನ ಹಿಡಿದೇ ಮರಳಿ ಬರುವ ಹುಡುಗಿ ! ಛದ್ಮ ವೇಷ , ಏಕಪಾತ್ರಾಭಿನಯ, ಹಾಡು , ನೃತ್ಯ ಎಲ್ಲದರಲ್ಲೂ ಎತ್ತಿದ ಕೈ ಅವಳದು. ಒಮ್ಮೆಯಂತೂ ಸುಮಾರು ೨೦ ನಿಮಿಷಗಳ ಕಾಲ ಅಭಿನಯ ಸಹಿತ ' ಹರಿ ಕೀರ್ತನೆ ' ಮಾಡಿ ಎಲ್ಲರನ್ನೂ ದಂಗು ಬಡಿಸಿದ್ದಳು .

ಕಳೆದ ವರ್ಷ ನಮ್ಮ ಬಿಲ್ಡಿಂಗ್ ನ ಕಾರ್ಯಕ್ರಮದಲ್ಲಿ ಆಕೆ ಅಭಿನಯಿಸಿದ ಒಂದು ತುಣುಕನ್ನು ಕನ್ನಡೀಕರಿಸಿ ಇಲ್ಲಿಟ್ಟಿದ್ದೇನೆ.
----------------------------------------------------------------------------------------
" ಅಯ್ಯೋ ಏನು ಹೇಳೋದು ನಿಮಗೆ ? ನನ್ನ ಅಮ್ಮಂಗೆ ನಾನು ಏನು ಮಾಡಿದರೂ, ಏನು ಹೇಳಿದ್ರೂ ತಪ್ಪೇ ! ಒಂದು ಚಿಕ್ಕ ವಿಷಯ ಹೇಳ್ತೀನಿ ಕೇಳಿ ..
ಮೊನ್ನೆ ನನ್ನ ೫ನೇ ಹುಟ್ಟು ಹಬ್ಬ ಮಾಡಿದ್ಲು. ಇಷ್ಟು ವರ್ಷ ಮಾಡ್ಲಿಲ್ಲ ಅದ್ಸಕ್ಕೆ ಈ ಸಲ ಗ್ರಾಂಡ್ ಆಗಿ ಮಾಡೋಣ ಅಂತ ತುಂಬಾ ಜನರಿಗೆ ಕರದು, ಹಾಲ್ ಬುಕ್ ಮಾಡಿ , ತಯಾರಿ ಮಾಡಿದ್ರು.
ಅಲ್ಲಾ , ಹುಟ್ಟು ಹಬ್ಬ ನಂದು , ಡೆಕೊರೇಶನ್ ಹೇಗೆ ಮಾಡೋಣ , ನಿಂಗೆ ಏನು ಇಷ್ಟ ಅಂತ ನನ್ನ ಒಂದು ಮಾತು ಕೇಳಬಾರದಾ? ಊಹೂಂ , ನನ್ನ ಏನೂ ಕೇಳ್ದೆ ತಾವೇ ಎಲ್ಲ ಮಾಡಿದ್ರು ನನ್ನ ಅಪ್ಪ ಅಮ್ಮ !
ನಾನು ಯಾವಾಗ್ಲಾದ್ರೂ ಇವರ ಹುಟ್ಟುಹಬ್ಬಕ್ಕೆ ಆ ತರ ಮಾಡಿದ್ರೆ ಸುಮ್ನೆ ಇರ್ತಾರಾ? ಇದನ್ನೇ ನಾನು ಅಮ್ಮನತ್ರ ಕೇಳಿದ್ದಕ್ಕೆ .. ' ಅಧಿಕ ಪ್ರಸಂಗಿ ' ಅಂತ ಬಯ್ದೇ ಬಿಟ್ಲು ! ನೀವೇ ಹೇಳಿ , ನಂದೇನಾದ್ರೂ ತಪ್ಪಿದ್ಯಾ ಇದ್ರಲ್ಲಿ ?

ಸರಿ , ಅವ್ರ ಇಷ್ಟದ್ದೆ ಫ್ರಾಕ್ ಹಾಕ್ಕೊಂಡು , ಅವ್ಳು ಕಟ್ಟಿದ ತರ ಜುಟ್ಟು ಕಟ್ಟಿಸ್ಕೊಂಡು ಹಾಲ್ ನ ಬಾಗಲಲ್ಲಿ ನಿಂತಿದ್ದಾಯ್ತು. ೬.೩೦ ಗೆ ಅಂತ ಎಲ್ಲರಿಗು ಹೇಳಿದ್ವಿ . ೭ ಆಗ್ತಾ ಬಂದರೂ ಯಾರದು ಪತ್ತೇನೆ ಇಲ್ಲ ! ನನಗಂತೂ ಟೆನ್ಶನ್ . ಮತ್ತೇನೂ ಇಲ್ಲ, ಯಾರೂ ಬರ್ಲಿಲ್ಲ ಅಂದ್ರೆ ಗಿಫ್ಟ್ ಹೇಗೆ ಸಿಗತ್ತೆ ಅಲ್ವ? ಅದನ್ನೇ ಅಮ್ಮಂಗೆ ಹೇಳಿದ್ದಕ್ಕೆ , " ನಿನಗೊಂದು ಗಿಫ್ಟ್ ಚಿಂತೆ ' ಅಂತ ಅಂದ್ಲು ! ನೀವೇ ಹೇಳಿ , ನಂಗೆ ಹಾಗನಿಸೋದು ತಪ್ಪಾ?

ಅಂತೂ ಇಂತೂ ೭.೩೦ ಹೊತ್ತಿಗೆ ಜನ ಸೇರೋಕೆ ಶುರುವಾದ್ರು .ಸ್ವಲ್ಪ ಹೊತ್ತಿಗೆ ನನ್ನ ಅತ್ತೆ ಬಂದಳು ! ಕೈಯಲ್ಲಿ ದೊಡ್ಡದೊಂದು ಗಿಫ್ಟ್ ! ನನಗಂತೂ ಅದನ್ನ ನೋಡಿ ಖುಶಿನೋ ಖುಷಿ ! ಅತ್ತೆಗೆ ನಾನು ಅಂದ್ರೆ ತುಂಬಾ ಪ್ರೀತಿ. ಬರೋವಾಗೆಲ್ಲ ಚಾಕೊಲೆಟ್ ತರ್ತಾಳೆ . ಅಮ್ಮ ಬೇಡ ಅಂದ್ರೆ , ಇರ್ಲಿ ಬಿಡು ಅಪರೂಪಕ್ಕೆ ತಿಂದರೆ ಏನೂ ಆಗಲ್ಲ ಅಂತ ಸುಮ್ನೆ ಇರ್ಸ್ತಾಳೆ .
ಈಗ ಅಮ್ಮ ಅಂತು ಅತ್ತೆಗೆ " ಅಯ್ಯೊಇಷ್ಟು ದೊಡ್ಡದೆಲ್ಲ ಯಾಕೆ ತಂದೆ ? " ಅಂತ ೫-೬ ಸಲ ಹೇಳ್ತಾ ಇದ್ರೆ ... ನಂಗೆ ಮತ್ತೆ ಟೆನ್ಶನ್ ! ಏನಾದ್ರೂ , ಅತ್ತೆ, ಅಮ್ಮನ ಮಾತು ಕೇಳಿ ತಂದಿರೋದನ್ನ ವಾಪಸ್ ತೊಗೊಂಡು ಹೋದ್ರೆ ಅಂತ ! ಮೊದ್ಲು , ಅತ್ತೆ ಕೈಯಿಂದ ಗಿಫ್ಟ್ ತೊಗೊಂಡೆ ' ಇರ್ಲಿ ಬಿಡಮ್ಮಾ, ಅತ್ತೆ ಅಷ್ಟು ಪ್ರೀತಿಯಿಂದ ತಂದಿದಾಳೆ ನಂಗೆ .. .. ಈಗೇನು , ನಾವು ಅತ್ತೆಗೆ ಬರೀ ಸ್ನಾಕ್ಸ್ ಕೊಡ್ತೀವ? ಫುಲ್ ಊಟಾನೇ ಇಟ್ಟಿಲ್ವ ಇವತ್ತು ? " ಅಂದೆ . ಅಮ್ಮ ನಂಗೆ ಕಣ್ಣು ಬಿಟ್ಟಿದ್ದು ನೋಡಬೇಕಿತ್ತು ನೀವು ! ಅಲ್ಲಾ , ನೀವೇ ಹೇಳಿ, ನಾನೇನಾದ್ರೂ ತಪ್ಪಾಗಿ ಹೇಳಿದ್ನಾ?

