"ಶ್ರೀ ಬಾಲಾಜಿ ಕೃಪಾ ವಾಚ್ " ಕನ್ನಡಕಗಳನ್ನು ತಯಾರಿಸುವ ಏಕಮೇವ ಸ್ಥಳ ! " 
ಕಳ್ಳರಿಗೂ ಕಷ್ಟವಾಗಬಾರದೆಂದು ಯೋಚಿಸುವ ಈ ಮಹಾನುಭಾವರು ಯಾರೋ !

ಇದಕ್ಕೇನು ಹೇಳುವಿರಿ ?
" ಜನನ -ಮರಣ ದಾಖಲೆ ವಿಭಾಗ "
೨ ದಿನ 'ಜನನ -ಮರಣ ' ಬಂದ್ ಇರುತ್ತದೆ !!!!
ಬಚ್ಚಿಟ್ಟ ಭಾವಗಳೆ, ಮುಚ್ಚಿಟ್ಟ ನೆನಪುಗಳೆ, ಕೊಚ್ಚಿ ಹೋಗಿರಿ ಮನದ ಹುಚ್ಚು ಹೊಳೆಯೊಡನೆ..
"ಶ್ರೀ ಬಾಲಾಜಿ ಕೃಪಾ ವಾಚ್ " ಕನ್ನಡಕಗಳನ್ನು ತಯಾರಿಸುವ ಏಕಮೇವ ಸ್ಥಳ ! " 

ಇದಕ್ಕೇನು ಹೇಳುವಿರಿ ?
" ಜನನ -ಮರಣ ದಾಖಲೆ ವಿಭಾಗ "
೨ ದಿನ 'ಜನನ -ಮರಣ ' ಬಂದ್ ಇರುತ್ತದೆ !!!!
ಜೀವನದಲ್ಲಿ ಏನನ್ನಾದರೂ ಸಾಧಿಸುವ ಕನಸನ್ನು ನಾವೆಲ್ಲರೂ ಕಾಣುತ್ತೇವೆ ಆದರೆ ಅದನ್ನು ನಿಜವಾಗಿಸುವ ಛಲ ಹೊತ್ತವರು ಮಾತ್ರ ಕಮ್ಮಿಯೇ. ಅಂಥ ಹಾದಿಯಲ್ಲಿ ನಡೆಯುತ್ತಿರುವ ಕೆಲವೇ ಕೆಲವರಲ್ಲೊಬ್ಬಳು ' ಆಶಾ' . ನನ್ನ ಪುಟ್ಟ ತಂಗಿ ಅಂದರೆ ಚಿಕ್ಕಮ್ಮನ ಮಗಳು ಆಶಾ ನಮ್ಮ ಕುಟುಂಬದ ಎಲ್ಲರ ಕಣ್ಮಣಿ ! ನನ್ನ ಮಗಳಿಗಿಂತ ಕೇವಲ ಮೂರೇ ವರ್ಷ ದೊಡ್ಡವಳಾದ ಆಶಾ ನನಗೆ ತಂಗಿಗಿಂತ ಹೆಚ್ಚಾಗಿ ಮಗಳಾಗಿಯೇ ಬೆಳೆದಿದ್ದಾಳೆ. ಈ ಪುಟ್ಟ ಹುಡುಗಿಯ ದೊಡ್ಡ ಸಾಧನೆಗಳನ್ನು ನಿಮ್ಮಲ್ಲಿ ಹಂಚಿಕೊಳ್ಳುವ ಬಯಕೆ ನನಗೆ .
ಭದ್ರಾವತಿಯಂಥ ಚಿಕ್ಕ ಪಟ್ಟಣದ ಹುಡುಗಿಗೆ ಕನಸು ಮಾತ್ರ ತುಂಬಾ ದೊಡ್ಡದು. ಭಾರತೀಯ ವಾಯುಸೇನೆಯ ಯುದ್ಧ ವಿಮಾನವನ್ನು ಹಾರಾಡಿಸುವ ಬಯಕೆ ಚಿಕ್ಕದಲ್ಲ ! ೫ ನೇ ತರಗತಿಯಿಂದ ಯುದ್ಧ ವಿಮಾನಗಳ ಹುಚ್ಚು ಹತ್ತಿಸಿಕೊಂಡವಳು. ಪ್ರಪಂಚದ ಎಲ್ಲಾ ಪ್ರಸಿದ್ಧ ಯುದ್ಧ ವಿಮಾನಗಳ ವಿವರ ಅವಳ ನಾಲಿಗೆ ತುದಿಯಲ್ಲಿ ! ಅವುಗಳ ಬಗ್ಗೆ ಕನಸಿನಲ್ಲಿಯೂ ಗಂಟೆಗಟ್ಟಲೆ ಮಾತನಾಡುವಷ್ಟು ಸಾಮರ್ಥ್ಯ ! ಮೊದ ಮೊದಲು ಎಲ್ಲ ಮಕ್ಕಳಂತೆ ಇವಳದ್ದೂ ಒಂದು ಕನಸು ..ಕೆಲ ದಿನಗಳಲ್ಲಿ ಕರಗಿಹೋಗುವಂಥಾದ್ದು ಎಂದು ಕೊಂಡ ಅಪ್ಪ ಅಮ್ಮಂದಿರಿಗೆ ಅವಳದ್ದು ಬರೀ ಕನಸಲ್ಲ ಗಟ್ಟಿ ನಿರ್ಧಾರ ಎಂದು ಅರಿವಾಗಿದ್ದು ಅವಳು ಸೈನಿಕ ಶಾಲೆಯನ್ನು ಸೇರುವ ಬಯಕೆ ವ್ಯಕ್ತ ಪಡಿಸಿದಾಗ ! ಮುದ್ದು ಮಗಳ ಸೈನ್ಯ ಸೇರುವ ಕನಸು ಹೆತ್ತವರಿಗೆ ಕಳವಳ ತರುತ್ತಿತ್ತು. ಅವಳನ್ನು ಹೇಗೋ ಸಮಾಧಾನಿಸಿ ೧೦ನೇ ತರಗತಿಯವರೆಗೂ ಭದ್ರಾವತಿಯಲ್ಲಿಯೇ ಮುಂದುವರೆಸುವಂತೆ ಮನವೊಲಿಸಿದರು. ಓದಿನಲ್ಲೂ ಅಷ್ಟೇ ಮುಂದಿರುವ ಹುಡುಗಿ ತನ್ನೆಲ್ಲ ಇತರ ಚಟುವಟಿಕೆಗಳ ನಡುವೆಯೂ ೧೦ನೇ ತರಗತಿಯಲ್ಲಿ ಗಳಿಸಿದ್ದು ೯೩ % ! ಪಿಯುಸಿ ಗೆ ಮೂಡಬಿದರೆಯ ಪ್ರಸಿದ್ಧ ಕಾಲೇಜಿನಲ್ಲಿ ಸೇರಿಕೊಂಡ ಹುಡುಗಿ ಎನ್ ಸಿ ಸಿ ಗೂ ಸೇರಿದಳು. ಅತ್ಯಂತ ಕಠಿಣ ತರಬೇತಿ , ಸತತ ಪರಿಶ್ರಮದಿಂದ, ಸೇರಿದ ಕೇವಲ ೫ ತಿಂಗಳ ಅವಧಿಯಲ್ಲಿ ೨೦೦೯ ರ ದೆಹಲಿಯ ಗಣರಾಜ್ಯೋತ್ಸವದ ಪರೇಡ್ ಗಾಗಿ ಆಯ್ಕೆಯಾಗಿ ಕರ್ನಾಟಕ ಟೀಮಿನ ಮುಖ್ಯ ಸದಸ್ಯೆಯಾದಳು. ಅಷ್ಟೇ ಅಲ್ಲ , ಪ್ರತಿಷ್ಟಿತ " Prime minister Rally " ತಂಡಕ್ಕೆ ಆಯ್ಕೆಯಾದಳು . ರಾಷ್ಟ್ರ ಮಟ್ಟದಲ್ಲಿ " ೧೦ ಮಂದಿ ಅತ್ಯುತ್ತಮ ಕೆಡೆಟ್" ಗಳಲ್ಲಿ ಒಬ್ಬಳಾಗಿ ನಮಗೆ ಮಾತ್ರವಲ್ಲ ಕರ್ನಾಟಕಕ್ಕೂ ಹೆಮ್ಮೆ ತಂದಳು .