ನನ್ನ ಕ್ಲೋಸ್ ಫ್ರೆಂಡ್ ಡಾಲಿ ಮತ್ತೆ ಅವಳಮ್ಮ ಬಂದ್ರು. ಪಿಂಕ್ ಕಲರ್ ಚಂದ ಪ್ಯಾಕ್ ಕೊಟ್ರು . ಅವರನ್ನ ನಾನು ಕೇಳೆ ಬಿಟ್ಟೆ , ಏನು ಕೊಟ್ಟಿದೀರಾ " ಅಂತ ! ಆಂಟಿ ನಗ್ತಾ ಹೇಳಿದ್ರು , " ನಿನಗಿಷ್ಟ ಆಗೋದೇ ಕೊಟ್ಟಿದಾಳೆ ಬಿಡು ಡಾಲಿ " ಅಂತ .
ಅಮ್ಮ , ನಂಗೆ " ಹಾಗೆಲ್ಲಾ ಕೇಳ್ತಾರೆನೆ ? " ಅಂತ ಬಯ್ದ್ಲು . ಅಲ್ಲಾ , ನನ್ನ ಫ್ರೆಂಡ್ ನಂಗೆ ಏನು ಕೊಟ್ಳು ಅಂತ ನಾನು ಕೇಳಿದ್ರೆ ಸುಮ್ನೆ ಯಾಕೆ ಬೈಬೇಕು ಹೇಳಿ ?

ನನಗೋ ಅಲ್ಲೇ ಎಲ್ಲ ಗಿಫ್ಟ್ ಬಿಚ್ಚಿ ನೋಡ್ಬೇಕು ಅಂತ , ಆದ್ರೆ ಅಮ್ಮ ಹಾಗೆಲ್ಲಾ ಗಡಿಬಿಡಿ ಮಾಡಬಾರದು ಕಣೆ , ಮನೆಗೆ ಹೋದಮೇಲೆ ನೋಡೋದು ಅಂತ ಹೇಳಿ ಬಿಟಿದಾಳೆ . ಯಾವಾಗಲು ನನ್ನ ಮಾತೇ ಕೇಳೋ ಅಪ್ಪ ಬೇರೆ ಇವತ್ತು ಅಮ್ಮ ಹೇಳಿದಂಗೆ ಹೇಳ್ತಾರೆ. ಇಷ್ಟುಜನ ಇದಾರಲ್ಲ ಅಂತ ಇರಬಹುದು !

ಅಬ್ಬಾ, ಅಂತೂ ಮನೆ ಮುಟ್ತಿದ್ದಾಯ್ತು ! ಈಗ ಮಾತ್ರ ಯಾರು ಏನೇ ಅಂದ್ರು ನಾನು ಕೇಳಲ್ಲ ! ಜಗುಲಿ ಮೇಲೆ ಗಿಫ್ತ್ಸ್ ಹರಡಿಕೊಂಡು ಕುಳಿತೆ. ನಂಜೊತೆ ಅಮ್ಮನೂ . ಅಲ್ಲಾ, ಇದು ನನ್ ಹುಟ್ಟು ಹಬ್ಬ , ನನ್ ಗಿಫ್ತ್ಸ್ , ಆದರೂ ತಾನೆ ಎಲ್ಲ ಓಪನ್ ಮಾಡ್ತಿದಾಳೆ ! ನಾನು ಹಾಳು ಮಾಡಿ ಬಿಡ್ತೀನಂತೆ ! ನಾನ್ಯವತ್ತಾದ್ರೂ ಅವಳ ಗಿಫ್ಟ್ ನ ಹಾಗೇ ಓಪನ್ ಮಾಡಿದ್ರೆ , ಬಯ್ಯಲ್ವ ಅವಳು ? ಅದನ್ನೇ ಕೇಳಿದ್ದಕ್ಕೆ " ತುಂಬಾ ಮಾತಾಡೋಕೆ ಕಲ್ತಿದೀಯ " ಅಂದ್ಲು. ನೀವೇ ಹೇಳಿ ? ನಂದು ತಪ್ಪಿದ್ಯ ಇದ್ರಲ್ಲಿ ?

" ಸೋನೂ , ನೋಡೇ , ನಿನ್ ಫ್ರೆಂಡ್ ಡಾಲಿ , ನೀನು ಅವಳ ಬರ್ತ್ ಡೇ ಗೆ ಕೊಟ್ಯಲ್ಲ ಅಂಥದೇ ಗೊಂಬೆ ಕೊಟ್ಟಿದಾಳೆ ಕಣೆ , "
" ಅಂಥದೇ ಅಲ್ಲಮ್ಮಾ,' ಅದೇ ' ಗೊಂಬೆ " ಅಂದೆ ನಾನು .
" ಏನೇ ಹಂಗಂದ್ರೆ ? "
ಥೂ ಅಮ್ಮಂಗೆ ಎಲ್ಲ ಬಿಡ್ಸಿ ಹೇಳ್ಬೇಕು . " ಅಮ್ಮಾ, ನಾವು ಅವಳ ಬರ್ತ್ ಡೇಗೆ ಗಿಫ್ಟ್ ತರೋಕೆ ಹೋದಾಗ , ನನಗಿದು ತುಂಬಾ ಇಷ್ಟ ಆಯ್ತು ಅಂದ್ರು ಕೇಳ್ದೆ, ನೀನು ಈ ಗೊಂಬೆ ನ ಅವಳಿಗೆ ಅಂತ ಪ್ಯಾಕ್ ಮಾಡ್ಸಿದ್ದೆ ಅಲ್ವ? ಅದನ್ನ ಅವಳಿಗೆ ಕೊಟ್ಟ ಮೇಲೆ , ನಾನು ಅವಳ ಅಮ್ಮಂಗೆ , ' ಆಂಟೀ, ಡಾಲಿ ಗೆ ಈ ಗೊಂಬೆ ಇಷ್ಟ ಆಗ್ಲಿಲ್ಲ ಅಂದ್ರೆ , ಅಥವಾ ಆಟ ಆಡಿ ಬೇಜಾರು ಬಂದ್ರೆ , ನಂಗೆ ಕೊಡಿ ಈ ಗೊಂಬೆ ನ. ಇದು ನಂಗೆ ತುಂಬಾ ಇಷ್ಟ ಆಯ್ತು . ಆದ್ರೆ , ಅಮ್ಮ ನಂಗೆ ಕೊಡಿಸಲಿಲ್ಲ ! ' ಅಂತ ಹೇಳಿದ್ದೆ . ಅದಕ್ಕೆ ಅವರು ಈಗ ಅದೇ ಗೊಂಬೆ ನ ಕೊಟ್ಟಿದಾರೆ "

.. ಅಮ್ಮ ಇಷ್ಟು ದೊಡ್ಡ ಕಣ್ಣು ಮಾಡಿ .. ಹಾಗೆಲ್ಲ ಹೇಳ್ತಾರೆನೆ ಕತ್ತೆ ? ಅಂತ ಒಂದು ಗುದ್ದೇ ಬಿಟ್ಟಳು ನಂಗೆ ! ಅದೂ ನನ್ ಹುಟ್ಟಿದ ಹಬ್ಬದ ದಿನಾನೆ ! ನೀವೇ ಹೇಳಿ , ನನ್ದೆನಾದ್ರು ತಪ್ಪಿದ್ಯಾ ಇದ್ರಲ್ಲಿ ? ...... "

ಮುದ್ದು ಮುದ್ದಾಗಿ ಅಭಿನಯಿಸುತ್ತಾ ಪುಟ್ಟ ' ರಾಧಾ' ಮಾತನಾಡುತ್ತಿದ್ದರೆ , ನಾವೆಲ್ಲಾ ಬಿದ್ದೂ ಬಿದ್ದೂ ನಗುತ್ತಿದ್ದೆವು !


" ಈಗ ತುಟಿಯ ಮೇಲೆ ಮೂಡಿದ ನಗು ಎಂದೂ ಮಾಸದಿರಲಿ! "
" ಎಲ್ಲರಿಗೂ ಹೊಸವರ್ಷದ ಶುಭಾಶಯಗಳು !! "

December 22, 2009

ನಾನು ನಿನಗೇನು ?

ನಾನು
ನಿನಗೇನು ?
ಎಂದೆಯಾ?

ನೀ ನನ್ನ ..

ಜೀವದ ಜೀವ
ಒಲವಿನ ಭಾವ
ಹೃದಯದ ಮಿಡಿತ
ಬದುಕಿನ ತುಡಿತ
ಕಣ್ಣ ಮಿಂಚು
ತುಟಿಯ ಹೊಳಪು
ಉಸಿರಿನ ಉಸಿರು
ಕನಸಿನ ಹೆಸರು .....


ಸಾಕೆ ?
ಹೇಳಲೇ ಇನ್ನೂ?
ಈಗ
ನೀ ಹೇಳು ಗೆಳೆಯಾ
ನಾನು
ನಿನಗೇನು ?

December 13, 2009

ಭಾಷೆಯ ' ಮಿಸಳ್ '

ಪರ ರಾಜ್ಯದಲ್ಲಿರುವ ಕನ್ನಡಿಗರ ಮಕ್ಕಳು ಕನ್ನಡ ಮಾತನಾಡುವ ಚೆಂದ ಕೇಳಿದವರೇ ಧನ್ಯ ! ಈ ಮಕ್ಕಳಿಗೆ ಮನೆಯಲ್ಲಿ ಮಾತೃಭಾಷೆಯಲ್ಲೇ ಮಾತನಾಡಿದರೂ, ದೊಡ್ಡವರಾದಂತೆ , ಹೊರಗಡೆ ಆಟ ಆಡುವಾಗ , ಶಾಲೆಯಲ್ಲಿ ಸ್ನೇಹಿತರೊಡನೆ ಪ್ರಾದೇಶಿಕ ಭಾಷೆಅಲ್ಲೋ , ಹಿಂದಿ ಅಥವಾ ಇಂಗ್ಲಿಷ್ ನಲ್ಲೋ ಮಾತನಾಡುವುದು ಅಭ್ಯಾಸವಾಗಿಬಿಟ್ಟಿರುತ್ತದೆ. ಕ್ರಮೇಣ , ಮನೆಯಲ್ಲಿ ಮಾತನಾಡುವಾಗಲೂ ನಡುನಡುವೆ ಇತರ ಭಾಷಾ ಶಬ್ದಗಳು ಸಹಜವಾಗಿ ನುಸುಳಿ ತಮಾಷೆಗೆ ಕಾರಣವಾಗಿಬಿಡುತ್ತವೆ ! ಇದರ ಅನುಭವ ನನಗೆ ಬಹಳವೇ ಚೆನ್ನಾಗಿ ಇದೆ ! ಕಳೆದ ೧೫ ವರ್ಷಗಳಿಂದ ಮಹಾರಾಷ್ಟ್ರದಲ್ಲಿ ನೆಲೆಸಿರುವುದರಿಂದ , ಇಲ್ಲಿಯೇ ಹುಟ್ಟಿ ಬೆಳೆದಿರುವ ನನ್ನ ಮಗಳ ಕನ್ನಡ ಕೆಲವೊಮ್ಮೆ ನಗೆ ತರುತ್ತದೆ . ಮನೆಯಲ್ಲಿ ಕನ್ನಡವೇ ಆದರೂ ಕೆಲವೊಮ್ಮೆ ಅವಳ ಮಾತಿನ ನಡುವೆ ಮರಾಠಿ ಶಬ್ದಗಳು ಸಹಜವಾಗಿ ಸೇರಿಕೊಳ್ಳುತ್ತವೆ .ಅಂಥಾ ಕೆಲ ತಮಾಷೆಯ ಸಂದರ್ಭಗಳು ಇಲ್ಲಿವೆ .

ಒಮ್ಮೆ , ಸಿರಿ ೭-೮ ವರ್ಷದವಳಿದ್ದಾಗ , ಹೊರಗಡೆ ಆಟ ಆಡುತ್ತಿದ್ದವಳು ' ಅಮ್ಮಾ ' ಎಂದು ಕೂಗುತ್ತಾ ಓಡಿ ಬಂದಳು . ನಾನು ' ಏನಾಯ್ತೆ ? ಎಂದು ಕೇಳಿದಾಗ ' ಅಮ್ಮ, ನನ್ನ ಸೈಕಲ್ ಗೇಟ್ ನಲ್ಲಿ ಅಡಕೊಂಡು ಬಿಟ್ಟಿದೆ ಅಮ್ಮಾ ಈ ಕಡೆ ತಂದು ಕೊಡು " ಎಂದು ಕುಣಿಯತೊಡಗಿದಳು . ನನಗೋ ಇವಳು ಏನು ಹೇಳುತ್ತಿದ್ದಾಳೆ ಎಂದೇ ತಿಳಿಯಲಿಲ್ಲ . ಇವಳ ಸೈಕಲ್ ಗೇಟ್ ನಲ್ಲಿ ' ಅಡಕೊಳ್ಳೋದು " ಅಂದ್ರೆ ಏನು , ಅದೇನು ಕಣ್ಣ ಮುಚ್ಚಾಲೆ ಆಡುತ್ತಾ ಅಂತೆಲ್ಲ ಯೋಚಿಸುತ್ತಾ ತಲೆಬಿಸಿ ಮಾಡಿಕೊಂಡೆ . ಸಮಾಧಾನವಾಗಿ ಸೈಕಲ್ ಗೆ ಏನಾಯ್ತು? ಎಲ್ಲಿಂದ ತಂದ್ಕೊಡ್ಬೇಕು ಸೈಕಲ್ ನ ಎಂದೆಲ್ಲ ಕೇಳತೊಡಗಿದೆ. ಅವಳೋ ' ನನ್ನ ಫ್ರೆಂಡ್ಸ್ ಎಲ್ಲ ಮುಂದೆ ಹೋಗಿ ಬಿಟ್ರು , ನನ್ನ ಸೈಕಲ್ ಬೇಗ ಬೇಕು' ಎಂದು ನಿಂತಲ್ಲೇ ತಕಧಿಮಿ ಶುರು ಮಾಡಿದಳು . ಸರಿ ನೋಡಿಯೇ ಬಿಡೋಣ ಎಂದುಕೊಂಡು ಎಲ್ಲಿದೆ ಸೈಕಲ್ ಅಂತ ಕೇಳಿದೆ ಗೇಟ್ ಹತ್ರ ಅಮ್ಮ , ಬಾ ತೋರಿಸ್ತೀನಿ ಎಂದು ಕೈ ಹಿಡಿದು ಎಳೆದು ಕೊಂಡೆ ಹೋದಳು. ನೋಡು ಅಲ್ಲೇ ಅಡಕೊಂಡಿದೆ ತೆಕ್ಕೊಡು ಎಂದು ತೋರಿಸಿದಳು . ನಿಜ ,ಅಲ್ಲೇ ' ಅಡಕೊಂಡಿತ್ತು " ಅವಳ ಸೈಕಲ್ !! ಅದು ಹೇಗೋ ಸೈಕಲ್ ನ ಗಾಲಿ ಗೇಟ್ ನ ಎರಡು ಸರಳುಗಳ ನಡುವೆ ಸಿಕ್ಕಿಹಾಕಿ ಕೊಂಡಿತ್ತು . ಅದನ್ನು ನೋಡಿದ ನನಗೆ ನಗು ತಡೆಯಲೇ ಆಗಲಿಲ್ಲ. ಮರಾಠಿಯಲ್ಲಿ " ಅಡಕಣೆ ' ಎಂದರೆ ' ಸಿಕ್ಕಿ ಹಾಕಿಕೊಳ್ಳುವುದು ಎಂದು ಅರ್ಥ . ನಾನು ಸೈಕಲ್ ಅಡಗಿಕೊಳ್ಳುವುದು ಹೇಗೆ ಎಂದು ಕನ್ನಡದಲ್ಲಿ ಯೋಚಿಸುತ್ತಿದ್ದೆ !
----------------------------------------------------------------------------------
ತೀರಾ ಇತ್ತೀಚೆಗೊಮ್ಮೆ , ಅಡಿಗೆ ಮನೆಯಲ್ಲಿ ಏನೋ ಮಾಡುತ್ತಿದ್ದೆ . ಗೆಳತಿಯೊಬ್ಬಳ ಫೋನ್ ಬಂತು. ಸಿರಿ ಫೋನ್ ತೆಗೆದುಕೊಂಡಳು . ಅಮ್ಮ ಏನು ಮಾಡುತ್ತಿದ್ದಾಳೆ ಎಂದು ಗೆಳತಿ ಕೇಳಿದ ಪ್ರಶ್ನೆಗೆ ಇವಳು ಉತ್ತರಿಸಿದ್ದನ್ನು ಕೇಳಿ ಗೆಳತಿ ಬಿದ್ದೂ ಬಿದ್ದೂ ನಗುತ್ತಿದ್ದಳು .ನಾನು ಫೋನ್ ತೆಗೆದುಕೊಂಡ ತಕ್ಷಣ ಆಕೆ " ಯಾಕೆ ಚೀರಾಡ್ತಿದಿಯಾ? ಸುಮ್ನೆ ಬಿಪಿ ಶುರುವಾಗತ್ತೆ ನೋಡು!" ಎನ್ನಬೇಕೆ ? ನಾನು ಕಕ್ಕಾಬಿಕ್ಕಿಯಾಗಿ ನಾನೆಲ್ಲೇ ಚೀರ್ತಾ ಇರೋದು , ಯಾರು ಹೇಳಿದ್ದು ನಿಂಗೆ ? ಎಂದೆ . 'ಅಯ್ಯೋ ನಿನ್ನ ಮಗಳೇ ಹೇಳಿದ್ಳಲ್ಲೇ ' ಎಂದು ನಗ ತೊಡಗಿದಳು. ಆಗಿದ್ದು ಇಷ್ಟೇ, ಸಿರಿ, ಅಮ್ಮ ಅಡಿಗೆ ಮನೇಲಿ ನೀರುಳ್ಳಿ ' ಚೀರ್ತಿದಾಳೆ ' ಎಂದಳಂತೆ. ಅವಳ ಮಕ್ಕಳೂ ಇಲ್ಲಿಯೇ ಹುಟ್ಟಿ ಬೆಳೆದದ್ದರಿಂದ ನನ್ನ ಮಗಳ ಅರೆ ಮರಾಠಿ ಅವಳಿಗೆ ಅರ್ಥವಾಗಿತ್ತು . ನಾನು ಈ ಕನ್ನಡಕ್ಕೆ ಹಣೆ ಚಚ್ಚಿಕೊಂಡೆ . ಮರಾಠಿಯಲ್ಲಿ ' ಚಿರಣೆ ' ಎಂದರೆ ,( ತರಕಾರಿ ) ಹೆಚ್ಚುವುದು
------------------------------------------------------------------------------
ಪುಣೆಯಲ್ಲಿ ೩೫ ವರ್ಷಗಳನ್ನು ಕಳೆದ ನನ್ನ ಮನೆಯವರ ಚಿಕ್ಕಮ್ಮ ತಮ್ಮ ಅನುಭವವನ್ನು ಒಮ್ಮೆ ಹಂಚಿಕೊಂಡರು .
ಅವರ ಮಗಳು ಚಿಕ್ಕವಳಿದ್ದಾಗ ಶಾಲೆಗೇ ಹೊರಡುವ ಮುನ್ನ ಬಾತ್ ರೂಮಿಗೆ ಹೋದಳಂತೆ .ಅಲ್ಲಿಂದ ' ಆಯೀ , ನನ್ನ ಜಡೆ ಸುಟ್ಹೋಯ್ತು ಎಂದು ಕೂಗಿಕೊಂಡಳಂತೆ. ಗಾಬರಿಯಾಗಿ ಓಡಿ ಬಂದ ಇವರಿಗೆ ಬಾತ್ ರೂಮಿನಲ್ಲಿ ಜಡೆ ಸುಟ್ಟು ಹೋಗುವುದು ಹೇಗೆ ಎನ್ನುವುದೂ ಹೊಳೆಯಲಿಲ್ಲವಂತೆ . ಅಷ್ಟರಲ್ಲಿ ಮಗಳು ಬಿಚ್ಚಿ ಹೋದ ಜಡೆ ಯನ್ನು ಕೈಯಲ್ಲಿ ಹಿಡಿದುಕೊಂಡು ಹೊರಬಂದಳಂತೆ . ಆಗಲೇ ಇವರಿಗೆ ಹೊಳೆದದ್ದು . ಅದು ಮರಾಠಿಯ 'ಸುಟ್ಟಿದ್ದು ' ಎಂದು .
ಮರಾಠಿಯಲ್ಲಿ ' ಸುಟ್ಲ ' ಎಂದರೆ ಬಿಚ್ಚಿಕೊಳ್ಳುವುದು, ಬಿಡಿಸಿಹೋಗುವುದು ಎಂದರ್ಥ !
--------------------------------------------------------------------------
ನಾನು ಇಲ್ಲಿಗೆ ಬಂದ ಹೊಸತಷ್ಟೇ . ನನ್ನ ಸಹೋದ್ಯೋಗಿಯೊಬ್ಬಳು ತನ್ನ ಹೊಸಾ ಒಡವೆಯೊಂದರ ಬಗ್ಗೆ ಅದೆಷ್ಟು ದುಬಾರಿಯದು ಎಂದು ಹೇಳಿಕೊಳ್ಳುತ್ತಿದ್ದಳು. ನಾನು ಕೂಲಾಗಿ 'ಬಂಗಾರದ್ದಲ್ವ ? ಎಂದೆ ಅರೆ ಬರೆ ಮರಾಠಿಯಲ್ಲಿ ! ಒಮ್ಮೆ ನನ್ನತ್ತ ತೀಕ್ಷ್ಣವಾಗಿ ನೋಡಿದವಳು ಸರಕ್ಕನೆ ಅಲ್ಲಿಂದ ಎದ್ದು ಹೋದಳು . ಇವಳು ಯಾಕೆ ಹೀಗೆ ಎದ್ದು ಹೋದಳು ಎಂದು ನಾನು ಕೇಳಿದಾಗ ಇನ್ನೊಬ್ಬ ಸಹೋದ್ಯೋಗಿ ( ಕನ್ನಡದವರು) ಮರಾಠಿಯಲ್ಲಿ ' ಭಂಗಾರ' ಎಂದರೆ ಕಸ, ಕೆಲ್ಸಕ್ಕೆ ಬಾರದ್ದು , ಕಚರಾ ಎಂದರ್ಥ ಎಂದು ತಿಳಿಸಿದರು ! ನಂಗೆ ನಗುವುದೋ - ಅಳುವುದೋ ತಿಳಿಯದೆ, ಮೊದಲು ಆಕೆಯಲ್ಲಿ ಹೋಗಿ ವಿಷಯ ವಿವರಿಸಿದಾಗ ಆಕೆಯೂ ನಕ್ಕು ಬಿಟ್ಟಳು. ಆಮೇಲಿಂದ ' ಬಂಗಾರ' ಎಂಬ ಶಬ್ದವನ್ನು ಬಹಳವೇ ಯೋಚಿಸಿ ಬಳಕೆ ಮಾಡುತ್ತೇನೆ .