ಪ್ರಶಸ್ತಿಗಳ ಸುರಿಮಳೆ ಯಾಯಿತು.! ದೆಹಲಿಯಲ್ಲಿ ಮುಖ್ಯಮಂತ್ರಿ, ರಕ್ಷಣಾ ಮಂತ್ರಿ ಮೊದಲಾದ ಗಣ್ಯಾತಿಗಣ್ಯರ ಜೊತೆ , ಅಷ್ಟೇ ಏಕೆ ಸ್ವತಃ ನಮ್ಮ ರಾಷ್ಟ್ರಪತಿಯವರು ತಮ್ಮ ಭವನದಲ್ಲಿ ಏರ್ಪಡಿಸಿದ್ದ ಭೋಜನಕೂಟಗಳಲ್ಲಿ ಭಾಗವಹಿಸಿದ್ದಾಯಿತು ! ಎನ್ ಸಿ ಸಿ ಯ International youth exchange program ಗೆ ಆಯ್ಕೆಯಾದಳು. ದೇಶದಾದ್ಯಂತ ಸುಮಾರು ೨.೫ ಲಕ್ಷ ಕೆಡೆಟ್ ಗಳಲ್ಲಿ ಆಯ್ಕೆಯಾದ ೫ ಬಾಲಕಿಯರ ತಂಡದ ಸದಸ್ಯೆಯಾಗಿ , ಭಾರತದ ಪ್ರತಿನಿಧಿಯಾಗಿ ಇದೀಗ ಶ್ರೀಲಂಕಾಕ್ಕೆ ಹೋಗಿದ್ದ ಆಶಾ ಅಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದಳು. ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸಿ ಜಯಗಳಿಸುತ್ತಾ ಈಗ " Best All rounder " ಟ್ರೋಫೀ ಹಾಗೂ ಚಿನ್ನದ ಪದಕವನ್ನು ಗೆದ್ದಿರುವ ಹುಡುಗಿ ನನ್ನ ತಂಗಿ ಎಂದು ಹೆಮ್ಮೆ ಪಡುವ ಸರದಿ ನನ್ನದು ! ಈಗಿನ್ನೂ ದ್ವಿತೀಯ ಪಿ ಯು ಸಿ ಯಲ್ಲಿರುವ ಹುಡುಗಿ " Aeronauticle Engineering " ಮಾಡಿ ವಾಯುಸೇನೆ ಸೇರುವ ಕನಸು ಕಾಣುತ್ತಿದ್ದಾಳೆ . ಅವಳ ಕನಸು ನನಸಾಗಲಿ , ಈ ಗೆಲುವು ಅವಳ ಕನಸಿನ ಹಾದಿಯಲ್ಲಿಯ ಒಂದು ಮಹತ್ತರವಾದ ಮೆಟ್ಟಿಲು. ಹೀಗೆಯೇ ಯಶಸ್ಸಿನ ಮೆಟ್ಟಿಲುಗಳನ್ನು ಸುಲಭವಾಗಿ ಏರಲಿ ಎಂಬ ಹೃತ್ಪೂರ್ವಕ ಹಾರೈಕೆ ನನ್ನದು !
ಚಿಕ್ಕವಳಿದ್ದಾಗ ಅವಳ ಅಮ್ಮನ ಜೊತೆ ಒಮ್ಮೆ ವಾದಿಸುತ್ತಾ ಆಶಾ ಹೇಳಿದ್ದಳು " ಅಮ್ಮಾ, ನಾನು ಎಲ್ಲಾ ಮಕ್ಕಳಂತೆ ಅಲ್ಲ. ನಾನು ಸ್ಪೆಷಲ್ . ನನ್ನನ್ನು ನೀನು ಯಾವುದೇ ಫೀಲ್ಡ್ ನಲ್ಲಿ ಹಾಕು , ಅದರಲ್ಲಿ top ಮಾಡಿ ತೋರಿಸ್ತೀನಿ ಬೇಕಾದ್ರೆ ! " . ಇದೇ ಆತ್ಮ ವಿಶ್ವಾಸ ಅವಳನ್ನು ಈಗ ಗೆಲುವಿನ ಹಾದಿಯಲ್ಲಿ ನಿಲ್ಲಿಸಿದೆ . ಇದೇ ಅವಳನ್ನು ಭವಿಷ್ಯದಲ್ಲಿ ಭಾರತೀಯ ವಾಯುಸೇನೆಯ ಹೆಮ್ಮೆಯ ಪೈಲೆಟ್ ಆಗಿ ಮಾಡುತ್ತದೆ ಎನ್ನುವುದು ನನ್ನ ಧೃಡ ವಿಶ್ವಾಸ .
ನನ್ನ ಮದುವೆಯಾದ ಹೊಸದು. ಇನ್ನೂ ೨-೩ ದಿನಗಳಷ್ಟೇ ಆಗಿದ್ದು . ಒಂದು ದಿನ ಮನೆಯವರೆಲ್ಲ ಸಂಜೆ ಹೊತ್ತಿಗೆ ಜಗುಲಿಯಲ್ಲಿ ಕುಳಿತು ಹರಟುತ್ತಿದ್ದರು . ಆಗ ಅಲ್ಲಿಗೆ ಬಹಳ ವರ್ಷಗಳಿಂದ ಮನೆಯ ಕೆಲಸದವನಾಗಿದ್ದ ' ಕಣೆಯ ' ಬಂದ . ಕಪ್ಪಗೆ ಸಣಕಲಾಗಿ , ಕುಳ್ಳಗೆ ಇರುವ ಆತನ ವಯಸ್ಸು ೫೦ ರ ಆಸು ಪಾಸು. ಸದಾ ಕಾಲ ' ಪರಮಾತ್ಮನ' ಸಾನಿಧ್ಯದಲ್ಲೇ ಇರುವವನು . ಮನೆ ಮಂದಿಗೆಲ್ಲ ಅವನನ್ನು ತಮಾಷೆ ಮಾಡುವುದು ಬಹು ಪ್ರಿಯವಾದ ಕೆಲಸ !
' ಒಡೆಯಾ, ನಮಸ್ಕಾರ ! "
" ಎಂತದಾ ಕಣೆಯಾ, ಇಷ್ಟು ವರ್ಷದಿಂದ ನಮ್ಮನೆ ಕೆಲಸ ಮಾಡ್ಕಂಡಿದ್ದೆ , ಯಾವ ಕಾರ್ಯನೂ ತಪ್ಪಿಸಲಿಲ್ಲ , ಮೊನ್ನೆ ನೆಂಟರ ಊಟ ಇತ್ತು , ಆ ದಿವ್ಸ ಬರ್ಲೆ ಇಲ್ಲಲ? " ಕವಳ ( ಎಲೆ- ಅಡಿಕೆ ) ಕುಟ್ಟುತ್ತ ನನ್ನ ಅತ್ತೆ ಕೇಳಿದರು.
' ಇಲ್ಲ ಒಡತೀರೆ, ಆ ದಿವ್ಸ ನಂ ಬೀಗರ ಮನೀಗೆ ಹೋಗಿದ್ದೆ ... ಬರ್ಲಿಕಾಗ್ಲಿಲ್ಲ. ಅದ್ಕೆ ಇವತ್ತು ಸಣ್ಣೊಡತಿ ನೋಡುಕೆ ಅಂತ ಬಂದೀದೆ '
ಮಹೇಶ್ , ನನ್ನನ್ನು ಪಕ್ಕಕ್ಕೆ ಕರೆದು ಅವನಿಗೆ ಪರಿಚಯಿಸಿದರು. ಆಮೇಲೆ ಅವನನ್ನು ಕೇಳಿದರು ..
" ಹ್ಯಾಂಗಿದಾರೆ ಸಣ್ಣೊಡತಿ ? ಅಡ್ಡಿಲ್ವಾ ನಾವು ಆರಿಸಿದ್ದು ? "
ಒಮ್ಮೆ ಅಡಿಯಿಂದ ಮುಡಿವರೆಗೆ ನೋಡಿದವ " ಅಡ್ಡಿಲ್ಲ ಬಿಡಿ , ನೋಡುಕೆಲ್ಲ ಚಂದ ಇದ್ರು ... ಆದ್ರೆ ಘಟ್ಟದ ಮ್ಯಾಲಿನವರಂತಲಾ ಒಡೆಯಾ? " ಎಂದವನು ನಂತರ ಅರೆಕ್ಷಣ ಬಿಟ್ಟು
" ಈಗೆಲ್ಲ ನಡೀತದೆ ಬಿಡಿ ! ಮುಂಚಿನ ಹಾಂಗಲ್ಲ! " ಎನ್ನಬೇಕೆ ? ಯಾವುದೋ ದೊಡ್ಡ ತಪ್ಪು ಮಾಡಿದವರನ್ನು ಕ್ಷಮಿಸುವ ರೀತಿಯಲ್ಲಿ !