ಇವು ಕೆಲವೇ ಉದಾಹರಣೆಗಳು. ಇಂಥ ಮತ್ತೆಷ್ಟೋ ಸಂದರ್ಭಗಳು ನಮ್ಮ ಮನೆಗಳಲ್ಲಿ ನಡೆಯುತ್ತಿರುತ್ತವೆ ! ಇಷ್ಟು ವರ್ಷಗಳು ಇಲ್ಲಿ ಜೀವನ ಮಾಡಿದ ಮೇಲೆ , ಮರಾಠಿಯ ಅದೆಷ್ಟೋ ಶಬ್ದಗಳನ್ನು ನಾವು ತಿಳಿದೋ ತಿಳಿಯದೆಯೋ ಕನ್ನಡೀಕರಿಸಿದ್ದೇವೆ. ಹೀಗೆ ಕನ್ನಡೀಕರಿಸಿದ ಶಬ್ದಗಳನ್ನು ಊರಲ್ಲಿ ನಾವು ಬಳಸಿದಾಗ ಅವರುಗಳು ಕಕ್ಕಾಬಿಕ್ಕಿಯಾಗುವುದಿದೆ, ಬಿದ್ದೂ ಬಿದ್ದೂ ನಗುವುದೂ ಇದೆ . ಆಗ ನಾವೂ ಸಹ ನಕ್ಕು ಬಿಡುತ್ತೇವೆ. ಹಾ , ಮರಾಠಿಯಲ್ಲಿ ' ಮಿಸಳ್ ' ಎಂದರೆ ವಿವಿಧ ಪದಾರ್ಥಗಳನ್ನು ಕಲೆಸಿ ಮಾಡಿದ ಒಂದು ತಿನಿಸು ! !

November 28, 2009

ನಾವಿಲ್ಲ !


ಚಿಗುರು ಮೂಡುವ ಮೊದಲೇ
ಕೊಡಲಿಯಲಿ ಕಡಿಯುವೆವು
ನಮ್ಮ ಬಣ್ಣಗಳಲ್ಲಿ ಹಸುರಿಲ್ಲ !

ಭೂಮಿಯನು ಅಗೆದಗೆದು
ಬರಿದಾಗಿಸಿದೆವು ಜಲವ
ಬಾಯಾರಿದರೆ ಗುಟುಕು ನೀರಿಲ್ಲ !

ಬೋಳಾಗಿಸಿದೆವು ಮರವ
ಬರಡಾಗಿಸಿದೆವು ನೆಲವ
ಹಂಬಲಿಸಿದರು ಚೂರು ನೆರಳಿಲ್ಲ

ಈ ಭೂಮಿ ನಮದಲ್ಲ
ನಮ್ಮ ಮಕ್ಕಳ ಆಸ್ತಿ
ಈ ಸತ್ಯವನು ನಾವು ತಿಳಿದಿಲ್ಲ !

ಕನಸು ಕಾಣುವ ಮೊದಲು
ವಾಸ್ತವವ ನೋಡಿದರೆ
ನಮ್ಮ ನಾಳೆಗಳಲ್ಲಿ ನಾವಿಲ್ಲ !

( ಫೋಟೋ ಕೃಪೆ : ಅಂತರ್ಜಾಲ )

November 21, 2009

ಪುಣೆ ಫಲಕಗಳು -2

ಇನ್ನಷ್ಟು ಪುಣೆ ಫಲಕಗಳು ನಿಮ್ಮ ಮನರಂಜನೆಗೆ !!

"ಶ್ರೀ ಬಾಲಾಜಿ ಕೃಪಾ ವಾಚ್ " ಕನ್ನಡಕಗಳನ್ನು ತಯಾರಿಸುವ ಏಕಮೇವ ಸ್ಥಳ ! "
ಖಂಡಿತವಾಗಿಯೂ ಇದು ಕನ್ನಡಕಗಳನ್ನು ತಯಾರಿಸುವ ಏಕಮೇವ " ವಾಚ್ ಅಂಗಡಿ "




"ಹೇ ಈಶ್ವರಾ , ಎಲ್ಲರಿಗೂ ಒಳ್ಳೆಯದನ್ನು ಮಾಡು , ಆದರೆ ಮೊದಲು ನನ್ನಿಂದ ಶುರು ಮಾಡು "
ಎಂಥಾ ಸುವಿಚಾರ !!


ಲಿಫ್ಟ್ ನಲ್ಲಿ ಕಂಡಿದ್ದು !


" ಬಂಗಲೆ ಖಾಲಿ ಇದೆ ! ಕದಿಯುವಂಥಾದ್ದು ಏನೂ ಇಲ್ಲ .
ವಿನಾಕಾರಣ ಕಷ್ಟ ಪಡಬೇಡಿ !! "
ಕಳ್ಳರಿಗೂ ಕಷ್ಟವಾಗಬಾರದೆಂದು ಯೋಚಿಸುವ ಈ ಮಹಾನುಭಾವರು ಯಾರೋ !


"2T ಮಿಕ್ಸ್ ಪೆಟ್ರೋಲ್ ,
ರಿಕ್ಷಾ ಹಾಗೂ ಲೇಡೀಸ್ !! "
ಏನಾದರೂ ತಿಳಿಯಿತೆ? ಇದು ಪೆಟ್ರೋಲ್ ಬಂಕ್ ನಲ್ಲಿ ಪ್ರತ್ಯೇಕ ಸಾಲನ್ನು ಸೂಚಿಸುವ ಬೋರ್ಡ್.


ಇಂಥಾ
ಬೋರ್ಡ್ ಇಲ್ಲಿ ಮಾತ್ರ ನೋಡಬಹುದು !!

" ವಿಳಾಸ ಹೇಳಲು ಚಾರ್ಜ್ ಕೊಡಬೇಕಾಗುತ್ತದೆ .
ವಿಳಾಸ , ೧೦ ಕಿ . ಮೀ ಒಳಗಡೆ ಇದ್ದರೆ ೫೦ ಪೈಸೆ. ಅದಕ್ಕಿಂತ ಹೆಚ್ಚು ದೂರದ್ದಾದರೆ ೧ ರೂ.
ಹೀಗೇಕೆ ಬೋರ್ಡ್ ಹಾಕಿದ್ದೀರಿ ಎಂದು ಕೇಳಿದರೆ ೨೦೦೦ ರೂ. "

ವಿ. ಸೂ.: ಓದಲು ಬಾರದವರಿಗೆ ವಿಳಾಸವನ್ನು ಪುಕ್ಕಟೆಯಾಗಿ ಹೇಳಲಾಗುತ್ತದೆ !! "




ಇದಕ್ಕೇನು ಹೇಳುವಿರಿ ?

" ಜನನ -ಮರಣ ದಾಖಲೆ ವಿಭಾಗ "

೨ ದಿನ 'ಜನನ -ಮರಣ ' ಬಂದ್ ಇರುತ್ತದೆ !!!!

October 30, 2009

ಕೋರಿಕೆ ..

ಕಳೆದು ಹೋಗಿದೆ ಹೃದಯ
ಹುಡುಕಿ ಕೊಡುವೆಯಾ ಗೆಳೆಯಾ?

ಇರಬಹುದು ಇಲ್ಲೆಲ್ಲೋ
ನಿನ್ನದೇ ಸುತ್ತ ಮುತ್ತ !
ಅಡಗಿರಬಹುದು ನಿನ್ನ
ತುಂಟ ನೋಟದಲ್ಲಿ
ಕಳೆದಿರಬಹುದು
ನಿನ್ನ ಸವಿ ಮಾತುಗಳಲ್ಲಿ ..
ಮುಳುಗಿ ಹೋಗಿರಬಹುದು ನಿನ್ನ
ಪ್ರೀತಿಯ ನದಿಯಲ್ಲಿ ..
ಹಂಚಿಹೋಗಿದೆ ನಿನ್ನ ಧಮನಿ ಧಮನಿಗಳಲ್ಲಿ ..
ಇನ್ನೆಲ್ಲೆಂದು ನಾ ಅದನ್ನು ಹುಡುಕಲಿ ?

ಹೃದಯವಿಲ್ಲದೆ ನಾನು ಹೇಗೆ ಬದುಕಲಿ
ಗೆಳೆಯಾ ?
ಕೊನೆ ಪಕ್ಷ ನಿನ್ನ ಹೃದಯವನ್ನಾದರೂ
ಕೊಡಲಾರೆಯಾ ?

October 25, 2009

ಸಾಧನೆಯ ಹಾದಿಯಲ್ಲಿ....

ಜೀವನದಲ್ಲಿ ಏನನ್ನಾದರೂ ಸಾಧಿಸುವ ಕನಸನ್ನು ನಾವೆಲ್ಲರೂ ಕಾಣುತ್ತೇವೆ ಆದರೆ ಅದನ್ನು ನಿಜವಾಗಿಸುವ ಛಲ ಹೊತ್ತವರು ಮಾತ್ರ ಕಮ್ಮಿಯೇ. ಅಂಥ ಹಾದಿಯಲ್ಲಿ ನಡೆಯುತ್ತಿರುವ ಕೆಲವೇ ಕೆಲವರಲ್ಲೊಬ್ಬಳು ' ಆಶಾ' . ನನ್ನ ಪುಟ್ಟ ತಂಗಿ ಅಂದರೆ ಚಿಕ್ಕಮ್ಮನ ಮಗಳು ಆಶಾ ನಮ್ಮ ಕುಟುಂಬದ ಎಲ್ಲರ ಕಣ್ಮಣಿ ! ನನ್ನ ಮಗಳಿಗಿಂತ ಕೇವಲ ಮೂರೇ ವರ್ಷ ದೊಡ್ಡವಳಾದ ಆಶಾ ನನಗೆ ತಂಗಿಗಿಂತ ಹೆಚ್ಚಾಗಿ ಮಗಳಾಗಿಯೇ ಬೆಳೆದಿದ್ದಾಳೆ. ಈ ಪುಟ್ಟ ಹುಡುಗಿಯ ದೊಡ್ಡ ಸಾಧನೆಗಳನ್ನು ನಿಮ್ಮಲ್ಲಿ ಹಂಚಿಕೊಳ್ಳುವ ಬಯಕೆ ನನಗೆ .