ನನಗೋ ಒಮ್ಮೆ ಕಸಿವಿಸಿಯಾಯಿತು . ಮೊದಲೇ ಹೊಸಾ ಜಾಗ , ಹೊಸ ಜನ , ಅದರಲ್ಲಿ ಇವನೋ ಹೀಗೆ ಹೇಳುತ್ತಿದ್ದಾನೆ !
ಅಲ್ಲೇ ಜಗುಲಿಯ ತುದಿಗೆ ಕುಳಿತು, ಅತ್ತೆ ಬಾಳೆಲೆಯಲ್ಲಿ ತಂದಿಟ್ಟ ಸಿಹಿತಿಂಡಿ- ಕಜ್ಜಾಯಗಳನ್ನು ಮುಗಿಸಿ ಕೈತೊಳೆದು ಬಂದವನು ಎಲೆ ಪಟ್ಟಿಯ ಮೇಲೆ ೧೦ ರೂಪಾಯಿ ಇಟ್ಟು ನಮಗೆ ಉಡುಗೊರೆ ಮಾಡಿದ.
" ಸಣ್ಣೊಡೆಯಾ , ಬಡವಂದು ಸಣ್ಣ ಉಡುಗೊರೆ, ತಗಳಿ .. " ಹಲ್ಲು ಕಿರಿಯುತ್ತಾ ನಿಂತ .
ಆಮೇಲೆ ನನ್ನ ಮಾವನವರ ಕಡೆ ನೋಡಿ, " ಒಡೆಯಾ , ಹಂಗಾರೆ ಈ ಸಲ ದೀಪಾವಳಿಗೆ ಒಂದು ಮೊಮ್ಮಗ ಬತ್ತ ಮನಿಗೆ ! ! ನಮಗೆ ಒಂದು ದೊಡ್ಡ ಬಕ್ಷೀಸು ಸಿಗ್ತದೆ ! " ಎಂದು ದೊಡ್ಡದಾಗಿ ನಕ್ಕ .
ಮಹೇಶ್ ಅವರು " ಏ ಮಾರಾಯ, ಎಂತೆಂತದಾರೂ ಹೇಳ್ತ್ಯಲೋ ! " ಎನ್ನುತ್ತಿದ್ದರೆ , ಆತ ಅಂಗಳ ದಾಟಿಯಾಗಿತ್ತು !
ಜಗುಲಿಯಲ್ಲಿದ್ದ ಎಲ್ಲರೂ ನಮ್ಮಿಬ್ಬರ ಮುಖ ನೋಡಿ ನಗುತ್ತಿದ್ದರೆ , ನಾನು ಕೆಂಪಾಗಿ ಬಿಟ್ಟಿದ್ದೆ ! ಕಾರಣ ಇಷ್ಟೇ , ನಮ್ಮ ಮದುವೆಯಾಗಿದ್ದು ಜೂನ್ ನಲ್ಲಿ ! ಈ ಕಣೆಯನೋ " ದೀಪಾವಳಿಗೆ ಮೊಮ್ಮಗ ಬರಲಿ" ಎಂದು ಹಾರೈಸಿದ್ದ!
--------------------------------------------------------------------------------
ಅಂತೂ ಕಣೆಯ ಹೇಳಿದಂತೆ , ಆ ದೀಪಾವಳಿಯಲ್ಲದಿದ್ದರೂ , ಮುಂದಿನ ದೀಪಾವಳಿ ಹಬ್ಬದಲ್ಲೇ ಸಿರಿ ಹುಟ್ಟಿದಳು. ಒಂದೂವರೆ ತಿಂಗಳಿಗೆ ಅತ್ತೆಯಮನೆಗೆ ಹೋದೆ ನಾನು . ಒಂದು ದಿನ ಅತ್ತೆ ಸಿರಿಯನ್ನು ಆಡಿಸುತ್ತ ಕುಳಿತಿದ್ದರು. ಆ ಹೊತ್ತಿಗೆ ಬಂದ ಕಣೆಯ .
" ನೋಡೋ , ನಮ್ಮನೆ ಮೊಮ್ಮಗಳು , ಯಾರ ಹಂಗೆ ಕಾಣ್ತಾಳೆ? " ಎಂದು ಅತ್ತೆ ಮಗುವನ್ನು ಮುದ್ದಿಸುತ್ತ ಹೇಳಿದರು.
"ಹಂ , ಮಾಣಿಯಾಗಿದ್ರೆ ಹೇಳ್ತಿದ್ದೆ ಒಡತಿ, ಹೆಣ್ಣು ಕೂಸಿನೆಲ್ಲ ಎಂತ ನೋಡುದು ? " ಎಂದು ಉದಾಸೀನವಾಗಿ ಹೇಳಿ ಎತ್ತಲೋ ನೋಡುತ್ತಾ ಕುಳಿತವನ ಬಗ್ಗೆ ನನಗೋ ಎಲ್ಲಿಲ್ಲದ ಸಿಟ್ಟು ಬಂದಿತ್ತು.
ಕಣೆಯನಿಗೆ ಗಂಡು ಮಕ್ಕಳೆಂದರೆ ಅತಿಯಾದ ಹುಚ್ಚೆಂದೂ , ಗಂಡು ಸಂತಾನವಿಲ್ಲದಿದ್ದರೆ ಜನ್ಮವೇ ದಂಡ ಎನ್ನುವುದು ಅವನ ಅಭಿಪ್ರಾಯ ಎಂದು ಆಮೇಲೆ ನನಗೆ ತಿಳಿಯಿತು !
ಕೆಲ ವರ್ಷಗಳ ನಂತರ ನನ್ನ ಮೈದುನನಿಗೆ ಗಂಡು ಮಗು ಹುಟ್ಟಿದಾಗ ಕಣೆಯ ಬಹು ಖುಷಿಯಿಂದ ನೋಡಲು ಬಂದವನು ,
" ಸತ್ಯಣ್ಣ ಚೊಲೋ ಕೆಲಸ ಮಾಡಿದ್ರು ನೋಡಿ ! ಅಂತೂ ಮಗನ್ನ ಹುಟ್ಟಿಸ್ಕನ್ಡ್ರು ! ಗಂಡಸು ಅಂದ್ರೆ ಹಿಂಗಿರಬೇಕು ! ಒಂದು ಗಂಡು ಮಗನ್ನ ಹುಟ್ಟಿಸ್ಲಿಕ್ಕೆ ಆಗದೆ ಇದ್ರೆ ,ಅದೆಂತ ಜಲ್ಮ ! " ಎಂದು ಉದ್ಗರಿಸಿದನಂತೆ !
----------------------------------------------------------------------------
ಈಗ ೨ ವರ್ಷಗಳ ಹಿಂದೆ , ದೀಪಾವಳಿಯಲ್ಲಿ ಅಂಗಳದಲ್ಲಿ ಕುಣಿಯುತ್ತಿದ್ದ ಸಿರಿಯನ್ನು ನೋಡಿದವನು
" ಇದ್ಯಾವ ಕೂಸು ಒಡತಿ? " ಎಂದು ಕೇಳಿದ .
" ನಮ್ಮನೆ ಮೊಮ್ಮಗಳು ಮಾರಾಯ , ಮಹೇಶನ ಮಗಳು " ಎಂದರು ಅತ್ತೆ.
" ಹೌದಾ, ಸಣ್ಣೊಡೆಯಂಗೆ ಎಷ್ಟು ಹುಡುಗ್ರು ಒಡತಿ ? "
" ಈ ಕೂಸು.. ಒಂದೇಯ "
" ಒಂದು ಮಾಣಿ ಬೇಕಾಗಿತ್ತಲ್ರ .. ನಾ ಹೇಳ್ತೆ ತಡೀರಿ "
ಆ ಸಂಜೆ ಪರಮಾತ್ಮನ ಸೇವೆ ಮಾಡಿಯೇ ಬಂದವನು ಜಗುಲಿಯಲ್ಲಿ ಮಾವನವರಿಗೆ ದೀಪಾವಳಿ ಕಾಣಿಕೆ ಎಂದು ತಾನು ತಂದಿದ್ದ ಕುಂಬಳಕಾಯಿ ಇಟ್ಟು ಅಡ್ಡಬಿದ್ದ. ಆಮೇಲೆ ಮಹೇಶ್ ರನ್ನು ಕರೆದು ,
" ಸಣ್ಣೊಡೆಯಾ , ನಾ ಹೀಂಗ್ ಹೇಳ್ತೆ ಹೇಳಲ್ಲಾ , ಆದ್ರೆ , ಒಂದು ಗಂಡು ಮಾಣಿ ಇಲ್ದೆ ಹೋದ್ರೆ ಎಂತಾ ಜಲ್ಮ ? ಮಾಣಿ ಬೇಕೇ ಬೇಕು . ನಾ ಈಗಿಂದೀಗ್ ಶಂಭು ದೇವಸ್ಥಾನಕ್ಕೆ ಹೋಗಿ , ಶಂಬೋಡೆಯನ ಹತ್ರೆ ಕೇಳ್ಕತ್ತೆ , " ಎಂದು ನಿಲ್ಲಿಸಿದ.
ನನ್ನ ಮೈದುನ " ಎಂತ ಹೇಳಿ ಕೇಳ್ಕತ್ಯಾ ಕಣೆಯಾ? " ಎಂದು ಅವನನ್ನು ಕೆಣಕಿದ .
" ಒಡೆಯಾ, ಅರ್ಜೆಂಟಾಗಿ , ನಂ ಸಣ್ಣೊಡೆಯಂಗೆ ಒಂದು ಮಾಣಿ ಹುಟ್ಟ್ಸೋದೆಯಾ ಹೇಳಿ ದ್ಯಾವ್ರಿಗೆ ಅಡ್ಡ ಬಿದ್ದು ಕಾಣಿಕೆ ಹಾಕೀಕ್ ಬತ್ತೆ " ಎಂದು ತೂರಾಡುತ್ತಾ ಅಂಗಳಕ್ಕಿಳಿದ !
ಜಗುಲಿಯಲ್ಲಿ ಮತ್ತೊಮ್ಮೆ ನಗುವಿನ ಕಟ್ಟೆಯೊಡೆಯಿತು !
" ಅತ್ಗೇ, ಏನೂ ಖರೆ ಇಲ್ಲೆ ನೋಡು , ಇಂವ ಅಡ್ಡಬಿದ್ದು ಕಾಣಿಕೆ ಹಾಕಿ ನಿಂಗೆ ' ಅರ್ಜೆಂಟ್ ' ಆಗಿ ಒಂದು ಮಗ ಹುಟ್ಟ್ ತಾ ನೋಡು " ಎಂದು ಮೈದುನ ರೇಗಿಸತೊಡಗಿದರೆ ,
" ಅಂವ ಕೇಳದು ' ಸಣ್ಣೊಡೆಯಂಗೆ ಒಂದು ಮಾಣಿ ಹುಟ್ಸು ' ಹೇಳಿ. ನನಗಲ್ಲ ಬಿಡು " ನಾನು ಕೂಲಾಗಿ ನಗುತ್ತಾ ಹೇಳಿದೆ .
ಆತ ಕಾಣಿಕೆ ಹಾಕಿದ್ದು ಮಾತ್ರ ಯಾವ ದೇವರಿಗೋ ಗೊತ್ತಿಲ್ಲ ! ಇನ್ನೂವರೆಗೂ ದೇವರು ಕಣೆಯನ ಕೋರಿಕೆಯನ್ನು ಮನ್ನಿಸಿಲ್ಲ
( ಮನ್ನಿಸುವುದೂ ಇಲ್ಲ ಬಿಡಿ ! ) !
ವಿಪರ್ಯಾಸವೆಂದರೆ , " ಗಂಡು ಸಂತಾನ " ಇರಲೇ ಬೇಕೆಂದು ಇಲ್ಲದಿದ್ದರೆ ಜನ್ಮವೇ ದಂಡವೆಂದು ನಂಬಿರುವ ಕಣೆಯನನ್ನು ಅವನ ಇಬ್ಬರು ಗಂಡು ಮಕ್ಕಳೂ ಮನೆಯಲ್ಲಿ ಇಟ್ಟುಕೊಂಡಿಲ್ಲ !
ಕೆಲ ದಿನಗಳಿಂದ ಅತಿಯಾದ ಕೆಲಸದ ಒತ್ತಡದಿಂದಾಗಿ ಬ್ಲಾಗ್ ನಲ್ಲಿ ಹೊಸ ಬರಹ ಪೋಸ್ಟ್ ಮಾಡುವ ಬಗ್ಗೆ ಯೋಚನೆ ಮಾಡಲೂ ಸಮಯವಿಲ್ಲದಂತಾಗಿದೆ. ಆದರೂ , ಬಹಳ ಕಾಲ ಸುಮ್ಮನಿರಲೂ ಆಗದು ! ಹೀಗಾಗಿ ಈ ವಿಡಿಯೋ ಹಾಕುತ್ತಿದ್ದೇನೆ. ನಾನು ಮೊನ್ನೆ ಮೊನ್ನೆಯಷ್ಟೇ ನೋಡಿ ಖುಷಿಪಟ್ಟೆ. ನಿಮ್ಮೊಂದಿಗೆ ಹಂಚಿಕೊಳ್ಳುವ ಮನಸಾಯಿತು. ನಿಮ್ಮಲ್ಲಿ ಬಹಳಷ್ಟು ಜನ ಇದನ್ನು ನೋಡಿರಲೂ ಬಹುದು. ಆದರೂ ಇನ್ನೊಮ್ಮೆ ನೋಡಿ ಸಂತೋಷ ಪಡುತ್ತೀರೆನ್ನುವ ಭರವಸೆ ನನ್ನದು.
ವಿಡಿಯೋ ಕೃಪೆ : Youtube
ಬೆಳಗಾಯಿತು, ಆಫೀಸಿನ ಹುಡುಗನೊಬ್ಬನಿಗೆ ಫೋನ್ ಮಾಡಿದ ಮಹೇಶ್ ನಮ್ಮ ಬಿಲ್ಡಿಂಗಿಗೆ ಕುಡಿಯುವ ನೀರನ್ನು ತಲುಪಿಸುವ ವ್ಯವಸ್ಥೆ ಮಾಡಿದರು. ಅಷ್ಟರಲ್ಲೆ , ಅಲ್ಲಿನ ನಮ್ಮ ಮೇಲಿನ ಮನೆಯ ಜಯಂತ್ ಫೋನ್ ಮಾಡಿ , ನೀರು ಬೆಳಗಿನ ಜಾವದಷ್ಟೊತ್ತಿಗೆ ಇಳಿಯಿತೆಂದೂ ಸದ್ಯಕ್ಕೆ ಯಾವ ತೊಂದರೆಯೂ ಇಲ್ಲ ಎಂದು ಹೇಳಿದಾಗ ಸ್ವಲ್ಪ ನಿರಾಳವೆನಿಸಿತು. ಹತ್ತು ಗಂಟೆಯ ಹೊತ್ತಿಗೆ ಆ ಮನೆಗೆ ಹೋಗಿ ಪರಿಸ್ಥಿತಿಯನ್ನು ನೋಡಿಬರುವುದೆಂದು ನಿರ್ಧಾರ ಮಾಡಿದೆವು.