ಭದ್ರಾವತಿಯಂಥ ಚಿಕ್ಕ ಪಟ್ಟಣದ ಹುಡುಗಿಗೆ ಕನಸು ಮಾತ್ರ ತುಂಬಾ ದೊಡ್ಡದು. ಭಾರತೀಯ ವಾಯುಸೇನೆಯ ಯುದ್ಧ ವಿಮಾನವನ್ನು ಹಾರಾಡಿಸುವ ಬಯಕೆ ಚಿಕ್ಕದಲ್ಲ ! ೫ ನೇ ತರಗತಿಯಿಂದ ಯುದ್ಧ ವಿಮಾನಗಳ ಹುಚ್ಚು ಹತ್ತಿಸಿಕೊಂಡವಳು. ಪ್ರಪಂಚದ ಎಲ್ಲಾ ಪ್ರಸಿದ್ಧ ಯುದ್ಧ ವಿಮಾನಗಳ ವಿವರ ಅವಳ ನಾಲಿಗೆ ತುದಿಯಲ್ಲಿ ! ಅವುಗಳ ಬಗ್ಗೆ ಕನಸಿನಲ್ಲಿಯೂ ಗಂಟೆಗಟ್ಟಲೆ ಮಾತನಾಡುವಷ್ಟು ಸಾಮರ್ಥ್ಯ ! ಮೊದ ಮೊದಲು ಎಲ್ಲ ಮಕ್ಕಳಂತೆ ಇವಳದ್ದೂ ಒಂದು ಕನಸು ..ಕೆಲ ದಿನಗಳಲ್ಲಿ ಕರಗಿಹೋಗುವಂಥಾದ್ದು ಎಂದು ಕೊಂಡ ಅಪ್ಪ ಅಮ್ಮಂದಿರಿಗೆ ಅವಳದ್ದು ಬರೀ ಕನಸಲ್ಲ ಗಟ್ಟಿ ನಿರ್ಧಾರ ಎಂದು ಅರಿವಾಗಿದ್ದು ಅವಳು ಸೈನಿಕ ಶಾಲೆಯನ್ನು ಸೇರುವ ಬಯಕೆ ವ್ಯಕ್ತ ಪಡಿಸಿದಾಗ ! ಮುದ್ದು ಮಗಳ ಸೈನ್ಯ ಸೇರುವ ಕನಸು ಹೆತ್ತವರಿಗೆ ಕಳವಳ ತರುತ್ತಿತ್ತು. ಅವಳನ್ನು ಹೇಗೋ ಸಮಾಧಾನಿಸಿ ೧೦ನೇ ತರಗತಿಯವರೆಗೂ ಭದ್ರಾವತಿಯಲ್ಲಿಯೇ ಮುಂದುವರೆಸುವಂತೆ ಮನವೊಲಿಸಿದರು. ಓದಿನಲ್ಲೂ ಅಷ್ಟೇ ಮುಂದಿರುವ ಹುಡುಗಿ ತನ್ನೆಲ್ಲ ಇತರ ಚಟುವಟಿಕೆಗಳ ನಡುವೆಯೂ ೧೦ನೇ ತರಗತಿಯಲ್ಲಿ ಗಳಿಸಿದ್ದು ೯೩ % ! ಪಿಯುಸಿ ಗೆ ಮೂಡಬಿದರೆಯ ಪ್ರಸಿದ್ಧ ಕಾಲೇಜಿನಲ್ಲಿ ಸೇರಿಕೊಂಡ ಹುಡುಗಿ ಎನ್ ಸಿ ಸಿ ಗೂ ಸೇರಿದಳು. ಅತ್ಯಂತ ಕಠಿಣ ತರಬೇತಿ , ಸತತ ಪರಿಶ್ರಮದಿಂದ, ಸೇರಿದ ಕೇವಲ ೫ ತಿಂಗಳ ಅವಧಿಯಲ್ಲಿ ೨೦೦೯ ರ ದೆಹಲಿಯ ಗಣರಾಜ್ಯೋತ್ಸವದ ಪರೇಡ್ ಗಾಗಿ ಆಯ್ಕೆಯಾಗಿ ಕರ್ನಾಟಕ ಟೀಮಿನ ಮುಖ್ಯ ಸದಸ್ಯೆಯಾದಳು. ಅಷ್ಟೇ ಅಲ್ಲ , ಪ್ರತಿಷ್ಟಿತ " Prime minister Rally " ತಂಡಕ್ಕೆ ಆಯ್ಕೆಯಾದಳು . ರಾಷ್ಟ್ರ ಮಟ್ಟದಲ್ಲಿ " ೧೦ ಮಂದಿ ಅತ್ಯುತ್ತಮ ಕೆಡೆಟ್" ಗಳಲ್ಲಿ ಒಬ್ಬಳಾಗಿ ನಮಗೆ ಮಾತ್ರವಲ್ಲ ಕರ್ನಾಟಕಕ್ಕೂ ಹೆಮ್ಮೆ ತಂದಳು .

ಪ್ರಶಸ್ತಿಗಳ ಸುರಿಮಳೆ ಯಾಯಿತು.! ದೆಹಲಿಯಲ್ಲಿ ಮುಖ್ಯಮಂತ್ರಿ, ರಕ್ಷಣಾ ಮಂತ್ರಿ ಮೊದಲಾದ ಗಣ್ಯಾತಿಗಣ್ಯರ ಜೊತೆ , ಅಷ್ಟೇ ಏಕೆ ಸ್ವತಃ ನಮ್ಮ ರಾಷ್ಟ್ರಪತಿಯವರು ತಮ್ಮ ಭವನದಲ್ಲಿ ಏರ್ಪಡಿಸಿದ್ದ ಭೋಜನಕೂಟಗಳಲ್ಲಿ ಭಾಗವಹಿಸಿದ್ದಾಯಿತು ! ಎನ್ ಸಿ ಸಿ ಯ International youth exchange program ಗೆ ಆಯ್ಕೆಯಾದಳು. ದೇಶದಾದ್ಯಂತ ಸುಮಾರು ೨.೫ ಲಕ್ಷ ಕೆಡೆಟ್ ಗಳಲ್ಲಿ ಆಯ್ಕೆಯಾದ ೫ ಬಾಲಕಿಯರ ತಂಡದ ಸದಸ್ಯೆಯಾಗಿ , ಭಾರತದ ಪ್ರತಿನಿಧಿಯಾಗಿ ಇದೀಗ ಶ್ರೀಲಂಕಾಕ್ಕೆ ಹೋಗಿದ್ದ ಆಶಾ ಅಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದಳು. ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸಿ ಜಯಗಳಿಸುತ್ತಾ ಈಗ " Best All rounder " ಟ್ರೋಫೀ ಹಾಗೂ ಚಿನ್ನದ ಪದಕವನ್ನು ಗೆದ್ದಿರುವ ಹುಡುಗಿ ನನ್ನ ತಂಗಿ ಎಂದು ಹೆಮ್ಮೆ ಪಡುವ ಸರದಿ ನನ್ನದು ! ಈಗಿನ್ನೂ ದ್ವಿತೀಯ ಪಿ ಯು ಸಿ ಯಲ್ಲಿರುವ ಹುಡುಗಿ " Aeronauticle Engineering " ಮಾಡಿ ವಾಯುಸೇನೆ ಸೇರುವ ಕನಸು ಕಾಣುತ್ತಿದ್ದಾಳೆ . ಅವಳ ಕನಸು ನನಸಾಗಲಿ , ಈ ಗೆಲುವು ಅವಳ ಕನಸಿನ ಹಾದಿಯಲ್ಲಿಯ ಒಂದು ಮಹತ್ತರವಾದ ಮೆಟ್ಟಿಲು. ಹೀಗೆಯೇ ಯಶಸ್ಸಿನ ಮೆಟ್ಟಿಲುಗಳನ್ನು ಸುಲಭವಾಗಿ ಏರಲಿ ಎಂಬ ಹೃತ್ಪೂರ್ವಕ ಹಾರೈಕೆ ನನ್ನದು !

ಚಿಕ್ಕವಳಿದ್ದಾಗ ಅವಳ ಅಮ್ಮನ ಜೊತೆ ಒಮ್ಮೆ ವಾದಿಸುತ್ತಾ ಆಶಾ ಹೇಳಿದ್ದಳು " ಅಮ್ಮಾ, ನಾನು ಎಲ್ಲಾ ಮಕ್ಕಳಂತೆ ಅಲ್ಲ. ನಾನು ಸ್ಪೆಷಲ್ . ನನ್ನನ್ನು ನೀನು ಯಾವುದೇ ಫೀಲ್ಡ್ ನಲ್ಲಿ ಹಾಕು , ಅದರಲ್ಲಿ top ಮಾಡಿ ತೋರಿಸ್ತೀನಿ ಬೇಕಾದ್ರೆ ! " . ಇದೇ ಆತ್ಮ ವಿಶ್ವಾಸ ಅವಳನ್ನು ಈಗ ಗೆಲುವಿನ ಹಾದಿಯಲ್ಲಿ ನಿಲ್ಲಿಸಿದೆ . ಇದೇ ಅವಳನ್ನು ಭವಿಷ್ಯದಲ್ಲಿ ಭಾರತೀಯ ವಾಯುಸೇನೆಯ ಹೆಮ್ಮೆಯ ಪೈಲೆಟ್ ಆಗಿ ಮಾಡುತ್ತದೆ ಎನ್ನುವುದು ನನ್ನ ಧೃಡ ವಿಶ್ವಾಸ .

September 30, 2009

ಒಂದು ಗಂಡು ಮಗು ಹುಟ್ಟಿಸ್ಲಿಕ್ಕೆ ಆಗದಿದ್ರೆ ....