ಸಿರಿ ಹಾಗೂ ಜಯಾಳನ್ನು ಈ ಮನೆಯಲ್ಲೆ ಬಿಟ್ಟು ನಾವಿಬ್ಬರೂ ಅಲ್ಲಿಗೆ ಹೋದೆವು. ಆಗ ಅಲ್ಲಿ ಕಂಡ ದೃಶ್ಯ ಮಾತ್ರ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ರಸ್ತೆಯಿಡೀ ಕೆಸರು , ಕಸಗಳಿಂದ ತುಂಬಿತ್ತು. ಪ್ರಕೃತಿಯ ಕರಾಳ ನರ್ತನದ ಪಳೆಯುಳಿಕೆಗಳು ಕಣ್ಣೆದುರು! ಆದರೆ, ಹಿಂದಿನ ದಿನವಷ್ಟೇ ರೌದ್ರ ರೂಪದಿಂದ ಭೋರ್ಗರೆಯುತ್ತಿದ್ದ ಪವನಾ, ಇಂದು ನೋಡಿದರೆ ಏನೂ ಆಗಲಿಲ್ಲವೆಂಬಂತೆ ಶಾಂತವಾಗಿ ಹರಿಯುತ್ತಿದ್ದಳು. ರಸ್ತೆಯಲ್ಲಿ , ಕಾಂಪೌಂಡಿನೊಳಗೆ ಹೆಜ್ಜೆಯಿಟ್ಟರೆ, ಅರ್ಧ ಅಡಿಗಳಷ್ಟು ಕೆಸರಿನಲ್ಲಿ ಕಾಲು ಹುಗಿಯುತ್ತಿತ್ತು. ಜಾರದಂತೆ ಪ್ರಯಾಸ ಪಟ್ಟು ಮನೆಯ ಬಾಗಿಲವರೆಗೆ ತಲುಪಿದೆವು. ಅಷ್ಟೊತ್ತಿಗೆ ಅಲ್ಲಿಗೆ ಬಿಲ್ಡಿಂಗ್ ನ ಉಳಿದ ಮನೆಗಳವರು ಬಂದರು.
" ವೈನಿ, ನಾವು ಒಮ್ಮೆ ಬಾಗಿಲು ತೆಗೆದು ಒಳಗೇನಾಗಿದೆ ಎಂದು ನೋಡುವ ವರೆಗೆ ನೀವಿಲ್ಲಿ ಬರಬೇಡಿ " ಎಂದು ನನ್ನನ್ನು ಆಚೆಯೇ ನಿಲ್ಲಿಸಿದ ಜಯಂತ್ ಹಾಗೂ ಸಂಜಯ್, ಮಹೇಶ್ ರೊಡನೆ ಮನೆಯ ಬೀಗ ತೆಗೆದರು. ಎಷ್ಟು ಪ್ರಯತ್ನಿಸಿದರೂ ಬಾಗಿಲು ತೆರೆದು ಕೊಳ್ಳುತ್ತಲೇ ಇಲ್ಲ. ಆಮೇಲೆ ಮೂವರೂ ಒಟ್ಟಾಗಿ ಜೋರಾಗಿ ಒದ್ದಾಗ ಅಂತೂ ತೆರೆಯಿತು. ನೋಡಿದರೆ, ಬಾಗಿಲಿಗೆ ಅಡ್ಡವಾಗಿ ಖುರ್ಚಿಯೊಂದು ಕುಳಿತಿತ್ತು. ಅರ್ಧ ಅಡಿ ಕೆಸರಿನಲ್ಲಿ ಹುಗಿದು ಹೋಗಿದ್ದರಿಂದ ಸುಲಭವಾಗಿ ಅಲುಗಾಡುವಂತಿರಲಿಲ್ಲ . ಒಳಗೆ ಕಂಡ ನೋಟವಂತೂ ನನ್ನ ಹೊಟ್ಟೆಯಲ್ಲಿ ಸಂಕಟ ತರುತ್ತಿತ್ತು. ನಾನು ಆಸಕ್ತಿಯಿಂದ ಜೋಡಿಸಿಟ್ಟ ಹೂದಾನಿಗಳು ಕೆಸರಿನಲ್ಲಿ ಹೊರಳುತ್ತಿದ್ದವು. ಗೋಡೆಯ ಪಕ್ಕದಲ್ಲಿದ್ದ ದಿವಾನ್ ಕಾಟ್, ಹಾಲ್ ನ ನಡುವೆ ಕುಳಿತಿತ್ತು. ಅಡಿಗೆ ಮನೆಯಲ್ಲಿ ಫ್ರಿಜ್ ನೆಲಕ್ಕೆ ಮಲಗಿತ್ತು. ಬಾಲ್ಕನಿಯಲ್ಲಿ ವಾಷಿಂಗ್ ಮಷಿನ್ ಸೊಟ್ಟಗೆ ನಿಂತಿತ್ತು , ಬೆಡ್ ರೂಮಿನಲ್ಲಿ ಮಂಚ , ಹಾಸಿಗೆಗಳು ಪೂರ್ಣವಾಗಿ ಕೆಸರಿನಿಂದ ಮುಚ್ಚಿಹೋಗಿದ್ದವು. ಸಾಧಾರಣವಾಗಿ ಅಲುಗಾಡಿಸಲಾಗದ , ಸ್ಟೋರೇಜ್ ಟೈಪ್ ನ ನಮ್ಮ ದೊಡ್ಡ ಮಂಚ ತೇಲಿ ಬಂದು ಕಪಾಟಿಗೆ ಅಡ್ಡವಾಗಿ ನಿಂತಿತ್ತು ಎಂದರೆ ರಾತ್ರಿ ಅಲ್ಲಿ ನೀರಿನ ಒತ್ತಡ ಎಷ್ಟಿರಬಹುದು ಎಂದು ಊಹಿಸಬಹುದು.
ಗಂಡಸರೆಲ್ಲ ಕೂಡಿಕೊಂಡು ಬಕೆಟ್ ಗಳಲ್ಲಿ ಕೆಸರು ತುಂಬಿ ಹೊರಗೆ ಚೆಲ್ಲ ತೊಡಗಿದರು. ಸ್ವಲ್ಪ ಹೊತ್ತಿನಲ್ಲಿ ನಮ್ಮ ಕಂಪನಿಯಿಂದ ಬಂದ ೪ ಕೆಲಸಗಾರರೂ ಜೊತೆಗೆ ಸೇರಿಕೊಂಡರು . ಎಲ್ಲೆಡೆಯೂ ಕೆಸರು! ನೆಲದಲ್ಲಿ, ಕಪಾಟುಗಳಲ್ಲಿ, ಅಡಿಗೆ ಮನೆಯ ಪಾತ್ರೆಗಳು, ಫ್ರಿಜ್ , ಮಂಚಗಳು .. ಹೀಗೇ ಎಲ್ಲವೂ ಕೆಸರುಮಯ ! ಸದ್ಯಕ್ಕೆ , ನಾವು ಮನೆಯಿಂದಾಚೆ ಹೋಗುವ ಮೊದಲು ಎಲ್ಲ ಕಿಟಕಿ- ಬಾಗಿಲುಗಳನ್ನು ಭದ್ರ ಪಡಿಸಿದ್ದರಿಂದ ಕಸ ಕಡ್ಡಿಗಳು, ಹಾವು ಹರಣೆಗಳು ಮನೆಯೊಳಗೆ ಹೊಕ್ಕಿರಲಿಲ್ಲ . ಬರೀ ಕೆಸರು ಮಾತ್ರವಿತ್ತು.
ಒಂದು ಹಂತದ ಸ್ವಚ್ಛತಾ ಕಾರ್ಯಕ್ರಮ ಮುಗಿದಾಗ ಸುಮಾರು ೩ ಗಂಟೆಯಾಗಿತ್ತು. ಮೇಲಿನ ಮನೆಯಲ್ಲಿ ಊಟ ಕಾಯುತ್ತಿತ್ತು. ಅದಾದ ಮೇಲೆ , ಹಾಳಾದ ವಸ್ತುಗಳನ್ನು ಎಸೆಯುವ ಕೆಲಸ ! ೫-೬ ಹಾಸಿಗೆಗಳು , ಚಾಪೆ, ಅದೆಷ್ಟೋ ಬಟ್ಟೆಗಳು, ಬಯಸಿ ತಂದಿಟ್ಟುಕೊಂಡ ಇನ್ನಿತರ ವಸ್ತುಗಳು ಹೊರಗೆ ರಸ್ತೆಯ ತುದಿಯಲ್ಲಿದ್ದ ದೊಡ್ಡ ಕಸದ ತೊಟ್ಟಿ ಸೇರಿದವು. ಆ ಕಸದತೊಟ್ಟಿಯಂತೂ ಆಗಲೇ ತುಂಬಿ ಹೋಗಿತ್ತು. ಜನರು , ಮಳೆಗಾಲಕ್ಕೆಂದು ಶೇಖರಿಸಿಟ್ಟುಕೊಂಡಿದ್ದ ಚೀಲಗಟ್ಟಲೇ ಕಾಳು ಕಡಿಗಳು , ಅಕ್ಕಿ -ಗೋಧಿಗಳು ಕೆಸರು ನೀರಿನಲ್ಲಿ ನೆನೆದು ಯಾತಕ್ಕೂ ಬಾರದಂತಾಗಿ ಭಾರವಾದ ಮನಸ್ಸಿನಿಂದ ಕಸದ ತೊಟ್ಟಿಗೆ ಹಾಕುತ್ತಿದ್ದರು ! ಅದನ್ನು ನೋಡುವಾಗ ಅತೀವ ಸಂಕಟ ! ಅದಕ್ಕಾಗಿ ಎಷ್ಟು ಕಷ್ಟ ಪಟ್ಟಿರಬಹುದು , ಬೆವರು ಹರಿಸಿ ದುಡಿದ ಹಣ , ಹೀಗೆ ಚೆಲ್ಲುವಾಗ ಅವರಿಗೆಷ್ಟು ಹೊಟ್ಟೆ ಉರಿಯುತ್ತಿರಬಹುದು !
ಅಂತೂ ಇಂತೂ ಸಂಜೆಯಾಗುವಷ್ಟರಲ್ಲಿ ಮನೆ ಒಂದು ರೂಪಕ್ಕೆ ಬಂತು. ಆದರೆ ತಕ್ಷಣ ಅಲ್ಲಿ ಬಂದು ಉಳಿಯುವುದು ಮಾತ್ರ ಸಾಧ್ಯವಿರಲಿಲ್ಲ. ರಾತ್ರಿಯಿಡೀ ,ಮನೆಯೊಳಗೆ ಸುಮಾರು ಮೂರು ಅಡಿಗಳೆತ್ತರಕ್ಕೆ ನಿಂತ ನೀರಿನಿಂದಾಗಿ ಗೋಡೆಗಳು ನೆನೆದು ಹೋಗಿದ್ದವು. ಮನೆಯೊಳಗೆ ಒಂಥರಾ ವಾಸನೆ ಬರುತ್ತಿತ್ತು. ನನ್ನ ಮೂಗಿನಲ್ಲಿ ತುಂಬಿಕೊಂಡ ಆ ವಾಸನೆ ಮುಂದಿನ ಎಷ್ಟೋ ತಿಂಗಳುಗಳ ಕಾಲ ನನಗೆ ವಾಕರಿಕೆ ತರುತ್ತಿತ್ತು. ನಂತರದ ದಿನಗಳಲ್ಲಿ ನಮ್ಮ ವಸ್ತುಗಳನ್ನೆಲ್ಲ ಚಿಕ್ಕಪ್ಪನ ಮನೆಗೆ ಸಾಗಿಸಿ ಅಲ್ಲಿಯೆ ಇದ್ದೆವು. ಗೋಡೆಗಳು ಒಣಗಲು ಸುಮಾರು ೨ ತಿಂಗಳೇ ಹಿಡಿಯಿತು . ಪ್ರತಿ ದಿನ ಬೆಳಿಗ್ಗೆ ಮಹೇಶ್ ಅಲ್ಲಿ ಹೋಗಿ ಫ್ಯಾನ್ ಹಾಕಿ ಆಫೀಸಿಗೆ ಹೋಗುತ್ತಿದರು. ಸಂಜೆ ಮನೆಗೆ ಬರುವ ಮೊದಲು ಆಫ್ ಮಾಡಿ ಬರುತ್ತಿದ್ದರು. ಕೆಲ ದಿನಗಳ ನಂತರ ಆ ಜವಾಬ್ದಾರಿಯನ್ನು ನಮ್ಮ ಪಕ್ಕದ ಮನೆಯವರೇ ವಹಿಸಿಕೊಂಡರು ! ಗೋಡೆಗಳು ಒಣಗಿ, ಮನೆಯನ್ನು ಒಮ್ಮೆ ಕ್ರಿಮಿ ನಾಶಕಗಳಿಂದ ಶುದ್ಧಗೊಳಿಸಿ, ಪೇಯಿಂಟ್ ಮಾಡಿ , ಹಾಸಿಗೆ , ಮಂಚ , ಇತ್ಯಾದಿಗಳನ್ನು ಪುನಃ ಖರೀದಿಸಿ, ಮನೆಯನ್ನು ಸಜ್ಜುಗೊಳಿಸಿ , ನಾವು ಅಲ್ಲಿಗೆ ಉಳಿಯಲು ಹಿಂದುರಿಗಿದಾಗ ೬ ತಿಂಗಳುಗಳೇ ಕಳೆದಿದ್ದವು. ಆ ದಿನಗಳಲ್ಲಿ ನಮಗೆ ನಮ್ಮ ನೆರೆಹೊರೆಯವರು , ಬಂಧು - ಮಿತ್ರರು ಮಾಡಿದ ಸಹಾಯ ಎಂದಿಗೂ ಮರೆಯಲಾಗದ್ದು.
ಇವೆಲ್ಲ ಆದಮೇಲೆ , ನಮ್ಮ ಪರಿಚಯದ ಹಿರಿಯರೊಬ್ಬರು ಹೇಳಿದ್ದರು " ಆಗೋದೆಲ್ಲ ಒಳ್ಳೇದಕ್ಕೇ ಕಣಮ್ಮಾ. ನಿಮ್ಮ ಮನೆಗೆ ನುಗ್ಗಿದ ನೀರು ನಿಮ್ಮ ಕಷ್ಟಗಳನ್ನು , ಯಾವುದೇ ರೀತಿಯ ದುರಾದೃಷ್ಟವನ್ನೂ ಕೊಚ್ಚಿಕೊಂಡು ಹೋಯ್ತೂಂತ ತಿಳೀರಿ " ಎಂದು. ಅದೂ ಒಂಥರಾ ನಿಜವೇ ಎನಿಸಿದೆ. ಅದೇ ವರ್ಷದ ಡಿಸೆಂಬರ್ ನಲ್ಲಿ ನಾವು ಹೊಸಾ ಮನೆ ಬುಕ್ ಮಾಡಿ ೨೦೦೭ ನಲ್ಲಿ ಈಗಿರುವ ದೊಡ್ಡ ಮನೆಗೆ ಬಂದೆವು. ಮೊದಲು ಗ್ರೌಂಡ್ ಫ್ಲೋರ್ ನಲ್ಲಿದ್ದವರು ಈಗ ಟಾಪ್ ಫ್ಲೋರ್ ಗೆ ಬಂದಿದ್ದೇವೆ. ಮುಳುಗುವ ಸಾಧ್ಯತೆಯಂತೂ ಇಲ್ಲಎನ್ನುವುದೊಂದು ಸಮಾಧಾನ !
ಇವೆಲ್ಲ ನಡೆದು ೪ ವರ್ಷಗಳೇ ಕಳೆದವು. ಆದರೆ , ಪ್ರತಿ ಜುಲೈ ೨೬ ಕ್ಕೆ ನನ್ನ ಕಣ್ಣೆದುರು ಅಂದಿನ ಚಿತ್ರಗಳು ಹಾದುಹೋಗುತ್ತವೆ, ನನ್ನ ಕೈ ಕಾಲುಗಳು ತಣ್ಣಗಾಗಿ ಬಿಡುತ್ತವೆ. ಅಂದು ನನ್ನಲ್ಲಿ ತುಂಬಿದ್ದ ಹುಚ್ಚು ಧೈರ್ಯವನ್ನು ನೆನೆದಾಗ ಅದು ನಾನೇನಾ ಎಂಬ ಅನುಮಾನ ಬಂದುಬಿಡುತ್ತದೆ. ಈಗ ಟಿವಿ ಯಲ್ಲಿ ಪ್ರವಾಹದ ಚಿತ್ರಗಳನ್ನು ನೋಡುವಾಗ , ಮನಸ್ಸು ಮೊದಲಿಗಿಂತ ಹೆಚ್ಚು ಸ್ಪಂದಿಸುತ್ತದೆ! ಸಂತ್ರಸ್ತರ ನೋವು ನಮ್ಮದೇ ಎನಿಸಿಬಿಡುತ್ತದೆ !