ನನ್ನ ಮದುವೆಯಾದ ಹೊಸದು. ಇನ್ನೂ ೨-೩ ದಿನಗಳಷ್ಟೇ ಆಗಿದ್ದು . ಒಂದು ದಿನ ಮನೆಯವರೆಲ್ಲ ಸಂಜೆ ಹೊತ್ತಿಗೆ ಜಗುಲಿಯಲ್ಲಿ ಕುಳಿತು ಹರಟುತ್ತಿದ್ದರು . ಆಗ ಅಲ್ಲಿಗೆ ಬಹಳ ವರ್ಷಗಳಿಂದ ಮನೆಯ ಕೆಲಸದವನಾಗಿದ್ದ ' ಕಣೆಯ ' ಬಂದ . ಕಪ್ಪಗೆ ಸಣಕಲಾಗಿ , ಕುಳ್ಳಗೆ ಇರುವ ಆತನ ವಯಸ್ಸು ೫೦ ರ ಆಸು ಪಾಸು. ಸದಾ ಕಾಲ ' ಪರಮಾತ್ಮನ' ಸಾನಿಧ್ಯದಲ್ಲೇ ಇರುವವನು . ಮನೆ ಮಂದಿಗೆಲ್ಲ ಅವನನ್ನು ತಮಾಷೆ ಮಾಡುವುದು ಬಹು ಪ್ರಿಯವಾದ ಕೆಲಸ !

' ಒಡೆಯಾ, ನಮಸ್ಕಾರ ! "

" ಎಂತದಾ ಕಣೆಯಾ, ಇಷ್ಟು ವರ್ಷದಿಂದ ನಮ್ಮನೆ ಕೆಲಸ ಮಾಡ್ಕಂಡಿದ್ದೆ , ಯಾವ ಕಾರ್ಯನೂ ತಪ್ಪಿಸಲಿಲ್ಲ , ಮೊನ್ನೆ ನೆಂಟರ ಊಟ ಇತ್ತು , ಆ ದಿವ್ಸ ಬರ್ಲೆ ಇಲ್ಲಲ? " ಕವಳ ( ಎಲೆ- ಅಡಿಕೆ ) ಕುಟ್ಟುತ್ತ ನನ್ನ ಅತ್ತೆ ಕೇಳಿದರು.

' ಇಲ್ಲ ಒಡತೀರೆ, ಆ ದಿವ್ಸ ನಂ ಬೀಗರ ಮನೀಗೆ ಹೋಗಿದ್ದೆ ... ಬರ್ಲಿಕಾಗ್ಲಿಲ್ಲ. ಅದ್ಕೆ ಇವತ್ತು ಸಣ್ಣೊಡತಿ ನೋಡುಕೆ ಅಂತ ಬಂದೀದೆ '

ಮಹೇಶ್ , ನನ್ನನ್ನು ಪಕ್ಕಕ್ಕೆ ಕರೆದು ಅವನಿಗೆ ಪರಿಚಯಿಸಿದರು. ಆಮೇಲೆ ಅವನನ್ನು ಕೇಳಿದರು ..
" ಹ್ಯಾಂಗಿದಾರೆ ಸಣ್ಣೊಡತಿ ? ಅಡ್ಡಿಲ್ವಾ ನಾವು ಆರಿಸಿದ್ದು ? "

ಒಮ್ಮೆ ಅಡಿಯಿಂದ ಮುಡಿವರೆಗೆ ನೋಡಿದವ " ಅಡ್ಡಿಲ್ಲ ಬಿಡಿ , ನೋಡುಕೆಲ್ಲ ಚಂದ ಇದ್ರು ... ಆದ್ರೆ ಘಟ್ಟದ ಮ್ಯಾಲಿನವರಂತಲಾ ಒಡೆಯಾ? " ಎಂದವನು ನಂತರ ಅರೆಕ್ಷಣ ಬಿಟ್ಟು

" ಈಗೆಲ್ಲ ನಡೀತದೆ ಬಿಡಿ ! ಮುಂಚಿನ ಹಾಂಗಲ್ಲ! " ಎನ್ನಬೇಕೆ ? ಯಾವುದೋ ದೊಡ್ಡ ತಪ್ಪು ಮಾಡಿದವರನ್ನು ಕ್ಷಮಿಸುವ ರೀತಿಯಲ್ಲಿ !

ನನಗೋ ಒಮ್ಮೆ ಕಸಿವಿಸಿಯಾಯಿತು . ಮೊದಲೇ ಹೊಸಾ ಜಾಗ , ಹೊಸ ಜನ , ಅದರಲ್ಲಿ ಇವನೋ ಹೀಗೆ ಹೇಳುತ್ತಿದ್ದಾನೆ !

ಅಲ್ಲೇ ಜಗುಲಿಯ ತುದಿಗೆ ಕುಳಿತು, ಅತ್ತೆ ಬಾಳೆಲೆಯಲ್ಲಿ ತಂದಿಟ್ಟ ಸಿಹಿತಿಂಡಿ- ಕಜ್ಜಾಯಗಳನ್ನು ಮುಗಿಸಿ ಕೈತೊಳೆದು ಬಂದವನು ಎಲೆ ಪಟ್ಟಿಯ ಮೇಲೆ ೧೦ ರೂಪಾಯಿ ಇಟ್ಟು ನಮಗೆ ಉಡುಗೊರೆ ಮಾಡಿದ.

" ಸಣ್ಣೊಡೆಯಾ , ಬಡವಂದು ಸಣ್ಣ ಉಡುಗೊರೆ, ತಗಳಿ .. " ಹಲ್ಲು ಕಿರಿಯುತ್ತಾ ನಿಂತ .

ಆಮೇಲೆ ನನ್ನ ಮಾವನವರ ಕಡೆ ನೋಡಿ, " ಒಡೆಯಾ , ಹಂಗಾರೆ ಈ ಸಲ ದೀಪಾವಳಿಗೆ ಒಂದು ಮೊಮ್ಮಗ ಬತ್ತ ಮನಿಗೆ ! ! ನಮಗೆ ಒಂದು ದೊಡ್ಡ ಬಕ್ಷೀಸು ಸಿಗ್ತದೆ ! " ಎಂದು ದೊಡ್ಡದಾಗಿ ನಕ್ಕ .

ಮಹೇಶ್ ಅವರು " ಏ ಮಾರಾಯ, ಎಂತೆಂತದಾರೂ ಹೇಳ್ತ್ಯಲೋ ! " ಎನ್ನುತ್ತಿದ್ದರೆ , ಆತ ಅಂಗಳ ದಾಟಿಯಾಗಿತ್ತು !

ಜಗುಲಿಯಲ್ಲಿದ್ದ ಎಲ್ಲರೂ ನಮ್ಮಿಬ್ಬರ ಮುಖ ನೋಡಿ ನಗುತ್ತಿದ್ದರೆ , ನಾನು ಕೆಂಪಾಗಿ ಬಿಟ್ಟಿದ್ದೆ ! ಕಾರಣ ಇಷ್ಟೇ , ನಮ್ಮ ಮದುವೆಯಾಗಿದ್ದು ಜೂನ್ ನಲ್ಲಿ ! ಈ ಕಣೆಯನೋ " ದೀಪಾವಳಿಗೆ ಮೊಮ್ಮಗ ಬರಲಿ" ಎಂದು ಹಾರೈಸಿದ್ದ!

--------------------------------------------------------------------------------

ಅಂತೂ ಕಣೆಯ ಹೇಳಿದಂತೆ , ಆ ದೀಪಾವಳಿಯಲ್ಲದಿದ್ದರೂ , ಮುಂದಿನ ದೀಪಾವಳಿ ಹಬ್ಬದಲ್ಲೇ ಸಿರಿ ಹುಟ್ಟಿದಳು. ಒಂದೂವರೆ ತಿಂಗಳಿಗೆ ಅತ್ತೆಯಮನೆಗೆ ಹೋದೆ ನಾನು . ಒಂದು ದಿನ ಅತ್ತೆ ಸಿರಿಯನ್ನು ಆಡಿಸುತ್ತ ಕುಳಿತಿದ್ದರು. ಆ ಹೊತ್ತಿಗೆ ಬಂದ ಕಣೆಯ .

" ನೋಡೋ , ನಮ್ಮನೆ ಮೊಮ್ಮಗಳು , ಯಾರ ಹಂಗೆ ಕಾಣ್ತಾಳೆ? " ಎಂದು ಅತ್ತೆ ಮಗುವನ್ನು ಮುದ್ದಿಸುತ್ತ ಹೇಳಿದರು.

"ಹಂ , ಮಾಣಿಯಾಗಿದ್ರೆ ಹೇಳ್ತಿದ್ದೆ ಒಡತಿ, ಹೆಣ್ಣು ಕೂಸಿನೆಲ್ಲ ಎಂತ ನೋಡುದು ? " ಎಂದು ಉದಾಸೀನವಾಗಿ ಹೇಳಿ ಎತ್ತಲೋ ನೋಡುತ್ತಾ ಕುಳಿತವನ ಬಗ್ಗೆ ನನಗೋ ಎಲ್ಲಿಲ್ಲದ ಸಿಟ್ಟು ಬಂದಿತ್ತು.