ಪ್ರಕೃತಿಯ ಅಟ್ಟಹಾಸ ನಮ್ಮನ್ನು ಭಯಭೀತ ಗೊಳಿಸಿದಂತೆಯೇ, ನಮ್ಮ ಮುಂದೆ ಅನೇಕ ಮಾನವೀಯತೆಯ ಮುಖಗಳನ್ನೂ ತೆರೆದಿಟ್ಟಿತ್ತು ! ದಿನನಿತ್ಯದ ಜೀವನದಲ್ಲಿ , ಪರಿಚಯ ಇದ್ದರೂ ಇಲ್ಲದಂತೆ ಕೇವಲ ' ಹಾಯ್ , ಹಲೋ' ಗಳಿಗಷ್ಟೇ ಸೀಮಿತಗೊಳಿಸಿ ಕೊಂಡ ಜನರು , ಆ ಕರಾಳ ದಿನದಂದು ಗುರುತು ಪರಿಚಯವಿಲ್ಲದವರಿಗೂ ಸಹ , ತಮ್ಮ ಕೈಲಾದ ಸಹಾಯ ಮಾಡಿದರು. ಕೆಲವರು, ತೊಯ್ದು ತೊಪ್ಪೆಯಾದವರಿಗೆ , ಬಿಸಿ ಬಿಸಿ ಚಹಾ ಮಾಡಿಕೊಟ್ಟರೆ, ಇನ್ನೂ ಕೆಲವರು ತಮ್ಮ ಮನೆಯಲ್ಲಿ ರಾತ್ರಿ ಕಳೆಯಲು ಅನುವು ಮಾಡಿಕೊಟ್ಟರು .
ಏನಿದ್ದರೂ , ಎಷ್ಟೇ ಮುಂದುವರಿದರೂ, ಅದೆಷ್ಟೇ ಪ್ರಗತಿ ಸಾಧಿಸಿದರೂ, ಪ್ರಕೃತಿಯ ಮುಂದೆ ನಾವೆಷ್ಟು ಕ್ಷುದ್ರರು ಎಂಬ ನನ್ನ ನಂಬಿಕೆಯನ್ನು ಈ ಅನುಭವ ಇನ್ನಷ್ಟು ಗಟ್ಟಿಗೊಳಿಸಿದೆ.
ಅರುಯುವುದು ವ್ಯವಸ್ಥೆಯ ಬಗ್ಗೆ ನಮಗೆ ಯೋಚನೆಯಿರಲಿಲ್ಲ. ನಮ್ಮ ಮನೆಯಿಂದ ಸುಮಾರು ೪ ಕಿ. ಮೀ. ದೂರದಲ್ಲಿ ಮಹೇಶ್ ರ ಚಿಕ್ಕಪ್ಪನ ಸುಸಜ್ಜಿತ ಬಂಗಲೆಖಾಲಿ ಇತ್ತು. ಅದರ ಕೀಲಿಕೈ ಸಹ ನಮ್ಮಲ್ಲಿತ್ತು. ಆದರೆ ,ಇಲ್ಲಿಂದ ದಾಟಿಹೋಗುವುದೇ ದೊಡ್ಡ ಪ್ರಶ್ನೆಯಾಗಿತ್ತು. ಮಳೆಯೇನೋ ಸ್ವಲ್ಪ ಕಡಿಮೆಯಾಗಿದ್ದರೂ , ನದಿಯ ನೀರು ಇಳಿದಿರಲಿಲ್ಲ ! ಅದೇ ಹೊತ್ತಿನಲ್ಲಿ , ಡ್ಯಾಮ್ ನಿಂದ ಇನ್ನೂ ಹೆಚ್ಚು ನೀರನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿವೆ ಎಂಬ ಸುದ್ದಿ ಬಂತು. ಹಾಗೇನಾದರೂ ಆದರೆ ಸ್ಥಿತಿ ಇನ್ನೂ ಬಿಗಡಾಯಿಸ ಬಹುದೆಂದು ನಾವು ಅಲ್ಲಿಂದ ಹೇಗಾದರೂ ದಾಟುವ ನಿರ್ಧಾರ ಮಾಡಿದೆವು.
ನಮ್ಮ ಬಿಲ್ಡಿಂಗ್ ನ ಉಳಿದ ಸದಸ್ಯರು ಆ ಬಗ್ಗೆ ಕಾಳಜಿ ವ್ಯಕ್ತಪಡಿಸಿದರೂ ನಮ್ಮ ನಿರ್ಧಾರ ಗಟ್ಟಿಯಾಗಿತ್ತು. ಸೂಟ್ ಕೇಸ್ ಒಂದರಲ್ಲಿ ತಕ್ಷಣಕ್ಕೆ ಬೇಕಾಗುವ ಬಟ್ಟೆಬರೆಗಳನ್ನು ತುಂಬಿಕೊಂಡು, ಸಿರಿಯ ಶಾಲಾಪುಸ್ತಕಗಳನ್ನು ಒಂದು ಚೀಲದಲ್ಲಿ ತುಂಬಿಕೊಂಡು ,ಉಳಿದೆಲ್ಲವನ್ನೂ ಸುಜಾತಾ ಹಾಗೂ ಕಲ್ಪನಾರ ಮನೆಯಲ್ಲಿ ಬಿಟ್ಟು ಕೆಳಗಿಳಿದೆವು. ಕಡೆಯ ಮೆಟ್ಟಿಲು ಇಳಿಯುತ್ತಿದ್ದಂತೆ ನೀರು ಸೊಂಟಕ್ಕಿಂತ ಮೇಲಿತ್ತು. ಜಯಾ ಅಂತೂ ಹೆದರಿ ಬಿಳುಚಿಕೊಂಡಿದ್ದಳು. ನೀರಿನಲ್ಲಿಕಾಲಿಡುವಾಗ ಭಯವೆನಿಸಿದರೂ ಒಮ್ಮೆ ದೇವರನ್ನು ನೆನೆದು ಹೆಜ್ಜೆ ಮುಂದಿಟ್ಟೆವು.
ನಮ್ಮ ಪಕ್ಕದ ಹೌಸಿಂಗ್ ಸೊಸೈಟಿ
ಗೇಟ್ ದಾಟಿ ರಸ್ತೆಗೆ ಕಾಲಿಟ್ಟರೆ ಎದೆಯೆತ್ತರಕ್ಕೆ ನೀರು ! ಸೆಳೆತ ಬೇರೆ ! ಸುತ್ತ ಮುತ್ತಲಿನ ಬಿಲ್ಡಿಂಗ್ ಗಳ ಗಂಡಸರು , ಯುವಕರು ಮಾನವ ಸರಪಳಿ ಮಾಡಿಕೊಂಡು, ದಾಟಿ ಹೋಗಬಯಸುವವರಿಗೆ ಸಹಾಯ ಮಾಡುತ್ತಿದ್ದರು. ಸುರಿಯುತ್ತಿರುವ ಮಳೆಯಲ್ಲಿ, ಅಕ್ಷರಶಃ ತಲೆಯಮೇಲೆ ಸೂಟ್ ಕೇಸ್ , ಚೀಲಗಳನ್ನು ಹೊತ್ತು ಎದೆಯೆತ್ತರದ ನೀರಿನಲ್ಲಿ ನಡೆಯುವಾಗ ಎಷ್ಟೋ ಸಿನೆಮಾಗಳಲ್ಲಿ ನೋಡಿದ್ದ ಇಂಥದೇ ದೃಶ್ಯಗಳು ನೆನಪಾದವು.ಆ ವರೆಗೆ ಕೇವಲ ನೋಡಿ ಗೊತ್ತಿದ್ದ ದೃಶ್ಯಗಳನ್ನು ಈಗ ನಾವು ಸ್ವತ: ಅನುಭವಿಸುತ್ತಿದ್ದೆವು. ಕಣ್ಣೀರು ಸುರಿಯುತ್ತಿರಲಿಲ್ಲ ಈಗಾಗಲೇ ಉಕ್ಕಿಹರಿಯುತ್ತಿರುವ ನೀರಿಗೆ ಆ ನಾಲ್ಕು ಹನಿಗಳು ಸೇರಿಕೊಳ್ಳುವುದು ಬೇಡವಾಗಿತ್ತು !
ನೀರಿನ ಮಟ್ಟ ಅಳೆಯುತ್ತಿರುವ ನಮ್ಮ ಬಿಲ್ಡಿಂಗಿನ ಸದಸ್ಯರು !!
ಸಿರಿ ,ಅಂದೂಶಾಲೆಗೆ ಹೋಗಿದ್ದೂ ಸಹ ಒಂದು ರೀತಿಯಿಂದ ಅನುಕೂಲವೇ ಆಗಿತ್ತು. ಇಲ್ಲವಾದರೆ , ಅವಳನ್ನು ಎತ್ತಿಕೊಂಡು ನೀರಿನಲ್ಲಿ ನಡೆಯುವುದು ನಮಗೆ ಸಾಧ್ಯವಿರಲಿಲ್ಲ . ಅವಳು ಅಷ್ಟೊಂದು ಸಣ್ಣವಳಲ್ಲ ! ಹಾಗೆಂದು ಅವಳೇ ಆ ನೀರಿನಲ್ಲಿ ನಡೆದುಕೊಂಡು ದಾಟುವುದಂತೂ ಅಸಾಧ್ಯವೇ ಆಗಿತ್ತು. ಅಂತೂ ನೀರಿನಿಂದಾಚೆ ಬಂದು ಕಾರ್ ಹತ್ತಿ ಚಿಕ್ಕಪ್ಪನ ಮನೆಗೆ ಬಂದೆವು. ಬೀಗ ತೆಗೆದು ಬ್ಯಾಗ್ ಗಳನ್ನು ಕೆಳಗಿಟ್ಟು ಕುಸಿದು ಕುಳಿತವಳಿಗೆ ಆಗ ಮಾತ್ರ ದುಃಖ ಉಕ್ಕಿಬಂತು.ನಾವಿಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಂಡು ಅತ್ತುಬಿಟ್ಟೆವು. ಇಂಥ ಮನೋಸ್ಥಿತಿಯಲ್ಲಿ ಮಹೇಶ್ ಹೇಗೆ ಡ್ರೈವ್ ಮಾಡಿದರೋ ತಿಳಿಯದು.
ಬಂಗಲೆಯೆನೋ ಸುಸಜ್ಜಿತವಾಗಿತ್ತು. ಹಾಸಿಗೆ ಬಟ್ಟೆಗಳಿಂದ ಹಿಡಿದು ಗ್ಯಾಸ್ ಒಲೆಯವರೆಗೂ ಇದ್ದುದರಿಂದ ಸದ್ಯಕ್ಕಂತೂ ತೊಂದರೆ ಇರಲಿಲ್ಲ. ರಾತ್ರಿ ಮಲಗುವಾಗ ಸಿರಿ ಕೇಳಿದಳು " ಅಮ್ಮ , ಎಷ್ಟು ಬ್ಯಾಡಲಕ್ ಅಲ್ವಾ? ನಮಗೇ ಏಕೆ ಹೀಗಾಯ್ತು ಅಮ್ಮ ? " ಅವಳ ಪ್ರಶ್ನೆ ನನ್ನನ್ನು ಯೋಚಿಸುವಂತೆ ಮಾಡಿತು . ಹಾಗೆ ನೋಡಿದರೆ , ನಾವೆಷ್ಟೋ ಅದೃಷ್ಟವಂತರು. ಈ ಹೊತ್ತು ರಾತ್ರಿ ಬೆಚ್ಚಗೆ ಮಲಗಲು ಒಂದು ಮನೆಯಿದೆ. ಪ್ರವಾಹ ಇಳಿದು ನಮ್ಮ ಮನೆ ಮತ್ತೊಮ್ಮೆ ಮೊದಲಿನ ಸ್ವರೂಪಕ್ಕೆ , ಅಂದರೆ ಉಳಿದುಕೊಳ್ಳುವ ಮಟ್ಟಕ್ಕೆ ಬರುವವರೆಗೂ ನಾವಿಲ್ಲಿ ಯಾವ ಯೋಚನೆಯೂ ಇಲ್ಲದೇ ಇರಬಹುದು. ಆದರೆ ಅದೆಷ್ಟು ನತದೃಷ್ಟ ಜನರಿಲ್ಲ? ಈ ಮಳೆಯಲ್ಲಿ ರಾತ್ರಿಯನ್ನು ಹೇಗೋ ಸ್ನೇಹಿತರು, ಬಂಧುಗಳ ಮನೆಯಲ್ಲಿ ಕಳೆದರೂ ಬೆಳಗಾದ ಮೇಲೆ ಎಲ್ಲಿಹೋಗುವುದು ? ಮುಂದೇನು ಎಂಬ ದೊಡ್ಡ ಪ್ರಶ್ನೆ ಅವರ ಮುಂದೆ ! ಇದನ್ನೇ ಮಗಳಿಗೆ ತಿಳಿಸಿ ಹೇಳಿದೆ. " ಹೌದಲ್ಲ ಅಮ್ಮಾ, ಇದು ನನ್ನ ತಲೆಯಲ್ಲಿ ಬಂದೇ ಇರಲಿಲ್ಲ. ನಾವು ಒಂದು ಕೆಲಸ ಮಾಡೋಣ ನಮ್ಮ ಪರಿಚಯದವರು ಯಾರದಾದರೂ ಮನೆಯಲ್ಲಿ ನೀರು ಬಂದಿದ್ದರೆ , ಅವರನ್ನು ಇಲ್ಲೆ ಬನ್ನಿ ಎಂದು ಕರೆಯೋಣ ಅಲ್ಲ ಅಮ್ಮ ? " ಎಂದಾಗ ಅವಳ ಬಗ್ಗೆ ಹೆಮ್ಮೆ ಮೂಡಿ ಅಪ್ಪಿಕೊಂಡೆ.
ರಾತ್ರಿ ಬೆಚ್ಚಗೆ ಹೊದ್ದು ಮಲಗಿದರೂ ನಿದ್ದೆ ಬಾರದು . ತಲೆಯಲ್ಲಿ ನೂರಾರು ಯೋಚನೆಗಳು. ನೀರಿನ ಮಟ್ಟ ಹೇಗಿರಬಹುದು? ನನ್ನ ಬುಕ್ ಶೆಲ್ಫ್ ವರೆಗೂ ನೀರು ಬಂದಿರಬಹುದೇ? ಆ ಬಿಲ್ಡಿಂಗಿನ ಉಳಿದ ಮನೆಯವರು ಹೇಗಿರಬಹುದು? ವಯಸ್ಸಾದವರು,ಪುಟ್ಟ ಮಕ್ಕಳು ಇರುವ ಕುಟುಂಬಗಳು. ಕರೆಂಟ್ ಇಲ್ಲದ ಕತ್ತಲ ರಾತ್ರಿಯಲ್ಲಿ , ಸುರಿಯುವ ಮಳೆ , ಅಬ್ಬರಿಸುತ್ತಿರುವ ಪ್ರವಾಹ ಎಷ್ಟು ಭೀತಿ ತರುತ್ತದೆ ಎನ್ನುವುದು ಅನುಭವಿಸಿದಾಗ ಮಾತ್ರ ತಿಳಿಯುತ್ತದೆ. ನೀರಿಗೇನು ಮಾಡಬಹುದು? ಒಂಥರಾ " water water every where, not a drop to drink " ಎಂಬಂಥಾ ಪರಿಸ್ಥಿತಿ ! ಮುನ್ಸೂಚನೆ ಇಲ್ಲದೇ ನಡೆದ ಘಟನೆಯಾಗಿದ್ದರಿಂದ ಯಾರೂ ಅಷ್ಟಾಗಿ ನೀರನ್ನು ತುಂಬಿಸಿಟ್ಟುಕೊಂಡಿರಲಿಲ್ಲ . ಬೇರೆ ಎಲ್ಲ ಹೋಗಲಿ, ಕಡೇ ಪಕ್ಷ ಕುಡಿಯುವ ನೀರಿಗೇನು ಮಾಡ ಬಹುದು ? ಎಂಬ ಚಿಂತೆ ಕಾಡುತ್ತಿತ್ತು. ನನ್ನ ಕಳವಳವನ್ನು ಮಹೇಶ್ ಜೊತೆ ಹಂಚಿಕೊಂಡೆ. " ಯೋಚನೆ ಮಾಡಬೇಡ ,ಬೆಳಿಗ್ಗೆ ಅಲ್ಲಿಗೆ ಕುಡಿಯುವ ನೀರಿನ ದೊಡ್ಡ ಕ್ಯಾನ್ ಕಳಿಸುವ ವ್ಯವಸ್ಥೆ ಮಾಡ್ತೀನಿ " ಎಂದ ಅವರ ನುಡಿಗಳು ಸ್ವಲ್ಪ ಸಮಾಧಾನ ತಂದು ನಿದ್ರಿಸುವ ಪ್ರಯತ್ನ ಮಾಡಿದೆ .
( ಮುಂದುವರಿಯುವುದು )