ಕಣೆಯನಿಗೆ ಗಂಡು ಮಕ್ಕಳೆಂದರೆ ಅತಿಯಾದ ಹುಚ್ಚೆಂದೂ , ಗಂಡು ಸಂತಾನವಿಲ್ಲದಿದ್ದರೆ ಜನ್ಮವೇ ದಂಡ ಎನ್ನುವುದು ಅವನ ಅಭಿಪ್ರಾಯ ಎಂದು ಆಮೇಲೆ ನನಗೆ ತಿಳಿಯಿತು !

ಕೆಲ ವರ್ಷಗಳ ನಂತರ ನನ್ನ ಮೈದುನನಿಗೆ ಗಂಡು ಮಗು ಹುಟ್ಟಿದಾಗ ಕಣೆಯ ಬಹು ಖುಷಿಯಿಂದ ನೋಡಲು ಬಂದವನು ,

" ಸತ್ಯಣ್ಣ ಚೊಲೋ ಕೆಲಸ ಮಾಡಿದ್ರು ನೋಡಿ ! ಅಂತೂ ಮಗನ್ನ ಹುಟ್ಟಿಸ್ಕನ್ಡ್ರು ! ಗಂಡಸು ಅಂದ್ರೆ ಹಿಂಗಿರಬೇಕು ! ಒಂದು ಗಂಡು ಮಗನ್ನ ಹುಟ್ಟಿಸ್ಲಿಕ್ಕೆ ಆಗದೆ ಇದ್ರೆ ,ಅದೆಂತ ಜಲ್ಮ ! " ಎಂದು ಉದ್ಗರಿಸಿದನಂತೆ !

----------------------------------------------------------------------------

ಈಗ ೨ ವರ್ಷಗಳ ಹಿಂದೆ , ದೀಪಾವಳಿಯಲ್ಲಿ ಅಂಗಳದಲ್ಲಿ ಕುಣಿಯುತ್ತಿದ್ದ ಸಿರಿಯನ್ನು ನೋಡಿದವನು

" ಇದ್ಯಾವ ಕೂಸು ಒಡತಿ? " ಎಂದು ಕೇಳಿದ .

" ನಮ್ಮನೆ ಮೊಮ್ಮಗಳು ಮಾರಾಯ , ಮಹೇಶನ ಮಗಳು " ಎಂದರು ಅತ್ತೆ.

" ಹೌದಾ, ಸಣ್ಣೊಡೆಯಂಗೆ ಎಷ್ಟು ಹುಡುಗ್ರು ಒಡತಿ ? "

" ಈ ಕೂಸು.. ಒಂದೇಯ "

" ಒಂದು ಮಾಣಿ ಬೇಕಾಗಿತ್ತಲ್ರ .. ನಾ ಹೇಳ್ತೆ ತಡೀರಿ "

ಆ ಸಂಜೆ ಪರಮಾತ್ಮನ ಸೇವೆ ಮಾಡಿಯೇ ಬಂದವನು ಜಗುಲಿಯಲ್ಲಿ ಮಾವನವರಿಗೆ ದೀಪಾವಳಿ ಕಾಣಿಕೆ ಎಂದು ತಾನು ತಂದಿದ್ದ ಕುಂಬಳಕಾಯಿ ಇಟ್ಟು ಅಡ್ಡಬಿದ್ದ. ಆಮೇಲೆ ಮಹೇಶ್ ರನ್ನು ಕರೆದು ,

" ಸಣ್ಣೊಡೆಯಾ , ನಾ ಹೀಂಗ್ ಹೇಳ್ತೆ ಹೇಳಲ್ಲಾ , ಆದ್ರೆ , ಒಂದು ಗಂಡು ಮಾಣಿ ಇಲ್ದೆ ಹೋದ್ರೆ ಎಂತಾ ಜಲ್ಮ ? ಮಾಣಿ ಬೇಕೇ ಬೇಕು . ನಾ ಈಗಿಂದೀಗ್ ಶಂಭು ದೇವಸ್ಥಾನಕ್ಕೆ ಹೋಗಿ , ಶಂಬೋಡೆಯನ ಹತ್ರೆ ಕೇಳ್ಕತ್ತೆ , " ಎಂದು ನಿಲ್ಲಿಸಿದ.

ನನ್ನ ಮೈದುನ " ಎಂತ ಹೇಳಿ ಕೇಳ್ಕತ್ಯಾ ಕಣೆಯಾ? " ಎಂದು ಅವನನ್ನು ಕೆಣಕಿದ .

" ಒಡೆಯಾ, ಅರ್ಜೆಂಟಾಗಿ , ನಂ ಸಣ್ಣೊಡೆಯಂಗೆ ಒಂದು ಮಾಣಿ ಹುಟ್ಟ್ಸೋದೆಯಾ ಹೇಳಿ ದ್ಯಾವ್ರಿಗೆ ಅಡ್ಡ ಬಿದ್ದು ಕಾಣಿಕೆ ಹಾಕೀಕ್ ಬತ್ತೆ " ಎಂದು ತೂರಾಡುತ್ತಾ ಅಂಗಳಕ್ಕಿಳಿದ !

ಜಗುಲಿಯಲ್ಲಿ ಮತ್ತೊಮ್ಮೆ ನಗುವಿನ ಕಟ್ಟೆಯೊಡೆಯಿತು !

" ಅತ್ಗೇ, ಏನೂ ಖರೆ ಇಲ್ಲೆ ನೋಡು , ಇಂವ ಅಡ್ಡಬಿದ್ದು ಕಾಣಿಕೆ ಹಾಕಿ ನಿಂಗೆ ' ಅರ್ಜೆಂಟ್ ' ಆಗಿ ಒಂದು ಮಗ ಹುಟ್ಟ್ ತಾ ನೋಡು " ಎಂದು ಮೈದುನ ರೇಗಿಸತೊಡಗಿದರೆ ,

" ಅಂವ ಕೇಳದು ' ಸಣ್ಣೊಡೆಯಂಗೆ ಒಂದು ಮಾಣಿ ಹುಟ್ಸು ' ಹೇಳಿ. ನನಗಲ್ಲ ಬಿಡು " ನಾನು ಕೂಲಾಗಿ ನಗುತ್ತಾ ಹೇಳಿದೆ .

ಆತ ಕಾಣಿಕೆ ಹಾಕಿದ್ದು ಮಾತ್ರ ಯಾವ ದೇವರಿಗೋ ಗೊತ್ತಿಲ್ಲ ! ಇನ್ನೂವರೆಗೂ ದೇವರು ಕಣೆಯನ ಕೋರಿಕೆಯನ್ನು ಮನ್ನಿಸಿಲ್ಲ

( ಮನ್ನಿಸುವುದೂ ಇಲ್ಲ ಬಿಡಿ ! ) !

ವಿಪರ್ಯಾಸವೆಂದರೆ , " ಗಂಡು ಸಂತಾನ " ಇರಲೇ ಬೇಕೆಂದು ಇಲ್ಲದಿದ್ದರೆ ಜನ್ಮವೇ ದಂಡವೆಂದು ನಂಬಿರುವ ಕಣೆಯನನ್ನು ಅವನ ಇಬ್ಬರು ಗಂಡು ಮಕ್ಕಳೂ ಮನೆಯಲ್ಲಿ ಇಟ್ಟುಕೊಂಡಿಲ್ಲ !


September 23, 2009

ಭಾಗ್ಯದಾ ಲಕ್ಷ್ಮೀ..

ಕೆಲ ದಿನಗಳಿಂದ ಅತಿಯಾದ ಕೆಲಸದ ಒತ್ತಡದಿಂದಾಗಿ ಬ್ಲಾಗ್ ನಲ್ಲಿ ಹೊಸ ಬರಹ ಪೋಸ್ಟ್ ಮಾಡುವ ಬಗ್ಗೆ ಯೋಚನೆ ಮಾಡಲೂ ಸಮಯವಿಲ್ಲದಂತಾಗಿದೆ. ಆದರೂ , ಬಹಳ ಕಾಲ ಸುಮ್ಮನಿರಲೂ ಆಗದು ! ಹೀಗಾಗಿ ಈ ವಿಡಿಯೋ ಹಾಕುತ್ತಿದ್ದೇನೆ. ನಾನು ಮೊನ್ನೆ ಮೊನ್ನೆಯಷ್ಟೇ ನೋಡಿ ಖುಷಿಪಟ್ಟೆ. ನಿಮ್ಮೊಂದಿಗೆ ಹಂಚಿಕೊಳ್ಳುವ ಮನಸಾಯಿತು. ನಿಮ್ಮಲ್ಲಿ ಬಹಳಷ್ಟು ಜನ ಇದನ್ನು ನೋಡಿರಲೂ ಬಹುದು. ಆದರೂ ಇನ್ನೊಮ್ಮೆ ನೋಡಿ ಸಂತೋಷ ಪಡುತ್ತೀರೆನ್ನುವ ಭರವಸೆ ನನ್ನದು.

video

ವಿಡಿಯೋ ಕೃಪೆ : Youtube